086 ಅಮಾತ್ಯವಿಭಾಗಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 86

ಸಾರ

ರಾಜನ ವ್ಯವಹಾರ; ಮಂತ್ರಿಮಂಡಲದ ರಚನೆ; ಮಂತ್ರಿ, ಸೇನಾಪತಿ, ಮತ್ತು ದೂತರ ಗುಣ-ಲಕ್ಷಣಗಳು (1-33).

12086001 ಯುಧಿಷ್ಠಿರ ಉವಾಚ।
12086001a ಕಥಂ ಸ್ವಿದಿಹ ರಾಜೇಂದ್ರ ಪಾಲಯನ್ಪಾರ್ಥಿವಃ ಪ್ರಜಾಃ।
12086001c ಪ್ರತಿ ಧರ್ಮಂ ವಿಶೇಷೇಣ ಕೀರ್ತಿಮಾಪ್ನೋತಿ ಶಾಶ್ವತೀಮ್।।

ಯುಧಿಷ್ಠಿರನು ಹೇಳಿದನು: “ರಾಜೇಂದ್ರ! ಇಲ್ಲಿ ಪ್ರಜೆಗಳನ್ನು ಯಾವ ಧರ್ಮವಿಶೇಷದಿಂದ ಪಾಲಿಸಿದರೆ ರಾಜನು ಪ್ರಜೆಗಳ ಪ್ರೀತಿಯನ್ನೂ ಶಾಶ್ವತ ಕೀರ್ತಿಯನ್ನೂ ಪಡೆಯುತ್ತಾನೆ?”

12086002 ಭೀಷ್ಮ ಉವಾಚ।
12086002a ವ್ಯವಹಾರೇಣ ಶುದ್ಧೇನ ಪ್ರಜಾಪಾಲನತತ್ಪರಃ।
12086002c ಪ್ರಾಪ್ಯ ಧರ್ಮಂ ಚ ಕೀರ್ತಿಂ ಚ ಲೋಕಾವಾಪ್ನೋತ್ಯುಭೌ ಶುಚಿಃ।।

ಭೀಷ್ಮನು ಹೇಳಿದನು: “ಶುಚಿಯಾಗಿ ಶುದ್ಧ ವ್ಯವಹಾರಗಳಿಂದ ಪ್ರಜಾಪಾಲನೆಯಲ್ಲಿ ತತ್ಪರನಾಗಿರುವ ರಾಜನು ಇಹ-ಪರ ಲೋಕಗಳಲ್ಲಿ ಧರ್ಮ ಮತ್ತು ಕೀರ್ತಿಗಳನ್ನು ಪಡೆಯುತ್ತಾನೆ.”

12086003 ಯುಧಿಷ್ಠಿರ ಉವಾಚ।
12086003a ಕೀದೃಶಂ ವ್ಯವಹಾರಂ ತು ಕೈಶ್ಚ ವ್ಯವಹರೇನ್ನೃಪಃ।
12086003c ಏತತ್ಪೃಷ್ಟೋ ಮಹಾಪ್ರಾಜ್ಞ ಯಥಾವದ್ವಕ್ತುಮರ್ಹಸಿ।।

ಯುಧಿಷ್ಠಿರನು ಹೇಳಿದನು: “ಮಹಾಪ್ರಾಜ್ಞ! ರಾಜನು ಯಾವ ವ್ಯವಹಾರಗಳನ್ನು ಕೈಗೊಳ್ಳಬೇಕು ಮತ್ತು ಯಾರೊಂದಿಗೆ ವ್ಯವಹರಿಸಬೇಕು? ನನ್ನ ಈ ಪ್ರಶ್ನೆಗೆ ಯಥಾವತ್ತಾಗಿ ಉತ್ತರಿಸಬೇಕು.

12086004a ಯೇ ಚೈತೇ ಪೂರ್ವಕಥಿತಾ ಗುಣಾಸ್ತೇ ಪುರುಷಂ ಪ್ರತಿ।
12086004c ನೈಕಸ್ಮಿನ್ಪುರುಷೇ ಹ್ಯೇತೇ ವಿದ್ಯಂತ ಇತಿ ಮೇ ಮತಿಃ।।

ನೀನು ಈ ಹಿಂದೆ ಹೇಳಿದ ಪುರುಷನಲ್ಲಿರಬೇಕಾದ ಗುಣಗಳೆಲ್ಲವೂ ಒಬ್ಬ ಪುರುಷನಲ್ಲಿಯೇ ಇರುವುದಿಲ್ಲ ಎಂದು ನನ್ನ ಅಭಿಪ್ರಾಯ.”

12086005 ಭೀಷ್ಮ ಉವಾಚ।
12086005a ಏವಮೇತನ್ಮಹಾಪ್ರಾಜ್ಞ ಯಥಾ ವದಸಿ ಬುದ್ಧಿಮಾನ್।
12086005c ದುರ್ಲಭಃ ಪುರುಷಃ ಕಶ್ಚಿದೇಭಿರ್ಗುಣಗುಣೈರ್ಯುತಃ।।

ಭೀಷ್ಮನು ಹೇಳಿದನು: “ಮಹಾಪ್ರಾಜ್ಞ! ಬುದ್ಧಿವಂತ! ನೀನು ಹೇಳಿದುದು ಸರಿ. ಈ ಗುಣಗಳೆಲ್ಲವೂ ಯಾವುದೇ ಓರ್ವ ಪುರುಷನಲ್ಲಿರುವುದು ದುರ್ಲಭ.

12086006a ಕಿಂ ತು ಸಂಕ್ಷೇಪತಃ ಶೀಲಂ ಪ್ರಯತ್ನೇ ನೇಹ ದುರ್ಲಭಮ್।
12086006c ವಕ್ಷ್ಯಾಮಿ ತು ಯಥಾಮಾತ್ಯಾನ್ಯಾದೃಶಾಂಶ್ಚ ಕರಿಷ್ಯಸಿ।।

ದುರ್ಲಭವಾಗಿರುವ ಈ ಶೀಲವನ್ನು ಸಂಕ್ಷೇಪವಾಗಿ ಹೇಳುತ್ತೇನೆ. ಯಾವ ರೀತಿಯ ಅಮಾತ್ಯರನ್ನು ನೀನು ಮಾಡಿಕೊಳ್ಳಬೇಕು ಎನ್ನುವುದನ್ನೂ ಹೇಳುತ್ತೇನೆ.

12086007a ಚತುರೋ ಬ್ರಾಹ್ಮಣಾನ್ವೈದ್ಯಾನ್ಪ್ರಗಲ್ಭಾನ್ಸಾತ್ತ್ವಿಕಾನ್ ಶುಚೀನ್।
12086007c ತ್ರೀಂಶ್ಚ ಶೂದ್ರಾನ್ವಿನೀತಾಂಶ್ಚ ಶುಚೀನ್ಕರ್ಮಣಿ ಪೂರ್ವಕೇ।।
12086008a ಅಷ್ಟಾಭಿಶ್ಚ ಗುಣೈರ್ಯುಕ್ತಂ ಸೂತಂ ಪೌರಾಣಿಕಂ ಚರೇತ್।

ಪ್ರತಿಭಾನ್ವಿತ, ಅಂತಃಕರಣ ಶುದ್ಧಿಯ, ಸ್ನಾತಕ ವಿದ್ವಾಂಸರಾದ ನಾಲ್ವರು ಬ್ರಾಹ್ಮಣರನ್ನೂ, ಬಲಿಷ್ಠ ಶಸ್ತ್ರಪಾಣಿಗಳಾದ ಎಂಟು ಕ್ಷತ್ರಿಯರನ್ನೂ, ಐಶ್ವರ್ಯಸಂಪನ್ನ ಇಪ್ಪತ್ತೊಂದು ವೈಶ್ಯರನ್ನೂ, ಪವಿತ್ರ ಆಚಾರ-ವಿಚಾರಗಳಿರುವ ವಿನಯಶೀಲ ಮೂವರು ಶೂದ್ರರನ್ನೂ, ಎಂಟು ಗುಣಗಳಿರುವ1 ಪುರಾಣಜ್ಞ ಸೂತನನ್ನೂ ಸೇರಿಕೊಂಡು ಈ ಮೂವತ್ತೇಳು ಜನರಿರುವ ಮಹಾ ಮಂತ್ರಿಮಂಡಲವನ್ನು ರಾಜನು ರಚಿಸಬೇಕು.

12086008c ಪಂಚಾಶದ್ವರ್ಷವಯಸಂ ಪ್ರಗಲ್ಭಮನಸೂಯಕಮ್।।
12086009a ಮತಿಸ್ಮೃತಿಸಮಾಯುಕ್ತಂ ವಿನೀತಂ ಸಮದರ್ಶನಮ್।
12086009c ಕಾರ್ಯೇ ವಿವದಮಾನಾನಾಂ ಶಕ್ತಮರ್ಥೇಷ್ವಲೋಲುಪಮ್।।

ಸೂತನ ವಯಸ್ಸು ಐವತ್ತಕ್ಕೆ ಕಡಿಮೆಯಿರಬಾರದು. ಅವನು ಪ್ರತಿಭಾವಂತನೂ, ಇನ್ನೊಬ್ಬರಲ್ಲಿ ದೋಷವನ್ನೆಣಿಸದವನೂ, ಶ್ರುತಿ-ಸ್ಮೃತಿಗಳನ್ನು ತಿಳಿದುಕೊಂಡಿರುವವನೂ, ವಿನೀತನೂ, ಸುಂದರನೂ ಆಗಿರಬೇಕು. ಕಾರ್ಯಸಂಬಂಧ ವಿವಾದವುಂಟಾದಾಗ ಎಲ್ಲ ಪಕ್ಷದವರನ್ನೂ ಸಮಾಧಾನಗೊಳಿಸಲು ಸಮರ್ಥನಾಗಿರಬೇಕು. ಲೋಭರಹಿತನಾಗಿರಬೇಕು.

12086010a ವಿವರ್ಜಿತಾನಾಂ ವ್ಯಸನೈಃ ಸುಘೋರೈಃ ಸಪ್ತಭಿರ್ಭೃಶಮ್।
12086010c ಅಷ್ಟಾನಾಂ ಮಂತ್ರಿಣಾಂ ಮಧ್ಯೇ ಮಂತ್ರಂ ರಾಜೋಪಧಾರಯೇತ್।।

ಏಳು2 ಅತ್ಯಂತ ಘೋರ ವ್ಯಸನಗಳಿಂದ ವಿವರ್ಜಿತರಾದ ಎಂಟು ಮಂತ್ರಿಗಳ ಮಧ್ಯೆ ರಾಜನು ಮಂತ್ರಾಲೋಚನೆ ಮಾಡಬೇಕು.

12086011a ತತಃ ಸಂಪ್ರೇಷಯೇದ್ರಾಷ್ಟ್ರೇ ರಾಷ್ಟ್ರಾಯಾಥ ಚ ದರ್ಶಯೇತ್।
12086011c ಅನೇನ ವ್ಯವಹಾರೇಣ ದ್ರಷ್ಟವ್ಯಾಸ್ತೇ ಪ್ರಜಾಃ ಸದಾ।।

ಅನಂತರ ಈ ನಿರ್ಣಯವನ್ನು ರಾಷ್ಟ್ರದಲ್ಲಿ ಪ್ರಚರಿಸಬೇಕು. ಇದರ ಪ್ರಯೋಜನಗಳನ್ನು ರಾಷ್ಟ್ರದವರಿಗೆ ತೋರಿಸಬೇಕು. ಇಂತಹ ವ್ಯವಹಾರಗಳಿಂದ ಸದಾ ಪ್ರಜೆಗಳನ್ನು ನೋಡಿಕೊಳ್ಳುತ್ತಿರಬೇಕು.

12086012a ನ ಚಾಪಿ ಗೂಢಂ ಕಾರ್ಯಂ3 ತೇ ಗ್ರಾಹ್ಯಂ ಕಾರ್ಯೋಪಘಾತಕಮ್।
12086012c ಕಾರ್ಯೇ ಖಲು ವಿಪನ್ನೇ ತ್ವಾಂ ಸೋಽಧರ್ಮಸ್ತಾಂಶ್ಚ ಪೀಡಯೇತ್।।

ನೀನು ಯಾವುದೇ ರೀತಿಯ ಗೂಢ ಕಾರ್ಯಗಳನ್ನು ನಡೆಸಬಾರದು. ಅದು ಕಾರ್ಯಗಳನ್ನು ಘಾತಿಗೊಳಿಸುತ್ತದೆ. ಈ ಅಧರ್ಮದಿಂದ ಆ ಕಾರ್ಯವನ್ನು ಮಾಡಿದರವರಿಗೂ ಆಪತ್ತಾಗಬಹುದು.

12086013a ವಿದ್ರವೇಚ್ಚೈವ ರಾಷ್ಟ್ರಂ ತೇ ಶ್ಯೇನಾತ್ಪಕ್ಷಿಗಣಾ ಇವ।
12086013c ಪರಿಸ್ರವೇಚ್ಚ ಸತತಂ ನೌರ್ವಿಶೀರ್ಣೇವ ಸಾಗರೇ।।

ಹೀಗೆ ಮಾಡಿದರೆ ಗಿಡುಗವನ್ನು ಕಂಡು ಹೆದರಿ ದೂರಹೋಗುವ ಹಕ್ಕಿಗಳಂತೆ ಜನರು ನಿನ್ನ ದೂರ ಹೋಗುತ್ತಾರೆ. ಸಾಗರದಲ್ಲಿ ಒಡೆದ ಹಡಗು ನೀರು ತುಂಬಿ ಸುತ್ತುತ್ತಿರುವಂತೆ ದಿಕ್ಕುತೋಚದೇ ಜನರು ಸುತ್ತಾಡುತ್ತಾರೆ.

12086014a ಪ್ರಜಾಃ ಪಾಲಯತೋಽಸಮ್ಯಗಧರ್ಮೇಣೇಹ ಭೂಪತೇಃ।
12086014c ಹಾರ್ದಂ ಭಯಂ ಸಂಭವತಿ ಸ್ವರ್ಗಶ್ಚಾಸ್ಯ ವಿರುಧ್ಯತೇ।।

ಅತ್ಯಂತ ಅಧರ್ಮದಿಂದ ಪ್ರಜೆಗಳನ್ನು ಪಾಲಿಸುವ ಭೂಪತಿಯ ಹೃದಯವನ್ನು ಭಯವು ಆವರಿಸುತ್ತದೆ ಮತ್ತು ಅವನಿಗೆ ಪರಲೋಕವೂ ವಿಪರೀತವಾಗಿ ಪರಿಣಮಿಸುತ್ತದೆ.

12086015a ಅಥ ಯೋಽಧರ್ಮತಃ ಪಾತಿ ರಾಜಾಮಾತ್ಯೋಽಥ ವಾತ್ಮಜಃ।
12086015c ಧರ್ಮಾಸನೇ ನಿಯುಕ್ತಃ ಸನ್ಧರ್ಮಮೂಲಂ ನರರ್ಷಭ।।
12086016a ಕಾರ್ಯೇಷ್ವಧಿಕೃತಾಃ ಸಮ್ಯಗಕುರ್ವಂತೋ ನೃಪಾನುಗಾಃ।
12086016c ಆತ್ಮಾನಂ ಪುರತಃ ಕೃತ್ವಾ ಯಾಂತ್ಯಧಃ ಸಹಪಾರ್ಥಿವಾಃ।।

ನರರ್ಷಭ! ರಾಜನಾಗಲೀ, ಅಮಾತ್ಯನಾಗಲೀ, ರಾಜಪುತ್ರನಾಗಲೀ ಅಧರ್ಮದಿಂದ ರಾಜ್ಯಪಾಲನೆ ಮಾಡಿದರೆ ರಾಜಕಾರ್ಯದಲ್ಲಿ ನಿಯುಕ್ತ ರಾಜನ ಅನುಯಾಯಿಗಳು ತಮ್ಮ ಕಾರ್ಯಗಳನ್ನು ಸರಿಯಾಗಿ ಮಾಡದೇ ಇರುವುದರಿಂದ ತಮ್ಮನ್ನೇ ಮುಂದೆ ಮಾಡಿಕೊಂಡು ತಮ್ಮನ್ನು ನಿಯಮಿಸಿದ ರಾಜನೊಂದಿಗೆ ನರಕದಲ್ಲಿ ಬೀಳುತ್ತಾರೆ.

12086017a ಬಲಾತ್ಕೃತಾನಾಂ ಬಲಿಭಿಃ ಕೃಪಣಂ ಬಹು ಜಲ್ಪತಾಮ್।
12086017c ನಾಥೋ ವೈ ಭೂಮಿಪೋ ನಿತ್ಯಮನಾಥಾನಾಂ ನೃಣಾಂ ಭವೇತ್।।

ಬಲಿಷ್ಠರ ಬಲಾತ್ಕಾರಕ್ಕೊಳಗಾಗಿ ದೈನ್ಯಭಾವದಿಂದ ಕೂಗಿಕೊಳ್ಳುವ ಅನಾಥ ಜನರಿಗೆ ರಾಜನು ರಕ್ಷಣೆಯನ್ನು ನೀಡುವ ನಾಥನಾಗಬೇಕು.

12086018a ತತಃ ಸಾಕ್ಷಿಬಲಂ ಸಾಧು ದ್ವೈಧೇ ವಾದಕೃತಂ ಭವೇತ್।
12086018c ಅಸಾಕ್ಷಿಕಮನಾಥಂ ವಾ ಪರೀಕ್ಷ್ಯಂ ತದ್ವಿಶೇಷತಃ।।

ಎರಡು ಪಕ್ಷದವರು ವಾದಮಾಡುತ್ತಿರುವ ಸಂದರ್ಭದಲ್ಲಿ ಸಾಕ್ಷಿಬಲವೇ ಉತ್ತಮವಾದುದು. ಆದರೆ ಸಾಕ್ಷಿಗಳೇ ಇಲ್ಲದ ಅನಾಥರನ್ನು ವಿಶೇಷವಾಗಿ ಪರೀಕ್ಷಿಸಿ ನ್ಯಾಯವನ್ನು ದೊರಕಿಸಬೇಕು.

12086019a ಅಪರಾಧಾನುರೂಪಂ ಚ ದಂಡಂ ಪಾಪೇಷು ಪಾತಯೇತ್।
12086019c ಉದ್ವೇಜಯೇದ್ಧನೈರೃದ್ಧಾನ್ದರಿದ್ರಾನ್ವಧಬಂಧನೈಃ।।

ಪಾಪಿಗಳಿಗೆ ಅಪರಾಧಕ್ಕೆ ಅನುಗುಣವದ ದಂಡವನ್ನು ನೀಡಬೇಕು. ಧನಿಕರನ್ನು ಧನದಂಡದ ಮೂಲಕ ಮತ್ತು ದರಿದ್ರರನ್ನು ವಧ-ಬಂಧನಗಳ ಮೂಲಕ ಶಿಕ್ಷಿಸಬೇಕು.

12086020a ವಿನಯೈರಪಿ ದುರ್ವೃತ್ತಾನ್ಪ್ರಹಾರೈರಪಿ ಪಾರ್ಥಿವಃ।
12086020c ಸಾಂತ್ವೇನೋಪಪ್ರದಾನೇನ ಶಿಷ್ಟಾಂಶ್ಚ ಪರಿಪಾಲಯೇತ್।।

ದುರ್ವೃತ್ತರನ್ನು ಪ್ರಹಾರಗಳಿಂದಲಾದರೂ ಸನ್ಮಾರ್ಗಕ್ಕೆ ತರಬೇಕು. ಶಿಷ್ಟರನ್ನು ಸಾಂತ್ವವಚನಗಳಿಂದಲೂ ವಸ್ತುಗಳ ಪ್ರದಾನದಿಂದಲೂ ಪರಿಪಾಲಿಸಬೇಕು.

12086021a ರಾಜ್ಞೋ ವಧಂ ಚಿಕೀರ್ಷೇದ್ಯಸ್ತಸ್ಯ ಚಿತ್ರೋ ವಧೋ ಭವೇತ್।
12086021c ಆಜೀವಕಸ್ಯ ಸ್ತೇನಸ್ಯ ವರ್ಣಸಂಕರಕಸ್ಯ ಚ।।

ರಾಜನನ್ನು ವಧಿಸಲು ಬಯಸಿದವನಿಗೆ, ಕೊಂದವನಿಗೆ, ಕಳ್ಳನಿಗೆ ಮತ್ತು ವರ್ಣಸಂಕರವನ್ನುಂಟುಮಾಡುವವನಿಗೆ ಚಿತ್ರಹಿಂಸೆಯನ್ನು ಕೊಟ್ಟು ವಧಿಸಬೇಕು.

12086022a ಸಮ್ಯಕ್ಪ್ರಣಯತೋ ದಂಡಂ ಭೂಮಿಪಸ್ಯ ವಿಶಾಂ ಪತೇ।
12086022c ಯುಕ್ತಸ್ಯ ವಾ ನಾಸ್ತ್ಯಧರ್ಮೋ ಧರ್ಮ ಏವೇಹ ಶಾಶ್ವತಃ।।

ವಿಶಾಂಪತೇ! ಚೆನ್ನಾಗಿ ಪರಿಶೀಲಿಸಿ ದಂಡವನ್ನು ವಿಧಿಸುವ ಭೂಮಿಪನಿಗೆ ಮತ್ತು ಯುಕ್ತ ದಂಡವನ್ನು ವಿಧಿಸುವುದರಿಂದ ಅಧರ್ಮವು ಉಂಟಾಗುವುದಿಲ್ಲ. ಇದೇ ಸನಾತನ ಧರ್ಮ.

12086023a ಕಾಮಕಾರೇಣ ದಂಡಂ ತು ಯಃ ಕುರ್ಯಾದವಿಚಕ್ಷಣಃ।
12086023c ಸ ಇಹಾಕೀರ್ತಿಸಂಯುಕ್ತೋ ಮೃತೋ ನರಕಮಾಪ್ನುಯಾತ್।।

ವಿಚಾರಿಸದೇ ಮನಬಂದಂತೆ ದಂದವನ್ನು ವಿಧಿಸುವವನು ಇಲ್ಲಿ ಅಕೀರ್ತಿಯನ್ನು ಪಡೆಯುವುದಲ್ಲದೇ ಮರಣಾನಂತರ ನರಕವನ್ನು ಪಡೆಯುತ್ತಾನೆ.

12086024a ನ ಪರಸ್ಯ ಶ್ರವಾದೇವ ಪರೇಷಾಂ ದಂಡಮರ್ಪಯೇತ್।
12086024c ಆಗಮಾನುಗಮಂ ಕೃತ್ವಾ ಬಧ್ನೀಯಾನ್ಮೋಕ್ಷಯೇತ ವಾ।।

ಬೇರೆಯವರು ಆಡುವ ಮಾತನ್ನು ಕೇಳಿ ಒಬ್ಬನಿಗೆ ಶಿಕ್ಷೆಯನ್ನು ವಿಧಿಸಬಾರದು. ಸಾಕ್ಷಿ-ಪ್ರಮಾಣಾದಿಗಳಿಂದ ವಿಚಾರಮಾಡಿ ನಿಶ್ಚಯಿಸನಂತರವೇ ಅಪರಾಧಿಯನ್ನು ಬಂಧಿಸಬೇಕು. ಇಲ್ಲವಾದರೆ ಅವನನ್ನು ಬಿಟ್ಟುಬಿಡಬೇಕು.

12086025a ನ ತು ಹನ್ಯಾನ್ನೃಪೋ ಜಾತು ದೂತಂ ಕಸ್ಯಾಂ ಚಿದಾಪದಿ।
12086025c ದೂತಸ್ಯ ಹಂತಾ ನಿರಯಮಾವಿಶೇತ್ಸಚಿವೈಃ ಸಹ।।

ಯಾವುದೇ ಆಪತ್ತಿನ ಸಮಯದಲ್ಲಿಯೂ ನೃಪನು ದೂತನನ್ನು ಕೊಲ್ಲಬಾರದು. ದೂತನನ್ನು ಕೊಂದ ರಾಜನು ಸಚಿವರೊಂದಿಗೆ ನರಕಕ್ಕೆ ಹೋಗುತ್ತಾನೆ.

12086026a ಯಥೋಕ್ತವಾದಿನಂ ದೂತಂ ಕ್ಷತ್ರಧರ್ಮರತೋ ನೃಪಃ।
12086026c ಯೋ ಹನ್ಯಾತ್ಪಿತರಸ್ತಸ್ಯ ಭ್ರೂಣಹತ್ಯಾಮವಾಪ್ನುಯುಃ।।

ಕ್ಷತ್ರಧರ್ಮರತ ನೃಪನು ಹೇಳಿಕಳುಹಿಸಿದುದನ್ನು ಹೇಳುವ ದೂತನನ್ನು ಕೊಂದರೆ ಅವನ ಪಿತೃಗಳು ಭ್ರೂಣಹತ್ಯಾಪಾಪವನ್ನು ಹೊಂದುತ್ತಾರೆ.

12086027a ಕುಲೀನಃ ಶೀಲಸಂಪನ್ನೋ ವಾಗ್ಮೀ ದಕ್ಷಃ ಪ್ರಿಯಂವದಃ।
12086027c ಯಥೋಕ್ತವಾದೀ ಸ್ಮೃತಿಮಾನ್ದೂತಃ ಸ್ಯಾತ್ಸಪ್ತಭಿರ್ಗುಣೈಃ।।

ದೂತನಾದವನು ಈ ಏಳು ಗುಣಗಳನ್ನು ಹೊಂದಿರಬೇಕು: ಕುಲೀನನಾಗಿರಬೇಕು. ಶೀಲಸಂಪನ್ನನಾಗಿರಬೇಕು. ವಾಗ್ಮೀ, ದಕ್ಷ, ಪ್ರಿಯಂವದ ಮತ್ತು ಹೇಳಿಕಳುಹಿಸಿದ ಮಾತುಗಳನ್ನೇ ಹೇಳುವವನಾಗಿರಬೇಕು.

12086028a ಏತೈರೇವ ಗುಣೈರ್ಯುಕ್ತಃ ಪ್ರತೀಹಾರೋಽಸ್ಯ ರಕ್ಷಿತಾ।
12086028c ಶಿರೋರಕ್ಷಶ್ಚ ಭವತಿ ಗುಣೈರೇತೈಃ ಸಮನ್ವಿತಃ।।

ರಾಜದ್ವಾರವನ್ನು ರಕ್ಷಿಸುವ ಪ್ರತೀಹಾರಿ-ದ್ವಾರಪಾಲಕನೂ ಮತ್ತು ರಾಜನ ಶಿರೋರಕ್ಷಕ-ಅಂಗರಕ್ಷಕನೂ ಈ ಗುಣಗಳಿಂದ ಕೂಡಿದವನಾಗಿರಬೇಕು.

12086029a ಧರ್ಮಾರ್ಥಶಾಸ್ತ್ರತತ್ತ್ವಜ್ಞಃ ಸಂಧಿವಿಗ್ರಹಕೋ ಭವೇತ್।
12086029c ಮತಿಮಾನ್ಧೃತಿಮಾನ್ಧೀಮಾನ್ರಹಸ್ಯವಿನಿಗೂಹಿತಾ।।

ಧರ್ಮಾರ್ಥಶಾಸ್ತ್ರತತ್ತ್ವಜ್ಞ, ಬುದ್ಧಿವಂತ, ಧೀರ, ಲಜ್ಜಾಶೀಲ, ಮತ್ತು ರಹಸ್ಯವನ್ನು ಗೋಪ್ಯವಾಗಿಡುವವನು ಸಂಧಿವಿಗ್ರಹಕನಾಗಬೇಕು.

12086030a ಕುಲೀನಃ ಸತ್ಯಸಂಪನ್ನಃ ಶಕ್ತೋಽಮಾತ್ಯಃ ಪ್ರಶಂಸಿತಃ।
12086030c ಏತೈರೇವ ಗುಣೈರ್ಯುಕ್ತಸ್ತಥಾ ಸೇನಾಪತಿರ್ಭವೇತ್।।

ಕುಲೀನ, ಸತ್ಯಸಂಪನ್ನ, ಶಕ್ತನು ಶ್ರೇಷ್ಠಮಂತ್ರಿಯೆಂದು ಪರಿಗಣಿಸಲ್ಪಡುತ್ತಾನೆ. ಇವೇ ಗುಣಗಳಿಂದ ಯುಕ್ತನಾದವನು ಸೇನಾಪತಿಯಾಗಬೇಕು.

12086031a ವ್ಯೂಹಯಂತ್ರಾಯುಧೀಯಾನಾಂ ತತ್ತ್ವಜ್ಞೋ ವಿಕ್ರಮಾನ್ವಿತಃ।
12086031c ವರ್ಷಶೀತೋಷ್ಣವಾತಾನಾಂ ಸಹಿಷ್ಣುಃ ಪರರಂಧ್ರವಿತ್।।

ಸೇನಾಪತಿಯಾದವನು ವ್ಯೂಹ-ಯಂತ್ರ-ಆಯುಧಗಳ ತತ್ತ್ವಜ್ಞನಾಗಿರಬೇಕು. ವಿಕ್ರಮಾನ್ವಿತನಾಗಿರಬೇಕು. ಮಳೆ-ಗಾಳಿ-ಛಳಿ-ಬಿಸಿಲುಗಳನ್ನು ಸಹಿಸಿಕೊಳ್ಳುವವನಾಗಿರಬೇಕು. ಶತ್ರುಗಳ ನ್ಯೂನತೆಗಳನ್ನು ತಿಳಿದುಕೊಂಡಿರುವವನಾಗಿರಬೇಕು.

12086032a ವಿಶ್ವಾಸಯೇತ್ಪರಾಂಶ್ಚೈವ ವಿಶ್ವಸೇನ್ನ ತು ಕಸ್ಯ ಚಿತ್।
12086032c ಪುತ್ರೇಷ್ವಪಿ ಹಿ ರಾಜೇಂದ್ರ ವಿಶ್ವಾಸೋ ನ ಪ್ರಶಸ್ಯತೇ।।

ಶತ್ರುಗಳೂ ನಂಬುವ ರೀತಿಯಲ್ಲಿ ರಾಜನು ವ್ಯವಹಾರಗಳನ್ನಿಟ್ಟುಕೊಂಡಿರಬೇಕು. ಆದರೆ ತಾನು ಮಾತ್ರ ಯಾರಲ್ಲಿಯೂ ವಿಶ್ವಾಸವನ್ನಿಟ್ಟುಕೊಂಡಿರಬಾರದು. ರಾಜೇಂದ್ರ! ಪುತ್ರರಲ್ಲಿಯೂ ವಿಶ್ವಾಸವನ್ನಿಟ್ಟುಕೊಂಡಿರುವುದನ್ನು ಪ್ರಶಂಸಿಸುವುದಿಲ್ಲ.

12086033a ಏತಚ್ಚಾಸ್ತ್ರಾರ್ಥತತ್ತ್ವಂ ತು ತವಾಖ್ಯಾತಂ ಮಯಾನಘ।
12086033c ಅವಿಶ್ವಾಸೋ ನರೇಂದ್ರಾಣಾಂ ಗುಹ್ಯಂ ಪರಮಮುಚ್ಯತೇ।।

ಅನಘ! ಈ ಶಾಸ್ತ್ರಾರ್ಥತತ್ತ್ವವನ್ನು ನಿನಗೆ ಹೇಳಿದ್ದೇನೆ. ಯಾರಮೇಲೂ ವಿಶ್ವಾಸವನ್ನಿಡದಿರುವುದೇ ನರೇಂದ್ರರ ಪರಮ ಗುಟ್ಟೆಂದು ಹೇಳುತ್ತಾರೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಅಮಾತ್ಯವಿಭಾಗೇ ಷಡಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಅಮಾತ್ಯವಿಭಾಗ ಎನ್ನುವ ಎಂಭತ್ತಾರನೇ ಅಧ್ಯಾಯವು.


  1. ಸೂತನಲ್ಲಿರಬೇಕಾದ ಎಂಟು ಗುಣಗಳು ಈ ರೀತಿಯಿವೆ: ಶುಶ್ರೂಷಾ (ಶುಶ್ರೂಷೆ ಮಾಡುವುದು), ಶ್ರವಣ (ಹೇಳಿದುದನ್ನು ಕೇಳುವುದು), ಗ್ರಹಣ (ಕೇಳಿದುದನ್ನು ಗ್ರಹಣ ಮಾಡುವುದು), ಧಾರಣ (ಗ್ರಹಣಮಾಡಿದುದನ್ನು ಜ್ಞಾಪಕದಲ್ಲಿಟ್ಟುಕೊಳ್ಳುವುದು), ಊಹನ (ಕಾರ್ಯಗಳ ಪರಿಣಾಮವೇನಾಗಬಹುದೆಂದು ಊಹಿಸುವುದು), ಆಪೋಹನ (ಕಾರ್ಯವು ಸಿದ್ಧಿಯಾಗದಿದ್ದರೆ ಮುಂದೇನುಮಾಡಬೇಕೆಂದು ಯೋಚಿಸುವುದು), ವಿಜ್ಞಾನ (ವಿಜ್ಞಾನವನ್ನು ತಿಳಿದಿರುವುದು), ಮತ್ತು ತತ್ತ್ವಜ್ಞಾನ (ತತ್ತ್ವಜ್ಞಾನವನ್ನು ತಿಳಿದಿರುವುದು). ↩︎

  2. ಏಳು ವ್ಯಸನಗಳು ಈ ರೀತಿಯಿವೆ: ಮೃಗಾಯಾಕ್ಷಾಃ ಸ್ತ್ರೀಯಃ ಪಾನಂ। ಬೇಟೆಯಾಡುವುದು, ಜೂಜಾಡುವುದು, ಸದಾ ಸ್ತ್ರೀಯರ ಸಹವಾಸದಲ್ಲಿರುವುದು, ಸದಾ ಮದ್ಯಪಾನಪ್ರಿಯನಾಗಿರುವುದು, ಈ ನಾಲ್ಕು ಕಾಮಜನ್ಯ ವ್ಯಸನಗಳು. ದಂಡಪಾತನಂ ವಾಕ್ಪಾರುಷ್ಯಂ ಅರ್ಥದೂಷಣಂ। ಕಠೋರವಾಗಿ ಶಿಕ್ಷಿಸುವುದು, ಕಠೋರವಾಗಿ ಮಾತನಾಡುವುದು, ಅರ್ಥವನ್ನು ದೂಷಿಸುವುದು – ಈ ಮೂರು ಕ್ರೋಧಜನ್ಯ ವ್ಯಸನಗಳು. ↩︎

  3. ನ ಚಾಪಿ ಗೂಢಂ ದ್ರವ್ಯಂ ಎಂಬ ಪಾಠಾಂತರವಿದೆ. ↩︎