014: ಸಗರೋತ್ಪತ್ತಿಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 14

ಸಾರ

ಜನಮೇಜಯ ಉವಾಚ
ಕಥಂ ಸ ಸಗರೋ ಜಾತೋ ಗರೇಣೈವ ಸಹಾಚ್ಯುತಃ ।
ಕಿಮರ್ಥಂ ಚ ಶಕಾದೀನಾಂ ಕ್ಷತ್ರಿಯಾಣಾಂ ಮಹೌಜಸಾಮ್ ।। ೧-೧೪-೧
ಧರ್ಮಂ ಕುಲೋಚಿತಂ ಕ್ರುದ್ಧೋ ರಾಜಾ ನಿರಸದಚ್ಯುತಃ ।
ಏತನ್ಮೇ ಸರ್ವಮಾಚಕ್ಷ್ವ ವಿಸ್ತರೇಣ ತಪೋಧನ ।। ೧-೧೪-೨

ಜನಮೇಜಯನು ಹೇಳಿದನು: “ತಪೋಧನ! ಅಚ್ಯುತ ಸಗರನು ವಿಷದೊಂದಿಗೆ ಹೇಗೆ ಹುಟ್ಟಿದನು? ಮತ್ತು ಯಾವ ಕಾರಣಕ್ಕಾಗಿ ಅಚ್ಯುತ ರಾಜ ಸಗರನು ಕ್ರುದ್ಧನಾಗಿ ಶಕರೇ ಮೊದಲಾದ ಮಹೌಜಸ ಕ್ಷತ್ರಿಯರನ್ನು ಅವರ ಕುಲೋಚಿತ ಧರ್ಮದಿಂದ ನಿರಸನಗೊಳಿಸಿದನು? ಇವೆಲ್ಲವನ್ನೂ ವಿಸ್ತಾರವಾಗಿ ನನಗೆ ಹೇಳಬೇಕು.”

ವೈಶಂಪಾಯನ ಉವಾಚ
ಬಾಹೋರ್ವ್ಯಸನಿನಸ್ತಾತ ಹೃತಂ ರಾಜ್ಯಮಭೂತ್ಕಿಲ ।
ಹೈಹಯೈಸ್ತಾಲಜಂಘೈಶ್ಚ ಶಕೈಃ ಸಾರ್ಧಂ ವಿಶಾಂಪತೇ ।। ೧-೧೪-೩

ವೈಶಂಪಾಯನನು ಹೇಳಿದನು: “ತಾತ! ವಿಶಾಂಪತೇ! ವ್ಯಸನಿಯಾಗಿದ್ದ ಬಾಹುವಿನ ರಾಜ್ಯವನ್ನು ಹೈಹಯ, ತಾಲಜಂಘ ಮತ್ತು ಶಕರು ಒಟ್ಟಾಗಿ ಅಪಹರಿಸಿದರು.

ಯವನಾಃ ಪಾರದಾಶ್ಚೈವ ಕಾಮ್ಬೋಜಾಃ ಪಹ್ಲವಾಃ ಖಸಾಃ ।
ಏತೇ ಹ್ಯಪಿ ಗಣಾಃ ಪಂಚ ಹೈಹಯಾರ್ಥೇ ಪರಾಕ್ರಮಮ್ ।। ೧-೧೪-೪

ಯವನರು, ಪಾರದರು, ಕಾಂಬೋಜರು, ಪಹ್ಲವರು ಮತ್ತು ಖಸರು ಈ ಐದು ಗಣಗಳೂ ಹೈಹಯರ ಕಡೆಯ ಪರಾಕ್ರಮಿಗಳಾಗಿದ್ದರು.

ಹೃತರಾಜ್ಯಸ್ತದಾ ರಾಜಾ ಸ ವೈ ಬಾಹುರ್ವನಂ ಯಯೌ ।
ಪತ್ನ್ಯಾ ಚಾನುಗತೋ ದುಃಖೀ ವನೇ ಪ್ರಾಣಾನವಾಸೃಜತ್ ।। ೧-೧೪-೫

ರಾಜ್ಯವನ್ನು ಕಳೆದುಕೊಂಡ ನಂತರ ರಾಜಾ ಬಾಹುವು ಪತ್ನಿಯೊಂದಿಗೆ ವನಕ್ಕೆ ತೆರಳಿದನು. ದುಃಖಿಯಾಗಿದ್ದ ಅವನು ವನದಲ್ಲಿಯೇ ಪ್ರಾಣಗಳನ್ನು ತ್ಯಜಿಸಿದನು.

ಪತ್ನೀ ತು ಯಾದವೀ ತಸ್ಯ ಸಗರ್ಭಾ ಪೃಷ್ಠತೋಽನ್ವಗಾತ್ ।
ಸಪತ್ನ್ಯಾ ಚ ಗರಸ್ತಸ್ಯೈ ದತ್ತಃ ಪೂರ್ವಮಭೂತ್ಕಿಲ ।। ೧-೧೪-೬

ಗರ್ಭವತಿಯಾಗಿದ್ದ ಅವನ ಪತ್ನಿ ಯಾದವಿಯು ಅವನ ಹಿಂದೆಯೇ ಹೋಗಿದ್ದಳು. ಅದಕ್ಕೆ ಮೊದಲೇ ಅವಳ ಸವತಿಯು ಅವಳಿಗೆ ವಿಷವನ್ನು ನೀಡಿದ್ದಳು.

ಸಾ ತು ಭರ್ತುಶ್ಚಿತಾಂ ಕೃತ್ವಾ ವನೇ ತಾಮಧ್ಯರೋಹತ ।
ಔರ್ವಸ್ತಾಂ ಭಾರ್ಗವಸ್ತಾತ ಕಾರುಣ್ಯಾತ್ಸಮವಾರಯತ್ ।। ೧-೧೪-೭

ತಾತ! ವನದಲ್ಲಿ ಅವಳು ಪತಿಯ ಚಿತೆಯನ್ನು ನಿರ್ಮಿಸಿ ಅದನ್ನು ಏರಲು ತೊಡಗಿದಾಗ ಭಾರ್ಗವ ಔರ್ವನು ಕಾರುಣ್ಯದಿಂದ ಅವಳನ್ನು ತಡೆದನು.

ತಸ್ಯಾಶ್ರಮೇ ಚ ತಂ ಗರ್ಭಂ ಗರೇಣೈವ ಸಹಾಚ್ಯುತಮ್ ।
ವ್ಯಜಾಯತ ಮಹಾಬಾಹುಂ ಸಗರಂ ನಾಮ ಪಾರ್ಥಿವಮ್ ।। ೧-೧೪-೮

ಅವನ ಆಶ್ರಮದಲ್ಲಿಯೇ ಅವಳು ವಿಷದಿಂದಲೂ ಬೀಳದೇ ಇದ್ದ ಗರ್ಭವನ್ನು ಧರಿಸಿದ್ದಳು. ಅನಂತರ ಅವಳು ಸಗರ ಎಂಬ ಮಹಾಬಾಹು ಪಾರ್ಥಿವನಿಗೆ ಜನ್ಮವಿತ್ತಳು.

ಔರ್ವಸ್ತು ಜಾತಕರ್ಮಾದಿ ತಸ್ಯ ಕೃತ್ವಾ ಮಹಾತ್ಮನಃ ।
ಅಧ್ಯಾಪ್ಯ ವೇದಶಾಸ್ತ್ರಾಣಿ ತತೋಽಸ್ತ್ರಂ ಪ್ರತ್ಯಪಾದಯತ್ ।। ೧-೧೪-೯

ಮಹಾತ್ಮ ಔರ್ವನಾದರೋ ಅವನ ಜಾತಕರ್ಮಾದಿಗಳನ್ನು ಮಾಡಿ, ಅವನಿಗೆ ವೇದಶಾಸ್ತ್ರಗಳ ಅಧ್ಯಾಪನೆಗಳನ್ನು ಮಾಡಿಸಿ, ಅಸ್ತ್ರವನ್ನು ನೀಡಿದನು.

ಆಗ್ನೇಯಂ ತು ಮಹಾಘೋರಮಮರೈರಪಿ ದುಃಸಹಮ್ ।
ಸ ತೇನಾಸ್ತ್ರಬಲೇನಾಜೌ ಬಲೇನ ಚ ಸಮನ್ವಿತಃ ।। ೧-೧೪-೧೦

ಅಮರರಿಗೂ ದುಃಸ್ಸಹವಾದ ಮಹಾಘೋರ ಆಗ್ನೇಯಾಸ್ತ್ರವನ್ನು ಪಡೆದು, ಆ ಅಸ್ತ್ರಬಲದಿಂದ ಸಗರನು ಬಲಾನ್ವಿತನಾದನು.

ಹೈಹಯಾನ್ನಿಜಘಾನಾಶು ಕ್ರುದ್ಧೋ ರುದ್ರಃ ಪಶೂನಿವ ।
ಆಜಹಾರ ಚ ಲೋಕೇಷು ಕೀರ್ತಿಂ ಕೀರ್ತಿಮತಾಂ ವರಃ ।। ೧-೧೪-೧೧

ಕೀರ್ತಿವಂತರಲ್ಲಿ ಶ್ರೇಷ್ಠನಾದ ಅವನು ಕ್ರುದ್ಧ ರುದ್ರನು ಯಜ್ಞಪಶುವನ್ನು ಹೇಗೋ ಹಾಗೆ ಹೈಹಯರನ್ನು ಸಂಹರಿಸಿ ಲೋಕಗಳಲ್ಲಿ ಕೀರ್ತಿಯನ್ನು ಗಳಿಸಿದನು.

ತತಃ ಶಕಾನ್ಸಯವನಾನ್ಕಾಮ್ಬೋಜಾನ್ಪಾರದಾಂಸ್ತದಾ ।
ಪಹ್ಲವಾಂಶ್ಚೈವ ನಿಃಶೇಷಾನ್ಕರ್ತುಂ ವ್ಯವಸಿತಸ್ತದಾ ।। ೧-೧೪-೧೨

ಅನಂತರ ಅವನು ಶಕರು, ಯವನರು, ಕಾಂಬೋಜರು, ಪಾರದರು ಮತ್ತು ಪಹ್ಲವರನ್ನು ನಿಃಶೇಷರನ್ನಾಗಿ ಮಾಡತೊಡಗಿದನು.

ತೇ ವಧ್ಯಮಾನಾ ವೀರೇಣ ಸಗರೇಣ ಮಹಾತ್ಮನಾ ।
ವಸಿಷ್ಠಂ ಶರಣಂ ಗತ್ವಾ ಪ್ರಣಿಪೇತುರ್ಮನೀಷಿಣಮ್ ।। ೧-೧೪-೧೩

ಹಾಗೆ ಮಹಾತ್ಮ ವೀರ ಸಗರನಿಂದ ವಧಿಸಲ್ಪಡುತ್ತಿದ್ದ ಅವರು ಮನೀಷಿಣಿ ವಸಿಷ್ಠನ ಶರಣು ಹೋಗಿ ಅಡ್ಡಬಿದ್ದರು.

ವಸಿಷ್ಠಸ್ತ್ವಥ ತಾಂದೃಷ್ಟ್ವಾ ಸಮಯೇನ ಮಹಾದ್ಯುತಿಃ ।
ಸಗರಂ ವಾರಯಾಮಾಸ ತೇಷಾಂ ದತ್ತ್ವಾಭಯಂ ತದಾ ।। ೧-೧೪-೧೪

ಅವರನ್ನು ನೋಡಿ ಮಹಾದ್ಯುತಿ ವಸಿಷ್ಠನು ಒಪ್ಪಂದದೊಂದಿಗೆ ಅವರಿಗೆ ಅಭಯವನ್ನಿತ್ತು ಸಗರನನ್ನು ತಡೆದನು.

ಸಗರಃ ಸ್ವಾಂ ಪ್ರತಿಜ್ಞಾಂ ಚ ಗುರೋರ್ವಾಕ್ಯಂ ನಿಶಮ್ಯ ಚ ।
ಧರ್ಮಂ ಜಘಾನ ತೇಷಾಂ ವೈ ವೇಷಾನ್ಯತ್ವಂ ಚಕಾರ ಹ ।। ೧-೧೪-೧೫

ತನ್ನ ಪ್ರತಿಜ್ಞೆಯನ್ನೂ ಮತ್ತು ಗುರುವಿನ ವಾಕ್ಯವನ್ನೂ ಆಲೋಚಿಸಿ ಸಗರನು ಅವರ ಧರ್ಮವನ್ನು ನಾಶಗೊಳಿಸಿದನು ಮತ್ತು ಅವರ ವೇಷವನ್ನೇ ಬದಲಿಸಿದನು.

ಅರ್ಧಂ ಶಕಾನಾಂ ಶಿರಸೋ ಮುಂಡಂ ಕೃತ್ವಾ ವ್ಯಸರ್ಜಯತ್ ।
ಯವನಾನಾಂ ಶಿರಃ ಸರ್ವಂ ಕಾಂಬೋಜಾನಾಂ ತಥೈವ ಚ ।। ೧-೧೪-೧೬

ಅವನು ಶಕರ ಶಿರಸ್ಸನ್ನು ಅರ್ಧಮುಂಡನ ಮಾಡಿದನು. ಯವನರ ಮತ್ತು ಕಾಂಬೋಜರ ಇಡೀ ತಲೆಯನ್ನು ಬೋಳಿಸಿದನು.

ಪಾರದಾ ಮುಕ್ತಕೇಶಾಶ್ಚ ಪಹ್ಲವಾಃ ಶ್ಮಶ್ರುಧಾರಿಣಃ ।
ನಿಃಸ್ವಾಧ್ಯಾಯವಷಟ್ಕಾರಾಃ ಕೃತಾಸ್ತೇನ ಮಹಾತ್ಮನಾ ।। ೧-೧೪-೧೭

ಆ ಮಹಾತ್ಮನು ಪಾರದರನ್ನು ಮುಕ್ತಕೇಶರನ್ನಾಗಿಯೂ (ತಲೆಗೂದಲನ್ನು ಕಟ್ಟದವರನ್ನಾಗಿ), ಪಹ್ಲವರನ್ನು ಕೇವಲ ಗಡ್ಡ-ಧಾರಿಗಳನ್ನಾಗಿಯೂ ಮಾಡಿದನು. ಅವರಿಗೆ ಸ್ವಾಧ್ಯಾಯ ಮತ್ತು ವಷಟ್ಕಾರಗಳನ್ನು ನಿಷೇದಿಸಿದನು.

ಶಕಾ ಯವನಕಾಂಬೋಜಾಃ ಪಾರದಾಶ್ಚ ವಿಶಾಂಪತೇ ।
ಕೋಲಿಸರ್ಪಾಃ ಸಮಹಿಷಾ ದಾರ್ದ್ಯಾಶ್ಚೋಲಾಃ ಸಕೇರಲಾಃ ।। ೧-೧೪-೧೮
ಸರ್ವೇ ತೇ ಕ್ಷತ್ರಿಯಾಸ್ತಾತ ಧರ್ಮಸ್ತೇಷಾಂ ನಿರಾಕೃತಃ ।
ವಸಿಷ್ಠವಚನಾದ್ರಾಜನ್ಸಗರೇಣ ಮಹಾತ್ಮನಾ ।। ೧-೧೪-೧೯

ವಿಶಾಂಪತೇ! ಶಕರು, ಯವನರು, ಕಾಂಬೋಜರು, ಪಾರದರು, ಕೋಲಿಸರ್ಪರು, ಮಹಿಷರು, ದಾರ್ದ್ಯರು, ಚೋಲರು ಮತ್ತು ಕೇರಲರು – ಇವರೆಲ್ಲರೂ ಕ್ಷತ್ರಿಯರೇ ಆಗಿದ್ದರು. ತಾತ! ವಸಿಷ್ಠನ ಮಾತಿನಂತೆ ಮಹಾತ್ಮ ಸಗರನು ಅವರ ಧರ್ಮವನ್ನು ನಿರಾಕಾರಗೊಳಿಸಿದನು.

ಖಸಾಂಸ್ತು ಪಾರಾಂಶ್ಚೋಲಾಂಶ್ಚ ಮದ್ರಾನ್ಕಿಷ್ಕಿಂಧಕಾಂಸ್ತಥಾ ।
ಕೌಂತಲಾಂಶ್ಚ ತಥಾ ವಂಗಾನ್ಸಾಲ್ವಾನ್ಕೌಂಕಣಕಾಂಸ್ತಥಾ ।। ೧-೧೪-೨೦
ಸ ಧರ್ಮವಿಜಯೀ ರಾಜಾ ವಿಜಿತ್ಯೇಮಾಂ ವಸುಂಧರಾಮ್ ।
ಅಶ್ವಂ ವೈ ಪ್ರೇರಯಾಮಾಸ ವಾಜಿಮೇಧಾಯ ದೀಕ್ಷಿತಃ ।। ೧-೧೪-೨೧

ಖಸರು, ಪಾರರು, ಚೋಲರು, ಮದ್ರರು, ಕಿಷ್ಕಿಂಧರು, ಕುಂತಲರು, ವಂಗರು, ಸಾಲ್ವರು ಮತ್ತು ಕೊಂಕಣಕರನ್ನೂ ಸೋಲಿಸಿ ಆ ಧರ್ಮವಿಜಯಿ ರಾಜನು ಇಡೀ ವಸುಂಧರೆಯನ್ನು ಗೆದ್ದನು. ಅಶ್ವಮೇಧದ ದೀಕ್ಷೆಯನ್ನು ಪಡೆದು ಅವನು ಅಶ್ವವನ್ನು ಬಿಟ್ಟನು.

ತಸ್ಯ ಚಾರಯತಃ ಸೋಽಶ್ವಃ ಸಮುದ್ರೇ ಪೂರ್ವದಕ್ಷಿಣೇ ।
ವೇಲಾಸಮೀಪೇಽಪಹೃತೋ ಭೂಮಿಂ ಚೈವ ಪ್ರವೇಶಿತಃ ।। ೧-೧೪-೨೨

ಆ ಅಶ್ವವು ಪೂರ್ವ-ದಕ್ಷಿಣ ಸಮುತ್ರತೀರದಲ್ಲಿ ಸಂಚರಿಸುತ್ತಿದ್ದಾಗ ಅದನ್ನು ಅಪಹರಿಸಿ ಭೂಮಿಯೊಳಗೆ ಅದನ್ನು ಕೊಂಡೊಯ್ಯಲಾಯಿತು.

ಸ ತಂ ದೇಶಂ ತದಾ ಪುತ್ರೈಃ ಖಾನಯಾಮಾಸ ಪಾರ್ಥಿವಃ ।
ಆಸೇದುಸ್ತೇ ತತಸ್ತತ್ರ ಖನ್ಯಮಾನೇ ಮಹಾರ್ಣವೇ ।। ೧-೧೪-೨೩
ತಮಾದಿಪುರುಷಂ ದೇವಂ ಹರಿಂ ಕೃಷ್ಣಂ ಪ್ರಜಾಪತಿಮ್ ।
ವಿಷ್ಣುಂ ಕಪಿಲರೂಪೇಣ ಸ್ವಪಂತಂ ಪುರುಷೋತ್ತಮಮ್ ।। ೧-೧೪-೨೪

ಪಾರ್ಥಿವ ಸಗರನು ಆ ಪ್ರದೇಶವನ್ನು ತನ್ನ ಪುತ್ರರಿಂದ ಅಗೆಯಿಸಿದನು. ಸಮುದ್ರವನ್ನು ಅಗೆದಾಗ ಸಗರ ಪುತ್ರರು ಅಲ್ಲಿ ಕಪಿಲನ ರೂಪದಲ್ಲಿ ತಪಸ್ಸನ್ನಾಚರಿಸುತ್ತಿದ್ದ ಆದಿಪುರುಷ ದೇವ ಹರಿ ಕೃಷ್ಣ ಪ್ರಜಾಪತಿ ವಿಷ್ಣು ಪುರುಷೋತ್ತಮನನ್ನು ಕಂಡರು.

ತಸ್ಯ ಚಕ್ಷುಃಸಮುತ್ಥೇನ ತೇಜಸಾ ಪ್ರತಿಬುಧ್ಯತಃ ।
ದಗ್ಧಾಸ್ತೇ ವೈ ಮಹಾರಾಜ ಚತ್ವಾರಸ್ತ್ವವಶೇಷಿತಾಃ ।। ೧-೧೪-೨೫
ಬರ್ಹಕೇತುಃ ಸುಕೇತುಶ್ಚ ತಥಾ ಧರ್ಮರಥೋ ನೃಪಃ ।
ಶೂರಃ ಪಂಚಜನಶ್ಚೈವ ತಸ್ಯ ವಂಶಕರೋ ನೃಪಃ ।। ೧-೧೪-೨೬

ಮಹಾರಾಜ! ನೃಪ! ಅವನ ಕಣ್ಣುಗಳು ತೆರೆದುದರಿಂದ ಉಂಟಾದ ತೇಜಸ್ಸಿನಿಂದ ಅವರೆಲ್ಲರೂ ಭಸ್ಮವಾದರು. ಕೇವಲ ನಾಲ್ವರು ಉಳಿದುಕೊಂಡರು: ಬರ್ಹಕೇತು, ಸುಕೇತು, ಧರ್ಮರಥ, ಮತ್ತು ವಂಶಕರ ಪಂಚಜನ.

ಪ್ರಾದಾಚ್ಚ ತಸ್ಮೈ ಭಗವಾನ್ಹರಿರ್ನಾರಾಯಣೋ ವರಾನ್ ।
ಅಕ್ಷಯಂ ವಂಶಮಿಕ್ಷ್ವಾಕೋಃ ಕೀರ್ತಿಂ ಚಾಪ್ಯನಿವರ್ತನೀಮ್ ।। ೧-೧೪-೨೭
ಪುತ್ರಂ ಸಮುದ್ರಂ ಚ ವಿಭುಃ ಸ್ವರ್ಗವಾಸಂ ತಥಾಕ್ಷಯಮ್ ।
ಪುತ್ರಾಣಾಂ ಚಾಕ್ಷಯಾನ್ಲೋಕಾನ್ ತ್ವಸ್ಯ ಯೇ ಚಕ್ಷುಷಾ ಹತಾಃ ।। ೧-೧೪-೨೮

ಭಗವಾನ್ ಹರಿ ನಾರಾಯಣನು ಅವನಿಗೆ ಇಕ್ಷ್ವಾಕುಗಳ ಅಕ್ಷಯ ವಂಶವನ್ನೂ, ಅಳಿಯದ ಕೀರ್ತಿಯನ್ನೂ, ಸಮುದ್ರನನ್ನು ಮಗನನ್ನಾಗಿಯೂ, ಅಕ್ಷಯ ಸ್ವರ್ಗವಾಸವನ್ನೂ, ಮತ್ತು ತನ್ನ ದೃಷ್ಟಿಯಿಂದ ಹತರಾದ ಅವನ ಪುತ್ರರಿಗೆ ಅಕ್ಷಯ ಲೋಕಗಳನ್ನೂ ವರವನ್ನಾಗಿತ್ತನು.

ಸಮುದ್ರಶ್ಚಾರ್ಘ್ಯಮಾದಾಯ ವವಂದೇ ತಂ ಮಹೀಪತಿಮ್ ।
ಸಾಗರತ್ವಂ ಚ ಲೇಭೇ ಸ ಕರ್ಮಣಾ ತೇನ ತಸ್ಯ ವೈ ।। ೧-೧೪-೨೯

ಸಮುದ್ರನು ಅರ್ಘ್ಯವನ್ನು ನೀಡಿ ಮಹೀಪತಿಯನ್ನು ವಂದಿಸಿದನು. ಅವನ ಈ ಕರ್ಮದಿಂದಾಗಿ ಅವನಿಗೆ ಸಾಗರತ್ವವು ದೊರಕಿತು.

ತಂ ಚಾಶ್ವಮೇಧಿಕಂ ಸೋಽಶ್ವಂ ಸಮುದ್ರಾದುಪಲಬ್ಧವಾನ್ ।
ಆಜಹಾರಾಶ್ವಮೇಧಾನಾಂ ಶತಂ ಸ ಸುಮಹಾಯಶಾಃ ।
ಪುತ್ರಾಣಾಂ ಚ ಸಹಸ್ರಾಣಿ ಷಷ್ಠಿಸ್ತಸ್ಯೇತಿ ನಃ ಶ್ರುತಮ್ ।। ೧-೧೪-೩೦

ಸಮುದ್ರನಿಂದ ಆ ಅಶ್ವವನ್ನು ಪಡೆದು ಅವನು ಮಹಾ ಯಶಸ್ಸಿನ ನೂರು ಅಶ್ವಮೇಧ ಯಾಗಗಳನ್ನು ಯಾಜಿಸಿದನು. ಅವನಿಗೆ ಅರವತ್ತು ಸಾವಿರ ಪುತ್ರರಿದ್ದರೆಂದು ಕೇಳಿದ್ದೇವೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಸಗರೋತ್ಪತ್ತಿರ್ನಾಮ ಚತುರ್ದಶೋಽಧ್ಯಾಯಃ