ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 120
ಸಾರ
ಕೀಟವು ಮೊದಲು ಕ್ಷತ್ರಿಯನಾಗಿ ನಂತರ ಬ್ರಾಹ್ಮಣನಾಗಿ ಬ್ರಹ್ಮಲೋಕವನ್ನು ಪಡೆದುದು (1-14).
13120001 ಭೀಷ್ಮ ಉವಾಚ।
13120001a ಕ್ಷತ್ರಧರ್ಮಮನುಪ್ರಾಪ್ತಃ ಸ್ಮರನ್ನೇವ ಸ ವೀರ್ಯವಾನ್।
13120001c ತ್ಯಕ್ತ್ವಾ ಸ ಕೀಟತಾಂ ರಾಜಂಶ್ಚಚಾರ ವಿಪುಲಂ ತಪಃ।।
ಭೀಷ್ಮನು ಹೇಳಿದನು: “ರಾಜನ್! ಹೀಗೆ ಕೀಟತ್ವವನ್ನು ತ್ಯಜಿಸಿ ಆ ವೀರ್ಯವಾನನು ಕ್ಷತ್ರಧರ್ಮವನ್ನು ಪಡೆದುಕೊಂಡು ತನ್ನ ಹಿಂದಿನ ಜನ್ಮಗಳನ್ನು ಸ್ಮರಿಸುತ್ತಾ ವಿಪುಲ ತಪಸ್ಸನ್ನಾಚರಿಸಿದನು.
13120002a ತಸ್ಯ ಧರ್ಮಾರ್ಥವಿದುಷೋ ದೃಷ್ಟ್ವಾ ತದ್ವಿಪುಲಂ ತಪಃ।
13120002c ಆಜಗಾಮ ದ್ವಿಜಶ್ರೇಷ್ಠಃ ಕೃಷ್ಣದ್ವೈಪಾಯನಸ್ತದಾ।।
ಅವನ ಆ ವಿಪುಲ ತಪಸ್ಸನ್ನು ನೋಡಿ ಧರ್ಮಾರ್ಥವಿದುಷ ದ್ವಿಜಶ್ರೇಷ್ಠ ಕೃಷ್ಣದ್ವೈಪಾಯನನು ಅಲ್ಲಿಗೆ ಆಗಮಿಸಿದನು.
13120003 ವ್ಯಾಸ ಉವಾಚ।
13120003a ಕ್ಷಾತ್ರಂ ಚೈವ ವ್ರತಂ ಕೀಟ ಭೂತಾನಾಂ ಪರಿಪಾಲನಮ್।
13120003c ಕ್ಷಾತ್ರಂ ಚೈವ ವ್ರತಂ ಧ್ಯಾಯಂಸ್ತತೋ ವಿಪ್ರತ್ವಮೇಷ್ಯಸಿ।।
ವ್ಯಾಸನು ಹೇಳಿದನು: “ಹಿಂದೆ ಕೀಟವಾಗಿದ್ದವನೇ! ಜೀವಿಗಳ ಪರಿಪಾಲನೆಯೇ ಕ್ಷತ್ರಿಯರ ವ್ರತ. ಇದನ್ನು ಧ್ಯಾನದಲ್ಲಿಟ್ಟುಕೊಂಡು ಕ್ಷಾತ್ರವ್ರತವನ್ನೇ ಪರಿಪಾಲಿಸು. ಅನಂತರ ನೀನು ವಿಪ್ರತ್ವವನ್ನು ಪಡೆದುಕೊಳ್ಳುತ್ತೀಯೆ.
13120004a ಪಾಹಿ ಸರ್ವಾಃ ಪ್ರಜಾಃ ಸಮ್ಯಕ್ ಶುಭಾಶುಭವಿದಾತ್ಮವಾನ್।
13120004c ಶುಭೈಃ ಸಂವಿಭಜನ್ಕಾಮೈರಶುಭಾನಾಂ ಚ ಪಾವನೈಃ।।
ನಿನ್ನ ಶುಭಾಶುಭಕರ್ಮಗಳು ಯಾವುದೆಂದು ತಿಳಿದುಕೊಂಡು ಸರ್ವ ಪ್ರಜೆಗಳನ್ನೂ ಚೆನ್ನಾಗಿ ಪರಿಪಾಲಿಸು. ಶುಭಕಾಮನೆಗಳಿಂದ ನಿನ್ನ ಐಶ್ವರ್ಯವನ್ನು ದಾನಮಾಡು. ಅಶುಭಕರ್ಮಗಳನ್ನು ಪರಿತ್ಯಜಿಸು. ಪಾವನನಾಗು.
13120005a ಆತ್ಮವಾನ್ಭವ ಸುಪ್ರೀತಃ ಸ್ವಧರ್ಮಚರಣೇ ರತಃ।
13120005c ಕ್ಷಾತ್ರೀಂ ತನುಂ ಸಮುತ್ಸೃಜ್ಯ ತತೋ ವಿಪ್ರತ್ವಮೇಷ್ಯಸಿ।।
ಸ್ವಧರ್ಮಾಚರಣೆಯಲ್ಲಿ ನಿರತನಾಗಿ ಸುಪ್ರೀತನಾಗು. ಆತ್ಮವಂತನಾಗು. ಕ್ಷತ್ರಿಯ ತನುವನ್ನು ಪರಿತ್ಯಜಿಸಿದ ನಂತರ ವಿಪ್ರತ್ವವನ್ನು ಪಡೆಯುತ್ತೀಯೆ.””
13120006 ಭೀಷ್ಮ ಉವಾಚ।
13120006a ಸೋಽಥಾರಣ್ಯಮಭಿಪ್ರೇತ್ಯ ಪುನರೇವ ಯುಧಿಷ್ಠಿರ।
13120006c ಮಹರ್ಷೇರ್ವಚನಂ ಶ್ರುತ್ವಾ ಪ್ರಜಾ ಧರ್ಮೇಣ ಪಾಲ್ಯ ಚ।।
ಭೀಷ್ಮನು ಹೇಳಿದನು: “ಯುಧಿಷ್ಠಿರ! ಮಹರ್ಷಿಯ ಮಾತನ್ನು ಕೇಳಿ ಅವನು ಪುನಃ ಅರಣ್ಯದಿಂದ ಹಿಂದಿರುಗಿ ಪ್ರಜೆಗಳನ್ನು ಧರ್ಮದಿಂದ ಪಾಲಿಸಿದನು.
13120007a ಅಚಿರೇಣೈವ ಕಾಲೇನ ಕೀಟಃ ಪಾರ್ಥಿವಸತ್ತಮ।
13120007c ಪ್ರಜಾಪಾಲನಧರ್ಮೇಣ ಪ್ರೇತ್ಯ ವಿಪ್ರತ್ವಮಾಗತಃ।।
ಪಾರ್ಥಿವಸತ್ತಮ! ಸ್ವಲ್ಪವೇ ಸಮಯದಲ್ಲಿ ಅವನು ಮರಣಹೊಂದಿ ಪ್ರಜಾಪಾಲನಧರ್ಮದಿಂದ ವಿಪ್ರತ್ವವನ್ನು ಪಡೆದನು.
13120008a ತತಸ್ತಂ ಬ್ರಾಹ್ಮಣಂ ದೃಷ್ಟ್ವಾ ಪುನರೇವ ಮಹಾಯಶಾಃ।
13120008c ಆಜಗಾಮ ಮಹಾಪ್ರಾಜ್ಞಃ ಕೃಷ್ಣದ್ವೈಪಾಯನಸ್ತದಾ।।
ಆ ಬ್ರಾಹ್ಮಣನನ್ನು ನೋಡಿ ಪುನಃ ಮಹಾಯಶಸ್ವೀ ಮಹಾಪ್ರಾಜ್ಞ ಕೃಷ್ಣದ್ವೈಪಾಯನನು ಅಲ್ಲಿಗೆ ಆಗಮಿಸಿದನು.
13120009 ವ್ಯಾಸ ಉವಾಚ।
13120009a ಭೋ ಭೋ ವಿಪ್ರರ್ಷಭ ಶ್ರೀಮನ್ಮಾ ವ್ಯಥಿಷ್ಠಾಃ ಕಥಂ ಚನ।
13120009c ಶುಭಕೃಚ್ಚುಭಯೋನೀಷು ಪಾಪಕೃತ್ ಪಾಪಯೋನಿಷು।
13120009E ಉಪಪದ್ಯತಿ ಧರ್ಮಜ್ಞ ಯಥಾಧರ್ಮಂ ಯಥಾಗಮಮ್।।
ವ್ಯಾಸನು ಹೇಳಿದನು: “ಭೋ ಭೋ ಶ್ರೀಮಾನ್ ವಿಪ್ರರ್ಷಭ! ಯಾವ ಕಾರಣಕ್ಕೂ ನೀನು ಇನ್ನು ವ್ಯಥೆಪಡಬೇಡ. ಶುಭಕರ್ಮಗಳನ್ನು ಮಾಡಿದವನು ಶುಭಯೋನಿಗಳಲ್ಲಿಯೂ ಪಾಪಕರ್ಮಿಯು ಪಾಪಯೋನಿಗಳಲ್ಲಿಯೂ ಹುಟ್ಟುತ್ತಾನೆ. ಧರ್ಮಜ್ಞ! ಯಾರು ಯಾವ ಧರ್ಮವನ್ನು ಪಾಲಿಸುತ್ತಾನೋ ಅದಕ್ಕೆ ತಕ್ಕಂತಹ ಯೋನಿಯನ್ನು ಅವನು ಪಡೆದುಕೊಳ್ಳುತ್ತಾನೆ.
13120010a ತಸ್ಮಾನ್ಮೃತ್ಯುಭಯಾತ್ಕೀಟ ಮಾ ವ್ಯಥಿಷ್ಠಾಃ ಕಥಂ ಚನ।
13120010c ಧರ್ಮಲೋಪಾದ್ಭಯಂ ತೇ ಸ್ಯಾತ್ತಸ್ಮಾದ್ಧರ್ಮಂ ಚರೋತ್ತಮಮ್।।
ಹಿಂದೆ ಕೀಟವಾಗಿದ್ದವನೇ! ನಿನಗೆ ಮೃತ್ಯುಭಯವಿಲ್ಲದಿರಲಿ. ಯಾವುದೇ ವ್ಯಥೆಯೂ ಆಗದಿರಲಿ. ಧರ್ಮವು ಲೋಪವಾದೀತೆಂಬ ಭಯವು ಯಾವಾಗಲೂ ನಿನ್ನಲ್ಲಿರಲಿ. ಅದರಿಂದ ಉತ್ತಮ ಧರ್ಮವನ್ನು ಆಚರಿಸು.”
13120011 ಕೀಟ ಉವಾಚ।
13120011a ಸುಖಾತ್ಸುಖತರಂ ಪ್ರಾಪ್ತೋ ಭಗವಂಸ್ತ್ವತ್ಕೃತೇ ಹ್ಯಹಮ್।
13120011c ಧರ್ಮಮೂಲಾಂ ಶ್ರಿಯಂ ಪ್ರಾಪ್ಯ ಪಾಪ್ಮಾ ನಷ್ಟ ಇಹಾದ್ಯ ಮೇ।।
ಕೀಟವು ಹೇಳಿತು: “ಭಗವನ್! ನಿನ್ನ ಅನುಗ್ರಹದಿಂದ ನಾನು ಒಂದು ಸುಖಸ್ಥಾನದಿಂದ ಇನ್ನೂ ಹೆಚ್ಚಿನ ಸುಖಸ್ಥಾನವನ್ನು ಪಡೆದುಕೊಂಡೆ. ಧರ್ಮಮೂಲವಾದ ಸಂಪತ್ತನ್ನು ಪಡೆದು ಇಂದು ನಾನು ಪಾಪಗಳನ್ನು ನಷ್ಟಗೊಳಿಸುತ್ತೇನೆ.””
13120012 ಭೀಷ್ಮ ಉವಾಚ।
13120012a ಭಗವದ್ವಚನಾತ್ಕೀಟೋ ಬ್ರಾಹ್ಮಣ್ಯಂ ಪ್ರಾಪ್ಯ ದುರ್ಲಭಮ್।
13120012c ಅಕರೋತ್ಪೃಥಿವೀಂ ರಾಜನ್ಯಜ್ಞಯೂಪಶತಾಂಕಿತಾಮ್।
13120012E ತತಃ ಸಾಲೋಕ್ಯಮಗಮದ್ಬ್ರಹ್ಮಣೋ ಬ್ರಹ್ಮವಿತ್ತಮಃ।।
ಭೀಷ್ಮನು ಹೇಳಿದನು: “ರಾಜನ್! ಭಗವಾನ್ ವ್ಯಾಸನ ಮಾತಿನಂತೆ ಆ ಕೀಟವು ದುರ್ಲಭ ಬ್ರಾಹ್ಮಣತ್ವವನ್ನು ಪಡೆದು ಪೃಥ್ವಿಯನ್ನು ನೂರು ಯಜ್ಞಯೂಪಗಳಿಂದ ಅಂಕಿತವನ್ನಾಗಿ ಮಾಡಿತು. ಅನಂತರ ಆ ಬ್ರಹ್ಮವಿತ್ತಮನು ಬ್ರಹ್ಮನ ಸಾಲೋಕ್ಯವನ್ನು ಪಡೆದುಕೊಂಡನು.
13120013a ಅವಾಪ ಚ ಪರಂ ಕೀಟಃ ಪಾರ್ಥ ಬ್ರಹ್ಮ ಸನಾತನಮ್।
13120013c ಸ್ವಕರ್ಮಫಲನಿರ್ವೃತ್ತಂ ವ್ಯಾಸಸ್ಯ ವಚನಾತ್ತದಾ।।
ವ್ಯಾಸನ ವಚನದಂತೆ ಆ ಕೀಟವು ಯಾವ ಯೋನಿಯಲ್ಲಿ ಅಥವಾ ವರ್ಣದಲ್ಲಿ ಹುಟ್ಟಿದರೂ ಆಯಾ ಯೋನಿ-ವರ್ಣಗಳ ಧರ್ಮವನ್ನು ಪಾಲಿಸುತ್ತಿತ್ತು. ಪಾರ್ಥ! ಅದರಿಂದಾಗಿ ಆ ಜೀವವು ಸನಾತನ ಬ್ರಹ್ಮಪದವಿಯನ್ನು ಪಡೆದುಕೊಂಡಿತು.
13120014a ತೇಽಪಿ ಯಸ್ಮಾತ್ಸ್ವಭಾವೇನ ಹತಾಃ ಕ್ಷತ್ರಿಯಪುಂಗವಾಃ।
13120014c ಸಂಪ್ರಾಪ್ತಾಸ್ತೇ ಗತಿಂ ಪುಣ್ಯಾಂ ತಸ್ಮಾನ್ಮಾ ಶೋಚ ಪುತ್ರಕ।।
ಪುತ್ರಕ! ನಿನ್ನೊಡನೆ ಯುದ್ಧಮಾಡಿದ ಕ್ಷತ್ರಿಯಪುಂಗವರೂ ಕೂಡ ತಮ್ಮ ಸ್ವಭಾವದಲ್ಲಿದ್ದುಕೊಂಡು ಹತರಾಗಿ ಪುಣ್ಯ ಗತಿಯನ್ನು ಪಡೆದುಕೊಂಡರು. ಆದಕ್ಕಾಗಿ ಶೋಕಿಸಬೇಡ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಕೀಟೋಪಾಖ್ಯಾನೇ ವಿಂಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಕೀಟೋಪಾಖ್ಯಾನ ಎನ್ನುವ ನೂರಾಇಪ್ಪತ್ತನೇ ಅಧ್ಯಾಯವು.