002 ಧೃತರಾಷ್ಟ್ರಶೋಕಕರಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸ್ತ್ರೀ ಪರ್ವ

ವಿಶೋಕ ಪರ್ವ

ಅಧ್ಯಾಯ 2

ಸಾರ

ವಿದುರನು ಸುಭಾಷಿತಗಳನ್ನು ಹೇಳಿ ದೃತರಾಷ್ಟ್ರನನ್ನು ಸಂತವಿಸಿದುದು (1-23).

11002001 ವೈಶಂಪಾಯನ ಉವಾಚ।
11002001a ತತೋಽಮೃತಸಮೈರ್ವಾಕ್ಯೈರ್ಹ್ಲಾದಯನ್ಪುರುಷರ್ಷಭಮ್।
11002001c ವೈಚಿತ್ರವೀರ್ಯಂ ವಿದುರೋ ಯದುವಾಚ ನಿಬೋಧ ತತ್।।

ವೈಶಂಪಾಯನನು ಹೇಳಿದನು: “ಆಗ ವಿದುರನು ಅಮೃತ ಸಮಾನ ಮಾತುಗಳಿಂದ ಪುರುಷರ್ಷಭ ವೈಚಿತ್ರವೀರ್ಯನನ್ನು ಆಹ್ಲಾದಗೊಳಿಸಿದನು. ಏನು ಹೇಳಿದನೆನ್ನುವುದನ್ನು ಕೇಳು!

11002002 ವಿದುರ ಉವಾಚ।
11002002a ಉತ್ತಿಷ್ಠ ರಾಜನ್ ಕಿಂ ಶೇಷೇ ಧಾರಯಾತ್ಮಾನಮಾತ್ಮನಾ।
11002002c ಸ್ಥಿರಜಂಗಮಮರ್ತ್ಯಾನಾಂ ಸರ್ವೇಷಾಮೇಷ ನಿರ್ಣಯಃ।।

ವಿದುರನು ಹೇಳಿದನು: “ಮೇಲೇಳು ರಾಜನ್! ಏಕೆ ಮಲಗಿರುವೆ? ಬುದ್ಧಿಯಿಂದ ನಿನ್ನ ಮನಸ್ಸನ್ನು ಸ್ಥಿರಗೊಳಿಸಿಕೋ! ಸ್ಥಿರ-ಜಂಗಮಗಳು ಮತ್ತು ಮನುಷ್ಯರು ಎಲ್ಲರ ನಿರ್ಣಯವೂ ಒಂದೇ!

11002003a ಸರ್ವೇ ಕ್ಷಯಾಂತಾ ನಿಚಯಾಃ ಪತನಾಂತಾಃ ಸಮುಚ್ಚ್ರಯಾಃ।
11002003c ಸಂಯೋಗಾ ವಿಪ್ರಯೋಗಾಂತಾ ಮರಣಾಂತಂ ಹಿ ಜೀವಿತಮ್।।

ಸಂಗ್ರಹಿಸಿದುದೆಲ್ಲವೂ ಕಡಿಮೆಯಾಗುತ್ತವೆ. ಮೇಲೇರಿದವು ಕೆಳಗೆ ಬೀಳುತ್ತವೆ. ಸೇರುವಿಕೆಯು ವಿಯೋಗದಲ್ಲಿ ಕೊನೆಯಾಗುತ್ತದೆ. ಮತ್ತು ಜೀವನವು ಮರಣದಲ್ಲಿ ಕೊನೆಗೊಳ್ಳುತ್ತದೆ.

11002004a ಯದಾ ಶೂರಂ ಚ ಭೀರುಂ ಚ ಯಮಃ ಕರ್ಷತಿ ಭಾರತ।
11002004c ತತ್ಕಿಂ ನ ಯೋತ್ಸ್ಯಂತಿ ಹಿ ತೇ ಕ್ಷತ್ರಿಯಾಃ ಕ್ಷತ್ರಿಯರ್ಷಭ।।

ಭಾರತ! ಕ್ಷತ್ರಿಯರ್ಷಭ! ಶೂರನಾಗಿರಲಿ ಹೇಡಿಯಾಗಿರಲಿ ಯಮನು ಎಳೆದುಕೊಂಡು ಹೋಗುತ್ತಾನೆ. ಹೀಗಿರುವಾಗ ಕ್ಷತ್ರಿಯರು ಏಕೆ ಯುದ್ಧಮಾಡುವುದಿಲ್ಲ?

11002005a ಅಯುಧ್ಯಮಾನೋ ಮ್ರಿಯತೇ ಯುಧ್ಯಮಾನಶ್ಚ ಜೀವತಿ।
11002005c ಕಾಲಂ ಪ್ರಾಪ್ಯ ಮಹಾರಾಜ ನ ಕಶ್ಚಿದತಿವರ್ತತೇ।।

ಮಹಾರಾಜ! ಯುದ್ಧಮಾಡದೇ ಉಳಿದುಕೊಂಡಿರುವವರು ಮತ್ತು ಯುದ್ಧಮಾಡಿಯೂ ಜೀವಂತವಿರುವವರು ಎಲ್ಲರಿಗೂ ಕಾಲವು ಒಂದೇರೀತಿಯಲ್ಲಿ ವರ್ತಿಸುತ್ತದೆ.

11002006a ನ ಚಾಪ್ಯೇತಾನ್ ಹತಾನ್ಯುದ್ಧೇ ರಾಜನ್ ಶೋಚಿತುಮರ್ಹಸಿ।
11002006c ಪ್ರಮಾಣಂ ಯದಿ ಶಾಸ್ತ್ರಾಣಿ ಗತಾಸ್ತೇ ಪರಮಾಂ ಗತಿಮ್।।

ರಾಜನ್! ಶಾಸ್ತ್ರಗಳ ಪ್ರಮಾಣದ ಪ್ರಕಾರ ಯುದ್ಧದಲ್ಲಿ ಹತರಾದವರ ಕುರಿತು ಶೋಕಿಸಬಾರದು. ಏಕೆಂದರೆ ಅವರು ಪರಮ ಗತಿಯನ್ನು ಪಡೆದಿರುತ್ತಾರೆ.

11002007a ಸರ್ವೇ ಸ್ವಾಧ್ಯಾಯವಂತೋ ಹಿ ಸರ್ವೇ ಚ ಚರಿತವ್ರತಾಃ।
11002007c ಸರ್ವೇ ಚಾಭಿಮುಖಾಃ ಕ್ಷೀಣಾಸ್ತತ್ರ ಕಾ ಪರಿದೇವನಾ।।

ಎಲ್ಲರೂ ವೇದಾಧ್ಯಯನ ಮಾಡಿದ್ದರು. ಎಲ್ಲರೂ ವ್ರತಗಳನ್ನು ನಡೆಸಿದ್ದರು. ಎಲ್ಲರೂ ಶತ್ರುಗಳನ್ನು ಎದುರಿಸಿಯೇ ಮಡಿದರು. ಅದರಲ್ಲಿ ದುಃಖಿಸುವುದೇನಿದೆ?

11002008a ಅದರ್ಶನಾದಾಪತಿತಾಃ ಪುನಶ್ಚಾದರ್ಶನಂ ಗತಾಃ।
11002008c ನ ತೇ ತವ ನ ತೇಷಾಂ ತ್ವಂ ತತ್ರ ಕಾ ಪರಿದೇವನಾ।।

ಕಣ್ಣಿಗೆ ಕಾಣಿಸದೇ ಇರುವಲ್ಲಿಂದ ಬಂದ ಅವರು ಪುನಃ ಕಣ್ಣಿಗೆ ಕಾಣಿಸದೇ ಇರುವಲ್ಲಿಗೆ ಹೋಗಿದ್ದಾರೆ! ಅವರು ನಿನ್ನವರೂ ಅಲ್ಲ. ನೀನು ಅವರವನೂ ಅಲ್ಲ. ಅದರಲ್ಲಿ ದುಃಖಿಸುವುದೇನಿದೆ?

11002009a ಹತೋಽಪಿ ಲಭತೇ ಸ್ವರ್ಗಂ ಹತ್ವಾ ಚ ಲಭತೇ ಯಶಃ।
11002009c ಉಭಯಂ ನೋ ಬಹುಗುಣಂ ನಾಸ್ತಿ ನಿಷ್ಫಲತಾ ರಣೇ।।

ಸತ್ತರೂ ಸ್ವರ್ಗವನ್ನು ಪಡೆಯುತ್ತಾರೆ. ಕೊಂದರೂ ಯಶಸ್ಸನ್ನು ಪಡೆಯುತ್ತಾರೆ. ಇವೆರಡೂ ಮಹಾಗುಣಯುಕ್ತವಾದವುಗಳು. ಆದುದರಿಂದ ರಣದಲ್ಲಿ ಯಾವುದೂ ನಿಷ್ಫಲವಾಗುವುದಿಲ್ಲ.

11002010a ತೇಷಾಂ ಕಾಮದುಘಾಽಲ್ಲೋಕಾನಿಂದ್ರಃ ಸಂಕಲ್ಪಯಿಷ್ಯತಿ।
11002010c ಇಂದ್ರಸ್ಯಾತಿಥಯೋ ಹ್ಯೇತೇ ಭವಂತಿ ಪುರುಷರ್ಷಭ।।

ಅವರ ಕಾಮನೆಗಳಿಗೆ ತಕ್ಕಂತೆ ಇಂದ್ರನೇ ಲೋಕಗಳನ್ನು ಸಿದ್ಧಪಡಿಸುತ್ತಾನೆ. ಪುರುಷರ್ಷಭ! ಅವರು ಇಂದ್ರನ ಅತಿಥಿಗಳೇ ಆಗುತ್ತಾರೆ.

11002011a ನ ಯಜ್ಞೈರ್ದಕ್ಷಿಣಾವದ್ಭಿರ್ನ ತಪೋಭಿರ್ನ ವಿದ್ಯಯಾ।
11002011c ಸ್ವರ್ಗಂ ಯಾಂತಿ ತಥಾ ಮರ್ತ್ಯಾ ಯಥಾ ಶೂರಾ ರಣೇ ಹತಾಃ।।

ರಣದಲ್ಲಿ ಹತರಾದ ಶೂರ ನರರು ಸ್ವರ್ಗಕ್ಕೆ ಹೋಗುವಂತೆ ಬಹಳ ದಕ್ಷಿಣೆಗಳನ್ನಿತ್ತು ಯಜ್ಞಗಳನ್ನು ಮಾಡುವುದರಿಂದಲೂ, ತಪಸ್ಸಿನಿಂದಲೂ, ಮತ್ತು ವಿದ್ಯೆಯಿಂದಲೂ ಸಾಧ್ಯವಿಲ್ಲ.

11002012a ಮಾತಾಪಿತೃಸಹಸ್ರಾಣಿ ಪುತ್ರದಾರಶತಾನಿ ಚ।
11002012c ಸಂಸಾರೇಷ್ವನುಭೂತಾನಿ ಕಸ್ಯ ತೇ ಕಸ್ಯ ವಾ ವಯಮ್।।

ಈ ಸಂಸಾರದಲ್ಲಿ ನಾವು ಸಾವಿರಾರು ಮಾತಾ-ಪಿತೃಗಳನ್ನು, ನೂರಾರು ಮಕ್ಕಳು-ಪತ್ನಿಯರನ್ನು ಅನುಭವಿಸಿದ್ದೇವೆ. ಆದರೆ ಈಗ ಅವರು ಯಾರವರು ಮತ್ತು ನಾವು ಯಾರು?

11002013a ಶೋಕಸ್ಥಾನಸಹಸ್ರಾಣಿ ಭಯಸ್ಥಾನಶತಾನಿ ಚ।
11002013c ದಿವಸೇ ದಿವಸೇ ಮೂಢಮಾವಿಶಂತಿ ನ ಪಂಡಿತಮ್।।

ಶೋಕಪಡಲು ಸಹಸ್ರಾರು ಕಾರಣಗಳಿರುತ್ತವೆ ಮತ್ತು ಭಯಪಡಲು ಸಹಸ್ರಾರು ಕಾರಣಗಳಿರುತ್ತವೆ. ಆದರೆ ಅವು ಕೇವಲ ಮೂಢರನ್ನು ದಿನನಿತ್ಯವೂ ಬಾಧಿಸುತ್ತಿರುತ್ತದೆ. ಪಂಡಿತರನ್ನಲ್ಲ.

11002014a ನ ಕಾಲಸ್ಯ ಪ್ರಿಯಃ ಕಶ್ಚಿನ್ನ ದ್ವೇಷ್ಯಃ ಕುರುಸತ್ತಮ।
11002014c ನ ಮಧ್ಯಸ್ಥಃ ಕ್ವ ಚಿತ್ಕಾಲಃ ಸರ್ವಂ ಕಾಲಃ ಪ್ರಕರ್ಷತಿ।।

ಕುರುಸತ್ತಮ! ಕಾಲಕ್ಕೆ ಯಾರೂ ಪ್ರಿಯರಾದವರಿಲ್ಲ; ದ್ವೇಷಿಗಳೂ ಇಲ್ಲ. ಪ್ರೀತಿ-ದ್ವೇಷಗಳಿಲ್ಲದ ಮಧ್ಯಸ್ಥನೂ ಇಲ್ಲ. ಕಾಲವು ಸರ್ವವನ್ನೂ ಎಳೆದುಕೊಂಡು ಹೋಗುತ್ತದೆ.

11002015a ಅನಿತ್ಯಂ ಜೀವಿತಂ ರೂಪಂ ಯೌವನಂ ದ್ರವ್ಯಸಂಚಯಃ।
11002015c ಆರೋಗ್ಯಂ ಪ್ರಿಯಸಂವಾಸೋ ಗೃಧ್ಯೇದೇಷು ನ ಪಂಡಿತಃ।।

ಜೀವ, ರೂಪ, ಯೌವನ, ದ್ರವ್ಯಸಂಚಯ, ಆರೋಗ್ಯ, ಪ್ರಿಯರೊಂದಿಗೆ ವಾಸ ಇವೆಲ್ಲವೂ ಅನಿತ್ಯವಾದವುಗಳು. ಪಂಡಿತನು ಇವುಗಳಲ್ಲಿ ಆಸೆಪಡುವುದಿಲ್ಲ.

11002016a ನ ಜಾನಪದಿಕಂ ದುಃಖಮೇಕಃ ಶೋಚಿತುಮರ್ಹಸಿ।
11002016c ಅಪ್ಯಭಾವೇನ ಯುಜ್ಯೇತ ತಚ್ಚಾಸ್ಯ ನ ನಿವರ್ತತೇ।।

ದೇಶಕ್ಕೇ ಒದಗಿಬಂದಿರುವ ದುಃಖವನ್ನು ನಿನಗೊಬ್ಬನಿಗೇ ಬಂದಿರುವ ದುಃಖವೆಂದು ಶೋಕಿಸುವುದು ಸರಿಯಲ್ಲ. ಶೋಕಿಸುತ್ತಲೇ ಮರಣಹೊಂದಿದರೂ ಅವನ ಶೋಕವು ಹೋಗುವುದಿಲ್ಲ.

11002017a ಅಶೋಚನ್ಪ್ರತಿಕುರ್ವೀತ ಯದಿ ಪಶ್ಯೇತ್ಪರಾಕ್ರಮಮ್।
11002017c ಭೈಷಜ್ಯಮೇತದ್ದುಃಖಸ್ಯ ಯದೇತನ್ನಾನುಚಿಂತಯೇತ್।
11002017e ಚಿಂತ್ಯಮಾನಂ ಹಿ ನ ವ್ಯೇತಿ ಭೂಯಶ್ಚಾಪಿ ವಿವರ್ಧತೇ।।

ಪರಾಕ್ರಮವಿರುವವನು ಶೋಕಿಸುವುದಕ್ಕೆ ಬದಲಾಗಿ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು. ನಡೆದುಹೋಗಿದುದರ ಕುರಿತು ಚಿಂತಿಸದಿರುವುದೇ ದುಃಖಕ್ಕೆ ಚಿಕಿತ್ಸೆ. ಚಿಂತೆಯಿಂದ ದುಃಖವು ಇನ್ನೂ ಹೆಚ್ಚಾಗುವುದೇ ಹೊರತು ಶೋಕವು ಹೊರಟುಹೋಗುವುದಿಲ್ಲ.

11002018a ಅನಿಷ್ಟಸಂಪ್ರಯೋಗಾಚ್ಚ ವಿಪ್ರಯೋಗಾತ್ಪ್ರಿಯಸ್ಯ ಚ।
11002018c ಮನುಷ್ಯಾ ಮಾನಸೈರ್ದುಃಖೈರ್ಯುಜ್ಯಂತೇ ಯೇಽಲ್ಪಬುದ್ಧಯಃ।।

ಅಲ್ಪಬುದ್ಧಿಯ ಮನುಷ್ಯರು ಅನಿಷ್ಟವನ್ನು ಪಡೆಯುವುದರಿಂದ ಮತ್ತು ಪ್ರಿಯವಾದುದ್ದನ್ನು ಕಳೆದುಕೊಳ್ಳುವುದರಿಂದ ಮಾನಸಿಕ ದುಃಖವನ್ನು ಅನುಭವಿಸುತ್ತಾರೆ.

11002019a ನಾರ್ಥೋ ನ ಧರ್ಮೋ ನ ಸುಖಂ ಯದೇತದನುಶೋಚಸಿ।
11002019c ನ ಚ ನಾಪೈತಿ ಕಾರ್ಯಾರ್ಥಾತ್ತ್ರಿವರ್ಗಾಚ್ಚೈವ ಭ್ರಶ್ಯತೇ।।

ಈ ಶೋಕವು ಅರ್ಥ-ಧರ್ಮ-ಸುಖಗಳ ಸಾಧಕವಲ್ಲ. ಈ ರೀತಿಯ ದುಃಖವು ಮನುಷ್ಯನನ್ನು ಮಾಡಬೇಕಾದ ಕರ್ತವ್ಯದಿಂದ ಭ್ರಷ್ಟನನ್ನಾಗಿಸುತ್ತದೆ.

11002020a ಅನ್ಯಾಮನ್ಯಾಂ ಧನಾವಸ್ಥಾಂ ಪ್ರಾಪ್ಯ ವೈಶೇಷಿಕೀಂ ನರಾಃ।
11002020c ಅಸಂತುಷ್ಟಾಃ ಪ್ರಮುಹ್ಯಂತಿ ಸಂತೋಷಂ ಯಾಂತಿ ಪಂಡಿತಾಃ।।

ಧನದ ಬೇರೆ ಬೇರೆ ಅವಸ್ಥಾ-ವಿಶೇಷಗಳನ್ನು ಹೊಂದಿ ಅಸಂತುಷ್ಟರಾಗಿ ನರರು ವಿಮೋಹಗೊಳ್ಳುತ್ತಾರೆ. ಆದರೆ ಪಂಡಿತರು ಅವುಗಳಿಂದ ಸಂತೋಷವನ್ನೇ ಪಡೆಯುತ್ತಾರೆ.

11002021a ಪ್ರಜ್ಞಯಾ ಮಾನಸಂ ದುಃಖಂ ಹನ್ಯಾಚ್ಚಾರೀರಮೌಷಧೈಃ।
11002021c ಏತಜ್ಞಾನಸ್ಯ ಸಾಮರ್ಥ್ಯಂ ನ ಬಾಲೈಃ ಸಮತಾಮಿಯಾತ್।।

ಮಾನಸಿಕ ದುಃಖವನ್ನು ಪ್ರಜ್ಞೆಯಿಂದಲೂ, ಶಾರೀರಿಕ ದುಃಖವನ್ನು ಔಷಧಗಳಿಂದಲೂ ಪರಿಹರಿಸಿಕೊಳ್ಳಬೇಕು. ಇದು ಜ್ಞಾನದ ಸಾಮರ್ಥ್ಯ. ಬಾಲಕರ ಸಮನಾಗಿರಬಾರದು.

11002022a ಶಯಾನಂ ಚಾನುಶಯತಿ ತಿಷ್ಠಂತಂ ಚಾನುತಿಷ್ಠತಿ।
11002022c ಅನುಧಾವತಿ ಧಾವಂತಂ ಕರ್ಮ ಪೂರ್ವಕೃತಂ ನರಮ್।।

ಪೂರ್ವಕೃತ ಕರ್ಮವು ಮನುಷ್ಯನು ಮಲಗಿರುವಾಗ ಜೊತೆಯಲ್ಲಿಯೇ ಮಲಗುತ್ತದೆ, ನಿಂತಿರುವಾಗ ಜೊತೆಯಲ್ಲಿಯೇ ನಿಂತಿರುತ್ತದೆ ಮತ್ತು ಓಡಿ ಹೋಗುವಾಗ ಜೊತೆಯಲ್ಲಿಯೇ ಓಡಿ ಬರುತ್ತದೆ.

11002023a ಯಸ್ಯಾಂ ಯಸ್ಯಾಮವಸ್ಥಾಯಾಂ ಯತ್ಕರೋತಿ ಶುಭಾಶುಭಮ್।
11002023c ತಸ್ಯಾಂ ತಸ್ಯಾಮವಸ್ಥಾಯಾಂ ತತ್ತತ್ಫಲಮುಪಾಶ್ನುತೇ।।

ಯಾವ ಯಾವ ಅವಸ್ಥೆಗಳಲ್ಲಿ ಶುಭಾಶುಭ ಕರ್ಮಗಳನ್ನು ಮಾಡಿರುತ್ತಾನೋ ಅವುಗಳನ್ನು ಮನುಷ್ಯನು ಆಯಾ ಅವಸ್ಥೆಗಳಲ್ಲಿ ಅದೇ ಫಲಗಳನ್ನು ಪಡೆಯುತ್ತಾನೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ವಿಶೋಕಪರ್ವಣಿ ಧೃತರಾಷ್ಟ್ರಶೋಕಕರಣೇ ದ್ವಿತೀಯೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ವಿಶೋಕಪರ್ವದಲ್ಲಿ ಧೃತರಾಷ್ಟ್ರಶೋಕಕರಣ ಎನ್ನುವ ಎರಡನೇ ಅಧ್ಯಾಯವು.