066 ಕರ್ಣರಥಚಕ್ರಗ್ರಸನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಕರ್ಣ ಪರ್ವ

ಕರ್ಣವಧ ಪರ್ವ

ಅಧ್ಯಾಯ 66

ಸಾರ

ಶಲ್ಯನು ಪುನಃ ಅನುಸಂಧಾನ ಮಾಡು ಎಂದು ಹೇಳಿದರೂ ತನ್ನ ಅನುಸಂಧಾನವನ್ನು ಬದಲಿಸದೇ ಕರ್ಣನು ಅಶ್ವಸೇನನ ಶರ ಸರ್ಪಾಸ್ತ್ರವನ್ನು ಅರ್ಜುನನ ಮೇಲೆ ಪ್ರಯೋಗಿಸಿದ್ದುದು (1-9). ಸರ್ಪಾಸ್ತ್ರವು ಅರ್ಜುನನ ಕಿರೀಟವನ್ನು ಕೆಡವಿದುದು (10-19). ಖಾಂಡವದಹನದ ಸಮಯದಲ್ಲಿ ತನ್ನ ತಾಯಿಯನ್ನು ಕಳೆದುಕೊಂಡ ನಾಗ ಅಶ್ವಸೇನನೇ ಈ ಶರವೆಂದು ಕೃಷ್ಣನು ಹೇಳಲು ಅರ್ಜುನನು ಆ ಸರ್ಪಾಸ್ತ್ರವನ್ನು ತುಂಡರಿಸಿದುದು (20-24). ಅರ್ಜುನನು ಕರ್ಣನ ಕಿರೀಟ, ಕುಂಡಲ, ಕವಚಗಳನ್ನು ಕೆಳಗುರುಳಿಸಿದುದು (25-41). ಕರ್ಣನ ರಥಚಕ್ರಗಳು ಭೂಮಿಯಲ್ಲಿ ಹುಗಿದುಹೋಗಲು ಅವನು ಒಂದು ಕ್ಷಣ ನಿಲ್ಲುವಂತೆ ಅರ್ಜುನನಲ್ಲಿ ಕೇಳಿಕೊಂದಿದುದು (42-65).

08066001 ಸಂಜಯ ಉವಾಚ।
08066001a ತತೋಽಪಯಾತಾಃ ಶರಪಾತಮಾತ್ರಂ ಅವಸ್ಥಿತಾಃ ಕುರವೋ ಭಿನ್ನಸೇನಾಃ।
08066001c ವಿದ್ಯುತ್ಪ್ರಕಾಶಂ ದದೃಶುಃ ಸಮಂತಾದ್ ಧನಂಜಯಾಸ್ತ್ರಂ ಸಮುದೀರ್ಯಮಾಣಂ।।

ಸಂಜಯನು ಹೇಳಿದನು: “ಚದುರಿಹೋಗಿ ಪಲಾಯನಮಾಡುತ್ತಿದ್ದ ಕುರುಸೇನೆಗಳು ಧನಂಜಯನ ಬಾಣಗಳು ಬೀಳುವ ಸ್ಥಳವನ್ನು ಬಿಟ್ಟು ಬೇರೆಕಡೆ ಹೋಗಿ ನಿಂತುಕೊಂಡವು. ಎಲ್ಲಕಡೆಗಳಿಂದ ಅವರು ವಿದ್ಯುತ್ತಿನಂತೆ ಪ್ರಕಾಶಮಾನವಾಗಿ ವರ್ಧಿಸುತ್ತಿರುವ ಧನಂಜಯನ ಅಸ್ತ್ರವನ್ನು ನೋಡಿದರು.

08066002a ತದರ್ಜುನಾಸ್ತ್ರಂ ಗ್ರಸತೇ ಸ್ಮ ವೀರಾನ್ ವಿಯತ್ತಥಾಕಾಶಮನಂತಘೋಷಂ।
08066002c ಕ್ರುದ್ಧೇನ ಪಾರ್ಥೇನ ತದಾಶು ಸೃಷ್ಟಂ ವಧಾಯ ಕರ್ಣಸ್ಯ ಮಹಾವಿಮರ್ದೇ।।

ಆ ಮಹಾಯುದ್ಧದಲ್ಲಿ ಕರ್ಣನ ವಧೆಗೋಸ್ಕರವಾಗಿ ಕ್ರುದ್ಧನಾದ ಪಾರ್ಥನು ಬಿಡುತ್ತಿದ್ದ ಅಸ್ತ್ರಗಳನ್ನು ಆಕಾಶದಲ್ಲಿಯೇ ಅನಂತಘೋಷದೊಂದಿಗೆ ಕರ್ಣನು ನುಂಗಿಬಿಡುತ್ತಿದ್ದನು.

08066003a ರಾಮಾದುಪಾತ್ತೇನ ಮಹಾಮಹಿಮ್ನಾ ಆಥರ್ವಣೇನಾರಿವಿನಾಶನೇನ।
08066003c ತದರ್ಜುನಾಸ್ತ್ರಂ ವ್ಯಧಮದ್ದಹಂತಂ ಪಾರ್ಥಂ ಚ ಬಾಣೈರ್ನಿಶಿತೈರ್ನಿಜಘ್ನೇ।।

ಕರ್ಣನು ಪರಶುರಾಮನಿಂದ ಪಡೆದುಕೊಂಡ ಮಹಾಮಹಿಮೆಯುಳ್ಳ ಶತ್ರುನಾಶಕವಾದ ಅಥರ್ವಣಾಸ್ತ್ರವನ್ನು ಪ್ರಕಟಿಸಿ ಸೇನೆಗಳನ್ನು ಮರ್ದಿಸುತ್ತಿರುವ ಅರ್ಜುನನ ಅಸ್ತ್ರವನ್ನು ಧ್ವಂಸಗೊಳಿಸಿ, ನಿಶಿತ ಬಾಣಗಳಿಂದ ಅರ್ಜುನನನ್ನು ಹೊಡೆದನು.

08066004a ತತೋ ವಿಮರ್ದಃ ಸುಮಹಾನ್ಬಭೂವ ತಸ್ಯಾರ್ಜುನಸ್ಯಾಧಿರಥೇಶ್ಚ ರಾಜನ್।
08066004c ಅನ್ಯೋನ್ಯಮಾಸಾದಯತೋಃ ಪೃಷತ್ಕೈರ್ ವಿಷಾಣಘಾತೈರ್ದ್ವಿಪಯೋರಿವೋಗ್ರೈಃ।।

ರಾಜನ್! ಅನಂತರ ಉಗ್ರ ದಂತಗಳಿಂದ ಅನ್ಯೋನ್ಯರನ್ನು ತಿವಿಯುತ್ತಿದ್ದ ಆನೆಗಳಂತೆ ಪರಸ್ಪರರನ್ನು ಬಾಣಗಳಿಂದ ಆಕ್ರಮಿಸುತ್ತಿದ್ದ ಕರ್ಣಾರ್ಜುನರ ನಡುವೆ ಪುನಃ ಭಯಂಕರ ಯುದ್ಧವು ಪ್ರಾರಂಭಿಸಿತು.

08066005a ತತೋ ರಿಪುಘ್ನಂ ಸಮಧತ್ತ ಕರ್ಣಃ ಸುಸಂಶಿತಂ ಸರ್ಪಮುಖಂ ಜ್ವಲಂತಂ।
08066005c ರೌದ್ರಂ ಶರಂ ಸಂಯತಿ ಸುಪ್ರಧೌತಂ ಪಾರ್ಥಾರ್ಥಮತ್ಯರ್ಥಚಿರಾಯ ಗುಪ್ತಂ।।
08066006a ಸದಾರ್ಚಿತಂ ಚಂದನಚೂರ್ಣಶಾಯಿನಂ ಸುವರ್ಣನಾಲೀಶಯನಂ ಮಹಾವಿಷಂ।
08066006c ಪ್ರದೀಪ್ತಮೈರಾವತವಂಶಸಂಭವಂ ಶಿರೋ ಜಿಹೀರ್ಷುರ್ಯುಧಿ ಫಲ್ಗುನಸ್ಯ।।

ಆಗ ರಿಪುವನ್ನು ಸಂಹರಿಸುವ, ಬಹಳ ಹಿಂದೆಯೇ ಸಂಚಯಿಸಿ ಇಟ್ಟುಕೊಂಡಿದ್ದ, ಪಾರ್ಥನ ಸಲುವಾಗಿಯೇ ಬಹಳಕಾಲದಿಂದ ಸಂರಕ್ಷಿಸಿ ಇಟ್ಟುಕೊಂಡಿದ್ದ, ಪ್ರಜ್ವಲಿಸುತ್ತಿರುವ ಸರ್ಪದ ಮುಖವುಳ್ಳ, ಎಣ್ಣೆಯಿಂದ ಹದಮಾಡಲ್ಪಟ್ಟಿದ್ದ, ರೌದ್ರವಾದ, ಸದಾ ಪೂಜಿಸಲ್ಪಡುತ್ತಿದ್ದ, ಸುವರ್ಣಮಯವಾದ ಕೊಳವೆಯಲ್ಲಿ ಚಂದನಚೂರ್ಣದಲ್ಲಿ ಇರಿಸಿದ್ದ, ಮಹಾಜ್ವಾಲೆಯುಳ್ಳ, ಐರಾವತವಂಶಸಂಭವ ಮಹಾವಿಷಭರಿತವಾದ ಅಶ್ವಸೇನನ ಶರವನ್ನು ಯುದ್ಧದಲ್ಲಿ ಫಲ್ಗುನನ ಶಿರವನ್ನು ಕತ್ತರಿಸಲು ಎತ್ತಿಕೊಂಡನು.

08066007a ತಮಬ್ರವೀನ್ಮದ್ರರಾಜೋ ಮಹಾತ್ಮಾ ವೈಕರ್ತನಂ ಪ್ರೇಕ್ಷ್ಯ ಹಿ ಸಂಹಿತೇಷುಂ।
08066007c ನ ಕರ್ಣ ಗ್ರೀವಾಮಿಷುರೇಷ ಪ್ರಾಪ್ಸ್ಯತೇ ಸಂಲಕ್ಷ್ಯ ಸಂಧತ್ಸ್ವ ಶರಂ ಶಿರೋಘ್ನಂ।।

ವೈಕರ್ತನನು ಧನುಸ್ಸಿಗೆ ಆ ಬಾಣವನ್ನು ಹೂಡಿದುದನ್ನು ನೋಡಿ ಮಹಾತ್ಮ ಮದ್ರರಾಜನು “ಕರ್ಣ! ಈ ಬಾಣವು ಅವನ ಕುತ್ತಿಗೆಗೆ ತಾಗುವುದಿಲ್ಲ. ಆದುದರಿಂದ ಗುರಿಯಿಟ್ಟು ಶಿರವು ಕತ್ತರಿಸುವಂತೆ ಪುನಃ ಅನುಸಂಧಾನಮಾಡು!”

08066008a ಅಥಾಬ್ರವೀತ್ಕ್ರೋಧಸಂರಕ್ತನೇತ್ರಃ ಕರ್ಣಃ ಶಲ್ಯಂ ಸಂಧಿತೇಷುಃ ಪ್ರಸಹ್ಯ।
08066008c ನ ಸಂಧತ್ತೇ ದ್ವಿಃ ಶರಂ ಶಲ್ಯ ಕರ್ಣೋ ನ ಮಾದೃಶಾಃ ಶಾಠ್ಯಯುಕ್ತಾ ಭವಂತಿ।।

ಕೂಡಲೇ ಕ್ರೋಧದಿಂದ ಕಣ್ಣುಗಳು ಕೆಂಪಾದ ಕರ್ಣನು ಜೋರಾಗಿ ನಕ್ಕು ಬಾಣವನ್ನು ಹೂಡಿಕೊಂಡೇ ಶಲ್ಯನಿಗೆ ಹೇಳಿದನು: “ಶಲ್ಯ! ಕರ್ಣನು ಎಂದೂ ಶರವನ್ನು ಎರಡನೆಯ ಬಾರಿ ಹೂಡುವುದಿಲ್ಲ! ನನ್ನಂಥವನು ಮೋಸಗಾರನಾಗುವುದಿಲ್ಲ!”

08066009a ತಥೈವಮುಕ್ತ್ವಾ ವಿಸಸರ್ಜ ತಂ ಶರಂ ಬಲಾಹಕಂ ವರ್ಷಘನಾಭಿಪೂಜಿತಂ।
08066009c ಹತೋಽಸಿ ವೈ ಫಲ್ಗುನ ಇತ್ಯವೋಚತ್ ತತಸ್ತ್ವರನ್ನೂರ್ಜಿತಮುತ್ಸಸರ್ಜ।।

ಹೀಗೆ ಹೇಳಿ ಹಲವು ವರ್ಷಗಳಿಂದ ಪೂಜಿಸಿಕೊಂಡು ಬಂದಿದ್ದ ಬಲಶಾಲಿಯಾಗಿದ್ದ ಆ ಶರವನ್ನು “ಫಲ್ಗುನ! ನೀನು ಹತನಾದೆ!” ಎಂದು ಜೋರಾಗಿ ಕೂಗಿ ತ್ವರೆಮಾಡಿ ವಿಸರ್ಜಿಸಿದನು.

08066010a ಸಂಧೀಯಮಾನಂ ಭುಜಗಂ ದೃಷ್ಟ್ವಾ ಕರ್ಣೇನ ಮಾಧವಃ।
08066010c ಆಕ್ರಮ್ಯ ಸ್ಯಂದನಂ ಪದ್ಭ್ಯಾಂ ಬಲೇನ ಬಲಿನಾಂ ವರಃ।।
08066011a ಅವಗಾಢೇ ರಥೇ ಭೂಮೌ ಜಾನುಭ್ಯಾಮಗಮನ್ ಹಯಾಃ।
08066011c ತತಃ ಶರಃ ಸೋಽಭ್ಯಹನತ್ಕಿರೀಟಂ ತಸ್ಯ ಧೀಮತಃ।।

ಕರ್ಣನು ಸಂಧಾನಮಾಡಿದ ಆ ಸರ್ಪಾಸ್ತ್ರವನ್ನು ನೋಡಿ ಬಲಶಾಲಿಗಳಲ್ಲಿ ಶ್ರೇಷ್ಠ ಮಾಧವನು ತನ್ನ ಪಾದಗಳಿಂದ ರಥವನ್ನು ಒತ್ತಿದನು. ರಥವು ಭೂಮಿಯಲ್ಲಿ ಹುಗಿದುಹೋಗಲು ಕುದುರೆಗಳು ತಮ್ಮ ಮೊಣಕಾಲುಗಳನ್ನು ಬಗ್ಗಿಸಿದವು. ಆಗ ಶರವು ಧೀಮತ ಅರ್ಜುನನ ಕಿರೀಟವನ್ನು ಹಾರಿಸಿತು.

08066012a ಅಥಾರ್ಜುನಸ್ಯೋತ್ತಮಗಾತ್ರಭೂಷಣಂ ಧರಾವಿಯದ್ದ್ಯೋಸಲಿಲೇಷು ವಿಶ್ರುತಂ।
08066012c ಬಲಾಸ್ತ್ರಸರ್ಗೋತ್ತಮಯತ್ನಮನ್ಯುಭಿಃ ಶರೇಣ ಮೂರ್ಧ್ನಃ ಸ ಜಹಾರ ಸೂತಜಃ।।

ಭೂಮಿ-ಅಂತರಿಕ್ಷ-ಸ್ವರ್ಗ-ಪಾತಾಳಗಳಲ್ಲಿಯೂ ವಿಶ್ರುತವಾಗಿದ್ದ ಮತ್ತು ಅರ್ಜುನನ ಶಿರಸ್ಸಿಗೆ ಭೂಷಣವಾಗಿದ್ದ, ಕಿರೀಟವನ್ನು ಅಸ್ತ್ರಬಲ, ಸಂಧಾನ, ಪ್ರಯತ್ನ, ಮತ್ತು ಕೋಪಗಳಿಂದ ಕೂಡಿದ ಆ ಶರದಿಂದ ಸೂತಜನು ಹಾರಿಸಿದನು.

08066013a ದಿವಾಕರೇಂದುಜ್ವಲನಗ್ರಹತ್ವಿಷಂ ಸುವರ್ಣಮುಕ್ತಾಮಣಿಜಾಲಭೂಷಿತಂ।
08066013c ಪುರಂದರಾರ್ಥಂ ತಪಸಾ ಪ್ರಯತ್ನತಃ ಸ್ವಯಂ ಕೃತಂ ಯದ್ಭುವನಸ್ಯ ಸೂನುನಾ।।
08066014a ಮಹಾರ್ಹರೂಪಂ ದ್ವಿಷತಾಂ ಭಯಂಕರಂ ವಿಭಾತಿ ಚಾತ್ಯರ್ಥಸುಖಂ ಸುಗಂದಿ ತತ್।
08066014c ನಿಜಘ್ನುಷೇ ದೇವರಿಪೂನ್ಸುರೇಶ್ವರಃ ಸ್ವಯಂ ದದೌ ಯತ್ಸುಮನಾಃ ಕಿರೀಟಿನೇ।।
08066015a ಹರಾಂಬುಪಾಖಂಡಲವಿತ್ತಗೋಪ್ತೃಭಿಃ ಪಿನಾಕಪಾಶಾಶನಿಸಾಯಕೋತ್ತಮೈಃ।
08066015c ಸುರೋತ್ತಮೈರಪ್ಯವಿಷಹ್ಯಮರ್ದಿತುಂ ಪ್ರಸಹ್ಯ ನಾಗೇನ ಜಹಾರ ಯದ್ವೃಷಃ।।

ಸೂರ್ಯ-ಚಂದ್ರ-ಅಗ್ನಿಗಳ ಕಾಂತಿಗೆ ಸಮಾನಕಾಂತಿಯುಳ್ಳ, ಸುವರ್ಣ-ಮುತ್ತು-ಮಣಿಗಳ ಜಾಲದಿಂದ ವಿಭೂಷಿತವಾಗಿದ್ದ, ಪುರಂದರನಿಗಾಗಿ ಭುವನನ ಮಗನಿಂದ ತಪಸ್ಸುಮಾಡಿ ಪ್ರಯತ್ನತಃ ಸ್ವಯಂ ಮಾಡಲ್ಪಟ್ಟಿದ್ದ, ಬಹು ಅಮೂಲ್ಯವಾಗಿದ್ದ, ದ್ವೇಷಿಗಳಿಗೆ ಭಯಂಕರವಾಗಿ ಕಾಣುತ್ತಿದ್ದ, ಸುಗಂಧಿತವಾಗಿದ್ದ, ಧರಿಸಿದವನಿಗೆ ಅತ್ಯಂತ ಸುಖವನ್ನು ನೀಡುತ್ತಿದ್ದ, ದೇವರಿಪುಗಳನ್ನು ಸಂಹರಿಸಲು ಹೊರಟಾಗ ಸ್ವಯಂ ಸುರೇಶ್ವರನು ಸಂತೋಷದಿಂದ ಕಿರೀಟಿಗೆ ತೊಡಿಸಿದ್ದ, ಹರ-ವರುಣ-ಯಮ-ಕುಬೇರರಿಗೂ, ಪಿನಾಕ-ಪಾಶ-ವಜ್ರಾಯುಧ-ಉತ್ತಮ ಸಾಯಕಗಳಿಗೂ, ಸುರೋತ್ತಮರಿಗೂ ನಾಶಗೊಳಿಸಲು ಅಸಾಧ್ಯವಾಗಿದ್ದ ಕಿರೀಟವನ್ನು ವೃಷಸೇನನನು ನಾಗಾಸ್ತ್ರದಿಂದ ಹಾರಿಸಿ ಜೋರಾಗಿ ನಕ್ಕನು.

08066016a ತದುತ್ತಮೇಷೂನ್ಮಥಿತಂ ವಿಷಾಗ್ನಿನಾ ಪ್ರದೀಪ್ತಮರ್ಚಿಷ್ಮದಭಿಕ್ಷಿತಿ ಪ್ರಿಯಂ।
08066016c ಪಪಾತ ಪಾರ್ಥಸ್ಯ ಕಿರೀಟಮುತ್ತಮಂ ದಿವಾಕರೋಽಸ್ತಾದಿವ ಪರ್ವತಾಜ್ಜ್ವಲನ್।।

ಆ ಉತ್ತಮ ಬಾಣದ ವಿಷಾಗ್ನಿಯಿಂದ ಮಥಿಸಲ್ಪಟ್ಟ ಸೂರ್ಯನ ಪ್ರಕಾಶದಂತೆ ಉರಿಯುತ್ತಿದ್ದ ಪ್ರಿಯವಾದ ಪಾರ್ಥನ ಉತ್ತಮ ಕಿರೀಟವು ಪರ್ವತವನ್ನು ಬೆಳಗಿಸುತ್ತಾ ಅಸ್ತನಾಗುವ ದಿವಾಕರನಂತೆ ಕೆಳಗೆ ಬಿದ್ದಿತು.

08066017a ತತಃ ಕಿರೀಟಂ ಬಹುರತ್ನಮಂಡಿತಂ ಜಹಾರ ನಾಗೋಽರ್ಜುನಮೂರ್ಧತೋ ಬಲಾತ್।
08066017c ಗಿರೇಃ ಸುಜಾತಾಂಕುರಪುಷ್ಪಿತದ್ರುಮಂ ಮಹೇಂದ್ರವಜ್ರಃ ಶಿಖರಂ ಯಥೋತ್ತಮಂ।।

ಅರ್ಜುನನ ನೆತ್ತಿಯ ಮೇಲಿದ್ದ ಅನೇಕ ರತ್ನಗಳಿಂದ ಸಮಲಂಕೃತವಾಗಿದ್ದ ಕಿರೀಟವನ್ನು ಆ ನಾಗವು ಅಂಕುರಗಳಿಂದಲೂ ಹೂಬಿಟ್ಟ ವೃಕ್ಷಗಳಿಂದಲೂ ಕೂಡಿದ್ದ ಉತ್ತಮ ಶಿಖರವನ್ನು ಮಹೇಂದ್ರನ ವಜ್ರವು ಹೇಗೋ ಹಾಗೆ ಕೆಳಗುರುಳಿಸಿತು.

08066018a ಮಹೀ ವಿಯದ್ದ್ಯೌಃ ಸಲಿಲಾನಿ ವಾಯುನಾ ಯಥಾ ವಿಭಿನ್ನಾನಿ ವಿಭಾಂತಿ ಭಾರತ।
08066018c ತಥೈವ ಶಬ್ಧೋ ಭುವನೇಷ್ವಭೂತ್ತದಾ ಜನಾ ವ್ಯವಸ್ಯನ್ವ್ಯಥಿತಾಶ್ಚ ಚಸ್ಖಲುಃ।।

ಭಾರತ! ವಾಯುವಿನಿಂದ ಭೂಮಿ, ಆಕಾಶ ಮತ್ತು ಸಮುದ್ರಗಳು ಒಡೆದಾಗ ಎಷ್ಟು ಜೋರಾಗಿ ಶಬ್ಧವುಂಟಾಗುವುದೋ ಹಾಗೆ ಶಬ್ಧವುಂಟಾಗಲು ಭುವನಗಳ ಜನರೆಲ್ಲರೂ ವ್ಯಥಿತರಾಗಿ ನಡುಗಿದರು.

08066019a ತತಃ ಸಮುದ್ಗ್ರಥ್ಯ ಸಿತೇನ ವಾಸಸಾ ಸ್ವಮೂರ್ಧಜಾನವ್ಯಥಿತಃ ಸ್ಥಿತೋಽರ್ಜುನಃ।
08066019c ವಿಭಾತಿ ಸಂಪೂರ್ಣಮರೀಚಿಭಾಸ್ವತಾ ಶಿರೋಗತೇನೋದಯಪರ್ವತೋ ಯಥಾ।।

ಆಗ ಬಿಳಿಯವಸ್ತ್ರವನ್ನು ತಲೆಗೆ ಬಿಗಿದಿದ್ದ ಅರ್ಜುನನು ವ್ಯಥಿತನಾಗದೇ ಸಂಪೂರ್ಣನಾದ ಸೂರ್ಯನಂತೆ ಮತ್ತು ಶಿಖರವಿಲ್ಲದ ಪರ್ವತದಂತೆ ಮಿಂಚಿದನು.

08066020a ಬಲಾಹಕಃ ಕರ್ಣಭುಜೇರಿತಸ್ತತೋ ಹುತಾಶನಾರ್ಕಪ್ರತಿಮದ್ಯುತಿರ್ಮಹಾನ್।
08066020c ಮಹೋರಗಃ ಕೃತವೈರೋಽರ್ಜುನೇನ ಕಿರೀಟಮಾಸಾದ್ಯ ಸಮುತ್ಪಪಾತ।।

ಕರ್ಣನ ಭುಜಗಳಿಂದ ಪ್ರಯೋಗಿಸಲ್ಪಟ್ಟ ಸೂರ್ಯ-ಆಗ್ನಿಗಳ ಸಮನಾದ ಬೆಳಕಿದ್ದ ಆ ಬಲಶಾಲೀ ಮಹೋರಗವು ಅರ್ಜುನನ ಮೇಲಿನ ಸೇಡನ್ನು ತೀರಿಸಿಕೊಳ್ಳಲೋಸುಗ ಕಿರೀಟವನ್ನು ಕೆಡವಿ ಪುನಃ ಮೇಲೆದ್ದಿತು.

08066021a ತಮಬ್ರವೀದ್ವಿದ್ಧಿ ಕೃತಾಗಸಂ ಮೇ ಕೃಷ್ಣಾದ್ಯ ಮಾತುರ್ವಧಜಾತವೈರಂ।
08066021c ತತಃ ಕೃಷ್ಣಃ ಪಾರ್ಥಮುವಾಚ ಸಂಖ್ಯೇ ಮಹೋರಗಂ ಕೃತವೈರಂ ಜಹಿ ತ್ವಂ।।

ಅವನು “ಕೃಷ್ಣ! ನನ್ನ ತಾಯಿಯ ವಧೆಯ ವೈರವನ್ನು ಇಂದು ತೀರಿಸಿಕೊಳ್ಳುತ್ತೇನೆ” ಎಂದು ಹೇಳಲು ಕೃಷ್ಣನು ಪಾರ್ಥನಿಗೆ “ಯುದ್ಧದಲ್ಲಿ ಬದ್ಧವೈರಿಯಾಗಿರುವ ಈ ಮಹೋರಗವನ್ನು ನೀನು ಕೊಲ್ಲು!” ಎಂದು ಹೇಳಿದನು.

08066022a ಸ ಏವಮುಕ್ತೋ ಮಧುಸೂದನೇನ ಗಾಂಡೀವಧನ್ವಾ ರಿಪುಷೂಗ್ರಧನ್ವಾ।
08066022c ಉವಾಚ ಕೋ ನ್ವೇಷ ಮಮಾದ್ಯ ನಾಗಃ ಸ್ವಯಂ ಯ ಆಗಾದ್ಗರುಡಸ್ಯ ವಕ್ತ್ರಂ।।

ಮಧುಸೂದನನು ಹೀಗೆ ಹೇಳಲು ಶತ್ರುಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯವಿರುವ ಉಗ್ರಧನ್ವಿ ಗಾಂಡೀವಧನ್ವಿಯು “ಇಂದು ಗರುಡನ ಬಾಯಿಗೆ ತಾನಾಗಿಯೇ ಬಂದು ಬೀಳುತ್ತಿರುವ ಈ ನಾಗವು ಯಾರು?” ಎಂದು ಕೇಳಿದನು.

08066023 ಕೃಷ್ಣ ಉವಾಚ।
08066023a ಯೋಽಸೌ ತ್ವಯಾ ಖಾಂಡವೇ ಚಿತ್ರಭಾನುಂ ಸಂತರ್ಪಯಾನೇನ ಧನುರ್ಧರೇಣ।
08066023c ವಿಯದ್ಗತೋ ಬಾಣನಿಕೃತ್ತದೇಹೋ ಹ್ಯನೇಕರೂಪೋ ನಿಹತಾಸ್ಯ ಮಾತಾ।।

ಕೃಷ್ಣನು ಹೇಳಿದನು: “ಖಾಂಡವದಲ್ಲಿ ಅಗ್ನಿಯನ್ನು ತೃಪ್ತಿಪಡಿಸಲು ಧನುರ್ಧರನಾದ ನೀನು ಇವನ ತಾಯಿಯನ್ನು ಬಾಣದಿಂದ ಕತ್ತರಿಸಿ ಕೊಂದೆ. ಆದರೆ ಇವನು ಅವಳ ದೇಹದಲ್ಲಿ ಅಡಗಿದ್ದನು.”

08066024a ತತಸ್ತು ಜಿಷ್ಣುಃ ಪರಿಹೃತ್ಯ ಶೇಷಾಂಶ್ ಚಿಚ್ಚೇದ ಷಡ್ಭಿರ್ನಿಶಿತೈಃ ಸುಧಾರೈಃ।
08066024c ನಾಗಂ ವಿಯತ್ತಿರ್ಯಗಿವೋತ್ಪತಂತಂ ಸ ಚಿನ್ನಗಾತ್ರೋ ನಿಪಪಾತ ಭೂಮೌ।।

ಆಗ ಜಿಷ್ಣುವಾದರೋ ಆಕಾಶದಲ್ಲಿ ವಕ್ರಗತಿಯಲ್ಲಿ ಹಾರಿಕೊಂಡು ಬರುತ್ತಿದ್ದ ಆ ನಾಗವನ್ನು ತಿರುಗಿ ನೋಡಿ ಅದನ್ನು ನಿಶಿತ ಅಲಗುಗಳುಳ್ಳ ಆರು ಬಾಣಗಳಿಂದ ತುಂಡು ತುಂಡು ಮಾಡಿದನು. ಕತ್ತರಿಸಲ್ಪಟ್ಟ ಆ ಸರ್ಪವು ನೆಲದ ಮೇಲೆ ಬಿದ್ದಿತು.

08066025a ತಸ್ಮಿನ್ಮುಹೂರ್ತೇ ದಶಭಿಃ ಪೃಷತ್ಕೈಃ ಶಿಲಾಶಿತೈರ್ಬರ್ಹಿಣವಾಜಿತೈಶ್ಚ।
08066025c ವಿವ್ಯಾಧ ಕರ್ಣಃ ಪುರುಷಪ್ರವೀರಂ ಧನಂಜಯಂ ತಿರ್ಯಗವೇಕ್ಷಮಾಣಂ।।

ಅದೇ ಕ್ಷಣದಲ್ಲಿ ಕರ್ಣನು ಕಡೆಗಣ್ಣಿನಿಂದ ನೋಡುತ್ತಾ ಪುರುಷಪ್ರವೀರ ಧನಂಜಯನನ್ನು ಮಸೆಗಲ್ಲಿನಿಂದ ಮಸೆಯಲ್ಪಟ್ಟಿದ್ದ, ನವಿಲುಗರಿಗಳಿಂದ ಕೂಡಿದ್ದ ಹತ್ತು ಬಾಣಗಳಿಂದ ಪ್ರಹರಿಸಿದನು.

08066026a ತತೋಽರ್ಜುನೋ ದ್ವಾದಶಭಿರ್ವಿಮುಕ್ತೈರ್ ಆಕರ್ಣಮುಕ್ತೈರ್ನಿಶಿತೈಃ ಸಮರ್ಪ್ಯ।
08066026c ನಾರಾಚಮಾಶೀವಿಷತುಲ್ಯವೇಗಂ ಆಕರ್ಣಪೂರ್ಣಾಯತಮುತ್ಸಸರ್ಜ।।

ಆಗ ಅರ್ಜುನನು ಹನ್ನೆರಡು ಸರ್ಪದ ವಿಮುಕ್ತ ವಿಷಸಮ ವೇಗವುಳ್ಳ ನಿಶಿತ ನಾರಾಚಗಳನ್ನು ಕಿವಿಯವರೆಗೂ ಎಳೆದು ಪ್ರಯೋಗಿಸಿ ಹೊಡೆದನು.

08066027a ಸ ಚಿತ್ರವರ್ಮೇಷುವರೋ ವಿದಾರ್ಯ ಪ್ರಾಣಾನ್ನಿರಸ್ಯನ್ನಿವ ಸಾಧು ಮುಕ್ತಃ।
08066027c ಕರ್ಣಸ್ಯ ಪೀತ್ವಾ ರುಧಿರಂ ವಿವೇಶ ವಸುಂಧರಾಂ ಶೋಣಿತವಾಜದಿಗ್ಧಃ।।

ಚೆನ್ನಾಗಿ ಪ್ರಯೋಗಿಸಲ್ಪಟ್ಟ ಆ ಶ್ರೇಷ್ಠ ಬಾಣವು ಕರ್ಣನ ಚಿತ್ರಿತ ಕವಚವನ್ನು ಸೀಳಿ ರಕ್ತವನ್ನು ಕುಡಿದು ರೆಕ್ಕೆಗಳು ರಕ್ತದಲ್ಲಿ ಅದ್ದಲ್ಪಟ್ಟವುಗಳಾಗಿ ನೆಲದ ಮೇಲೆ ಬಿದ್ದವು.

08066028a ತತೋ ವೃಷೋ ಬಾಣನಿಪಾತಕೋಪಿತೋ ಮಹೋರಗೋ ದಂಡವಿಘಟ್ಟಿತೋ ಯಥಾ।
08066028c ತಥಾಶುಕಾರೀ ವ್ಯಸೃಜಚ್ಚರೋತ್ತಮಾನ್ ಮಹಾವಿಷಃ ಸರ್ಪ ಇವೋತ್ತಮಂ ವಿಷಂ।।

ಆಗ ಮಹಾಸರ್ಪವು ದಂಡಪ್ರಹಾರದಿಂದ ಕುಪಿತಗೊಳ್ಳುವಂತೆ ವೃಷಸೇನನು ಕುಪಿತನಾಗಿ ಉತ್ತಮ ವಿಷವನ್ನುಳ್ಳ ಮಹಾವಿಷದ ಸರ್ಪಗಳಂತಿರುವ ಉತ್ತಮ ಬಾಣಗಳನ್ನು ಪ್ರಯೋಗಿಸಿದನು.

08066029a ಜನಾರ್ದನಂ ದ್ವಾದಶಭಿಃ ಪರಾಭಿನನ್ ನವೈರ್ನವತ್ಯಾ ಚ ಶರೈಸ್ತಥಾರ್ಜುನಂ।
08066029c ಶರೇಣ ಘೋರೇಣ ಪುನಶ್ಚ ಪಾಂಡವಂ ವಿಭಿದ್ಯ ಕರ್ಣೋಽಭ್ಯನದಟ್ಟಹಾಸ ಚ।।

ಜನಾರ್ದನನನ್ನು ಹನ್ನೆರಡು ಬಾಣಗಳಿಂದ ಮತ್ತು ಅರ್ಜುನನನ್ನು ತೊಂಬತ್ತು ಬಾಣಗಳಿಂದ ಪ್ರಹರಿಸಿ ಪುನಃ ಪಾಂಡವನನ್ನು ಘೋರ ಶರದಿಂದ ಗಾಯಗೊಳಿಸಿ ಕರ್ಣನು ಅಟ್ಟಹಾಸಗೈದನು.

08066030a ತಮಸ್ಯ ಹರ್ಷಂ ಮಮೃಷೇ ನ ಪಾಂಡವೋ ಬಿಭೇದ ಮರ್ಮಾಣಿ ತತೋಽಸ್ಯ ಮರ್ಮವಿತ್।
08066030c ಪರಂ ಶರೈಃ ಪತ್ರಿಭಿರಿಂದ್ರವಿಕ್ರಮಸ್ ತಥಾ ಯಥೇಂದ್ರೋ ಬಲಮೋಜಸಾಹನತ್।।

ಅವನ ಆ ಹರ್ಷವನ್ನು ಸಹಿಸಿಕೊಳ್ಳಲಾಗದೇ ಮರ್ಮಗಳನ್ನು ತಿಳಿದಿದ್ದ ಪಾಂಡವನು ಹೇಗೆ ಇಂದ್ರನು ಬಲನನ್ನು ವಜ್ರದಿಂದ ಹೊಡೆದನೋ ಹಾಗೆ ವಿಕ್ರಮದಿಂದ ಕರ್ಣನನ್ನು ಪರಮ ಬಾಣಗಳಿಂದ ಹೊಡೆದನು.

08066031a ತತಃ ಶರಾಣಾಂ ನವತೀರ್ನವಾರ್ಜುನಃ ಸಸರ್ಜ ಕರ್ಣೇಽಂತಕದಂಡಸನ್ನಿಭಾಃ।
08066031c ಶರೈರ್ಭೃಶಾಯಸ್ತತನುಃ ಪ್ರವಿವ್ಯಥೇ ತಥಾ ಯಥಾ ವಜ್ರವಿದಾರಿತೋಽಚಲಃ।।

ಆಗ ಅರ್ಜುನನು ಯಮದಂಡಸದೃಶವಾದ ತೊಂಭತ್ತು ಬಾಣಗಳನ್ನು ಕರ್ಣನ ಮೇಲೆ ಪ್ರಯೋಗಿಸಿದನು. ವಜ್ರಾಯುಧದಿಂದ ಸೀಳಲ್ಪಟ್ಟ ಪರ್ವತದಂತೆ ಶರಗಳಿಂದ ತುಂಬಾ ಗಾಯಗೊಂಡ ಕರ್ಣನು ನೋವಿನಿಂದ ವ್ಯಥಿತನಾದನು.

08066032a ಮಣಿಪ್ರವೇಕೋತ್ತಮವಜ್ರಹಾಟಕೈರ್ ಅಲಂಕೃತಂ ಚಾಸ್ಯ ವರಾಂಗಭೂಷಣಂ।
08066032c ಪ್ರವಿದ್ಧಮುರ್ವ್ಯಾಂ ನಿಪಪಾತ ಪತ್ರಿಭಿರ್ ಧನಂಜಯೇನೋತ್ತಮಕುಂಡಲೇಽಪಿ ಚ।।

ಧನಂಜಯನ ಧನುಸ್ಸಿನಿಂದ ಹೊರಟ ಪತ್ರಿಗಳು ಕರ್ಣನ ಮಣಿ-ವಜ್ರ-ಸುವರ್ಣಗಳಿಂದ ಅಲಂಕೃತವಾದ ಶಿರೋಭೂಷಣ ಕಿರೀಟವನ್ನೂ ಉತ್ತಮ ಕುಂಡಲಗಳನ್ನೂ ಕೆಳಗೆ ಬೀಳಿಸಿದವು.

08066033a ಮಹಾಧನಂ ಶಿಲ್ಪಿವರೈಃ ಪ್ರಯತ್ನತಃ ಕೃತಂ ಯದಸ್ಯೋತ್ತಮವರ್ಮ ಭಾಸ್ವರಂ।
08066033c ಸುದೀರ್ಘಕಾಲೇನ ತದಸ್ಯ ಪಾಂಡವಃ ಕ್ಷಣೇನ ಬಾಣೈರ್ಬಹುಧಾ ವ್ಯಶಾತಯತ್।।

ಶ್ರೇಷ್ಠ ಶಿಲ್ಪಿಗಳು ಪ್ರಯತ್ನಪಟ್ಟು ತುಂಬಾ ಸಮಯವನ್ನು ತೆಗೆದುಕೊಂಡು ನಿರ್ಮಿಸಿದ್ದ ಮಹಾಬೆಲೆಬಾಳುವ ಹೊಳೆಯುತ್ತಿದ್ದ ಕರ್ಣನ ಉತ್ತಮ ಕವಚವನ್ನೂ ಪಾಂಡವನು ಒಂದೇ ಕ್ಷಣದಲ್ಲಿ ಬಾಣಗಳಿಂದ ತುಂಡು ತುಂಡು ಮಾಡಿದನು.

08066034a ಸ ತಂ ವಿವರ್ಮಾಣಮಥೋತ್ತಮೇಷುಭಿಃ ಶರೈಶ್ಚತುರ್ಭಿಃ ಕುಪಿತಃ ಪರಾಭಿನತ್।
08066034c ಸ ವಿವ್ಯಥೇಽತ್ಯರ್ಥಮರಿಪ್ರಹಾರಿತೋ ಯಥಾತುರಃ ಪಿತ್ತಕಫಾನಿಲವ್ರಣೈಃ।।

ಕವಚರಹಿತನಾಗಿದ್ದ ಅವನನ್ನು ಅರ್ಜುನನು ಕುಪಿತನಾಗಿ ನಾಲ್ಕು ಉತ್ತಮ ಶರಗಳಿಂದ ಜೋರಾಗಿ ಹೊಡೆದನು. ಶತ್ರುವಿನಿಂದ ಗಾಢವಾಗಿ ಪ್ರಹೃತನಾದ ಕರ್ಣನು ರೋಗಿಯು ವಾತ-ಪಿತ್ತ-ಕಫಗಳಿಂದ ಮತ್ತು ಜ್ವರಗಳಿಂದ ನರಳುವಂತೆ ಬಹಳವಾಗಿ ಸಂಕಟಪಟ್ಟನು.

08066035a ಮಹಾಧನುರ್ಮಂಡಲನಿಃಸೃತೈಃ ಶಿತೈಃ ಕ್ರಿಯಾಪ್ರಯತ್ನಪ್ರಹಿತೈರ್ಬಲೇನ ಚ।
08066035c ತತಕ್ಷ ಕರ್ಣಂ ಬಹುಭಿಃ ಶರೋತ್ತಮೈರ್ ಬಿಭೇದ ಮರ್ಮಸ್ವಪಿ ಚಾರ್ಜುನಸ್ತ್ವರನ್।।

ಕ್ರಿಯೆ-ಪ್ರಯತ್ನ-ಬಲಗಳನ್ನು ಸೇರಿಸಿ ಮಹಾಧನುಸ್ಸಿನ ಮಂಡಲದಿಂದ ಸತತವಾಗಿ ಹೊರಬರುತ್ತಿದ್ದ ನಿಶಿತ ಶರಗಳಿಂದ ಅರ್ಜುನನು ಕರ್ಣನನ್ನು ಗಾಯಗೊಳಿಸಿದನು. ಉತ್ತಮ ಶರಗಳಿಂದ ಅರ್ಜುನನು ತ್ವರೆಮಾಡಿ ಅವನ ಮರ್ಮಸ್ಥಾನಗಳಿಗೂ ಹೊಡೆದನು.

08066036a ದೃಢಾಹತಃ ಪತ್ರಿಭಿರುಗ್ರವೇಗೈಃ ಪಾರ್ಥೇನ ಕರ್ಣೋ ವಿವಿಧೈಃ ಶಿತಾಗ್ರೈಃ।
08066036c ಬಭೌ ಗಿರಿರ್ಗೈರಿಕಧಾತುರಕ್ತಃ ಕ್ಷರನ್ಪ್ರಪಾತೈರಿವ ರಕ್ತಮಂಭಃ।।

ಪಾರ್ಥನ ಉಗ್ರವೇಗದ ಪತ್ರಿಗಳಿಂದ ಮತ್ತು ವಿವಿಧ ಶಿತಾಗ್ರಗಳಿಂದ ದೃಢವಾಗಿ ಹೊಡೆಯಲ್ಪಟ್ಟ ಕರ್ಣನು ರಕ್ತವನ್ನು ಸುರಿಸುತ್ತಾ ಗೈರಿಕಾದಿ ಧಾತುಗಳಿಂದ ಕೂಡಿದ ಕೆಂಪು ನೀರಿನ ಜಲಪಾತವನ್ನು ಸುರಿಸುವ ಪರ್ವತದಂತೆ ಕಂಡನು.

08066037a ಸಾಶ್ವಂ ತು ಕರ್ಣಂ ಸರಥಂ ಕಿರೀಟೀ ಸಮಾಚಿನೋದ್ಭಾರತ ವತ್ಸದಂತೈಃ।
08066037c ಪ್ರಚ್ಚಾದಯಾಮಾಸ ದಿಶಶ್ಚ ಬಾಣೈಃ ಸರ್ವಪ್ರಯತ್ನಾತ್ತಪನೀಯಪುಂಖೈಃ।।

ಭಾರತ! ಆಗ ಕಿರೀಟಿಯು ಕುದುರೆ ರಥಗಳೊಂದಿಗೆ ಕರ್ಣನನ್ನು ವತ್ಸದಂತ ಶರಗಳಿಂದ ಮುಚ್ಚಿಬಿಟ್ಟನು ಮತ್ತು ಸರ್ವ ಪ್ರಯತ್ನಪಟ್ಟು ಪುಂಖಗಳು ಉರಿಯುತ್ತಿರುವ ಬಾಣಗಳಿಂದ ದಿಕ್ಕುಗಳನ್ನೂ ಮುಚ್ಚಿಬಿಟ್ಟನು.

08066038a ಸ ವತ್ಸದಂತೈಃ ಪೃಥುಪೀನವಕ್ಷಾಃ ಸಮಾಚಿತಃ ಸ್ಮಾಧಿರಥಿರ್ವಿಭಾತಿ।
08066038c ಸುಪುಷ್ಪಿತಾಶೋಕಪಲಾಶಶಾಲ್ಮಲಿರ್ ಯಥಾಚಲಃ ಸ್ಪಂದನಚಂದನಾಯುತಃ।।

ಆ ವತ್ಸದಂತಗಳಿಂದ ಚುಚ್ಚಲ್ಪಟ್ಟ ವಿಶಾಲ ಪೀನವಕ್ಷಸ್ಥ ಆಧಿರಥಿ ಕರ್ಣನು ಹೂಬಿಟ್ಟ ಅಶೋಕ, ಮುತ್ತುಗ, ಬೂರುಗ ಮರಗಳಿಂದ ಕೂಡಿದ ಎತ್ತರ ಪರ್ವತದಂತೆಯೇ ತೋರಿದನು.

08066039a ಶರೈಃ ಶರೀರೇ ಬಹುಧಾ ಸಮರ್ಪಿತೈರ್ ವಿಭಾತಿ ಕರ್ಣಃ ಸಮರೇ ವಿಶಾಂ ಪತೇ।
08066039c ಮಹೀರುಹೈರಾಚಿತಸಾನುಕಂದರೋ ಯಥಾ ಮಹೇಂದ್ರಃ ಶುಭಕರ್ಣಿಕಾರವಾನ್।।

ವಿಶಾಂಪತೇ! ಅನೇಕ ಶರಗಳಿಂದ ಶರೀರಾದ್ಯಂತ ಚುಚ್ಚಲ್ಪಟ್ಟ ಕರ್ಣನು ವೃಕ್ಷಗಳಿಂದ ವ್ಯಾಪ್ತವಾದ ಶಿಖರದಂತೆ ಮತ್ತು ಸುಪುಷ್ಪಿತವಾದ ಕೆಂಪು ಕಣಗಿಲೆ ಮರಗಳುಳ್ಳ ಪರ್ವತದಂತೆ ಕಂಡನು.

08066040a ಸ ಬಾಣಸಂಘಾನ್ಧನುಷಾ ವ್ಯವಾಸೃಜನ್ ವಿಭಾತಿ ಕರ್ಣಃ ಶರಜಾಲರಶ್ಮಿವಾನ್।
08066040c ಸಲೋಹಿತೋ ರಕ್ತಗಭಸ್ತಿಮಂಡಲೋ ದಿವಾಕರೋಽಸ್ತಾಭಿಮುಖೋ ಯಥಾ ತಥಾ।।

ಆಗ ಧನುಸ್ಸಿನಿಂದ ಬಾಣಸಂಘಗಳನ್ನು ಸೃಷ್ಟಿಸುತ್ತಿದ್ದ ಕರ್ಣನು ಶರಜಾಲಗಳ ಕಾಂತಿಯನ್ನು ಸೂಸುತ್ತಿರುವಂತೆ ತೋರುತ್ತಿದ್ದನು. ರಕ್ತದಿಂದ ತೋಯ್ದು ಲೋಹಿತ ವರ್ಣನಾಗಿದ್ದ ಅವನು ಕೆಂಪಾದ ಸೂರ್ಯಮಂಡಲದಲ್ಲಿ ದಿವಾಕರನು ಅಸ್ತನಾಗುತ್ತಿರುವಂತೆ ತೋರುತ್ತಿದ್ದನು.

08066041a ಬಾಹ್ವಂತರಾದಾಧಿರಥೇರ್ವಿಮುಕ್ತಾನ್ ಬಾಣಾನ್ಮಹಾಹೀನಿವ ದೀಪ್ಯಮಾನಾನ್।
08066041c ವ್ಯಧ್ವಂಸಯನ್ನರ್ಜುನಬಾಹುಮುಕ್ತಾಃ ಶರಾಃ ಸಮಾಸಾದ್ಯ ದಿಶಃ ಶಿತಾಗ್ರಾಃ।।

ಆಧಿರಥಿಯ ಎರಡು ತೋಳುಗಳ ಮಧ್ಯದಿಂದ ಹೊರಬರುತ್ತಿದ್ದ ಉರಿಯುವ ಸರ್ಪಗಳಂತಹ ನಿಶಿತ ಬಾಣಗಳು ದಿಕ್ಕುಗಳನ್ನು ಸೇರಿ ಅರ್ಜುನನ ಬಾಹುಗಳಿಂದ ಬಿಡಲ್ಪಟ್ಟ ಬಾಣಗಳನ್ನು ಧ್ವಂಸಮಾಡಿದವು.

08066042a ತತಶ್ಚಕ್ರಮಪತತ್ತಸ್ಯ ಭೂಮೌ ಸ ವಿಹ್ವಲಃ ಸಮರೇ ಸೂತಪುತ್ರಃ।
08066042c ಘೂರ್ಣೇ ರಥೇ ಬ್ರಾಹ್ಮಣಸ್ಯಾಭಿಶಾಪಾದ್ ರಾಮಾದುಪಾತ್ತೇಽಪ್ರತಿಭಾತಿ ಚಾಸ್ತ್ರೇ।।

ಆಗ ಸಮರದಲ್ಲಿ ಅವನ ಚಕ್ರಗಳು ಭೂಮಿಯಲ್ಲಿ ಹುಗಿದುಹೋಗಲು ಸೂತಪುತ್ರನು ವಿಹ್ವಲನಾದನು. ಬ್ರಾಹ್ಮಣನ ಶಾಪದಿಂದಾಗಿ ರಥವು ಕುಸಿಯಲು ಪರಶುರಾಮನ ಶಾಪದಂತೆ ಅವನಿಗೆ ಅಸ್ತ್ರಗಳೂ ಹೊಳೆಯದಾದವು.

08066043a ಅಮೃಷ್ಯಮಾಣೋ ವ್ಯಸನಾನಿ ತಾನಿ ಹಸ್ತೌ ವಿಧುನ್ವನ್ಸ ವಿಗರ್ಹಮಾಣಃ।
08066043c ಧರ್ಮಪ್ರಧಾನಾನಭಿಪಾತಿ ಧರ್ಮ ಇತ್ಯಬ್ರುವನ್ಧರ್ಮವಿದಃ ಸದೈವ।
08066043e ಮಮಾಪಿ ನಿಮ್ನೋಽದ್ಯ ನ ಪಾತಿ ಭಕ್ತಾನ್ ಮನ್ಯೇ ನ ನಿತ್ಯಂ ಪರಿಪಾತಿ ಧರ್ಮಃ।।

ಆ ವ್ಯಸನಗಳನ್ನು ಸಹಿಸಿಕೊಳ್ಳಲಾಗದೇ ಕೈಗಳನ್ನು ಕೊಡವುತ್ತಾ ಅವನು ಧರ್ಮವನ್ನು ನಿಂದಿಸಿದನು: “ಧರ್ಮವೇ ಪ್ರಧಾನವಾಗಿರುವವನನ್ನು ಧರ್ಮವು ರಕ್ಷಿಸುತ್ತದೆ ಎಂದು ಸದೈವ ಧರ್ಮವಿದರು ಹೇಳುತ್ತಾರೆ. ಇಂದು ನನಗನ್ನಿಸುತ್ತಿದೆ – ಧರ್ಮವು ಭಕ್ತರನ್ನು ಪಾಲಿಸುವುದಿಲ್ಲ. ಧರ್ಮವು ನಿತ್ಯವೂ ಪರಿಪಾಲಿಸುವುದಿಲ್ಲ.”

08066044a ಏವಂ ಬ್ರುವನ್ ಪ್ರಸ್ಖಲಿತಾಶ್ವಸೂತೋ ವಿಚಾಲ್ಯಮಾನೋಽರ್ಜುನಶಸ್ತ್ರಪಾತೈಃ।
08066044c ಮರ್ಮಾಭಿಘಾತಾಚ್ಚಲಿತಃ ಕ್ರಿಯಾಸು ಪುನಃ ಪುನರ್ಧರ್ಮಮಗರ್ಹದಾಜೌ।।

ಹೀಗೆ ಹೇಳುತ್ತಿರಲು ಕುದುರೆಗಳೂ ಸೂತನೂ ತತ್ತರಿಸಿದವು. ಮರ್ಮಸ್ಥಾನಗಳಲ್ಲಿ ಚುಚ್ಚಲ್ಪಟ್ಟಿದ್ದ ಅವನು ಏನನ್ನು ಮಾಡಲೂ ವಿಚಲಿತನಾಗಿದ್ದನು. ತನಗಾದ ಅವಸ್ಥೆಗೆ ಧರ್ಮವನ್ನೇ ಪುನಃ ಪುನಃ ನಿಂದಿಸುತ್ತಿದ್ದನು.

08066045a ತತಃ ಶರೈರ್ಭೀಮತರೈರವಿಧ್ಯತ್ತ್ರಿಭಿರಾಹವೇ।
08066045c ಹಸ್ತೇ ಕರ್ಣಸ್ತದಾ ಪಾರ್ಥಮಭ್ಯವಿಧ್ಯಚ್ಚ ಸಪ್ತಭಿಃ।।

ಆಗ ಕರ್ಣನು ಆಹವದಲ್ಲಿ ಮೂರು ಭಯಂಕರ ಶರಗಳಿಂದ ಕೃಷ್ಣನ ಕೈಗೆ ಹೊಡೆದು, ಏಳರಿಂದ ಪಾರ್ಥನನ್ನು ಮುಸುಕಿದನು.

08066046a ತತೋಽರ್ಜುನಃ ಸಪ್ತದಶ ತಿಗ್ಮತೇಜಾನಜಿಹ್ಮಗಾನ್।
08066046c ಇಂದ್ರಾಶನಿಸಮಾನ್ಘೋರಾನಸೃಜತ್ಪಾವಕೋಪಮಾನ್।।

ಆಗ ಅರ್ಜುನನು ಹದಿನೇಳು ಉಗ್ರತೇಜಸ್ಸುಳ್ಳ, ಇಂದ್ರನ ವಜ್ರಕ್ಕೆ ಸಮಾನವಾದ, ಅಗ್ನಿಯಂತಿದ್ದ ಘೋರ ಜಿಹ್ಮಗಗಳನ್ನು ಪ್ರಯೋಗಿಸಿದನು.

08066047a ನಿರ್ಭಿದ್ಯ ತೇ ಭೀಮವೇಗಾ ನ್ಯಪತನ್ಪೃಥಿವೀತಲೇ।
08066047c ಕಂಪಿತಾತ್ಮಾ ತಥಾ ಕರ್ಣಃ ಶಕ್ತ್ಯಾ ಚೇಷ್ಟಾಮದರ್ಶಯತ್।।

ಭೀಮವೇಗದ ಅವು ಅವನನ್ನು ಭೇದಿಸಿ ನೆಲದಮೇಲೆ ಬಿದ್ದವು. ಆಗ ನಡುಗಿದ ಕರ್ಣನು ತನ್ನ ಶಕ್ತಿಯನ್ನು ಒಟ್ಟುಗೂಡಿಸಿ ಪ್ರಯತ್ನಿಸಿರುವಂತೆ ಕಂಡುಬಂದನು.

08066048a ಬಲೇನಾಥ ಸ ಸಂಸ್ತಭ್ಯ ಬ್ರಹ್ಮಾಸ್ತ್ರಂ ಸಮುದೈರಯತ್।
08066048c ಐಂದ್ರಾಸ್ತ್ರಮರ್ಜುನಶ್ಚಾಪಿ ತದ್ದೃಷ್ಟ್ವಾಭಿನ್ಯಮಂತ್ರಯತ್।।

ಕೂಡಲೇ ಅವನು ಧೈರ್ಯವನ್ನು ತಾಳಿ ಬಲವನ್ನುಪಯೋಗಿಸಿ ಬ್ರಹ್ಮಾಸ್ತ್ರವನ್ನು ಬಳಸಿದನು. ಅದನ್ನು ನೋಡಿ ಅರ್ಜುನನು ಐಂದ್ರಾಸ್ತ್ರವನ್ನು ಅಭಿಮಂತ್ರಿಸಿದನು.

08066049a ಗಾಂಡೀವಂ ಜ್ಯಾಂ ಚ ಬಾಣಾಂಶ್ಚ ಅನುಮಂತ್ರ್ಯ ಧನಂಜಯಃ।
08066049c ಅಸೃಜಚ್ಚರವರ್ಷಾಣಿ ವರ್ಷಾಣೀವ ಪುರಂದರಃ।।

ಗಾಂಡೀವ, ಮೌರ್ವಿ ಮತ್ತು ಬಾಣಗಳನ್ನು ಅನುಮಂತ್ರಿಸಿ ಧನಂಜಯನು ಪುರಂದರನು ಮಳೆಸುರಿಸುವಂತೆ ಶರವರ್ಷಗಳನ್ನು ಸೃಷ್ಟಿಸಿದನು.

08066050a ತತಸ್ತೇಜೋಮಯಾ ಬಾಣಾ ರಥಾತ್ಪಾರ್ಥಸ್ಯ ನಿಃಸೃತಾಃ।
08066050c ಪ್ರಾದುರಾಸನ್ಮಹಾವೀರ್ಯಾಃ ಕರ್ಣಸ್ಯ ರಥಮಂತಿಕಾತ್।।

ಪಾರ್ಥನ ರಥದಿಂದ ಹೊರಟ ಆ ತೇಜೋಮಯ ಮಹಾವೀರ್ಯ ಬಾಣಗಳು ಕರ್ಣನ ರಥದ ಬಳಿ ಪ್ರಕಟವಾದವು.

08066051a ತಾನ್ಕರ್ಣಸ್ತ್ವಗ್ರತೋಽಭ್ಯಸ್ತಾನ್ಮೋಘಾಂಶ್ಚಕ್ರೇ ಮಹಾರಥಃ।
08066051c ತತೋಽಬ್ರವೀದ್ವೃಷ್ಣಿವೀರಸ್ತಸ್ಮಿನ್ನಸ್ತ್ರೇ ವಿನಾಶಿತೇ।।

ಮಹಾರಥ ಕರ್ಣನು ವೇಗದಿಂದ ಬರುತ್ತಿದ್ದ ಆ ಅಸ್ತ್ರಗಳನ್ನು ವ್ಯರ್ಥಗೊಳಿಸಿದನು. ಆ ಅಸ್ತ್ರವೂ ನಾಶವಾಗಲು ವೃಷ್ಣಿವೀರನು ಹೇಳಿದನು:

08066052a ವಿಸೃಜಾಸ್ತ್ರಂ ಪರಂ ಪಾರ್ಥ ರಾಧೇಯೋ ಗ್ರಸತೇ ಶರಾನ್।
08066052c ಬ್ರಹ್ಮಾಸ್ತ್ರಮರ್ಜುನಶ್ಚಾಪಿ ಸಮ್ಮಂತ್ರ್ಯಾಥ ಪ್ರಯೋಜಯತ್।।

“ಪಾರ್ಥ! ಪರಮ ಅಸ್ತ್ರವನ್ನು ಪ್ರಯೋಗಿಸು! ರಾಧೇಯನು ಶರಗಳನ್ನು ನುಂಗಿಬಿಡುತ್ತಿದ್ದಾನೆ!” ಆ ಸಲಹೆಯಂತೆ ಅರ್ಜುನನು ಆಗ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದನು.

08066053a ಚಾದಯಿತ್ವಾ ತತೋ ಬಾಣೈಃ ಕರ್ಣಂ ಪ್ರಭ್ರಾಮ್ಯ ಚಾರ್ಜುನಃ।
08066053c ತಸ್ಯ ಕರ್ಣಃ ಶರೈಃ ಕ್ರುದ್ಧಶ್ಚಿಚ್ಚೇದ ಜ್ಯಾಂ ಸುತೇಜನೈಃ।।

ಆಗ ಬಾಣಗಳಿಂದ ಅರ್ಜುನನು ಕರ್ಣನನ್ನು ಭ್ರಾಂತಗೊಳಿಸಿದನು. ಆದರೆ ಅವುಗಳನ್ನು ಕ್ರುದ್ಧನಾದ ಕರ್ಣನು ತೇಜಸ್ಸುಳ್ಳ ಮೌರ್ವಿಯಿಂದ ಹೊರಟ ಶರಗಳಿಂದ ಕತ್ತರಿಸಿದನು.

08066054a ತತೋ ಜ್ಯಾಮವಧಾಯಾನ್ಯಾಮನುಮೃಜ್ಯ ಚ ಪಾಂಡವಃ।
08066054c ಶರೈರವಾಕಿರತ್ಕರ್ಣಂ ದೀಪ್ಯಮಾನೈಃ ಸಹಸ್ರಶಃ।।

ಆಗ ಮೌರ್ವಿಯನ್ನು ಕತ್ತರಿಸಲು ಪಾಂಡವನು ಪುನಃ ಮೌರ್ವಿಯನ್ನು ಕಟ್ಟಿ ಉರಿಯುತ್ತಿರುವ ಸಹಸ್ರಾರು ಶರಗಳಿಂದ ಕರ್ಣನನ್ನು ಮುಚ್ಚಿಬಿಟ್ಟನು.

08066055a ತಸ್ಯ ಜ್ಯಾಚ್ಚೇದನಂ ಕರ್ಣೋ ಜ್ಯಾವಧಾನಂ ಚ ಸಂಯುಗೇ।
08066055c ನಾನ್ವಬುಧ್ಯತ ಶೀಘ್ರತ್ವಾತ್ತದದ್ಭುತಮಿವಾಭವತ್।।

ಸಂಯುಗದಲ್ಲಿ ಅವನ ಮೌರ್ವಿಯನ್ನು ಕತ್ತರಿಸುತ್ತಿದ್ದೆಂತೆಲ್ಲ ಅರ್ಜುನನು ಬಾಣಗಳನ್ನು ಹೂಡುತ್ತಿದ್ದನು. ಅವನ ಶೀಘ್ರತ್ವವು ನಮಗೆ ತಿಳಿಯುತ್ತಲೇ ಇರಲಿಲ್ಲ. ಅದೊಂದು ಅದ್ಭುತವಾಗಿತ್ತು.

08066056a ಅಸ್ತ್ರೈರಸ್ತ್ರಾಣಿ ರಾಧೇಯಃ ಪ್ರತ್ಯಹನ್ಸವ್ಯಸಾಚಿನಃ।
08066056c ಚಕ್ರೇ ಚಾಭ್ಯಧಿಕಂ ಪಾರ್ಥಾತ್ಸ್ವವೀರ್ಯಂ ಪ್ರತಿದರ್ಶಯನ್।।

ಸವ್ಯಸಾಚಿಯ ಅಸ್ತ್ರಗಳನ್ನು ಅಸ್ತ್ರಗಳಿಂದ ರಾಧೇಯನು ನಾಶಗೊಳಿಸಿ, ಪಾರ್ಥನಿಗಿಂತಲೂ ಅಧಿಕವಾದ ವೀರ್ಯವನ್ನು ಪ್ರದರ್ಶಿಸಿದನು.

08066057a ತತಃ ಕೃಷ್ಣೋಽರ್ಜುನಂ ದೃಷ್ಟ್ವಾ ಕರ್ಣಾಸ್ತ್ರೇಣಾಭಿಪೀಡಿತಂ।
08066057c ಅಭ್ಯಸ್ಯೇತ್ಯಬ್ರವೀತ್ಪಾರ್ಥಮಾತಿಷ್ಠಾಸ್ತ್ರಮನುತ್ತಮಂ।।

ಆಗ ಕೃಷ್ಣನು ಕರ್ಣನ ಅಸ್ತ್ರಗಳಿಂದ ಪೀಡಿತನಾದ ಅರ್ಜುನನನ್ನು ನೋಡಿ “ಪಾರ್ಥ! ಅನುತ್ತಮವಾದ ಅಸ್ತ್ರವನ್ನು ಬಳಸು!” ಎಂದು ಹೇಳಿದನು.

08066058a ತತೋಽನ್ಯಮಗ್ನಿಸದೃಶಂ ಶರಂ ಸರ್ಪವಿಷೋಪಮಂ।
08066058c ಅಶ್ಮಸಾರಮಯಂ ದಿವ್ಯಮನುಮಂತ್ರ್ಯ ಧನಂಜಯಃ।।

ಆಗ ಧನಂಜಯನು ಅಗ್ನಿಸದೃಶ ಸರ್ಪವಿಷಸಮ ಉಕ್ಕಿನ ಸಾರಮಯ ದಿವ್ಯ ಶರವನ್ನು ಅನುಮಂತ್ರಿಸಿದನು.

08066059a ರೌದ್ರಮಸ್ತ್ರಂ ಸಮಾದಾಯ ಕ್ಷೇಪ್ತುಕಾಮಃ ಕಿರೀಟವಾನ್।
08066059c ತತೋಽಗ್ರಸನ್ಮಹೀ ಚಕ್ರಂ ರಾಧೇಯಸ್ಯ ಮಹಾಮೃಧೇ।।

ಕಿರೀಟವಾನನು ಆ ರೌದ್ರ ಅಸ್ತ್ರವನ್ನು ಹೂಡಿ ಪ್ರಯೋಗಿಸಲು ಬಯಸಿದಾಗ ಮಹಾರಣದಲ್ಲಿ ಭೂಮಿಯು ರಾಧೇಯನ ಚಕ್ರವನ್ನು ನುಂಗಿತು.

08066060a ಗ್ರಸ್ತಚಕ್ರಸ್ತು ರಾಧೇಯಃ ಕೋಪಾದಶ್ರೂಣ್ಯವರ್ತಯತ್।
08066060c ಸೋಽಬ್ರವೀದರ್ಜುನಂ ಚಾಪಿ ಮುಹೂರ್ತಂ ಕ್ಷಮ ಪಾಂಡವ।।

ಚಕ್ರವು ಹುಗಿದುಕೊಳ್ಳಲು ರಾಧೇಯನು ಕೋಪದಿಂದ ಕಣ್ಣೀರನ್ನು ಸುರಿಸುತ್ತಾ ಅರ್ಜುನನಿಗೆ ಹೇಳಿದನು: “ಪಾಂಡವ! ಒಂದು ಕ್ಷಣಕಾಲ ಕ್ಷಮಿಸು!

08066061a ಮಧ್ಯೇ ಚಕ್ರಮವಗ್ರಸ್ತಂ ದೃಷ್ಟ್ವಾ ದೈವಾದಿದಂ ಮಮ।
08066061c ಪಾರ್ಥ ಕಾಪುರುಷಾಚೀರ್ಣಮಭಿಸಂಧಿಂ ವಿವರ್ಜಯ।।

ಚಕ್ರವು ಭೂಮಿಯಲ್ಲಿ ಹುಗಿದುಕೊಂಡಿದುದನ್ನು ನೋಡಿ ಇದೇ ದೈವವಿತ್ತ ಸರಿಯಾದ ಸಮಯವೆಂದು ತಿಳಿಯಬೇಡ! ಪಾರ್ಥ! ಕಾಪುರುಷರು ಅನುಸರಿಸುವ ಈ ಮಾರ್ಗವನ್ನು ಬಿಟ್ಟುಬಿಡು!

08066062a ಪ್ರಕೀರ್ಣಕೇಶೇ ವಿಮುಖೇ ಬ್ರಾಹ್ಮಣೇ ಚ ಕೃತಾಂಜಲೌ।
08066062c ಶರಣಾಗತೇ ನ್ಯಸ್ತಶಸ್ತ್ರೇ ತಥಾ ವ್ಯಸನಗೇಽರ್ಜುನ।।
08066063a ಅಬಾಣೇ ಭ್ರಷ್ಟಕವಚೇ ಭ್ರಷ್ಟಭಗ್ನಾಯುಧೇ ತಥಾ।
08066063c ನ ಶೂರಾಃ ಪ್ರಹರಂತ್ಯಾಜೌ ನ ರಾಜ್ಞೇ ಪಾರ್ಥಿವಾಸ್ತಥಾ।
08066063e ತ್ವಂ ಚ ಶೂರೋಽಸಿ ಕೌಂತೇಯ ತಸ್ಮಾತ್ ಕ್ಷಮ ಮುಹೂರ್ತಕಂ।।

ಅರ್ಜುನ! ಮುಡಿಯು ಬಿಚ್ಚಿಹೋಗಿರುವವರನ್ನೂ, ಯುದ್ಧದಿಂದ ವಿಮುಖರಾಗಿರುವವರನ್ನೂ, ಬ್ರಾಹ್ಮಣರನ್ನೂ, ಕೈಮುದು ಶರಣಾಗತನಾದವರನ್ನೂ, ಶಸ್ತ್ರನ್ಯಾಸಮಾಡಿದವರನ್ನೂ, ಜೀವಯಾಚಕರನ್ನೂ, ಬಾಣಗಳಿಲ್ಲದವರನ್ನೂ, ಕವಚದಿಂದ ವಿಹೀನರಾದವರನ್ನೂ, ಆಯುಧಗಳನ್ನು ಕಳೆದುಕೊಂಡವರನ್ನು ಅಥವಾ ಆಯುಧಗಳು ಭಗ್ನರಾದವರನ್ನು ಶೂರರಾದ ರಾಜ ಪಾರ್ಥಿವರು ಪ್ರಹರಿಸುವುದಿಲ್ಲ. ಕೌಂತೇಯ! ನೀನಾದರೋ ಶೂರನಾಗಿದ್ದೀಯೆ. ಆದುದರಿಂದ ಮುಹೂರ್ತಕಾಲ ತಡೆ!

08066064a ಯಾವಚ್ಚಕ್ರಮಿದಂ ಭೂಮೇರುದ್ಧರಾಮಿ ಧನಂಜಯ।
08066064c ನ ಮಾಂ ರಥಸ್ಥೋ ಭೂಮಿಷ್ಠಮಸಜ್ಜಂ ಹಂತುಮರ್ಹಸಿ।
08066064e ನ ವಾಸುದೇವಾತ್ತ್ವತ್ತೋ ವಾ ಪಾಂಡವೇಯ ಬಿಭೇಮ್ಯಹಂ।।

ಧನಂಜಯ! ಈ ಚಕ್ರವನ್ನು ಭೂಮಿಯಿಂದ ಮೇಲೆತ್ತುತ್ತೇನೆ. ರಥಸ್ಥನಾಗಿರದ, ನೆಲದಮೇಲಿರುವ ಮತ್ತು ಯುದ್ಧಕ್ಕೆ ಸಜ್ಜಾಗಿರದ ನನ್ನನ್ನು ಹೊಡೆಯಕೂಡದು! ನಾನು ಇದನ್ನು ಭಯದಿಂದ ಹೇಳುತ್ತಿದ್ದೇನೆಂದು ವಾಸುದೇವ ಅಥವಾ ಪಾಂಡವೇಯ ನೀನು ತಿಳಿಯಬಾರದು!

08066065a ತ್ವಂ ಹಿ ಕ್ಷತ್ರಿಯದಾಯಾದೋ ಮಹಾಕುಲವಿವರ್ಧನಃ।
08066065c ಸ್ಮೃತ್ವಾ ಧರ್ಮೋಪದೇಶಂ ತ್ವಂ ಮುಹೂರ್ತಂ ಕ್ಷಮ ಪಾಂಡವ।।

ನೀನಾದರೋ ಕ್ಷತ್ರಿಯರ ದಾಯಾದನಾಗಿರುವೆ! ಮಹಾಕುಲದ ವಿವರ್ಧಕನಾಗಿರುವೆ! ಧನಂಜಯ! ಧರ್ಮೋಪದೇಶವನ್ನು ಸ್ಮರಿಸಿಕೊಂಡು ನೀನು ಮುರ್ಹೂರ್ತಕಾಲ ಸೈರಿಸಿಕೋ!”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಕರ್ಣರಥಚಕ್ರಗ್ರಸನೇ ಷಟ್ಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಕರ್ಣರಥಚಕ್ರಗ್ರಸನ ಎನ್ನುವ ಅರವತ್ತಾರನೇ ಅಧ್ಯಾಯವು.