ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಲ್ಯ ಪರ್ವ
ಗದಾಯುದ್ಧ ಪರ್ವ
ಅಧ್ಯಾಯ 59
ಸಾರ
ಅಧರ್ಮಯುಕ್ತವಾಗಿ ದುರ್ಯೋಧನನನ್ನು ಹೊಡೆದುರುಳಿಸಿದುದನ್ನು ಕಂಡು ಬಲರಾಮನು ನೇಗಿಲನ್ನೆತ್ತಿ ಭೀಮಸೇನನನ್ನು ಆಕ್ರಮಣಿಸಲು ಮುಂದಾದುದು (1-8). ಕೃಷ್ಣನು ಬಲರಾಮನನ್ನು ಹಿಡಿದು ನಿಲ್ಲಿಸಿ ಶಾಂತನಾಗಲು ಹೇಳಿದುದು (9-16). ಬಲರಾಮನು “ಭೀಮಸೇನನು ವಂಚನೆಯಿಂದ ಯುದ್ಧಮಾಡುವವನು!” ಎಂದು ರಾಜಸಂಸದಿಯಲ್ಲಿ ಘೋಷಿಸಿ ದ್ವಾರಕೆಗೆ ತೆರಳಿದುದು (17-24). ವಾಸುದೇವ-ಯುಧಿಷ್ಠಿರ ಸಂವಾದ (25-36). ಭೀಮಸೇನ-ಯುಧಿಷ್ಠಿರ ಸಂವಾದ (37-44).
09059001 ಧೃತರಾಷ್ಟ್ರ ಉವಾಚ 09059001a ಅಧರ್ಮೇಣ ಹತಂ ದೃಷ್ಟ್ವಾ ರಾಜಾನಂ ಮಾಧವೋತ್ತಮಃ।
09059001c ಕಿಮಬ್ರವೀತ್ತದಾ ಸೂತ ಬಲದೇವೋ ಮಹಾಬಲಃ।।
ಧೃತರಾಷ್ಟ್ರನು ಹೇಳಿದನು: “ಸೂತ! ಅಧರ್ಮದಿಂದ ರಾಜನು ಹತನಾದುದನ್ನು ನೋಡಿ ಮಾಧವೋತ್ತಮ ಮಹಾಬಲ ಬಲದೇವನು ಏನು ಹೇಳಿದನು?
09059002a ಗದಾಯುದ್ಧವಿಶೇಷಜ್ಞೋ ಗದಾಯುದ್ಧವಿಶಾರದಃ।
09059002c ಕೃತವಾನ್ರೌಹಿಣೇಯೋ ಯತ್ತನ್ಮಮಾಚಕ್ಷ್ವ ಸಂಜಯ।।
ಸಂಜಯ! ಆಗ ಗದಾಯುದ್ಧ ವಿಶೇಷಜ್ಞ, ಗದಾಯುದ್ಧವಿಶಾರದ ರೌಹಿಣೇಯನು ಏನನ್ನು ಮಾಡಿದನು ಎನ್ನುವುದನ್ನು ನನಗೆ ಹೇಳು!”
09059003 ಸಂಜಯ ಉವಾಚ 09059003a ಶಿರಸ್ಯಭಿಹತಂ ದೃಷ್ಟ್ವಾ ಭೀಮಸೇನೇನ ತೇ ಸುತಂ।
09059003c ರಾಮಃ ಪ್ರಹರತಾಂ ಶ್ರೇಷ್ಠಶ್ಚುಕ್ರೋಧ ಬಲವದ್ ಬಲೀ।।
ಸಂಜಯನು ಹೇಳಿದನು: “ಭೀಮಸೇನನು ನಿನ್ನ ಮಗನ ತಲೆಯನ್ನು ಒದೆದುದನ್ನು ಕಂಡು ಪ್ರಹರಿಗಳಲ್ಲಿ ಶ್ರೇಷ್ಠ ಬಲಶಾಲೀ ರಾಮನು ಅತ್ಯಂತ ಕ್ರೋಧಿತನಾದನು.
09059004a ತತೋ ಮಧ್ಯೇ ನರೇಂದ್ರಾಣಾಂ ಊರ್ಧ್ವಬಾಹುರ್ಹಲಾಯುಧಃ।
09059004c ಕುರ್ವನ್ನಾರ್ತಸ್ವರಂ ಘೋರಂ ಧಿಗ್ಧಿಗ್ಭೀಮೇತ್ಯುವಾಚ ಹ।।
ಆಗ ನರೇಂದ್ರರ ಮಧ್ಯದಲ್ಲಿ ಹಲಾಯುಧನು ಬಾಹುಗಳನ್ನು ಮೇಲೆತ್ತಿ ಘೋರವಾದ ಆರ್ತಸ್ವರದಲ್ಲಿ “ಭೀಮ! ಧಿಕ್ಕಾರ! ಧಿಕ್ಕಾರ!” ಎಂದು ಕೂಗಿದನು.
09059005a ಅಹೋ ಧಿಗ್ಯದಧೋ ನಾಭೇಃ ಪ್ರಹೃತಂ ಶುದ್ಧವಿಕ್ರಮೇ।
09059005c ನೈತದ್ದೃಷ್ಟಂ ಗದಾಯುದ್ಧೇ ಕೃತವಾನ್ಯದ್ವೃಕೋದರಃ।।
“ಧಿಕ್ಕಾರ! ಶುದ್ಧವಿಕ್ರಮನನ್ನು ನಾಭಿಯ ಕೆಳಗೆ ಹೊಡೆದುದಕ್ಕೆ ಧಿಕ್ಕಾರ! ಗದಾಯುದ್ಧದಲ್ಲಿ ವೃಕೋದರನು ಮಾಡಿದುದನ್ನು ಈ ಹಿಂದೆ ಯಾರೂ ಕಂಡಿರಲಿಲ್ಲ!
09059006a ಅಧೋ ನಾಭ್ಯಾ ನ ಹಂತವ್ಯಮಿತಿ ಶಾಸ್ತ್ರಸ್ಯ ನಿಶ್ಚಯಃ।
09059006c ಅಯಂ ತ್ವಶಾಸ್ತ್ರವಿನ್ಮೂಢಃ ಸ್ವಚ್ಚಂದಾತ್ಸಂಪ್ರವರ್ತತೇ।।
ನಾಭಿಯ ಕೆಳಗೆ ಹೊಡೆಯಬಾರದೆಂದು ಗದಾಯುದ್ಧ ಶಾಸ್ತ್ರದ ನಿಶ್ಚಯ! ಶಾಸ್ತ್ರಗಳ ಕುರಿತು ಮೂಢನಾದ ಇವನು ಸ್ವಚ್ಚಂದನಾಗಿ ವರ್ತಿಸಿದ್ದಾನೆ!”
09059007a ತಸ್ಯ ತತ್ತದ್ಬ್ರುವಾಣಸ್ಯ ರೋಷಃ ಸಮಭವನ್ಮಹಾನ್।
09059007c ತತೋ ಲಾಂಗಲಮುದ್ಯಮ್ಯ ಭೀಮಮಭ್ಯದ್ರವದ್ಬಲೀ।।
ಅವನು ಹೀಗೆ ಹೇಳುತ್ತಿದ್ದಂತೆಯೇ ಅವನಲ್ಲಿ ಮಹಾ ರೋಷವು ಉದ್ಭವಿಸಿತು. ಆಗ ನೇಗಿಲನ್ನೆತ್ತಿಕೊಂಡು ಆ ಬಲಶಾಲಿಯು ಭೀಮನನ್ನು ಆಕ್ರಮಿಸ ಹೊರಟನು.
09059008a ತಸ್ಯೋರ್ಧ್ವಬಾಹೋಃ ಸದೃಶಂ ರೂಪಮಾಸೀನ್ಮಹಾತ್ಮನಃ।
09059008c ಬಹುಧಾತುವಿಚಿತ್ರಸ್ಯ ಶ್ವೇತಸ್ಯೇವ ಮಹಾಗಿರೇಃ।।
ಆಗ ಬಾಹುಗಳನ್ನು ಮೇಲಿತ್ತಿದ್ದ ಆ ಮಹಾತ್ಮನ ರೂಪವು ಅನೇಕ ಧಾತುಗಳು ಸುರಿದು ಬಣ್ಣದ ಲೇಪನಗೊಂಡಿದ್ದ ಮಹಾ ಶ್ವೇತಗಿರಿಯಂತೆ ತೋರಿತು.
09059009a ತಮುತ್ಪತಂತಂ ಜಗ್ರಾಹ ಕೇಶವೋ ವಿನಯಾನತಃ।
09059009c ಬಾಹುಭ್ಯಾಂ ಪೀನವೃತ್ತಾಭ್ಯಾಂ ಪ್ರಯತ್ನಾದ್ಬಲವದ್ಬಲೀ।।
ಮೇಲೇಳುತ್ತಿದ್ದ ಅವನನ್ನು ವಿನಯಾನತ ಬಲಶಾಲೀ ಕೇಶವನು ಉಬ್ಬಿದ ಉರುಟು ಬಾಹುಗಳಿಂದ ಬಲವನ್ನುಪಯೋಗಿಸಿ ಪ್ರಯತ್ನಪಟ್ಟು ಹಿಡಿದುಕೊಂಡನು.
09059010a ಸಿತಾಸಿತೌ ಯದುವರೌ ಶುಶುಭಾತೇಽಧಿಕಂ ತತಃ।
09059010c ನಭೋಗತೌ ಯಥಾ ರಾಜಂಶ್ಚಂದ್ರಸೂರ್ಯೌ ದಿನಕ್ಷಯೇ।।
ಕಪ್ಪು ಮತ್ತು ಶ್ವೇತವರ್ಣಗಳ ಆ ಇಬ್ಬರು ಯದುವರರು ಸಯಾಂಕಾಲ ಆಕಾಶದಲ್ಲಿ ಕಾಣುವ ಚಂದ್ರ-ಸೂರ್ಯರಂತೆ ಶೋಭಿಸಿದರು.
09059011a ಉವಾಚ ಚೈನಂ ಸಂರಬ್ಧಂ ಶಮಯನ್ನಿವ ಕೇಶವಃ।
09059011c ಆತ್ಮವೃದ್ಧಿರ್ಮಿತ್ರವೃದ್ಧಿರ್ಮಿತ್ರಮಿತ್ರೋದಯಸ್ತಥಾ।।
09059011e ವಿಪರೀತಂ ದ್ವಿಷತ್ಸ್ವೇತತ್ಷಡ್ವಿಧಾ ವೃದ್ಧಿರಾತ್ಮನಃ।।
ಕುಪಿತನಾಗಿರುವವನನ್ನು ಸಂತವಿಸುತ್ತಾ ಕೇಶವನು ಈ ಮಾತುಗಳನ್ನಾಡಿದನು: “ಆತ್ಮವೃದ್ಧಿ, ಮಿತ್ರವೃದ್ಧಿ, ಮಿತ್ರನ ಶತ್ರುವಿನ ನಾಶ, ಮಿತ್ರನ ಮಿತ್ರನ ವೃದ್ಧಿ, ಶತ್ರುವಿನ ಮಿತ್ರನ ನಾಶ – ಈ ಆರು ಆತ್ಮವೃದ್ಧಿಗೆ ಸಾಧನಗಳಾಗುತ್ತವೆ.
09059012a ಆತ್ಮನ್ಯಪಿ ಚ ಮಿತ್ರೇಷು ವಿಪರೀತಂ ಯದಾ ಭವೇತ್।
09059012c ತದಾ ವಿದ್ಯಾನ್ಮನೋಜ್ಯಾನಿಮಾಶು ಶಾಂತಿಕರೋ ಭವೇತ್।।
ತನ್ನ ವಿಷಯದಲ್ಲಿಯೂ ಮತ್ತು ತನ್ನ ಮಿತ್ರನ ವಿಷಯದಲ್ಲಿಯೂ ಇದಕ್ಕೆ ವಿಪರೀತವಾದರೆ ಮನೋವ್ಯಥೆಯುಂಟಾಗುತ್ತದೆ. ಬೇಗನೇ ಅದನ್ನು ನಿವಾರಿಸಲು ಪ್ರಯತ್ನಿಸಬೇಕು.
09059013a ಅಸ್ಮಾಕಂ ಸಹಜಂ ಮಿತ್ರಂ ಪಾಂಡವಾಃ ಶುದ್ಧಪೌರುಷಾಃ।
09059013c ಸ್ವಕಾಃ ಪಿತೃಷ್ವಸುಃ ಪುತ್ರಾಸ್ತೇ ಪರೈರ್ನಿಕೃತಾ ಭೃಶಂ।।
ಶುದ್ಧಪೌರುಷ ಪಾಂಡವರು ನಮ್ಮ ಸಹಜ ಮಿತ್ರರು. ನಮ್ಮ ಸೋದರತ್ತೆಯ ಮಕ್ಕಳಾದುದರಿಂದ ಅವರು ನಮ್ಮವರು. ಶತ್ರುಗಳಿಂದ ಬಹಳವಾಗಿ ಪೀಡಿತರಾಗಿರುವರು.
09059014a ಪ್ರತಿಜ್ಞಾಪಾರಣಂ ಧರ್ಮಃ ಕ್ಷತ್ರಿಯಸ್ಯೇತಿ ವೇತ್ಥ ಹ।
09059014c ಸುಯೋಧನಸ್ಯ ಗದಯಾ ಭಂಕ್ತಾಸ್ಮ್ಯೂರೂ ಮಹಾಹವೇ।।
09059014e ಇತಿ ಪೂರ್ವಂ ಪ್ರತಿಜ್ಞಾತಂ ಭೀಮೇನ ಹಿ ಸಭಾತಲೇ।।
ಪ್ರತಿಜ್ಞಾಪಾಲನೆಯು ಕ್ಷತ್ರಿಯನ ಧರ್ಮವೆಂದು ನಾನು ತಿಳಿದುಕೊಂಡಿದ್ದೇನೆ. ಹಿಂದೆ ಸಭಾತಲದಲ್ಲಿ ಭೀಮನು “ಮಹಾಯುದ್ಧದಲ್ಲಿ ಗದೆಯಿಂದ ಸುಯೋಧನನ ತೊಡೆಯನ್ನು ಸೀಳುತ್ತೇನೆ!” ಎಂದು ಪ್ರತಿಜ್ಞೆಮಾಡಿದ್ದನು.
09059015a ಮೈತ್ರೇಯೇಣಾಭಿಶಪ್ತಶ್ಚ ಪೂರ್ವಮೇವ ಮಹರ್ಷಿಣಾ।
09059015c ಊರೂ ಭೇತ್ಸ್ಯತಿ ತೇ ಭೀಮೋ ಗದಯೇತಿ ಪರಂತಪ।।
09059015e ಅತೋ ದೋಷಂ ನ ಪಶ್ಯಾಮಿ ಮಾ ಕ್ರುಧಸ್ತ್ವಂ ಪ್ರಲಂಬಹನ್।।
ಪರಂತಪ! ಹಿಂದೆ ಮಹರ್ಷಿ ಮೈತ್ರೇಯನೂ ಕೂಡ “ಭೀಮನು ಗದೆಯಿಂದ ನಿನ್ನ ತೊಡೆಯನ್ನು ಒಡೆಯುತ್ತಾನೆ!” ಎಂದು ಶಪಿಸಿದ್ದನು. ಆದುದರಿಂದ ಇದರಲ್ಲಿ ದೋಷವನ್ನೇನೂ ನಾನು ಕಾಣುತ್ತಿಲ್ಲ. ಕೋಪಗೊಳ್ಳದಿರು!
09059016a ಯೌನೈರ್ಹಾರ್ದೈಶ್ಚ ಸಂಬಂಧೈಃ ಸಂಬದ್ಧಾಃ ಸ್ಮೇಹ ಪಾಂಡವೈಃ।
09059016c ತೇಷಾಂ ವೃದ್ಧ್ಯಾಭಿವೃದ್ಧಿರ್ನೋ ಮಾ ಕ್ರುಧಃ ಪುರುಷರ್ಷಭ।।
ಪಾಂಡವರೊಂದಿಗೆ ಶರೀರಸಂಬಂಧವಿದೆ29. ವಿವಾಹದ ಮೂಲಕವೂ ಅವರೊಂದಿಗೆ ನಮ್ಮ ಸಂಬಂಧವಿದೆ30. ಅವರ ವೃದ್ಧಿಯೂ ನಮ್ಮ ವೃದ್ಧಿಯೂ ಒಂದೇ. ಪುರುಷರ್ಷಭ! ಕ್ರೋಧಿತನಾಗಬೇಡ!”
09059017 ರಾಮ ಉವಾಚ 09059017a ಧರ್ಮಃ ಸುಚರಿತಃ ಸದ್ಭಿಃ ಸಹ ದ್ವಾಭ್ಯಾಂ ನಿಯಚ್ಚತಿ।
09059017c ಅರ್ಥಶ್ಚಾತ್ಯರ್ಥಲುಬ್ಧಸ್ಯ ಕಾಮಶ್ಚಾತಿಪ್ರಸಂಗಿನಃ।।
ರಾಮನು ಹೇಳಿದನು: “ಸಂಪತ್ತನ್ನು ಅತಿಯಾಗಿ ಆಸೆಪಡುವುದರಿಂದ ಮತ್ತು ಅತಿಯಾದ ದೇಹಕಾಮವನ್ನು ಬಯಸುವುದರಿಂದ ಸತ್ಪುರುಷರು ಆಚರಿಸುವ ಧರ್ಮವು ಸಂಕುಚಿತವಾಗುತ್ತದೆ.
09059018a ಧರ್ಮಾರ್ಥೌ ಧರ್ಮಕಾಮೌ ಚ ಕಾಮಾರ್ಥೌ ಚಾಪ್ಯಪೀಡಯನ್।
09059018c ಧರ್ಮಾರ್ಥಕಾಮಾನ್ಯೋಽಭ್ಯೇತಿ ಸೋಽತ್ಯಂತಂ ಸುಖಮಶ್ನುತೇ।।
ಯಾರು ಧರ್ಮ-ಅರ್ಥಗಳನ್ನೂ, ಧರ್ಮ-ಕಾಮಗಳನ್ನೂ, ಕಾಮ-ಅರ್ಥಗಳನ್ನೂ ಪರಸ್ಪರ ಕುಂಠಿತವಾಗದಂತೆ ಧರ್ಮ-ಅರ್ಥ-ಕಾಮ ಈ ಮೂರನ್ನೂ ಯಥೋಚಿತವಾಗಿ ಅನುಸರಿಸುತ್ತಾನೋ ಅವನು ಅತ್ಯಂತ ಸುಖವನ್ನು ಹೊಂದುತ್ತಾನೆ.
09059019a ತದಿದಂ ವ್ಯಾಕುಲಂ ಸರ್ವಂ ಕೃತಂ ಧರ್ಮಸ್ಯ ಪೀಡನಾತ್।
09059019c ಭೀಮಸೇನೇನ ಗೋವಿಂದ ಕಾಮಂ ತ್ವಂ ತು ಯಥಾತ್ಥ ಮಾಂ।।
ಗೋವಿಂದ! ಭೀಮಸೇನನು ಬೇಕಂತಲೇ ಧರ್ಮವನ್ನು ಅವಹೇಳಿಸಿ ಎಲ್ಲವನ್ನೂ ವ್ಯಾಕುಲಗೊಳಿಸಿದ್ದಾನೆ. ಈ ವಿಷಯದಲ್ಲಿ ನೀನು ನಿನಗೆ ತೋರಿದ ಧರ್ಮವನ್ನು ನನಗೆ ಹೇಳುತ್ತಿರುವೆ!”
09059020 ವಾಸುದೇವ ಉವಾಚ 09059020a ಅರೋಷಣೋ ಹಿ ಧರ್ಮಾತ್ಮಾ ಸತತಂ ಧರ್ಮವತ್ಸಲಃ।
09059020c ಭವಾನ್ಪ್ರಖ್ಯಾಯತೇ ಲೋಕೇ ತಸ್ಮಾತ್ಸಂಶಾಮ್ಯ ಮಾ ಕ್ರುಧಃ।।
ವಾಸುದೇವನು ಹೇಳಿದನು: “ನೀನು ಧರ್ಮಾತ್ಮ. ಸತತವೂ ಧರ್ಮವತ್ಸಲ. ಕ್ರೋಧರಹಿತನೆಂದು ಲೋಕದಲ್ಲಿ ಪ್ರಖ್ಯಾತನಾಗಿರುವೆ! ಆದುದರಿಂದ ಶಾಂತನಾಗು. ಕ್ರೋಧಿಸಬೇಡ!
09059021a ಪ್ರಾಪ್ತಂ ಕಲಿಯುಗಂ ವಿದ್ಧಿ ಪ್ರತಿಜ್ಞಾಂ ಪಾಂಡವಸ್ಯ ಚ।
09059021c ಆನೃಣ್ಯಂ ಯಾತು ವೈರಸ್ಯ ಪ್ರತಿಜ್ಞಾಯಾಶ್ಚ ಪಾಂಡವಃ।।
ಕಲಿಯುಗವು ಪ್ರಾಪ್ತವಾದುದನ್ನೂ ಪಾಂಡವ ಭೀಮಸೇನನ ಪ್ರತಿಜ್ಞೆಯನ್ನೂ ಗಮನಿಸು. ಪಾಂಡವ ಭೀಮನು ವೈರ ಮತ್ತು ಪ್ರತಿಜ್ಞೆಗಳ ಋಣಗಳಿಂದ ಮುಕ್ತನಾಗಲಿ!””
09059022 ಸಂಜಯ ಉವಾಚ 09059022a ಧರ್ಮಚ್ಚಲಮಪಿ ಶ್ರುತ್ವಾ ಕೇಶವಾತ್ಸ ವಿಶಾಂ ಪತೇ।
09059022c ನೈವ ಪ್ರೀತಮನಾ ರಾಮೋ ವಚನಂ ಪ್ರಾಹ ಸಂಸದಿ।।
ಸಂಜಯನು ಹೇಳಿದನು: “ವಿಶಾಂಪತೇ! ಕೇಶವನಿಂದ ವ್ಯಾಜರೂಪವಾದ ಧರ್ಮದ ವಿವರಣೆಯನ್ನು ಕೇಳಿ ರಾಮನಿಗೆ ಸಮಾಧಾನವಾಗಲಿಲ್ಲ. ರಾಜಸಂಸದಿಯಲ್ಲಿ ಅವನು ಈ ಮಾತುಗಳನ್ನಾಡಿದನು:
09059023a ಹತ್ವಾಧರ್ಮೇಣ ರಾಜಾನಂ ಧರ್ಮಾತ್ಮಾನಂ ಸುಯೋಧನಂ।
09059023c ಜಿಹ್ಮಯೋಧೀತಿ ಲೋಕೇಽಸ್ಮಿನ್ಖ್ಯಾತಿಂ ಯಾಸ್ಯತಿ ಪಾಂಡವಃ।।
“ಧರ್ಮಾತ್ಮ ರಾಜಾ ಸುಯೋಧನನನ್ನು ಅಧರ್ಮದಿಂದ ಕೊಂದು ಪಾಂಡವ ಭೀಮನು ಈ ಲೋಕದಲ್ಲಿ ವಂಚನೆಯ ಯುದ್ಧಮಾಡುವವನು ಎಂದು ಪ್ರಖ್ಯಾತನಾಗುತ್ತಾನೆ!
09059024a ದುರ್ಯೋಧನೋಽಪಿ ಧರ್ಮಾತ್ಮಾ ಗತಿಂ ಯಾಸ್ಯತಿ ಶಾಶ್ವತೀಂ।
09059024c ಋಜುಯೋಧೀ ಹತೋ ರಾಜಾ ಧಾರ್ತರಾಷ್ಟ್ರೋ ನರಾಧಿಪಃ।।
ಹತನಾದ ಧರ್ಮಾತ್ಮ ನ್ಯಾಯಯೋಧೀ ನರಾಧಿಪ ರಾಜಾ ಧಾರ್ತರಾಷ್ಟ್ರ ದುರ್ಯೋಧನನಾದರೋ ಶಾಶ್ವತ ಗತಿಯನ್ನು ಹೊಂದುತ್ತಾನೆ.
09059025a ಯುದ್ಧದೀಕ್ಷಾಂ ಪ್ರವಿಶ್ಯಾಜೌ ರಣಯಜ್ಞಂ ವಿತತ್ಯ ಚ।
09059025c ಹುತ್ವಾತ್ಮಾನಮಮಿತ್ರಾಗ್ನೌ ಪ್ರಾಪ ಚಾವಭೃಥಂ ಯಶಃ।।
ಯುದ್ಧದೀಕ್ಷೆಯನ್ನು ಕೈಗೊಂಡು ಪ್ರವೇಶಿಸಿ ರಣಯಜ್ಞವನ್ನು ಪಸರಿಸಿ ಶತ್ರುಗಳೆಂಬ ಅಗ್ನಿಯಲ್ಲಿ ಆತ್ಮಾಹುತಿಯನ್ನಿತ್ತು ಇವನು ಯಶಸ್ಸೆಂಬ ಅವಭೃತವನ್ನು ಹೊಂದಿದನು.”
09059026a ಇತ್ಯುಕ್ತ್ವಾ ರಥಮಾಸ್ಥಾಯ ರೌಹಿಣೇಯಃ ಪ್ರತಾಪವಾನ್।
09059026c ಶ್ವೇತಾಭ್ರಶಿಖರಾಕಾರಃ ಪ್ರಯಯೌ ದ್ವಾರಕಾಂ ಪ್ರತಿ।।
ಹೀಗೆ ಹೇಳಿ ರಥವನ್ನೇರಿ ಶ್ವೇತಗಿರಿಯ ಶಿಖರಪ್ರಾಯನಾದ ಪ್ರತಾಪವಾನ್ ರೌಹಿಣೇಯನು ದ್ವಾರಕೆಯ ಕಡೆ ಪ್ರಯಾಣಿಸಿದನು.
09059027a ಪಾಂಚಾಲಾಶ್ಚ ಸವಾರ್ಷ್ಣೇಯಾಃ ಪಾಂಡವಾಶ್ಚ ವಿಶಾಂ ಪತೇ।
09059027c ರಾಮೇ ದ್ವಾರವತೀಂ ಯಾತೇ ನಾತಿಪ್ರಮನಸೋಽಭವನ್।।
ವಿಶಾಂಪತೇ! ರಾಮನು ದ್ವಾರವತಿಗೆ ತೆರಳುತ್ತಿರುವುವನ್ನು ನೋಡಿ ಪಾಂಚಾಲರು, ಸರ್ವ ವಾರ್ಷ್ಣೇಯರು ಮತ್ತು ಪಾಂಡವರು ಅತಿ ಪ್ರಸನ್ನರಾಗಲಿಲ್ಲ.
09059028a ತತೋ ಯುಧಿಷ್ಠಿರಂ ದೀನಂ ಚಿಂತಾಪರಮಧೋಮುಖಂ।
09059028c ಶೋಕೋಪಹತಸಂಕಲ್ಪಂ ವಾಸುದೇವೋಽಬ್ರವೀದಿದಂ।।
ಆಗ ದೀನನಾಗಿ ಚಿಂತಾಪರನಾಗಿ ಶೋಕದಿಂದ ಭಗ್ನ ಸಂಕಲ್ಪನಾಗಿ ಮುಖವನ್ನು ಕೆಳಗೆಮಾಡಿಕೊಂಡಿದ್ದ ಯುಧಿಷ್ಠಿರನಿಗೆ ವಾಸುದೇವನು ಹೇಳಿದನು:
09059029a ಧರ್ಮರಾಜ ಕಿಮರ್ಥಂ ತ್ವಮಧರ್ಮಮನುಮನ್ಯಸೇ।
09059029c ಹತಬಂಧೋರ್ಯದೇತಸ್ಯ ಪತಿತಸ್ಯ ವಿಚೇತಸಃ।।
“ಧರ್ಮರಾಜ! ಏಕೆ ಹೀಗೆ ನೀನು ಅಧರ್ಮಕಾರ್ಯಕ್ಕೆ ಒಪ್ಪಿಗೆಯನ್ನಿತ್ತೆ? ಬಂಧುಗಳನ್ನು ಕಳೆದುಕೊಂಡು ಪ್ರಜ್ಞಾಹೀನನಾಗಿ ಅವನು ಕೆಳಗೆ ಬಿದ್ದಿದ್ದನು.
09059030a ದುರ್ಯೋಧನಸ್ಯ ಭೀಮೇನ ಮೃದ್ಯಮಾನಂ ಶಿರಃ ಪದಾ।
09059030c ಉಪಪ್ರೇಕ್ಷಸಿ ಕಸ್ಮಾತ್ತ್ವಂ ಧರ್ಮಜ್ಞಃ ಸನ್ನರಾಧಿಪ।।
ನರಾಧಿಪ! ಧರ್ಮಜ್ಞನಾದ ನೀನು ದುರ್ಯೋಧನನ ಶಿರವನ್ನು ಭೀಮಸೇನನು ಪಾದಗಳಿಂದ ತುಳಿಯುವುದನ್ನು ಏಕೆ ಉಪೇಕ್ಷಿಸಲಿಲ್ಲ?”
09059031 ಯುಧಿಷ್ಠಿರ ಉವಾಚ 09059031a ನ ಮಮೈತತ್ಪ್ರಿಯಂ ಕೃಷ್ಣ ಯದ್ರಾಜಾನಂ ವೃಕೋದರಃ।
09059031c ಪದಾ ಮೂರ್ಧ್ನ್ಯಸ್ಪೃಶತ್ಕ್ರೋಧಾನ್ನ ಚ ಹೃಷ್ಯೇ ಕುಲಕ್ಷಯೇ।।
ಯುಧಿಷ್ಠಿರನು ಹೇಳಿದನು: “ಕೃಷ್ಣ! ವೃಕೋದರನು ಕ್ರೋಧದಿಂದ ಕಾಲಿನಿಂದ ರಾಜನನ್ನು ಮೆಟ್ಟಿದಿದು ನನಗೂ ಇಷ್ಟವಾಗಲಿಲ್ಲ. ಕುಲಕ್ಷಯದಲ್ಲಿ ಯಾವ ಸಂತೋಷವೂ ಇಲ್ಲ!
09059032a ನಿಕೃತ್ಯಾ ನಿಕೃತಾ ನಿತ್ಯಂ ಧೃತರಾಷ್ಟ್ರಸುತೈರ್ವಯಂ।
09059032c ಬಹೂನಿ ಪರುಷಾಣ್ಯುಕ್ತ್ವಾ ವನಂ ಪ್ರಸ್ಥಾಪಿತಾಃ ಸ್ಮ ಹ।।
ಧೃತರಾಷ್ಟ್ರನ ಮಕ್ಕಳು ನಮ್ಮನ್ನು ನಿತ್ಯವೂ ವಂಚನೆಗಳಿಂದ ಮೋಸಗೊಳಿಸುತ್ತಿದ್ದರು. ಅನೇಕ ಕಠೋರಮಾತುಗಳನ್ನಾಡಿ ನಮ್ಮನ್ನು ವನಕ್ಕೆ ಕೂಡ ಕಳುಹಿಸಿದರು.
09059033a ಭೀಮಸೇನಸ್ಯ ತದ್ದುಃಖಮತೀವ ಹೃದಿ ವರ್ತತೇ।
09059033c ಇತಿ ಸಂಚಿಂತ್ಯ ವಾರ್ಷ್ಣೇಯ ಮಯೈತತ್ಸಮುಪೇಕ್ಷಿತಂ।।
ಭೀಮಸೇನನ ಹೃದಯದಲ್ಲಿದ್ದ ಆ ಅತೀವ ದುಃಖವು ಅವನನ್ನು ಈ ರೀತಿ ನಡೆಸಿಕೊಂಡಿತು. ವಾರ್ಷ್ಣೇಯ! ಹೀಗೆ ಯೋಚಿಸಿ ನಾನು ಅವನ ಈ ಕೆಲಸವನ್ನು ಉಪೇಕ್ಷಿಸಲಿಲ್ಲ.
09059034a ತಸ್ಮಾದ್ಧತ್ವಾಕೃತಪ್ರಜ್ಞಂ ಲುಬ್ಧಂ ಕಾಮವಶಾನುಗಂ।
09059034c ಲಭತಾಂ ಪಾಂಡವಃ ಕಾಮಂ ಧರ್ಮೇಽಧರ್ಮೇಽಪಿ ವಾ ಕೃತೇ।।
ಆದುದರಿಂದ ಪ್ರಜ್ಞೆಗಳಿಲ್ಲದ ಲುಬ್ಧನಾದ ಕಾಮವಶಾನುಗನಾದ ದುರ್ಯೋಧನನಿಗೆ ಧರ್ಮ ಅಥವಾ ಅಧರ್ಮ ಕಾರ್ಯವನ್ನೆಸಗಿ ಪಾಂಡವ ಭೀಮನು ತನ್ನ ಆಸೆಯನ್ನು ಪೂರೈಸಿಕೊಂಡಿದ್ದಾನೆ!””
09059035 ಸಂಜಯ ಉವಾಚ 09059035a ಇತ್ಯುಕ್ತೇ ಧರ್ಮರಾಜೇನ ವಾಸುದೇವೋಽಬ್ರವೀದಿದಂ।
09059035c ಕಾಮಮಸ್ತ್ವೇವಮಿತಿ ವೈ ಕೃಚ್ಚ್ರಾದ್ಯದುಕುಲೋದ್ವಹಃ।।
ಸಂಜಯನು ಹೇಳಿದನು: “ಧರ್ಮರಾಜನು ಹೀಗೆ ಹೇಳಲು ಯದುಕುಲೋದ್ವಹ ವಾಸುದೇವನು ಬಹಳ ಕಷ್ಟದಿಂದ “ನಿನಗಿಷ್ಟವಾದಂತಾಗಲಿ!” ಎಂದು ಹೇಳಿದನು.
09059036a ಇತ್ಯುಕ್ತೋ ವಾಸುದೇವೇನ ಭೀಮಪ್ರಿಯಹಿತೈಷಿಣಾ।
09059036c ಅನ್ವಮೋದತ ತತ್ಸರ್ವಂ ಯದ್ಭೀಮೇನ ಕೃತಂ ಯುಧಿ।।
ಭೀಮಪ್ರಿಯನಾದ ಅವನ ಹಿತೈಷಿಣಿಯಾದ ವಾಸುದೇವನು ಹೀಗೆ ಹೇಳಲು ಭೀಮನು ಯುದ್ಧದಲ್ಲಿ ಮಾಡಿದುದೆಲ್ಲವನ್ನೂ ಅನುಮೋದಿಸಿದನು.
09059037a ಭೀಮಸೇನೋಽಪಿ ಹತ್ವಾಜೌ ತವ ಪುತ್ರಮಮರ್ಷಣಃ।
09059037c ಅಭಿವಾದ್ಯಾಗ್ರತಃ ಸ್ಥಿತ್ವಾ ಸಂಪ್ರಹೃಷ್ಟಃ ಕೃತಾಂಜಲಿಃ।।
ಅಸಹನಶೀಲ ಭೀಮಸೇನನಾದರೋ ನಿನ್ನ ಪುತ್ರನನ್ನು ಸಂಹರಿಸಿ ಸಂತೋಷದಿಂದ ಅಂಜಲೀಬದ್ಧನಾಗಿ ಅಣ್ಣನ ಎದಿರು ನಮಸ್ಕರಿಸಿ ನಿಂತುಕೊಂಡನು.
09059038a ಪ್ರೋವಾಚ ಸುಮಹಾತೇಜಾ ಧರ್ಮರಾಜಂ ಯುಧಿಷ್ಠಿರಂ।
09059038c ಹರ್ಷಾದುತ್ಫುಲ್ಲನಯನೋ ಜಿತಕಾಶೀ ವಿಶಾಂ ಪತೇ।।
ವಿಶಾಂಪತೇ! ಆ ಮಹಾತೇಜಸ್ವಿಯು ವಿಜಯದ ಹರ್ಷದಿಂದ ಕಣ್ಣುಗಳನ್ನರಳಿಸಿಕೊಂಡು ಧರ್ಮರಾಜ ಯುಧಿಷ್ಠಿರನಿಗೆ ಹೇಳಿದನು:
09059039a ತವಾದ್ಯ ಪೃಥಿವೀ ರಾಜನ್ ಕ್ಷೇಮಾ ನಿಹತಕಂಟಕಾ।
09059039c ತಾಂ ಪ್ರಶಾಧಿ ಮಹಾರಾಜ ಸ್ವಧರ್ಮಮನುಪಾಲಯನ್।।
“ರಾಜನ್! ಇಂದು ನಿನಗಾಗಿ ಈ ಪೃಥ್ವಿಯು ಕಂಟಕರನ್ನು ಕಳೆದುಕೊಂಡು ಕ್ಷೇಮವಾಗಿದೆ. ಮಹಾರಾಜ! ಸ್ವಧರ್ಮವನ್ನು ಪಾಲಿಸಿಕೊಂಡು ಇದರ ಮೇಲೆ ಪ್ರಶಾಸನ ಮಾಡು!
09059040a ಯಸ್ತು ಕರ್ತಾಸ್ಯ ವೈರಸ್ಯ ನಿಕೃತ್ಯಾ ನಿಕೃತಿಪ್ರಿಯಃ।
09059040c ಸೋಽಯಂ ವಿನಿಹತಃ ಶೇತೇ ಪೃಥಿವ್ಯಾಂ ಪೃಥಿವೀಪತೇ।।
ಪೃಥಿವೀಪತೇ! ಯಾವ ಮೋಸಪ್ರಿಯನು ನಿನಗೆ ಮೋಸಗೈದನೋ ಆ ವೈರಿಯು ಇಗೋ ಹತನಾಗಿ ಭೂಮಿಯ ಮೇಲೆ ಮಲಗಿದ್ದಾನೆ.
09059041a ದುಃಶಾಸನಪ್ರಭೃತಯಃ ಸರ್ವೇ ತೇ ಚೋಗ್ರವಾದಿನಃ।
09059041c ರಾಧೇಯಃ ಶಕುನಿಶ್ಚಾಪಿ ನಿಹತಾಸ್ತವ ಶತ್ರವಃ।।
ಕಠೋರಮಾತುಗಳನ್ನಾಡುತ್ತಿದ್ದ ನಿನ್ನ ಶತ್ರುಗಳಾದ ದುಃಶಾಸನನೇ ಮೊದಲಾಗಿ ರಾಧೇಯ, ಶಕುನಿ ಎಲ್ಲರೂ ಹತರಾಗಿದ್ದಾರೆ.
09059042a ಸೇಯಂ ರತ್ನಸಮಾಕೀರ್ಣಾ ಮಹೀ ಸವನಪರ್ವತಾ।
09059042c ಉಪಾವೃತ್ತಾ ಮಹಾರಾಜ ತ್ವಾಮದ್ಯ ನಿಹತದ್ವಿಷಂ।।
ಮಹಾರಾಜ! ರತ್ನಸಮಾಕೀರ್ಣಳಾದ ಮಹಿಯು ವನಪರ್ವತಗಳೊಂದಿಗೆ ಹತಶತ್ರುವಾದ ನಿನ್ನನ್ನು ಉಪಾಸಿಸುತ್ತಾಳೆ!”
09059043 ಯುಧಿಷ್ಠಿರ ಉವಾಚ 09059043a ಗತಂ ವೈರಸ್ಯ ನಿಧನಂ ಹತೋ ರಾಜಾ ಸುಯೋಧನಃ।
09059043c ಕೃಷ್ಣಸ್ಯ ಮತಮಾಸ್ಥಾಯ ವಿಜಿತೇಯಂ ವಸುಂಧರಾ।।
ಯುಧಿಷ್ಠಿರನು ಹೇಳಿದನು: “ನಿನ್ನ ವೈರವು ಕೊನೆಗೊಂಡಿತು. ರಾಜಾ ಸುಯೋಧನನು ಹತನಾದನು. ಕೃಷ್ಣನ ಸಲಹೆಗಳನ್ನು ಅನುಸರಿಸಿ ನಾವು ಈ ವಸುಂಧರೆಯನ್ನು ಗೆದ್ದೆವು!
09059044a ದಿಷ್ಟ್ಯಾ ಗತಸ್ತ್ವಮಾನೃಣ್ಯಂ ಮಾತುಃ ಕೋಪಸ್ಯ ಚೋಭಯೋಃ।
09059044c ದಿಷ್ಟ್ಯಾ ಜಯಸಿ ದುರ್ಧರ್ಷ ದಿಷ್ಟ್ಯಾ ಶತ್ರುರ್ನಿಪಾತಿತಃ।।
ಒಳ್ಳೆಯದಾಯಿತು! ನೀನು ಮಾತೃ ಋಣ ಮತ್ತು ಕ್ರೋಧ ಋಣ ಇವೆರಡರಿಂದಲೂ ಮುಕ್ತನಾಗಿರುವೆ! ಒಳ್ಳೆಯದಾಯಿತು! ದುರ್ಧರ್ಷನನ್ನು ಗೆದ್ದಿರುವೆ! ಒಳ್ಳೆಯದಾಯಿತು! ಶತ್ರುವನ್ನು ಕೆಳಗುರುಳಿಸಿರುವೆ!””