251: ಧರ್ಮಲಕ್ಷಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 251

ಸಾರ

ಧರ್ಮಾಧರ್ಮಗಳ ಸ್ವರೂಪ ನಿರ್ಣಯ (1-26).

12251001 ಯುಧಿಷ್ಠಿರ ಉವಾಚ।
12251001a ಇಮೇ ವೈ ಮಾನವಾಃ ಸರ್ವೇ ಧರ್ಮಂ ಪ್ರತಿ ವಿಶಂಕಿತಾಃ।
12251001c ಕೋಽಯಂ ಧರ್ಮಃ ಕುತೋ ಧರ್ಮಸ್ತನ್ಮೇ ಬ್ರೂಹಿ ಪಿತಾಮಹ।।

ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಾನವರೆಲ್ಲರೂ ಸಾಧಾರಣವಾಗಿ ಧರ್ಮದ ಕುರಿತು ಶಂಕಿಸುತ್ತಿರುತ್ತಾರೆ. ಈ ಧರ್ಮವು ಯಾವುದು ಮತ್ತು ಧರ್ಮವು ಎಲ್ಲಿಂದ ಬಂದಿತು ಎನ್ನುವುದನ್ನು ಹೇಳು.

12251002a ಧರ್ಮೋ ನ್ವಯಮಿಹಾರ್ಥಃ ಕಿಮಮುತ್ರಾರ್ಥೋಽಪಿ ವಾ ಭವೇತ್।
12251002c ಉಭಯಾರ್ಥೋಽಪಿ ವಾ ಧರ್ಮಸ್ತನ್ಮೇ ಬ್ರೂಹಿ ಪಿತಾಮಹ।।

ಪಿತಾಮಹ! ಐಹಿಕ ಪ್ರಯೋಜನವನ್ನು ನೀಡುವುದು ಧರ್ಮವೇ ಅಥವಾ ಪಾರಲೌಕಿಕ ಪ್ರಯೋಜನವನ್ನು ನೀಡುವುದು ಧರ್ಮವೇ ಅಥವಾ ಎರಡೂ ಕಡೆಗಳಲ್ಲಿ ಪ್ರಯೋಜನವನ್ನು ನೀಡುವುದು ಧರ್ಮವೇ? ಇದರ ಕುರಿತು ನನಗೆ ಹೇಳು.”

12251003 ಭೀಷ್ಮ ಉವಾಚ।
12251003a ಸದಾಚಾರಃ ಸ್ಮೃತಿರ್ವೇದಾಸ್ತ್ರಿವಿಧಂ ಧರ್ಮಲಕ್ಷಣಮ್।
12251003c ಚತುರ್ಥಮರ್ಥಮಿತ್ಯಾಹುಃ ಕವಯೋ ಧರ್ಮಲಕ್ಷಣಮ್।।

ಭೀಷ್ಮನು ಹೇಳಿದನು”: “ಸದಾಚಾರ, ಸ್ಮೃತಿ ಮತ್ತು ವೇದಗಳು – ಇವು ಮೂರು ಧರ್ಮದ ಲಕ್ಷಣಗಳು. ವಿದ್ವಾಂಸರು ಅರ್ಥವೂ ಧರ್ಮದ ನಾಲ್ಕನೆಯ ಲಕ್ಷಣವೆಂದು ಹೇಳುತ್ತಾರೆ.

12251004a ಅಪಿ ಹ್ಯುಕ್ತಾನಿ ಕರ್ಮಾಣಿ ವ್ಯವಸ್ಯಂತ್ಯುತ್ತರಾವರೇ।
12251004c ಲೋಕಯಾತ್ರಾರ್ಥಮೇವೇಹ ಧರ್ಮಸ್ಯ ನಿಯಮಃ ಕೃತಃ।
12251004e ಉಭಯತ್ರ ಸುಖೋದರ್ಕ ಇಹ ಚೈವ ಪರತ್ರ ಚ।।

ಶಾಸ್ತ್ರಗಳಲ್ಲಿ ಹೇಳಿರುವ ಕರ್ಮಗಳಲ್ಲಿಯೂ ಪ್ರಧಾನವಾದವುಗಳು ಮತ್ತು ಅಷ್ಟು ಪ್ರಧಾನವಲ್ಲದವುಗಳು ಇವೆ. ಲೋಕಯಾತ್ರೆಗೆಂದೇ ಧರ್ಮದ ನಿಯಮಗಳನ್ನು ಮಾಡಲಾಗಿದೆ. ಧರ್ಮವನ್ನು ಪಾಲಿಸುವವನಿಗೆ ಇಹ ಮತ್ತು ಪರ ಎರಡರಲ್ಲಿಯೂ ಸುಖೋದಯವಾಗುತ್ತದೆ.

12251005a ಅಲಬ್ಧ್ವಾ ನಿಪುಣಂ ಧರ್ಮಂ ಪಾಪಃ ಪಾಪೇ ಪ್ರಸಜ್ಜತಿ।
12251005c ನ ಚ ಪಾಪಕೃತಃ ಪಾಪಾನ್ಮುಚ್ಯಂತೇ ಕೇ ಚಿದಾಪದಿ।।

ಧರ್ಮದ ನೈಪುಣ್ಯತೆಯನ್ನು ಹೊಂದಿರದವನು ಪಾಪದಿಂದ ಪಾಪಗಳನ್ನು ಹುಟ್ಟಿಸುತ್ತಿರುತ್ತಾನೆ. ಪಾಪಿಯು ಆಪತ್ತಿನಲ್ಲಿಯೂ ಪಾಪಕರ್ಮವನ್ನು ಮಾಡುವುದನ್ನು ಬಿಡುವುದಿಲ್ಲ.

12251006a ಅಪಾಪವಾದೀ ಭವತಿ ಯದಾ ಭವತಿ ಧರ್ಮವಿತ್।
12251006c ಧರ್ಮಸ್ಯ ನಿಷ್ಠಾ ಸ್ವಾಚಾರಸ್ತಮೇವಾಶ್ರಿತ್ಯ ಭೋತ್ಸ್ಯಸೇ।।

ಧರ್ಮವಿದುವಾದಾಗ ಅಪಾಪವಾದಿಯಾಗುತ್ತಾನೆ. ಧರ್ಮದ ನಿಷ್ಠೆಯು ಅವನ ಆಚಾರವನ್ನೇ ಆಶ್ರಯಿಸಿರುತ್ತದೆ; ಅವನ ಮಾತನ್ನಲ್ಲ.

12251007a ಯದಾಧರ್ಮಸಮಾವಿಷ್ಟೋ ಧನಂ ಗೃಹ್ಣಾತಿ ತಸ್ಕರಃ।
12251007c ರಮತೇ ನಿರ್ಹರನ್ ಸ್ತೇನಃ ಪರವಿತ್ತಮರಾಜಕೇ।।

ಧರ್ಮಸಮಾವಿಷ್ಟನಾಗಿದ್ದರೂ ಕಳ್ಳನು ಇತರರ ಸ್ವತ್ತನ್ನು ಅಪಹರಿಸುತ್ತಾನೆ. ಅರಾಜಕತೆಯಿರುವಲ್ಲಿ ಪರರ ಸ್ವತ್ತನ್ನು ಅಪಹರಿಸಿಯೂ ಕಳ್ಳನು ಸುಖವಾಗಿಯೇ ಇರುತ್ತಾನೆ.

12251008a ಯದಾಸ್ಯ ತದ್ಧರಂತ್ಯನ್ಯೇ ತದಾ ರಾಜಾನಮಿಚ್ಚತಿ।
12251008c ತದಾ ತೇಷಾಂ ಸ್ಪೃಹಯತೇ ಯೇ ವೈ ತುಷ್ಟಾಃ ಸ್ವಕೈರ್ಧನೈಃ।।

ಆದರೆ ಕಳ್ಳನ ಧನವನ್ನೇ ಬೇರೆ ಯಾರಾದರೂ ಅಪಹರಿಸಿದರೆ ಆ ಕಳ್ಳನೇ ರಕ್ಷಣೆಗಾಗಿ ರಾಜನನ್ನು ಅಪೇಕ್ಷಿಸುತ್ತಾನೆ. ಆಗ ಅವನು ತನ್ನ ಧನದಿಂದಲೇ ತುಷ್ಟರಾಗಿರುವವರನ್ನು ಬಯಸುತ್ತಾನೆ.

12251009a ಅಭೀತಃ ಶುಚಿರಭ್ಯೇತಿ ರಾಜದ್ವಾರಮಶಂಕಿತಃ।
12251009c ನ ಹಿ ದುಶ್ಚರಿತಂ ಕಿಂ ಚಿದಂತರಾತ್ಮನಿ ಪಶ್ಯತಿ।।

ಶುಚಿಯಾಗಿದ್ದವನು ಭಯವಿಲ್ಲದೇ ಶಂಕೆಗಳಿಲ್ಲದೇ ರಾಜದ್ವಾರಕ್ಕೆ ಹೋಗುತ್ತಾನೆ. ಏಕೆಂದರೆ ಅವನು ತನ್ನ ಅಂತರಾತ್ಮನಲ್ಲಿ ಕಿಂಚಿತ್ತಾದರೂ ದೋಷವನ್ನು ಕಾಣುವುದಿಲ್ಲ.

12251010a ಸತ್ಯಸ್ಯ ವಚನಂ ಸಾಧು ನ ಸತ್ಯಾದ್ವಿದ್ಯತೇ ಪರಮ್।
12251010c ಸತ್ಯೇನ ವಿಧೃತಂ ಸರ್ವಂ ಸರ್ವಂ ಸತ್ಯೇ ಪ್ರತಿಷ್ಠಿತಮ್।।

ಸತ್ಯವಚನವೇ ಸಾಧುವು. ಸತ್ಯಕ್ಕಿಂತ ಶ್ರೇಷ್ಠವಾದುದಿಲ್ಲ. ಸತ್ಯವೇ ಸರ್ವವನ್ನೂ ಧರಿಸಿದೆ. ಸರ್ವವೂ ಸತ್ಯದಲ್ಲಿ ಪ್ರತಿಷ್ಠಿತವಾಗಿದೆ.

12251011a ಅಪಿ ಪಾಪಕೃತೋ ರೌದ್ರಾಃ ಸತ್ಯಂ ಕೃತ್ವಾ ಪೃಥಕ್ ಪೃಥಕ್।
12251011c ಅದ್ರೋಹಮವಿಸಂವಾದಂ ಪ್ರವರ್ತಂತೇ ತದಾಶ್ರಯಾಃ।
12251011e ತೇ ಚೇನ್ಮಿಥೋಽಧೃತಿಂ ಕುರ್ಯುರ್ವಿನಶ್ಯೇಯುರಸಂಶಯಮ್।।

ರೌದ್ರ ಪಾಪಕೃತರೂ ಕೂಡ ಪ್ರತ್ಯೇಕವಾಗಿ ಸತ್ಯಶಪಥಮಾಡಿ ಸತ್ಯವನ್ನೇ ಆಶ್ರಯಿಸಿ ನಡೆದುಕೊಳ್ಳುತ್ತಾರೆ. ಕೆಲವೊಮ್ಮೆ ಸತ್ಯವನ್ನೇ ಆಶ್ರಯಿಸಿ ಅನಂತರ ಸತ್ಯಕ್ಕೆ ದ್ರೋಹವೆಸಗಿ ತಮ್ಮ ದುಷ್ಕಾರ್ಯಗಳಲ್ಲಿ ಪ್ರವೃತ್ತರಾಗುತ್ತಾರೆ. ಹೀಗೆ ಪರಸ್ಪರ ಮಾಡಿಕೊಂಡ ಸತ್ಯಪ್ರತಿಜ್ಞೆಗಳನ್ನು ಮುರಿದುಕೊಂಡು ಪರಸ್ಪರ ಕಾದಾಡಿ ವಿನಾಶಹೊಂದುತ್ತಾರೆ.

12251012a ನ ಹರ್ತವ್ಯಂ ಪರಧನಮಿತಿ ಧರ್ಮಃ ಸನಾತನಃ।
12251012c ಮನ್ಯಂತೇ ಬಲವಂತಸ್ತಂ ದುರ್ಬಲೈಃ ಸಂಪ್ರವರ್ತಿತಮ್।
12251012e ಯದಾ ನಿಯತಿದೌರ್ಬಲ್ಯಮಥೈಷಾಮೇವ ರೋಚತೇ।।

ಪರರ ಧನವನ್ನು ಅಪಹರಿಸಬಾರದು ಎನ್ನುವುದು ಸನಾತನ ಧರ್ಮವು. ಬಲವಂತರು ಕೆಲವರು ಧರ್ಮವು ಕೇವಲ ದುರ್ಬಲರು ಅನುಸರಿಸುವುದು ಎಂದು ತಿಳಿದಿರುತ್ತಾರೆ. ಆದರೆ ದೈವಬಲದಿಂದ ಅವರು ದುರ್ಬಲರಾದರೆ ಆಗ ಅವರಿಗೆ ಧರ್ಮವನ್ನು ಪಾಲಿಸುವುದೇ ರುಚಿಸುತ್ತದೆ.

12251013a ನ ಹ್ಯತ್ಯಂತಂ ಬಲಯುತಾ ಭವಂತಿ ಸುಖಿನೋಽಪಿ ವಾ।
12251013c ತಸ್ಮಾದನಾರ್ಜವೇ ಬುದ್ಧಿರ್ನ ಕಾರ್ಯಾ ತೇ ಕಥಂ ಚನ।।

ಅತ್ಯಂತ ಬಲಯುತರಾದವರು ಸುಖಿಗಳಾಗಿರುತ್ತಾರೆ ಎನ್ನುವುದಕ್ಕಾಗುವುದಿಲ್ಲ. ಆದುದರಿಂದ ನಿನ್ನ ಬುದ್ಧಿಯು ಯಾವಾಗಲೂ ಕುಟಿಲತೆಯ ಕಡೆ ಹೋಗದಿರಲಿ.

12251014a ಅಸಾಧುಭ್ಯೋಽಸ್ಯ ನ ಭಯಂ ನ ಚೋರೇಭ್ಯೋ ನ ರಾಜತಃ।
12251014c ನ ಕಿಂ ಚಿತ್ಕಸ್ಯ ಚಿತ್ಕುರ್ವನ್ನಿರ್ಭಯಃ ಶುಚಿರಾವಸೇತ್।।

ಯಾರು ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲವೋ ಮತ್ತು ಮಾಡುವುದಿಲ್ಲವೋ ಅವನಿಗೆ ದುಷ್ಟರಿಂದಾಗಲೀ, ಕಳ್ಳರಿಂದಾಗಲೀ, ರಾಜನಿಂದಾಗಲೀ ಭಯವಿರುವುದಿಲ್ಲ. ಶುದ್ಧ ಆಚಾರ-ವಿಚಾರಗಳುಳ್ಳವನು ಯಾವಾಗಲೂ ನಿರ್ಭಯನಾಗಿರುತ್ತಾನೆ.

12251015a ಸರ್ವತಃ ಶಂಕತೇ ಸ್ತೇನೋ ಮೃಗೋ ಗ್ರಾಮಮಿವೇಯಿವಾನ್।
12251015c ಬಹುಧಾಚರಿತಂ ಪಾಪಮನ್ಯತ್ರೈವಾನುಪಶ್ಯತಿ।।

ಗ್ರಾಮಕ್ಕೆ ಬಂದ ಜಿಂಕೆಯಂತೆ ಕಳ್ಳನು ಯಾವಾಗಲೂ ಎಲ್ಲರ ವಿಷಯದಲ್ಲಿಯೂ ಸಂಶಯಪಡುತ್ತಾನೆ. ಇತರರ ವಿಷಯದಲ್ಲಿ ತಾನು ಹೇಗೆ ಪಾಪಬುದ್ಧಿಯನ್ನಿಟ್ಟುಕೊಂಡಿರುವನೋ ಅಂತೆಯೇ ಇತರರೂ ತನ್ನ ವಿಷಯದಲ್ಲಿ ಪಾಪಬುದ್ಧಿಯನ್ನಿಟ್ಟುಕೊಂಡಿರುವರೆಂದು ಅವನು ಭಾವಿಸುತ್ತಾನೆ.

12251016a ಮುದಿತಃ ಶುಚಿರಭ್ಯೇತಿ ಸರ್ವತೋ ನಿರ್ಭಯಃ ಸದಾ।
12251016c ನ ಹಿ ದುಶ್ಚರಿತಂ ಕಿಂ ಚಿದಾತ್ಮನೋಽನ್ಯೇಷು ಪಶ್ಯತಿ।।

ಆಚಾರ-ವಿಚಾರಗಳಲ್ಲಿ ಶುಚಿಯಾಗಿರುವವನು ಎಲ್ಲರಿಂದಲೂ ಗೌರವನ್ನು ಪಡೆದುಕೊಳ್ಳುತ್ತಾನೆ. ಸದಾ ಪ್ರಸನ್ನಚಿತ್ತನಾಗಿಯೂ ನಿರ್ಭಯನಾಗಿಯೂ ಇರುತ್ತಾನೆ. ತನ್ನಲ್ಲಿರುವ ಕಿಂಚಿತ್ತು ದುಶ್ಚರಿತವೂ ಬೇರೆಯವರಲ್ಲಿದೆಯೆಂದು ಭಾವಿಸುವುದಿಲ್ಲ.

12251017a ದಾತವ್ಯಮಿತ್ಯಯಂ ಧರ್ಮ ಉಕ್ತೋ ಭೂತಹಿತೇ ರತೈಃ।
12251017c ತಂ ಮನ್ಯಂತೇ ಧನಯುತಾಃ ಕೃಪಣೈಃ ಸಂಪ್ರವರ್ತಿತಮ್।।

ಭೂತಹಿತರತರು ದಾನಮಾಡಬೇಕು ಮತ್ತು ಅದೇ ಧರ್ಮ ಎಂದು ಹೇಳಿದ್ದಾರೆ. ಆದರೆ ಧನಯುತರು ಈ ಧರ್ಮವನ್ನು ದರಿದ್ರರು ಪ್ರಾರಂಭಿಸಿದ್ದಾರೆ ಎನ್ನುತ್ತಾರೆ.

12251018a ಯದಾ ನಿಯತಿಕಾರ್ಪಣ್ಯಮಥೈಷಾಮೇವ ರೋಚತೇ।
12251018c ನ ಹ್ಯತ್ಯಂತಂ ಧನವಂತೋ ಭವಂತಿ ಸುಖಿನೋಽಪಿ ವಾ।।

ಆದರೆ ದೈವವಶಾತ್ ಅವರೇ ದರಿದ್ರರಾಗಿಬಿಟ್ಟರೆ ಆಗ ಅವರಿಗೆ ದಾನಧರ್ಮವೇ ಚೆನ್ನಾಗಿ ಕಾಣುತ್ತದೆ. ಮೇಲಾಗಿ ಅತ್ಯಂತ ಧನವಂತರೂ ಸುಖಿಗಳೂ ಆಗಿರುವುದಿಲ್ಲ.

12251019a ಯದನ್ಯೈರ್ವಿಹಿತಂ ನೇಚ್ಚೇದಾತ್ಮನಃ ಕರ್ಮ ಪೂರುಷಃ।
12251019c ನ ತತ್ಪರೇಷು ಕುರ್ವೀತ ಜಾನನ್ನಪ್ರಿಯಮಾತ್ಮನಃ।।

ತನಗೆ ಅಪ್ರಿಯವಾದುದೆಂದು ತಿಳಿದು ಯಾವುದನ್ನು ಇತರರು ತನ್ನ ವಿಷಯದಲ್ಲಿ ಮಾಡಬಾರದೆಂದು ಭಾವಿಸುತ್ತೀವೋ ಅದನ್ನು ನಾವೂ ಇನ್ನೊಬ್ಬರ ವಿಷಯದಲ್ಲಿ ಮಾಡಬಾರದು.

12251020a ಯೋಽನ್ಯಸ್ಯ ಸ್ಯಾದುಪಪತಿಃ ಸ ಕಂ ಕಿಂ ವಕ್ತುಮರ್ಹತಿ।
12251020c ಯದನ್ಯಸ್ತಸ್ಯ ತತ್ಕುರ್ಯಾನ್ನ ಮೃಷ್ಯೇದಿತಿ ಮೇ ಮತಿಃ।।

ಒಬ್ಬ ವಿವಾಹಿತ ಸ್ತ್ರೀಗೆ ಉಪಪತಿಯಾಗಿ ವ್ಯಭಿಚಾರದಲ್ಲಿ ತೊಡಗಿರುವವನು ಮತ್ತೊಬ್ಬನ ವಿಷಯದಲ್ಲಿ ಏನು ಹೇಳುತ್ತಾನೆ? ತಾನೇ ವ್ಯಭಿಚಾರಿಯಾಗಿದ್ದುಕೊಂಡು ಮತ್ತೊಬ್ಬನನ್ನು ವ್ಯಭಿಚಾರಿ ಎಂದು ನಿಂದಿಸಿದರೆ ಆ ನಿಂದೆಯನ್ನು ಅವನು ಖಂಡಿತವಾಗಿಯೂ ಸಹಿಸಿಕೊಳ್ಳುವುದಿಲ್ಲ ಎಂದು ನನ್ನ ಅಭಿಪ್ರಾಯ.

12251021a ಜೀವಿತುಂ ಯಃ ಸ್ವಯಂ ಚೇಚ್ಚೇತ್ಕಥಂ ಸೋಽನ್ಯಂ ಪ್ರಘಾತಯೇತ್।
12251021c ಯದ್ಯದಾತ್ಮನ ಇಚ್ಚೇತ ತತ್ಪರಸ್ಯಾಪಿ ಚಿಂತಯೇತ್।।

ಸ್ವಯಂ ಜೀವಿಸಲು ಇಚ್ಛಿಸುವವನು ಅನ್ಯರನ್ನು ಹೇಗೆತಾನೇ ಕೊಂದಾನು? ತನಗೆ ಯಾವ ಸುಖಸಂತೋಷಗಳನ್ನು ಬಯಸುತ್ತಾನೋ ಅದೇ ಸುಖಸಂತೋಷಗಳು ಇತರರಿಗೂ ಆಗಬೇಕೆಂದು ಯೋಚಿಸಬೇಕು.

12251022a ಅತಿರಿಕ್ತೈಃ ಸಂವಿಭಜೇದ್ಭೋಗೈರನ್ಯಾನಕಿಂಚನಾನ್।
12251022c ಏತಸ್ಮಾತ್ಕಾರಣಾದ್ಧಾತ್ರಾ ಕುಸೀದಂ ಸಂಪ್ರವರ್ತಿತಮ್।।

ತನ್ನ ಅವಶ್ಯಕತೆಗಿಂತಲೂ ಹೆಚ್ಚಾಗಿರುವ ಧನ-ಭೋಗಾದಿಗಳನ್ನು ದರಿದ್ರರಿಗೆ ಹಂಚಿಕೊಡಬೇಕು. ದರಿದ್ರರಿಗೆ ಧನವನ್ನು ಹಂಚಿಕೊಡಬೇಕೆಂಬ ಕಾರಣದಿಂದಲೇ ಬ್ರಹ್ಮನು ಬಡ್ಡಿಗಾಗಿ ಹಣಕೊಡುವ ವೃತ್ತಿಯನ್ನು ಸೃಷ್ಟಿಸಿದ್ದಾನೆ.

12251023a ಯಸ್ಮಿಂಸ್ತು ದೇವಾಃ ಸಮಯೇ ಸಂತಿಷ್ಠೇರಂಸ್ತಥಾ ಭವೇತ್।
12251023c ಅಥ ಚೇಲ್ಲಾಭಸಮಯೇ ಸ್ಥಿತಿರ್ಧರ್ಮೇಽಪಿ ಶೋಭನಾ।।

ಬಡ್ಡಿಗಾಗಿ ಹಣವನ್ನು ಕೊಟ್ಟು ತೆಗೆದುಕೊಳ್ಳುವ ಸಮಯದಲ್ಲಿ ದೇವತೆಗಳೇ ಸಾಕ್ಷಿಗಳಾಗಿರುತ್ತಾರೆ. ಅದು ಹಾಗೆಯೇ ನಿಬಂಧನೆಗಳಿಗನುಗುಣವಾಗಿ ನಡೆಯಬೇಕು. ಬಡ್ಡಿಯ ಲಾಭವನ್ನು ಯಜ್ಞ-ಯಾಗಾದಿ ಧರ್ಮಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಶುಭದಾಯಕವು.

12251024a ಸರ್ವಂ ಪ್ರಿಯಾಭ್ಯುಪಗತಂ ಧರ್ಮಮಾಹುರ್ಮನೀಷಿಣಃ।
12251024c ಪಶ್ಯೈತಂ ಲಕ್ಷಣೋದ್ದೇಶಂ ಧರ್ಮಾಧರ್ಮೇ ಯುಧಿಷ್ಠಿರ।।

ಯುಧಿಷ್ಠಿರ! ಎಲ್ಲರೊಡನೆಯೂ ಪ್ರೀತಿಯಿಂದ ವ್ಯವಹರಿಸುವುದು ಧರ್ಮವೆಂದು ಮನೀಷಿಣರು ಹೇಳುತ್ತಾರೆ. ಇದಕ್ಕೆ ವಿಪರೀತವಾದುದು ಅಧರ್ಮ. ಧರ್ಮಾಧರ್ಮಗಳಿಗೆ ಸಂಕ್ಷೇಪರೂಪದಲ್ಲಿರುವ ಈ ಲಕ್ಷಣವನ್ನು ನೀನು ಗಮನಿಸು.

12251025a ಲೋಕಸಂಗ್ರಹಸಂಯುಕ್ತಂ ವಿಧಾತ್ರಾ ವಿಹಿತಂ ಪುರಾ।
12251025c ಸೂಕ್ಷ್ಮಧರ್ಮಾರ್ಥನಿಯತಂ ಸತಾಂ ಚರಿತಮುತ್ತಮಮ್।।

ಹಿಂದೆ ವಿಧಾತೃವು ಲೋಕಸಂಗ್ರಹಸಂಯುಕ್ತವಾದ ಸೂಕ್ಷ್ಮಧರ್ಮಾರ್ಥನಿಯತ ಉತ್ತಮ ಸದಾಚಾರಗಳನ್ನು ವಿಹಿಸಿದ್ದನು.

12251026a ಧರ್ಮಲಕ್ಷಣಮಾಖ್ಯಾತಮೇತತ್ತೇ ಕುರುಸತ್ತಮ।
12251026c ತಸ್ಮಾದನಾರ್ಜವೇ ಬುದ್ಧಿರ್ನ ಕಾರ್ಯಾ ತೇ ಕಥಂ ಚನ।।

ಕುರುಸತ್ತಮ! ಧರ್ಮಲಕ್ಷಣಗಳನ್ನು ನಿನಗೆ ಹೇಳಿದ್ದೇನೆ. ಆದುದರಿಂದ ನಿನ್ನ ಬುದ್ಧಿಯು ಯಾವುದೇ ಕಾರಣದಿಂದಲೂ ಕುಟಿಲತೆಯ ಕಡೆಗೆ ಹೋಗದಿರಲಿ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಧರ್ಮಲಕ್ಷಣೇ ಏಕಪಂಚಾಶದಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಧರ್ಮಲಕ್ಷಣ ಎನ್ನುವ ಇನ್ನೂರಾಐವತ್ತೊಂದನೇ ಅಧ್ಯಾಯವು.