119: ಕೀಟೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 119

ಸಾರ

ಕೀಟವು ಹತ್ತು ಜನ್ಮಗಳ ನಂತರ ರಾಜಪುತ್ರನಾಗಿ ಹುಟ್ಟಿ, ವ್ಯಾಸನನ್ನು ಪುನಃ ಸಂದರ್ಶಿಸಿ ಪೂಜಿಸಿದುದು (1-23).

13119001 ವ್ಯಾಸ ಉವಾಚ।
13119001a ಶುಭೇನ ಕರ್ಮಣಾ ಯದ್ವೈ ತಿರ್ಯಗ್ಯೋನೌ ನ ಮುಹ್ಯಸೇ।
13119001c ಮಮೈವ ಕೀಟ ತತ್ಕರ್ಮ ಯೇನ ತ್ವಂ ನ ಪ್ರಮುಹ್ಯಸೇ।।

ವ್ಯಾಸನು ಹೇಳಿದನು: “ಕೀಟವೇ! ನೀನು ಮಾಡಿದ ಆ ಎರಡು ಶುಭ ಕರ್ಮಗಳಿಂದ ಈ ತಿರ್ಯಗ್ಯೋನಿಯಲ್ಲಿ ಮೋಹಕ್ಕೊಳಗಾಗಲಿಲ್ಲ. ಆ ಶುಭ ಕರ್ಮಗಳಿಂದಲೇ ನಿನಗೆ ನನ್ನ ದರ್ಶನವಾಯಿತು.

13119002a ಅಹಂ ಹಿ ದರ್ಶನಾದೇವ ತಾರಯಾಮಿ ತಪೋಬಲಾತ್।
13119002c ತಪೋಬಲಾದ್ಧಿ ಬಲವದ್ಬಲಮನ್ಯನ್ನ ವಿದ್ಯತೇ।।

ನನ್ನ ದರ್ಶನಮಾಡಿದ್ದುದರಿಂದ ನನ್ನ ತಪೋಬಲದಿಂದಲೇ ನಿನ್ನನ್ನು ಉದ್ಧರಿಸುತ್ತೇನೆ. ತಪೋಬಲಕ್ಕಿಂತಲೂ ಬಲವಾದ ಇನ್ನೊಂದು ಬಲವಿಲ್ಲ ಎಂದು ತಿಳಿ.

13119003a ಜಾನಾಮಿ ಪಾಪೈಃ ಸ್ವಕೃತೈರ್ಗತಂ ತ್ವಾಂ ಕೀಟ ಕೀಟತಾಮ್।
13119003c ಅವಾಪ್ಸ್ಯಸಿ ಪರಂ ಧರ್ಮಂ ಧರ್ಮಸ್ಥೋ ಯದಿ ಮನ್ಯಸೇ।।

ಕೀಟವೇ! ಹಿಂದೆ ನೀನೇ ಮಾಡಿದ ಪಾಪಗಳಿಂದ ಈ ಕೀಟತ್ವವನ್ನು ಪಡೆದಿದ್ದೀಯೆ ಎಂದು ನನಗೆ ತಿಳಿದಿದೆ. ನೀನು ಧರ್ಮಸ್ಥನಾಗಿರಲು ಬಯಸಿದರೆ ಪರಮ ಧರ್ಮವನ್ನು ಪಡೆದುಕೊಳ್ಳುತ್ತೀಯೆ.

13119004a ಕರ್ಮ ಭೂಮಿಕೃತಂ ದೇವಾ ಭುಂಜತೇ ತಿರ್ಯಗಾಶ್ಚ ಯೇ।
13119004c ಧರ್ಮಾದಪಿ ಮನುಷ್ಯೇಷು ಕಾಮೋಽರ್ಥಶ್ಚ ಯಥಾ ಗುಣೈಃ।।

ಕರ್ಮಭೂಮಿಯಲ್ಲಿ ಮಾಡಿದ ಕರ್ಮಗಳ ಫಲವನ್ನು ದೇವತೆಗಳೂ ಮತ್ತು ತಿರ್ಯಗ್ಯೋನಿಗಳವರೂ ಉಪಭೋಗಿಸುತ್ತಾರೆ. ಗುಣಗಳಿಂದ ಮನುಷ್ಯನಿಗೆ ಕಾಮಾರ್ಥಗಳು ಸಿದ್ಧಿಸುವಂತೆ ಧರ್ಮದಿಂದಲೂ ಕಾಮಾರ್ಥಗಳು ಸಿದ್ಧಿಸುತ್ತವೆ.

13119005a ವಾಗ್ಬುದ್ಧಿಪಾಣಿಪಾದೈಶ್ಚಾಪ್ಯುಪೇತಸ್ಯ ವಿಪಶ್ಚಿತಃ।
13119005c ಕಿಂ ಹೀಯತೇ1 ಮನುಷ್ಯಸ್ಯ ಮಂದಸ್ಯಾಪಿ ಹಿ ಜೀವತಃ।।

ಮನುಷ್ಯನು ಮೂರ್ಖನಾಗಿರಲಿ ಅಥವಾ ವಿದ್ವಾಂಸನಾಗಿರಲಿ, ಮಾತು, ಬುದ್ಧಿ, ಮತ್ತು ಕೈಕಾಲುಗಳಿಂದ ಯುಕ್ತನಾಗಿದ್ದರೆ ಜೀವಿಸಿರುವಾಗ ಅವನನ್ನು ಯಾವುದು ತಾನೇ ನಾಶಗೊಳಿಸುತ್ತದೆ?

13119006a ಜೀವನ್ ಹಿ ಕುರುತೇ ಪೂಜಾಂ ವಿಪ್ರಾಗ್ರ್ಯಃ ಶಶಿಸೂರ್ಯಯೋಃ।
13119006c ಬ್ರುವನ್ನಪಿ ಕಥಾಂ ಪುಣ್ಯಾಂ ತತ್ರ ಕೀಟ ತ್ವಮೇಷ್ಯಸಿ।।

ಬ್ರಾಹ್ಮಣಶ್ರೇಷ್ಠನೋರ್ವನು ಸೂರ್ಯ-ಚಂದ್ರರನ್ನು ಪೂಜಿಸುತ್ತಾ ಪುಣ್ಯಕಥೆಗಳನ್ನು ಹೇಳುತ್ತಾ ಜೀವಿಸುತ್ತಿದ್ದಾನೆ. ಕೀಟವೇ! ನೀನು ಅವನ ಪುತ್ರನಾಗಿ ಜನಿಸುತ್ತೀಯೆ.

13119007a ಗುಣಭೂತಾನಿ ಭೂತಾನಿ ತತ್ರ ತ್ವಮುಪಭೋಕ್ಷ್ಯಸೇ।
13119007c ತತ್ರ ತೇಽಹಂ ವಿನೇಷ್ಯಾಮಿ ಬ್ರಹ್ಮತ್ವಂ ಯತ್ರ ಚೇಚ್ಚಸಿ।।

ಅಲ್ಲಿ ನೀನು ವಿಷಯಗಳನ್ನು ಪಂಚಭೂತಗಳ ವಿಕಾರಗಳೆಂದು ತಿಳಿದು ಅನಾಸಕ್ತಭಾವದಿಂದ ಉಪಭೋಗಿಸುತ್ತೀಯೆ. ಅಲ್ಲಿ ನಾನು ಪುನಃ ಬಂದು ಬ್ರಹ್ಮತತ್ತ್ವವನ್ನು ಉಪದೇಶಿಸಿ ಮುಂದೆ ನೀನು ಯಾವ ಪುಣ್ಯಲೋಕಕ್ಕೆ ಹೋಗಲು ಬಯಸುವೆಯೋ ಅಲ್ಲಿಗೆ ಕಳುಹಿಸುತ್ತೇನೆ.”

13119008a ಸ ತಥೇತಿ ಪ್ರತಿಶ್ರುತ್ಯ ಕೀಟೋ ವರ್ತ್ಮನ್ಯತಿಷ್ಠತ।
13119008c ತಮೃಷಿಂ ದ್ರಷ್ಟುಮಗಮತ್ ಸರ್ವಾಸ್ವನ್ಯಾಸು ಯೋನಿಷು।।
13119009a ಶ್ವಾವಿದ್ಗೋಧಾವರಾಹಾಣಾಂ ತಥೈವ ಮೃಗಪಕ್ಷಿಣಾಮ್।
13119009c ಶ್ವಪಾಕವೈಶ್ಯಶೂದ್ರಾಣಾಂ ಕ್ಷತ್ರಿಯಾಣಾಂ ಚ ಯೋನಿಷು।।

ಹಾಗೆಯೇ ಆಗಲೆಂದು ಹೇಳಿ ಕೀಟವು ಬಂಡಿಯ ಮಾರ್ಗದಲ್ಲಿಯೇ ನಿಂತುಕೊಂಡಿತು. ಮರಣಾನಂತರ ಅದು ಅನುಕ್ರಮವಾಗಿ ಮುಳ್ಳುಹಂದಿ, ನೀರುಡ, ಹಂದಿ, ಮೃಗಗಳು, ಪಕ್ಷಿಗಳು, ಚಂಡಾಲ, ಶೂದ್ರ, ವೈಶ್ಯ, ಮತ್ತು ಕ್ಷತ್ರಿಯ ಕುಲಗಳಲ್ಲಿ ಹುಟ್ಟಿತು. ಪ್ರೌಢನಾದ ನಂತರ ಹಿಂದಿನ ಜನ್ಮಗಳ ಸ್ಮರಣೆಯಿದ್ದ ಆ ಕ್ಷತ್ರಿಯ ಕುಮಾರನು ವ್ಯಾಸನನ್ನು ಸಂದರ್ಶಿಸುವ ಸಲುವಾಗಿ ಅವನ ಬಳಿ ಹೋದನು.

13119010a ಸ ಕೀಟೇತ್ಯೇವಮಾಭಾಷ್ಯ ಋಷಿಣಾ ಸತ್ಯವಾದಿನಾ।
13119010c ಪ್ರತಿಸ್ಮೃತ್ಯಾಥ ಜಗ್ರಾಹ ಪಾದೌ ಮೂರ್ಧ್ನಾ ಕೃತಾಂಜಲಿಃ।।

ತಾನು ಕೀಟವಾಗಿದ್ದಾಗ ಸತ್ಯವಾದಿ ಋಷಿಯು ಹೇಳಿದ್ದ ಮಾತನ್ನು ಸ್ಮರಿಸಿ ಅವನ ಎರಡೂ ಪಾದಗಳಲ್ಲಿ ತನ್ನ ತಲೆಯನ್ನಿಟ್ಟು ಕೃತಾಂಜಲಿಯಾಗಿ ನಮಸ್ಕರಿಸಿದನು.

13119011 ಕೀಟ ಉವಾಚ।
13119011a ಇದಂ ತದತುಲಂ ಸ್ಥಾನಮೀಪ್ಸಿತಂ ದಶಭಿರ್ಗುಣೈಃ।
13119011c ಯದಹಂ ಪ್ರಾಪ್ಯ ಕೀಟತ್ವಮಾಗತೋ ರಾಜಪುತ್ರತಾಮ್।।

ಕ್ಷತ್ರಿಯ ಕುಮಾರನಾಗಿದ್ದ ಕೀಟವು ಹೇಳಿತು: “ಹತ್ತು ಜನ್ಮಗಳ ನಂತರ ನಾನು ಈ ಶ್ರೇಷ್ಠವಾದ ಸ್ಥಾನವನ್ನು ಬಯಸಿದ್ದೆನು. ಕೀಟನಾಗಿದ್ದ ನಾನು ರಾಜಪುತ್ರತ್ವವನ್ನು ಹೊಂದಿ ನಿನ್ನಲ್ಲಿಗೆ ಆಗಮಿಸಿದ್ದೇನೆ.

13119012a ವಹಂತಿ ಮಾಮತಿಬಲಾಃ ಕುಂಜರಾ ಹೇಮಮಾಲಿನಃ।
13119012c ಸ್ಯಂದನೇಷು ಚ ಕಾಂಬೋಜಾ ಯುಕ್ತಾಃ ಪರಮವಾಜಿನಃ।।

ಸುವರ್ಣಮಾಲೆಗಳಿಂದ ಸುಶೋಭಿತವಾದ ಮಹಾಬಲಿಷ್ಠ ಆನೆಗಳು ನನ್ನನ್ನು ನಾನು ಬಯಸಿದಲ್ಲಿಗೆ ಕೊಂಡೊಯ್ಯುತ್ತವೆ. ನನ್ನ ರಥಗಳು ಕಾಂಬೋಜದ ಶ್ರೇಷ್ಠ ಕುದುರೆಗಳಿಂದ ಯುಕ್ತವಾಗಿವೆ.

13119013a ಉಷ್ಟ್ರಾಶ್ವತರಯುಕ್ತಾನಿ ಯಾನಾನಿ ಚ ವಹಂತಿ ಮಾಮ್।
13119013c ಸಬಾಂಧವಃ ಸಹಾಮಾತ್ಯಶ್ಚಾಶ್ನಾಮಿ ಪಿಶಿತೌದನಮ್।।

ಒಂಟೆಗಳಿಂದಲೂ ಹೇಸರಗತ್ತೆಗಳಿಂದಲೂ ಯುಕ್ತವಾದ ಯಾನಗಳು ನನ್ನನ್ನು ಕೊಂಡೊಯ್ಯುತ್ತವೆ. ಬಾಂಧವರು ಮತ್ತು ಅಮಾತ್ಯರೊಂದಿಗೆ ಮಾಂಸಸಹಿತ ಅನ್ನವನ್ನು ಉಟಮಾಡುತ್ತೇನೆ.

13119014a ಗೃಹೇಷು ಸುನಿವಾಸೇಷು ಸುಖೇಷು ಶಯನೇಷು ಚ।
13119014c ಪರಾರ್ಧ್ಯೇಷು ಮಹಾಭಾಗ ಸ್ವಪಾಮೀಹ ಸುಪೂಜಿತಃ।।

ಮಹಾಭಾಗ! ವಾಸಮಾಡಲು ಯೋಗ್ಯವಾದ ಮನೆಗಳಲ್ಲಿ ಬಹುಮೂಲ್ಯ ಸುಖ ಶಯನಗಳಲ್ಲಿ ಸುಪೂಜಿತನಾಗಿ ಮಲಗುತ್ತೇನೆ.

13119015a ಸರ್ವೇಷ್ವಪರರಾತ್ರೇಷು ಸೂತಮಾಗಧಬಂದಿನಃ।
13119015c ಸ್ತುವಂತಿ ಮಾಂ ಯಥಾ ದೇವಂ ಮಹೇಂದ್ರಂ ಪ್ರಿಯವಾದಿನಃ।।

ಎಲ್ಲ ಅಪರ ರಾತ್ರಿಗಳಲ್ಲಿ ಸೂತ-ಮಾಗಧ-ಬಂದಿಗಳು ಪ್ರಿಯವಾದಿಗಳು ದೇವ ಮಹೇಂದ್ರನನ್ನು ಹೇಗೋ ಹಾಗೆ ನನ್ನನ್ನು ಸ್ತುತಿಸುತ್ತಾರೆ.

13119016a ಪ್ರಸಾದಾತ್ಸತ್ಯಸಂಧಸ್ಯ ಭವತೋಽಮಿತತೇಜಸಃ।
13119016c ಯದಹಂ ಕೀಟತಾಂ ಪ್ರಾಪ್ಯ ಸಂಪ್ರಾಪ್ತೋ ರಾಜಪುತ್ರತಾಮ್।।

ಸತ್ಯಸಂಧನೂ ಅಮಿತತೇಜಸ್ವಿಯೂ ಆದ ನಿನ್ನ ಪ್ರಸಾದದಿಂದ ಕೀಟತ್ವವನ್ನು ಪಡೆದಿದ್ದ ನಾನು ರಾಜಪುತ್ರತ್ವವನ್ನು ಪಡೆದುಕೊಂಡಿದ್ದೇನೆ.

13119017a ನಮಸ್ತೇಽಸ್ತು ಮಹಾಪ್ರಾಜ್ಞ ಕಿಂ ಕರೋಮಿ ಪ್ರಶಾಧಿ ಮಾಮ್।
13119017c ತ್ವತ್ತಪೋಬಲನಿರ್ದಿಷ್ಟಮಿದಂ ಹ್ಯಧಿಗತಂ ಮಯಾ।।

ಮಹಾಪ್ರಾಜ್ಞ! ನಿನಗೆ ನಮಸ್ಕಾರವು. ನಾನೀಗ ಏನು ಮಾಡಬೇಕು ಎಂದು ಆಜ್ಞಾಪಿಸು. ನಿನ್ನ ತಪೋಬಲದಿಂದಲೇ ನನಗೆ ಈ ಪದವಿಯು ದೊರಕಿದೆಯೆನ್ನುವುದು ನಿರ್ದಿಷ್ಟವಾಗಿದೆ.”

13119018 ವ್ಯಾಸ ಉವಾಚ।
13119018a ಅರ್ಚಿತೋಽಹಂ ತ್ವಯಾ ರಾಜನ್ವಾಗ್ಭಿರದ್ಯ ಯದೃಚ್ಚಯಾ।
13119018c ಅದ್ಯ ತೇ ಕೀಟತಾಂ ಪ್ರಾಪ್ಯ ಸ್ಮೃತಿರ್ಜಾತಾಜುಗುಪ್ಸಿತಾ।।

ವ್ಯಾಸನು ಹೇಳಿದನು: “ರಾಜನ್! ಉತ್ತಮ ಮಾತುಗಳಿಂದ ನೀನು ನನ್ನನ್ನು ಅರ್ಚಿಸಿದ್ದೀಯೆ. ಇಂದು ನಿನಗೆ ಆ ಜುಗುಪ್ಸಿತ ಕೀಟತ್ವದ ಸ್ಮೃತಿಯುಂಟಾಗಿದೆ.

13119019a ನ ತು ನಾಶೋಽಸ್ತಿ ಪಾಪಸ್ಯ ಯತ್ತ್ವಯೋಪಚಿತಂ ಪುರಾ।
13119019c ಶೂದ್ರೇಣಾರ್ಥಪ್ರಧಾನೇನ ನೃಶಂಸೇನಾತತಾಯಿನಾ।।

ಹಿಂದೆ ನೀನು ಶೂದ್ರನಾಗಿ ಧನವನ್ನೇ ಪ್ರಧಾನವನ್ನಾಗಿರಿಸಿಕೊಂಡು ಕ್ರೂರಿ ಪಾಪಿಷ್ಟನಾಗಿ ಮಾಡಿದ ಕರ್ಮಗಳ ಪಾಪವು ನಾಶವಾಗುವುದಿಲ್ಲ.

13119020a ಮಮ ತೇ ದರ್ಶನಂ ಪ್ರಾಪ್ತಂ ತಚ್ಚೈವ ಸುಕೃತಂ ಪುರಾ।
13119020c ತಿರ್ಯಗ್ಯೋನೌ ಸ್ಮ ಜಾತೇನ ಮಮ ಚಾಪ್ಯರ್ಚನಾತ್ತಥಾ।।

ಹಿಂದೆ ನೀನು ಮಾಡಿದ ಸುಕೃತಗಳಿಂದಾಗಿ ತಿರ್ಯಗ್ಯೋನಿಯಲ್ಲಿ ಜನಿಸಿದ್ದರೂ ನಿನಗೆ ನನ್ನ ದರ್ಶನವಾಗಿತ್ತು. ಈಗ ನನ್ನನ್ನು ಅರ್ಚಿಸಿದ್ದೀಯೆ ಕೂಡ.

13119021a ಇತಸ್ತ್ವಂ ರಾಜಪುತ್ರತ್ವಾದ್ ಬ್ರಾಹ್ಮಣ್ಯಂ ಸಮವಾಪ್ಸ್ಯಸಿ।
13119021c ಗೋಬ್ರಾಹ್ಮಣಕೃತೇ ಪ್ರಾಣಾನ್ ಹುತ್ವಾತ್ಮೀಯಾನ್ರಣಾಜಿರೇ।।

ಗೋ-ಬ್ರಾಹ್ಮಣರ ರಕ್ಷಣಾರ್ಥವಾಗಿ ಮಾಡುವ ಯುದ್ಧದಲ್ಲಿ ಪ್ರಾಣಗಳನ್ನು ಆಹುತಿಯನ್ನಾಗಿತ್ತು ನೀನು ರಾಜಪುತ್ರತ್ವದಿಂದ ಬ್ರಾಹ್ಮಣತ್ವವನ್ನು ಪಡೆಯುತ್ತೀಯೆ.

13119022a ರಾಜಪುತ್ರಸುಖಂ ಪ್ರಾಪ್ಯ ಋತೂಂಶ್ಚೈವಾಪ್ತದಕ್ಷಿಣಾನ್।
13119022c ಅಥ ಮೋದಿಷ್ಯಸೇ ಸ್ವರ್ಗೇ ಬ್ರಹ್ಮಭೂತೋಽವ್ಯಯಃ ಸುಖೀ।।

ರಾಜಪುತ್ರನಾಗಿ ಸುಖವನ್ನು ಹೊಂದಿ ಆಪ್ತದಕ್ಷಿಣೆಗಳಿಂದೊಡಗೂಡಿದ ಯಜ್ಞಗಳನ್ನು ಮಾಡಿ ಸ್ವರ್ಗದಲ್ಲಿ ಬ್ರಹ್ಮಭೂತವೂ ಅವ್ಯಯವೂ ಆದ ಸುಖವನ್ನು ಹೊಂದುತ್ತೀಯೆ.

13119023a ತಿರ್ಯಗ್ಯೋನ್ಯಾಃ ಶೂದ್ರತಾಮಭ್ಯುಪೈತಿ ಶೂದ್ರೋ ವೈಶ್ಯತ್ವಂ ಕ್ಷತ್ರಿಯತ್ವಂ ಚ ವೈಶ್ಯಃ।
13119023c ವೃತ್ತಶ್ಲಾಘೀ ಕ್ಷತ್ರಿಯೋ ಬ್ರಾಹ್ಮಣತ್ವಂ ಸ್ವರ್ಗಂ ಪುಣ್ಯಂ ಬ್ರಾಹ್ಮಣಃ ಸಾಧುವೃತ್ತಃ।।

ತಿರ್ಯಗ್ಯೋನಿಯಲ್ಲಿ ಹುಟ್ಟಿದ ಜೀವನು ಮೇಲು-ಮೇಲಿನ ಗತಿಗಳನ್ನು ಹೊಂದಲು ಪ್ರಾರಂಭಿಸಿದಾಗ ಮೊದಲು ಶೂದ್ರತ್ವವನ್ನು ಪಡೆಯುತ್ತಾನೆ. ಶೂದ್ರನು ವೈಶ್ವತ್ವವನ್ನೂ, ವೈಶ್ಯನು ಕ್ಷತ್ರಿಯತ್ವವನ್ನೂ ಪಡೆಯುತ್ತಾನೆ. ಶ್ಲಾಘನೀಯ ವರ್ತನೆಯ ಕ್ಷತ್ರಿಯನು ಬ್ರಾಹ್ಮಣತ್ವವನ್ನು ಪಡೆಯುತ್ತಾನೆ. ಸಾಧುನಡತೆಯ ಬ್ರಾಹ್ಮಣನು ಸ್ವರ್ಗದ ಪುಣ್ಯವನ್ನು ಪಡೆಯುತ್ತಾನೆ.””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಕೀಟೋಪಾಖ್ಯಾನೇ ಏಕೋನವಿಂಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಕೀಟೋಪಾಖ್ಯಾನ ಎನ್ನುವ ನೂರಾಹತ್ತೊಂಭತ್ತನೇ ಅಧ್ಯಾಯವು.


  1. ಹಾಸ್ಯತಿ (ಗೀತಾ ಪ್ರೆಸ್). ↩︎