182: ಭೃಗುಭರದ್ವಾಜಸಂವಾದೇ ವರ್ಣಸ್ವರೂಪಕಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 182

ಸಾರ

ನಾಲ್ಕೂ ವರ್ಣಗಳ ಪ್ರತ್ಯೇಕ ಕರ್ಮಗಳು ಮತ್ತು ಸದಾಚಾರಗಳ ವರ್ಣನೆ; ವೈರಾಗ್ಯದಿಂದ ಪರಬ್ರಹ್ಮಪ್ರಾಪ್ತಿ (1-17).

12182001 ಭರದ್ವಾಜ ಉವಾಚ।
12182001a ಬ್ರಾಹ್ಮಣಃ ಕೇನ ಭವತಿ ಕ್ಷತ್ರಿಯೋ ವಾ ದ್ವಿಜೋತ್ತಮ।
12182001c ವೈಶ್ಯಃ ಶೂದ್ರಶ್ಚ ವಿಪ್ರರ್ಷೇ ತದ್ಬ್ರೂಹಿ ವದತಾಂ ವರ।।

ಭರದ್ವಾಜನು ಹೇಳಿದನು: “ದ್ವಿಜೋತ್ತಮ! ವಿಪ್ರರ್ಷೇ! ಮಾತನಾಡುವವರಲ್ಲಿ ಶ್ರೇಷ್ಠ! ಮನುಷ್ಯನು ಯಾವ ಕರ್ಮಗಳನ್ನು ಮಾಡುವುದರಿಂದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಅಥವಾ ಶೂದ್ರನಾಗುತ್ತಾನೆ ಎನ್ನುವುದನ್ನು ಹೇಳು.”

12182002 ಭೃಗುರುವಾಚ।
12182002a ಜಾತಕರ್ಮಾದಿಭಿರ್ಯಸ್ತು ಸಂಸ್ಕಾರೈಃ ಸಂಸ್ಕೃತಃ ಶುಚಿಃ।
12182002c ವೇದಾಧ್ಯಯನಸಂಪನ್ನಃ ಷಟ್ಸು ಕರ್ಮಸ್ವವಸ್ಥಿತಃ।।
12182003a ಶೌಚಾಚಾರಸ್ಥಿತಃ ಸಮ್ಯಗ್ವಿಘಸಾಶೀ ಗುರುಪ್ರಿಯಃ।
12182003c ನಿತ್ಯವ್ರತೀ ಸತ್ಯಪರಃ ಸ ವೈ ಬ್ರಾಹ್ಮಣ ಉಚ್ಯತೇ।।

ಭೃಗುವು ಹೇಳಿದನು: “ಜಾತಕರ್ಮಾದಿ ಸಂಸ್ಕಾರಗಳಿಂದ ಸಂಸ್ಕೃತನಾಗಿ ಶುಚಿಯಾಗಿರುವ, ವೇದಾಧ್ಯಯನ ಸಂಪನ್ನನಾಗಿ ಆರು ಕರ್ಮಗಳಲ್ಲಿ1 ವ್ಯವಸ್ಥಿತನಾಗಿರುವ, ಶೌಚ ಮತ್ತು ಸದಾಚಾರಗಳಲ್ಲಿ ತೊಡಗಿರುವ, ಉತ್ತಮ ಯಜ್ಞಶಿಷ್ಠವನ್ನೇ ಉಣ್ಣುವ, ಗುರುಪ್ರಿಯ, ನಿತ್ಯವ್ರತಿ, ಸತ್ಯಪರನನ್ನೇ ಬ್ರಾಹ್ಮಣನೆನ್ನುತ್ತಾರೆ.

12182004a ಸತ್ಯಂ ದಾನಂ ದಮೋಽದ್ರೋಹ ಆನೃಶಂಸ್ಯಂ ಕ್ಷಮಾ2 ಘೃಣಾ।
12182004c ತಪಶ್ಚ ದೃಶ್ಯತೇ ಯತ್ರ ಸ ಬ್ರಾಹ್ಮಣ ಇತಿ ಸ್ಮೃತಃ।।

ಸತ್ಯ, ದಾನ, ದಮ, ಅದ್ರೋಹ, ಆನೃಶಂಸ್ಯತ್ವ, ಕ್ಷಮೆ, ದಯೆ ಮತ್ತು ತಪಗಳು ಯಾರಲ್ಲಿ ಕಾಣುತ್ತವೆಯೋ ಅವನೇ ಬ್ರಾಹ್ಮಣನೆಂದು ಹೇಳಿದ್ದಾರೆ.

12182005a ಕ್ಷತ್ರಜಂ ಸೇವತೇ ಕರ್ಮ ವೇದಾಧ್ಯಯನಸಂಮತಃ।
12182005c ದಾನಾದಾನರತಿರ್ಯಶ್ಚ ಸ ವೈ ಕ್ಷತ್ರಿಯ ಉಚ್ಯತೇ।।

ಕ್ಷತ್ರಿಯೋಚಿತ ಯುದ್ಧಾದಿ ಕರ್ಮಗಳಲ್ಲಿ ತೊಡಗಿರುವ, ವೇದಾಧ್ಯಯನ ಮಾಡುವ, ದಾನನೀಡುವ ಮತ್ತು ಪ್ರಜೆಗಳಿಂದ ಕರವನ್ನು ತೆಗೆದುಕೊಂಡು ಅವರ ರಕ್ಷಣೆಯನ್ನು ಮಾಡುವವನು ಕ್ಷತ್ರಿಯ ಎಂದು ಹೇಳುತ್ತಾರೆ.

12182006a ಕೃಷಿಗೋರಕ್ಷ್ಯವಾಣಿಜ್ಯಂ ಯೋ ವಿಶತ್ಯನಿಶಂ ಶುಚಿಃ3
12182006c ವೇದಾಧ್ಯಯನಸಂಪನ್ನಃ ಸ ವೈಶ್ಯ ಇತಿ ಸಂಜ್ಞಿತಃ।।

ಕೃಷಿ, ಗೋಪಾಲನೆ, ವಾಣಿಜ್ಯವನ್ನು ಮಾಡಿಕೊಂಡಿರುವ, ಸರ್ವದಾ ಶುಚಿಯಾಗಿರುವ, ವೇದಾಧ್ಯಯನ ಸಂಪನ್ನನನ್ನು ವೈಶ್ಯನೆಂದು ಕರೆಯುತ್ತಾರೆ.

12182007a ಸರ್ವಭಕ್ಷರತಿರ್ನಿತ್ಯಂ ಸರ್ವಕರ್ಮಕರೋಽಶುಚಿಃ।
12182007c ತ್ಯಕ್ತವೇದಸ್ತ್ವನಾಚಾರಃ ಸ ವೈ ಶೂದ್ರ ಇತಿ ಸ್ಮೃತಃ।।

ವೇದಗಳನ್ನು ಮತ್ತು ಸದಾಚಾರಗಳನ್ನು ತ್ಯಜಿಸಿ ಎಲ್ಲವನ್ನೂ ತಿನ್ನುವ, ಎಲ್ಲ ಕರ್ಮಗಳನ್ನೂ ಮಾಡುವ, ಅಶುಚಿಯೂ ಅನಿತ್ಯನೂ ಆದವನನ್ನು ಶೂದ್ರ ಎಂದು ಕರೆಯುತ್ತಾರೆ.

12182008a ಶೂದ್ರೇ ಚೈತದ್ಭವೇಲ್ಲಕ್ಷ್ಯಂ ದ್ವಿಜೇ ಚೈತನ್ನ ವಿದ್ಯತೇ।
12182008c ನ ವೈ ಶೂದ್ರೋ ಭವೇಚ್ಚೂದ್ರೋ ಬ್ರಾಹ್ಮಣೋ ನ ಚ ಬ್ರಾಹ್ಮಣಃ।।

ಮೇಲೆ ಹೇಳಿದ ಬ್ರಾಹ್ಮಣನ ಲಕ್ಷಣಗಳು ಶೂದ್ರನಲ್ಲಿದ್ದರೆ ಅವನು ಶೂದ್ರನಾಗಿಯೇ ಉಳಿಯುವುದಿಲ್ಲ. ಹಾಗೆಯೇ ಸತ್ಯಾದಿ ಗುಣಗಳು ಬ್ರಾಹ್ಮಣನಲ್ಲಿಲ್ಲದಿದ್ದರೆ ಅವನು ಬ್ರಾಹ್ಮಣನಾಗಿ ಉಳಿಯುವುದಿಲ್ಲ.

12182009a ಸರ್ವೋಪಾಯೈಸ್ತು ಲೋಭಸ್ಯ ಕ್ರೋಧಸ್ಯ ಚ ವಿನಿಗ್ರಹಃ।
12182009c ಏತತ್ಪವಿತ್ರಂ ಜ್ಞಾತವ್ಯಂ ತಥಾ ಚೈವಾತ್ಮಸಂಯಮಃ।।

ಸರ್ವೋಪಾಯಗಳಿಂದ ಲೋಭ ಮತ್ತು ಕ್ರೋಧಗಳನ್ನು ನಿಗ್ರಹಿಸಿಕೊಂಡಿರುವುದು ಮತ್ತು ಆತ್ಮಸಂಯಮವು ಪವಿತ್ರವೆಂದು ತಿಳಿದುಕೊಳ್ಳಬೇಕು.

412182010a ನಿತ್ಯಂ ಕ್ರೋಧಾತ್ತಪೋ ರಕ್ಷೇಚ್ಚ್ರಿಯಂ ರಕ್ಷೇತ ಮತ್ಸರಾತ್5। 12182010c ವಿದ್ಯಾಂ ಮಾನಾವಮಾನಾಭ್ಯಾಮಾತ್ಮಾನಂ ತು ಪ್ರಮಾದತಃ।।

ನಿತ್ಯವೂ ತಪಸ್ಸನ್ನು ಕ್ರೋಧದಿಂದ ರಕ್ಷಿಸಬೇಕು ಮತ್ತು ಸಂಪತ್ತನ್ನು ಮತ್ಸರದಿಂದ ರಕ್ಷಿಸಿಕೊಳ್ಳಬೇಕು. ವಿದ್ಯೆಯನ್ನು ಮಾನಾಪಮಾನದಿಂದ ಮತ್ತು ತನ್ನನ್ನು ತಾನು ಪ್ರಮಾದದಿಂದ ರಕ್ಷಿಸಿಕೊಳ್ಳಬೇಕು.

12182011a ಯಸ್ಯ ಸರ್ವೇ ಸಮಾರಂಭಾ ನಿರಾಶೀರ್ಬಂಧನಾಸ್ತ್ವಿಹ।
12182011c ತ್ಯಾಗೇ ಯಸ್ಯ ಹುತಂ ಸರ್ವಂ ಸ ತ್ಯಾಗೀ ಸ ಚ ಬುದ್ಧಿಮಾನ್।।

ಎಲ್ಲ ಕಾರ್ಯಗಳನ್ನೂ ಕಾಮನೆಗಳ ಬಂಧನರಹಿತವನ್ನಾಗಿಸಿ ತ್ಯಾಗದ ಅಗ್ನಿಯಲ್ಲಿ ಸರ್ವವನ್ನೂ ಹೋಮಮಾಡಿದವನೇ ತ್ಯಾಗಿ ಮತ್ತು ಅವನೇ ಬುದ್ಧಿವಂತನು.

12182012a ಅಹಿಂಸ್ರಃ ಸರ್ವಭೂತಾನಾಂ ಮೈತ್ರಾಯಣಗತಶ್ಚರೇತ್।
12182012c ಅವಿಸ್ರಂಭೇ ನ ಗಂತವ್ಯಂ ವಿಸ್ರಂಭೇ ಧಾರಯೇನ್ಮನಃ।।

ಸರ್ವಭೂತಗಳಿಗೂ ಹಿಂಸೆಮಾಡದೇ ಮೈತ್ರೀಭಾವದಿಂದ ವ್ಯವಹರಿಸಬೇಕು. ವಿಶ್ವಾಸಕ್ಕೆ ಅರ್ಹವಲ್ಲದ ಮಾರ್ಗದಲ್ಲಿ ಹೋಗಬಾರದು. ವಿಶ್ವಾಸಾರ್ಹ ಮಾರ್ಗದಲ್ಲಿ ಮನಸ್ಸನ್ನಿರಿಸಿಕೊಂಡಿರಬೇಕು.

12182013a ಪರಿಗ್ರಹಾನ್ಪರಿತ್ಯಜ್ಯ ಭವೇದ್ಬುದ್ಧ್ಯಾ ಜಿತೇಂದ್ರಿಯಃ।
12182013c ಅಶೋಕಂ ಸ್ಥಾನಮಾತಿಷ್ಠೇದಿಹ ಚಾಮುತ್ರ ಚಾಭಯಮ್।।

ಮಮತೆ ಮತ್ತು ಆಸಕ್ತಿಗಳನ್ನು ಪರಿತ್ಯಜಿಸಿ ಬುದ್ಧಿಯ ಮೂಲಕ ಇಂದ್ರಿಯಗಳನ್ನು ಜಯಿಸಿ, ಈ ಲೋಕದಲ್ಲಿ ಮತ್ತು ಪರಲೋಕದಲ್ಲಿ ಭಯ-ಶೋಕರಹಿತವಾದ ಸ್ಥಾನವನ್ನು ಹೊಂದಬೇಕು.

12182014a ತಪೋನಿತ್ಯೇನ ದಾಂತೇನ ಮುನಿನಾ ಸಂಯತಾತ್ಮನಾ।
12182014c ಅಜಿತಂ ಜೇತುಕಾಮೇನ ಭಾವ್ಯಂ ಸಂಗೇಷ್ವಸಂಗಿನಾ।।

ಗೆಲ್ಲಲು ಅಸಾಧ್ಯವಾದ ಸಂಸಾರವನ್ನು ಜಯಿಸಲಿಚ್ಛಿಸುವ ಮುನಿಯು ನಿತ್ಯವೂ ತಪಸ್ಸಿನಲ್ಲಿಯೇ ನಿರತನಾಗಿ ಇಂದ್ರಿಯಗಳನ್ನು ದಮನಮಾಡಿ ಮನಸ್ಸನ್ನು ಸಂಯಮಗೊಳಿಸಬೇಕು. ಆಸಕ್ತಿಗೆ ಆಶ್ರಯಭೂತಗಳಾದವುಗಳಲ್ಲಿ ಅನಾಸಕ್ತನಾಗಿರಬೇಕು.

12182015a ಇಂದ್ರಿಯೈರ್ಗೃಹ್ಯತೇ ಯದ್ಯತ್ತತ್ತದ್ವ್ಯಕ್ತಮಿತಿ ಸ್ಥಿತಿಃ।
12182015c ಅವ್ಯಕ್ತಮಿತಿ ವಿಜ್ಞೇಯಂ ಲಿಂಗಗ್ರಾಹ್ಯಮತೀಂದ್ರಿಯಮ್।।

ಇಂದ್ರಿಯಗಳಿಂದ ಗ್ರಹಿಸಲು ಸಾಧ್ಯವಾದವುಗಳನ್ನು ವ್ಯಕ್ತವೆಂದು ತಿಳಿಯಬೇಕು. ಯಾವುದು ಇಂದ್ರಿಯಗಳಿಗೆ ಅತೀತವಾದುದೋ ಮತ್ತು ಯಾವುದನ್ನು ಅನುಮಾನದಿಂದ ಮಾತ್ರ ತಿಳಿಯಬಹುದೋ ಅದನ್ನು ಅವ್ಯಕ್ತವೆಂದು ತಿಳಿಯಬೇಕು.

12182016a ಮನಃ ಪ್ರಾಣೇ ನಿಗೃಹ್ಣೀಯಾತ್ಪ್ರಾಣಂ ಬ್ರಹ್ಮಣಿ ಧಾರಯೇತ್।
12182016c ನಿರ್ವಾಣಾದೇವ ನಿರ್ವಾಣೋ6 ನ ಚ ಕಿಂ ಚಿದ್ವಿಚಿಂತಯೇತ್।
12182016e ಸುಖಂ ವೈ ಬ್ರಾಹ್ಮಣೋ ಬ್ರಹ್ಮ ಸ ವೈ ತೇನಾಧಿಗಚ್ಚತಿ।।

ಮನಸ್ಸನ್ನು ಪ್ರಾಣದಲ್ಲಿ ಹಿಡಿದಿಟ್ಟಿರಬೇಕು. ಪ್ರಾಣವನ್ನು ಬ್ರಹ್ಮನಲ್ಲಿ ಸ್ಥಾಪಿಸಬೇಕು. ವೈರಾಗ್ಯದಿಂದಲೇ ನಿರ್ವಾಣವು ದೊರೆಯುತ್ತದೆ. ಇದನ್ನು ಪಡೆದವನು ಯಾವುದೇ ಅನಾತ್ಮ ವಿಷಯದ ಕುರಿತು ಯೋಚಿಸುವುದೂ ಇಲ್ಲ.

12182017a ಶೌಚೇನ ಸತತಂ ಯುಕ್ತಸ್ತಥಾಚಾರಸಮನ್ವಿತಃ।
12182017c ಸಾನುಕ್ರೋಶಶ್ಚ ಭೂತೇಷು ತದ್ದ್ವಿಜಾತಿಷು ಲಕ್ಷಣಮ್।।

ಯಾವಾಗಲೂ ಶೌಚ ಮತ್ತು ಸದಾಚಾರಗಳಿಂದ ಯುಕ್ತನಾಗಿ ಪ್ರಾಣಿಗಳ ವಿಷಯದಲ್ಲಿ ದಯಾಭಾವದಿಂದಿರುವುದು ಬ್ರಾಹ್ಮಣರ ಲಕ್ಷಣ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಭೃಗುಭರದ್ವಾಜಸಂವಾದೇ ವರ್ಣಸ್ವರೂಪಕಥನೇ ದ್ವಾಶೀತ್ಯಧಿಕಶತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಭೃಗುಭರದ್ವಾಜಸಂವಾದೇ ವರ್ಣಸ್ವರೂಪಕಥನ ಎನ್ನುವ ನೂರಾಎಂಭತ್ತೆರಡನೇ ಅಧ್ಯಾಯವು.


  1. ಅಧ್ಯಯನ, ಅಧ್ಯಾಪನ, ಯಜ್ಞ, ಯಾಜನ, ದಾನ ಮತ್ತು ಪರಿಗ್ರಹಗಳು ಆರು ಕರ್ಮಗಳು. ↩︎

  2. ತ್ರಪಾ (ಗೀತಾ ಪ್ರೆಸ್/ಭಾರತ ದರ್ಶನ). ↩︎

  3. ವಾಣಿಜ್ಯಪಶುರಕ್ಷಾ ಚ ಕೃಷ್ಯಾದಾನರತಿಃ ಶುಚಿಃ। (ಗೀತಾ ಪ್ರೆಸ್/ಭಾರತ ದರ್ಶನ). ↩︎

  4. ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ವಾರ್ಯೋ ಸರ್ವಾತ್ಮನಾ ತೌ ಹಿ ಶ್ರೇಯೋಘಾತಾರ್ಥಮುಚ್ಛ್ರಿತೌ। (ಗೀತಾ ಪ್ರೆಸ್/ಭಾರತ ದರ್ಶನ). ↩︎

  5. ನಿತ್ಯಂ ಕ್ರೋಧಾಚ್ಛ್ರಿಯಂ ರಕ್ಷೇತ್ತಪೋ ರಕ್ಷೇಚ್ಚ ಮತ್ಸರಾತ್। (ಗೀತಾ ಪ್ರೆಸ್/ಭಾರತ ದರ್ಶನ). ↩︎

  6. ನಿರ್ವೇದಾದೇವ ನಿರ್ವಾಣಂ (ಗೀತಾ ಪ್ರೆಸ್/ಭಾರತ ದರ್ಶನ). ↩︎