017 ಯುಧಿಷ್ಠಿರಕೃಷ್ಣಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸೌಪ್ತಿಕ ಪರ್ವ

ಐಷೀಕ ಪರ್ವ

ಅಧ್ಯಾಯ 17

ಸಾರ

ಅಶ್ವತ್ಥಾಮನಲ್ಲಿ ಯಾವ ಶಕ್ತಿಯಿತ್ತು ಎಂದು ಯುಧಿಷ್ಠಿರನು ಕೇಳಲು ಕೃಷ್ಣನು ಅಶ್ವತ್ಥಾಮನು ಶಿವನನ್ನು ಆರಾಧಿಸಿ ಆ ಶಕ್ತಿಯನ್ನು ಪಡೆದನೆಂದು ಹೇಳುತ್ತಾ, ಶಿವನ ಶಕ್ತಿಯ ಕುರಿತು ಹೇಳಿದುದು (1-26).

10017001 ವೈಶಂಪಾಯನ ಉವಾಚ।
10017001a ಹತೇಷು ಸರ್ವಸೈನ್ಯೇಷು ಸೌಪ್ತಿಕೇ ತೈ ರಥೈಸ್ತ್ರಿಭಿಃ।
10017001c ಶೋಚನ್ಯುಧಿಷ್ಠಿರೋ ರಾಜಾ ದಾಶಾರ್ಹಮಿದಮಬ್ರವೀತ್।।

ವೈಶಂಪಾಯನನು ಹೇಳಿದನು: “ಮಲಗಿದ್ದ ಸರ್ವಸೇನೆಗಳೂ ಆ ಮೂವರು ಮಹಾರಥರಿಂದ ಹತವಾದವೆಂದು ಶೋಕಿಸುತ್ತಿದ್ದ ರಾಜಾ ಯುಧಿಷ್ಠಿರನು ದಾಶಾರ್ಹನಿಗೆ ಹೇಳಿದನು:

10017002a ಕಥಂ ನು ಕೃಷ್ಣ ಪಾಪೇನ ಕ್ಷುದ್ರೇಣಾಕ್ಲಿಷ್ಟಕರ್ಮಣಾ।
10017002c ದ್ರೌಣಿನಾ ನಿಹತಾಃ ಸರ್ವೇ ಮಮ ಪುತ್ರಾ ಮಹಾರಥಾಃ।।

“ಕೃಷ್ಣ! ಅಕ್ಲಿಷ್ಟಕರ್ಮಿಗಳಾಗಿದ್ದ ನನ್ನ ಮಹಾರಥ ಪುತ್ರರೆಲ್ಲರೂ ಕ್ಷುದ್ರ ಪಾಪಿ ದ್ರೌಣಿಯಿಂದ ಹೇಗೆ ಹತರಾದರು?

10017003a ತಥಾ ಕೃತಾಸ್ತ್ರಾ ವಿಕ್ರಾಂತಾಃ ಸಹಸ್ರಶತಯೋಧಿನಃ।
10017003c ದ್ರುಪದಸ್ಯಾತ್ಮಜಾಶ್ಚೈವ ದ್ರೋಣಪುತ್ರೇಣ ಪಾತಿತಾಃ।।

ಹಾಗೆಯೇ ಕೃತಾಸ್ತ್ರರಾಗಿದ್ದ, ಸಹಸ್ರಶತ ಯೋಧರೊಂದಿಗೆ ಹೋರಾಡಬಲ್ಲವರಾಗಿದ್ದ ದ್ರುಪದನ ಮಕ್ಕಳೂ ಕೂಡ ದ್ರೋಣಪುತ್ರನಿಂದ ಹತರಾದರು.

10017004a ಯಸ್ಯ ದ್ರೋಣೋ ಮಹೇಷ್ವಾಸೋ ನ ಪ್ರಾದಾದಾಹವೇ ಮುಖಂ।
10017004c ತಂ ಜಘ್ನೇ ರಥಿನಾಂ ಶ್ರೇಷ್ಠಂ ಧೃಷ್ಟದ್ಯುಮ್ನಂ ಕಥಂ ನು ಸಃ।।

ರಣದಲ್ಲಿ ಮಹೇಷ್ವಾಸ ದ್ರೋಣನು ಯಾರ ಕಡೆ ಮುಖವನ್ನು ಕೂಡ ತಿರುಗಿಸುತ್ತಿರಲಿಲ್ಲವೋ ಅಂತಹ ರಥಶ್ರೇಷ್ಠ ಧೃಷ್ಟದ್ಯುಮ್ನನನ್ನು ಅವನು ಹೇಗೆ ಸಂಹರಿಸಿದನು?

10017005a ಕಿಂ ನು ತೇನ ಕೃತಂ ಕರ್ಮ ತಥಾಯುಕ್ತಂ ನರರ್ಷಭ।
10017005c ಯದೇಕಃ ಶಿಬಿರಂ ಸರ್ವಮವಧೀನ್ನೋ ಗುರೋಃ ಸುತಃ।।

ನರರ್ಷಭ! ಏಕಾಂಗಿಯಾಗಿ ಶಿಬಿರದಲ್ಲಿದ್ದ ಎಲ್ಲರನ್ನೂ ವಧಿಸಿದ ಆ ಗುರುಸುತನು ಯಾವ ಕರ್ಮವನ್ನು ಮಾಡಿ ಆ ಶಕ್ತಿಯನ್ನು ಪಡೆದನು?”

10017006 ವಾಸುದೇವ ಉವಾಚ।
10017006a ನೂನಂ ಸ ದೇವದೇವಾನಾಮೀಶ್ವರೇಶ್ವರಮವ್ಯಯಂ।
10017006c ಜಗಾಮ ಶರಣಂ ದ್ರೌಣಿರೇಕಸ್ತೇನಾವಧೀದ್ಬಹೂನ್।।

ವಾಸುದೇವನು ಹೇಳಿದನು: “ದ್ರೌಣಿಯು ದೇವದೇವನಿಗೂ ಈಶ್ವರನಾದ ಅವ್ಯಯನನ್ನು ಶರಣು ಹೋದನು. ಅದರಿಂದಾಗಿ ಅವನೊಬ್ಬನೇ ಅನೇಕರನ್ನು ಸಂಹರಿಸಬಲ್ಲವನಾದನು.

10017007a ಪ್ರಸನ್ನೋ ಹಿ ಮಹಾದೇವೋ ದದ್ಯಾದಮರತಾಮಪಿ।
10017007c ವೀರ್ಯಂ ಚ ಗಿರಿಶೋ ದದ್ಯಾದ್ಯೇನೇಂದ್ರಮಪಿ ಶಾತಯೇತ್।।

ಮಹಾದೇವನು ಪ್ರಸನ್ನನಾದರೆ ಅಮೃತತ್ವವನ್ನೂ ದಯಪಾಲಿಸುವನು. ಗಿರೀಶನು ಇಂದ್ರನನ್ನೂ ಸೋಲಿಸುವಂತಹ ವೀರ್ಯವನ್ನು ಕೊಡುತ್ತಾನೆ.

10017008a ವೇದಾಹಂ ಹಿ ಮಹಾದೇವಂ ತತ್ತ್ವೇನ ಭರತರ್ಷಭ।
10017008c ಯಾನಿ ಚಾಸ್ಯ ಪುರಾಣಾನಿ ಕರ್ಮಾಣಿ ವಿವಿಧಾನ್ಯುತ।।

ಭರತರ್ಷಭ! ನಾನು ಮಹಾದೇವನನ್ನು ತತ್ತ್ವಶಃ ತಿಳಿದುಕೊಂಡಿದ್ದೇನೆ. ಹಿಂದೆ ಅವನು ಮಾಡಿದ ಅನೇಕ ಕರ್ಮಗಳೂ ನನಗೆ ತಿಳಿದಿವೆ.

10017009a ಆದಿರೇಷ ಹಿ ಭೂತಾನಾಂ ಮಧ್ಯಮಂತಶ್ಚ ಭಾರತ।
10017009c ವಿಚೇಷ್ಟತೇ ಜಗಚ್ಚೇದಂ ಸರ್ವಮಸ್ಯೈವ ಕರ್ಮಣಾ।।

ಭಾರತ! ಭೂತಗಳ ಆದಿ, ಮಧ್ಯ ಮತ್ತು ಅಂತ್ಯಗಳು ಅವನೇ! ಅವನಿಂದಲೇ ಈ ಜಗತ್ತೆಲ್ಲವೂ ಕರ್ಮಗಳಲ್ಲಿ ತೊಡಗಿವೆ.

10017010a ಏವಂ ಸಿಸೃಕ್ಷುರ್ಭೂತಾನಿ ದದರ್ಶ ಪ್ರಥಮಂ ವಿಭುಃ।
10017010c ಪಿತಾಮಹೋಽಬ್ರವೀಚ್ಚೈನಂ ಭೂತಾನಿ ಸೃಜ ಮಾಚಿರಂ।।

ಪಿತಾಮಹ ವಿಭುವು ಭೂತಗಳನ್ನು ಸೃಷ್ಟಿಸಲು ಇಚ್ಛಿಸಿದಾಗ ಪ್ರಪ್ರಥಮವಾಗಿ ಇವನನ್ನೇ ನೋಡಿ “ಕೂಡಲೇ ಭೂತಗಳನ್ನು ಸೃಷ್ಟಿಸು!” ಎಂದು ಹೇಳಿದ್ದನು.

10017011a ಹರಿಕೇಶಸ್ತಥೇತ್ಯುಕ್ತ್ವಾ ಭೂತಾನಾಂ ದೋಷದರ್ಶಿವಾನ್।
10017011c ದೀರ್ಘಕಾಲಂ ತಪಸ್ತೇಪೇ ಮಗ್ನೋಽಮ್ಭಸಿ ಮಹಾತಪಾಃ।।

ಮಹಾತಪಸ್ವಿ ಹರಿಕೇಶನು ಹಾಗೆಯೇ ಆಗಲೆಂದು ಹೇಳಿ ತಾನು ಸೃಷ್ಟಿಸಿದ ಭೂತಗಳಲ್ಲಿ ದೋಷಗಳನ್ನೇ ಕಂಡು ನೀರಿನಲ್ಲಿ ಮುಳುಗಿ ದೀರ್ಘಕಾಲ ತಪಸ್ಸನ್ನು ತಪಿಸಿದನು.

10017012a ಸುಮಹಾಂತಂ ತತಃ ಕಾಲಂ ಪ್ರತೀಕ್ಷ್ಯೈನಂ ಪಿತಾಮಹಃ।
10017012c ಸ್ರಷ್ಟಾರಂ ಸರ್ವಭೂತಾನಾಂ ಸಸರ್ಜ ಮನಸಾಪರಂ।।

ಮಹಾಕಾಲದವರೆಗೆ ಪ್ರತೀಕ್ಷೆಯಲ್ಲಿದ್ದ ಪಿತಾಮಹನು ಇನ್ನೊಬ್ಬ ಸರ್ವಭೂತಗಳ ಸೃಷ್ಟಾರನನ್ನು ಮನಸ್ಸಿನಿಂದಲೇ ಸೃಷ್ಟಿಸಿದನು.

10017013a ಸೋಽಬ್ರವೀತ್ಪಿತರಂ ದೃಷ್ಟ್ವಾ ಗಿರಿಶಂ ಮಗ್ನಮಮ್ಭಸಿ।
10017013c ಯದಿ ಮೇ ನಾಗ್ರಜಸ್ತ್ವನ್ಯಸ್ತತಃ ಸ್ರಕ್ಷ್ಯಾಮ್ಯಹಂ ಪ್ರಜಾಃ।।

ನೀರಿನಲ್ಲಿ ಮಗ್ನನಾಗಿರುವ ಗಿರೀಶನನ್ನು ನೋಡಿ ಅವನು ತಂದೆಗೆ “ನನಗೆ ಅಗ್ರಜನಾದವನು ಅನ್ಯನಿದ್ದರೆ ನಾನು ಪ್ರಜೆಗಳನ್ನು ಸೃಷ್ಟಿಸುವುದಿಲ್ಲ!” ಎಂದನು.

10017014a ತಮಬ್ರವೀತ್ಪಿತಾ ನಾಸ್ತಿ ತ್ವದನ್ಯಃ ಪುರುಷೋಽಗ್ರಜಃ।
10017014c ಸ್ಥಾಣುರೇಷ ಜಲೇ ಮಗ್ನೋ ವಿಸ್ರಬ್ಧಃ ಕುರು ವೈ ಕೃತಿಂ।।

ಅವನಿಗೆ ಪಿತನು “ನಿನ್ನ ಅಗ್ರಜನಾಗಿ ಇನ್ನೊಬ್ಬ ಪುರುಷನಿಲ್ಲ. ಸ್ಥಾಣುವಾದರೋ ಜಲದಲ್ಲಿ ಮಗ್ನನಾಗಿದ್ದಾನೆ. ನಿಶ್ಚಿಂತೆಯಿಂದ ಸೃಷ್ಟಿಯನ್ನು ಮಾಡು!” ಎಂದನು.

10017015a ಸ ಭೂತಾನ್ಯಸೃಜತ್ಸಪ್ತ ದಕ್ಷಾದೀಂಸ್ತು ಪ್ರಜಾಪತೀನ್।
10017015c ಯೈರಿಮಂ ವ್ಯಕರೋತ್ಸರ್ವಂ ಭೂತಗ್ರಾಮಂ ಚತುರ್ವಿಧಂ।।

ಅವನು ಏಳುಪ್ರಕಾರದ ಭೂತಗಳನ್ನೂ, ದಕ್ಷಾದಿ ಪ್ರಜಾಪತಿಗಳನ್ನೂ ಸೃಷ್ಟಿಸಿ ಎಲ್ಲವನ್ನೂ ನಾಲ್ಕು ಪ್ರಕಾರವಾಗಿ ವಿಂಗಡಿಸಿದನು.

10017016a ತಾಃ ಸೃಷ್ಟಮಾತ್ರಾಃ ಕ್ಷುಧಿತಾಃ ಪ್ರಜಾಃ ಸರ್ವಾಃ ಪ್ರಜಾಪತಿಂ।
10017016c ಬಿಭಕ್ಷಯಿಷವೋ ರಾಜನ್ಸಹಸಾ ಪ್ರಾದ್ರವಂಸ್ತದಾ।।

ರಾಜನ್! ಪ್ರಜೆಗಳೆಲ್ಲವೂ ಸೃಷ್ಟಿಯಾದೊಡನೆಯೇ ಹಸಿದು ಪ್ರಜಾಪತಿಯನ್ನೇ ತಿನ್ನಲು ಬಯಸಿ ಧಾವಿಸಿದವು.

10017017a ಸ ಭಕ್ಷ್ಯಮಾಣಸ್ತ್ರಾಣಾರ್ಥೀ ಪಿತಾಮಹಮುಪಾದ್ರವತ್।
10017017c ಆಭ್ಯೋ ಮಾಂ ಭಗವಾನ್ಪಾತು ವೃತ್ತಿರಾಸಾಂ ವಿಧೀಯತಾಂ।।

ಭಕ್ಷಣೆಯಾಗುವೆನೆಂಬ ಭಯದಿಂದ ಶರಣಾರ್ಥಿಯಾಗಿ ಅವನು ಪಿತಾಮಹನ ಬಳಿಸಾರಿ “ಭಗವಾನ್! ಇವರಿಂದ ನನ್ನನ್ನು ರಕ್ಷಿಸಬೇಕು ಮತ್ತು ಇವುಗಳಿಗೆ ವೃತ್ತಿಗಳನ್ನು ವಿಧಿಸಬೇಕು” ಎಂದು ಕೇಳಿಕೊಂಡನು.

10017018a ತತಸ್ತಾಭ್ಯೋ ದದಾವನ್ನಮೋಷಧೀಃ ಸ್ಥಾವರಾಣಿ ಚ।
10017018c ಜಂಗಮಾನಿ ಚ ಭೂತಾನಿ ದುರ್ಬಲಾನಿ ಬಲೀಯಸಾಂ।।

ಆಗ ಅವನು ಅವುಗಳಿಗೆ ಅನ್ನ, ಔಷಧಿಗಳನ್ನು, ಸ್ಥಾವಿರ ಪದಾರ್ಥಗಳನ್ನು ಮತ್ತು ಬಲಶಾಲೀ ಜಂಗಮ ಪ್ರಾಣಿಗಳಿಗೆ ದುರ್ಬಲ ಪ್ರಾಣಿಗಳನ್ನೂ ವಿಧಿಸಿದನು.

10017019a ವಿಹಿತಾನ್ನಾಃ ಪ್ರಜಾಸ್ತಾಸ್ತು ಜಗ್ಮುಸ್ತುಷ್ಟಾ ಯಥಾಗತಂ।
10017019c ತತೋ ವವೃಧಿರೇ ರಾಜನ್ಪ್ರೀತಿಮತ್ಯಃ ಸ್ವಯೋನಿಷು।।

ರಾಜನ್! ಅನ್ನಗಳನ್ನು ಪಡೆದ ಪ್ರಜೆಗಳು ತುಷ್ಟರಾಗಿ ಹಿಂದಿರುಗಿ, ಪ್ರೀತಿಮತ್ತರಾಗಿ ತಮ್ಮ ತಮ್ಮ ಯೋನಿಗಳಲ್ಲಿ ವೃದ್ಧಿಸಿದರು.

10017020a ಭೂತಗ್ರಾಮೇ ವಿವೃದ್ಧೇ ತು ತುಷ್ಟೇ ಲೋಕಗುರಾವಪಿ।
10017020c ಉದತಿಷ್ಠಜ್ಜಲಾಜ್ಜ್ಯೇಷ್ಠಃ ಪ್ರಜಾಶ್ಚೇಮಾ ದದರ್ಶ ಸಃ।।

ಪ್ರಜಾಸಂಕುಲಗಳು ವೃದ್ಧಿಸುತ್ತಿರಲು ಮತ್ತು ಲೋಕಗುರುವು ತುಷ್ಟನಾಗಿರಲು ಜ್ಯೇಷ್ಠನು ನೀರಿನಿಂದ ಮೇಲೆದ್ದು ಪ್ರಜಾಗಣಗಳನ್ನು ನೋಡಿದನು.

10017021a ಬಹುರೂಪಾಃ ಪ್ರಜಾ ದೃಷ್ಟ್ವಾ ವಿವೃದ್ಧಾಃ ಸ್ವೇನ ತೇಜಸಾ।
10017021c ಚುಕ್ರೋಧ ಭಗವಾನ್ರುದ್ರೋ ಲಿಂಗಂ ಸ್ವಂ ಚಾಪ್ಯವಿಧ್ಯತ।।

ಬಹುರೂಪೀ ಪ್ರಜೆಗಳು ತಮ್ಮದೇ ತೇಜಸ್ಸಿನಿಂದ ವೃದ್ಧಿಸುತ್ತಿರುವುದನ್ನು ನೋಡಿ ಭಗವಾನ್ ರುದ್ರನು ಕ್ರೋಧದಿಂದ ತನ್ನ ಲಿಂಗವನ್ನು ಕಿತ್ತು ಬಿಸುಟನು.

10017022a ತತ್ಪ್ರವಿದ್ಧಂ ತದಾ ಭೂಮೌ ತಥೈವ ಪ್ರತ್ಯತಿಷ್ಠತ।
10017022c ತಮುವಾಚಾವ್ಯಯೋ ಬ್ರಹ್ಮಾ ವಚೋಭಿಃ ಶಮಯನ್ನಿವ।।

ಹಾಗೆ ಬಿಸುಟ ಲಿಂಗವು ಭೂಮಿಯಲ್ಲಿಯೇ ಪ್ರತಿಷ್ಠಿತವಾಯಿತು. ಅವನನ್ನು ಶಾಂತಗೊಳಿಸಲೋಸುಗ ಅವ್ಯಯ ಬ್ರಹ್ಮನು ಈ ಮಾತನ್ನಾಡಿದನು:

10017023a ಕಿಂ ಕೃತಂ ಸಲಿಲೇ ಶರ್ವ ಚಿರಕಾಲಂ ಸ್ಥಿತೇನ ತೇ।
10017024c ಪ್ರಜಾಃ ಸೃಷ್ಟಾಃ ಪರೇಣೇಮಾಃ ಕಿಂ ಕರಿಷ್ಯಾಮ್ಯನೇನ ವೈ।।

“ಶರ್ವ! ಬಹಳಕಾಲ ನೀರಿನಲ್ಲಿದ್ದುಕೊಂಡು ನೀನು ಏನು ಮಾಡಿದೆ?” “ಇನ್ನೊಬ್ಬನಿಂದ ಈ ಪ್ರಜೆಗಳು ಸೃಷ್ಟಿಸಲ್ಪಟ್ಟಿದ್ದಾರೆ. ಈಗ ಇದರಿಂದ ನಾನೇನು ಮಾಡಲಿ?

10017025a ತಪಸಾಧಿಗತಂ ಚಾನ್ನಂ ಪ್ರಜಾರ್ಥಂ ಮೇ ಪಿತಾಮಹ।
10017025c ಓಷಧ್ಯಃ ಪರಿವರ್ತೇರನ್ಯಥೈವ ಸತತಂ ಪ್ರಜಾಃ।।

ಪಿತಾಮಹ! ಪ್ರಜೆಗಳಿಗೋಸ್ಕರವಾಗಿ ನಾನು ತಪಸ್ಸುಮಾಡಿ ಅನ್ನವನ್ನು ಪಡೆದುಕೊಂಡೆನು. ಪ್ರಜೆಗಳು ಸತತವಾಗಿ ಪರಿವರ್ತನೆಗೊಳ್ಳುವಂತೆ ಔಷಧಿಗಳೂ ಪರಿವರ್ತಿಸುತ್ತಿರುತ್ತವೆ.”

10017026a ಏವಮುಕ್ತ್ವಾ ತು ಸಂಕ್ರುದ್ಧೋ ಜಗಾಮ ವಿಮನಾ ಭವಃ।
10017026c ಗಿರೇರ್ಮುಂಜವತಃ ಪಾದಂ ತಪಸ್ತಪ್ತುಂ ಮಹಾತಪಾಃ।।

ಕೋಪದಿಂದ ಹೀಗೆ ಹೇಳಿ ಮಹಾತಪಸ್ವಿ ಭವನು ವಿಮನಸ್ಕನಾಗಿ ತಪಸ್ಸನ್ನು ತಪಿಸಲು ಮುಂಜವಂತ ಗಿರಿಯ ತಪ್ಪಲಿಗೆ ಹೊರಟು ಹೋದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ಐಷೀಕಪರ್ವಣಿ ಯುಧಿಷ್ಠಿರಕೃಷ್ಣಸಂವಾದೇ ಸಪ್ತದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ಐಷೀಕಪರ್ವದಲ್ಲಿ ಯುಧಿಷ್ಠಿರಕೃಷ್ಣಸಂವಾದ ಎನ್ನುವ ಹದಿನೇಳನೇ ಅಧ್ಯಾಯವು.