149: ಧರ್ಮಪ್ರಶಂಸಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 149

ಸಾರ

ಯುಧಿಷ್ಠಿರನ ಉಳಿದ ಪ್ರಶ್ನೆಗಳಿಗೆ ಭೀಷ್ಮನು ಉತ್ತರಿಸಿದುದು (1-13).

13149001 ಯುಧಿಷ್ಠಿರ ಉವಾಚ।
13149001a ನಾಭಾಗಧೇಯಃ ಪ್ರಾಪ್ನೋತಿ ಧನಂ ಸುಬಲವಾನಪಿ।
13149001c ಭಾಗಧೇಯಾನ್ವಿತಸ್ತ್ವರ್ಥಾನ್ ಕೃಶೋ ಬಾಲಶ್ಚ ವಿಂದತಿ।।

ಯುಧಿಷ್ಠಿರನು ಹೇಳಿದನು: “ನಿರ್ಭಾಗ್ಯನು ಬಲಿಷ್ಠನಾಗಿದ್ದರೂ ಧನವನ್ನು ಹೊಂದುವುದಿಲ್ಲ. ಭಾಗ್ಯಶಾಲಿಯಾದವನು ದುರ್ಬಲನಾಗಿದ್ದರೂ ಮೂರ್ಖನಾಗಿದ್ದರೂ ವಿಪುಲ ಧನವನ್ನು ಹೊಂದುತ್ತಾನೆ.

13149002a ನಾಲಾಭಕಾಲೇ ಲಭತೇ ಪ್ರಯತ್ನೇಽಪಿ ಕೃತೇ ಸತಿ।
13149002c ಲಾಭಕಾಲೇಽಪ್ರಯತ್ನೇನ ಲಭತೇ ವಿಪುಲಂ ಧನಮ್।
13149002e ಕೃತಯತ್ನಾಫಲಾಶ್ಚೈವ ದೃಶ್ಯಂತೇ ಶತಶೋ ನರಾಃ1।।

ಲಾಭದ ಕಾಲವಲ್ಲದಿದ್ದರೆ ಎಷ್ಟೇ ಪ್ರಯತ್ನಪಟ್ಟರೂ ಅದು ದೊರಕುವುದಿಲ್ಲ. ಲಾಭದ ಕಾಲವಾಗಿದ್ದರೆ ಪ್ರಯತ್ನಪಡದಿದ್ದರೂ ವಿಪುಲ ಧನವು ದೊರೆಯುತ್ತದೆ. ಪ್ರಯತ್ನಿಸಿದರೂ ಫಲವನ್ನೇ ಹೊಂದದಿರುವ ನೂರಾರು ಜನರನ್ನು ಕಾಣುತ್ತೇವೆ.

13149003a ಯದಿ ಯತ್ನೋ ಭವೇನ್ಮರ್ತ್ಯಃ ಸ ಸರ್ವಂ ಫಲಮಾಪ್ನುಯಾತ್।
13149003c ನಾಲಭ್ಯಂ ಚೋಪಲಭ್ಯೇತ ನೃಣಾಂ ಭರತಸತ್ತಮ।।

ಭರತಸತ್ತಮ! ಪ್ರಯತ್ನಮಾತ್ರದಿಂದಲೇ ಎಲ್ಲವೂ ಫಲಿಸುವುದಾಗಿದ್ದರೆ ಅಥವಾ ಪ್ರಯತ್ನಕ್ಕೆ ಫಲವು ಅನಿವಾರ್ಯವಾಗಿದ್ದರೆ ಮನುಷ್ಯನು ಎಲ್ಲ ಫಲಗಳನ್ನು ಪಡೆದುಕೊಂಡುಬಿಡುತ್ತಿದ್ದನು. ಆದರೆ ಮನುಷ್ಯನಿಗೆ ಪ್ರಾರಬ್ಧವಶದಿಂದ ಯಾವ ವಸ್ತುವು ಅಲಭ್ಯವೋ ಅದು ಬಹಳ ಪ್ರಯತ್ನಪಟ್ಟರೂ ದೊರೆಯುವುದಿಲ್ಲ.

13149004a ಯದಾ ಪ್ರಯತ್ನಂ ಕೃತವಾನ್2 ದೃಶ್ಯತೇ ಹ್ಯಫಲೋ ನರಃ।
13149004c ಮಾರ್ಗನ್ನಯಶತೈರರ್ಥಾನಮಾರ್ಗಂಶ್ಚಾಪರಃ ಸುಖೀ।।

ಪ್ರಯತ್ನಪಡುವ ನರನೂ ಅಫಲನಾಗುವುದು ಕಾಣುತ್ತದೆ. ಒಬ್ಬನು ನೂರಾರು ಮಾರ್ಗಗಳನ್ನು ಬಳಸಿದರೂ ಧನಸಂಗ್ರಹದಲ್ಲಿ ಯಶಸ್ವಿಯಾಗುವುದಿಲ್ಲ. ಇನ್ನೊಬ್ಬನು ಯಾವ ಮಾರ್ಗವನ್ನೂ ಬಳಸದೆಯೂ ಧನವನ್ನು ಪಡೆದು ಸುಖಿಯಾಗಿರುತ್ತಾನೆ.

13149005a ಅಕಾರ್ಯಮಸಕೃತ್ಕೃತ್ವಾ ದೃಶ್ಯಂತೇ ಹ್ಯಧನಾ ನರಾಃ।
13149005c ಧನಯುಕ್ತಾಸ್ತ್ವಧರ್ಮಸ್ಥಾ3 ದೃಶ್ಯಂತೇ ಚಾಪರೇ ಜನಾಃ।।

ಮಾಡಬಾರದ್ದುದನ್ನು ಮಾಡಿ ನರರು ಅಧನರಾಗಿರುವುದು ಕಾಣುತ್ತದೆ. ಇನ್ನು ಕೆಲವು ಜನರು ಸ್ವಧರ್ಮದಲ್ಲಿದ್ದುಕೊಂಡು ಧನಯುಕ್ತರಾಗಿರುವುದು ಕಾಣುತ್ತದೆ.

13149006a ಅಧೀತ್ಯ ನೀತಿಂ ಯಸ್ಮಾಚ್ಚ4 ನೀತಿಯುಕ್ತೋ ನ ದೃಶ್ಯತೇ।
13149006c ಅನಭಿಜ್ಞಶ್ಚ ಸಾಚಿವ್ಯಂ ಗಮಿತಃ ಕೇನ ಹೇತುನಾ।
13149006e ವಿದ್ಯಾಯುಕ್ತೋ ಹ್ಯವಿದ್ಯಶ್ಚ ಧನವಾನ್ದುರ್ಗತಸ್ತಥಾ5।।

ನೀತಿಶಾಸ್ತ್ರದಲ್ಲಿ ಪಂಡಿತನಾಗಿದ್ದವನೂ ನೀತಿಯುಕ್ತನಾಗದೇ ಇರುವುದು ಕಾಣುತ್ತದೆ. ನೀತಿಶಾಸ್ತ್ರವನ್ನು ತಿಳಿಯದೇ ಇದ್ದವನು ಸಚಿವನಾಗುತ್ತಾನೆ. ಈ ರೀತಿಯ ವಿಪರ್ಯಾಸಕ್ಕೆ ಕಾರಣವೇನು? ವಿದ್ಯಾವಂತನೂ, ಅವಿದ್ಯಾವಂತನೂ, ದುರ್ಗತಿಯುಳ್ಳವನೂ ಧನವಾನರಾಗಿರುವುದನ್ನು ನೋಡುತ್ತೇವೆ.

13149007a ಯದಿ ವಿದ್ಯಾಮುಪಾಶ್ರಿತ್ಯ ನರಃ ಸುಖಮವಾಪ್ನುಯಾತ್।
13149007c ನ ವಿದ್ವಾನ್ವಿದ್ಯಯಾ ಹೀನಂ ವೃತ್ತ್ಯರ್ಥಮುಪಸಂಶ್ರಯೇತ್।।

ಒಂದುವೇಳೆ ವಿದ್ಯೆಯನ್ನಾಶ್ರಯಿಸಿ ನರನು ಸುಖವನ್ನು ಹೊಂದುತ್ತಾನೆ ಎಂದಾದರೆ ವಿದ್ವಾನನು ಅವಿದ್ಯಾವಂತನಾದ ಹೀನನನ್ನು ಜೀವನ ವೃತ್ತಿಗಾಗಿ ಆಶ್ರಯಿಸಬೇಕಾಗಿರುತ್ತಿರಲಿಲ್ಲ.

13149008a ಯಥಾ ಪಿಪಾಸಾಂ ಜಯತಿ ಪುರುಷಃ ಪ್ರಾಪ್ಯ ವೈ ಜಲಮ್।
13149008c ದೃಷ್ಟಾರ್ಥೋ ವಿದ್ಯಯಾಪ್ಯೇವಮವಿದ್ಯಾಂ ಪ್ರಜಹೇನ್ನರಃ6।।

ಮನುಷ್ಯನು ಹೇಗೆ ನೀರನ್ನು ಪಡೆದು ಬಾಯಾರಿಕೆಯನ್ನು ಹೋಗಲಾಡಿಸಿಕೊಳ್ಳುತ್ತಾನೋ ಹಾಗೆ ವಿದ್ಯೆಯಿಂದ ಎಲ್ಲವನ್ನೂ ಪಡೆದುಕೊಳ್ಳಬಹುದಾಗಿದ್ದರೆ ಜನರು ಮೊದಲು ಅವಿದ್ಯೆಯನ್ನು ಹೋಗಲಾಡಿಸಿಕೊಳ್ಳುತ್ತಿದ್ದರು.

13149009a ನಾಪ್ರಾಪ್ತಕಾಲೋ ಮ್ರಿಯತೇ ವಿದ್ಧಃ ಶರಶತೈರಪಿ।
13149009c ತೃಣಾಗ್ರೇಣಾಪಿ ಸಂಸ್ಪೃಷ್ಟಃ ಪ್ರಾಪ್ತಕಾಲೋ ನ ಜೀವತಿ।।

ಕಾಲವು ಪ್ರಾಪ್ತವಾಗದೇ ಇದ್ದಾಗ ನೂರಾರು ಶರಗಳಿಂದ ಗಾಯಗೊಂಡರೂ ಸಾಯುವುದಿಲ್ಲ. ಆದರೆ ಕಾಲವು ಪ್ರಾಪ್ತವಾಯಿತೆಂದರೆ ಹುಲ್ಲಿನ ತುದಿಯ ಸ್ಪರ್ಷಮಾತ್ರದಿಂದಲೇ ಸತ್ತುಹೋಗುತ್ತಾನೆ.”

13149010 ಭೀಷ್ಮ ಉವಾಚ।
13149010a ಈಹಮಾನಃ ಸಮಾರಂಭಾನ್ಯದಿ ನಾಸಾದಯೇದ್ಧನಮ್।
13149010c ಉಗ್ರಂ ತಪಃ ಸಮಾರೋಹೇನ್ನ ಹ್ಯನುಪ್ತಂ ಪ್ರರೋಹತಿ।।

ಭೀಷ್ಮನು ಹೇಳಿದನು: “ಧನವನ್ನಪೇಕ್ಷಿಸಿ ನಾನಾಪ್ರಕಾರದ ಕಾರ್ಯಗಳನ್ನು ಮಾಡಿಯೂ ಧನವನ್ನು ಪಡೆಯಲಾಗದಿದ್ದರೆ ಉಗ್ರ ತಪಸ್ಸನ್ನಾದರೂ ಮಾಡಬೇಕು. ಬೀಜವನ್ನು ಬಿತ್ತದೇ ಮೊಳಕೆಯಾಗುವುದಿಲ್ಲ ತಾನೇ?

13149011a ದಾನೇನ ಭೋಗೀ ಭವತಿ ಮೇಧಾವೀ ವೃದ್ಧಸೇವಯಾ।
13149011c ಅಹಿಂಸಯಾ ಚ ದೀರ್ಘಾಯುರಿತಿ ಪ್ರಾಹುರ್ಮನೀಷಿಣಃ।।

ದಾನದಿಂದ ಭೋಗಿಯಾಗುತ್ತಾನೆ. ವೃದ್ಧರ ಸೇವೆಯಿಂದ ಮೇಧಾವಿಯಾಗುತ್ತಾನೆ. ಅಹಿಂಸೆಯಿಂದ ದೀರ್ಘಾಯುವಾಗುತ್ತಾನೆ ಎಂದು ಮನೀಷಿಣರು ಹೇಳುತ್ತಾರೆ.

13149012a ತಸ್ಮಾದ್ದದ್ಯಾನ್ನ ಯಾಚೇತ ಪೂಜಯೇದ್ಧಾರ್ಮಿಕಾನಪಿ।
13149012c ಸ್ವಾಭಾಷೀ ಪ್ರಿಯಕೃಚ್ಚುದ್ಧಃ ಸರ್ವಸತ್ತ್ವಾವಿಹಿಂಸಕಃ।।

ಆದುದರಿಂದ ದಾನಮಾಡಬೇಕು. ಯಾಚಿಸಬಾರದು. ಧಾರ್ಮಿಕರನ್ನು ಪೂಜಿಸಬೇಕು. ಎಲ್ಲರೊಡನೆಯೂ ಒಳ್ಳೆಯ ಮಾತನ್ನಾಡಬೇಕು. ಇತರರಿಗೆ ಪ್ರಿಯವಾದುದನ್ನೇ ಮಾಡಬೇಕು. ಸರ್ವಸತ್ತ್ವಗಳನ್ನೂ ಹಿಂಸಿಸಬಾರದು.

13149013a ಯದಾ ಪ್ರಮಾಣಪ್ರಭವಃ ಸ್ವಭಾವಶ್ಚ ಸುಖಾಸುಖೇ।
13149013c ಮಶಕೀಟಪಿಪೀಲಾನಾಂ ಸ್ಥಿರೋ ಭವ ಯುಧಿಷ್ಠಿರ।।

ಯುಧಿಷ್ಠಿರ! ನೊಣ, ಕೀಟ, ಇರುವೆ ಮೊದಲಾದ ಜೀವಿಗಳೆಲ್ಲಕ್ಕೂ ಅವುಗಳ ಹುಟ್ಟು, ಸ್ವಭಾವ ಮತ್ತು ಸುಖ-ದುಃಖಗಳೇ ಅವುಗಳ ಕರ್ಮಕ್ಕೆ ಪ್ರಮಾಣಭೂತವಾಗಿರುವಾಗ ನೀನೇಕೆ ಈ ವಿಷಯದಲ್ಲಿ ಗೊಂದಲಕ್ಕೊಳಗಾಗಿದ್ದೀಯೆ? ಸ್ಥಿರನಾಗು!”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಧರ್ಮಪ್ರಶಂಸಾಯಾಂ ಏಕೋನಪಂಚಾಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಧರ್ಮಪ್ರಶಂಸಾ ಎನ್ನುವ ನೂರಾನಲ್ವತ್ತೊಂಭತ್ತನೇ ಅಧ್ಯಾಯವು.


  1. ಭಾರತ ದರ್ಶನದಲ್ಲಿ ಇದರ ನಂತರ ಈ ಒಂದು ಶ್ಲೋಕಾರ್ಧವಿದೆ: ಅಯತ್ನೇನೈಧಮಾನಾಶ್ಚ ದೃಶ್ಯಂತೇ ಬಹವೋ ಜನಾಃ।। ↩︎

  2. ಪ್ರಯತ್ನಂ ಕೃತವಂತೋಽಪಿ (ಭಾರತ ದರ್ಶನ). ↩︎

  3. ಸ್ವಕರ್ಮಸ್ಥಾ (ಭಾರತ ದರ್ಶನ). ↩︎

  4. ಅಧೀತ್ಯ ನೀತಿಶಾಸ್ತ್ರಾಣಿ (ಭಾರತ ದರ್ಶನ). ↩︎

  5. ಧನವಾನ್ದುರ್ಮತಿಸ್ತಥಾ (ಭರತ ದರ್ಶನ). ↩︎

  6. ಇಷ್ಟಾರ್ಥೋ ವಿದ್ಯಯಾ ಹ್ಯೇವ ನ ವಿದ್ಯಾಂ ಪ್ರಜಹೇನ್ನರಃ। (ಭಾರತ ದರ್ಶನ). ↩︎