ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆಶ್ರಮವಾಸಿಕ ಪರ್ವ
ಆಶ್ರಮವಾಸ ಪರ್ವ
ಅಧ್ಯಾಯ 23
ಸಾರ
ಕುಂತಿಯ ಮಾತು (1-21).
15023001 ಕುಂತ್ಯುವಾಚ।
15023001a ಏವಮೇತನ್ಮಹಾಬಾಹೋ ಯಥಾ ವದಸಿ ಪಾಂಡವ।
15023001c ಕೃತಮುದ್ಧರ್ಷಣಂ ಪೂರ್ವಂ ಮಯಾ ವಃ ಸೀದತಾಂ ನೃಪ।।
ಕುಂತಿಯು ಹೇಳಿದಳು: “ಪಾಂಡವ! ನೃಪ! ಮಹಾಬಾಹೋ! ನೀನು ಹೇಳಿದುದು ಸರಿಯಾಗಿಯೇ ಇದೆ! ಹಿಂದೆ ನೀವು ಎದೆಗುಂದಿದ್ದಾಗ ನಾನು ನಿಮ್ಮನ್ನು ಯುದ್ಧಕ್ಕೆ ಪ್ರೋತ್ಸಾಹಿಸಿದ್ದೆನು.
15023002a ದ್ಯೂತಾಪಹೃತರಾಜ್ಯಾನಾಂ ಪತಿತಾನಾಂ ಸುಖಾದಪಿ।
15023002c ಜ್ಞಾತಿಭಿಃ ಪರಿಭೂತಾನಾಂ ಕೃತಮುದ್ಧರ್ಷಣಂ ಮಯಾ।।
ದ್ಯೂತದಿಂದ ರಾಜ್ಯ-ಸುಖಗಳನ್ನು ಅಪಹರಿಸಲ್ಪಟ್ಟು ನೀವು ಜ್ಞಾತಿಬಾಂಧವರಿಂದಲೂ ತಿರಸ್ಕೃತರಾಗಿದ್ದಾಗ ನಾನು ನಿಮ್ಮನ್ನು ಯುದ್ಧಕ್ಕೆ ಪ್ರೋತ್ಸಾಹಿಸಿದ್ದೆನು.
15023003a ಕಥಂ ಪಾಂಡೋರ್ನ ನಶ್ಯೇತ ಸಂತತಿಃ ಪುರುಷರ್ಷಭಾಃ।
15023003c ಯಶಶ್ಚ ವೋ ನ ನಶ್ಯೇತ ಇತಿ ಚೋದ್ಧರ್ಷಣಂ ಕೃತಮ್।।
ಪುರುಷರ್ಷಭರೇ! ಪಾಂಡುವಿನ ಸಂತತಿಯು ನಾಶವಾಗದೇ ಇರುವುದು ಮತ್ತು ನಿಮ್ಮ ಯಶಸ್ಸು ಕುಂದದೇ ಇರುವುದು ಹೇಗೆ ಎಂದು ಯೋಚಿಸಿ ನಾವು ನಿಮ್ಮನ್ನು ಪ್ರೋತ್ಸಾಹಿಸಿದೆನು.
15023004a ಯೂಯಮಿಂದ್ರಸಮಾಃ ಸರ್ವೇ ದೇವತುಲ್ಯಪರಾಕ್ರಮಾಃ।
15023004c ಮಾ ಪರೇಷಾಂ ಮುಖಪ್ರೇಕ್ಷಾಃ ಸ್ಥೇತ್ಯೇವಂ ತತ್ಕೃತಂ ಮಯಾ।।
ನೀವೆಲ್ಲರೂ ಇಂದ್ರನ ಸಮನಾದವರು. ಪರಾಕ್ರಮದಲ್ಲಿ ದೇವತೆಗಳ ಸಮಾನರು. ನೀವು ಜೀವಿಕೆಗಾಗಿ ಇನ್ನೊಬ್ಬರ ಮುಖನೋಡಬಾರದು ಎಂದು ನಾನು ಹಾಗೆ ಮಾಡಿದೆನು.
15023005a ಕಥಂ ಧರ್ಮಭೃತಾಂ ಶ್ರೇಷ್ಠೋ ರಾಜಾ ತ್ವಂ ವಾಸವೋಪಮಃ।
15023005c ಪುನರ್ವನೇ ನ ದುಃಖೀ ಸ್ಯಾ ಇತಿ ಚೋದ್ಧರ್ಷಣಂ ಕೃತಮ್।।
ರಾಜಾ! ಧರ್ಮಭೃತರಲ್ಲಿ ಶ್ರೇಷ್ಠ ಮತ್ತು ಇಂದ್ರನ ಸಮನಾಗಿರುವ ನೀನು ಹೇಗೆ ಪುನಃ ವನದಲ್ಲಿ ದುಃಖಿಯಾಗಿರುವೆ ಎಂದು ನಾನು ನಿಮ್ಮನ್ನು ಪ್ರೋತ್ಸಾಹಿಸಿದೆನು.
15023006a ನಾಗಾಯುತಸಮಪ್ರಾಣಃ ಖ್ಯಾತವಿಕ್ರಮಪೌರುಷಃ।
15023006c ನಾಯಂ ಭೀಮೋಽತ್ಯಯಂ ಗಚ್ಚೇದಿತಿ ಚೋದ್ಧರ್ಷಣಂ ಕೃತಮ್।।
ಸಾವಿರ ಆನೆಗಳ ಬಲವುಳ್ಳ, ವಿಕ್ರಮ-ಪೌರುಷಗಳಲ್ಲಿ ಖ್ಯಾತನಾದ ಈ ಭೀಮನು ನಾಶನಾಗಬಾರದೆಂದು ನಾನು ನಿಮ್ಮನ್ನು ಪ್ರೋತ್ಸಾಹಿಸಿದೆನು.
15023007a ಭೀಮಸೇನಾದವರಜಸ್ತಥಾಯಂ ವಾಸವೋಪಮಃ।
15023007c ವಿಜಯೋ ನಾವಸೀದೇತ ಇತಿ ಚೋದ್ಧರ್ಷಣಂ ಕೃತಮ್।।
ಹಾಗೆಯೇ ಭೀಮಸೇನನ ಅನುಜನಾದ, ವಾಸವನಂತಿರುವ ಈ ವಿಜಯ ಅರ್ಜುನನೂ ಎದೆಗುಂದಬಾರದೆಂದು ನಾನು ಪ್ರೋತ್ಸಾಹಿಸಿದೆನು.
15023008a ನಕುಲಃ ಸಹದೇವಶ್ಚ ತಥೇಮೌ ಗುರುವರ್ತಿನೌ।
15023008c ಕ್ಷುಧಾ ಕಥಂ ನ ಸೀದೇತಾಮಿತಿ ಚೋದ್ಧರ್ಷಣಂ ಕೃತಮ್।।
ಗುರುಸೇವೆಯನ್ನೇ ಮಾಡಿಕೊಂಡುಬಂದಿರುವ ಈ ನಕುಲ-ಸಹದೇವರೂ ಕೂಡ ಹಸಿವೆಯಿಂದ ಎದೆಗುಂದಬಾರದೆಂದು ನಾನು ನಿಮ್ಮನ್ನು ಪ್ರೋತ್ಸಾಹಿಸಿದೆನು.
15023009a ಇಯಂ ಚ ಬೃಹತೀ ಶ್ಯಾಮಾ ಶ್ರೀಮತ್ಯಾಯತಲೋಚನಾ।
15023009c ವೃಥಾ ಸಭಾತಲೇ ಕ್ಲಿಷ್ಟಾ ಮಾ ಭೂದಿತಿ ಚ ತತ್ಕೃತಮ್।।
ಎತ್ತರ ದೇಹವುಳ್ಳ ಈ ಶ್ಯಾಮಲವರ್ಣೆ, ಆಯತಲೋಚನೆ ಶ್ರೀಮತಿ ದ್ರೌಪದಿಯು ಪುನಃ ಸಭಾತಲದಲ್ಲಿ ವೃಥಾ ಕಷ್ಟವನ್ನನುಭವಿಸಬಾರದೆಂದು ನಾನು ಹಾಗೆ ಮಾಡಿದೆನು.
15023010a ಪ್ರೇಕ್ಷಂತ್ಯಾ ಮೇ ತದಾ ಹೀಮಾಂ ವೇಪಂತೀಂ ಕದಲೀಮಿವ।
15023010c ಸ್ತ್ರೀಧರ್ಮಿಣೀಮನಿಂದ್ಯಾಂಗೀಂ ತಥಾ ದ್ಯೂತಪರಾಜಿತಾಮ್।।
15023011a ದುಃಶಾಸನೋ ಯದಾ ಮೌಢ್ಯಾದ್ದಾಸೀವತ್ಪರ್ಯಕರ್ಷತ।
15023011c ತದೈವ ವಿದಿತಂ ಮಹ್ಯಂ ಪರಾಭೂತಮಿದಂ ಕುಲಮ್।।
ನೀವೆಲ್ಲರೂ ನೋಡುತ್ತಿದ್ದಂತೆಯೇ ಬಾಳೆಯ ಮರದಂತೆ ತರತರನೆ ನಡುಗುತ್ತಿದ್ದ ರಜಸ್ವಲೆಯಾಗಿದ್ದ ಶುಭಲಕ್ಷಣಯುಕ್ತಳಾಗಿದ್ದ, ದ್ಯೂತದಲ್ಲಿ ಪಣವಾಗಿಡಲ್ಪಟ್ಟು ಪರಾಜಿತಳಾಗಿದ್ದ ದ್ರೌಪದಿಯನ್ನು ಯಾವಾಗ ದುಃಶಾಸನನು ಮೌಢ್ಯದಿಂದ ದಾಸಿಯಂತೆ ತುಂಬಿದ ಸಭೆಗೆ ಎಳೆದು ತಂದನೋ – ಆಗಲೇ ನನಗೆ ಈ ವಂಶವು ವಿನಾಶವಾಗುವುದೆಂದು ತಿಳಿದಿತ್ತು.
15023012a ವಿಷಣ್ಣಾಃ ಕುರವಶ್ಚೈವ ತದಾ ಮೇ ಶ್ವಶುರಾದಯಃ।
15023012c ಯದೈಷಾ ನಾಥಮಿಚ್ಚಂತೀ ವ್ಯಲಪತ್ಕುರರೀ ಯಥಾ।।
ನನ್ನ ಮಾವನೇ ಮೊದಲಾದ ಕುರುಗಳು ಅಲ್ಲಿ ಉಪಸ್ಥಿತರಿದ್ದರು. ಆದರೆ ಅವರ್ಯಾರೂ ಅವಳ ರಕ್ಷಣೆಗೆ ಬರದಿದ್ದಾಗ ಅವಳು ಹೆಣ್ಣು ಕಡಲಹದ್ದಿನಂತೆ ಗೋಳಾಡುತ್ತಿದ್ದಳು.
15023013a ಕೇಶಪಕ್ಷೇ ಪರಾಮೃಷ್ಟಾ ಪಾಪೇನ ಹತಬುದ್ಧಿನಾ।
15023013c ಯದಾ ದುಃಶಾಸನೇನೈಷಾ ತದಾ ಮುಹ್ಯಾಮ್ಯಹಂ ನೃಪ।।
ನೃಪ! ಬುದ್ಧಿಗೆಟ್ಟಿದ್ದ ಪಾಪಿಷ್ಠ ದುಃಶಾಸನನು ಯಾವಾಗ ಅವಳ ತಲೆಗೂದಲನ್ನು ಹಿಡಿದು ಎಳೆದು ತಂದನೋ ಆಗ ನಾನು ದುಃಖದಿಂದ ಮೂರ್ಛಿತಳಾಗಿದ್ದೆ!
15023014a ಯುಷ್ಮತ್ತೇಜೋವಿವೃದ್ಧ್ಯರ್ಥಂ ಮಯಾ ಹ್ಯುದ್ಧರ್ಷಣಂ ಕೃತಮ್।
15023014c ತದಾನೀಂ ವಿದುರಾವಾಕ್ಯೈರಿತಿ ತದ್ವಿತ್ತ ಪುತ್ರಕಾಃ।।
ನಿಮ್ಮ ತೇಜಸ್ಸನ್ನು ವೃದ್ಧಿಗೊಳಿಸಲು ನಾನು ವಿದುಲೆಯ ವಾಕ್ಯಗಳ ಮೂಲಕ ನಿಮ್ಮನ್ನು ಯುದ್ಧಕ್ಕೆ ಪ್ರೋತ್ಸಾಹಿಸಿದೆನು. ಮಕ್ಕಳೇ! ಇದನ್ನು ಅರ್ಥಮಾಡಿಕೊಳ್ಳಿ!
15023015a ಕಥಂ ನ ರಾಜವಂಶೋಽಯಂ ನಶ್ಯೇತ್ಪ್ರಾಪ್ಯ ಸುತಾನ್ಮಮ।
15023015c ಪಾಂಡೋರಿತಿ ಮಯಾ ಪುತ್ರ ತಸ್ಮಾದುದ್ಧರ್ಷಣಂ ಕೃತಮ್।।
ನಿಮ್ಮಂಥಹ ಮಕ್ಕಳನ್ನು ಪಡೆದೂ ಪಾಂಡುವಿನ ಈ ರಾಜವಂಶವು ನಾಶವಾಗಬಾರದೆಂದು ನಾನು ನಿಮ್ಮನ್ನು ಯುದ್ಧಕ್ಕೆ ಪ್ರೋತ್ಸಾಹಿಸಿದೆನು.
15023016a ನ ತಸ್ಯ ಪುತ್ರಃ ಪೌತ್ರೌ ವಾ ಕುತ ಏವ ಸ ಪಾರ್ಥಿವ।
15023016c ಲಭತೇ ಸುಕೃತಾಽಲ್ಲೋಕಾನ್ಯಸ್ಮಾದ್ವಂಶಃ ಪ್ರಣಶ್ಯತಿ।।
ಪಾರ್ಥಿವ! ಯಾರಿಂದ ವಂಶವು ನಾಶವಾಗುವುದೋ ಅವನ ಪುತ್ರ-ಪೌತ್ರರು ಯಾರೂ ಪುಣ್ಯಲೋಕಗಳನ್ನು ಹೊಂದುವುದಿಲ್ಲ.
15023017a ಭುಕ್ತಂ ರಾಜ್ಯಫಲಂ ಪುತ್ರಾ ಭರ್ತುರ್ಮೇ ವಿಪುಲಂ ಪುರಾ।
15023017c ಮಹಾದಾನಾನಿ ದತ್ತಾನಿ ಪೀತಃ ಸೋಮೋ ಯಥಾವಿಧಿ।।
ಮಕ್ಕಳೇ! ಹಿಂದೆ ನಾನು ನನ್ನ ಪತಿಯ ರಾಜ್ಯಫಲವನ್ನು ವಿಪುಲವಾಗಿ ಭೋಗಿಸಿದ್ದೇನೆ. ಯಥಾವಿಧಿಯಾಗಿ ಮಹಾದಾನಗಳನ್ನು ನೀಡಿದ್ದೇನೆ ಮತ್ತು ಸೋಮವನ್ನೂ ಕುಡಿದಿದ್ದೇನೆ.
15023018a ಸಾಹಂ ನಾತ್ಮಫಲಾರ್ಥಂ ವೈ ವಾಸುದೇವಮಚೂಚುದಮ್।
15023018c ವಿದುರಾಯಾಃ ಪ್ರಲಾಪೈಸ್ತೈಃ ಪ್ಲಾವನಾರ್ಥಂ ತು ತತ್ಕೃತಮ್।।
ನಾನು ನನ್ನ ಸ್ವಾರ್ಥಫಲಕ್ಕಾಗಿ ವಾಸುದೇವನ ಮೂಲಕ ವಿದುಲೆಯ ಆ ಪ್ರಲಾಪದ ಮಾತುಗಳನ್ನು ಹೇಳಿ ಕಳುಹಿಸಿರಲಿಲ್ಲ. ನಿಮ್ಮನ್ನು ಆ ಕಷ್ಟದಿಂದ ಪಾರುಮಾಡುವುದಕ್ಕಾಗಿಯೇ ಹಾಗೆ ಮಾಡಿದೆನು.
15023019a ನಾಹಂ ರಾಜ್ಯಫಲಂ ಪುತ್ರ ಕಾಮಯೇ ಪುತ್ರನಿರ್ಜಿತಮ್।
15023019c ಪತಿಲೋಕಾನಹಂ ಪುಣ್ಯಾನ್ಕಾಮಯೇ ತಪಸಾ ವಿಭೋ।।
ಮಗನೇ! ನಾನು ಮಕ್ಕಳು ಗೆದ್ದ ರಾಜ್ಯಫಲವನ್ನು ಬಯಸುವುದಿಲ್ಲ. ವಿಭೋ! ತಪಸ್ಸಿನ ಮೂಲಕ ನಾನು ನನ್ನ ಪತಿಯು ಸೇರಿದ ಪುಣ್ಯಲೋಕಗಳನ್ನು ಬಯಸುತ್ತೇನೆ.
15023020a ಶ್ವಶ್ರೂಶ್ವಶುರಯೋಃ ಕೃತ್ವಾ ಶುಶ್ರೂಷಾಂ ವನವಾಸಿನೋಃ।
15023020c ತಪಸಾ ಶೋಷಯಿಷ್ಯಾಮಿ ಯುಧಿಷ್ಠಿರ ಕಲೇವರಮ್।।
ಯುಧಿಷ್ಠಿರ! ವನವಾಸೀ ಅತ್ತೆ-ಮಾವಂದಿರ ಶುಶ್ರೂಷೆಯನ್ನು ಮಾಡುತ್ತಾ ತಪಸ್ಸಿನಿಂದ ನನ್ನ ಈ ಶರೀರವನ್ನು ಶೋಷಿಸುತ್ತೇನೆ.
15023021a ನಿವರ್ತಸ್ವ ಕುರುಶ್ರೇಷ್ಠ ಭೀಮಸೇನಾದಿಭಿಃ ಸಹ।
15023021c ಧರ್ಮೇ ತೇ ಧೀಯತಾಂ ಬುದ್ಧಿರ್ಮನಸ್ತೇ ಮಹದಸ್ತು ಚ।।
ಕುರುಶ್ರೇಷ್ಠ! ಭೀಮಸೇನಾದಿಗಳೊಂದಿಗೆ ಹಿಂದಿರುಗು! ನಿನ್ನ ಬುದ್ಧಿಯು ಯಾವಾಗಲೂ ಧರ್ಮದಲ್ಲಿಯೇ ಸ್ಥಿರವಾಗಿರಲಿ ಮತ್ತು ನಿನ್ನ ಮನಸ್ಸೂ ವಿಶಾಲವಾಗಿರಲಿ!””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಕುಂತೀವಾಕ್ಯೇ ತ್ರಯಾವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಕುಂತೀವಾಕ್ಯ ಎನ್ನುವ ಇಪ್ಪತ್ಮೂರನೇ ಅಧ್ಯಾಯವು.