087: ಶ್ರಾದ್ಧಕಲ್ಪಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 87

ಸಾರ

ಭೀಷ್ಮನು ಯುಧಿಷ್ಠಿರನಿಗೆ ಪ್ರತಿ ತಿಥಿಗಳಲ್ಲಿ ಮಾಡುವ ಶ್ರಾದ್ಧಗಳ ಫಲಗಳನ್ನು ವರ್ಣಿಸುವುದು (1-19).

13087001 ಯುಧಿಷ್ಠಿರ ಉವಾಚ।
13087001a ಚಾತುರ್ವರ್ಣ್ಯಸ್ಯ ಧರ್ಮಾತ್ಮನ್ಧರ್ಮಃ ಪ್ರೋಕ್ತಸ್ತ್ವಯಾನಘ।
13087001c ತಥೈವ ಮೇ ಶ್ರಾದ್ಧವಿಧಿಂ ಕೃತ್ಸ್ನಂ ಪ್ರಬ್ರೂಹಿ ಪಾರ್ಥಿವ।।

ಯುಧಿಷ್ಠಿರನು ಹೇಳಿದನು: “ಅನಘ! ಧರ್ಮಾತ್ಮನ್! ಚಾತುರ್ವಣಗಳ ಧರ್ಮವನ್ನು ನೀನು ಹೇಳಿದ್ದೀಯೆ. ಹಾಗೆಯೇ ಶ್ರಾದ್ದವಿಧಿಯ ಕುರಿತೂ ಸಂಪೂರ್ಣವಾಗಿ ಹೇಳು.”

13087002 ವೈಶಂಪಾಯನ ಉವಾಚ।
13087002a ಯುಧಿಷ್ಠಿರೇಣೈವಮುಕ್ತೋ ಭೀಷ್ಮಃ ಶಾಂತನವಸ್ತದಾ।
13087002c ಇಮಂ ಶ್ರಾದ್ಧವಿಧಿಂ ಕೃತ್ಸ್ನಂ ಪ್ರವಕ್ತುಮುಪಚಕ್ರಮೇ।।

ವೈಶಂಪಾಯನನು ಹೇಳಿದನು: “ಯುಧಿಷ್ಠಿರನು ಹೀಗೆ ಹೇಳಲು ಭೀಷ್ಮ ಶಾಂತನವನು ಈ ಶ್ರಾದ್ಧವಿಧಿಯ ಸಕಲವನ್ನೂ ಹೇಳಲು ಪ್ರಾರಂಭಿಸಿದನು.

13087003 ಭೀಷ್ಮ ಉವಾಚ।
13087003a ಶೃಣುಷ್ವಾವಹಿತೋ ರಾಜನ್ ಶ್ರಾದ್ಧಕಲ್ಪಮಿಮಂ ಶುಭಮ್।
13087003c ಧನ್ಯಂ ಯಶಸ್ಯಂ ಪುತ್ರೀಯಂ ಪಿತೃಯಜ್ಞಂ ಪರಂತಪ।।

ಭೀಷ್ಮನು ಹೇಳೀದನು: “ರಾಜನ್! ಪರಂತಪ! ಶುಭವಾದ, ಧನ್ಯಗೊಳಿಸುವ, ಯಶಸ್ಸನ್ನೂ ಪುತ್ರರನ್ನೂ ನೀಡುವ ಶ್ರಾದ್ಧಕಲ್ಪವೆಂಬ ಈ ಪಿತೃಯಜ್ಞದ ಕುರಿತು ಏಕಾಗ್ರಚಿತ್ತನಾಗಿ ಕೇಳು.

13087004a ದೇವಾಸುರಮನುಷ್ಯಾಣಾಂ ಗಂಧರ್ವೋರಗರಕ್ಷಸಾಮ್।
13087004c ಪಿಶಾಚಕಿಂನರಾಣಾಂ ಚ ಪೂಜ್ಯಾ ವೈ ಪಿತರಃ ಸದಾ।।

ದೇವಾಸುರಮನುಷ್ಯರಿಗೆ ಗಂಧರ್ವೋರಗರಾಕ್ಷಸರಿಗೆ ಮತ್ತು ಪಿಶಾಚಕಿನ್ನರರಿಗೆ ಪಿತೃಗಳು ಸದಾ ಪೂಜ್ಯರೇ.

13087005a ಪಿತೄನ್ಪೂಜ್ಯಾದಿತಃ ಪಶ್ಚಾದ್ದೇವಾನ್ಸಂತರ್ಪಯಂತಿ ವೈ।
13087005c ತಸ್ಮಾತ್ಸರ್ವಪ್ರಯತ್ನೇನ ಪುರುಷಃ ಪೂಜಯೇತ್ಸದಾ।।

ಮೊದಲು ಪಿತೃಗಳನ್ನು ಪೂಜಿಸಿ ನಂತರ ದೇವತೆಗಳನ್ನು ತೃಪ್ತಿಪಡಿಸುತ್ತಾರೆ. ಆದುದರಿಂದ ಪುರುಷನು ಇವರನ್ನು ಸರ್ವಪ್ರಯತ್ನದಿಂದ ಸದಾ ಪೂಜಿಸಬೇಕು.

13087006a ಅನ್ವಾಹಾರ್ಯಂ ಮಹಾರಾಜ ಪಿತೄಣಾಂ ಶ್ರಾದ್ಧಮುಚ್ಯತೇ।
13087006c ತಚ್ಚಾಮಿಷೇಣ1 ವಿಧಿನಾ ವಿಧಿಃ ಪ್ರಥಮಕಲ್ಪಿತಃ।।

ಮಹಾರಾಜ! ಪಿತೃಗಳ ಶ್ರಾದ್ಧವನ್ನು ಅನ್ವಾಹಾರ್ಯ2 ಎಂದು ಹೇಳುತ್ತಾರೆ. ವಿಧಿವತ್ತಾಗಿ ಆಮಿಷ3ಗಳಿಂದ ಈ ವಿಧಿಯನ್ನು ಮೊದಲು ಮಾಡುವ ಸಂಪ್ರದಾಯವಿದೆ.

13087007a ಸರ್ವೇಷ್ವಹಃಸು ಪ್ರೀಯಂತೇ ಕೃತೈಃ ಶ್ರಾದ್ಧೈಃ ಪಿತಾಮಹಾಃ।
13087007c ಪ್ರವಕ್ಷ್ಯಾಮಿ ತು ತೇ ಸರ್ವಾಂಸ್ತಿಥ್ಯಾಂ ತಿಥ್ಯಾಂ ಗುಣಾಗುಣಾನ್।।

ಪ್ರತಿನಿತ್ಯಮಾಡುವ ಶ್ರಾದ್ಧಗಳಿಂದ ಪಿತಾಮಹರು ತೃಪ್ತರಾಗುತ್ತಾರೆ. ಎಲ್ಲ ತಿಥಿಗಳನ್ನೂ ಮತ್ತು ಆಯಾತಿಥಿಗಳ ಗುಣಾಗುಣಗಳನ್ನು ಹೇಳುತ್ತೇನೆ.

13087008a ಯೇಷ್ವಹಃಸು ಕೃತೈಃ ಶ್ರಾದ್ಧೈರ್ಯತ್ಫಲಂ ಪ್ರಾಪ್ಯತೇಽನಘ।
13087008c ತತ್ಸರ್ವಂ ಕೀರ್ತಯಿಷ್ಯಾಮಿ ಯಥಾವತ್ತನ್ನಿಬೋಧ ಮೇ।।

ಅನಘ! ಯಾವ ತಿಥಿಯಲ್ಲಿ ಮಾಡಿದ ಶ್ರಾದ್ಧವು ಯಾವ ಫಲವನ್ನು ಕೊಡುತ್ತದೆ ಎನ್ನುವುದೆಲ್ಲವನ್ನೂ ಯಥಾವತ್ತಾಗಿ ಹೇಳುತ್ತೇನೆ. ಕೇಳು.

13087009a ಪಿತೄನರ್ಚ್ಯ ಪ್ರತಿಪದಿ ಪ್ರಾಪ್ನುಯಾತ್ ಸ್ವಗೃಹೇ ಸ್ತ್ರಿಯಃ।
13087009c ಅಭಿರೂಪಪ್ರಜಾಯಿನ್ಯೋ ದರ್ಶನೀಯಾ ಬಹುಪ್ರಜಾಃ।।

ಪಾಡ್ಯ ಪ್ರತಿಪದಿಯಲ್ಲಿ ಸ್ವಗೃಹದಲ್ಲಿ ಶ್ರಾದ್ಧಮಾಡಿದರೆ ತನ್ನಂತೆಯೇ ಇರುವ ಬಹುಸಂತಾನವುಳ್ಳ ಸುಂದರ ಸ್ತ್ರೀಯನ್ನು ಪಡೆದುಕೊಳ್ಳುತ್ತಾನೆ.

13087010a ಸ್ತ್ರಿಯೋ ದ್ವಿತೀಯಾಂ ಜಾಯಂತೇ ತೃತೀಯಾಯಾಂ ತು ವಂದಿನಃ।
13087010c ಚತುರ್ಥ್ಯಾಂ ಕ್ಷುದ್ರಪಶವೋ ಭವಂತಿ ಬಹವೋ ಗೃಹೇ।।

ದ್ವಿತೀಯ ಬಿದಿಗೆಯಲ್ಲಿ ಶ್ರಾದ್ಧಮಾಡಿದರೆ ಹೆಣ್ಣುಮಕ್ಕಳು ಹುಟ್ಟುತ್ತಾರೆ. ತದಿಗೆಯ ದಿವಸ ಮಾಡಿದರೆ ಮನೆಯಲ್ಲಿ ಅಶ್ವಸಮೃದ್ಧಿಯಾಗುತ್ತದೆ. ಚತುರ್ಥಿಯ ದಿವಸ ಮಾಡಿದರೆ ಸಣ್ಣ-ಸಣ್ಣ ಪ್ರಾಣಿಗಳ ಸಮೃದ್ಧಿಯಾಗುತ್ತದೆ.

13087011a ಪಂಚಮ್ಯಾಂ ಬಹವಃ ಪುತ್ರಾ ಜಾಯಂತೇ ಕುರ್ವತಾಂ ನೃಪ।
13087011c ಕುರ್ವಾಣಾಸ್ತು ನರಾಃ ಷಷ್ಠ್ಯಾಂ ಭವಂತಿ ದ್ಯುತಿಭಾಗಿನಃ।।

ನೃಪ! ಪಂಚಮಿಯಂದು ಮಾಡಿದರೆ ಬಹುಪುತ್ರರು ಜನಿಸುತ್ತಾರೆ. ಷಷ್ಠಿಯಲ್ಲಿ ಮಾಡುವ ನರರು ಕಾಂತಿಯುತರಾಗುತ್ತಾರೆ.

13087012a ಕೃಷಿಭಾಗೀ ಭವೇಚ್ಚ್ರಾದ್ಧಂ ಕುರ್ವಾಣಃ ಸಪ್ತಮೀಂ ನೃಪ।
13087012c ಅಷ್ಟಮ್ಯಾಂ ತು ಪ್ರಕುರ್ವಾಣೋ ವಾಣಿಜ್ಯೇ ಲಾಭಮಾಪ್ನುಯಾತ್।।

ನೃಪ! ಸಪ್ತಮಿಯಂದು ಶ್ರಾದ್ಧವನ್ನು ಮಾಡುವವನು ಕೃಷಿಭಾಗಿ4ಯಾಗುತ್ತಾನೆ. ಅಷ್ಟಮಿಯಂದು ಮಾಡುವವನು ವಾಣಿಜ್ಯದಲ್ಲಿ ಲಾಭವನ್ನು ಪಡೆದುಕೊಳ್ಳುತ್ತಾನೆ.

13087013a ನವಮ್ಯಾಂ ಕುರ್ವತಃ ಶ್ರಾದ್ಧಂ ಭವತ್ಯೇಕಶಫಂ ಬಹು।
13087013c ವಿವರ್ಧಂತೇ ತು ದಶಮೀಂ ಗಾವಃ ಶ್ರಾದ್ಧಾನಿ ಕುರ್ವತಃ।।

ನವಮಿಯಲ್ಲಿ ಶ್ರಾದ್ಧವನ್ನು ಮಾಡುವವನ ಏಕಶಫ5ಗಳು ಅನೇಕವಾಗುತ್ತವೆ. ದಶಮಿಯಲ್ಲಿ ಶ್ರಾದ್ಧವನ್ನು ಮಾಡುವವನ ಗೋವುಗಳು ವೃದ್ಧಿಯಾಗುತ್ತದೆ.

13087014a ಕುಪ್ಯಭಾಗೀ ಭವೇನ್ಮರ್ತ್ಯಃ ಕುರ್ವನ್ನೇಕಾದಶೀಂ ನೃಪ।
13087014c ಬ್ರಹ್ಮವರ್ಚಸ್ವಿನಃ ಪುತ್ರಾ ಜಾಯಂತೇ ತಸ್ಯ ವೇಶ್ಮನಿ।।

ನೃಪ! ಏಕಾದಶಿಯಲ್ಲಿ ಶ್ರಾದ್ಧವನ್ನು ಮಾಡುವ ಮನುಷ್ಯನು ಕುಪ್ಯಭಾಗಿ6ಯಾಗುತ್ತಾನೆ. ಅವನ ಮನೆಯಲ್ಲಿ ಬ್ರಹ್ಮವರ್ಚಸ್ವೀ ಪುತ್ರರು ಹುಟ್ಟುತ್ತಾರೆ.

13087015a ದ್ವಾದಶ್ಯಾಮೀಹಮಾನಸ್ಯ ನಿತ್ಯಮೇವ ಪ್ರದೃಶ್ಯತೇ।
13087015c ರಜತಂ ಬಹು ಚಿತ್ರಂ ಚ ಸುವರ್ಣಂ ಚ ಮನೋರಮಮ್।।

ದ್ವಾದಶಿಯಲ್ಲಿ ಶ್ರಾದ್ಧಮಾಡುವವನಿಗೆ ನಿತ್ಯವೂ ಅನೇಕ ಬೆಳ್ಳಿಯ ಮತ್ತು ಚಿನ್ನಗಳ ಮನೋಹರ ಚಿತ್ರಗಳು ನೋಡದೊರೆಯುತ್ತವೆ.

13087016a ಜ್ಞಾತೀನಾಂ ತು ಭವೇಚ್ಚ್ರೇಷ್ಠಃ ಕುರ್ವನ್ ಶ್ರಾದ್ಧಂ ತ್ರಯೋದಶೀಮ್।

ತ್ರಯೋದಶಿಯಲ್ಲಿ ಶ್ರಾದ್ಧವನ್ನು ಮಾಡಿ ಜ್ಞಾತಿಬಾಂಧವರಲ್ಲಿ ಶ್ರೇಷ್ಠನಾಗಬಹುದು.

13087016c ಅವಶ್ಯಂ ತು ಯುವಾನೋಽಸ್ಯ ಪ್ರಮೀಯಂತೇ ನರಾ ಗೃಹೇ।।
13087017a ಯುದ್ಧಭಾಗೀ ಭವೇನ್ಮರ್ತ್ಯಃ ಶ್ರಾದ್ಧಂ ಕುರ್ವಂಶ್ಚತುರ್ದಶೀಮ್।

ಆದರೆ ಚತುರ್ದಶಿಯಲ್ಲಿ ಶ್ರಾದ್ಧವನ್ನು ಮಾಡುವ ಮನುಷ್ಯನು ಯುದ್ಧಭಾಗಿ7ಯಾಗುತ್ತಾನೆ ಮತ್ತು ಅವನ ಮನೆಯಲ್ಲಿ ಯುವಕರು ಅವಶ್ಯವಾಗಿ ಸಾಯುತ್ತಾರೆ.

13087017c ಅಮಾವಾಸ್ಯಾಂ ತು ನಿವಪನ್ಸರ್ವಾನ್ಕಾಮಾನವಾಪ್ನುಯಾತ್।।

ಅವಾವಾಸ್ಯೆಯಂದು ಮಾಡಿದರಂತೂ ಯಜಮಾನನು ಸರ್ವಕಾಮನೆಗಳನ್ನೂ ಪಡೆದುಕೊಳ್ಳುತ್ತಾನೆ.

13087018a ಕೃಷ್ಣಪಕ್ಷೇ ದಶಮ್ಯಾದೌ ವರ್ಜಯಿತ್ವಾ ಚತುರ್ದಶೀಮ್।
13087018c ಶ್ರಾದ್ಧಕರ್ಮಣಿ ತಿಥ್ಯಃ ಸ್ಯುಃ ಪ್ರಶಸ್ತಾ ನ ತಥೇತರಾಃ।।

ಕೃಷ್ಣಪಕ್ಷದಲ್ಲಿ ಚತುರ್ದಶಿಯನ್ನು ಬಿಟ್ಟು ದಶಮಿಯಿಂದ ಅಮವಾಸ್ಯೆಯವರೆಗಿನ ತಿಥಿ ಶ್ರಾದ್ಧಗಳು ಬಹಳ ಪ್ರಶಸ್ತವಾಗಿವೆ. ಇತರ ತಿಥಿಶ್ರಾದ್ಧಗಳು8 ಅಷ್ಟೊಂದು ಪ್ರಶಸ್ತವಲ್ಲ.

13087019a ಯಥಾ ಚೈವಾಪರಃ ಪಕ್ಷಃ ಪೂರ್ವಪಕ್ಷಾದ್ವಿಶಿಷ್ಯತೇ।
13087019c ತಥಾ ಶ್ರಾದ್ಧಸ್ಯ ಪೂರ್ವಾಹ್ಣಾದಪರಾಹ್ಣೋ ವಿಶಿಷ್ಯತೇ।।

ಹೇಗೆ ಶ್ರಾದ್ಧಗಳಿಗೆ ಪೂರ್ವಪಕ್ಷ9ಕ್ಕಿಂತ ಅಪರಪಕ್ಷ10ವು ಶ್ರೇಷ್ಠವೋ ಹಾಗೆ ಶ್ರಾದ್ಧಕ್ಕೆ ಪೂರ್ವಾಹ್ಣ11ಕ್ಕಿಂತಲೂ ಅಪರಾಹ್ಣ12ವು ಶ್ರೇಷ್ಠವು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಶ್ರಾದ್ಧಕಲ್ಪೇ ಸಪ್ತಾಶೀತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಶ್ರಾದ್ಧಕಲ್ಪ ಎನ್ನುವ ಎಂಭತ್ತೇಳನೇ ಅಧ್ಯಾಯವು.


  1. ತಸ್ಮಾದ್ವಿಶೇಷವಿಧಿನಾ (ಗೀತಾ ಪ್ರೆಸ್, ಸಂಪುಟ 6). ↩︎

  2. ಮಾಸಿಕ ಶ್ರಾದ್ಧ, ಪ್ರತಿತಿಂಗಳೂ ಮಾಡುವ ಶ್ರಾದ್ಧ, ಅಮವಾಸ್ಯೆ ಮಾಡುವ ಶ್ರಾದ್ಧ (ಸಂಸ್ಕೃತ-ಕನ್ನಡ ನಿಘಂಟು: ಜಿ. ಎನ್. ಚಕ್ರವರ್ತಿ, 2009). ↩︎

  3. ಮಾಂಸ, ಭೋಗ್ಯ ವಸ್ತು, ಸುಖಸಾಮಗ್ರಿ (ಸಂಸ್ಕೃತ-ಕನ್ನಡ ನಿಘಂಟು: ಜಿ. ಎನ್. ಚಕ್ರವರ್ತಿ, 2009). ↩︎

  4. ಕೃಷಿಯಲ್ಲಿ ಲಾಭ (ಭಾರತ ದರ್ಶನ). ↩︎

  5. ಒಂದೇ ಗೊರಸಿರುವ ಕುದುರೆ ಮೊದಲಾದ ಪ್ರಾಣಿಗಳು (ಭಾರತ ದರ್ಶನ). ↩︎

  6. ಬೆಳ್ಳಿ-ಚಿನ್ನಗಳನ್ನು ಬಿಟ್ಟು ಉಳಿದ ಲೋಹಗಳ ಸಮೃದ್ಧಿ (ಭಾರತ ದರ್ಶನ). ↩︎

  7. ತಾನೂಕೂಡ ಯುದ್ಧದಲ್ಲಿ ಭಾಗವಹಿಸಬೇಕಾಗುತ್ತದೆ (ಭಾರತ ದರ್ಶನ). ↩︎

  8. ಪಾಡ್ಯದಿಂದ ನವಮಿಯ ವರೆಗಿನ ಶ್ರಾದ್ಧಗಳು (ಭಾರತ ದರ್ಶನ). ↩︎

  9. ಶುಕ್ಲಪಕ್ಷದ ಇನ್ನೊಂದು ಹೆಸರು ↩︎

  10. ಕೃಷ್ಣಪಕ್ಷದ ಇನ್ನೊಂದು ಹೆಸರು ↩︎

  11. ಸೂರ್ಯೋದಯದಿಂದ ಮಧ್ಯಾಹ್ನದವರೆಗೆ ↩︎

  12. ಮಧ್ಯಾಹ್ನದಿಂದ ಸೂರ್ಯಾಸ್ತದವರೆಗೆ ↩︎