ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 216
ಸಾರ
ರಾಜ್ಯವನ್ನು ಕಳೆದುಕೊಂಡು ಕತ್ತೆಯ ರೂಪದಲ್ಲಿ ಶೂನ್ಯಗೃಹದಲ್ಲಿ ವಾಸಿಸುತ್ತಿದ್ದ ಬಲಿಚಕ್ರವರ್ತಿಯನ್ನು ಇಂದ್ರನು ಮೂದಲಿಸಿ ಮಾತನಾಡಿಸಿದುದು (1-37).
12216001 ಯುಧಿಷ್ಠಿರ ಉವಾಚ।
12216001a ಯಯಾ ಬುದ್ಧ್ಯಾ ಮಹೀಪಾಲೋ ಭ್ರಷ್ಟಶ್ರೀರ್ವಿಚರೇನ್ಮಹೀಮ್।
12216001c ಕಾಲದಂಡವಿನಿಷ್ಪಿಷ್ಟಸ್ತನ್ಮೇ ಬ್ರೂಹಿ ಪಿತಾಮಹ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ಕಾಲದಂಡದ ಹುಡಿತಕ್ಕೆ ಪುಡಿಪುಡಿಯಾಗಿ ರಾಜ್ಯವನ್ನು ಕಳೆದುಕೊಂಡ ಮಹೀಪಾಲನು ಯಾವ ಬುದ್ಧಿಯಿಂದ ಮಹಿಯಲ್ಲಿ ವಿಚರಿಸಬಹುದು ಎನ್ನುವುದನ್ನು ಹೇಳು.”
12216002 ಭೀಷ್ಮ ಉವಾಚ।
12216002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12216002c ವಾಸವಸ್ಯ ಚ ಸಂವಾದಂ ಬಲೇರ್ವೈರೋಚನಸ್ಯ ಚ।।
ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವಾದ ವಾಸವ ಮತ್ತು ಬಲಿ ವೈರೋಚನರ ಸಂವಾದವನ್ನು ಉದಾಹರಿಸುತ್ತಾರೆ.
12216003a ಪಿತಾಮಹಮುಪಾಗತ್ಯ ಪ್ರಣಿಪತ್ಯ ಕೃತಾಂಜಲಿಃ।
12216003c ಸರ್ವಾನೇವಾಸುರಾನ್ ಜಿತ್ವಾ ಬಲಿಂ ಪಪ್ರಚ್ಚ ವಾಸವಃ।।
ಸರ್ವ ಅಸುರರನ್ನೂ ಬಲಿಯನ್ನೂ ಗೆದ್ದು ವಾಸವನು ಪಿತಾಮಹನ ಬಳಿಬಂದು ನಮಸ್ಕರಿಸಿ ಕೃತಾಂಜಲಿಯಾಗಿ ಕೇಳಿದನು:
12216004a ಯಸ್ಯ ಸ್ಮ ದದತೋ ವಿತ್ತಂ ನ ಕದಾ ಚನ ಹೀಯತೇ।
12216004c ತಂ ಬಲಿಂ ನಾಧಿಗಚ್ಚಾಮಿ ಬ್ರಹ್ಮನ್ನಾಚಕ್ಷ್ವ ಮೇ ಬಲಿಮ್।।
“ಬ್ರಹ್ಮನ್! ಎಷ್ಟು ದಾನವನ್ನಿತ್ತರೂ ಯಾರ ಬೊಕ್ಕಸವು ಬರಿದಾಗುತ್ತಿರಲಿಲ್ಲವೋ ಆ ಬಲಿಯನ್ನು ನಾನು ಕಾಣುತ್ತಿಲ್ಲ. ಬಲಿಯು ಎಲ್ಲಿರುವನೆಂದು ಹೇಳು.
12216005a ಸ ಏವ ಹ್ಯಸ್ತಮಯತೇ ಸ ಸ್ಮ ವಿದ್ಯೋತತೇ ದಿಶಃ।
12216005c ಸ ವರ್ಷತಿ ಸ್ಮ ವರ್ಷಾಣಿ ಯಥಾಕಾಲಮತಂದ್ರಿತಃ।
12216005e ತಂ ಬಲಿಂ ನಾಧಿಗಚ್ಚಾಮಿ ಬ್ರಹ್ಮನ್ನಾಚಕ್ಷ್ವ ಮೇ ಬಲಿಮ್।।
ಅವನೇ ಅಸ್ತನಾಗುತ್ತಿದ್ದನು. ಅವನೇ ದಿಕ್ಕುಗಳನ್ನು ಬೆಳಗಿಸುತ್ತಿದ್ದನು. ಆಲಸ್ಯರಹಿತನಾಗಿ ಅವನು ಯಥಾಕಾಲದಲ್ಲಿ ಮಳೆಗಳನ್ನು ಸುರಿಸುತ್ತಿದ್ದನು. ಆ ಬಲಿಯನ್ನು ನಾನು ಕಾಣದಂತಾಗಿದ್ದೇನೆ. ಬ್ರಹ್ಮನ್! ಬಲಿಯು ಎಲ್ಲಿರುವನೆಂದು ಹೇಳು.
12216006a ಸ ವಾಯುರ್ವರುಣಶ್ಚೈವ ಸ ರವಿಃ ಸ ಚ ಚಂದ್ರಮಾಃ।
12216006c ಸೋಽಗ್ನಿಸ್ತಪತಿ ಭೂತಾನಿ ಪೃಥಿವೀ ಚ ಭವತ್ಯುತ।
12216006e ತಂ ಬಲಿಂ ನಾಧಿಗಚ್ಚಾಮಿ ಬ್ರಹ್ಮನ್ನಾಚಕ್ಷ್ವ ಮೇ ಬಲಿಮ್।।
ಅವನೇ ವಾಯುವಾಗಿದ್ದನು. ವರುಣನೂ ಅವನೇ ಆಗಿದ್ದನು. ರವಿ ಮತ್ತು ಚಂದ್ರಮರೂ ಅವನೇ ಆಗಿದ್ದನು. ಅವನೇ ಅಗ್ನಿಯಾಗಿ ಭೂತಗಳನ್ನು ಸುಡುತ್ತಿದ್ದನು ಮತ್ತು ಪೃಥ್ವಿಯೂ ಅವನೇ ಆಗಿದ್ದನು. ಆ ಬಲಿಯನ್ನು ನಾನು ಕಾಣುತ್ತಿಲ್ಲ. ಬ್ರಹ್ಮನ್! ಬಲಿಯು ಎಲ್ಲಿರುವನೆಂದು ಹೇಳು.”
12216007 ಬ್ರಹ್ಮೋವಾಚ।
12216007a ನೈತತ್ತೇ ಸಾಧು ಮಘವನ್ಯದೇತದನುಪೃಚ್ಚಸಿ।
12216007c ಪೃಷ್ಟಸ್ತು ನಾನೃತಂ ಬ್ರೂಯಾತ್ತಸ್ಮಾದ್ವಕ್ಷ್ಯಾಮಿ ತೇ ಬಲಿಮ್।।
ಬ್ರಹ್ಮನು ಹೇಳಿದನು: “ಮಘವನ್! ನೀನು ಹೀಗೆ ಕೇಳುವುದು ಸರಿಯಲ್ಲ. ಆದರೂ ಕೇಳಿದಾಗ ಸುಳ್ಳನ್ನು ಹೇಳಬಾರದು. ಆದುದರಿಂದ ನಿನಗೆ ಬಲಿಯಲ್ಲಿರುವನೆಂದು ಹೇಳಿಬಿಡುತ್ತೇನೆ.
12216008a ಉಷ್ಟ್ರೇಷು ಯದಿ ವಾ ಗೋಷು ಖರೇಷ್ವಶ್ವೇಷು ವಾ ಪುನಃ।
12216008c ವರಿಷ್ಠೋ ಭವಿತಾ ಜಂತುಃ ಶೂನ್ಯಾಗಾರೇ ಶಚೀಪತೇ।।
ಶಚೀಪತೇ! ಯಾವುದಾದರೂ ಒಂದು ಶೂನ್ಯಗೃಹದಲ್ಲಿರುವ ಒಂಟೆ, ಹಸು, ಕತ್ತೆ ಅಥವಾ ಕುದುರೆ ಈ ಜಾತಿಯ ಪ್ರಾಣಿಗಳಲ್ಲಿ ಶ್ರೇಷ್ಠವಾದ ಯಾವುದಾದರೂ ಒಂದು ಬಲಿ ಎಂದು ತಿಳಿ.”
12216009 ಶಕ್ರ ಉವಾಚ।
12216009a ಯದಿ ಸ್ಮ ಬಲಿನಾ ಬ್ರಹ್ಮನ್ ಶೂನ್ಯಾಗಾರೇ ಸಮೇಯಿವಾನ್।
12216009c ಹನ್ಯಾಮೇನಂ ನ ವಾ ಹನ್ಯಾಂ ತದ್ಬ್ರಹ್ಮನ್ನನುಶಾಧಿ ಮಾಮ್।।
ಶಕ್ರನು ಹೇಳಿದನು: “ಬ್ರಹ್ಮನ್! ಶೂನ್ಯಾಗಾರದಲ್ಲಿರುವ ಬಲಿಯನ್ನು ನಾನು ಭೇಟಿಮಾಡಿದಾಗ ಅವನನ್ನು ನಾನು ಕೊಲ್ಲಬೇಕೇ ಅಥವಾ ಕೊಲ್ಲಬಾರದೇ ಎನ್ನುವುದನ್ನು ನನಗೆ ಉಪದೇಶಿಸು.”
12216010 ಬ್ರಹ್ಮೋವಾಚ।
12216010a ಮಾ ಸ್ಮ ಶಕ್ರ ಬಲಿಂ ಹಿಂಸೀರ್ನ ಬಲಿರ್ವಧಮರ್ಹತಿ।
12216010c ನ್ಯಾಯಾಂಸ್ತು ಶಕ್ರ ಪ್ರಷ್ಟವ್ಯಸ್ತ್ವಯಾ ವಾಸವ ಕಾಮ್ಯಯಾ।।
ಬ್ರಹ್ಮನು ಹೇಳಿದನು: “ಶಕ್ರ! ಬಲಿಯನ್ನು ನೀನು ಹಿಂಸಿಸಬಾರದು. ಬಲಿಯು ವಧಾರ್ಹನಲ್ಲ. ಶಕ್ರ! ವಾಸವ! ನೀನು ಅವನಲ್ಲಿ ತತ್ತ್ವಗಳ ಕುರಿತು ಬೇಕಾದ್ದನ್ನು ಕೇಳಬಹುದು.””
12216011 ಭೀಷ್ಮ ಉವಾಚ।
12216011a ಏವಮುಕ್ತೋ ಭಗವತಾ ಮಹೇಂದ್ರಃ ಪೃಥಿವೀಂ ತದಾ।
12216011c ಚಚಾರೈರಾವತಸ್ಕಂಧಮಧಿರುಹ್ಯ ಶ್ರಿಯಾ ವೃತಃ।।
ಭೀಷ್ಮನು ಹೇಳಿದನು: “ಭಗವಂತನು ಹೀಗೆ ಹೇಳಲು ಮಹೇಂದ್ರನು ಐರಾವತದ ಹೆಗಲನ್ನೇರಿ ಶ್ರೀಯಿಂದ ಆವೃತನಾಗಿ ಬಲಿಯನ್ನು ಹುಡುಕುತ್ತಾ ಸಂಚರಿಸತೊಡಗಿದನು.
12216012a ತತೋ ದದರ್ಶ ಸ ಬಲಿಂ ಖರವೇಷೇಣ ಸಂವೃತಮ್।
12216012c ಯಥಾಖ್ಯಾತಂ ಭಗವತಾ ಶೂನ್ಯಾಗಾರಕೃತಾಲಯಮ್।।
ಅನಂತರ ಅವನು ಭಗವಂತನು ಹೇಳಿದ್ದಂತೆ ಶೂನ್ಯಾಗಾರವೊಂದರಲ್ಲಿ ವಾಸಿಸುತ್ತಿದ್ದ ಕತ್ತೆಯ ವೇಷದಲ್ಲಿದ್ದ ಬಲಿಯನ್ನು ಕಂಡನು.
12216013 ಶಕ್ರ ಉವಾಚ।
12216013a ಖರಯೋನಿಮನುಪ್ರಾಪ್ತಸ್ತುಷಭಕ್ಷೋಽಸಿ ದಾನವ।
12216013c ಇಯಂ ತೇ ಯೋನಿರಧಮಾ ಶೋಚಸ್ಯಾಹೋ ನ ಶೋಚಸಿ।।
ಶಕ್ರನು ಹೇಳಿದನು: “ದಾನವ! ನೀನು ಕತ್ತೆಯ ಯೋನಿಯನ್ನು ಪಡೆದು ಧಾನ್ಯದ ಹೊಟ್ಟನ್ನು ತಿನ್ನುತ್ತಿರುವೆ! ಇಂತಹ ಅಧಮ ಯೋನಿಯಲ್ಲಿದ್ದುಕೊಂಡೂ ನೀನು ಶೋಕಿಸುತ್ತಿರುವೆಯೋ ಅಥವಾ ಶೋಕಿಸುವುದಿಲ್ಲವೋ?
12216014a ಅದೃಷ್ಟಂ ಬತ ಪಶ್ಯಾಮಿ ದ್ವಿಷತಾಂ ವಶಮಾಗತಮ್।
12216014c ಶ್ರಿಯಾ ವಿಹೀನಂ ಮಿತ್ರೈಶ್ಚ ಭ್ರಷ್ಟವೀರ್ಯಪರಾಕ್ರಮಮ್।।
ಮೊದಲೆಂದೂ ನೋಡಿರದ ನಿನ್ನ ಈ ಅವಸ್ಥೆಯನ್ನು ನಾನು ನೋಡುತ್ತಿದ್ದೇನೆ1. ಶತ್ರುಗಳ ವಶನಾಗಿದ್ದೀಯೆ. ಸಂಪತ್ತು ಮತ್ತು ಮಿತ್ರರಿಂದ ವಿಹೀನನಾಗಿದ್ದೀಯೆ. ವೀರ್ಯ-ಪರಾಕ್ರಮಗಳನ್ನು ಕಳೆದುಕೊಂಡಿದ್ದೀಯೆ.
12216015a ಯತ್ತದ್ಯಾನಸಹಸ್ರೇಣ ಜ್ಞಾತಿಭಿಃ ಪರಿವಾರಿತಃ।
12216015c ಲೋಕಾನ್ಪ್ರತಾಪಯನ್ಸರ್ವಾನ್ಯಾಸ್ಯಸ್ಮಾನವಿತರ್ಕಯನ್।।
ಮೊದಲು ನೀನು ನಿನ್ನ ಸಹಸ್ರ ವಾಹನಗಳು ಮತ್ತು ಸಜಾತೀಯ ಬಂಧುಗಳಿಂದ ಪರಿವೃತನಾಗಿ ಲೋಕಗಳನ್ನು ತಾಪಗೊಳಿಸುತ್ತಾ ನಮ್ಮನ್ನು ಕಡೆಗಾಣಿಸಿ ಸಂಚರಿಸುತ್ತಿದ್ದೆ.
12216016a ತ್ವನ್ಮುಖಾಶ್ಚೈವ ದೈತೇಯಾ ವ್ಯತಿಷ್ಠಂಸ್ತವ ಶಾಸನೇ।
12216016c ಅಕೃಷ್ಟಪಚ್ಯಾ ಪೃಥಿವೀ ತವೈಶ್ವರ್ಯೇ ಬಭೂವ ಹ।
12216016e ಇದಂ ಚ ತೇಽದ್ಯ ವ್ಯಸನಂ ಶೋಚಸ್ಯಾಹೋ ನ ಶೋಚಸಿ।।
ದೈತ್ಯರೆಲ್ಲರೂ ನಿನ್ನ ಮುಖವನ್ನೇ ನೋಡುತ್ತಾ ನಿನ್ನದೇ ಶಾಸದಡಿಯಲ್ಲಿರುತ್ತಿದ್ದರು. ನಿನ್ನ ಶಾಸನದಲ್ಲಿ ಭೂಮಿಯು ಕೃಷಿಯಿಲ್ಲದೇ ಪೈರನ್ನು ಕೊಡುತ್ತಿತ್ತು. ಆದರೆ ಇಂದು ನೀನು ವ್ಯಸನದಲ್ಲಿ ಸಿಲುಕಿದ್ದೀಯೆ. ಇದರ ಕುರಿತು ನೀನು ಶೋಕಿಸುತ್ತಿರುವೆಯೋ ಅಥವಾ ಶೋಕಿಸುತ್ತಿಲ್ಲವೋ?
12216017a ಯದಾತಿಷ್ಠಃ ಸಮುದ್ರಸ್ಯ ಪೂರ್ವಕೂಲೇ ವಿಲೇಲಿಹನ್।
12216017c ಜ್ಞಾತಿಭ್ಯೋ ವಿಭಜನ್ವಿತ್ತಂ ತದಾಸೀತ್ತೇ ಮನಃ ಕಥಮ್।।
ಯಾವಾಗ ನೀನು ಸಮುದ್ರದ ಪೂರ್ವತೀರದಲ್ಲಿ ವಿವಿಧ ಭೋಗಗಳನ್ನು ಆಸ್ವಾದಿಸುತ್ತಾ, ನಿನ್ನ ಕುಟುಂಬದವರಿಗೆ ಐಶ್ವರ್ಯವನ್ನು ಹಂಚಿಕೊಡುತ್ತಿದ್ದೆಯೋ ಆಗ ನಿನ್ನ ಮನಸ್ಸು ಹೇಗಿದ್ದಿರಬಹುದು!
12216018a ಯತ್ತೇ ಸಹಸ್ರಸಮಿತಾ ನನೃತುರ್ದೇವಯೋಷಿತಃ।
12216018c ಬಹೂನಿ ವರ್ಷಪೂಗಾನಿ ವಿಹಾರೇ ದೀಪ್ಯತಃ ಶ್ರಿಯಾ।।
12216019a ಸರ್ವಾಃ ಪುಷ್ಕರಮಾಲಿನ್ಯಃ ಸರ್ವಾಃ ಕಾಂಚನಸಪ್ರಭಾಃ।
12216019c ಕಥಮದ್ಯ ತದಾ ಚೈವ ಮನಸ್ತೇ ದಾನವೇಶ್ವರ।।
ದಾನವೇಶ್ವರ! ನೀನು ಅನೇಕ ವರ್ಷಗಳ ಕಾಲ ರಾಜ್ಯಲಕ್ಷ್ಮಿಯಿಂದ ಸುಶೋಭಿತನಾಗಿ ವಿಹರಿಸುತ್ತಿದ್ದೆ. ಆಗ ಕಾಂಚನಪ್ರಭೆಯ ಸಹಸ್ರಾರು ದೇವಾಂಗನೆಯರು – ಎಲ್ಲರೂ ಪದ್ಮಮಾಲೆಗಳನ್ನು ಧರಿಸಿ – ನಿನ್ನ ಎದಿರು ನರ್ತಿಸುತ್ತಿದ್ದರು. ಆಗ ಮತ್ತು ಈಗ ನಿನ್ನ ಮನಃಸ್ಥಿತಿಯು ಹೇಗಿರಬಹುದು?
12216020a ಚತ್ರಂ ತವಾಸೀತ್ಸುಮಹತ್ಸೌವರ್ಣಂ ಮಣಿಭೂಷಿತಮ್।
12216020c ನನೃತುರ್ಯತ್ರ ಗಂಧರ್ವಾಃ ಷಟ್ಸಹಸ್ರಾಣಿ ಸಪ್ತಧಾ।।
ಆಗ ಮಹಾ ಸುವರ್ಣ-ಮಣಿಭೂಷಿತ ಚತ್ರವು ನಿನ್ನ ತಲೆಯ ಮೇಲೆ ಕಂಗೊಳಿಸುತ್ತಿತ್ತು. ಆರು ಸಾವಿರ ಗಂಧರ್ವರು ಸಪ್ತಸ್ವರಗಳಲ್ಲಿ ಹಾಡುತ್ತಾ ನರ್ತಿಸುತ್ತಿದ್ದರು.
12216021a ಯೂಪಸ್ತವಾಸೀತ್ಸುಮಹಾನ್ಯಜತಃ ಸರ್ವಕಾಂಚನಃ।
12216021c ಯತ್ರಾದದಃ ಸಹಸ್ರಾಣಾಮಯುತಾನಿ ಗವಾಂ ದಶ2।।
ನೀನು ಯಜ್ಞಮಾಡುತ್ತಿದ್ದಾಗ ದೊಡ್ಡ ದೊಡ್ಡ ಸರ್ವಕಾಂಚನಮಯ ಯೂಪಸ್ತಂಭವಿರುತ್ತಿತ್ತು. ಆಗ ನೀನು ಹತ್ತು-ಹತ್ತು ಕೋಟಿ ಹಸುಗಳನ್ನು ದಾನಮಾಡುತ್ತಿದ್ದೆ.
12216022a ಯದಾ ತು ಪೃಥಿವೀಂ ಸರ್ವಾಂ ಯಜಮಾನೋಽನುಪರ್ಯಯಾಃ।
12216022c ಶಮ್ಯಾಕ್ಷೇಪೇಣ ವಿಧಿನಾ ತದಾಸೀತ್ಕಿಂ ನು ತೇ ಹೃದಿ।।
ಹಿಂದೆ ನೀನು ಶಮ್ಯಾಕ್ಷೇಪವಿಧಿಯಿಂದ ಯಜ್ಞಮಾಡಲು ಸಂಕಲ್ಪಿಸಿ ಯಜ್ಞದ ಯಜಮಾನನಾಗಿ ಅಖಂಡ ಭೂಮಂಡಲವನ್ನೇ ಸಂಚರಿಸಿದೆ. ಆಗ ನಿನ್ನ ಹೃದಯದಲ್ಲಿ ಎಂತಹ ಉತ್ಸಾಹವಿದ್ದಿತ್ತು!
12216023a ನ ತೇ ಪಶ್ಯಾಮಿ ಭೃಂಗಾರಂ ನ ಚತ್ರಂ ವ್ಯಜನಂ ನ ಚ।
12216023c ಬ್ರಹ್ಮದತ್ತಾಂ ಚ ತೇ ಮಾಲಾಂ ನ ಪಶ್ಯಾಮ್ಯಸುರಾಧಿಪ।।
ಅಸುರಾಧಿಪ! ಈಗ ನಿನ್ನ ಬಳಿ ಚಿನ್ನದ ಗಿಂಡಿಯನ್ನಾಗಲೀ, ಚತ್ರ-ಚಾಮರಗಳನ್ನಾಗಲೀ, ಬ್ರಹ್ಮನು ಕೊಟ್ಟಿದ್ದ ಮಾಲೆಯನ್ನಾಗಲೀ ನಾನು ಕಾಣುತ್ತಿಲ್ಲ!”
312216024 ಬಲಿರುವಾಚ।
12216024a ನ ತ್ವಂ ಪಶ್ಯಸಿ ಭೃಂಗಾರಂ ನ ಚತ್ರಂ ವ್ಯಜನಂ ನ ಚ।
12216024c ಬ್ರಹ್ಮದತ್ತಾಂ ಚ ಮೇ ಮಾಲಾಂ ನ ತ್ವಂ ದ್ರಕ್ಷ್ಯಸಿ ವಾಸವ।।
ಬಲಿಯು ಹೇಳಿದನು: “ವಾಸವ! ನೀನು ಇಂದು ನನ್ನಲ್ಲಿ ಚಿನ್ನದ ಗಿಂಡಿಯನ್ನಾಗಲೀ, ಚತ್ರ-ಚಾಮರಗಳನ್ನಾಗಲೀ, ಬ್ರಹ್ಮನು ಕೊಟ್ಟಿದ್ದ ಮಾಲೆಯನ್ನಾಗಲೀ ಕಾಣುತ್ತಿಲ್ಲ.
12216025a ಗುಹಾಯಾಂ ನಿಹಿತಾನಿ ತ್ವಂ ಮಮ ರತ್ನಾನಿ ಪೃಚ್ಚಸಿ।
12216025c ಯದಾ ಮೇ ಭವಿತಾ ಕಾಲಸ್ತದಾ ತ್ವಂ ತಾನಿ ದ್ರಕ್ಷ್ಯಸಿ।।
ನೀನು ಕೇಳಿದ ಎಲ್ಲ ರತ್ನಗಳೂ ಗುಹೆಯಲ್ಲಿ ಸುರಕ್ಷಿತವಾಗಿವೆ. ನನಗೆ ಕಾಲಬಂದೊದಗಿದಾಗ ನೀನು ಅವುಗಳನ್ನು ನೋಡುವೆಯಂತೆ.
12216026a ನ ತ್ವೇತದನುರೂಪಂ ತೇ ಯಶಸೋ ವಾ ಕುಲಸ್ಯ ವಾ।
12216026c ಸಮೃದ್ಧಾರ್ಥೋಽಸಮೃದ್ಧಾರ್ಥಂ ಯನ್ಮಾಂ ಕತ್ಥಿತುಮಿಚ್ಚಸಿ।।
ಸಮೃದ್ಧಶಾಲಿಯಾಗಿರುವ ನೀನು ಸಮೃದ್ಧಿಯನ್ನು ಕಳೆದುಕೊಂಡಿರುವ ನನ್ನ ಎದಿರು ಹೀಗೆ ಕೊಚ್ಚಿಕೊಳ್ಳುವುದು ನಿನ್ನ ಯಶಸ್ಸು ಮತ್ತು ಕುಲಕ್ಕೆ ಅನುರೂಪವಾಗಿಲ್ಲ.
12216027a ನ ಹಿ ದುಃಖೇಷು ಶೋಚಂತಿ ನ ಪ್ರಹೃಷ್ಯಂತಿ ಚರ್ದ್ಧಿಷು।
12216027c ಕೃತಪ್ರಜ್ಞಾ ಜ್ಞಾನತೃಪ್ತಾಃ ಕ್ಷಾಂತಾಃ ಸಂತೋ ಮನೀಷಿಣಃ।।
ಕೃತಪ್ರಜ್ಞ ಮತ್ತು ಜ್ಞಾನತೃಪ್ತ ಕ್ಷಮಾಶೀಲ ಸಂತ ಮನೀಷಿಣರು ದುಃಖಬಂದಾಗ ಶೋಕಿಸುವುದಿಲ್ಲ ಮತ್ತು ವೃದ್ಧಿಯಾಗುತ್ತಿರುವಾಗ ಹರ್ಷಿಸುವುದಿಲ್ಲ.
12216028a ತ್ವಂ ತು ಪ್ರಾಕೃತಯಾ ಬುದ್ಧ್ಯಾ ಪುರಂದರ ವಿಕತ್ಥಸೇ।
12216028c ಯದಾಹಮಿವ ಭಾವೀ ತ್ವಂ ತದಾ ನೈವಂ ವದಿಷ್ಯಸಿ।।
ಪುರಂದರ! ನೀನಾದರೋ ಅಶುದ್ಧ ಬುದ್ಧಿಯಿಂದ ಆತ್ಮಪ್ರಶಂಸೆಮಾಡಿಕೊಳ್ಳುತ್ತಿರುವೆ. ನನ್ನದಂತಹ ಸ್ಥಿತಿಯು ನಿನ್ನದೂ ಆದಾಗ ನೀನು ಈ ರೀತಿ ಮಾತನಾಡುವುದಿಲ್ಲ.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಬಲಿವಾಸವಸಂವಾದೋ ನಾಮ ಷೋಡಶಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಬಲಿವಾಸವಸಂವಾದ ಎನ್ನುವ ಇನ್ನೂರಾಹದಿನಾರನೇ ಅಧ್ಯಾಯವು.
-
ಇದೂವರೆಗೆ ನೀನು ನನ್ನ ಕಣ್ಣಿಗೇ ಬಿದ್ದಿರಲಿಲ್ಲ (ಭಾರತ ದರ್ಶನ). ↩︎
-
ಇದರ ನಂತರ ಈ ಒಂದು ಅಧಿಕ ಶ್ಲೋಕಾರ್ಧವಿದೆ: ಅನಂತರಂ ಸಹಸ್ರೇಣ ತದಾಽಽಸಿದ್ದೈತ್ಯ ಕಾ ಮತಿಃ। (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ದಕ್ಷಿಣಾತ್ಯಪಾಠದಲ್ಲಿ ಇದಕ್ಕೆ ಮೊದಲು ಈ ಎರಡು ಅಧಿಕ ಶ್ಲೋಕಗಳಿವೆ: ಭೀಷ್ಮ ಉವಾಚ। ತತಃ ಪ್ರಹಸ್ಯ ಸ ಬಲಿರ್ವಾಸವೇನ ಸಮೀರಿತಮ್। ನಿಶಮ್ಯ ಭಾವಗಂಭೀರಂ ಸುರರಾಜಮಥಾಬ್ರವೀತ್।। ಬಲಿರುವಾಚ। ಅಹೋ ಹಿ ತವ ಬಾಲಿಶ್ಯಮಿಹ ದೇವಗಣಾಧಿಪ। ಅಯುಕ್ತಂ ದೇವರಾಜಸ್ಯ ತವ ಕಷ್ಟಮಿದಂ ವಚಃ।। (ಗೀತಾ ಪ್ರೆಸ್). ↩︎