ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 263
ಸಾರ
ಅರ್ಥ-ಕಾಮಗಳ ಭೋಗಕ್ಕಿಂತಲೂ ಧರ್ಮ-ತಪಸ್ಸುಗಳ ಉತ್ಕರ್ಷವನ್ನು ಪ್ರತಿಪಾದಿಸುವ ಬ್ರಾಹ್ಮಣ ಮತ್ತು ಕುಂಡಧಾರ ಮೇಘನ ಉಪಾಖ್ಯಾನ (1-55).
12263001 ಯುಧಿಷ್ಠಿರ ಉವಾಚ।
12263001a ಧರ್ಮಮರ್ಥಂ ಚ ಕಾಮಂ ಚ ವೇದಾಃ ಶಂಸಂತಿ ಭಾರತ।
12263001c ಕಸ್ಯ ಲಾಭೋ ವಿಶಿಷ್ಟೋಽತ್ರ ತನ್ಮೇ ಬ್ರೂಹಿ ಪಿತಾಮಹ।।
ಯುಧಿಷ್ಠಿರನು ಹೇಳಿದನು: “ಭಾರತ! ಪಿತಾಮಹ! ವೇದಗಳು ಧರ್ಮ, ಅರ್ಥ ಮತ್ತು ಕಾಮಗಳನ್ನು ಪ್ರಶಂಸಿಸುತ್ತವೆ. ಇವುಗಳಲ್ಲಿ ಯಾವುದನ್ನು ಪಡೆಯುವುದು ವಿಶಿಷ್ಟವು ಎನ್ನುವುದನ್ನು ನನಗೆ ಹೇಳು.”
12263002 ಭೀಷ್ಮ ಉವಾಚ।
12263002a ಅತ್ರ ತೇ ವರ್ತಯಿಷ್ಯಾಮಿ ಇತಿಹಾಸಂ ಪುರಾತನಮ್।
12263002c ಕುಂಡಧಾರೇಣ ಯತ್ ಪ್ರೀತ್ಯಾ ಭಕ್ತಾಯೋಪಕೃತಂ ಪುರಾ।।
ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಕುಂಡಧಾರನು ಹಿಂದೆ ತನ್ನ ಭಕ್ತನಿಗೆ ಪ್ರೀತಿಯಿಂದ ಮಾಡಿದ ಉಪಕಾರವನ್ನು ವರ್ಣಿಸುತ್ತೇನೆ.
12263003a ಅಧನೋ ಬ್ರಾಹ್ಮಣಃ ಕಶ್ಚಿತ್ಕಾಮಾದ್ಧರ್ಮಮವೈಕ್ಷತ।
12263003c ಯಜ್ಞಾರ್ಥಂ ಸ ತತೋಽರ್ಥಾರ್ಥೀ ತಪೋಽತಪ್ಯತ ದಾರುಣಮ್।।
ಹಿಂದೊಮ್ಮೆ ದರಿದ್ರ ಬ್ರಾಹ್ಮಣನೊಬ್ಬನು ಸಕಾಮನೆಯಿಂದ ಧರ್ಮಕಾರ್ಯವನ್ನು ಮಾಡಲು ಬಯಸಿ ಯಜ್ಞಕ್ಕಾಗಿ ಧನವನ್ನು ಅಪೇಕ್ಷಿಸಿ ಧನಕ್ಕಾಗಿ ದಾರುಣ ತಪಸ್ಸನ್ನು ತಪಿಸಿದನು.
12263004a ಸ ನಿಶ್ಚಯಮಥೋ ಕೃತ್ವಾ ಪೂಜಯಾಮಾಸ ದೇವತಾಃ।
12263004c ಭಕ್ತ್ಯಾ ನ ಚೈವಾಧ್ಯಗಚ್ಚದ್ಧನಂ ಸಂಪೂಜ್ಯ ದೇವತಾಃ।।
ಹೀಗೆ ನಿಶ್ಚಯಿಸಿ ಅವನು ದೇವತೆಗಳನ್ನು ಪೂಜಿಸಿದನು. ಭಕ್ತಿಯಿಂದ ಪೂಜಿಸಿದರೂ ಅವನಿಗೆ ಬೇಕಾದ ಧನವು ದೊರೆಯಲಿಲ್ಲ.
12263005a ತತಶ್ಚಿಂತಾಂ ಪುನಃ ಪ್ರಾಪ್ತಃ ಕತಮದ್ದೈವತಂ ನು ತತ್।
12263005c ಯನ್ಮೇ ದ್ರುತಂ ಪ್ರಸೀದೇತ ಮಾನುಷೈರಜಡೀಕೃತಮ್।।
ಆಗ ಚಿಂತಾಕುಲನಾದ ಅವನು “ಮನುಷ್ಯರಿಂದ ಜಡತ್ವವನ್ನು ನೀಗಿಕೊಂಡ ಯಾವುದಾದರೂ ದೇವತೆಯು ಬೇಗನೇ ನನಗೆ ಪ್ರಸನ್ನವಾಗಲಿ!” ಎಂದು ಪ್ರಾರ್ಥಿಸಿಕೊಂಡನು.
12263006a ಅಥ ಸೌಮ್ಯೇನ ವಪುಷಾ ದೇವಾನುಚರಮಂತಿಕೇ।
12263006c ಪ್ರತ್ಯಪಶ್ಯಜ್ಜಲಧರಂ ಕುಂಡಧಾರಮವಸ್ಥಿತಮ್।।
ಕೂಡಲೇ ಅವನು ಸೌಮ್ಯ ರೂಪದ ದೇವಾನುಚರ ಕುಂಡಧಾರ ಎಂಬ ಮೇಘನು ಹತ್ತಿರ ನಿಂತಿರುವುದನ್ನು ನೋಡಿದನು.
12263007a ದೃಷ್ಟ್ವೈವ ತಂ ಮಹಾತ್ಮಾನಂ ತಸ್ಯ ಭಕ್ತಿರಜಾಯತ।
12263007c ಅಯಂ ಮೇ ಧಾಸ್ಯತಿ ಶ್ರೇಯೋ ವಪುರೇತದ್ಧಿ ತಾದೃಶಮ್।।
ಆ ಮಹಾತ್ಮನನ್ನು ನೋಡಿದೊಡನೆಯೇ ಅವನ ಮೇಲಿನ ಭಕ್ತಿಯು ಹೆಚ್ಚಾಯಿತು. “ಇವನು ನನಗೆ ಶ್ರೇಯಸ್ಸನ್ನು ನೀಡುತ್ತಾನೆ. ಇವನ ಶರೀರವೇ ಅಂಥಹ ಲಕ್ಷಣಗಳಿಂದ ಕೂಡಿದೆ.
12263008a ಸಂನಿಕೃಷ್ಟಶ್ಚ ದೇವಸ್ಯ ನ ಚಾನ್ಯೈರ್ಮಾನುಷೈರ್ವೃತಃ।
12263008c ಏಷ ಮೇ ದಾಸ್ಯತಿ ಧನಂ ಪ್ರಭೂತಂ ಶೀಘ್ರಮೇವ ಚ।।
ಅಲ್ಲದೇ ಈ ದೇವನು ಸಮೀಪದಲ್ಲಿಯೇ ಇದ್ದಾನೆ. ಅನ್ಯ ಮನುಷ್ಯರಿಂದ ಸುತ್ತುವರೆಯಲ್ಪಟ್ಟಿಲ್ಲ. ಇವನು ನನಗೆ ಶೀಘ್ರದಲ್ಲಿಯೇ ಅಪಾರ ಧನವನ್ನು ನೀಡುತ್ತಾನೆ.”
12263009a ತತೋ ಧೂಪೈಶ್ಚ ಗಂಧೈಶ್ಚ ಮಾಲ್ಯೈರುಚ್ಚಾವಚೈರಪಿ।
12263009c ಬಲಿಭಿರ್ವಿವಿಧೈಶ್ಚಾಪಿ ಪೂಜಯಾಮಾಸ ತಂ ದ್ವಿಜಃ।।
ಹೀಗೆ ಯೋಚಿಸಿ ಆ ದ್ವಿಜನು ಧೂಪಗಳು, ಗಂಧಗಳು, ಚಿಕ್ಕ-ದೊಡ್ಡ ಮಾಲೆಗಳು, ಮತ್ತು ವಿವಿಧ ನೈವೇದ್ಯಗಳಿಂದ ಅವನನ್ನು ಪೂಜಿಸಿದನು.
12263010a ತತಃ ಸ್ವಲ್ಪೇನ ಕಾಲೇನ ತುಷ್ಟೋ ಜಲಧರಸ್ತದಾ।
12263010c ತಸ್ಯೋಪಕಾರೇ ನಿಯತಾಮಿಮಾಂ ವಾಚಮುವಾಚ ಹ।।
ಅಲ್ಪಕಾಲದಲ್ಲಿಯೇ ಜಲಧರನು ತುಷ್ಟನಾದನು. ತಾನು ಅವನಿಗೆ ಉಪಕಾರ ಮಾಡುತ್ತೇನೆ ಎಂದು ಸೂಚಿಸುವ ಈ ಮಾತನ್ನಾಡಿದನು:
12263011a ಬ್ರಹ್ಮಘ್ನೇ ಚ ಸುರಾಪೇ ಚ ಚೋರೇ ಭಗ್ನವ್ರತೇ ತಥಾ।
12263011c ನಿಷ್ಕೃತಿರ್ವಿಹಿತಾ ಸದ್ಭಿಃ ಕೃತಘ್ನೇ ನಾಸ್ತಿ ನಿಷ್ಕೃತಿಃ।।
“ಬ್ರಹ್ಮಘ್ನನಿಗೆ, ಸುರಾಪಾನ ಮಾಡಿದವನಿಗೆ, ಕಳ್ಳನಿಗೆ, ವ್ರತವನ್ನು ಮುರಿದವನಿಗೆ ಸತ್ಪುರುಷರು ಪ್ರಾಯಶ್ಚಿತ್ತವನ್ನು ಹೇಳಿದ್ದಾರೆ. ಆದರೆ ಕೃತಘ್ನನಿಗೆ ಪ್ರಾಯಶ್ಚಿತ್ತವೇ ಇಲ್ಲ.
12263012a ಆಶಾಯಾಸ್ತನಯೋಽಧರ್ಮಃ ಕ್ರೋಧೋಽಸೂಯಾಸುತಃ ಸ್ಮೃತಃ।
12263012c ಪುತ್ರೋ ಲೋಭೋ ನಿಕೃತ್ಯಾಸ್ತು ಕೃತಘ್ನೋ ನಾರ್ಹತಿ ಪ್ರಜಾಮ್।।
ಅಧರ್ಮನು ಆಸೆಯ ಮಗ ಮತ್ತು ಕ್ರೋಧನು ಅಸೂಯೆಯ ಮಗ ಎಂದು ಹೇಳಿದ್ದಾರೆ. ಲೋಭನು ಪೀಡೆಯ ಮಗನು. ಆದರೆ ಕೃತಘ್ನನು ಸಂತಾನವನ್ನು ಪಡೆಯಲು ಯೋಗ್ಯನೇ ಅಲ್ಲ.”
12263013a ತತಃ ಸ ಬ್ರಾಹ್ಮಣಃ ಸ್ವಪ್ನೇ ಕುಂಡಧಾರಸ್ಯ ತೇಜಸಾ।
12263013c ಅಪಶ್ಯತ್ಸರ್ವಭೂತಾನಿ ಕುಶೇಷು ಶಯಿತಸ್ತದಾ।।
ಅನಂತರ ಕುಂಡಧಾರನು ತನ್ನ ತೇಜಸ್ಸಿನಿಂದ ಆ ಬ್ರಾಹ್ಮಣನನ್ನು ಕುಶಗಳ ಮೇಲೆ ಮಲಗಿಸಿ ಅವನಿಗೆ ಸರ್ವಭೂತಗಳನ್ನೂ ತೋರಿಸಿದನು.
12263014a ಶಮೇನ ತಪಸಾ ಚೈವ ಭಕ್ತ್ಯಾ ಚ ನಿರುಪಸ್ಕೃತಃ।
12263014c ಶುದ್ಧಾತ್ಮಾ ಬ್ರಾಹ್ಮಣೋ ರಾತ್ರೌ ನಿದರ್ಶನಮಪಶ್ಯತ।।
ಶಾಂತಿ, ತಪಸ್ಸು ಮತ್ತು ಭಕ್ತಿಸಂಪನ್ನನಾಗಿದ್ದ ಆ ಶುದ್ಧಾತ್ಮ ಬ್ರಾಹ್ಮಣನು ರಾತ್ರಿಯಲ್ಲಿ ಈ ನಿದರ್ಶನವನ್ನು ಕಂಡನು.
12263015a ಮಣಿಭದ್ರಂ ಸ ತತ್ರಸ್ಥಂ ದೇವತಾನಾಂ ಮಹಾದ್ಯುತಿಮ್।
12263015c ಅಪಶ್ಯತ ಮಹಾತ್ಮಾನಂ ವ್ಯಾದಿಶಂತಂ ಯುಧಿಷ್ಠಿರ।।
ಯುಧಿಷ್ಠಿರ! ಸ್ವಪ್ನದಲ್ಲಿ ಅವನು ಮಹಾದ್ಯುತಿ ಮಣಿಭದ್ರನು ಅಲ್ಲಿದ್ದ ಮಹಾತ್ಮಾ ದೇವತೆಗಳಿಗೆ ಆದೇಶನೀಡುತ್ತಿದ್ದುದನ್ನು ಕಂಡನು.
12263016a ತತ್ರ ದೇವಾಃ ಪ್ರಯಚ್ಚಂತಿ ರಾಜ್ಯಾನಿ ಚ ಧನಾನಿ ಚ।
12263016c ಶುಭೈಃ ಕರ್ಮಭಿರಾರಬ್ಧಾಃ ಪ್ರಚ್ಚಿದಂತ್ಯಶುಭೇಷು ಚ।।
ಅಲ್ಲಿ ದೇವತೆಗಳು ಶುಭಕರ್ಮಿಗಳಿಗೆ ರಾಜ್ಯ-ಧನಗಳನ್ನು ಕೊಡುತ್ತಿದ್ದರು. ಮತ್ತು ಅಶುಭಕರ್ಮಿಗಳಿಂದ ಅವುಗಳನ್ನು ಹಿಂತೆಗೆದುಕೊಳ್ಳುತ್ತಿದ್ದರು.
12263017a ಪಶ್ಯತಾಮಥ ಯಕ್ಷಾಣಾಂ ಕುಂಡಧಾರೋ ಮಹಾದ್ಯುತಿಃ।
12263017c ನಿಷ್ಪತ್ಯ ಪತಿತೋ ಭೂಮೌ ದೇವಾನಾಂ ಭರತರ್ಷಭ।।
ಭರತರ್ಷಭ! ಆಗ ಮಣಿಭದ್ರನು ಯಕ್ಷರ ಮಧ್ಯದಲ್ಲಿ ಮಹಾದ್ಯುತಿ ಕುಂಡಧಾರನು ದೇವತೆಗಳ ಎದಿರು ಭೂಮಿಯ ಮೇಲೆ ಬಿದ್ದು ನಮಸ್ಕರಿಸಿದುದನ್ನು ನೋಡಿದನು.
12263018a ತತಸ್ತು ದೇವವಚನಾನ್ಮಣಿಭದ್ರೋ ಮಹಾಯಶಾಃ।
12263018c ಉವಾಚ ಪತಿತಂ ಭೂಮೌ ಕುಂಡಧಾರ ಕಿಮಿಷ್ಯತೇ।।
ಆಗ ದೇವತೆಗಳ ಮಾತಿನಂತೆ ಮಹಾಯಶಸ್ವೀ ಮಣಿಭದ್ರನು ಭೂಮಿಯ ಮೇಲೆ ಬಿದ್ದಿದ್ದ ಕುಂಡಧಾರನಿಗೆ “ನಿನಗೇನು ಬೇಕು?” ಎಂದು ಕೇಳಿದನು.
12263019 ಕುಂಡಧಾರ ಉವಾಚ।
12263019a ಯದಿ ಪ್ರಸನ್ನಾ ದೇವಾ ಮೇ ಭಕ್ತೋಽಯಂ ಬ್ರಾಹ್ಮಣೋ ಮಮ।
12263019c ಅಸ್ಯಾನುಗ್ರಹಮಿಚ್ಚಾಮಿ ಕೃತಂ ಕಿಂ ಚಿತ್ಸುಖೋದಯಮ್।।
ಕುಂಡಧಾರನು ಹೇಳಿದನು: “ದೇವತೆಗಳೇ! ಒಂದುವೇಳೆ ನೀವು ನನ್ನ ಮೇಲೆ ಪ್ರಸನ್ನರಾಗಿದ್ದೀರಿ ಎಂದಾದರೆ ನನ್ನ ಈ ಬ್ರಾಹ್ಮಣ ಭಕ್ತನೊಬ್ಬನಿದ್ದಾನೆ. ಅವನಿಗೆ ಅನುಗ್ರಹಿಸಬೇಕೆಂದು ಬಯಸುತ್ತೇನೆ. ಅವನಿಗೆ ಏನಾದರೂ ಸುಖವಾಗುವಂತೆ ಮಾಡಬೇಕು.””
12263020 ಭೀಷ್ಮ ಉವಾಚ।
12263020a ತತಸ್ತಂ ಮಣಿಭದ್ರಸ್ತು ಪುನರ್ವಚನಮಬ್ರವೀತ್।
12263020c ದೇವಾನಾಮೇವ ವಚನಾತ್ಕುಂಡಧಾರಂ ಮಹಾದ್ಯುತಿಮ್।।
ಭೀಷ್ಮನು ಹೇಳಿದನು: “ದೇವತೆಗಳ ಮಾತಿನಂತೆಯೇ ಪುನಃ ಮಣಿಭದ್ರನು ಮಹಾದ್ಯುತಿ ಕುಂಡಧಾರನಿಗೆ ಈ ಮಾತನ್ನಾಡಿದನು:
12263021a ಉತ್ತಿಷ್ಠೋತ್ತಿಷ್ಠ ಭದ್ರಂ ತೇ ಕೃತಕಾರ್ಯಃ ಸುಖೀ ಭವ।
12263021c ಯಾವದ್ಧನಂ ಪ್ರಾರ್ಥಯತೇ ಬ್ರಾಹ್ಮಣೋಽಯಂ ಸಖಾ ತವ।
12263021e ದೇವಾನಾಂ ಶಾಸನಾತ್ತಾವದಸಂಖ್ಯೇಯಂ ದದಾಮ್ಯಹಮ್।।
“ಏಳು! ಮೇಲೇಳು! ನಿನಗೆ ಮಂಗಳವಾಗಲಿ! ಕೃತಾರ್ಥನಾಗಿ ಸುಖಿಯಾಗು. ನಿನ್ನ ಸಖನಾದ ಈ ಬ್ರಾಹ್ಮಣನು ಎಷ್ಟು ಧನವನ್ನು ಪ್ರಾರ್ಥಿಸುತ್ತಿದ್ದಾನೋ ಅಥವಾ ಅಸಂಖ್ಯವಾದ ಧನವನ್ನು ದೇವತೆಗಳ ಶಾಸನದಂತೆ ನಾನು ನೀಡುತ್ತೇನೆ.”
12263022a ವಿಚಾರ್ಯ ಕುಂಡಧಾರಸ್ತು ಮಾನುಷ್ಯಂ ಚಲಮಧ್ರುವಮ್।
12263022c ತಪಸೇ ಮತಿಮಾಧತ್ತ ಬ್ರಾಹ್ಮಣಸ್ಯ ಯಶಸ್ವಿನಃ।।
ಕುಂಡಧಾರನಾದರೋ ಮನುಷ್ಯರ ಚಂಚಲತ್ವ ಮತ್ತು ಅಶಾಶ್ವತೆಯನ್ನು ವಿಚಾರಿಸಿ ಬ್ರಾಹ್ಮಣನ ತಪಸ್ಸನ್ನು ಹೆಚ್ಚಿಸಲು ನಿಶ್ಚಯಿಸಿದನು.
12263023 ಕುಂಡಧಾರ ಉವಾಚ।
12263023a ನಾಹಂ ಧನಾನಿ ಯಾಚಾಮಿ ಬ್ರಾಹ್ಮಣಾಯ ಧನಪ್ರದ।
12263023c ಅನ್ಯಮೇವಾಹಮಿಚ್ಚಾಮಿ ಭಕ್ತಾಯಾನುಗ್ರಹಂ ಕೃತಮ್।।
ಕುಂಡಧಾರನು ಹೇಳಿದನು: “ಧನಪ್ರದ! ಬ್ರಾಹ್ಮಣನಿಗಾಗಿ ನಾನು ಧನವನ್ನು ಯಾಜಿಸುತ್ತಿಲ್ಲ. ಆ ಭಕ್ತನಿಗೆ ಅನುಗ್ರಹವಾಗುವಂತೆ ಬೇರೆ ಏನನ್ನಾದರೂ ಮಾಡ ಬಯಸುತ್ತೇನೆ.
12263024a ಪೃಥಿವೀಂ ರತ್ನಪೂರ್ಣಾಂ ವಾ ಮಹದ್ವಾ ಧನಸಂಚಯಮ್।
12263024c ಭಕ್ತಾಯ ನಾಹಮಿಚ್ಚಾಮಿ ಭವೇದೇಷ ತು ಧಾರ್ಮಿಕಃ।।
ರತ್ನಪೂರ್ಣ ಭೂಮಿಯನ್ನಾಗಲೀ, ಮಹಾ ಧನಸಂಚಯವನ್ನಾಗಲೀ ಈ ಭಕ್ತನಿಗೆ ಕೊಡಲು ಇಚ್ಛಿಸುವುದಿಲ್ಲ. ಇವನು ಧಾರ್ಮಿಕನಾಗಿಯೇ ಇರಲಿ.
12263025a ಧರ್ಮೇಽಸ್ಯ ರಮತಾಂ ಬುದ್ಧಿರ್ಧರ್ಮಂ ಚೈವೋಪಜೀವತು।
12263025c ಧರ್ಮಪ್ರಧಾನೋ ಭವತು ಮಮೈಷೋಽನುಗ್ರಹೋ ಮತಃ।।
ಇವನ ಬುದ್ಧಿಯು ಧರ್ಮದಲ್ಲಿಯೇ ರಮಿಸಲಿ. ಇವನು ಧರ್ಮದಿಂದಲೇ ಜೀವನವನ್ನು ನಡೆಸಲಿ. ಇವನಿಗೆ ಧರ್ಮವೇ ಪ್ರಧಾನವಾಗಿರಲಿ. ಇದನ್ನು ಅನುಗ್ರಹಿಸಬೇಕೆಂದು ನನಗನ್ನಿಸುತ್ತದೆ.”
12263026 ಮಣಿಭದ್ರ ಉವಾಚ।
12263026a ಯದಾ ಧರ್ಮಫಲಂ ರಾಜ್ಯಂ ಸುಖಾನಿ ವಿವಿಧಾನಿ ಚ।
12263026c ಫಲಾನ್ಯೇವಾಯಮಶ್ನಾತು ಕಾಯಕ್ಲೇಶವಿವರ್ಜಿತಃ।।
ಮಣಿಭದ್ರನು ಹೇಳಿದನು: “ರಾಜ್ಯ ಮತ್ತು ವಿವಿಧ ಸುಖಗಳು ಧರ್ಮಫಲವೇ ಆಗಿರುವುದರಿಂದ ಅವನು ಕಾಯಕ್ಲೇಶಗಳಿಲ್ಲದ ಈ ಫಲಗಳನ್ನೇ ಅನುಭವಿಸಲಿ.””
12263027 ಭೀಷ್ಮ ಉವಾಚ।
12263027a ತತಸ್ತದೇವ ಬಹುಶಃ ಕುಂಡಧಾರೋ ಮಹಾಯಶಾಃ।
12263027c ಅಭ್ಯಾಸಮಕರೋದ್ಧರ್ಮೇ ತತಸ್ತುಷ್ಟಾಸ್ಯ ದೇವತಾಃ।।
ಭೀಷ್ಮನು ಹೇಳಿದನು: “ಅನಂತರವೂ ಮಹಾಯಶಸ್ವೀ ಕುಂಡಧಾರನು ಬ್ರಾಹ್ಮಣನಿಗೆ ಧರ್ಮದ ಅಭ್ಯಾಸಮಾಡಿಸಲು ಅನೇಕ ಬಾರಿ ಕೇಳಿಕೊಳ್ಳಲು ದೇವತೆಗಳು ಅದರಿಂದ ತುಷ್ಟರಾದರು.
12263028 ಮಣಿಭದ್ರ ಉವಾಚ।
12263028a ಪ್ರೀತಾಸ್ತೇ ದೇವತಾಃ ಸರ್ವಾ ದ್ವಿಜಸ್ಯಾಸ್ಯ ತಥೈವ ಚ।
12263028c ಭವಿಷ್ಯತ್ಯೇಷ ಧರ್ಮಾತ್ಮಾ ಧರ್ಮೇ ಚಾಧಾಸ್ಯತೇ ಮತಿಃ।।
ಮಣಿಭದ್ರನು ಹೇಳಿದನು: “ನಿನ್ನ ಮತ್ತು ಬ್ರಾಹ್ಮಣನ ವಿಷಯದಲ್ಲಿ ದೇವತೆಗಳು ಸುಪ್ರೀತರಾಗಿದ್ದಾರೆ. ಇವನು ಧರ್ಮಾತ್ಮನಾಗುತ್ತಾನೆ ಮತ್ತು ಇವನ ಬುದ್ಧಿಯು ಧರ್ಮದಲ್ಲಿಯೇ ಸ್ಥಿರವಾಗಿರುತ್ತದೆ.””
12263029 ಭೀಷ್ಮ ಉವಾಚ।
12263029a ತತಃ ಪ್ರೀತೋ ಜಲಧರಃ ಕೃತಕಾರ್ಯೋ ಯುಧಿಷ್ಠಿರ।
12263029c ಈಪ್ಸಿತಂ ಮನಸೋ ಲಬ್ಧ್ವಾ ವರಮನ್ಯೈಃ ಸುದುರ್ಲಭಮ್।।
ಭೀಷ್ಮನು ಹೇಳಿದನು: “ಯುಧಿಷ್ಠಿರ! ನಂತರ ಮೇಘ ಕುಂಡಧಾರನು ಅನ್ಯರಿಗೆ ತುಂಬಾ ದುರ್ಲಭವಾಗಿದ್ದ ಮತ್ತು ಮನಸ್ಸಿನಲ್ಲಿ ಬಯಸಿದ್ದ ವರವನ್ನು ಪಡೆದು ಕಾರ್ಯಸಿದ್ಧಿಯಾಯಿತೆಂದು ಪ್ರೀತನಾದನು.
12263030a ತತೋಽಪಶ್ಯತ ಚೀರಾಣಿ ಸೂಕ್ಷ್ಮಾಣಿ ದ್ವಿಜಸತ್ತಮಃ।
12263030c ಪಾರ್ಶ್ವತೋಽಭ್ಯಾಗತೋ ನ್ಯಸ್ತಾನ್ಯಥ ನಿರ್ವೇದಮಾಗತಃ।।
ಆಗ ಎಚ್ಚೆತ್ತ ದ್ವಿಜಸತ್ತಮನು ಸೂಕ್ಷ್ಮ ನಾರುಬಟ್ಟೆಗಳನ್ನು ನೋಡಿದನು. ಅಕ್ಕಪಕ್ಕದಲ್ಲಿರಿಸಿದ್ದ ಅವುಗಳನ್ನು ನೋಡಿ ಅವನಿಗೆ ಕೂಡಲೇ ವೈರಾಗ್ಯವುಂಟಾಯಿತು.
12263031 ಬ್ರಾಹ್ಮಣ ಉವಾಚ।
12263031a ಅಯಂ ನ ಸುಕೃತಂ ವೇತ್ತಿ ಕೋ ನ್ವನ್ಯೋ ವೇತ್ಸ್ಯತೇ ಕೃತಮ್।
12263031c ಗಚ್ಚಾಮಿ ವನಮೇವಾಹಂ ವರಂ ಧರ್ಮೇಣ ಜೀವಿತುಮ್।।
ಬ್ರಾಹ್ಮಣನು ಹೇಳಿದನು: “ಇವನೇ ನನ್ನ ಸುಕೃತಗಳನ್ನು ತಿಳಿಯದೇ ಇದ್ದ ಮೇಲೆ ಬೇರೆ ಯಾರು ತಾನೇ ನನ್ನ ಕೃತ್ಯಗಳನ್ನು ತಿಳಿದುಕೊಂಡಾರು? ನಾನು ವನಕ್ಕೆ ಹೋಗುತ್ತೇನೆ ಮತ್ತು ಶ್ರೇಷ್ಠ ಧರ್ಮದಿಂದ ಜೀವಿಸುತ್ತೇನೆ.””
12263032 ಭೀಷ್ಮ ಉವಾಚ।
12263032a ನಿರ್ವೇದಾದ್ದೇವತಾನಾಂ ಚ ಪ್ರಸಾದಾತ್ಸ ದ್ವಿಜೋತ್ತಮಃ।
12263032c ವನಂ ಪ್ರವಿಶ್ಯ ಸುಮಹತ್ತಪ ಆರಬ್ಧವಾಂಸ್ತದಾ।।
ಭೀಷ್ಮನು ಹೇಳಿದನು: “ಆ ದ್ವಿಜೋತ್ತಮನು ವನವನ್ನು ಪ್ರವೇಶಿಸಿ ಮಹಾ ತಪಸ್ಸನ್ನು ಆರಂಭಿಸಿದನು. ವೈರಾಗ್ಯದಿಂದ ದೇವತೆಗಳನ್ನು ಪ್ರಸನ್ನಗೊಳಿಸಿದನು.
12263033a ದೇವತಾತಿಥಿಶೇಷೇಣ ಫಲಮೂಲಾಶನೋ ದ್ವಿಜಃ।
12263033c ಧರ್ಮೇ ಚಾಪಿ ಮಹಾರಾಜ ರತಿರಸ್ಯಾಭ್ಯಜಾಯತ।।
ಮಹಾರಾಜ! ದೇವತೆಗಳು ಮತ್ತು ಅತಿಥಿಗಳಿಗೆ ಅರ್ಪಿಸಿ ಉಳಿದ ಫಲಮೂಲಗಳನ್ನೇ ತಿನ್ನುತ್ತಾ ಇದ್ದ ಅವನಿಗೆ ಧರ್ಮದಲ್ಲಿ ಸುಖಸಂತೋಷವು ಹುಟ್ಟಿಕೊಂಡಿತು.
12263034a ತ್ಯಕ್ತ್ವಾ ಮೂಲಫಲಂ ಸರ್ವಂ ಪರ್ಣಾಹಾರೋಽಭವದ್ದ್ವಿಜಃ।
12263034c ಪರ್ಣಂ ತ್ಯಕ್ತ್ವಾ ಜಲಾಹಾರಸ್ತದಾಸೀದ್ದ್ವಿಜಸತ್ತಮಃ।।
ಆ ದ್ವಿಜನು ಫಲಮೂಲಗಳೆಲ್ಲವನ್ನೂ ತ್ಯಜಿಸಿ ಪರ್ಣಾಹಾರಿಯಾದನು. ನಂತರ ಆ ದ್ವಿಜಸತ್ತಮನು ಪರ್ಣಗಳನ್ನು ತ್ಯಜಿಸಿ ಜಲಾಹಾರಿಯಾದನು.
12263035a ವಾಯುಭಕ್ಷಸ್ತತಃ ಪಶ್ಚಾದ್ಬಹೂನ್ವರ್ಷಗಣಾನಭೂತ್।
12263035c ನ ಚಾಸ್ಯ ಕ್ಷೀಯತೇ ಪ್ರಾಣಸ್ತದದ್ಭುತಮಿವಾಭವತ್।।
ಅನಂತರ ವಾಯುಭಕ್ಷಕನಾಗಿ ಅನೇಕ ವರ್ಷಗಳು ಕಳೆದವು. ಆದರೂ ಅವನ ಪ್ರಾಣವು ಕ್ಷಣಿಸಲಿಲ್ಲ. ಅದೊಂದು ಅದ್ಭುತವಾಗಿತ್ತು.
12263036a ಧರ್ಮೇ ಚ ಶ್ರದ್ದಧಾನಸ್ಯ ತಪಸ್ಯುಗ್ರೇ ಚ ವರ್ತತಃ।
12263036c ಕಾಲೇನ ಮಹತಾ ತಸ್ಯ ದಿವ್ಯಾ ದೃಷ್ಟಿರಜಾಯತ।।
ಧರ್ಮದಲ್ಲಿಯೇ ಶ್ರದ್ಧೆಯನ್ನಿಟ್ಟು ಉಗ್ರ ತಪಸ್ಸನ್ನು ನಡೆಸಿ ಮಹಾ ಕಾಲವು ಕಳೆಯಲು ಅವನಿಗೆ ದಿವ್ಯದೃಷ್ಟಿಯುಂಟಾಯಿತು.
12263037a ತಸ್ಯ ಬುದ್ಧಿಃ ಪ್ರಾದುರಾಸೀದ್ಯದಿ ದದ್ಯಾಂ ಮಹದ್ಧನಮ್।
12263037c ತುಷ್ಟಃ ಕಸ್ಮೈ ಚಿದೇವಾಹಂ ನ ಮಿಥ್ಯಾ ವಾಗ್ಭವೇನ್ಮಮ।।
ಅವನಲ್ಲಿ ಈ ಯೋಚನೆಯು ಮೂಡಿತು: “ಒಂದು ವೇಳೆ ನಾನು ತುಷ್ಟನಾಗಿ ಯಾರಿಗಾದರೂ ಮಹಾ ಧನವನ್ನು ಕೊಡುತ್ತೇನೆಂದು ಹೇಳಿದರೆ ನನ್ನ ಮಾತು ಮಿಥ್ಯವಾಗಲಾರದು!”
12263038a ತತಃ ಪ್ರಹೃಷ್ಟವದನೋ ಭೂಯ ಆರಬ್ಧವಾಂಸ್ತಪಃ।
12263038c ಭೂಯಶ್ಚಾಚಿಂತಯತ್ಸಿದ್ಧೋ ಯತ್ಪರಂ ಸೋಽಭ್ಯಪದ್ಯತ।।
ಸಂತೋಷದಿಂದ ಅವನು ಇನ್ನೂ ತಪಸ್ಸನ್ನು ಆರಂಭಿಸಿದನು. ಮೊತ್ತೊಂದು ಸಿದ್ಧಿಯನ್ನು ಪಡೆದುಕೊಂಡ ನಂತರ ಅವನು ಮತ್ತೆ ಯೋಚಿಸಿದನು:
12263039a ಯದಿ ದದ್ಯಾಮಹಂ ರಾಜ್ಯಂ ತುಷ್ಟೋ ವೈ ಯಸ್ಯ ಕಸ್ಯ ಚಿತ್।
12263039c ಸ ಭವೇದಚಿರಾದ್ರಾಜಾ ನ ಮಿಥ್ಯಾ ವಾಗ್ಭವೇನ್ಮಮ।।
“ಒಂದು ವೇಳೆ ನಾನು ತುಷ್ಟನಾಗಿ ಯಾರಿಗಾದರೂ ರಾಜ್ಯವನ್ನು ಕೊಡುತ್ತೇನೆ ಎಂದು ಹೇಳಿದರೆ ನನ್ನ ಮಾತು ಸುಳ್ಳಾಗಲಾರದು!”
12263040a ತಸ್ಯ ಸಾಕ್ಷಾತ್ಕುಂಡಧಾರೋ ದರ್ಶಯಾಮಾಸ ಭಾರತ।
12263040c ಬ್ರಾಹ್ಮಣಸ್ಯ ತಪೋಯೋಗಾತ್ ಸೌಹೃದೇನಾಭಿಚೋದಿತಃ।।
ಭಾರತ! ಬ್ರಾಹ್ಮಣನ ತಪೋಯೋಗದಿಂದ ಮತ್ತು ಸೌಹಾರ್ದತೆಯಿಂದ ಪ್ರಚೋದಿತನಾಗಿ ಸಾಕ್ಷಾತ್ ಕುಂಡಧಾರನೇ ಅವನಿಗೆ ಕಾಣಿಸಿಕೊಂಡನು.
12263041a ಸಮಾಗಮ್ಯ ಸ ತೇನಾಥ ಪೂಜಾಂ ಚಕ್ರೇ ಯಥಾವಿಧಿ।
12263041c ಬ್ರಾಹ್ಮಣಃ ಕುಂಡಧಾರಸ್ಯ ವಿಸ್ಮಿತಶ್ಚಾಭವನ್ನೃಪ।।
ನೃಪ! ಕುಂಡಧಾರನನ್ನು ನೋಡಿ ಬ್ರಾಹ್ಮಣನು ವಿಸ್ಮಿತನಾದನು ಮತ್ತು ಆಗಮಿಸಿದ ಅವನನ್ನು ಯಥಾವಿಧಿಯಾಗಿ ಪೂಜಿಸಿದನು.
12263042a ತತೋಽಬ್ರವೀತ್ಕುಂಡಧಾರೋ ದಿವ್ಯಂ ತೇ ಚಕ್ಷುರುತ್ತಮಮ್।
12263042c ಪಶ್ಯ ರಾಜ್ಞಾಂ ಗತಿಂ ವಿಪ್ರ ಲೋಕಾಂಶ್ಚಾವೇಕ್ಷ ಚಕ್ಷುಷಾ।।
ಆಗ ಕುಂಡಧಾರನು ಹೇಳಿದನು: “ವಿಪ್ರ! ನಿನಗೆ ಉತ್ತಮ ದಿವ್ಯದೃಷ್ಟಿಯಿದೆ. ಆ ಕಣ್ಣುಗಳಿಂದ ಹಿಂದಿನ ರಾಜರು ಯಾವ ಲೋಕಗಳಿಗೆ ಹೋಗಿದ್ದಾರೆನ್ನುವುದನ್ನು ನೋಡು.”
12263043a ತತೋ ರಾಜ್ಞಾಂ ಸಹಸ್ರಾಣಿ ಮಗ್ನಾನಿ ನಿರಯೇ ತದಾ।
12263043c ದೂರಾದಪಶ್ಯದ್ವಿಪ್ರಃ ಸ ದಿವ್ಯಯುಕ್ತೇನ ಚಕ್ಷುಷಾ।।
ಆಗ ವಿಪ್ರನು ದಿವ್ಯದೃಷ್ಟಿಯಿಂದ ಸಹಸ್ರಾರು ರಾಜರು ನರಕದಲ್ಲಿ ಮುಳುಗಿರುವುದನ್ನು ದೂರದಿಂದಲೇ ಕಂಡನು.
12263044 ಕುಂಡಧಾರ ಉವಾಚ।
12263044a ಮಾಂ ಪೂಜಯಿತ್ವಾ ಭಾವೇನ ಯದಿ ತ್ವಂ ದುಃಖಮಾಪ್ನುಯಾಃ।
12263044c ಕೃತಂ ಮಯಾ ಭವೇತ್ಕಿಂ ತೇ ಕಶ್ಚ ತೇಽನುಗ್ರಹೋ ಭವೇತ್।।
ಕುಂಡಧಾರನು ಹೇಳಿದನು: “ಭಕ್ತಿಯಿಂದ ನನ್ನನ್ನು ಪೂಜಿಸಿದ ನಿನಗೆ ನಾನು ದುಃಖವನ್ನೇ ದೊರಕಿಸಿದ್ದರೆ ನಾನು ಏನು ಮಾಡಿದಂತಾಯಿತು? ನಿನಗೆ ಯಾವ ಅನುಗ್ರಹವುಂಟಾಗುತ್ತದೆ?
12263045a ಪಶ್ಯ ಪಶ್ಯ ಚ ಭೂಯಸ್ತ್ವಂ ಕಾಮಾನಿಚ್ಚೇತ್ಕಥಂ ನರಃ।
12263045c ಸ್ವರ್ಗದ್ವಾರಂ ಹಿ ಸಂರುದ್ಧಂ ಮಾನುಷೇಷು ವಿಶೇಷತಃ।।
ಪುನಃ ಪುನಃ ನೋಡು. ಇದನ್ನು ನೋಡಿದ ನರನು ಹೇಗೆ ತಾನೇ ಕಾಮನೆಗಳನ್ನು ಬಯಸುತ್ತಾನೆ? ಕಾಮನೆಗಳನ್ನು ಬಯಸುವ ಮನುಷ್ಯರಿಗೆ ವಿಶೇಷವಾಗಿ ಸ್ವರ್ಗದ ಬಾಗಿಲು ಮುಚ್ಚಿರುತ್ತದೆ.””
12263046 ಭೀಷ್ಮ ಉವಾಚ।
12263046a ತತೋಽಪಶ್ಯತ್ಸ ಕಾಮಂ ಚ ಕ್ರೋಧಂ ಲೋಭಂ ಭಯಂ ಮದಮ್।
12263046c ನಿದ್ರಾಂ ತಂದ್ರೀಂ ತಥಾಲಸ್ಯಮಾವೃತ್ಯ ಪುರುಷಾನ್ ಸ್ಥಿತಾನ್।।
ಭೀಷ್ಮನು ಹೇಳಿದನು: “ಆಗ ಬ್ರಾಹ್ಮಣನು ಅಲ್ಲಿದ್ದ ಪುರುಷರನ್ನು ಕಾಮ, ಕ್ರೋಧ, ಲೋಭ, ಭಯ, ಮದ, ನಿದ್ರೆ ಮತ್ತು ಆಲಸ್ಯಗಳು ಆಕ್ರಮಿಸಿರುವುದನ್ನು ನೋಡಿದನು.
12263047 ಕುಂಡಧಾರ ಉವಾಚ।
12263047a ಏತೈರ್ಲೋಕಾಃ ಸುಸಂರುದ್ಧಾ ದೇವಾನಾಂ ಮಾನುಷಾದ್ಭಯಮ್।
12263047c ತಥೈವ ದೇವವಚನಾದ್ವಿಘ್ನಂ ಕುರ್ವಂತಿ ಸರ್ವಶಃ।।
ಕುಂಡಧಾರನು ಹೇಳಿದನು: “ಈ ಲೋಕಗಳು ಇವುಗಳಿಂದ ಬಂಧಿತವಾಗಿದೆ. ದೇವತೆಗಳ ಎಲ್ಲ ವಚನಗಳಿಗೂ ವಿರುದ್ಧವಾಗಿಯೇ ನಡೆಯುವ ಮನುಷ್ಯರಿಗೆ ದೇವತೆಗಳೂ ಹೆದರುತ್ತಾರೆ.
12263048a ನ ದೇವೈರನನುಜ್ಞಾತಃ ಕಶ್ಚಿದ್ಭವತಿ ಧಾರ್ಮಿಕಃ।
12263048c ಏಷ ಶಕ್ತೋಽಸಿ ತಪಸಾ ರಾಜ್ಯಂ ದಾತುಂ ಧನಾನಿ ಚ।।
ದೇವತೆಗಳ ಅನುಜ್ಞೆಯಿಲ್ಲದೇ ಯಾರೂ ಧಾರ್ಮಿಕನಾಗುವುದಿಲ್ಲ. ಈ ತಪಸ್ಸಿನಿಂದ ನೀನು ರಾಜ್ಯ ಮತ್ತು ಧನಗಳನ್ನು ನೀಡಲು ಶಕ್ತನಾಗಿದ್ದೀಯೆ.””
12263049 ಭೀಷ್ಮ ಉವಾಚ।
12263049a ತತಃ ಪಪಾತ ಶಿರಸಾ ಬ್ರಾಹ್ಮಣಸ್ತೋಯಧಾರಿಣೇ।
12263049c ಉವಾಚ ಚೈನಂ ಧರ್ಮಾತ್ಮಾ ಮಹಾನ್ಮೇಽನುಗ್ರಹಃ ಕೃತಃ।।
ಭೀಷ್ಮನು ಹೇಳಿದನು: “ಆಗ ಧರ್ಮಾತ್ಮಾ ಬ್ರಾಹ್ಮಣನು ಮೇಘನಿಗೆ ಶಿರಸಾ ನಮಸ್ಕರಿಸಿ ಹೇಳಿದನು: “ನೀನು ನನ್ನಮೇಲೆ ಮಹಾ ಅನುಗ್ರಹವನ್ನೇ ಮಾಡಿದ್ದೀಯೆ.
12263050a ಕಾಮಲೋಭಾನುಬಂಧೇನ ಪುರಾ ತೇ ಯದಸೂಯಿತಮ್।
12263050c ಮಯಾ ಸ್ನೇಹಮವಿಜ್ಞಾಯ ತತ್ರ ಮೇ ಕ್ಷಂತುಮರ್ಹಸಿ।।
ಕಾಮಲೋಭದಿಂದ ಬಂಧಿತನಾಗಿದ್ದ ಮತ್ತು ಅಸೂಯಾಪರನಾಗಿದ್ದ ನಾನು ಮೊದಲು ನಿನ್ನ ಪ್ರೀತಿಯನ್ನು ಗುರುತಿಸಲಿಲ್ಲ. ಅದಕ್ಕೆ ನನ್ನನ್ನು ಕ್ಷಮಿಸಬೇಕು.”
12263051a ಕ್ಷಾಂತಮೇವ ಮಯೇತ್ಯುಕ್ತ್ವಾ ಕುಂಡಧಾರೋ ದ್ವಿಜರ್ಷಭಮ್।
12263051c ಸಂಪರಿಷ್ವಜ್ಯ ಬಾಹುಭ್ಯಾಂ ತತ್ರೈವಾಂತರಧೀಯತ।।
“ನಾನು ನಿನ್ನನ್ನು ಕ್ಷಮಿಸಿದ್ದೇನೆ” ಎಂದು ಹೇಳಿ ಕುಂಡಧಾರನು ದ್ವಿಜರ್ಷಭನನ್ನು ತನ್ನ ಬಾಹುಗಳಿಂದ ಬಿಗಿದಪ್ಪಿ ಅಲ್ಲಿಯೇ ಅಂತರ್ಧಾನನಾದನು.
12263052a ತತಃ ಸರ್ವಾನಿಮಾಽಲ್ಲೋಕಾನ್ಬ್ರಾಹ್ಮಣೋಽನುಚಚಾರ ಹ।
12263052c ಕುಂಡಧಾರಪ್ರಸಾದೇನ ತಪಸಾ ಯೋಜಿತಃ ಪುರಾ।।
ಕುಂಡಧಾರನ ಪ್ರಸಾದದಿಂದ ಮತ್ತು ತಪಸ್ಸಿನಿಂದ ಯುಕ್ತನಾದ ಆ ಬ್ರಾಹ್ಮಣನು ಹಿಂದೆ ಈ ಸರ್ವ ಲೋಕಗಳಲ್ಲಿಯೂ ಸಂಚರಿಸಿದನು.
12263053a ವಿಹಾಯಸಾ ಚ ಗಮನಂ ತಥಾ ಸಂಕಲ್ಪಿತಾರ್ಥತಾ।
12263053c ಧರ್ಮಾಚ್ಚಕ್ತ್ಯಾ ತಥಾ ಯೋಗಾದ್ಯಾ ಚೈವ ಪರಮಾ ಗತಿಃ।।
ಧರ್ಮ ಮತ್ತು ಯೋಗಗಳಿಂದ ಪರಮ ಗತಿಯನ್ನು ಪಡೆದುಕೊಳ್ಳಬಹುದು. ಬೇಕಾದಲ್ಲಿಗೆ ಹೋಗಬಹುದು ಮತ್ತು ಸಂಕಲ್ಪಿಸಿದುದನ್ನು ಪಡೆದುಕೊಳ್ಳಬಹುದು.
12263054a ದೇವತಾ ಬ್ರಾಹ್ಮಣಾಃ ಸಂತೋ ಯಕ್ಷಾ ಮಾನುಷಚಾರಣಾಃ।
12263054c ಧಾರ್ಮಿಕಾನ್ಪೂಜಯಂತೀಹ ನ ಧನಾಢ್ಯಾನ್ನ ಕಾಮಿನಃ।।
ಧಾರ್ಮಿಕರನ್ನು ದೇವತೆಗಳೂ, ಬ್ರಾಹ್ಮಣರೂ, ಸಂತರೂ, ಯಕ್ಷರೂ, ಮನುಷ್ಯರೂ, ಚಾರಣರೂ ಪೂಜಿಸುತ್ತಾರೆ. ಆದರೆ ಧನಾಢ್ಯರನ್ನು ಮತ್ತು ಕಾಮಿಗಳನ್ನಲ್ಲ.
12263055a ಸುಪ್ರಸನ್ನಾ ಹಿ ತೇ ದೇವಾ ಯತ್ತೇ ಧರ್ಮೇ ರತಾ ಮತಿಃ।
12263055c ಧನೇ ಸುಖಕಲಾ ಕಾ ಚಿದ್ಧರ್ಮೇ ತು ಪರಮಂ ಸುಖಮ್।।
ನಿನ್ನ ಮತಿಯು ಧರ್ಮರತವಾಗಿರುವುದರಿಂದ ದೇವತೆಗಳು ನಿನ್ನ ಮೇಲೆ ಪ್ರಸನ್ನರಾಗಿದ್ದಾರೆ. ಧನದಲ್ಲಿ ಸುಖವು ಅಲ್ಪಮಾತ್ರವು. ಆದರೆ ಧರ್ಮದಲ್ಲಿ ಪರಮ ಸುಖವಿದೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಕುಂಡಧಾರೋಪಾಖ್ಯಾನೇ ತ್ರಿಷಷ್ಟ್ಯಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಕುಂಡಧಾರೋಪಾಖ್ಯಾನ ಎನ್ನುವ ಇನ್ನೂರಾಅರವತ್ಮೂರನೇ ಅಧ್ಯಾಯವು.