056: ನಾರದಾಗಮನಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ವಿಷ್ಣು ಪರ್ವ

ಅಧ್ಯಾಯ 56

ಸಾರ

ವೈಶಂಪಾಯನ ಉವಾಚ
ಜ್ಞಾತ್ವಾ ವಿಷ್ಣುಂ ಕ್ಷಿತಿಗತಂ ಭಾಗಾಂಶ್ಚ ತ್ರಿದಿವೌಕಸಾಮ್ ।
ವಿನಾಶಶಂಸೀ ಕಂಸಸ್ಯ ನಾರದೋ ಮಥುರಾಂ ಯಯೌ ।। ೨-೫೬-೧

ವೈಶಂಪಾಯನನು ಹೇಳಿದನು: “ವಿಷ್ಣು ಮತ್ತು ತ್ರಿದಿವೌಕಸರು ತಮ್ಮ ತಮ್ಮ ಭಾಗಗಳಲ್ಲಿ ಭೂಮಿಗೆ ಹೋದದ್ದನ್ನು ತಿಳಿದು ನಾರದನು ಕಂಸನಿಗೆ ಅವನ ವಿನಾಶದ ಕುರಿತು ಸೂಚಿಸಲು ಮಥುರೆಗೆ ಹೋದನು.

ತ್ರಿವಿಷ್ಟಪಾದಾಪತಿತೋ ಮಥುರೋಪವನೇ ಸ್ಥಿತಃ ।
ಪ್ರೇಷಯಾಮಾಸ ಕಂಸಸ್ಯ ಉಗ್ರಸೇನಸುತಸ್ಯ ವೈ ।। ೨-೫೬-೨

ತ್ರಿವಿಷ್ಟಪದಿಂದ ಭುವಿಯ ಮೇಲೆ ಪಾದಾರ್ಪಣ ಮಾಡಿ ಮಥುರೆಯ ಉಪವನದಲ್ಲಿ ನಿಂತು ಉಗ್ರಸೇನ ಸುತ ಕಂಸನಬಳಿ ದೂತನೋರ್ವನನ್ನು ಕಳುಹಿಸಿದನು.

ಸ ದೂತಃ ಕಥಯಾಮಾಸ ಮುನೇರಾಗಮನಂ ವನೇ ।
ಸ ನಾರದಸ್ಯಾಗಮನಂ ಶ್ರುತ್ವಾ ತ್ವರಿತವಿಕ್ರಮಃ।। ೨-೫೬-೩
ನಿರ್ಜಗಾಮಾಸುರಃ ಕಂಸಃ ಸ್ವಪುರ್ಯಾಃ ಪದ್ಮಲೋಚನಃ ।

ಉಪವನದಲ್ಲಿ ಮುನಿಯ ಆಗಮದ ಕುರಿತು ಆ ದೂತನು ಹೇಳಿದನು. ನಾರದನ ಆಗಮನವನ್ನು ಕೇಳಿ ತ್ವರಿತವಿರ್ಕಮಿ ಪದ್ಮಲೋಚನ ಅಸುರ ಕಂಸನು ತನ್ನ ಪುರಿಯಿಂದ ಹೊರಟನು.

ಸ ದದರ್ಶಾತಿಥಿಂ ಶ್ಲಾಘ್ಯಂ ದೇವರ್ಷಿಂ ವೀತಕಲ್ಮಷಮ್ ।। ೨-೫೬-೪
ತೇಜಸಾ ಜ್ವಲನಾಕಾರಂ ವಪುಷಾ ಸೂರ್ಯವರ್ಚಸಮ್ ।
ಸೋಽಭಿವಾದ್ಯರ್ಷಯೇ ತಸ್ಮೈ ಪೂಜಾಂ ಚಕ್ರೇ ಯಥಾವಿಧಿ ।। ೨-೫೬-೫

ಅಲ್ಲಿ ಅವನು ತೇಜಸ್ಸಿನಿಂದ ಪ್ರಜ್ವಲಿಸುತ್ತಿದ್ದ ಸೂರ್ಯವರ್ಚಸ ರೂಪದಿಂದಿದ್ದ ವೀತಕಲ್ಮಷ ಶ್ಲಾಘ್ಯ ಅತಿಥಿ ದೇವರ್ಷಿಯನ್ನು ಕಂಡನು. ಅವನು ಋಷಿಗೆ ಅಭಿವಂದಿಸಿ ಯಥಾವಿಧಿಯಾಗಿ ಅವನ ಪೂಜೆಗೈದನು.

ಆಸನಂ ಚಾಗ್ನಿವರ್ಣಾಭಂ ವಿಸೃಜ್ಯೋಪಜಹಾರ ಸಃ ।
ನಿಷಸಾದಾಸನೇ ತಸ್ಮಿನ್ಸ ವೈ ಶಕ್ರಸಖೋ ಮುನಿಃ ।। ೨-೫೬-೬

ಅಗ್ನಿವರ್ಣದಿಂದ ಹೊಳೆಯುತ್ತಿದ್ದ ಆಸನವನ್ನು ಅವನಿಗಿತ್ತು ಉಪಹಾರಗಳನ್ನೂ ನೀಡಿದನು. ಶಕ್ರಸಖ ಮುನಿಯು ಆ ಆಸನದಲ್ಲಿ ಕುಳಿತುಕೊಂಡನು.

ಉವಾಚ ಚೋಗ್ರಸೇನಸ್ಯ ಸುತಂ ಪರಮಕೋಪನಮ್ ।
ಪೂಜಿತೋಽಹಂ ತ್ವಯಾ ವೀರ ವಿಧಿದೃಷ್ಟೇನ ಕರ್ಮಣಾ ।। ೨-೫೬-೭
ಗತೇ ತ್ವೇವಂ ಮಮ ವಚಃ ಶ್ರೂಯತಾಂ ಗೃಹ್ಯತಾಂ ತ್ವಯಾ ।

ಅವನು ಉಗ್ರಸೇನನ ಸುತ ಪರಮಕೋಪನನಿಗೆ ಹೇಳಿದನು: “ವೀರ! ವಿಧಿದೃಷ್ಟಕರ್ಮಗಳಿಂದ ನೀನು ನನ್ನನ್ನು ಪೂಜಿಸಿದ್ದೀಯೆ. ಆದುದರಿಂದ ನಿನಗೆ ನಾನೊಂದು ಮಾತನ್ನು ಹೇಳುತ್ತೇನೆ. ಅದನ್ನು ನೀನು ಕೇಳಬೇಕು ಮತ್ತು ಅರ್ಥಮಾಡಿಕೊಳ್ಳಬೇಕು.

ಅನುಸೃತ್ಯ ದಿವೋಲೋಕಾನಹಂ ಬ್ರಹ್ಮಪುರೋಗಮಾನ್ ।। ೨-೫೬-೮
ಗತಃ ಸೂರ್ಯಸಖಂ ತಾತ ವಿಪುಲಂ ಮೇರುಪರ್ವತಮ್ ।

ಅಯ್ಯಾ! ಬ್ರಹ್ಮಲೋಕವೇ ಮೊದಲಾದ ದಿವಿಯ ಲೋಕಗಳನ್ನು ಸಂಚರಿಸುತ್ತಾ ನಾನು ಸೂರ್ಯಸಖನಾದ ವಿಪುಲ ಮೇರುಪರ್ವತಕ್ಕೆ ಹೋದೆನು.

ಸ ನಂದನವನಂ ಚೈವ ದೃಷ್ಟ್ವಾ ಚೈತ್ರರಥಂ ವನಮ್ ।। ೨-೫೬-೯
ಆಪ್ಲುತಂ ಸರ್ವತೀರ್ಥೇಷು ಸರಿತ್ಸು ಸಹ ದೇವತೈಃ ।

ಅಲ್ಲಿ ನಂದನವನ ಮತ್ತು ಚೈತ್ರರಥ ವನವನ್ನು ನೋಡಿ ದೇವತೆಗಳೊಂದಿಗೆ ಸರ್ವತೀರ್ಥಗಳಲ್ಲಿ ಮತ್ತು ನದಿಗಳಲ್ಲಿ ಸ್ನಾನಮಾಡಿದೆನು.

ದಿವ್ಯಾ ತ್ರಿಧಾರಾ ದೃಷ್ಟಾ ಯೇ ಪುಣ್ಯಾ ತ್ರಿಪಥಗಾ ನದೀ ।। ೨-೫೬-೧೦
ಸ್ಮರಣಾದೇವ ಸರ್ವೇಷಾಮಂಹಸಾಂ ಯಾ ವಿಭೇದಿನೀ ।

ಅನಂತರ ಯಾರ ಸ್ಮರಣೆಯಿಂದಲೇ ಸರ್ವರ ಪಾಪವು ದೂರವಾಗುವುದೋ ಆ ಪುಣ್ಯೆ ತ್ರಿಪಥಗೆ ತ್ರಿಧಾರಾ ದಿವ್ಯ ಗಂಗಾನದಿಯನ್ನು ನೋಡಿದೆನು.

ಉಪಸ್ಪೃಷ್ಟಂ ಚ ತೀರ್ಥೇಷು ದಿವ್ಯೇಷು ಚ ಯಥಾಕ್ರಮಮ್ ।। ೨-೫೬-೧೧
ದೃಷ್ಟಂ ಮೇ ಬ್ರಹ್ಮಸದನಂ ಬ್ರಹ್ಮರ್ಷಿಗಣಸೇವಿತಮ್ ।
ದೇವಗಂಧರ್ವನಿರ್ಘೋಷೈರಪ್ಸರೋಭಿಶ್ಚ ನಾದಿತಮ್ ।। ೨-೫೬-೧೨

ಯಥಾಕ್ರಮವಾಗಿ ದಿವ್ಯ ತೀರ್ಥಗಳಲ್ಲಿ ಮಿಂದು ಬ್ರಹ್ಮರ್ಷಿಗಣಸೇವಿತ ದೇವಗಂಧರ್ವರ ನಿರ್ಘೋಷಗಳಿಂದ ಮತ್ತು ಅಪ್ಸರೆಯರ ನಾದದಿಂದ ಕೂಡಿದ ಬ್ರಹ್ಮಸದನವನ್ನು ನೋಡಲು ಹೋದೆನು.

ಸೋಽಹಂ ಕದಾಚಿದ್ದೇವಾನಾಂ ಸಮಾಜೇ ಮೇರುಮೂರ್ಧನಿ ।
ಸಂಗೃಹ್ಯ ವೀಣಾಂ ಸಂಸಕ್ತಾಮಗಚ್ಛಂ ಬ್ರಹ್ಮಣಃ ಸಭಾಮ್ ।। ೨-೫೬-೧೩

ಹಾಗೆಯೇ ಒಮ್ಮೆ ನಾನು ಕೈಯಲ್ಲಿ ವೀಣೆಯನ್ನು ಹಿಡಿದು ಮೇರುಪರ್ವತದ ಶಿಖರದಲ್ಲಿ ದೇವತೆಗಳು ಸೇರಿದ್ದ ಬ್ರಹ್ಮಸಭೆಗೆ ಹೋದೆನು.

ಸೋಽಹಂ ತವ ಸಿತೋಷ್ಣೀಷಾನ್ನಾನಾರತ್ನವಿಭೂಷಿತಾನ್ ।
ದಿವ್ಯಾಸನಗತಾಂದೇವಾನಪಶ್ಯಂ ಸಪಿತಾಮಹಾನ್ ।। ೨-೫೬-೧೪

ಅಲ್ಲಿ ಪಿತಾಮಹನೊಂದಿಗೆ ಶ್ವೇತ ಪಗಡಿಗಳನ್ನು ಧರಿಸಿ ನಾನಾರತ್ನವಿಭೂಷಿತ ದಿವ್ಯಾಸನಗಳಲ್ಲಿ ಕುಳಿತಿದ್ದ ದೇವತೆಗಳನ್ನು ಕಂಡೆನು.

ತತ್ರ ಮಂತ್ರಯತಾಮೇವಮ್ ದೇವತಾನಾಂ ಮಯಾ ಶ್ರುತಃ ।
ಭವತಃ ಸಾನುಗಸ್ಯೈವ ವಧೋಪಾಯಃ ಸುದಾರುಣಃ ।। ೨-೫೬-೧೫

ಅನುಗರೊಂದಿಗೆ ನಿನ್ನನ್ನು ವಧಿಸುವ ಸುದಾರುಣ ಉಪಾಯದ ಕುರಿತು ಅಲ್ಲಿ ದೇವತೆಗಳು ಮಂತ್ರಾಲೋಚನೆ ಮಾಡುತ್ತಿದ್ದುದನ್ನು ನಾನು ಕೇಳಿದೆ.

ತತ್ರೈಷಾ ದೇವಕೀ ಯಾ ತೇ ಮಥುರಾಯಾಂ ಲಘುಸ್ವಸಾ ।
ಯೋಽಸ್ಯಾಂ ಗರ್ಭೋಽಷ್ಟಮಃ ಕಂಸ ಸ ತೇ ಮೃತ್ಯುರ್ಭವಿಷ್ಯತಿ ।। ೨-೫೬-೧೬

ಕಂಸ! ಮಥುರೆಯಲ್ಲಿರುವ ನಿನ್ನ ಕಿರಿಯ ತಂಗಿ ದೇವಕಿಯ ಎಂಟನೇ ಗರ್ಭವು ನಿನ್ನ ಮೃತ್ಯುವಾಗುತ್ತದೆ.

ದೇವಾನಾಂ ಸ ತು ಸರ್ವಸ್ವಂ ತ್ರಿದಿವಸ್ಯ ಗತಿಶ್ಚ ಸಃ ।
ಪರಂ ರಹಸ್ಯಂ ದೇವಾನಾಂ ಸ ತೇ ಮೃತ್ಯುರ್ಭವಿಷ್ಯತಿ । ೨-೫೬-೧೭

ಅದು ದೇವತೆಗಳ ಸರ್ವಸ್ವ ಮತ್ತು ತ್ರಿದಿವದ ಗತಿಯಾಗುತ್ತದೆ. ಅದೇ ದೇವತೆಗಳ ಪರಮ ರಹಸ್ಯವು. ಅದೇ ನಿನಗೆ ಮೃತ್ಯುವಾಗುತ್ತದೆ.

ಪರಶ್ಚೈವಾಪರಸ್ತೇಷಾಂ ಸ್ವಯಂಭೂಶ್ಚ ದಿವೌಕಸಾಮ್।
ತತಸ್ತೇ ತನ್ಮಹದ್ಭೂತಂ ದಿವ್ಯಂ ಚ ಕಥಯಾಮ್ಯಹಮ್ ।। ೨-೫೬-೧೮

ಆ ಗರ್ಭವೇ ದೇವತೆಗಳ ಪರ ಮತ್ತು ಅಪರ. ಸ್ವಯಂಭೂ. ಆದುದರಿಂದ ಅದು ಮಹಾನ್ ದಿವ್ಯ ಭೂತವು ಎಂದು ಹೇಳುತ್ತಿದ್ದೇನೆ.

ಶ್ಲಾಘ್ಯಶ್ಚ ಸ ಹಿ ತೇ ಮೃತ್ಯುರ್ಭೂತಪೂರ್ವಶ್ಚ ತಂ ಸ್ಮರ ।
ಯತ್ನಶ್ಚ ಕ್ರಿಯತಾಂ ಕಂಸ ದೇವಕ್ಯಾ ಗರ್ಭಕೃಂತನೇ ।। ೨-೫೬-೧೯

ಅದೇ ಮಹಾಭೂತವು ಹಿಂದೆಯೂ ನಿನ್ನ ಮೃತ್ಯುವಾಗಿತ್ತು. ನೆನಪಿಸಿಕೋ. ಈಗಲೂ ಅದು ನಿನಗೆ ಶ್ಲಾಘ್ಯ ಮೃತ್ಯುವಾಗುತ್ತದೆ. ಕಂಸ! ಆದುದರಿಂದ ನೀನು ದೇವಕಿಯ ಗರ್ಭವನ್ನು ಕತ್ತರಿಸುವ ಪ್ರಯತ್ನವನ್ನು ಮಾಡು.

ಏಷಾ ಮೇ ತ್ವದ್ಗತಾ ಪ್ರೀತಿರ್ಯದರ್ಥಂ ಚಾಹಮಾಗತಃ ।
ಭುಜ್ಯಂತಾಂ ಸರ್ವಕಾಮಾರ್ಥಾಃ ಸ್ವಸ್ತಿ ತೇಽಸ್ತು ವ್ರಜಾಮ್ಯಹಮ್ ।। ೨-೫೬-೨೦

ನನಗೆ ನಿನ್ನಮೇಲಿನ ಪ್ರೀತಿಯಿಂದಾಗಿಯೇ ನಾನು ಇಲ್ಲಿಗೆ ಬಂದು ಇದನ್ನು ನಿನಗೆ ಹೇಳಿದ್ದೇನೆ. ಸರ್ವಕಾಮಾರ್ಥಗಳನ್ನೂ ಭುಂಜಿಸು. ನಿನಗೆ ಮಂಗಳವಾಗಲಿ. ನಾನು ಹೋಗುತ್ತೇನೆ.”

ಇತ್ಯುಕ್ತ್ವಾ ನಾರದೇ ಯಾತೇ ತಸ್ಯ ವಾಕ್ಯಂ ವಿಚಿಂತಯನ್ ।
ಜಹಾಸೋಚ್ಚೈಸ್ತತಃ ಕಂಸಃ ಪ್ರಕಾಶದಶನಶ್ಚಿರಮ್ ।। ೨-೫೬-೨೧

ಹೀಗೆ ಹೇಳಿ ನಾರದನು ಹೊರಟುಹೋಗಲು ಅವನ ಮಾತಿನ ಕುರಿತೇ ಬಹಳ ಹೊತ್ತು ಚಿಂತಿಸುತ್ತಿದ್ದ ಕಂಸನು ತನ್ನ ಹಲ್ಲುಗಳನ್ನು ತೋರಿಸುತ್ತಾ ಅಟ್ಟಹಾಸದಿಂದ ನಗತೊಡಗಿದನು.

ಪ್ರೋವಾಚ ಸಸ್ಮಿತಂ ಚೈವ ಭೃತ್ಯಾನಾಮಗ್ರತಃ ಸ್ಥಿತಃ ।
ಹಾಸ್ಯಃ ಖಲು ಸ ಸರ್ವೇಷು ನಾರದೋ ನ ವಿಶಾರದಃ ।। ೨೧-೧-೨೨

ಎದಿರು ನಿಂತಿದ್ದ ಸೇವಕರಿಗೆ ಮುಗುಳ್ನಗುತ್ತಾ ಹೇಳಿದನು: “ಈ ನಾರದನು ಎಲ್ಲರಿಗೂ ಹಾಸ್ಯಾಸ್ಪದನು. ಯಾವುದರಲ್ಲಿಯೂ ವಿಶಾರದನಲ್ಲ.

ನಾಹಂ ಭೀಷಯಿತುಂ ಶಕ್ಯೋ ದೇವೈರಪಿ ಸವಾಸವೈಃ ।
ಆಸನಸ್ಥಃ ಶಯಾನೋ ವಾ ಪ್ರಮತ್ತೋ ಮತ್ತ ಏವ ಚ ।। ೨-೫೬-೨೩

ನಾನು ಆಸನಸ್ಥನಾಗಿರಲಿ ಅಥವಾ ಮಲಗಿರಲಿ, ಪ್ರಮತ್ತನಾಗಿರಲಿ ಅಥವಾ ಮತ್ತನಾಗಿರಲಿ, ವಾಸವನೊಂದಿಗೆ ದೇವತೆಗಳಿಗೂ ನನ್ನನ್ನು ಹೆದರಿಸಲು ಸಾಧ್ಯವಿಲ್ಲ.

ಯೋಽಹಂ ದೋರ್ಭ್ಯಾಮುದಾರಾಭ್ಯಾಂ ಕ್ಷೋಭಯೇಯಂ ಧರಾಮಿಮಾಮ್ ।
ಕೋಽಸ್ತಿ ಮಾಂ ಮಾನುಷೇ ಲೋಕೇ ಯಃ ಕ್ಷೋಭಯಿತುಮುತ್ಸಹೇತ್ ।। ೨-೫೬-೨೪

ನನ್ನ ಈ ಎರಡು ಕೈಗಳಿಂದಲೇ ಇಡೀ ಭೂಮಿಯನ್ನೇ ಕ್ಷೋಭೆಗೊಳಿಸಬಲ್ಲೆ. ಈ ಮಾನುಷಲೋಕದಲ್ಲಿ ನನ್ನನ್ನು ಕ್ಷೋಭೆಗೊಳಿಸಲು ಉತ್ಸುಕನಾಗಿರುವವರು ಯಾರಿದ್ದಾರೆ?

ಅದ್ಯ ಪ್ರಭೃತಿ ದೇವಾನಾಮೇಷ ದೇವಾನುವರ್ತಿನಾಮ್ ।
ನೃಪಕ್ಷಿಪಶುಸಂಘಾನಾಂ ಕರೋಮಿ ಕದನಂ ಮಹತ್ ।। ೨-೫೬-೨೫

ಇಂದಿನಿಂದ ನಾನು ದೇವತೆಗಳನ್ನು ಮತ್ತು ದೇವತೆಗಳನ್ನು ಅನುಸರಿಸುವ ನರ-ಪಕ್ಷಿ-ಪಶು ಸಂಘಗಳೊಂದಿಗೆ ಮಹಾ ಕದನವನ್ನು ನಡೆಸುತ್ತೇನೆ.

ಆಜ್ಞಾಪ್ಯತಾಂ ಹಯಃ ಕೇಶೀ ಪ್ರಲಂಬೋ ಧೇನುಕಸ್ತಥಾ ಅರಿಷ್ಟೋ ವೃಷಭಶ್ಚೈವ ಪೂತನಾ ಕಾಲಿಯಸ್ತಥಾ ।। ೨-೫೬-೨೬
ಅಟಧ್ವಂ ಪೃಥಿವೀಂ ಕೃತ್ಸ್ನಾಂ ಯಥೇಷ್ಟಂ ಕಾಮರೂಪಿಣಃ ಪ್ರಹರಧ್ವಂ ಚ ಸರ್ವೇಷು ಯೇಽಸ್ಮಾಕಂ ಪಕ್ಷದೂಷಕಾಃ ।। ೨-೫೬-೨೭

ಅಶ್ವರೂಪಧಾರೀ ಕೇಶೀ, ಪ್ರಲಂಬ, ಧೇನುಕ, ವೃಷಭರೂಪಧಾರೀ ಅರಿಷ್ಟ, ಪೂತನಾ, ಕಾಲಿಯ ಇವರಿಗೆ ಆಜ್ಞಾಪಿಸಿ. ಕಾಪರೂಪಿಗಳಾದ ಅವರು ಯಥೇಚ್ಛವಾಗಿ ಭೂಮಿಯನ್ನೆಲ್ಲಾ ಸುತ್ತಾಡಿ ನನ್ನ ಪಕ್ಷವನ್ನು ದೂಷಿಸುವವರೆಲ್ಲರನ್ನೂ ಪ್ರಹರಿಸಲಿ.

ಗರ್ಭಸ್ಥಾನಾಮಪಿ ಗತಿರ್ವಿಜ್ಞೇಯಾ ಚೈವ ದೇಹಿನಾಮ್ ।
ನಾರದೇನ ಹಿ ಗರ್ಭೇಭ್ಯೋ ಭಯಂ ನಃ ಸಮುದಾಹೃತಮ್ ।। ೨-೫೬-೨೮

ಗರ್ಭಸ್ಥರಾಗಿರುವ ಪ್ರಾಣಿಗಳ ಕುರಿತೂ ತಿಳಿದುಕೊಳ್ಳಬೇಕು. ಏಕೆಂದರೆ ಗರ್ಭದಿಂದಲೇ ನನಗೆ ಭಯವಿದೆಯೆಂದು ನಾರದನು ಹೇಳಿದ್ದಾನೆ.

ಭವಂತೋ ಹಿ ಯಥಾಕಾಮಂ ಮೋದಂತಾಂ ವಿಗತಜ್ವರಾಃ ।
ಮಾಂ ಚ ವೋ ನಾಥಮಾಶೃತ್ಯ ನಾಸ್ತಿ ದೇವಕೃತಂ ಭಯಮ್ ।। ೨-೫೬-೨೯

ನೀವು ನಿಶ್ಚಿಂತರಾಗಿ ಇಚ್ಛಾನುಸಾರ ಮೋದಿಸಿ. ನಾನು ನಿಮಗೆ ನಾಥನು. ನನ್ನನ್ನು ಆಶ್ರಯಿಸಿದ ನಿಮಗೆ ದೇವತೆಗಳು ನೀಡುವ ಭಯವಿಲ್ಲದಿರಲಿ.

ಸ ತು ಕೇಲಿಕಿಲೋ ವಿಪ್ರೋ ಭೇದಶೀಲಶ್ಚ ನಾರದಃ ।
ಸುಶ್ಲಿಷ್ಟಾನಪಿ ಲೋಕೇಽಸ್ಮಿನ್ಭೇದಯನ್ ಲಭತೇ ರತಿಮ್ ।। ೨-೫೬-೩೦

ಆ ವಿಪ್ರ ನಾರದನಾದರೋ ಭೇದವನ್ನುಂಟುಮಾಡುವ ಆಟವನ್ನೇ ಆಡುತ್ತಾನೆ. ಪರಸ್ಪರ ಹೊಂದಿಕೊಂಡಿರುವ ಈ ಲೋಕದಲ್ಲಿ ಭೇದವನ್ನುಂಟುಮಾಡುವುದರಲ್ಲಿಯೇ ಅವನು ಆನಂದಿಸುತ್ತಾನೆ.

ಕಂಡೂಯಮಾನಃ ಸತತಂ ಲೋಕಾನಟತಿ ಚಂಚಲಃ ।
ಘಟಮಾನೋ ನರೇಂದ್ರಾಣಾಂ ತಂತ್ರೈರ್ವೈರಾಣಿ ಚೈವ ಹಿ ।। ೨-೫೬-೩೧

ಅವನು ಅತಿ ಚಂಚಲ ಸ್ವಭಾವದವನು ಮತ್ತು ಜನರಲ್ಲಿ ಸದಾ ಸಂಘರ್ಷವನ್ನುಂಟುಮಾಡುತ್ತಾ ತಿರುಗುತ್ತಾನೆ. ನರೇಂದ್ರರಲ್ಲಿ ವೈರವನ್ನುಂಟುಮಾಡುವುದರ ತಂತ್ರದಲ್ಲಿಯೇ ತೊಡಗಿರುತ್ತಾನೆ.”

ಏವಂ ಸ ವಿಲಪನ್ನೇವ ವಾಙ್ಮಾತ್ರೇಣೈವ ಕೇವಲಮ್ ।
ವಿವೇಶ ಕಂಸೋ ಭವನಂ ದಹ್ಯಮಾನೇನ ಚೇತಸಾ ।। ೨-೫೬-೩೨

ಹೀಗೆ ಕೇವಲ ಮಾತಿನಲ್ಲಿಯೇ ಪ್ರಲಾಪಗೈಯುತ್ತಾ ಕಂಸನು ತನ್ನ ಭವನವನ್ನು ಪ್ರವೇಶಿಸಿದನು. ಆಗ ಅವನ ಚೇತನವು ದಹಿಸುತ್ತಿತ್ತು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ನಾರದಾಗಮನೇ ಕಂಸವಾಕ್ಯೇ ಷಟ್‌ಪಂಚಾಶತ್ತಮೋಽಧ್ಯಾಯಃ