ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆಶ್ರಮವಾಸಿಕ ಪರ್ವ
ಆಶ್ರಮವಾಸ ಪರ್ವ
ಅಧ್ಯಾಯ 27
ಸಾರ
ಧೃತರಾಷ್ಟ್ರನಿಗೆ ಯಾವಾಗ ಯಾವ ಲೋಕಗಳು ದೊರೆಯುತ್ತವೆ ಎಂದು ಶತಯೂಪನು ನಾರದನನ್ನು ಪ್ರಶ್ನಿಸಿದುದು (1-6). ನಾರದನ ಉತ್ತರ (7-16).
15027001 ವೈಶಂಪಾಯನ ಉವಾಚ।
15027001a ನಾರದಸ್ಯ ತು ತದ್ವಾಕ್ಯಂ ಪ್ರಶಶಂಸುರ್ದ್ವಿಜೋತ್ತಮಾಃ।
15027001c ಶತಯೂಪಸ್ತು ರಾಜರ್ಷಿರ್ನಾರದಂ ವಾಕ್ಯಮಬ್ರವೀತ್।।
ವೈಶಂಪಾಯನನು ಹೇಳಿದನು: “ನಾರದನ ಆ ಮಾತನ್ನು ದ್ವಿಜೋತ್ತಮರು ಪ್ರಶಂಸಿಸುತ್ತಿರಲು ರಾಜರ್ಷಿ ಶತಯೂಪನಾದರೋ ನಾರದನಿಗೆ ಹೇಳಿದನು:
15027002a ಅಹೋ ಭಗವತಾ ಶ್ರದ್ಧಾ ಕುರುರಾಜಸ್ಯ ವರ್ಧಿತಾ।
15027002c ಸರ್ವಸ್ಯ ಚ ಜನಸ್ಯಾಸ್ಯ ಮಮ ಚೈವ ಮಹಾದ್ಯುತೇ।।
“ಆಹಾ! ಮಹಾದ್ಯುತೇ! ನೀನು ಕುರುರಾಜನ, ನನ್ನ ಮತ್ತು ಸರ್ವ ಜನರ ಶ್ರದ್ಧೆಯನ್ನು ವರ್ಧಿಸಿರುವೆ!
15027003a ಅಸ್ತಿ ಕಾ ಚಿದ್ವಿವಕ್ಷಾ ತು ಮಮ ತಾಂ ಗದತಃ ಶೃಣು।
15027003c ಧೃತರಾಷ್ಟ್ರಂ ಪ್ರತಿ ನೃಪಂ ದೇವರ್ಷೇ ಲೋಕಪೂಜಿತ।।
ದೇವರ್ಷೇ! ಲೋಕಪೂಜಿತ! ನೃಪ ಧೃತರಾಷ್ಟ್ರನ ಕುರಿತು ನನ್ನ ಒಂದು ಪ್ರಶ್ನೆಯಿದೆ. ಅದನ್ನು ಹೇಳುತ್ತೇನೆ. ಕೇಳು.
15027004a ಸರ್ವವೃತ್ತಾಂತತತ್ತ್ವಜ್ಞೋ ಭವಾನ್ದಿವ್ಯೇನ ಚಕ್ಷುಷಾ।
15027004c ಯುಕ್ತಃ ಪಶ್ಯಸಿ ದೇವರ್ಷೇ ಗತೀರ್ವೈ ವಿವಿಧಾ ನೃಣಾಮ್।।
ದೇವರ್ಷೇ! ನಿನ್ನ ದಿವ್ಯ ದೃಷ್ಟಿಯಿಂದ ಸರ್ವವೃತ್ತಾಂತಗಳ ತತ್ತ್ವಗಳನ್ನೂ ತಿಳಿದಿರುವೆ! ಮನುಷ್ಯರು ಪಡೆಯುವ ವಿವಿಧ ಗತಿಗಳನ್ನು ನೀನು ಕಂಡಿರುವೆ!
15027005a ಉಕ್ತವಾನ್ನೃಪತೀನಾಂ ತ್ವಂ ಮಹೇಂದ್ರಸ್ಯ ಸಲೋಕತಾಮ್।
15027005c ನ ತ್ವಸ್ಯ ನೃಪತೇರ್ಲೋಕಾಃ ಕಥಿತಾಸ್ತೇ ಮಹಾಮುನೇ।।
ಮಹಾಮುನೇ! ಮಹೇಂದ್ರನ ಲೋಕದಲ್ಲಿ ಈ ಲೋಕದ ಯಾವ ಯಾವ ನೃಪತಿಗಳಿರುವರೆನ್ನುವುದನ್ನು ಹೇಳಿದ್ದೀಯೆ!
15027006a ಸ್ಥಾನಮಸ್ಯ ಕ್ಷಿತಿಪತೇಃ ಶ್ರೋತುಮಿಚ್ಚಾಮ್ಯಹಂ ವಿಭೋ।
15027006c ತ್ವತ್ತಃ ಕೀದೃಕ್ಕದಾ ವೇತಿ ತನ್ಮಮಾಚಕ್ಷ್ವ ಪೃಚ್ಚತಃ।।
ವಿಭೋ! ಈ ಕ್ಷಿತಿಪತಿ ಧೃತರಾಷ್ಟ್ರನಿಗೆ ಯಾವ ಸ್ಥಾನಗಳಿವೆ ಎನ್ನುವುದನ್ನು ಕೇಳಲು ಬಯಸುತ್ತೇನೆ. ಇವನಿಗೆ ಯಾವ ರೀತಿಯ ಲೋಕಗಳು ಯಾವಾಗ ದೊರೆಯುತ್ತವೆ ಎನ್ನುವುದನ್ನು ಕೇಳುವ ನನಗೆ ಹೇಳಬೇಕು.”
15027007a ಇತ್ಯುಕ್ತೋ ನಾರದಸ್ತೇನ ವಾಕ್ಯಂ ಸರ್ವಮನೋನುಗಮ್।
15027007c ವ್ಯಾಜಹಾರ ಸತಾಂ ಮಧ್ಯೇ ದಿವ್ಯದರ್ಶೀ ಮಹಾತಪಾಃ।।
ಹೀಗೆ ಕೇಳಲು ದಿವ್ಯದರ್ಶೀ ಮಹಾತಪಸ್ವಿ ನಾರದನು ಆ ಸತ್ಪುರುಷರ ಮಧ್ಯೆ ಸರ್ವರ ಮನಸ್ಸಿಗೂ ಹಿತವಾಗುವ ಈ ಮಾತನ್ನಾಡಿದನು:
15027008a ಯದೃಚ್ಛಯಾ ಶಕ್ರಸದೋ ಗತ್ವಾ ಶಕ್ರಂ ಶಚೀಪತಿಮ್।
15027008c ದೃಷ್ಟವಾನಸ್ಮಿ ರಾಜರ್ಷೇ ತತ್ರ ಪಾಂಡುಂ ನರಾಧಿಪಮ್।।
“ರಾಜರ್ಷೇ! ನನ್ನ ಇಚ್ಛೆಯಂತೆಯೇ ಸಂಚರಿಸುತ್ತಿರುವಾಗ ಶಕ್ರಸದನಕ್ಕೆ ಹೋಗಿ ಅಲ್ಲಿ ಶಚೀಪತಿ ಶಕ್ರನನ್ನೂ ನರಾಧಿಪ ಪಾಂಡುವನ್ನೂ ನಾನು ನೋಡಿದ್ದೇನೆ.
15027009a ತತ್ರೇಯಂ ಧೃತರಾಷ್ಟ್ರಸ್ಯ ಕಥಾ ಸಮಭವನ್ನೃಪ।
15027009c ತಪಸೋ ದುಶ್ಚರಸ್ಯಾಸ್ಯ ಯದಯಂ ತಪ್ಯತೇ ನೃಪಃ।।
ನೃಪ! ಅಲ್ಲಿಯೇ ಈ ಧೃತರಾಷ್ಟ್ರನ ಕುರಿತು ಮಾತುಕಥೆಗಳು ನಡೆದವು. ಈ ನೃಪನು ತಪಿಸುತ್ತಿರುವ ದುಶ್ಚರ ತಪಸ್ಸಿನ ವಿಷಯವೂ ಅಲ್ಲಿ ಬಂದಿತ್ತು.
15027010a ತತ್ರಾಹಮಿದಮಶ್ರೌಷಂ ಶಕ್ರಸ್ಯ ವದತೋ ನೃಪ।
15027010c ವರ್ಷಾಣಿ ತ್ರೀಣಿ ಶಿಷ್ಟಾನಿ ರಾಜ್ಞೋಽಸ್ಯ ಪರಮಾಯುಷಃ।।
ನೃಪ! ಅಲ್ಲಿ ಶಕ್ರನು ಹೇಳಿದ ಈ ಮಾತನ್ನು ನಾನು ಕೇಳಿದೆ. ಈ ರಾಜನ ಪರಮಾಯುಷ್ಯದಲ್ಲಿ ಇನ್ನು ಮೂರು ವರ್ಷಗಳು ಮಾತ್ರವೇ ಉಳಿದಿದೆ.
15027011a ತತಃ ಕುಬೇರಭವನಂ ಗಾಂಧಾರೀಸಹಿತೋ ನೃಪಃ।
15027011c ವಿಹರ್ತಾ ಧೃತರಾಷ್ಟ್ರೋಽಯಂ ರಾಜರಾಜಾಭಿಪೂಜಿತಃ।।
ಅನಂತರ ಈ ರಾಜರಾಜರಿಂದ ಪೂಜಿತನಾದ ನೃಪ ಧೃತರಾಷ್ಟ್ರನು ಗಾಂಧಾರಿಯ ಸಹಿತ ಕುಬೇರಭವನಕ್ಕೆ ಹೋಗುತ್ತಾನೆ.
15027012a ಕಾಮಗೇನ ವಿಮಾನೇನ ದಿವ್ಯಾಭರಣಭೂಷಿತಃ।
15027012c ಋಷಿಪುತ್ರೋ ಮಹಾಭಾಗಸ್ತಪಸಾ ದಗ್ಧಕಿಲ್ಬಿಷಃ।।
ತಪಸ್ಸಿನಿಂದ ತನ್ನ ಪಾಪಗಳನ್ನು ಸುಟ್ಟು ಈ ಋಷಿಪುತ್ರನು ದಿವ್ಯಾಭರಣಭೂಷಿತನಾಗಿ ಮನಸ್ಸಿಗೆ ಬಂದಲ್ಲಿಗೆ ಚಲಿಸಬಲ್ಲ ವಿಮಾನದಲ್ಲಿ ಹೋಗುತ್ತಾನೆ.
15027013a ಸಂಚರಿಷ್ಯತಿ ಲೋಕಾಂಶ್ಚ ದೇವಗಂಧರ್ವರಕ್ಷಸಾಮ್।
15027013c ಸ್ವಚ್ಚಂದೇನೇತಿ ಧರ್ಮಾತ್ಮಾ ಯನ್ಮಾಂ ತ್ವಂ ಪರಿಪೃಚ್ಚಸಿ।।
ಧರ್ಮಾತ್ಮಾ! ಇವನು ದೇವ-ಗಂಧರ್ವ-ರಾಕ್ಷಸರ ಲೋಕಗಳನ್ನು ಸ್ವಚ್ಚಂದವಾಗಿ ಸಂಚರಿಸುತ್ತಾನೆ. ಇದು ನೀನು ಕೇಳಿದ ಪ್ರಶ್ನೆಗೆ ಉತ್ತರವಾಗಿದೆ.
15027014a ದೇವಗುಹ್ಯಮಿದಂ ಪ್ರೀತ್ಯಾ ಮಯಾ ವಃ ಕಥಿತಂ ಮಹತ್।
15027014c ಭವಂತೋ ಹಿ ಶ್ರುತಧನಾಸ್ತಪಸಾ ದಗ್ಧಕಿಲ್ಬಿಷಾಃ।।
ನೀವು ಶ್ರುತಧನರೂ ತಪಸ್ಸಿನಿಂದ ಪಾಪಗಳನ್ನೂ ಸುಟ್ಟವರೂ ಆಗಿದ್ದೀರಿ. ಆದುದರಿಂದಲೇ ನಿಮಗೆ ನಾನು ಪ್ರೀತಿಯಿಂದ ಈ ಮಹಾ ದೇವಗುಹ್ಯವನ್ನು ಹೇಳಿದ್ದೇನೆ.”
15027015a ಇತಿ ತೇ ತಸ್ಯ ತಚ್ಚ್ರುತ್ವಾ ದೇವರ್ಷೇರ್ಮಧುರಂ ವಚಃ।
15027015c ಸರ್ವೇ ಸುಮನಸಃ ಪ್ರೀತಾ ಬಭೂವುಃ ಸ ಚ ಪಾರ್ಥಿವಃ।।
ದೇವರ್ಷಿಯ ಆ ಮಧುರ ವಚನವನ್ನು ಕೇಳಿ ಸರ್ವ ಪಾರ್ಥಿವರೂ ಸುಮನಸ್ಕರಾಗಿ ಸಂತೋಷಗೊಂಡರು.
15027016a ಏವಂ ಕಥಾಭಿರನ್ವಾಸ್ಯ ಧೃತರಾಷ್ಟ್ರಂ ಮನೀಷಿಣಃ।
15027016c ವಿಪ್ರಜಗ್ಮುರ್ಯಥಾಕಾಮಂ ತೇ ಸಿದ್ಧಗತಿಮಾಸ್ಥಿತಾಃ।।
ಹೀಗೆ ಮನೀಷಿ ವಿಪ್ರರು ಮಾತುಗಳಿಂದ ಧೃತರಾಷ್ಟ್ರನನ್ನು ಸಂತೋಷಗೊಳಿಸಿ ಅವನ ಅನುಮತಿಯನ್ನು ಪಡೆದು ಸಿದ್ಧರ ಗತಿಯನ್ನು ಆಶ್ರಯಿಸಿದವರಾಗಿ ಇಚ್ಛೆಬಂದಲ್ಲಿಗೆ ಹೊರಟುಹೋದರು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ನಾರದವಾಕ್ಯೇ ಸಪ್ತವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ನಾರದವಾಕ್ಯ ಎನ್ನುವ ಇಪ್ಪತ್ತೇಳನೇ ಅಧ್ಯಾಯವು.