043: ಅನುಗೀತಾಯಾಂ ಗುರುಶಿಷ್ಯಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 43

ಸಾರ

ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಮುಂದುವರಿಸಿ ಹೇಳಿದುದು (1-40).

14043001 ಬ್ರಹ್ಮೋವಾಚ
14043001a ಮನುಷ್ಯಾಣಾಂ ತು ರಾಜನ್ಯಃ ಕ್ಷತ್ರಿಯೋ ಮಧ್ಯಮೋ ಗುಣಃ।
14043001c ಕುಂಜರೋ ವಾಹನಾನಾಂ ಚ ಸಿಂಹಶ್ಚಾರಣ್ಯವಾಸಿನಾಮ್।।
14043002a ಅವಿಃ ಪಶೂನಾಂ ಸರ್ವೇಷಾಮಾಖುಶ್ಚ ಬಿಲವಾಸಿನಾಮ್।
14043002c ಗವಾಂ ಗೋವೃಷಭಶ್ಚೈವ ಸ್ತ್ರೀಣಾಂ ಪುರುಷ ಏವ ಚ।।

ಬ್ರಹ್ಮನು ಹೇಳಿದನು: “ಮನುಷ್ಯರಲ್ಲಿ ಕ್ಷತ್ರಿಯ ರಾಜನು ಗುಣಗಳಲ್ಲಿ ಶ್ರೇಷ್ಠ. ಹಾಗೆಯೇ ವಾಹನಗಳಲ್ಲಿ ಆನೆ, ಅರಣ್ಯವಾಸಿಗಳಲ್ಲಿ ಸಿಂಹ, ಸರ್ವ ಪಶುಗಳಲ್ಲಿ ಟಗರು, ಬಿಲವಾಸಿಗಳಲ್ಲಿ ಸರ್ಪ, ಗೋವುಗಳಲ್ಲಿ ಎತ್ತು ಮತ್ತು ಸ್ತ್ರೀಪುರುಷರಲ್ಲಿ ಪುರುಷನು ಶ್ರೇಷ್ಠನು.

14043003a ನ್ಯಗ್ರೋಧೋ ಜಂಬುವೃಕ್ಷಶ್ಚ ಪಿಪ್ಪಲಃ ಶಾಲ್ಮಲಿಸ್ತಥಾ।
14043003c ಶಿಂಶಪಾ ಮೇಷಶೃಂಗಶ್ಚ ತಥಾ ಕೀಚಕವೇಣವಃ।
14043003e ಏತೇ ದ್ರುಮಾಣಾಂ ರಾಜಾನೋ ಲೋಕೇಽಸ್ಮಿನ್ನಾತ್ರ ಸಂಶಯಃ।।

ಆಲ, ನೇರಳೆ, ಅರಳಿ, ಬೂರುಗ, ಅಗುರು, ಕುರುಟಿಗ, ಒಳಗೆ ಟೊಳ್ಳಾಗಿರುವ ಬಿದಿರು - ಈ ವೃಕ್ಷಗಳು ಲೋಕದಲ್ಲಿರುವ ವೃಕ್ಷಗಳಲೆಲ್ಲಾ ಶ್ರೇಷ್ಠವಾದವುಗಳು ಎನ್ನುವುದರಲ್ಲಿ ಸಂಶಯವೇ ಇಲ್ಲ.

14043004a ಹಿಮವಾನ್ಪಾರಿಯಾತ್ರಶ್ಚ ಸಹ್ಯೋ ವಿಂಧ್ಯಸ್ತ್ರಿಕೂಟವಾನ್।
14043004c ಶ್ವೇತೋ ನೀಲಶ್ಚ ಭಾಸಶ್ಚ ಕಾಷ್ಠವಾಂಶ್ಚೈವ ಪರ್ವತಃ।।
14043005a ಶುಭಸ್ಕಂಧೋ ಮಹೇಂದ್ರಶ್ಚ ಮಾಲ್ಯವಾನ್ಪರ್ವತಸ್ತಥಾ।
14043005c ಏತೇ ಪರ್ವತರಾಜಾನೋ ಗಣಾನಾಂ ಮರುತಸ್ತಥಾ।।

ಹಿಮವಂತ, ಪಾರಿಯಾತ್ರ, ಸಹ್ಯ, ತ್ರಿಕೂಟ, ವಿಂಧ್ಯ, ಶ್ವೇತ, ನೀಲ, ಭಾಸ, ಕಾಷ್ಠವಾನ್, ಶುಭಸ್ಕಂಧ, ಮಹೇಂದ್ರ ಮತ್ತು ಮಾಲ್ಯವಾನ್ – ಈ ಪರ್ವತಗಳು ಎಲ್ಲ ಪರ್ವತಗಳಿಂತ ಶ್ರೇಷ್ಠ. ಗಣಗಳಲ್ಲಿ ಮರುದ್ಗಣವು ಶ್ರೇಷ್ಠವಾದುದು.

14043006a ಸೂರ್ಯೋ ಗ್ರಹಾಣಾಮಧಿಪೋ ನಕ್ಷತ್ರಾಣಾಂ ಚ ಚಂದ್ರಮಾಃ।
14043006c ಯಮಃ ಪಿತೄಣಾಮಧಿಪಃ ಸರಿತಾಮಥ ಸಾಗರಃ।।

ಸೂರ್ಯನು ಗ್ರಹಗಳ ಅಧಿಪ ಮತ್ತು ಚಂದ್ರಮನು ನಕ್ಷತ್ರಗಳ ಒಡೆಯ. ಯಮನು ಪಿತೃಗಳ ಅಧಿಪ ಮತ್ತು ಸಾಗರನು ಸರಿತ್ತುಗಳ ಒಡೆಯ.

14043007a ಅಂಭಸಾಂ ವರುಣೋ ರಾಜಾ ಸತ್ತ್ವಾನಾಂ ಮಿತ್ರ ಉಚ್ಯತೇ। 1
14043007c ಅರ್ಕೋಽಧಿಪತಿರುಷ್ಣಾನಾಂ ಜ್ಯೋತಿಷಾಮಿಂದುರುಚ್ಯತೇ।।

ವರುಣನು ನೀರುಗಳ ರಾಜ ಮತ್ತು ಮಿತ್ರನು ಸತ್ತ್ವಗಳ ಮಿತ್ರ ಎಂದು ಹೇಳುತ್ತಾರೆ. ಉಷ್ಣಪದಾರ್ಥಗಳಿಗೆ ಸೂರ್ಯನು ಅಧಿಪತಿ. ಜ್ಯೋತಿಗಳಿಗೆ ಇಂದುವು ರಾಜ.

14043008a ಅಗ್ನಿರ್ಭೂತಪತಿರ್ನಿತ್ಯಂ ಬ್ರಾಹ್ಮಣಾನಾಂ ಬೃಹಸ್ಪತಿಃ।
14043008c ಓಷಧೀನಾಂ ಪತಿಃ ಸೋಮೋ ವಿಷ್ಣುರ್ಬಲವತಾಂ ವರಃ।।

ಅಗ್ನಿಯು ಎಲ್ಲ ಭೂತಗಳ ಒಡೆಯ ಮತ್ತು ಬೃಹಸ್ಪತಿಯು ಬ್ರಾಹ್ಮಣರ ಅಧಿಪತಿ. ಔಷಧಿಗಳ ಪತಿ ಸೋಮ ಮತ್ತು ವಿಷ್ಣುವು ಬಲವಂತರಲ್ಲಿ ಶ್ರೇಷ್ಠನು.

14043009a ತ್ವಷ್ಟಾಧಿರಾಜೋ ರೂಪಾಣಾಂ ಪಶೂನಾಮೀಶ್ವರಃ ಶಿವಃ।
14043009c ದಕ್ಷಿಣಾನಾಂ ತಥಾ ಯಜ್ಞೋ ವೇದಾನಾಮೃಷಯಸ್ತಥಾ।।

ರೂಪಗಳಿಗೆ ತ್ವಷ್ಟನೇ ಅಧಿರಾಜ. ಪಶುಗಳ ಅಧಿರಾಜನು ಈಶ್ವರ ಶಿವ. ಹಾಗೆಯೇ ದಕ್ಷಿಣೆಗಳಿಗೆ ಯಜ್ಞ ಮತ್ತು ವೇದಗಳಿಗೆ ಋಷಿಗಳು ಅಧಿಪತಿಗಳು.

14043010a ದಿಶಾಮುದೀಚೀ ವಿಪ್ರಾಣಾಂ ಸೋಮೋ ರಾಜಾ ಪ್ರತಾಪವಾನ್।
14043010c ಕುಬೇರಃ ಸರ್ವಯಕ್ಷಾಣಾಂ ದೇವತಾನಾಂ ಪುರಂದರಃ।
14043010e ಏಷ ಭೂತಾದಿಕಃ ಸರ್ಗಃ ಪ್ರಜಾನಾಂ ಚ ಪ್ರಜಾಪತಿಃ।।

ದಿಕ್ಕುಗಳಲ್ಲಿ ಉತ್ತರವು ಶ್ರೇಷ್ಠ, ವಿಪ್ರರಿಗೆ ಪ್ರತಾಪವಾನ್ ಸೋಮನು ರಾಜ. ಸರ್ವ ಯಕ್ಷರಲ್ಲಿ ಕುಬೇರನು ಶ್ರೇಷ್ಠ ಮತ್ತು ದೇವತೆಗಳಲ್ಲಿ ಪುರಂದರನು ಶ್ರೇಷ್ಠ. ಪ್ರಜೆಗಳಿಗೆ ಪ್ರಜಾಪತಿಯು ಅಧಿಪನು. ಇದು ಭೂತಗಳ ಅಧಿಪತಿ ಸರ್ಗವಾಯಿತು.

14043011a ಸರ್ವೇಷಾಮೇವ ಭೂತಾನಾಮಹಂ ಬ್ರಹ್ಮಮಯೋ ಮಹಾನ್।
14043011c ಭೂತಂ ಪರತರಂ ಮತ್ತೋ ವಿಷ್ಣೋರ್ವಾಪಿ ನ ವಿದ್ಯತೇ।।

ನಾನೇ ಎಲ್ಲ ಪ್ರಾಣಿಗಳಿಗೂ ಅಧೀಶ್ವರ ಮತ್ತು ಮಹಾನ್ ಬ್ರಹ್ಮಮಯನು. ನಾನು ಮತ್ತು ವಿಷ್ಣುವಿಗಿಂತಲೂ ಶ್ರೇಷ್ಠರಾದವರು ಯಾರೂ ಇಲ್ಲ.

14043012a ರಾಜಾಧಿರಾಜಃ ಸರ್ವಾಸಾಂ ವಿಷ್ಣುರ್ಬ್ರಹ್ಮಮಯೋ ಮಹಾನ್।
14043012c ಈಶ್ವರಂ ತಂ ವಿಜಾನೀಮಃ ಸ ವಿಭುಃ ಸ ಪ್ರಜಾಪತಿಃ।।

ಮಹಾನ್ ಬ್ರಹ್ಮಮಯನಾದ ವಿಷ್ಣುವೇ ಸರ್ವರ ರಾಜಾಧಿರಾಜ. ಅವನೇ ಈಶ್ವರ, ಅವನೇ ವಿಭು ಮತ್ತು ಅವನೇ ಪ್ರಜಾಪತಿಯೆಂದು ತಿಳಿದುಕೊಳ್ಳಬೇಕು.

14043013a ನರಕಿನ್ನರಯಕ್ಷಾಣಾಂ ಗಂಧರ್ವೋರಗರಕ್ಷಸಾಮ್।
14043013c ದೇವದಾನವನಾಗಾನಾಂ ಸರ್ವೇಷಾಮೀಶ್ವರೋ ಹಿ ಸಃ।।

ನರ, ಕಿನ್ನರ, ಯಕ್ಷ, ಗಂಧರ್ವ, ಉರಗ, ರಾಕ್ಷಸ, ದೇವ, ದಾನವ, ನಾಗ ಎಲ್ಲರ ಈಶ್ವರನೂ ಅವನೇ.

14043014a ಭಗದೇವಾನುಯಾತಾನಾಂ ಸರ್ವಾಸಾಂ ವಾಮಲೋಚನಾ।
14043014c ಮಾಹೇಶ್ವರೀ ಮಹಾದೇವೀ ಪ್ರೋಚ್ಯತೇ ಪಾರ್ವತೀತಿ ಯಾ।।
14043015a ಉಮಾಂ ದೇವೀಂ ವಿಜಾನೀತ ನಾರೀಣಾಮುತ್ತಮಾಂ ಶುಭಾಮ್।
14043015c ರತೀನಾಂ ವಸುಮತ್ಯಸ್ತು ಸ್ತ್ರೀಣಾಮಪ್ಸರಸಸ್ತಥಾ।।

ಭಗದೇವ ಸೂರ್ಯನು ಅನುಸರಿಸುವ ಸರ್ವಸ್ತ್ರೀಯರಲ್ಲಿಯೂ ಸುಂದರ ಕಣ್ಣುಗಳನ್ನು ಹೊಂದಿರುವ ಮಾಹೇಶ್ವರಿ ಮಹಾದೇವೀ ಪಾರ್ವತಿಯೇ ಶ್ರೇಷ್ಠಳಾದವಳು. ನಾರಿಗಳಲ್ಲಿ ಉಮಾದೇವಿಯು ಉತ್ತಮಳೂ ಶುಭಳೂ ಎಂದು ತಿಳಿಯಿರಿ. ರಮಿಸಲು ಯೋಗ್ಯ ಸ್ತ್ರೀಯರಲ್ಲಿ ಸರ್ವಾಭರಣಭೂಷಿತ ಅಪ್ಸರೆಯರೇ ಶ್ರೇಷ್ಠರು.

14043016a ಧರ್ಮಕಾಮಾಶ್ಚ ರಾಜಾನೋ ಬ್ರಾಹ್ಮಣಾ ಧರ್ಮಲಕ್ಷಣಾಃ। 2
14043016c ತಸ್ಮಾದ್ರಾಜಾ ದ್ವಿಜಾತೀನಾಂ ಪ್ರಯತೇತೇಹ ರಕ್ಷಣೇ।।

ರಾಜರು ಧರ್ಮಕಾಮಿಗಳು ಮತ್ತು ಬ್ರಾಹ್ಮಣರು ಧರ್ಮಲಕ್ಷಣರು. ಆದುದರಿಂದ ರಾಜನಾದವನು ದ್ವಿಜಾತಿಯವರ ರಕ್ಷಣೆಗಾಗಿ ಪ್ರಯತ್ನಿಸುತ್ತಿರಬೇಕು.

14043017a ರಾಜ್ಞಾಂ ಹಿ ವಿಷಯೇ ಯೇಷಾಮವಸೀದಂತಿ ಸಾಧವಃ।
14043017c ಹೀನಾಸ್ತೇ ಸ್ವಗುಣೈಃ ಸರ್ವೈಃ ಪ್ರೇತ್ಯಾವಾನ್ಮಾರ್ಗಗಾಮಿನಃ।।

ಯಾವ ರಾಜನ ರಾಜ್ಯದಲ್ಲಿ ಸಾಧುಗಳು ವಿನಾಶಹೊಂದುವರೋ ಅವನು ಸರ್ವ ಸ್ವಗುಣಗಳಿಂದ ಹೀನನಾಗಿ ಮರಣಾನಂತರ ದುರ್ಗತಿಯನ್ನು ಹೊಂದುತ್ತಾನೆ.

14043018a ರಾಜ್ಞಾಂ ತು ವಿಷಯೇ ಯೇಷಾಂ ಸಾಧವಃ ಪರಿರಕ್ಷಿತಾಃ।
14043018c ತೇಽಸ್ಮಿಽಲ್ಲೋಕೇ ಪ್ರಮೋದಂತೇ ಪ್ರೇತ್ಯ ಚಾನಂತ್ಯಮೇವ ಚ।
14043018e ಪ್ರಾಪ್ನುವಂತಿ ಮಹಾತ್ಮಾನ ಇತಿ ವಿತ್ತ ದ್ವಿಜರ್ಷಭಾಃ।।

ದ್ವಿಜರ್ಷಭರೇ! ಯಾವ ರಾಜರ ರಾಜ್ಯದಲ್ಲಿ ಸಾಧುಗಳು ಪರಿರಕ್ಷಿತರಾಗಿರುವರೋ ಅವರು ಈ ಲೋಕದಲ್ಲಿ ಸಂತೋಷದಿಂದಿರುತ್ತಾರೆ ಮತ್ತು ಮರಣಾನಂತರವೂ ಅನಂತಕಾಲದವರೆಗೆ ಸದ್ಗತಿಯನ್ನು ಹೊಂದುತ್ತಾರೆ.

14043019a ಅತ ಊರ್ಧ್ವಂ ಪ್ರವಕ್ಷ್ಯಾಮಿ ನಿಯತಂ ಧರ್ಮಲಕ್ಷಣಮ್।
14043019c ಅಹಿಂಸಾಲಕ್ಷಣೋ ಧರ್ಮೋ ಹಿಂಸಾ ಚಾಧರ್ಮಲಕ್ಷಣಾ।।

ಇನ್ನು ಮುಂದೆ ನಾನು ಧರ್ಮದ ನಿಯತ ಲಕ್ಷಣಗಳನ್ನು ಹೇಳುತ್ತೇನೆ. ಅಹಿಂಸೆಯು ಧರ್ಮದ ಲಕ್ಷಣ. ಹಿಂಸೆಯು ಅಧರ್ಮದ ಲಕ್ಷಣ.

14043020a ಪ್ರಕಾಶಲಕ್ಷಣಾ ದೇವಾ ಮನುಷ್ಯಾಃ ಕರ್ಮಲಕ್ಷಣಾಃ।
14043020c ಶಬ್ದಲಕ್ಷಣಮಾಕಾಶಂ ವಾಯುಸ್ತು ಸ್ಪರ್ಶಲಕ್ಷಣಃ।।

ದೇವತೆಗಳ ಲಕ್ಷಣವು ಪ್ರಕಾಶ. ಮನುಷ್ಯರ ಲಕ್ಷಣವು ಕರ್ಮ. ಆಕಾಶದ ಲಕ್ಷಣವು ಶಬ್ಧ. ವಾಯುವಿನ ಲಕ್ಷಣವು ಸ್ಪರ್ಶ.

14043021a ಜ್ಯೋತಿಷಾಂ ಲಕ್ಷಣಂ ರೂಪಮಾಪಶ್ಚ ರಸಲಕ್ಷಣಾಃ।
14043021c ಧರಣೀ ಸರ್ವಭೂತಾನಾಂ ಪೃಥಿವೀ ಗಂಧಲಕ್ಷಣಾ।।

ಬೆಳಗುತ್ತಿರುವವುಗಳ ಲಕ್ಷಣ ರೂಪ ಮತ್ತು ರಸವು ನೀರಿನ ಲಕ್ಷಣ. ಸರ್ವಭೂತಗಳನ್ನು ಹೊತ್ತಿರುವ ಪೃಥ್ವಿಯ ಲಕ್ಷಣವು ಗಂಧ.

14043022a ಸ್ವರವ್ಯಂಜನಸಂಸ್ಕಾರಾ ಭಾರತೀ ಸತ್ಯಲಕ್ಷಣಾ।
14043022c ಮನಸೋ ಲಕ್ಷಣಂ ಚಿಂತಾ ತಥೋಕ್ತಾ ಬುದ್ಧಿರನ್ವಯಾತ್।। 3

ಸ್ವರವ್ಯಂಜನಗಳಿಂದ ಕೂಡಿದ ಸಂಸ್ಕಾರಯುಕ್ತ ಮಾತೇ ಸತ್ಯದ ಲಕ್ಷಣ. ಮನಸ್ಸಿನ ಲಕ್ಷಣ ಚಿಂತೆ ಮತ್ತು ನಿಶ್ಚಯವು ಬುದ್ಧಿಯ ಲಕ್ಷಣ.

14043023a ಮನಸಾ ಚಿಂತಯಾನೋಽರ್ಥಾನ್ಬುದ್ಧ್ಯಾ ಚೈವ ವ್ಯವಸ್ಯತಿ।
14043023c ಬುದ್ಧಿರ್ಹಿ ವ್ಯವಸಾಯೇನ ಲಕ್ಷ್ಯತೇ ನಾತ್ರ ಸಂಶಯಃ।।

ಮನಸ್ಸಿನಿಂದ ಆಲೋಚಿಸುವ ವಿಷಯಗಳನ್ನು ಬುದ್ಧಿಯು ಇತ್ಯರ್ಥಗೊಳಿಸುತ್ತದೆ. ಬುದ್ಧಿಯು ಯಾವಾಗಲೂ ನಿಶ್ಚಯಾತ್ಮಕವಾದುದು ಮತ್ತು ಕಾರ್ಯನಿರತವಾದುದು ಎನ್ನುವುದರಲ್ಲಿ ಸಂಶಯವಿಲ್ಲ.

14043024a ಲಕ್ಷಣಂ ಮಹತೋ ಧ್ಯಾನಮವ್ಯಕ್ತಂ ಸಾಧುಲಕ್ಷಣಮ್। 4
14043024c ಪ್ರವೃತ್ತಿಲಕ್ಷಣೋ ಯೋಗೋ ಜ್ಞಾನಂ ಸಂನ್ಯಾಸಲಕ್ಷಣಮ್।

ಧ್ಯಾನ ಮತ್ತು ಅವ್ಯಕ್ತತೆ ಇವು ಸಾಧುಗಳ ಮಹಾ ಲಕ್ಷಣಗಳು. ಪ್ರವೃತ್ತಿಯು ಯೋಗದ ಮತ್ತು ಜ್ಞಾನವು ಸಂನ್ಯಾಸದ ಲಕ್ಷಣಗಳು.

14043025a ತಸ್ಮಾಜ್ಞಾನಂ ಪುರಸ್ಕೃತ್ಯ ಸಂನ್ಯಸೇದಿಹ ಬುದ್ಧಿಮಾನ್।
14043025c ಸಂನ್ಯಾಸೀ ಜ್ಞಾನಸಂಯುಕ್ತಃ ಪ್ರಾಪ್ನೋತಿ ಪರಮಾಂ ಗತಿಮ್।
14043025e ಅತೀತೋಽದ್ವಂದ್ವಮಭ್ಯೇತಿ ತಮೋಮೃತ್ಯುಜರಾತಿಗಮ್।।

ಅದುದರಿಂದ ಬುದ್ಧಿವಂತನು ಜ್ಞಾನವನ್ನು ಪುರಸ್ಕರಿಸಿ ಸಂನ್ಯಾಸಗ್ರಹಣ ಮಾಡಬೇಕು. ಜ್ಞಾನಸಂಯುಕ್ತ ಸಂನ್ಯಾಸಿಯು ದ್ವಂದ್ವಗಳಿಂದ ಅತೀತನಾಗಿ ಅಜ್ಞಾನ-ಮುಪ್ಪು-ಸಾವುಗಳನ್ನು ದಾಟಿ ಪರಮಸದ್ಗತಿಯನ್ನು ಹೊಂದುತ್ತಾನೆ.

14043026a ಧರ್ಮಲಕ್ಷಣಸಂಯುಕ್ತಮುಕ್ತಂ ವೋ ವಿಧಿವನ್ಮಯಾ।
14043026c ಗುಣಾನಾಂ ಗ್ರಹಣಂ ಸಮ್ಯಗ್ವಕ್ಷ್ಯಾಮ್ಯಹಮತಃ ಪರಮ್।।

ಇದೂವರೆಗೆ ನಾನು ಲಕ್ಷಣಗಳಿಂದ ಕೂಡಿದ ಧರ್ಮದ ಕುರಿತು ವಿಧಿವತ್ತಾಗಿ ಹೇಳಿದೆನು. ಇನ್ನು ಮುಂದೆ ಯಾವ ಯಾವ ಗುಣಗಳನ್ನು ಯಾವ ಯಾವ ಇಂದ್ರಿಯಗಳು ಗ್ರಹಿಸುತ್ತವೆ ಎನ್ನುವುದನ್ನು ಹೇಳುತ್ತೇನೆ.

14043027a ಪಾರ್ಥಿವೋ ಯಸ್ತು ಗಂಧೋ ವೈ ಘ್ರಾಣೇನೇಹ ಸ ಗೃಹ್ಯತೇ।
14043027c ಘ್ರಾಣಸ್ಥಶ್ಚ ತಥಾ ವಾಯುರ್ಗಂಧಜ್ಞಾನೇ ವಿಧೀಯತೇ।।

ಪೃಥ್ವಿಯಲ್ಲಿರುವ ಗಂಧವೆಂಬ ಗುಣವನ್ನು ಮೂಗು ಗ್ರಹಿಸುತ್ತದೆ. ಮೂಗಿನಲ್ಲಿರುವ ವಾಯುವು ಗಂಧವನ್ನು ತಿಳಿಯಲು ಸಹಾಯಮಾಡುತ್ತಾನೆ.

14043028a ಅಪಾಂ ಧಾತುರಸೋ ನಿತ್ಯಂ ಜಿಹ್ವಯಾ ಸ ತು ಗೃಹ್ಯತೇ।
14043028c ಜಿಹ್ವಾಸ್ಥಶ್ಚ ತಥಾ ಸೋಮೋ ರಸಜ್ಞಾನೇ ವಿಧೀಯತೇ।।

ಆಪದ ಸ್ವಾಭಾವಿಕ ಗುಣ ರಸವನ್ನು ನಾಲಿಗೆಯು ಗ್ರಹಿಸುತ್ತದೆ. ನಾಲಿಗೆಯಲ್ಲಿರುವ ಸೋಮನು ರಸಜ್ಞಾನಕ್ಕೆ ಸಹಾಯಮಾಡುತ್ತಾನೆ.

14043029a ಜ್ಯೋತಿಷಶ್ಚ ಗುಣೋ ರೂಪಂ ಚಕ್ಷುಷಾ ತಚ್ಚ ಗೃಹ್ಯತೇ।
14043029c ಚಕ್ಷುಃಸ್ಥಶ್ಚ ತಥಾದಿತ್ಯೋ ರೂಪಜ್ಞಾನೇ ವಿಧೀಯತೇ।।

ಜ್ಯೋತಿಯ ಗುಣವಾದ ರೂಪವನ್ನು ಕಣ್ಣುಗಳು ಗ್ರಹಿಸುತ್ತವೆ. ಕಣ್ಣುಗಳಲ್ಲಿರುವ ಆದಿತ್ಯನು ರೂಪಜ್ಞಾನದಲ್ಲಿ ಸಹಾಯಮಾಡುತ್ತಾನೆ.

14043030a ವಾಯವ್ಯಸ್ತು ತಥಾ ಸ್ಪರ್ಶಸ್ತ್ವಚಾ ಪ್ರಜ್ಞಾಯತೇ ಚ ಸಃ।
14043030c ತ್ವಕ್ಸ್ಥಶ್ಚೈವ ತಥಾ ವಾಯುಃ ಸ್ಪರ್ಶಜ್ಞಾನೇ ವಿಧೀಯತೇ।।

ಹಾಗೆಯೇ ವಾಯುವಿನ ಗುಣ ಸ್ಪರ್ಶವನ್ನು ಚರ್ಮವು ತಿಳಿದುಕೊಳ್ಳುತ್ತದೆ. ಚರ್ಮದಲ್ಲಿರುವ ವಾಯುವು ಸ್ಪರ್ಶಜ್ಞಾನಕ್ಕೆ ಸಹಾಯಮಾಡುತ್ತಾನೆ.

14043031a ಆಕಾಶಸ್ಯ ಗುಣೋ ಘೋಷಃ ಶ್ರೋತ್ರೇಣ ಸ ತು ಗೃಹ್ಯತೇ।
14043031c ಶ್ರೋತ್ರಸ್ಥಾಶ್ಚ ದಿಶಃ ಸರ್ವಾಃ ಶಬ್ದಜ್ಞಾನೇ ಪ್ರಕೀರ್ತಿತಾಃ।।

ಆಕಾಶದ ಗುಣ ಘೋಷವನ್ನು ಕಿವಿಗಳು ಗ್ರಹಿಸುತ್ತವೆ. ಕಿವಿಗಳಲ್ಲಿರುವ ಎಲ್ಲ ದಿಗ್ದೇವತೆಗಳೂ ಶಬ್ಧಜ್ಞಾನಕ್ಕೆ ಸಹಾಯಮಾಡುತ್ತವೆ.

14043032a ಮನಸಸ್ತು ಗುಣಶ್ಚಿಂತಾ ಪ್ರಜ್ಞಯಾ ಸ ತು ಗೃಹ್ಯತೇ।
14043032c ಹೃದಿಸ್ಥಚೇತನಾಧಾತುರ್ಮನೋಜ್ಞಾನೇ ವಿಧೀಯತೇ।।

ಮನಸ್ಸಿನ ಗುಣವಾದ ಚಿಂತೆಯನ್ನು ಪ್ರಜ್ಞೆಯು ಗ್ರಹಿಸುತ್ತದೆ. ಹೃದಯದಲ್ಲಿರುವ ಚೇತನವು ಮನೋಜ್ಞಾನಕ್ಕೆ ಸಹಾಯಮಾಡುತ್ತದೆ.

14043033a ಬುದ್ಧಿರಧ್ಯವಸಾಯೇನ ಧ್ಯಾನೇನ ಚ ಮಹಾಂಸ್ತಥಾ। 5
14043033c ನಿಶ್ಚಿತ್ಯ ಗ್ರಹಣಂ ನಿತ್ಯಮವ್ಯಕ್ತಂ ನಾತ್ರ ಸಂಶಯಃ।।

ನಿಶ್ಚಯದಿಂದ ಬುದ್ಧಿ ಮತ್ತು ಧ್ಯಾನದಿಂದ ಮಹತ್ತು ಗ್ರಹಿಸಲ್ಪಡುತ್ತವೆ. ಈ ನಿಶ್ಚಯ ಗ್ರಹಣವು ನಿತ್ಯವೂ ಅವ್ಯಕ್ತವಾಗಿರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

14043034a ಅಲಿಂಗಗ್ರಹಣೋ ನಿತ್ಯಃ ಕ್ಷೇತ್ರಜ್ಞೋ ನಿರ್ಗುಣಾತ್ಮಕಃ।
14043034c ತಸ್ಮಾದಲಿಂಗಃ ಕ್ಷೇತ್ರಜ್ಞಃ ಕೇವಲಂ ಜ್ಞಾನಲಕ್ಷಣಃ।।

ನಿತ್ಯವೂ ನಿರ್ಗುಣಾತ್ಮಕನಾದ ಕ್ಷೇತ್ರಜ್ಞನನ್ನು ಯಾವುದೇ ರೀತಿಯ ಚಿಹ್ನೆ-ಲಕ್ಷಣಗಳ ಮೂಲಕ ತಿಳಿದುಕೊಳ್ಳಲು ಸಾಧ್ಯವಿಲ್ಲ. ಆದುದರಿಂದ ಕೇವಲ ಜ್ಞಾನವೇ ಚಿಹ್ನಾರಹಿತನಾದ ಕ್ಷೇತ್ರಜ್ಞನ ಲಕ್ಷಣವು.

14043035a ಅವ್ಯಕ್ತಂ ಕ್ಷೇತ್ರಮುದ್ದಿಷ್ಟಂ ಗುಣಾನಾಂ ಪ್ರಭವಾಪ್ಯಯಮ್।
14043035c ಸದಾ ಪಶ್ಯಾಮ್ಯಹಂ ಲೀನಂ ವಿಜಾನಾಮಿ ಶೃಣೋಮಿ ಚ।।

ಗುಣಗಳು ಹುಟ್ಟುವ ಮತ್ತು ಲೀನಗೊಳ್ಳುವ ಅವ್ಯಕ್ತವಾದುದನ್ನೇ ಕ್ಷೇತ್ರವೆಂದು ಹೇಳುತ್ತಾರೆ. ಸದಾ ನಾನು ಅದರಲ್ಲಿಯೇ ಲೀನನಾಗಿದ್ದುಕೊಂಡು ಅದನ್ನು ನೋಡುತ್ತೇನೆ, ಕೇಳುತ್ತೇನೆ ಮತ್ತು ಅರಿತುಕೊಳ್ಳುತ್ತೇನೆ.

14043036a ಪುರುಷಸ್ತದ್ವಿಜಾನೀತೇ ತಸ್ಮಾತ್ಕ್ಷೇತ್ರಜ್ಞ ಉಚ್ಯತೇ।
14043036c ಗುಣವೃತ್ತಂ ತಥಾ ಕೃತ್ಸ್ನಂ ಕ್ಷೇತ್ರಜ್ಞಃ ಪರಿಪಶ್ಯತಿ।।

ಪುರುಷನು ಅದನ್ನು ಅರಿತುಕೊಂಡಿದ್ದಾನೆ. ಆದುದರಿಂದ ಅವನಿಗೆ ಕ್ಷೇತ್ರಜ್ಞನೆಂದು ಹೇಳುತ್ತಾರೆ. ಹಾಗೆಯೇ ಕ್ಷೇತ್ರಜ್ಞನು ಗುಣಗಳ ಎಲ್ಲ ಕ್ರಿಯೆಗಳನ್ನೂ ನೋಡುತ್ತಿರುತ್ತಾನೆ.

14043037a ಆದಿಮಧ್ಯಾವಸಾನಾಂತಂ ಸೃಜ್ಯಮಾನಮಚೇತನಮ್।
14043037c ನ ಗುಣಾ ವಿದುರಾತ್ಮಾನಂ ಸೃಜ್ಯಮಾನಂ ಪುನಃ ಪುನಃ।।

ಪುನಃ ಪುನಃ ಸೃಷ್ಟಿಸಲ್ಪಟ್ಟು ಆದಿ-ಮಧ್ಯ-ಅಂತ್ಯಗಳೆಂಬ ಕಟ್ಟುಗಳಿಗೆ ಬಂಧಿತಗೊಂಡಿರುವ ಆ ಅಚೇತನ ಗುಣಗಳಿಗೆ ತಮ್ಮ ಅರಿವು ಇರುವುದಿಲ್ಲ.

14043038a ನ ಸತ್ಯಂ ವೇದ ವೈ ಕಶ್ಚಿತ್ಕ್ಷೇತ್ರಜ್ಞಸ್ತ್ವೇವ ವಿಂದತಿ।
14043038c ಗುಣಾನಾಂ ಗುಣಭೂತಾನಾಂ ಯತ್ಪರಂ ಪರತೋ ಮಹತ್।।

ಕ್ಷೇತ್ರಜ್ಞನಲ್ಲದೇ ಬೇರೆ ಯಾವುದಕ್ಕೂ ಗುಣಗಳ ಮತ್ತು ಗುಣಗಳು ಹುಟ್ಟಿಸುವ ಮತ್ತು ಅವುಗಳಿಗಿಂತಲೂ ಅತೀತವಾಗಿರುವ ಪರಮ ಮಹಾ ಸತ್ಯವು ತಿಳಿಯುವುದಿಲ್ಲ.

14043039a ತಸ್ಮಾದ್ಗುಣಾಂಶ್ಚ ತತ್ತ್ವಂ ಚ ಪರಿತ್ಯಜ್ಯೇಹ ತತ್ತ್ವವಿತ್।
14043039c ಕ್ಷೀಣದೋಷೋ ಗುಣಾನ್ ಹಿತ್ವಾ ಕ್ಷೇತ್ರಜ್ಞಂ ಪ್ರವಿಶತ್ಯಥ।। 6

ಆದುದರಿಂದ ತತ್ತ್ವವನ್ನು ತಿಳಿದುಕೊಂಡಿರುವವನು ಗುಣಗಳನ್ನೂ ಅವುಗಳ ಕ್ರಿಯೆಗಳನ್ನೂ ಪರಿತ್ಯಜಿಸಿ ದೋಷಗಳನ್ನು ಕಳೆದುಕೊಂಡು ಕ್ಷೇತ್ರಜ್ಞನನ್ನು ಪ್ರವೇಶಿಸುತ್ತಾನೆ.

14043040a ನಿರ್ದ್ವಂದ್ವೋ ನಿರ್ನಮಸ್ಕಾರೋ ನಿಃಸ್ವಧಾಕಾರ ಏವ ಚ।
14043040c ಅಚಲಶ್ಚಾನಿಕೇತಶ್ಚ ಕ್ಷೇತ್ರಜ್ಞಃ ಸ ಪರೋ ವಿಭುಃ।।

ನಿರ್ದ್ವಂದ್ವನೂ, ನಿರ್ನಮಸ್ಕಾರನೂ[^7], ನಿಃಸ್ವಧಾಕಾರನೂ[^8], ಅಚಲನೂ, ಮನೆಯಿಲ್ಲದವನೂ ಆದ ಕ್ಷೇತ್ರಜ್ಞನೇ ಪರಮ ವಿಭುವು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ತ್ರಿಚತ್ವಾರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ನಲ್ವತ್ಮೂರನೇ ಅಧ್ಯಾಯವು.

[^7] ಯಾರಿಗೂ ನಮಸ್ಕರಿಸದವನು ಮತ್ತು ಯಾರ ನಮಸ್ಕಾರಗಳೂ ಬೇಕಿಲ್ಲದವನು.

[^8] ಸ್ವಾಹಾಕಾರರೂಪದ ಯಜ್ಞಗಳನ್ನು ಮಾಡದೇ ಇರುವವನು ಅಥವಾ ಕರ್ಮರಹಿತನು.


  1. ಅಂಭಸಾಂ ವರುಣೋ ರಾಜ ಮರುತಾಮಿಂದ್ರ ಉಚ್ಯತೇ। ಎಂಬ ಪಾಠಾಂತರವಿದೆ. ↩︎

  2. ಧರ್ಮಕಾಮಾಶ್ಚ ರಾಜಾನೋ ಬ್ರಾಹ್ಮಣಾ ಧರ್ಮಸೇತವಃ। ಎಂಬ ಪಾಠಾಂತರವಿದೆ. ↩︎

  3. ಸ್ವರವ್ಯಂಜನಸಂಸ್ಕಾರಾ ಭಾರತೀ ಶಬ್ಧಲಕ್ಷಣಾ। ಮನಸೋ ಲಕ್ಷಣಂ ಚಿಂತಾ ಚಿಂತೋಕ್ತಾ ಬುದ್ಧಿಲಕ್ಷಣಾ।। ಎಂಬ ಪಾಠಾಂತರವಿದೆ. ↩︎

  4. ಲಕ್ಷಣಂ ಮನಸೋ ಧ್ಯಾನಮವ್ಯಕ್ತಂ ಸಾಧುಲಕ್ಷಣಮ್। ಅರ್ಥಾತ್ ಮನಸ್ಸಿನ ಲಕ್ಷಣ ಧ್ಯಾನ ಮತ್ತು ಬಹಿಃಪ್ರಪಂಚಕ್ಕೆ ತೋರಿಸಿಕೊಳ್ಳದೇ ಇರುವುದೇ ಸಾಧುಪುರುಷರ ಲಕ್ಷಣ ಎಂಬ ಪಾಠಾಂತರವಿದೆ. ↩︎

  5. ಬುದ್ಧಿರಧ್ಯವಸಾಯೇನ ಜ್ಞಾನೇನ ಚ ಮಹಾಂಸ್ತಥಾ। ಅರ್ಥಾತ್ ನಿಶ್ಚಯದಿಂದ ಬುದ್ಧಿ ಮತ್ತು ಜ್ಞಾನದಿಂದ ಮಹತ್ತು ಗ್ರಹಿಸಲ್ಪಡುತ್ತವೆ ಎಂಬ ಪಾಠಾಂತರವಿದೆ. ↩︎

  6. ತಸ್ಮಾದ್ಗುಣಾಂಶ್ಚ ಸತ್ತ್ವಂ ಚ ಪರಿತ್ಯಜ್ಯೇಹ ಧರ್ಮವಿತ್। ಕ್ಷೀಣದೋಷೋ ಗುಣಾತೀತಃ ಕ್ಷೇತ್ರಜ್ಞಂ ಪ್ರವಿಶತ್ಯಥ।। ಅರ್ಥಾತ್ ಆದುದರಿಂದ ಪಾಪಗಳನ್ನು ಕಳೆದುಕೊಂಡ ಗುಣಾತೀತ ಧರ್ಮಜ್ಞನು ಸತ್ತ್ವವನ್ನೂ ಮತ್ತು ಗುಣಗಳನ್ನೂ ಪರಿತ್ಯಜಿಸಿ ಶುದ್ಧರೂಪನಾದ ಕ್ಷೇತ್ರಜ್ಞನನ್ನು ಪ್ರವೇಶಿಸುತ್ತಾನೆ ಎಂಬ ಪಾಠಾಂತರವಿದೆ. ↩︎