167: ಮೃತಬ್ರಾಹ್ಮಣಪುತ್ರಸ್ಯ ಪುನಃ ಪ್ರತ್ಯಾನಯನಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ವಿಷ್ಣು ಪರ್ವ

ಅಧ್ಯಾಯ 167

ಸಾರ

ಕೃಷ್ಣನು ವರುಣಾಲಯದಲ್ಲಿದ್ದ ಮೃತಬ್ರಾಹ್ಮಣಪುತ್ರರನ್ನು ಪುನರ್ಜೀವಿತಗೊಳಿಸಿ ತಂದುದು (1-32).

19167001 ಅರ್ಜುನ ಉವಾಚ ।
19167001a ತತಃ ಪರ್ವತಜಾಲಾನಿ ಸರಿತಶ್ಚ ವನಾನಿ ಚ ।
19167001c ಅಪಶ್ಯಂ ಸಮತಿಕ್ರಮ್ಯ ಸಾಗರಂ ವರುಣಾಲಯಮ್ ।।

ಅರ್ಜುನನು ಹೇಳಿದನು: “ಅನಂತರ ಪರ್ವತಜಾಲಗಳನ್ನು, ನದಿ-ವನಗಳನ್ನು ಅತಿಕ್ರಮಿಸಿ ನಾನು ವರುಣಾಲಯ ಸಾಗರವನ್ನು ನೋಡಿದೆನು.

19167002a ತತೋಽರ್ಘಮುದಧಿಃ ಸಾಕ್ಷಾದುಪನೀಯ ಜನಾರ್ದನಮ್ ।
19167002c ಸ ಪ್ರಾಂಜಲಿಃ ಸಮುತ್ಥಾಯ ಕಿಂ ಕರೋಮೀತಿ ಚಾಬ್ರವೀತ್ ।।

ಆಗ ಸಾಕ್ಷಾತ್ ಸಮುದ್ರನು ಜನಾರ್ದನನಿಗೆ ಅರ್ಘ್ಯವನ್ನಿತ್ತು ಕೈಮುಗಿದು ನಿಂತು “ಏನು ಮಾಡಲಿ?” ಎಂದು ಕೇಳಿದನು.

19167003a ಪ್ರತಿಗೃಹ್ಯ ಸ ತಾಂ ಪೂಜಾಂ ತಮುವಾಚ ಜನಾರ್ದನಃ ।
19167003c ರಥಪಂಥಾನಮಿಚ್ಛಾಮಿ ತ್ವಯಾ ದತ್ತಂ ನದೀಪತೇ ।।

ಅವನ ಪೂಜೆಯನ್ನು ಸ್ವೀಕರಿಸಿ ಜನಾರ್ದನನು “ನದೀಪತೇ! ನನ್ನ ರಥಕ್ಕೆ ಮಾರ್ಗವನ್ನು ಕೊಡಬೇಕೆಂದು ಬಯಸುತ್ತೇನೆ” ಎಂದು ಹೇಳಿದನು.

19167004a ಅಥಾಬ್ರವೀತ್ಸಮುದ್ರಸ್ತು ಪ್ರಾಂಜಲಿರ್ಗರುಡಧ್ವಜಮ್ ।
19167004c ಪ್ರಸೀದ ಭಗವನ್ನೈವಮನ್ಯೋಽಪ್ಯೇವಂ ಗಮಿಷ್ಯತಿ ।।

ಆಗ ಸಮುದ್ರನು ಕೈಜೋಡಿಸಿ ಗರುಡಧ್ವಜನಿಗೆ ಹೇಳಿದನು: “ಭಗವನ್! ಪ್ರಸೀದನಾಗು! ಹೀಗೆ ಮಾಡಬೇಡ! ಇದರಿಂದ ಇತರರೂ ಇಲ್ಲಿ ಬಂದು-ಹೋಗುವುದನ್ನು ಮಾಡುತ್ತಾರೆ.

19167005a ತ್ವಯೈವ ಸ್ಥಾಪಿತಂ ಪೂರ್ವಮಗಾಧೋಽಸ್ಮಿ ಜನಾರ್ದನ ।
19167005c ತ್ವಯಾ ಪ್ರವರ್ತತೇ ಮಾರ್ಗೇ ಯಾಸ್ಯಾಮಿ ಗಮನಾಯತಾಮ್ ।।

ಜನಾರ್ದನ! ಹಿಂದೆ ನೀನೇ ನನ್ನನ್ನು ಹೀಗೆ ಸ್ಥಾಪಿಸಿದ್ದೆ. ನಾನು ಅಗಾಧನು. ನನ್ನಲ್ಲಿ ನೀನು ಮಾರ್ಗವನ್ನು ಮಾಡಿಕೊಂಡರೆ ಎಲ್ಲರಿಗೂ ನಾನು ಗಮನಮಾರ್ಗನಾಗಿಬಿಡುತ್ತೇನೆ.

19167006a ಅನ್ಯೇಽಪ್ಯೇವಂ ಗಮಿಷ್ಯಂತಿ ರಾಜಾನೋ ದರ್ಪಮೋಹಿತಾಃ ।
19167006c ಏವಂ ಸಂಚಿಂತ್ಯ ಗೋವಿಂದ ಯತ್ಕ್ಷಮಂ ತತ್ಸಮಾಚರ ।।

ದರ್ಪಮೋಹಿತ ಅನ್ಯ ರಾಜರೂ ಕೂಡ ನನ್ನನ್ನು ಅತಿಕ್ರಮಿಸಿ ಹೋಗುತ್ತಾರೆ. ಇದನ್ನು ಯೋಚಿಸಿ ಗೋವಿಂದ! ಯಾವುದು ಉಚಿತವೋ ಅದನ್ನು ಮಾಡು!”

19167007 ವಾಸುದೇವ ಉವಾಚ ।
19167007a ಬ್ರಾಹ್ಮಣಾರ್ಥಂ ಮದರ್ಥಂ ಚ ಕುರು ಸಾಗರ ಮದ್ವಚಃ ।
19167007c ಮದೃತೇ ನ ಪುಮಾನ್ಕಸ್ಚಿದನ್ಯಸ್ತ್ವಾಂ ಧರ್ಷಯಿಷ್ಯತಿ ।।

ವಾಸುದೇವನು ಹೇಳಿದನು: “ಸಾಗರ! ಈ ಬ್ರಾಹ್ಮಣನಿಗಾಗಿ ಮತ್ತು ನನಗಾಗಿ ನಾನು ಹೇಳಿದಂತೆ ಮಾಡು. ನಾನಲ್ಲದೇ ಅನ್ಯ ಯಾವ ಪುರುಷರೂ ನಿನ್ನನ್ನು ಅತಿಕ್ರಮಿಸಲಾರರು.”

19167008a ಅಥಾಬ್ರವೀತ್ಸಮುದ್ರಸ್ತು ಪುನರೇವ ಜನಾರ್ದನಮ್ ।
19167008c ಅಭಿಶಾಪಭಯಾದ್ಭೀತೋ ಬಾಡಮೇವಂ ಭವಿಷ್ಯತಿ ।।

ಆಗ ಶಾಪದ ಭಯದಿಂದ ಸಮುದ್ರನು ಜನಾರ್ದನನಿಗೆ ಪುನಃ “ಒಳ್ಳೆಯದು. ಹಾಗೆಯೇ ಆಗಲಿ!” ಎಂದನು.

19167009a ಶೋಷಯಾಮ್ಯೇಷ ಮಾರ್ಗಂ ತೇ ಯೇನ ತ್ವಂ ಕೃಷ್ಣ ಯಾಸ್ಯಸಿ ।
19167009c ರಥೇನ ಸಹ ಸೂತೇನ ಸಧ್ವಜೇನ ತು ಕೇಶವ ।।

“ಕೃಷ್ಣ! ಕೇಶವ! ಇದೋ! ನಿನ್ನ ಮಾರ್ಗವನ್ನು ಒಣಗಿಸುತ್ತೇನೆ. ಇದರಿಂದ ನೀನು ಸೂತ, ಧ್ವಜಗಳ ಸಹಿತ ರಥದಲ್ಲಿ ಹೋಗಬಹುದು.”

19167010 ವಾಸುದೇವ ಉವಾಚ ।
19167010a ಮಯಾ ದತ್ತೋ ವರಃ ಪೂರ್ವಂ ನ ಶೋಷಂ ಯಾಸ್ಯಸೀತಿ ಹ ।
19167010c ಮಾನುಷಾಸ್ತೇ ನ ಜಾನೀಯುರ್ವಿವಿಧಾನ್ರತ್ನಸಂಚಯಾನ್ ।।
19167011a ಜಲಂ ಸ್ತಂಭಯ ಸಾಧೋ ತ್ವಂ ತತೋ ಯಾಸ್ಯಾಮ್ಯಹಂ ರಥೀ ।
19167011c ನ ಚ ಕಶ್ಚಿತ್ಪ್ರಮಾಣಂ ತೇ ರತ್ನಾನಾಂ ವೇತ್ಸ್ಯತೇ ನರಃ ।।

ವಾಸುದೇವನು ಹೇಳಿದನು: “ನೀನು ಎಂದೂ ಒಣಗುವುದಿಲ್ಲ ಎಂದು ಹಿಂದೆ ನಾನು ನಿನಗೆ ವರವನ್ನಿತ್ತಿದ್ದೆನು. ನಿನ್ನಲ್ಲಿರುವ ವಿವಿಧ ರತ್ನ ಸಂಚಯಗಳನ್ನು ಮನುಷ್ಯರು ತಿಳಿಯಬಾರದು. ಆದುದರಿಂದ ಸಾಧೋ! ನೀನು ಜಲವನ್ನು ಸ್ತಂಭಿತಗೊಳಿಸು. ಅದರ ಮೇಲೆ ಈ ರಥದಲ್ಲಿ ನಾನು ಹೋಗುತ್ತೇನೆ. ಯಾವ ಮನುಷ್ಯನೂ ನಿನ್ನಲ್ಲಿರುವ ರತ್ನಗಳ ಪ್ರಮಾಣವನ್ನು ತಿಳಿಯಲಾರನು.”

19167012a ಸಾಗರೇಣ ತಥೇತ್ಯುಕ್ತೇ ಪ್ರಸ್ಥಿತಾಃ ಸ್ಮ ಜಲೇನ ವೈ ।
19167012c ಸ್ತಂಭಿತೇನ ಪಥಾ ಭೂಮೌ ಮಣಿವರ್ಣೇನ ಭಾಸ್ವತಾ ।।

ಸಾಗರನು ಹಾಗೆಯೇ ಆಗಲೆಂದು ಹೇಳಲು ನಾವು ಮಣಿವರ್ಣದ ನೆಲದಂತೆ ಹೊಳೆಯುತ್ತಿದ್ದ ಸ್ತಂಭಿತ ಜಲದ ಮೇಲೆ ಪ್ರಯಾಣಿಸಿದೆವು.

19167013a ತತೋಽರ್ಣವಂ ಸಮುತ್ತೀರ್ಯ ಕುರೂನಪ್ಯುತ್ತರಾನ್ವಯಮ್ ।
19167013c ಕ್ಷಣೇನ ಸಮತಿಕ್ರಾಂತಾ ಗಂಧಮಾದನಮೇವ ಚ ।।

ಅನಂತರ ಸಮುದ್ರವನ್ನು ದಾಟಿ ಉತ್ತರ ಕುರುವನ್ನು ತಲುಪಿದೆವು. ನಂತರ ಕ್ಷಣದಲ್ಲಿಯೇ ಗಂಧಮಾದನ ಪರ್ವತವನ್ನೂ ದಾಟಿದೆವು.

19167014a ತತಸ್ತು ಪರ್ವತಾಃ ಸಪ್ತ ಕೇಶವಂ ಸಮುಪಸ್ಥಿತಾಃ ।
19167014c ಜಯಂತೋ ವೈಜಯಂತಶ್ಚ ನೀಲೋ ರಜತಪರ್ವತಃ ।।
19167015a ಮಹಾಮೇರುಃ ಸಕೈಲಾಸ ಇಂದ್ರಕೂಟಶ್ಚ ನಾಮತಃ ।
19167015c ಬಿಭ್ರಾಣಾ ವರ್ಣರೂಪಾಣಿ ವಿವಿಧಾನ್ಯದ್ಭುತಾನಿ ಚ ।।

ಆಗ ಜಯಂತ, ವೈಜಯಂತ, ನೀಲ, ರಜತಪರ್ವತ, ಮಹಾಮೇರು, ಕೈಲಾಸ ಮತ್ತು ಇಂದ್ರಕೂಟಗಳೆಂಬ ಏಳು ಪರ್ವತಗಳು ಕೇಶವನ ಸೇವೆಗೆ ಉಪಸ್ಥಿತರಾದವು. ಅವರು ವಿವಿಧ ಅದ್ಭುತ ವರ್ಣರೂಪಗಳಿಂದ ಹೊಳೆಯುತ್ತಿದ್ದರು.

19167016a ಉಪಸ್ಥಾಯ ಚ ಗೋವಿಂದಂ ಕಿಂ ಕುರ್ಮೇತ್ಯಬ್ರುವಂಸ್ತದಾ ।
19167016c ತಾಂಶ್ಚೈವ ಪ್ರತಿಜಗ್ರಾಹ ವಿಧಿವನ್ಮಧುಸೂದನಃ ।।

ಗೋವಿಂದನ ಸೇವೆಗೆ ಉಪಸ್ಥಿರತಾಗಿ ಅವರು “ಏನು ಮಾಡಬೇಕು” ಎಂದು ಕೇಳಲು ಮಧುಸೂದನನು ಅವರ ವಿಧಿವತ್ತಾದ ಸತ್ಕಾರಗಳನ್ನು ಸ್ವೀಕರಿಸಿದನು.

19167017a ತಾನುವಾಚ ಹೃಷೀಕೇಶಃ ಪ್ರಣಾಮಾವನತಾನ್ಸ್ಥಿತಾನ್ ।
19167017c ವಿವರಂ ಗಚ್ಛತೋ ಮೇಽದ್ಯ ರಥಮಾರ್ಗಃ ಪ್ರದೀಯತಾಮ್ ।।

ಕೈಮುಗಿದು ನಿಂತಿದ್ದ ಅವರಿಗೆ ಹೃಷೀಕೇಶನು “ನಾನೊಂದು ಗೂಢಸ್ಥಾನಕ್ಕೆ ಹೋಗುತ್ತಿದ್ದೇನೆ. ನನ್ನ ರಥಕ್ಕೆ ಮಾರ್ಗವನ್ನು ಕೊಡಿ!” ಎಂದನು.

19167018a ತೇ ಕೃಷ್ಣಸ್ಯ ವಚಃ ಶ್ರುತ್ವಾ ಪ್ರತಿಗೃಹ್ಯ ಚ ಪರ್ವತಾಃ ।
19167018c ಪ್ರದದುಃ ಕಾಮತೋ ಮಾರ್ಗಂ ಗಚ್ಛತೋ ಭರತರ್ಷಭ ।।

ಭರತರ್ಷಭ! ಕೃಷ್ಣನ ಮಾತನ್ನು ಕೇಳಿ ಆ ಪರ್ವತಗಳು ಹೋಗಲು ಬಯಸಿದ ಮಾರ್ಗವನ್ನು ನೀಡಿದವು.

19167019a ತತ್ರೈವಾಂತರ್ಹಿತಾಃ ಸರ್ವೇ ತದಾಶ್ಚರ್ಯತರಂ ಮಮ ।
19167019c ಅಸಕ್ತಂ ಚ ರಥೋ ಯಾತಿ ಮೇಘಜಾಲೇಷ್ವಿವಾಂಶುಮಾನ್ ।।

ಅವರೆಲ್ಲರೂ ಅಲ್ಲಿಯೇ ಅಂತರ್ಧಾನರಾದರು. ನನಗೆ ಅದೊಂದು ಅತ್ಯಂತ ಆಶ್ಚರ್ಯವಾಗಿ ತೋರಿತು. ಮೇಘಜಾಲಗಳ ಮಧ್ಯದಿಂದ ಸೂರ್ಯನ ಕಿರಣಗಳು ಹೋಗುವಂತೆ ರಥವು ಯಾವ ಅಡತಡೆಯೂ ಇಲ್ಲದೇ ಮುಂದೆ ಸಾಗಿತು.

19167020a ಸಪ್ತದ್ವೀಪಾನ್ಸಸಿಂಧೂಂಶ್ಚ ಸಪ್ತ ಸಪ್ತ ಗಿರೀನಥ ।
19167020c ಲೋಕಾಲೋಕಂ ತಥಾತೀತ್ಯ ವಿವೇಶ ಸುಮಹತ್ತಮಃ ।।

ಸಪ್ತದ್ವೀಪಗಳನ್ನೂ, ಸಪ್ತ ಸಮುದ್ರಗಳನ್ನೂ, ಮತ್ತು ಏಳು ಏಳು ಗಿರಿಗಳನ್ನೂ ದಾಟಿ ಲೋಕಾಲೋಕಪರ್ವತವನ್ನೂ ದಾಟಿ ನಾವು ಮಹಾ ತಮಸ್ಸನ್ನು ಪ್ರವೇಶಿಸಿದೆವು.

19167021a ತತಃ ಕದಾಚಿದ್ದುಃಖೇನ ರಥಮೂಹುಸ್ತುರಂಗಮಾಃ ।
19167021c ಪಂಕಭೂತಂ ಹಿ ತಿಮಿರಂ ಸ್ಪರ್ಶಾದ್ವಿಜ್ಞಾಯತೇ ನೃಪ ।।

ಆಗ ಕೆಲವೊಮ್ಮೆ ಕುದುರೆಗಳು ಬಹಳ ಕಷ್ಟದಿಂದ ರಥವನ್ನು ಎಳೆಯುತ್ತಿದ್ದವು. ನೃಪ! ಸ್ಪರ್ಶದಿಂದ ಆ ತಿಮಿರವು ಕೆಸರಿನ ರೂಪದಲ್ಲಿದೆಯೆಂದು ತಿಳಿಯುತ್ತಿತ್ತು.

19167022a ಅಥ ಪರ್ವತಭೂತಂ ತತ್ತಿಮಿರಂ ಸಮಪದ್ಯತ ।
19167022c ತದಾಸಾದ್ಯ ಮಹಾರಾಜ ನಿಷ್ಪ್ರಯತ್ನಾ ಹಯಾಃ ಸ್ಥಿತಾಃ ।।

ಆಗ ಆ ಕತ್ತಲೆಯು ಪರ್ವತರೂಪದಲ್ಲಿ ತಾಗಿತು. ಮಹಾರಾಜ! ಅದರ ಬಳಿಹೋಗಿ ಕುದುರೆಗಳು ನಿಶ್ಚೇಷ್ಟಗೊಂಡು ನಿಂತವು.

19167023a ತತಶ್ಚಕ್ರೇಣ ಗೋವಿಂದಃ ಪಾಟಯಿತ್ವಾ ತಮಸ್ತದಾ ।
19167023c ಆಕಾಶಂ ದರ್ಶಯಾಮಾಸ ರಥಪಂಥಾನಮುತ್ತಮಮ್ ।।

ಆಗ ಗೋವಿಂದನು ಚಕ್ರದಿಂದ ತಮಸ್ಸನ್ನು ಹರಿದು ರಥಕ್ಕೆ ಉತ್ತಮ ಮಾರ್ಗವಾದ ಆಕಾಶವನ್ನು ತೋರಿಸಿದನು.

19167024a ನಿಷ್ಕ್ರಮ್ಯ ತಮಸಸ್ತಸ್ಮಾದಾಕಾಶೇ ದರ್ಶಿತೇ ತದಾ ।
19167024c ಭವಿಷ್ಯಾಮೀತಿ ಸಂಜ್ಞಾ ಮೇ ಭಯಂ ಚ ವಿಗತಂ ಮಮ ।।

ಆ ತಮಸ್ಸನ್ನು ದಾಟಿ ಆಕಾಶವು ಕಂಡಾಗ ನನಗೆ ಇನ್ನು ನಾನು ಜೀವಿಸಿರುತ್ತೇನೆ ಎಂದಾಗಿ ನನ್ನಲ್ಲಿದ್ದ ಭಯವು ಹೊರಟುಹೋಯಿತು.

19167025a ತತಸ್ತೇಜಃ ಪ್ರಜ್ವಲಿತಮಪಶ್ಯಂ ತತ್ತದಾಂಬರೇ ।
19167025c ಸರ್ವಲೋಕಂ ಸಮಾವಿಶ್ಯ ಸ್ಥಿತಂ ಪುರುಷವಿಗ್ರಹಮ್ ।।

ಆಗ ನಾನು ಅಂಬರದಲ್ಲಿ ಪ್ರಜ್ವಲಿಸುತ್ತಿದ್ದ ತೇಜಸ್ಸೊಂದನ್ನು ನೋಡಿದೆನು. ಅದು ಪುರುಷನ ಆಕೃತಿಯಲ್ಲಿ ಸರ್ವಲೋಕವನ್ನು ಸಮಾವೇಶಗೊಂಡು ನಿಂತಿತ್ತು.

19167026a ತಂ ಪ್ರವಿಷ್ಟೋ ಹೃಷೀಕೇಶೋ ದೀಪ್ತಂ ತೇಜೋನಿಧಿಂ ತದಾ ।
19167026c ರಥ ಏವ ಸ್ಥಿತಶ್ಚಾಹಂ ಸ ಚ ಬಹ್ಮಣಸತ್ತಮಃ ।।

ಬೆಳಗುತ್ತಿದ್ದ ಆ ತೇಜೋನಿಧಿಯನ್ನು ಹೃಷೀಕೇಶನು ಪ್ರವೇಶಿಸಿದನು. ಆದರೆ ಬ್ರಾಹ್ಮಣ ಮತ್ತು ನಾನು ಮಾತ್ರ ರಥದಲ್ಲಿಯೇ ಇದ್ದೆವು.

19167027a ಸ ಮುಹೂರ್ತಾತ್ತತಃ ಕೃಷ್ಣೋ ನಿಶ್ಚಕ್ರಾಮ ತದಾ ಪ್ರಭುಃ ।
19167027c ಚತುರೋ ಬಾಲಕಾನ್ಗೃಹ್ಯ ಬ್ರಾಹ್ಮಣಸ್ಯಾತ್ಮಜಾಂಸ್ತದಾ ।।

ಮುಹೂರ್ತದಲ್ಲಿಯೇ ಪ್ರಭು ಕೃಷ್ಣನು ಬ್ರಾಹ್ಮಣನ ನಾಲ್ಕೂ ಬಾಲಕ ಮಕ್ಕಳನ್ನೂ ಎತ್ತಿಕೊಂಡು ಹೊರಬಂದನು.

19167028a ಪ್ರದದೌ ಬ್ರಾಹ್ಮಣಾಯಾಥ ಪುತ್ರಾನ್ಸರ್ವಾಂಜನಾರ್ದನಃ ।
19167028c ತ್ರಯಃ ಪೂರ್ವಂ ಹೃತಾ ಯೇ ಚ ಸದ್ಯೋ ಜಾತಶ್ಚ ಬಾಲಕಃ ।।

ಜನಾರ್ದನನು ಬ್ರಾಹ್ಮಣನಿಗೆ ಸರ್ವ ಪುತ್ರರನ್ನೂ ನೀಡಿದನು. ಅವರಲ್ಲಿ ಮೂವರು ಹಿಂದೆ ಅಪಹೃತರಾದವರಾಗಿದ್ದರು ಮತ್ತು ಒಬ್ಬನು ಸದ್ಯ ಹುಟ್ಟಿದವನಾಗಿದ್ದನು.

19167029a ಪ್ರಹೃಷ್ಟೋ ಬ್ರಾಹ್ಮಣಸ್ತತ್ರ ಪುತ್ರಾಂದೃಷ್ಟ್ವಾ ಪುನಃ ಪ್ರಭೋ ।
19167029c ಅಹಂ ಚ ಪರಮಪ್ರೀತೋ ವಿಸ್ಮಿತಶ್ಚಾಭವಂ ತದಾ ।।

ಪ್ರಭೋ! ಅಲ್ಲಿ ಪುತ್ರರನ್ನು ನೋಡಿ ಬ್ರಾಹ್ಮಣನು ಪುನಃ ಪುನಃ ಪ್ರಹೃಷ್ಟನಾದನು. ಆಗ ನಾನೂ ಕೂಡ ಪರಮ ಪ್ರೀತನೂ ವಿಸ್ಮಿತನೂ ಆದೆನು.

19167030a ತತೋ ವಯಂ ಪುನಃ ಸರ್ವೇ ಬ್ರಾಹ್ಮಣಸ್ಯ ಚ ತೇ ಸುತಾಃ ।
19167030c ಯಥಾಗತಾ ನಿವೃತ್ತಾಃ ಸ್ಮ ತಥೈವ ಭರತರ್ಷಭ ।।

ಭರತರ್ಷಭ! ಅನಂತರ ನಾವೆಲ್ಲರೂ – ಬ್ರಾಹ್ಮಣನ ಆ ಮಕ್ಕಳೊಂದಿಗೆ – ಹೇಗೆ ಹೋಗಿದ್ದೆವೋ ಹಾಗೆಯೇ ಹಿಂದಿರುಗಿದೆವು.

19167031a ತತಃ ಸ್ಮ ದ್ವಾರಕಾಂ ಪ್ರಾಪ್ತಾಃ ಕ್ಷಣೇನ ನೃಪಸತ್ತಮ ।
19167031c ಅಸಂಪ್ರಾಪ್ತೇಽರ್ಧದಿವಸೇ ವಿಸ್ಮಿತೋಽಹಂ ಪುನಃ ಪುನಃ ।।

ನೃಪಸತ್ತಮ! ಅನಂತರ ಕ್ಷಣಮಾತ್ರದಲ್ಲಿ ನಾವು ದ್ವಾರಕೆಯನ್ನು ತಲುಪಿದೆವು. ಆಗ ಇನ್ನು ಅರ್ಧದಿವಸವೂ ಆಗಿರಲಿಲ್ಲ. ಅದರಿಂದ ನಾನು ಪುನಃ ಪುನಃ ವಿಸ್ಮಿತನಾದೆನು.

19167032a ಸಪುತ್ರಂ ಭೋಜಯಿತ್ವಾ ತು ದ್ವಿಜಂ ಕೃಷ್ಣೋ ಮಹಾಯಶಾಃ ।
19167032c ಧನೇನ ವರ್ಷಯಿತ್ವಾ ಚ ಗೃಹಂ ಪ್ರಾಸ್ಥಾಪಯತ್ತದಾ ।।

ಪುತ್ರರೊಡನೆ ಆ ದ್ವಿಜನಿಗೆ ಭೋಜನವನ್ನಿತ್ತು, ಧನದ ಮಳೆಯನ್ನೇ ಸುರಿಸಿ, ಮಹಾಯಶಸ್ವೀ ಕೃಷ್ಣನು ಅವರನ್ನು ಮನೆಗೆ ತಲುಪಿಸಿಕೊಟ್ಟನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ವಾಸುದೇವಮಾಹಾತ್ಮ್ಯೇ ಬ್ರಾಹ್ಮಣಪುತ್ರಾನಯನೇ ಸಪ್ತಷಷ್ಟ್ಯಧಿಕಶತತಮೋಽಧ್ಯಾಯಃ ।।