ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸೌಪ್ತಿಕ ಪರ್ವ
ಸೌಪ್ತಿಕ ಪರ್ವ
ಅಧ್ಯಾಯ 2
ಸಾರ
ಕೃಪನು ದುರ್ಯೋಧನನನ್ನು ನಿಂದಿಸುತ್ತಾ ತಾವು ಧೃತರಾಷ್ಟ್ರ-ಗಾಂಧಾರೀ-ವಿದುರರಲ್ಲಿಗೆ ಹೋಗಿ ಮುಂದೆ ಮಾಡುವುದರ ಕುರಿತು ಕೇಳಬೇಕೆಂದು ಹೇಳಿದುದು (1-33).
10002001 ಕೃಪ ಉವಾಚ।
10002001a ಶ್ರುತಂ ತೇ ವಚನಂ ಸರ್ವಂ ಹೇತುಯುಕ್ತಂ ಮಯಾ ವಿಭೋ।
10002001c ಮಮಾಪಿ ತು ವಚಃ ಕಿಂ ಚಿಚ್ಚೃಣುಷ್ವಾದ್ಯ ಮಹಾಭುಜ।।
ಕೃಪನು ಹೇಳಿದನು: “ವಿಭೋ! ಮಹಾಭುಜ! ನೀನು ಹೇಳಿದ ಎಲ್ಲವನ್ನೂ ನಾನು ಕೇಳಿದೆನು. ಈಗ ನೀನು ನನ್ನ ಮಾತುಗಳಲ್ಲಿ ಕಿಂಚಿತ್ತನ್ನಾದರೂ ಕೇಳು!
10002002a ಆಬದ್ಧಾ ಮಾನುಷಾಃ ಸರ್ವೇ ನಿರ್ಬಂಧಾಃ ಕರ್ಮಣೋರ್ದ್ವಯೋಃ।
10002002c ದೈವೇ ಪುರುಷಕಾರೇ ಚ ಪರಂ ತಾಭ್ಯಾಂ ನ ವಿದ್ಯತೇ।।
ಮನುಷ್ಯರೆಲ್ಲರೂ ಎರಡು ಕರ್ಮಗಳಿಂದ ಬದ್ಧರಾಗಿರುತ್ತಾರೆ – ದೈವ ಮತ್ತು ಪುರುಷಕರ್ಮ. ಇವೆರಡರ ಹೊರತಾಗಿ ಯಾವುದರಿಂದಲೂ ಬದ್ಧನಾಗಿರುವುದಿಲ್ಲ.
10002003a ನ ಹಿ ದೈವೇನ ಸಿಧ್ಯಂತಿ ಕರ್ಮಾಣ್ಯೇಕೇನ ಸತ್ತಮ।
10002003c ನ ಚಾಪಿ ಕರ್ಮಣೈಕೇನ ದ್ವಾಭ್ಯಾಂ ಸಿದ್ಧಿಸ್ತು ಯೋಗತಃ।।
ಸತ್ತಮ! ದೈವವೊಂದರಿಂದಲೇ ಕಾರ್ಯಗಳು ಸಿದ್ಧಿಸುವುದಿಲ್ಲ. ಹಾಗೆಯೇ ಕೇವಲ ಕರ್ಮಗಳನ್ನು ಮಾಡುವುದರಿಂದಲೂ ಕಾರ್ಯಗಳು ಸಿದ್ಧಿಸುವುದಿಲ್ಲ. ಈ ಎರಡೂ ಒಂದುಗೂಡಿದಾಗಲೇ ಕಾರ್ಯಗಳು ಸಿದ್ಧಿಯಾಗುತ್ತವೆ.
10002004a ತಾಭ್ಯಾಮುಭಾಭ್ಯಾಂ ಸರ್ವಾರ್ಥಾ ನಿಬದ್ಧಾ ಹ್ಯಧಮೋತ್ತಮಾಃ।
10002004c ಪ್ರವೃತ್ತಾಶ್ಚೈವ ದೃಶ್ಯಂತೇ ನಿವೃತ್ತಾಶ್ಚೈವ ಸರ್ವಶಃ।।
ಈ ಎರಡರಿಂದಲೇ ಉತ್ತಮ ಮತ್ತು ಅಧಮ ಕರ್ಮಗಳೆಲ್ಲವೂ ಬದ್ಧವಾಗಿವೆ. ಎಲ್ಲೆಡೆ ಕಾಣುವ ಆಗುಹೋಗುಗಳೂ ಇವುಗಳಿಂದಲೇ ನಡೆಯುತ್ತವೆ.
10002005a ಪರ್ಜನ್ಯಃ ಪರ್ವತೇ ವರ್ಷನ್ಕಿಂ ನು ಸಾಧಯತೇ ಫಲಂ।
10002005c ಕೃಷ್ಟೇ ಕ್ಷೇತ್ರೇ ತಥಾವರ್ಷನ್ಕಿಂ ನು ಸಾಧಯತೇ ಫಲಂ।।
ಪರ್ಜನ್ಯನು ಪರ್ವತದ ಮೇಲೆ ಮಳೆಸುರಿಸಿದರೆ ಯಾವ ಫಲವು ದೊರಕುತ್ತದೆ? ಹಾಗೆಯೇ ಫಲವತ್ತಾದ ಭೂಮಿಯಮೇಲೆ ಮಳೆಸುರಿಯದೇ ಇದ್ದರೆ ಯಾವ ಫಲವು ದೊರಕುತ್ತದೆ?3
10002006a ಉತ್ಥಾನಂ ಚಾಪ್ಯದೈವಸ್ಯ ಹ್ಯನುತ್ಥಾನಸ್ಯ ದೈವತಂ।
10002006c ವ್ಯರ್ಥಂ ಭವತಿ ಸರ್ವತ್ರ ಪೂರ್ವಂ ಕಸ್ತತ್ರ ನಿಶ್ಚಯಃ।।
ದೈವಬಲವಿಲ್ಲದ ಪುರುಷಪ್ರಯತ್ನವೂ ಪುರುಷಯತ್ನವಿಲ್ಲದ ದೈವಬಲವೂ ಸರ್ವಪ್ರಕಾರದಲ್ಲಿ ವ್ಯರ್ಥವಾಗುತ್ತದೆ. ಆದರೆ ಮೊದಲನೆಯ ದೈವವಿಲ್ಲದ ಪುರುಷಪ್ರಯತ್ನವು ವ್ಯರ್ಥವೆನ್ನುವುದು ನಿಶ್ಚಯವೇ ಸರಿ!
10002007a ಪ್ರವೃಷ್ಟೇ ಚ ಯಥಾ ದೇವೇ ಸಮ್ಯಕ್ಕ್ಷೇತ್ರೇ ಚ ಕರ್ಷಿತೇ।
10002007c ಬೀಜಂ ಮಹಾಗುಣಂ ಭೂಯಾತ್ತಥಾ ಸಿದ್ಧಿರ್ಹಿ ಮಾನುಷೀ।।
ಚೆನ್ನಾಗಿ ಉತ್ತಿರುವ ಹೊಲದಲ್ಲಿ ಮಳೆಸುರಿದರೆ ಬೀಜವು ಮಹಾಫಲದಾಯಕವಾಗುತ್ತದೆ. ಹಾಗೆಯೇ ಮನುಷ್ಯನ ಕಾರ್ಯಸಿದ್ಧಿಯು ದೈವದ ಸಹಯೋಗದಿಂದಲೇ ಸಾಧ್ಯ.
10002008a ತಯೋರ್ದೈವಂ ವಿನಿಶ್ಚಿತ್ಯ ಸ್ವವಶೇನೈವ ವರ್ತತೇ।
10002008c ಪ್ರಾಜ್ಞಾಃ ಪುರುಷಕಾರಂ ತು ಘಟಂತೇ ದಾಕ್ಷ್ಯಮಾಸ್ಥಿತಾಃ।।
ಇವೆರಡರಲ್ಲಿ ದೈವವು ಸ್ವಯಂ ನಿಶ್ಚಯಿಸಿ ವರ್ತಿಸುತ್ತದೆ. ತಮ್ಮ ಸಾಮರ್ಥ್ಯವನ್ನು ಅವಲಂಬಿಸಿರುವವರು ಪುರುಷಪ್ರಯತ್ನವೇ ಹೆಚ್ಚೆಂದು ತಿಳಿತು ನಡೆಯುತ್ತಿರುತ್ತಾರೆ.
10002009a ತಾಭ್ಯಾಂ ಸರ್ವೇ ಹಿ ಕಾರ್ಯಾರ್ಥಾ ಮನುಷ್ಯಾಣಾಂ ನರರ್ಷಭ।
10002009c ವಿಚೇಷ್ಟಂತಶ್ಚ ದೃಶ್ಯಂತೇ ನಿವೃತ್ತಾಶ್ಚ ತಥೈವ ಹಿ।।
ನರರ್ಷಭ! ಮನುಷ್ಯರ ಸರ್ವ ಕಾರ್ಯಾರ್ಥಗಳೂ ಇವೆರಡರಿಂದ ನಡೆಯುತ್ತಿರುವಂತೆ ಮತ್ತು ನಿಲ್ಲುತ್ತಿರುವಂತೆ ಕಾಣುತ್ತವೆ.
10002010a ಕೃತಃ ಪುರುಷಕಾರಃ ಸನ್ಸೋಽಪಿ ದೈವೇನ ಸಿಧ್ಯತಿ।
10002010c ತಥಾಸ್ಯ ಕರ್ಮಣಃ ಕರ್ತುರಭಿನಿರ್ವರ್ತತೇ ಫಲಂ।।
ಪುರುಷಪ್ರಯತ್ನವೂ ಕೂಡ ದೈವಸಂಕಲ್ಪದಿಂದಲೇ ಮಾಡಲ್ಪಡುತ್ತದೆ. ದೈವದ ಪ್ರೇರಣೆಗೆ ಅನುಸಾರವಾಗಿ ಕಾರ್ಯವನ್ನು ಮಾಡುತ್ತಿದ್ದರೆ ಅದು ಫಲವನ್ನು ನೀಡುತ್ತದೆ.
10002011a ಉತ್ಥಾನಂ ತು ಮನುಷ್ಯಾಣಾಂ ದಕ್ಷಾಣಾಂ ದೈವವರ್ಜಿತಂ।
10002011c ಅಫಲಂ ದೃಶ್ಯತೇ ಲೋಕೇ ಸಮ್ಯಗಪ್ಯುಪಪಾದಿತಂ।।
ದಕ್ಷ ಮನುಷ್ಯರ ಪ್ರಯತ್ನಗಳೂ ಕೂಡ ದೈವದಿಂದ ವರ್ಜಿತಗೊಂಡರೆ ಅಫಲವಾಗುತ್ತದೆ ಎನ್ನುವುದಕ್ಕೆ ಅನೇಕ ಉದಾಹರಣೆಗಳು ಲೋಕದಲ್ಲಿ ಕಾಣಸಿಗುತ್ತವೆ.
10002012a ತತ್ರಾಲಸಾ ಮನುಷ್ಯಾಣಾಂ ಯೇ ಭವಂತ್ಯಮನಸ್ವಿನಃ।
10002012c ಉತ್ಥಾನಂ ತೇ ವಿಗರ್ಹಂತಿ ಪ್ರಾಜ್ಞಾನಾಂ ತನ್ನ ರೋಚತೇ।।
ಆಲಸ್ಯ ಮನುಷ್ಯರು ಇದು ಹೀಗಾಗುತ್ತದೆಯೆಂದು ತಿಳಿದು ಪ್ರಯತ್ನವನ್ನೇ ಮಾಡಲು ಹಿಂಜರಿಯುತ್ತಾರೆ. ಪ್ರಾಜ್ಞರಿಗೆ ಅದು ಸರಿಯೆನಿಸುವುದಿಲ್ಲ.
10002013a ಪ್ರಾಯಶೋ ಹಿ ಕೃತಂ ಕರ್ಮ ಅಫಲಂ ದೃಶ್ಯತೇ ಭುವಿ।
10002013c ಅಕೃತ್ವಾ ಚ ಪುನರ್ದುಃಖಂ ಕರ್ಮ ದೃಶ್ಯೇನ್ಮಹಾಫಲಂ।।
ಪ್ರಾಯಶಃ ಭುವಿಯಲ್ಲಿ ಮಾಡುವ ಕರ್ಮಗಳು ಅಫಲವಾದಂತೆ ಕಾಣುತ್ತವೆ. ಆದರೆ ಕರ್ಮಗಳನ್ನು ಮಾಡದೇ ಇದ್ದರೆ ಪುನಃ ಪುನಃ ದುಃಖಗಳು ದೊರೆಯುತ್ತವೆ. ಕರ್ಮಗಳಲ್ಲಿ ತೊಡಗಿರುವುದೇ ಮಹಾಫಲದಾಯಕವೆಂದು ಕಾಣುತ್ತದೆ.
10002014a ಚೇಷ್ಟಾಮಕುರ್ವಽಲ್ಲಭತೇ ಯದಿ ಕಿಂ ಚಿದ್ಯದೃಚ್ಚಯಾ।
10002014c ಯೋ ವಾ ನ ಲಭತೇ ಕೃತ್ವಾ ದುರ್ದಶೌ ತಾವುಭಾವಪಿ।।
ಪ್ರಯತ್ನಮಾಡದೇ ಕೇವಲ ದೈವೇಚ್ಛೆಯಿಂದಲೇ ಫಲವನ್ನು ಅನುಭವಿಸುವವರು ಅಥವಾ ಪ್ರಯತ್ನಮಾಡುತ್ತಿದ್ದರೂ ಫಲವನ್ನು ಅನುಭವಿಸದೇ ಇರತಕ್ಕವರು - ಈ ಇಬ್ಬರನ್ನೂ ಲೋಕದಲ್ಲಿ ಕಾಣುವುದು ದುರ್ಲಭ.
10002015a ಶಕ್ನೋತಿ ಜೀವಿತುಂ ದಕ್ಷೋ ನಾಲಸಃ ಸುಖಮೇಧತೇ।
10002015c ದೃಶ್ಯಂತೇ ಜೀವಲೋಕೇಽಸ್ಮಿನ್ದಕ್ಷಾಃ ಪ್ರಾಯೋ ಹಿತೈಷಿಣಃ।।
ದಕ್ಷನಾದವನು ಸುಖವಾಗಿ ಜೀವಿಸಬಹುದು. ಆದರೆ ಆಲಸಿಯು ಸುಖವನ್ನು ಪಡೆಯುವುದಿಲ್ಲ. ಈ ಜೀವಲೋಕದಲ್ಲಿ ದಕ್ಷರಾಗಿರುವವರು ಪ್ರಾಯಶಃ ಹಿತೈಷಿಗಳೂ ಆಗಿರುತ್ತಾರೆ.
10002016a ಯದಿ ದಕ್ಷಃ ಸಮಾರಮ್ಭಾತ್ಕರ್ಮಣಾಂ ನಾಶ್ನುತೇ ಫಲಂ।
10002016c ನಾಸ್ಯ ವಾಚ್ಯಂ ಭವೇತ್ಕಿಂ ಚಿತ್ತತ್ತ್ವಂ ಚಾಪ್ಯಧಿಗಚ್ಚತಿ।।
ಒಂದುವೇಳೆ ದಕ್ಷನಾದವನು ಕರ್ಮಗಳನ್ನು ಪ್ರಾರಂಭಿಸಿ ಫಲವನ್ನು ಪಡೆಯದೇ ಇದ್ದರೆ ಅವನು ನಿಂದನೆಗೆ ಒಳಗಾಗುವುದಿಲ್ಲ. ಅದಕ್ಕೆ ಕಿಂಚಿತ್ತಾದರೂ ಫಲವು ಲಭಿಸಿಯೇ ಲಭಿಸುತ್ತದೆ.
10002017a ಅಕೃತ್ವಾ ಕರ್ಮ ಯೋ ಲೋಕೇ ಫಲಂ ವಿಂದತಿ ವಿಷ್ಟಿತಃ।
10002017c ಸ ತು ವಕ್ತವ್ಯತಾಂ ಯಾತಿ ದ್ವೇಷ್ಯೋ ಭವತಿ ಪ್ರಾಯಶಃ।।
ಆದರೆ ಕರ್ಮಗಳನ್ನು ಮಾಡದೆಯೇ ಕೇವಲ ಅದೃಷ್ಟವಶದಿಂದ ಫಲವನ್ನು ಅನುಭವಿಸುವವನು ಲೋಕನಿಂದನೆಗೆ ಒಳಗಾಗುತ್ತಾನೆ. ಅಂಥವನನ್ನು ಪ್ರಾಯಶಃ ಜನರು ದ್ವೇಷಿಸುತ್ತಾರೆ.
10002018a ಏವಮೇತದನಾದೃತ್ಯ ವರ್ತತೇ ಯಸ್ತ್ವತೋಽನ್ಯಥಾ।
10002018c ಸ ಕರೋತ್ಯಾತ್ಮನೋಽನರ್ಥಾನ್ನೈಷ ಬುದ್ಧಿಮತಾಂ ನಯಃ।।
ಹೀಗೆ ದೈವ ಮತ್ತು ಪುರುಷಕಾರಗಳ ಸಹಯೋಗವನ್ನು ಅನಾದರಿಸಿ ಅದಕ್ಕೆ ವಿರುದ್ಧವಾಗಿ ವರ್ತಿಸುವವನು ತನಗೆ ತಾನೇ ಅನರ್ಥವನ್ನು ತಂದುಕೊಳ್ಳುತ್ತಾನೆ. ಪ್ರಯತ್ನವನ್ನು ಮಾಡುತ್ತಾ ಕಾರ್ಯಸಿದ್ಧಿಗೆ ದೈವದ ಒಲುಮೆಯನ್ನು ಪಡೆದುಕೊಳ್ಳಬೇಕೆಂಬುದು ಬುದ್ಧಿವಂತರ ನೀತಿಯಾಗಿದೆ.
10002019a ಹೀನಂ ಪುರುಷಕಾರೇಣ ಯದಾ ದೈವೇನ ವಾ ಪುನಃ।
10002019c ಕಾರಣಾಭ್ಯಾಮಥೈತಾಭ್ಯಾಮುತ್ಥಾನಮಫಲಂ ಭವೇತ್।
10002019e ಹೀನಂ ಪುರುಷಕಾರೇಣ ಕರ್ಮ ತ್ವಿಹ ನ ಸಿಧ್ಯತಿ।।
ಪುರುಷಪ್ರಯತ್ನವಿಲ್ಲದೇ ಅದೃಷ್ಟದ ನಿರೀಕ್ಷಣೆ ಅಥವಾ ಪ್ರಯತ್ನಿಸಿದರೂ ದೈವದ ಒಲುಮೆಯಿಲ್ಲದೇ ಇರುವುದು – ಈ ಎರಡು ಕಾರಣಗಳಿಂದಲೂ ಮನುಷ್ಯನ ಪ್ರಯತ್ನಗಳು ನಿಷ್ಫಲವಾಗುತ್ತವೆ. ಪುರುಷಪ್ರಯತ್ನವಿಲ್ಲದೇ ಈ ಲೋಕದಲ್ಲಿ ಯಾವ ಕರ್ಮಗಳೂ ಸಿದ್ಧಿಸುವುದಿಲ್ಲ.
10002020a ದೈವತೇಭ್ಯೋ ನಮಸ್ಕೃತ್ಯ ಯಸ್ತ್ವರ್ಥಾನ್ಸಮ್ಯಗೀಹತೇ।
10002020c ದಕ್ಷೋ ದಾಕ್ಷಿಣ್ಯಸಂಪನ್ನೋ ನ ಸ ಮೋಘಂ ವಿಹನ್ಯತೇ।।
ದೇವತೆಗಳಿಗೆ ನಮಸ್ಕರಿಸಿ ಪ್ರಯತ್ನಿಸುವ ದಕ್ಷ ದಾಕ್ಷಿಣ್ಯಸಂಪನ್ನನು ಸಿದ್ಧಿಯನ್ನು ಪಡೆಯುತ್ತಾನೆ. ಎಂದೂ ಅಸಫಲತೆಯನ್ನು ಹೊಂದುವುದಿಲ್ಲ.
10002021a ಸಮ್ಯಗೀಹಾ ಪುನರಿಯಂ ಯೋ ವೃದ್ಧಾನುಪಸೇವತೇ।
10002021c ಆಪೃಚ್ಚತಿ ಚ ಯಚ್ಚ್ರೇಯಃ ಕರೋತಿ ಚ ಹಿತಂ ವಚಃ।।
ಈ ಸಮ್ಯಕ್ಪ್ರಯತ್ನವು ಪುನಃ ವೃದ್ಧರ ಸೇವೆಯನ್ನು ಮಾಡುವವರಿಗೆ, ಶ್ರೇಯಸ್ಕರವಾದುದೇನೆಂದು ವೃದ್ಧರಿಂದ ಕೇಳಿ ಅವರ ಹಿತವಚನದಂತೆ ಮಾಡುವವರಿಗೆ ಮಾತ್ರ ಸಾಧ್ಯವಾಗುತ್ತದೆ.
10002022a ಉತ್ಥಾಯೋತ್ಥಾಯ ಹಿ ಸದಾ ಪ್ರಷ್ಟವ್ಯಾ ವೃದ್ಧಸಂಮತಾಃ।
10002022c ತೇಽಸ್ಯ ಯೋಗೇ ಪರಂ ಮೂಲಂ ತನ್ಮೂಲಾ ಸಿದ್ಧಿರುಚ್ಯತೇ।।
ಸಿದ್ಧಿಯಾಗುವ ಕಾರ್ಯದ ಕುರಿತು ವೃದ್ಧಸಮ್ಮತರನ್ನು ಸದಾ ಕೇಳಬೇಕು. ಯಾವುದರಿಂದ ಸಿದ್ಧಿಯುಂಟಾಗುತ್ತದೆಯೆಂದು ಹೇಳುವ ಅವರೇ ಆ ದೈವಯೋಗದ ಪರಮ ಮೂಲರು.
10002023a ವೃದ್ಧಾನಾಂ ವಚನಂ ಶ್ರುತ್ವಾ ಯೋ ಹ್ಯುತ್ಥಾನಂ ಪ್ರಯೋಜಯೇತ್।
10002023c ಉತ್ಥಾನಸ್ಯ ಫಲಂ ಸಮ್ಯಕ್ತದಾ ಸ ಲಭತೇಽಚಿರಾತ್।।
ವೃದ್ಧರ ವಚನವನ್ನು ಕೇಳಿ ಯಾರು ಪ್ರಯತ್ನವನ್ನು ಪ್ರಾರಂಭಿಸುತ್ತಾರೋ ಅವರು ಬೇಗ ಉತ್ತಮ ಫಲವನ್ನು ಪಡೆದುಕೊಳ್ಳುತ್ತಾರೆ.
10002024a ರಾಗಾತ್ಕ್ರೋಧಾದ್ಭಯಾಲ್ಲೋಭಾದ್ಯೋಽರ್ಥಾನೀಹೇತ ಮಾನವಃ।
10002024c ಅನೀಶಶ್ಚಾವಮಾನೀ ಚ ಸ ಶೀಘ್ರಂ ಭ್ರಶ್ಯತೇ ಶ್ರಿಯಃ।।
ರಾಗ-ಕ್ರೋಧ-ಭಯ-ಲೋಭಗಳಿಂದ ಅರ್ಥಸಿದ್ಧಿಯನ್ನು ಪಡೆಯಲು ಬಯಸುವ ಮಾನವನು ಅದನ್ನು ಪಡೆಯದೇ ಅಪಮಾನಕ್ಕೂ ಗುರಿಯಾಗುತ್ತಾನೆ ಮತ್ತು ಶೀಘ್ರವಾಗಿ ಐಶ್ವರ್ಯದಿಂದಲೂ ಭ್ರಷ್ಟನಾಗುತ್ತಾನೆ.
10002025a ಸೋಽಯಂ ದುರ್ಯೋಧನೇನಾರ್ಥೋ ಲುಬ್ಧೇನಾದೀರ್ಘದರ್ಶಿನಾ।
10002025c ಅಸಮರ್ಥ್ಯ ಸಮಾರಬ್ಧೋ ಮೂಢತ್ವಾದವಿಚಿಂತಿತಃ।।
ಈ ದುರ್ಯೋಧನನಾದರೋ ಮಹಾಲೋಭಿ. ಮುಂದೇನಾಗುವುದೆಂಬುದರ ಬಗೆಗೆ ತಿಳುವಳಿಕೆಯಿಲ್ಲದವನು. ಅಸಮರ್ಥನು. ದುಡುಕುವವನು. ಮೂಢತ್ವದಿಂದಾಗಿ ಯೋಚನೆಯನ್ನೇ ಮಾಡದವನು.
10002026a ಹಿತಬುದ್ಧೀನನಾದೃತ್ಯ ಸಂಮಂತ್ರ್ಯಾಸಾಧುಭಿಃ ಸಹ।
10002026c ವಾರ್ಯಮಾಣೋಽಕರೋದ್ವೈರಂ ಪಾಂಡವೈರ್ಗುಣವತ್ತರೈಃ।।
ಅವನಿಗೆ ಹಿತವಾಗಬೇಕೆಂಬ ಮನಸ್ಸಿದ್ದವರ ಮಾತುಗಳೆಲ್ಲವನ್ನೂ ಅವನು ಅನಾದರಿಸಿ, ದುಷ್ಟರೊಡನೆ ಸಮಾಲೋಚನೆ ನಡೆಸಿ, ಬೇಡವೆಂದು ಎಷ್ಟು ಹೇಳಿದರೂ ಗುಣದಲ್ಲಿ ಅವನಿಗಿಂತಲೂ ವರಿಷ್ಟರಾದ ಪಾಂಡವರೊಂದಿಗೆ ವೈರವನ್ನು ಸಾಧಿಸಿದನು.
10002027a ಪೂರ್ವಮಪ್ಯತಿದುಃಶೀಲೋ ನ ದೈನ್ಯಂ ಕರ್ತುಮರ್ಹತಿ।
10002027c ತಪತ್ಯರ್ಥೇ ವಿಪನ್ನೇ ಹಿ ಮಿತ್ರಾಣಾಮಕೃತಂ ವಚಃ।।
ಮೊದಲಿನಿಂದಲೂ ಅವನು ದುಃಶೀಲನಾಗಿದ್ದನು. ದೈನ್ಯವೆಂಬುದೇ ಇರಲಿಲ್ಲ. ಮಿತ್ರರ ವಚನದಂತೆ ಮಾಡುತ್ತಿರಲಿಲ್ಲ. ಅದರ ಕಾರಣದಿಂದಲೇ ಅವನು ಈ ವಿಪತ್ತಿಗೆ ಒಳಗಾಗಿದ್ದಾನೆ.
10002028a ಅನ್ವಾವರ್ತಾಮಹಿ ವಯಂ ಯತ್ತು ತಂ ಪಾಪಪೂರುಷಂ।
10002028c ಅಸ್ಮಾನಪ್ಯನಯಸ್ತಸ್ಮಾತ್ಪ್ರಾಪ್ತೋಽಯಂ ದಾರುಣೋ ಮಹಾನ್।।
ನಾವು ಕೂಡ ಆ ಪಾಪಪುರುಷನನ್ನೇ ಅನುಸರಿಸಿ ನಡೆದುಕೊಂಡು ಬಂದೆವು. ಅದರಿಂದಲೇ ನಾವು ಈ ಮಹಾ ದಾರುಣ ದುಃಖವನ್ನು ಅನುಭವಿಸುತ್ತಿದ್ದೇವೆ.
10002029a ಅನೇನ ತು ಮಮಾದ್ಯಾಪಿ ವ್ಯಸನೇನೋಪತಾಪಿತಾ।
10002029c ಬುದ್ಧಿಶ್ಚಿಂತಯತಃ ಕಿಂ ಚಿತ್ಸ್ವಂ ಶ್ರೇಯೋ ನಾವಬುಧ್ಯತೇ।।
ಈ ವ್ಯಸನದಿಂದ ಸಂತಾಪಗೊಂಡಿರುವ ನನ್ನ ಬುದ್ಧಿಯು ಎಷ್ಟೇ ಯೋಚಿಸಿದರೂ ನಮಗೆ ಶ್ರೇಯಸ್ಕರವಾದುದೇನೂ ತಿಳಿಯುತ್ತಿಲ್ಲ.
10002030a ಮುಹ್ಯತಾ ತು ಮನುಷ್ಯೇಣ ಪ್ರಷ್ಟವ್ಯಾಃ ಸುಹೃದೋ ಬುಧಾಃ।
10002030c ತೇ ಚ ಪೃಷ್ಟಾ ಯಥಾ ಬ್ರೂಯುಸ್ತತ್ಕರ್ತವ್ಯಂ ತಥಾ ಭವೇತ್।।
ತಿಳಿದಿರುವವರು ಮೋಹಗೊಂಡಿರುವಾಗ ಸುಹೃದಯರನ್ನು ಕೇಳಬೇಕು. ಅವರು ಏನನ್ನು ಹೇಳುತ್ತಾರೋ ಅದೇ ಅವರಿಗೆ ಕರ್ತವ್ಯವಾಗುತ್ತದೆ.
10002031a ತೇ ವಯಂ ಧೃತರಾಷ್ಟ್ರಂ ಚ ಗಾಂಧಾರೀಂ ಚ ಸಮೇತ್ಯ ಹ।
10002031c ಉಪಪೃಚ್ಚಾಮಹೇ ಗತ್ವಾ ವಿದುರಂ ಚ ಮಹಾಮತಿಂ।।
ಆದುದರಿಂದ ನಾವು ಒಟ್ಟಾಗಿ ಧೃತರಾಷ್ಟ್ರ, ಗಾಂಧಾರೀ ಮತ್ತು ಮಹಾಮತಿ ವಿದುರರ ಬಳಿಹೋಗಿ ಅವರನ್ನು ಕೇಳೋಣ.
10002032a ತೇ ಪೃಷ್ಟಾಶ್ಚ ವದೇಯುರ್ಯಚ್ಚ್ರೇಯೋ ನಃ ಸಮನಂತರಂ।
10002032c ತದಸ್ಮಾಭಿಃ ಪುನಃ ಕಾರ್ಯಮಿತಿ ಮೇ ನೈಷ್ಠಿಕೀ ಮತಿಃ।।
ನಮ್ಮ ಕೇಳಿಕೆಗೆ ಅವರು ನಮಗೆ ಶ್ರೇಯಸ್ಕರವಾದುದನ್ನೇ ಹೇಳಿಯಾರು. ಅನಂತರ ನಾವು ಅವರ ಸಲಹೆಯಂತೆ ಮಾಡಬೇಕು. ಇದು ನನ್ನ ಬುದ್ಧಿಯ ನಿಶ್ಚಯವಾಗಿರುತ್ತದೆ.
10002033a ಅನಾರಂಭಾತ್ತು ಕಾರ್ಯಾಣಾಂ ನಾರ್ಥಃ ಸಂಪದ್ಯತೇ ಕ್ವ ಚಿತ್।
10002033c ಕೃತೇ ಪುರುಷಕಾರೇ ಚ ಯೇಷಾಂ ಕಾರ್ಯಂ ನ ಸಿಧ್ಯತಿ।
10002033e ದೈವೇನೋಪಹತಾಸ್ತೇ ತು ನಾತ್ರ ಕಾರ್ಯಾ ವಿಚಾರಣಾ।।
ಕಾರ್ಯಗಳನ್ನು ಆರಂಭಿಸದೇ ಇದ್ದರೆ ಯಾವ ಪ್ರಯೋಜನವೂ ಇಲ್ಲ. ಒಂದು ವೇಳೆ ಪುರುಷಪ್ರಯತ್ನದಿಂದಲೂ ಕಾರ್ಯವು ಸಿದ್ಧಿಯಾಗದಿದ್ದರೆ ಅವರು ದೈವೋಪಹತರೆಂದೇ ತಿಳಿದುಕೊಳ್ಳಬೇಕು. ಈ ವಿಷಯದಲ್ಲಿ ಪುನಃ ವಿಮರ್ಶಿಸುವ ಅವಶ್ಯಕತೆಯೇ ಇಲ್ಲ.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ದ್ರೌಣಿಕೃಪಸಂವಾದೇ ದ್ವಿತೀಯೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ದ್ರೌಣಿಕೃಪಸಂವಾದ ಎನ್ನುವ ಎರಡನೇ ಅಧ್ಯಾಯವು.