005 ಧೃತರಾಷ್ಟ್ರಪ್ರಶ್ನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಕರ್ಣ ಪರ್ವ

ಕರ್ಣವಧ ಪರ್ವ

ಅಧ್ಯಾಯ 5

ಸಾರ

ಕರ್ಣನ ಶೌರ್ಯ-ಸಾಹಸಗಳನ್ನು ಸ್ಮರಿಸಿಕೊಳ್ಳುತ್ತಾ ಧೃತರಾಷ್ಟ್ರನು ವಿಲಪಿಸಿದುದು (1-110).

08005001 ಜನಮೇಜಯ ಉವಾಚ।
08005001a ಶ್ರುತ್ವಾ ಕರ್ಣಂ ಹತಂ ಯುದ್ಧೇ ಪುತ್ರಾಂಶ್ಚೈವಾಪಲಾಯಿನಃ।
08005001c ನರೇಂದ್ರಃ ಕಿಂ ಚಿದಾಶ್ವಸ್ತೋ ದ್ವಿಜಶ್ರೇಷ್ಠ ಕಿಮಬ್ರವೀತ್।।

ಜನಮೇಜಯನು ಹೇಳಿದನು: “ದ್ವಿಜಶ್ರೇಷ್ಠ! ಯುದ್ಧದಲ್ಲಿ ಕರ್ಣನೂ ಮತ್ತು ಪಲಾಯನಮಾಡದಿದ್ದ ತನ್ನ ಮಕ್ಕಳೂ ಹತರಾದುದನ್ನು ಕೇಳಿ ಸ್ವಲ್ಪಹೊತ್ತು ಮೂರ್ಛಿತನಾದ ನರೇಂದ್ರನು ನಂತರ ಏನು ಹೇಳಿದನು?

08005002a ಪ್ರಾಪ್ತವಾನ್ಪರಮಂ ದುಃಖಂ ಪುತ್ರವ್ಯಸನಜಂ ಮಹತ್।
08005002c ತಸ್ಮಿನ್ಯದುಕ್ತವಾನ್ಕಾಲೇ ತನ್ಮಮಾಚಕ್ಷ್ವ ಪೃಚ್ಚತಃ।।

ಪುತ್ರರ ವ್ಯಸನದಿಂದ ಉಂಟಾದ ಆ ಪರಮ ಮಹಾದುಃಖವನ್ನು ಹೊಂದಿದ ಅವನು ಆ ಸಮಯದಲ್ಲಿ ಏನು ಹೇಳಿದನು ಎನ್ನುವುದನ್ನು ಕೇಳುತ್ತಿರುವ ನನಗೆ ಹೇಳು!”

08005003 ವೈಶಂಪಾಯನ ಉವಾಚ।
08005003a ಶ್ರುತ್ವಾ ಕರ್ಣಸ್ಯ ನಿಧನಮಶ್ರದ್ಧೇಯಮಿವಾದ್ಭುತಂ।
08005003c ಭೂತಸಮ್ಮೋಹನಂ ಭೀಮಂ ಮೇರೋಃ ಪರ್ಯಸನಂ ಯಥಾ।।
08005004a ಚಿತ್ತಮೋಹಮಿವಾಯುಕ್ತಂ ಭಾರ್ಗವಸ್ಯ ಮಹಾಮತೇಃ।
08005004c ಪರಾಜಯಮಿವೇಂದ್ರಸ್ಯ ದ್ವಿಷದ್ಭ್ಯೋ ಭೀಮಕರ್ಮಣಃ।।
08005005a ದಿವಃ ಪ್ರಪತನಂ ಭಾನೋರುರ್ವ್ಯಾಮಿವ ಮಹಾದ್ಯುತೇಃ।
08005005c ಸಂಶೋಷಣಮಿವಾಚಿಂತ್ಯಂ ಸಮುದ್ರಸ್ಯಾಕ್ಷಯಾಂಭಸಃ।।
08005006a ಮಹೀವಿಯದ್ದಿಗೀಶಾನಾಂ ಸರ್ವನಾಶಮಿವಾದ್ಭುತಂ।
08005006c ಕರ್ಮಣೋರಿವ ವೈಫಲ್ಯಮುಭಯೋಃ ಪುಣ್ಯಪಾಪಯೋಃ।।
08005007a ಸಂಚಿಂತ್ಯ ನಿಪುಣಂ ಬುದ್ಧ್ಯಾ ಧೃತರಾಷ್ಟ್ರೋ ಜನೇಶ್ವರಃ।
08005007c ನೇದಂ ಅಸ್ತೀತಿ ಸಂಚಿಂತ್ಯ ಕರ್ಣಸ್ಯ ನಿಧನಂ ಪ್ರತಿ।।

ವೈಶಂಪಾಯನನು ಹೇಳಿದನು: “ಮೇರುಪರ್ವತವು ಹರಿದುಹೋಯಿತೆಂಬುದು, ಮಹಾಮತಿ ಭಾರ್ಗವನ ಚಿತ್ತವು ಮೋಹಪರವಶವಾಯಿತು ಎನ್ನುವುದು, ಶತ್ರುಗಳಿಂದ ಭೀಮಕರ್ಮಿ ಇಂದ್ರನ ಪರಾಜಯವಾಯಿತೆನ್ನುವುದು, ಮಹಾದ್ಯುತಿ ಭಾನುವು ಆಕಾಶದಿಂದ ಕೆಳಕ್ಕೆ ಬಿದ್ದನೆನ್ನುವುದು, ಅಚಿಂತ್ಯ ಅಕ್ಷಯಾಂಭಸ ಸಮುದ್ರವು ಒಣಗಿಹೋಯಿತೆನ್ನುವುದು, ಮತ್ತು ಪುಣ್ಯ-ಪಾಪಕರ್ಮಗಳೆರಡು ವೈಫಲ್ಯವೆನ್ನುವುದು ಎಷ್ಟು ಭಯಂಕರವಾದುದೋ ಮತ್ತು ಭೂತಗಳನ್ನು ಎಷ್ಟು ಭ್ರಾಂತಿಗೊಳಿಸಬಲ್ಲದೋ ಹಾಗೆ ಅದ್ಭುತವಾಗಿರುವ ಕರ್ಣನ ನಿಧನವನ್ನು ಕೇಳಿ ಅವನು ನಂಬಲೇ ಇಲ್ಲ. ಜನೇಶ್ವರ ಧೃತರಾಷ್ಟ್ರನು ತನ್ನ ನಿಪುಣ ಬುದ್ಧಿಯಿಂದ ಚಿಂತಿಸಿ ಕರ್ಣನ ನಿಧನವಾಗಲಿಲ್ಲವೆಂದೇ ಯೋಚಿಸಿದನು.

08005008a ಪ್ರಾಣಿನಾಮೇತದಾತ್ಮತ್ವಾತ್ಸ್ಯಾದಪೀತಿ ವಿನಾಶನಂ।
08005008c ಶೋಕಾಗ್ನಿನಾ ದಹ್ಯಮಾನೋ ಧಮ್ಯಮಾನ ಇವಾಶಯಃ।।
08005009a ವಿಧ್ವಸ್ತಾತ್ಮಾ ಶ್ವಸನ್ದೀನೋ ಹಾ ಹೇತ್ಯುಕ್ತ್ವಾ ಸುದುಃಖಿತಃ।
08005009c ವಿಲಲಾಪ ಮಹಾರಾಜ ಧೃತರಾಷ್ಟ್ರೋಽಅಂಬಿಕಾಸುತಃ।।

ಮಹಾರಾಜ! ಅಂಬಿಕಾಸುತ ಧೃತರಾಷ್ಟ್ರನು ತನ್ನಿಂದಾಗಿ ಮನುಷ್ಯ-ಪ್ರಾಣಿಗಳ ವಿನಾಶವು ನಡೆದುಹೋಯಿತೆಂದು ಭಾವಿಸಿ, ಶೋಕಾಗ್ನಿಯಿಂದ ಸುಡುತ್ತಾ, ಎದೆಯೊಡೆದವನಂತೆ ವಿಲಪಿಸಿದನು.

08005010 ಧೃತರಾಷ್ಟ್ರ ಉವಾಚ।
08005010a ಸಂಜಯಾಧಿರಥೋ ವೀರಃ ಸಿಂಹದ್ವಿರದವಿಕ್ರಮಃ।
08005010c ವೃಷಮಪ್ರತಿಮಸ್ಕಂದೋ ವೃಷಭಾಕ್ಷಗತಿಸ್ವನಃ।।

ಧೃತರಾಷ್ಟ್ರನು ಹೇಳಿದನು: “ಸಂಜಯ! ಅಧಿರಥನ ಮಗ ವೀರ ಕರ್ಣನು ಸಿಂಹ ಮತ್ತು ಆನೆಗಳ ವಿಕ್ರಮವನ್ನು ಹೊಂದಿದ್ದನು. ಗೂಳಿಯ ಹೆಗಲಿನಂಥಹ ಹೆಗಲನ್ನು ಹೊಂದಿದ್ದ ಅವನ ಕಣ್ಣುಗಳೂ, ನಡಿಗೆಯೂ ಗೂಳಿಯದ್ದಂತೆಯೇ ಇದ್ದವು.

08005011a ವೃಷಭೋ ವೃಷಭಸ್ಯೇವ ಯೋ ಯುದ್ಧೇ ನ ನಿವರ್ತತೇ।
08005011c ಶತ್ರೋರಪಿ ಮಹೇಂದ್ರಸ್ಯ ವಜ್ರಸಂಹನನೋ ಯುವಾ।।

ವಜ್ರಸಮ ದೇಹವನ್ನು ಹೊಂದಿದ್ದ ಆ ಯುವಕನು ಗೂಳಿಯೊಡನೆ ಹೋರಾಡುವ ಗೂಳಿಯಂತೆ, ಶತ್ರುವು ಮಹೇಂದ್ರನೇ ಆಗಿದ್ದರೂ, ಯುದ್ಧದಿಂದ ಹಿಂದಿರುಗುತ್ತಿರಲಿಲ್ಲ.

08005012a ಯಸ್ಯ ಜ್ಯಾತಲಶಬ್ಧೇನ ಶರವೃಷ್ಟಿರವೇಣ ಚ।
08005012c ರಥಾಶ್ವನರಮಾತಂಗಾ ನಾವತಿಷ್ಠಂತಿ ಸಂಯುಗೇ।।

ಅವನ ಬಿಲ್ಲಿನ ಶಬ್ಧದಿಂದ ಮತ್ತು ಶರವೃಷ್ಟಿಗಳ ಶಬ್ಧದಿಂದ ರಥ, ಅಶ್ವ, ನರ, ಮಾತಂಗಗಳು ಯುದ್ಧದಲ್ಲಿ ನಿಲ್ಲುತ್ತಿರಲಿಲ್ಲ.

08005013a ಯಮಾಶ್ರಿತ್ಯ ಮಹಾಬಾಹುಂ ದ್ವಿಷತ್ಸಂಘಘ್ನಮಚ್ಯುತಂ।
08005013c ದುರ್ಯೋಧನೋಽಕರೋದ್ವೈರಂ ಪಾಂಡುಪುತ್ರೈರ್ಮಹಾಬಲೈಃ।।

ಶತ್ರುಸಂಘಗಳನ್ನು ನಾಶಪಡಿಸಬಲ್ಲ ಅಚ್ಯುತ ಮಹಾಬಾಹು ಕರ್ಣನನ್ನು ಆಶ್ರಯಿಸಿಯೇ ದುರ್ಯೋಧನನು ಮಹಾಬಲ ಪಾಂಡುಪುತ್ರರಿಂದ ವೈರವನ್ನು ಕಟ್ಟಿಕೊಂಡನು.

08005014a ಸ ಕಥಂ ರಥಿನಾಂ ಶ್ರೇಷ್ಠಃ ಕರ್ಣಃ ಪಾರ್ಥೇನ ಸಂಯುಗೇ।
08005014c ನಿಹತಃ ಪುರುಷವ್ಯಾಘ್ರಃ ಪ್ರಸಹ್ಯಾಸಹ್ಯವಿಕ್ರಮಃ।।

ಅಂಥಹ ರಥಿಗಳಲ್ಲಿ ಪುರುಷವ್ಯಾಘ್ರ, ಶತ್ರುಗಳಿಗೆ ಸಹಿಸಲಸಾಧ್ಯ ವಿಕ್ರಮವುಳ್ಳ ಶ್ರೇಷ್ಠ ಕರ್ಣನು ಯುದ್ಧದಲ್ಲಿ ಪಾರ್ಥನಿಂದ ಹೇಗೆ ಹತನಾದನು?

08005015a ಯೋ ನಾಮನ್ಯತ ವೈ ನಿತ್ಯಂ ಅಚ್ಯುತಂ ನ ಧನಂಜಯಂ।
08005015c ನ ವೃಷ್ಣೀನಪಿ ತಾನನ್ಯಾನ್ಸ್ವಬಾಹುಬಲಮಾಶ್ರಿತಃ।।

ತನ್ನದೇ ಬಾಹುಬಲಗಳನ್ನು ಆಶ್ರಯಿಸಿದ್ದ ಅವನು ನಿತ್ಯವೂ ಅಚ್ಯುತನನ್ನಾಗಲೀ ಧನಂಜಯನನ್ನಾಗಲೀ ಅನ್ಯ ವೃಷ್ಣಿಗಳನ್ನಾಗಲೀ ಗಣನೆಗೇ ತೆಗೆದುಕೊಳ್ಳುತ್ತಿರಲಿಲ್ಲ.

08005016a ಶಾಂಙ್ರಗಾಂಡೀವಧನ್ವಾನೌ ಸಹಿತಾವಪರಾಜಿತೌ।
08005016c ಅಹಂ ದಿವ್ಯಾದ್ರಥಾದೇಕಃ ಪಾತಯಿಷ್ಯಾಮಿ ಸಂಯುಗೇ।।
08005017a ಇತಿ ಯಃ ಸತತಂ ಮಂದಂ ಅವೋಚಲ್ಲೋಭಮೋಹಿತಂ।
08005017c ದುರ್ಯೋಧನಂ ಅಪಾದೀನಂ ರಾಜ್ಯಕಾಮುಕಮಾತುರಂ।।

“ಅಪರಾಜಿತ ಶಾಂಙ್ರ-ಗಾಂಡೀವಧನ್ವಿಗಳನ್ನು ಒಟ್ಟಿಗೇ ದಿವ್ಯ ರಥದಿಂದ ನಾನು ಒಬ್ಬನೇ ಕೆಳಗುರುಳಿಸುತ್ತೇನೆ” ಎಂದು ಅವನು ಸತತವೂ ತಲೆಯನ್ನು ಕೆಳಕ್ಕೆ ಮಾಡಿ ಕುಳಿತಿರುತ್ತಿದ್ದ ರಾಜ್ಯಕಾಮುಕ, ಆತುರ, ಮಂದ, ಲೋಭಮೋಹಿತ ದುರ್ಯೋಧನನಿಗೆ ಹೇಳುತ್ತಿದ್ದನು.

08005018a ಯಶ್ಚಾಜೈಷೀದತಿಬಲಾನಮಿತ್ರಾನಪಿ ದುರ್ಜಯಾನ್।
08005018c ಗಾಂಧಾರಾನ್ಮದ್ರಕಾನ್ಮತ್ಸ್ಯಾಂಸ್ತ್ರಿಗರ್ತಾಂಸ್ತಂಗಣಾಂ ಶಕಾನ್।।
08005019a ಪಾಂಚಾಲಾಂಶ್ಚ ವಿದೇಹಾಂಶ್ಚ ಕುಣಿಂದಾನ್ಕಾಶಿಕೋಸಲಾನ್।
08005019c ಸುಹ್ಮಾನಂಗಾಂಶ್ಚ ಪುಂಡ್ರಾಂಶ್ಚ ನಿಷಾದಾನ್ವಂಗಕೀಚಕಾನ್।।
08005020a ವತ್ಸಾನ್ಕಲಿಂಗಾಂಸ್ತರಲಾನಶ್ಮಕಾನೃಷಿಕಾಂಸ್ತಥಾ।
08005020c ಯೋ ಜಿತ್ವಾ ಸಮರೇ ವೀರಶ್ಚಕ್ರೇ ಬಲಿಭೃತಃ ಪುರಾ।।

ಹಿಂದೆ ಆ ವೀರ ಬಲಿಭೃತನು ಸಮರದಲ್ಲಿ ಅತಿಬಲಶಾಲಿ ಅಮಿತ್ರ ದುರ್ಜಯ ಗಾಂಧಾರರನ್ನು, ಮದ್ರಕರನ್ನು, ಮತ್ಸ್ಯರನ್ನು, ತ್ರಿಗರ್ತರನ್ನು, ತಂಗಣ-ಶಕರನ್ನೂ, ಪಾಂಚಾಲರನ್ನೂ, ವಿದೇಹ-ಕುಣಿಂದರನ್ನೂ, ಕಾಶಿ-ಕೋಸಲರನ್ನೂ, ಸುಹ್ಮಾನಂಗರನ್ನು, ಪುಂಡ್ರರನ್ನೂ, ನಿಷಾದರನ್ನೂ, ವಂಗ-ಕೀಚಕರನ್ನೂ, ವತ್ಸರನ್ನೂ, ಕಲಿಂಗರನ್ನೂ, ತರಲರನ್ನು, ಅಶ್ಮಕರನ್ನೂ, ಮತ್ತು ಋಷಿಕರನ್ನೂ ಗೆದ್ದಿದ್ದನು.

08005021a ಉಚ್ಚೈಃಶ್ರವಾ ವರೋಽಶ್ವಾನಾಂ ರಾಜ್ಞಾಂ ವೈಶ್ರವಣೋ ವರಃ।
08005021c ವರೋ ಮಹೇಂದ್ರೋ ದೇವಾನಾಂ ಕರ್ಣಃ ಪ್ರಹರತಾಂ ವರಃ।।

ಅಶ್ವಗಳಲ್ಲಿ ಉಚ್ಛೈಶ್ರವವು ಶ್ರೇಷ್ಠವಾದಂತೆ, ರಾಜರಲ್ಲಿ ವೈಶ್ರವಣನು ಶ್ರೇಷ್ಠನಾಗಿರುವಂತೆ, ದೇವತೆಗಳಲ್ಲಿ ಮಹೇಂದ್ರನು ಶ್ರೇಷ್ಠನಾಗಿರುವಂತೆ ಪ್ರಹರಿಗಳಲ್ಲಿ ಕರ್ಣನು ಶ್ರೇಷ್ಠನು.

08005022a ಯಂ ಲಬ್ಧ್ವಾ ಮಾಗಧೋ ರಾಜಾ ಸಾಂತ್ವಮಾನಾರ್ಥಗೌರವೈಃ।
08005022c ಅರೌತ್ಸೀತ್ಪಾರ್ಥಿವಂ ಕ್ಷತ್ರಂ ಋತೇ ಕೌರವಯಾದವಾನ್।।

ರಾಜಾ ಮಾಗಧನೂ ಕೂಡ ಸಂಪತ್ತು-ಗೌರವಗಳಿಂದ ಅವನನ್ನು ತನ್ನ ಸಖನನ್ನಾಗಿ ಪಡೆದುಕೊಂಡು ಕೌರವ-ಯಾದವರನ್ನು ಬಿಟ್ಟು ಇತರ ಅನೇಕ ಪಾರ್ಥಿವ ಕ್ಷತ್ರಿಯರನ್ನು ಬಂಧನದಲ್ಲಿಟ್ಟಿದ್ದನು.

08005023a ತಂ ಶ್ರುತ್ವಾ ನಿಹತಂ ಕರ್ಣಂ ದ್ವೈರಥೇ ಸವ್ಯಸಾಚಿನಾ।
08005023c ಶೋಕಾರ್ಣವೇ ನಿಮಗ್ನೋಽಹಂ ಅಪ್ಲವಃ ಸಾಗರೇ ಯಥಾ।।

ಅಂತಹ ಕರ್ಣನು ಸವ್ಯಸಾಚಿಯಿಂದ ದ್ವೈರಥದಲ್ಲಿ ಹತನಾದನೆಂದು ಕೇಳಿ ಸಾಗರದಲ್ಲಿ ಮುಳುಗಿದವನಂತೆ ನಾನು ಶೋಕಸಾಗರದಲ್ಲಿ ಮುಳುಗಿಹೋಗಿದ್ದೇನೆ.

08005024a ಈದೃಶೈರ್ಯದ್ಯಹಂ ದುಃಖೈರ್ನ ವಿನಶ್ಯಾಮಿ ಸಂಜಯ।
08005024c ವಜ್ರಾದ್ದೃಢತರಂ ಮನ್ಯೇ ಹೃದಯಂ ಮಮ ದುರ್ಭಿದಂ।।

ಸಂಜಯ! ಈ ತರಹದ ದುಃಖದಿಂದ ಕೂಡ ನನ್ನ ಈ ಹೃದಯವು ಒಡೆದುಹೋಗುತ್ತಿಲ್ಲವಲ್ಲ! ಒಡೆಯದೇ ಇರುವ ನನ್ನ ಈ ಹೃದಯವು ವಜ್ರಕ್ಕಿಂತಲೂ ಗಟ್ಟಿಯಾದುದೆಂದು ಭಾವಿಸುತ್ತೇನೆ.

08005025a ಜ್ಞಾತಿಸಂಬಂದಿಮಿತ್ರಾಣಾಮಿಮಂ ಶ್ರುತ್ವಾ ಪರಾಜಯಂ।
08005025c ಕೋ ಮದನ್ಯಃ ಪುಮಾಽಲ್ಲೋಕೇ ನ ಜಃಯಾತ್ಸೂತ ಜೀವಿತಂ।।

ಸೂತ! ಕುಲದವರು, ಸಂಬಂಧಿಗಳು ಮತ್ತು ಮಿತ್ರರ ಈ ಪರಾಜಯವನ್ನು ಕೇಳಿಯೂ ನನ್ನಂಥಹ ಬೇರೆ ಯಾವ ಪುರುಷನು ತಾನೆ ಜೀವವನ್ನು ತೊರೆಯದೇ ಇದ್ದಾನು?

08005026a ವಿಷಮಗ್ನಿಂ ಪ್ರಪಾತಂ ವಾ ಪರ್ವತಾಗ್ರಾದಹಂ ವೃಣೇ।
08005026c ನ ಹಿ ಶಕ್ಷ್ಯಾಮಿ ದುಃಖಾನಿ ಸೋಢುಂ ಕಷ್ಟಾನಿ ಸಂಜಯ।।

ಸಂಜಯ! ವಿಷ, ಅಗ್ನಿ, ಅಥವಾ ಪರ್ವತ ಮೇಲಿನಿಂದ ಪ್ರಪಾತವನ್ನೇ ಆರಿಸಿಕೊಳ್ಳುತ್ತೇನೆ. ಈ ಕಷ್ಟ-ದುಃಖಗಳನ್ನು ಸಹಿಸಲು ಶಕ್ತನಾಗಿಲ್ಲ.”

08005027 ಸಂಜಯ ಉವಾಚ।
08005027a ಶ್ರಿಯಾ ಕುಲೇನ ಯಶಸಾ ತಪಸಾ ಚ ಶ್ರುತೇನ ಚ।
08005027c ತ್ವಾಮದ್ಯ ಸಂತೋ ಮನ್ಯಂತೇ ಯಯಾತಿಮಿವ ನಾಹುಷಂ।।

ಸಂಜಯನು ಹೇಳಿದನು: “ಇಂದು ಸಂತರು ನಿನ್ನನ್ನು ಸಂಪತ್ತು, ಕುಲ, ಯಶಸ್ಸು, ತಪಸ್ಸು ಮತ್ತು ಶ್ರುತಿಗಳಲ್ಲಿ ನಾಹುಷ ಯಯಾತಿಗೆ ಸಮಾನನೆಂದು ಅಭಿಪ್ರಾಯಪಡುತ್ತಾರೆ.

08005028a ಶ್ರುತೇ ಮಹರ್ಷಿಪ್ರತಿಮಃ ಕೃತಕೃತ್ಯೋಽಸಿ ಪಾರ್ಥಿವ।
08005028c ಪರ್ಯವಸ್ಥಾಪಯಾತ್ಮಾನಂ ಮಾ ವಿಷಾದೇ ಮನಃ ಕೃಥಾಃ।।

ಶ್ರುತಿಗಳಲ್ಲಿ ಮಹರ್ಷಿಗಳ ಸಮನಾಗಿರುವೆ. ಪಾರ್ಥಿವ! ಕೃತಕೃತ್ಯನಾಗಿರುವೆ. ನಿನ್ನನ್ನು ನೀನು ಸ್ಥಿರಗೊಳಿಸಿಕೋ! ಮನಸ್ಸನ್ನು ವಿಷಾದದಲ್ಲಿ ತೊಡಗಿಸಿಕೊಳ್ಳಬೇಡ!”

08005029 ಧೃತರಾಷ್ಟ್ರ ಉವಾಚ।
08005029a ದೈವಮೇವ ಪರಂ ಮನ್ಯೇ ಧಿಕ್ಪೌರುಷಮನರ್ಥಕಂ।
08005029c ಯತ್ರ ರಾಮಪ್ರತೀಕಾಶಃ ಕರ್ಣೋಽಹನ್ಯತ ಸಂಯುಗೇ।।

ಧೃತರಾಷ್ಟ್ರನು ಹೇಳಿದನು: “ಪರಶುರಾಮನಂತಿದ್ದ ಕರ್ಣನು ಯುದ್ಧದಲ್ಲಿ ಹತನಾದನೆಂದರೆ ದೈವವೇ ಮೇಲಿನದು ಮತ್ತು ಅನರ್ಥ ಪೌರುಷಕ್ಕೆ ಧಿಕ್ಕಾರ ಎಂದನ್ನಿಸುತ್ತದೆ.

08005030a ಹತ್ವಾ ಯುಧಿಷ್ಠಿರಾನೀಕಂ ಪಾಂಚಾಲಾನಾಂ ರಥವ್ರಜಾನ್।
08005030c ಪ್ರತಾಪ್ಯ ಶರವರ್ಷೇಣ ದಿಶಃ ಸರ್ವಾ ಮಹಾರಥಃ।।
08005031a ಮೋಹಯಿತ್ವಾ ರಣೇ ಪಾರ್ಥಾನ್ವಜ್ರಹಸ್ತ ಇವಾಸುರಾನ್।
08005031c ಸ ಕಥಂ ನಿಹತಃ ಶೇತೇ ವಾತರುಗ್ಣ ಇವ ದ್ರುಮಃ।।

ಯುಧಿಷ್ಠಿರನ ಸೇನೆಯನ್ನೂ ಪಾಂಚಾಲರ ರಥರಾಶಿಗಳನ್ನೂ ಸಂಹರಿಸಿ, ಶರವರ್ಷಗಳಿಂದ ದಿಕ್ಕುಗಳನ್ನೂ ಬೆಳಗಿಸಿ, ವಜ್ರಹಸ್ತನು ಅಸುರರನ್ನು ಹೇಗೋ ಹಾಗೆ ರಣದಲ್ಲಿ ಪಾರ್ಥರನ್ನು ಭ್ರಾಂತರನ್ನಾಗಿಸಿ ಹೇಗೆ ತಾನೇ ಆ ಮಹಾರಥನು ಭಿರುಗಾಳಿಯಿಂದ ಬುಡಸಹಿತ ಕಿತ್ತು ಬೀಳಿಸಲ್ಪಟ್ಟ ವೃಕ್ಷದಂತೆ ಹತನಾಗಿ ಮಲಗಿದ್ದಾನೆ?

08005032a ಶೋಕಸ್ಯಾಂತಂ ನ ಪಶ್ಯಾಮಿ ಸಮುದ್ರಸ್ಯೇವ ವಿಪ್ಲುಕಾಃ।
08005032c ಚಿಂತಾ ಮೇ ವರ್ಧತೇ ತೀವ್ರಾ ಮುಮೂರ್ಷಾ ಚಾಪಿ ಜಾಯತೇ।।

ಸಮುದ್ರದ ದಡವನ್ನೇ ಕಾಣದ ನಾವಿಗನಂತೆ ನಾನು ಈ ಶೋಕಸಾಗರದ ಅಂತ್ಯವನ್ನೇ ಕಾಣದಂತಾಗಿದ್ದೇನೆ. ನನ್ನ ಚಿಂತೆಯು ಹೆಚ್ಚಾಗುತ್ತಿದೆ. ಜೀವನದಲ್ಲಿ ತೀವ್ರ ಜಿಗುಪ್ಸೆಯೂ ಹುಟ್ಟಿಕೊಂಡಿದೆ.

08005033a ಕರ್ಣಸ್ಯ ನಿಧನಂ ಶ್ರುತ್ವಾ ವಿಜಯಂ ಫಲ್ಗುನಸ್ಯ ಚ।
08005033c ಅಶ್ರದ್ಧೇಯಮಹಂ ಮನ್ಯೇ ವಧಂ ಕರ್ಣಸ್ಯ ಸಂಜಯ।।

ಸಂಜಯ! ಕರ್ಣನ ನಿಧನ ಮತ್ತು ಫಲ್ಗುನನ ವಿಜಯದ ಕುರಿತು ಕೇಳಿ ಕರ್ಣನ ವಧೆಯು ನಂಬಲಿಕ್ಕಾಗದೇ ಇರುವಂತಹುದೆಂದು ಭಾವಿಸುತ್ತೇನೆ.

08005034a ವಜ್ರಸಾರಮಯಂ ನೂನಂ ಹೃದಯಂ ಸುದೃಢಂ ಮಮ।
08005034c ಯಚ್ಚ್ರುತ್ವಾ ಪುರುಷವ್ಯಾಘ್ರಂ ಹತಂ ಕರ್ಣಂ ನ ದೀರ್ಯತೇ।।

ಪುರುಷವ್ಯಾಘ್ರ ಕರ್ಣನು ಹತನಾದನೆಂದು ಕೇಳಿಯೂ ಕೂಡ ಒಡೆದುಹೋಗದೇ ಇರುವ ನನ್ನ ಈ ಸುದೃಢ ಹೃದಯವು ನಿಜವಾಗಿಯೂ ವಜ್ರದಿಂದ ಮಾಡಿದ್ದಾಗಿರಬಹುದು!

08005035a ಆಯುರ್ನೂನಂ ಸುದೀರ್ಘಂ ಮೇ ವಿಹಿತಂ ದೈವತೈಃ ಪುರಾ।
08005035c ಯತ್ರ ಕರ್ಣಂ ಹತಂ ಶ್ರುತ್ವಾ ಜೀವಾಮೀಹ ಸುದುಃಖಿತಃ।।

ಕರ್ಣನು ಹತನಾದನೆಂದು ಕೇಳಿಯೂ ಕೂಡ ಸುದುಃಖಿತನಾದ ನಾನು ಜೀವಿಸಿದ್ದೇನೆಂದರೆ, ಹಿಂದೆ ದೇವತೆಗಳು ನನಗೆ ಸುದೀರ್ಘ ಆಯುಸ್ಸನ್ನು ನೀಡಿರುವುದು ಸತ್ಯ.

08005036a ಧಿಗ್ಜೀವಿತಮಿದಂ ಮೇಽದ್ಯ ಸುಹೃದ್ಧೀನಸ್ಯ ಸಂಜಯ।
08005036c ಅದ್ಯ ಚಾಹಂ ದಶಾಂ ಏತಾಂ ಗತಃ ಸಂಜಯ ಗರ್ಹಿತಾಂ।
08005036e ಕೃಪಣಂ ವರ್ತಯಿಷ್ಯಾಮಿ ಶೋಚ್ಯಃ ಸರ್ವಸ್ಯ ಮಂದಧೀಃ।।

ಸಂಜಯ! ನನ್ನ ಈ ಜೀವಿತಕ್ಕೇ ಧಿಕ್ಕಾರ! ಇಂದು ನಾನು ಸುಹೃದಯರನ್ನು ಕಳೆದುಕೊಂಡಿದ್ದೇನೆ. ಸಂಜಯ! ಇಂದು ನಾನು ನಿಂದನೀಯ ದಶೆಯನ್ನು ಹೊಂದಿದ್ದೇನೆ. ಸಾಮಾನ್ಯನಂತೆ ವರ್ತಿಸುತ್ತಿದ್ದೇನೆ. ಮೂಢನಾದ ನಾನು ಸರ್ವರಿಗೂ ಶೋಚನೀಯನಾಗಿದ್ದೇನೆ.

08005037a ಅಹಂ ಏವ ಪುರಾ ಭೂತ್ವಾ ಸರ್ವಲೋಕಸ್ಯ ಸತ್ಕೃತಃ।
08005037c ಪರಿಭೂತಃ ಕಥಂ ಸೂತ ಪುನಃ ಶಕ್ಷ್ಯಾಮಿ ಜೀವಿತುಂ।
08005037e ದುಃಖಾತ್ಸುದುಃಖಂ ವ್ಯಸನಂ ಪ್ರಾಪ್ತವಾನಸ್ಮಿ ಸಂಜಯ।।

ಸೂತ! ಹಿಂದೆ ಸರ್ವಲೋಕಗಳಿಂದಲೂ ಸತ್ಕೃತನಾಗಿದ್ದ ನಾನು ಹೇಗೆ ತಾನೇ ಶತ್ರುಗಳಿಂದ ಅವಮಾನಿತನಾಗಿ ಜೀವಿಸಬಲ್ಲೆ? ಸಂಜಯ! ದುಃಖದ ಮೇಲೆ ದುಃಖದ ವ್ಯಸನವು ನನಗೆ ಬಂದೊದಗಿದೆಯಲ್ಲಾ!

08005038a ತಸ್ಮಾದ್ಭೀಷ್ಮವಧೇ ಚೈವ ದ್ರೋಣಸ್ಯ ಚ ಮಹಾತ್ಮನಃ।
08005038c ನಾತ್ರ ಶೇಷಂ ಪ್ರಪಶ್ಯಾಮಿ ಸೂತಪುತ್ರೇ ಹತೇ ಯುಧಿ।।

ಭೀಷ್ಮವಧೆ, ನಂತರ ಮಹಾತ್ಮ ದ್ರೋಣನ ವಧೆ ಹಾಗೂ ಸೂತಪುತ್ರನು ಹತನಾದ ನಂತರ ಯುದ್ಧದಲ್ಲಿ ಉಳಿದುಹೋಗಿರುವವರನ್ನು ಯಾರನ್ನೂ ನಾನು ಕಾಣುತ್ತಿಲ್ಲ.

08005039a ಸ ಹಿ ಪಾರಂ ಮಹಾನಾಸೀತ್ಪುತ್ರಾಣಾಂ ಮಮ ಸಂಜಯ।
08005039c ಯುದ್ಧೇ ವಿನಿಹತಃ ಶೂರೋ ವಿಸೃಜನ್ಸಾಯಕಾನ್ಬಹೂನ್।।

ಸಂಜಯ! ಯುದ್ಧದಲ್ಲಿ ಅನೇಕ ಸಾಯಕಗಳನ್ನು ಪ್ರಯೋಗಿಸಿ ಸಂಹರಿಸುತ್ತಿದ್ದ ಆ ಶೂರನೇ ನನ್ನ ಪುತ್ರರಿಗೆ ತೀರಪ್ರಾಯನಾಗಿದ್ದನು.

08005040a ಕೋ ಹಿ ಮೇ ಜೀವಿತೇನಾರ್ಥಸ್ತಂ ಋತೇ ಪುರುಷರ್ಷಭಂ।
08005040c ರಥಾದತಿರಥೋ ನೂನಮಪತತ್ಸಾಯಕಾರ್ದಿತಃ।।

ಆ ಪುರುಷರ್ಷಭನ ಹೊರತಾಗಿ ನನ್ನ ಜೀವಿತದಲ್ಲಿ ಇನ್ನು ಅರ್ಥವೇನಿದೆ? ಸಾಯಕಾರ್ದಿತ ಆ ಅತಿರಥನು ನಿಜವಾಗಿಯೂ ರಥದಿಂದ ಕೆಳಕ್ಕೆ ಬಿದ್ದಿರಬೇಕು!

08005041a ಪರ್ವತಸ್ಯೇವ ಶಿಖರಂ ವಜ್ರಪಾತವಿದಾರಿತಂ।
08005041c ಶಯೀತ ಪೃಥಿವೀಂ ನೂನಂ ಶೋಭಯನ್ರುಧಿರೋಕ್ಷಿತಃ।
08005041e ಮಾತಂಗ ಇವ ಮತ್ತೇನ ಮಾತಂಗೇನ ನಿಪಾತಿತಃ।।

ವಜ್ರಾಯುಧ ಪ್ರಹಾರದಿಂದ ಪರ್ವತಶಿಖರವು ಕೆಳಗುರುಳುವಂತೆ, ಮದಿಸಿದ ಮಾತಂಗದಿಂದ ಕೆಳಗುರುಳಸಲ್ಪಟ್ಟ ಮಾತಂಗದಂತೆ ರುಧಿರೋಕ್ಷಿತನಾಗಿ ಮಲಗಿರುವ ಅವನು ಪೃಥ್ವಿಯನ್ನೇ ಶೋಭೆಗೊಳಿಸಿದ್ದಾನೆ.

08005042a ಯದ್ಬಲಂ ಧಾರ್ತರಾಷ್ಟ್ರಾಣಾಂ ಪಾಂಡವಾನಾಂ ಯತೋ ಭಯಂ।
08005042c ಸೋಽರ್ಜುನೇನ ಹತಃ ಕರ್ಣಃ ಪ್ರತಿಮಾನಂ ಧನುಷ್ಮತಾಂ।।

ಧಾರ್ತರಾಷ್ಟ್ರರಿಗೆ ಬಲವಾಗಿದ್ದ, ಪಾಂಡವರಿಗೆ ಭಯವಾಗಿದ್ದ ಮತ್ತು ಧನುಷ್ಮತರಿಗೆ ಆದರ್ಶಪ್ರಾಯ ಕರ್ಣನು ಅರ್ಜುನನಿಂದ ಹತನಾದನು!

08005043a ಸ ಹಿ ವೀರೋ ಮಹೇಷ್ವಾಸಃ ಪುತ್ರಾಣಾಂ ಅಭಯಂಕರಃ।
08005043c ಶೇತೇ ವಿನಿಹತೋ ವೀರಃ ಶಕ್ರೇಣೇವ ಯಥಾ ಬಲಃ।।

ಪುತ್ರರಿಗೆ ಅಭಯಂಕರನಾಗಿದ್ದ ಮತ್ತು ಶಕ್ರನಷ್ಟೇ ಬಲಶಾಲಿಯಾಗಿದ್ದ ಆ ವೀರ ಮಹೇಷ್ವಾಸ ವೀರನು ಹತನಾಗಿ ಮಲಗಿದ್ದಾನೆ!

08005044a ಪಂಗೋರಿವಾಧ್ವಗಮನಂ ದರಿದ್ರಸ್ಯೇವ ಕಾಮಿತಂ।
08005044c ದುರ್ಯೋಧನಸ್ಯ ಚಾಕೂತಂ ತೃಷಿತಸ್ಯೇವ ಪಿಪ್ಲುಕಾಃ।।

ಹೆಳವನಿಗೆ ಮಾರ್ಗಗಮನಮಾಡಲು ಸಾಧ್ಯವಾಗದಂತೆ, ದರಿದ್ರನ ಆಸೆಗಳು ಪೂರೈಸದಂತೆ, ಜಲಬಿಂದುಗಳು ಬಾಯಾರಿದವನ ಬಾಯಾರಿಕೆಯನ್ನು ಹೋಗಲಾಡಿಸದಂತೆ ದುರ್ಯೋಧನನ ಆಶಯಗಳೂ ಕೈಗೂಡದಂತಾಯಿತು.

08005045a ಅನ್ಯಥಾ ಚಿಂತಿತಂ ಕಾರ್ಯಂ ಅನ್ಯಥಾ ತತ್ತು ಜಾಯತೇ।
08005045c ಅಹೋ ನು ಬಲವದ್ದೈವಂ ಕಾಲಶ್ಚ ದುರತಿಕ್ರಮಃ।।

ಯಾವುದೋ ರೀತಿಯಲ್ಲಿ ಯೋಚಿಸಿ ಕಾರ್ಯಮಾಡಿದರೆ ಆ ಕಾರ್ಯವು ಬೇರೆಯೇ ರೀತಿಯಲ್ಲಿ ನಡೆದುಹೋಗುತ್ತದೆ. ಅಯ್ಯೋ! ದೈವವೇ ಬಲಶಾಲಿಯು. ಕಾಲವನ್ನು ಮೀರಲು ಸಾಧ್ಯವಿಲ್ಲ!

08005046a ಪಲಾಯಮಾನಃ ಕೃಪಣಂ ದೀನಾತ್ಮಾ ದೀನಪೌರುಷಃ।
08005046c ಕಚ್ಚಿನ್ನ ನಿಹತಃ ಸೂತ ಪುತ್ರೋ ದುಃಶಾಸನೋ ಮಮ।।

ಸೂತ! ನನ್ನ ಪುತ್ರ ದುಃಶಾಸನನು ಕೃಪಣನಾಗಿ, ದೀನಾತ್ಮನಾಗಿ, ದೀನಪೌರುಷನಾಗಿ ಪಲಾಯನಮಾಡುತ್ತಿರುವಾಗ ಹತನಾಗಲಿಲ್ಲ ತಾನೇ?

08005047a ಕಚ್ಚಿನ್ನ ನೀಚಾಚರಿತಂ ಕೃತವಾಂಸ್ತಾತ ಸಂಯುಗೇ।
08005047c ಕಚ್ಚಿನ್ನ ನಿಹತಃ ಶೂರೋ ಯಥಾ ನ ಕ್ಷತ್ರಿಯಾ ಹತಾಃ।।

ಅಯ್ಯಾ! ಸಂಯುಗದಲ್ಲಿ ಅವನು ನೀಚರಂತೆ ನಡೆದುಕೊಳ್ಳಲಿಲ್ಲ ತಾನೇ? ಕ್ಷತ್ರಿಯರು ಹತರಾಗುವಂತೆಯೇ ನನ್ನ ಶೂರನೂ ಹತನಾದ ತಾನೇ?

08005048a ಯುಧಿಷ್ಠಿರಸ್ಯ ವಚನಂ ಮಾ ಯುದ್ಧಮಿತಿ ಸರ್ವದಾ।
08005048c ದುರ್ಯೋಧನೋ ನಾಭ್ಯಗೃಹ್ಣಾನ್ಮೂಢಃ ಪಥ್ಯಮಿವೌಷಧಂ।।

ಯುದ್ಧವನ್ನು ಮಾಡಬೇಡ ಎಂದು ಸರ್ವದಾ ಹೇಳುತ್ತಿದ್ದ ಯುಧಿಷ್ಠಿರನ ಪಥ್ಯ-ಔಷಧಗಳಂತಿದ್ದ ಮಾತನ್ನು ಮೂಢ ದುರ್ಯೋಧನನು ಸ್ವೀಕರಿಸಲಿಲ್ಲ.

08005049a ಶರತಲ್ಪೇ ಶಯಾನೇನ ಭೀಷ್ಮೇಣ ಸುಮಹಾತ್ಮನಾ।
08005049c ಪಾನೀಯಂ ಯಾಚಿತಃ ಪಾರ್ಥಃ ಸೋಽವಿಧ್ಯನ್ಮೇದಿನೀತಲಂ।।

ಶರತಲ್ಪದಲ್ಲಿ ಮಲಗಿದ್ದ ಮಹಾತ್ಮ ಭೀಷ್ಮನು ಪಾನೀಯವನ್ನು ಯಾಚಿಸಲು ಪಾರ್ಥನು ಮೇದಿನೀತಲವನ್ನು ಭೇದಿಸಿದ್ದನು.

08005050a ಜಲಸ್ಯ ಧಾರಾಂ ವಿಹಿತಾಂ ದೃಷ್ಟ್ವಾ ತಾಂ ಪಾಂಡವೇನ ಹ।
08005050c ಅಬ್ರವೀತ್ಸ ಮಹಾಬಾಹುಸ್ತಾತ ಸಂಶಾಮ್ಯ ಪಾಂಡವೈಃ।।

ಪಾಂಡವನು ಜಲಧಾರೆಯನ್ನು ತಂದಿದ್ದನ್ನು ನೋಡಿ ಆ ಮಹಾಬಾಹುವು “ಮಗನೇ! ಪಾಂಡವರೊಂದಿಗೆ ಶಾಂತಿಸಂಧಾನ ಮಾಡಿಕೋ!” ಎಂದು ಹೇಳಿದ್ದನು.

08005051a ಪ್ರಶಮಾದ್ಧಿ ಭವೇಚ್ಚಾಂತಿರ್ಮದಂತಂ ಯುದ್ಧಮಸ್ತು ಚ।
08005051c ಭ್ರಾತೃಭಾವೇನ ಪೃಥಿವೀಂ ಭುಂಕ್ಷ್ವ ಪಾಂಡುಸುತೈಃ ಸಹ।।

“ಸಂಧಿಯಿಂದ ಶಾಂತಿಯುಂಟಾಗುತ್ತದೆ. ನನ್ನ ಅಂತ್ಯದೊಂದಿಗೆ ನಿಮ್ಮ ಯುದ್ಧದ ಅಂತ್ಯವೂ ಆಗಲಿ. ಪಾಂಡುಸುತರೊಂದಿಗೆ ಭ್ರಾತೃಭಾವದಿಂದ ಪೃಥ್ವಿಯನ್ನು ಭೋಗಿಸು!”

08005052a ಅಕುರ್ವನ್ವಚನಂ ತಸ್ಯ ನೂನಂ ಶೋಚತಿ ಮೇ ಸುತಃ।
08005052c ತದಿದಂ ಸಮನುಪ್ರಾಪ್ತಂ ವಚನಂ ದೀರ್ಘದರ್ಶಿನಃ।।

ಆ ದೀರ್ಘದರ್ಶಿಯ ಮಾತಿನಂತೆ ಮಾಡದೇ ಇದ್ದುದರಿಂದಲೇ ಇದು ಪ್ರಾಪ್ತವಾಗಿದೆ ಎಂದು ನನ್ನ ಮಗನು ಈಗ ಶೋಕಿಸುತ್ತಿರಬಹುದು.

08005053a ಅಹಂ ತು ನಿಹತಾಮಾತ್ಯೋ ಹತಪುತ್ರಶ್ಚ ಸಂಜಯ।
08005053c ದ್ಯೂತತಃ ಕೃಚ್ಚ್ರಮಾಪನ್ನೋ ಲೂನಪಕ್ಷ ಇವ ದ್ವಿಜಃ।।

ಸಂಜಯ! ನಾನಾದರೋ ದ್ಯೂತದ ಕಾರಣದಿಂದಾಗಿ ಅಮಾತ್ಯ-ಪುತ್ರರನ್ನು ಕಳೆದುಕೊಂಡು, ರೆಕ್ಕೆಗಳನ್ನು ಕಳೆದುಕೊಂಡ ಪಕ್ಷಿಯಂತೆ ಮಹಾ ಕಷ್ಟದಲ್ಲಿ ಸಿಲುಕಿದ್ದೇನೆ.

08005054a ಯಥಾ ಹಿ ಶಕುನಿಂ ಗೃಹ್ಯ ಚಿತ್ತ್ವಾ ಪಕ್ಷೌ ಚ ಸಂಜಯ।
08005054c ವಿಸರ್ಜಯಂತಿ ಸಂಹೃಷ್ಟಾಃ ಕ್ರೀಡಮಾನಾಃ ಕುಮಾರಕಾಃ।।
08005055a ಚಿನ್ನಪಕ್ಷತಯಾ ತಸ್ಯ ಗಮನಂ ನೋಪಪದ್ಯತೇ।
08005055c ತಥಾಹಮಪಿ ಸಂಪ್ರಾಪ್ತೋ ಲೂನಪಕ್ಷ ಇವ ದ್ವಿಜಃ।।

ಸಂಜಯ! ಆಟವಾಡುತ್ತಿರುವ ಬಾಲಕರು ಪಕ್ಷಿಯನ್ನು ಹಿಡಿದು ಅದರ ರೆಕ್ಕೆಗಳನ್ನು ಹೇಗೆ ಕತ್ತರಿಸಿ ಬಿಟ್ಟು ಬಿಡುತ್ತಾರೋ ಹಾಗೆ ನಾನೂ ಕೂಡ ರೆಕ್ಕೆಗಳನ್ನು ಕಳೆದುಕೊಂಡು ಎಲ್ಲಿಗೆ ಹಾರಿಹೋಗಬೇಕೆಂದು ತಿಳಿಯದೇ ಕಷ್ಟಕ್ಕೊಳಗಾಗಿದ್ದೇನೆ.

08005056a ಕ್ಷೀಣಃ ಸರ್ವಾರ್ಥಹೀನಶ್ಚ ನಿರ್ಬಂದುರ್ಜ್ಞಾತಿವರ್ಜಿತಃ।
08005056c ಕಾಂ ದಿಶಂ ಪ್ರತಿಪತ್ಸ್ಯಾಮಿ ದೀನಃ ಶತ್ರುವಶಂ ಗತಃ।।

ಕ್ಷೀಣನಾಗಿದ್ದೇನೆ. ಸರ್ವಸಂಪತ್ತನ್ನೂ ಕಳೆದುಕೊಂಡಿದ್ದೇನೆ. ಬಂಧು-ಬಾಂಧವ ರಹಿತನಾಗಿದ್ದೇನೆ. ಶತ್ರುವಶನಾಗಿ ದೀನನಾಗಿರುವ ನಾನು ಯಾವ ದಿಕ್ಕಿನಲ್ಲಿ ಓಡಿ ಹೋಗಲಿ?

08005057a ದುರ್ಯೋಧನಸ್ಯ ವೃದ್ಧ್ಯರ್ಥಂ ಪೃಥಿವೀಂ ಯೋಽಜಯತ್ಪ್ರಭುಃ।
08005057c ಸ ಜಿತಃ ಪಾಂಡವೈಃ ಶೂರೈಃ ಸಮರ್ಥೈರ್ವೀರ್ಯಶಾಲಿಭಿಃ।।

ದುರ್ಯೋಧನನ ರಾಜ್ಯವೃದ್ಧಿಗಾಗಿ ಪ್ರಭು ಕರ್ಣನು ಪೃಥ್ವಿಯನ್ನೇ ಗೆದ್ದಿದ್ದನು. ಅವನು ವೀರ್ಯಶಾಲೀ ಸಮರ್ಥ ಶೂರ ಪಾಂಡವರಿಗೆ ಸೋತನು!

08005058a ತಸ್ಮಿನ್ ಹತೇ ಮಹೇಷ್ವಾಸೇ ಕರ್ಣೇ ಯುಧಿ ಕಿರೀಟಿನಾ।
08005058c ಕೇ ವೀರಾಃ ಪರ್ಯವರ್ತಂತ ತನ್ಮಮಾಚಕ್ಷ್ವ ಸಂಜಯ।।

ಸಂಜಯ! ಆ ಮಹೇಷ್ವಾಸ ಕರ್ಣನು ಯುದ್ಧದಲ್ಲಿ ಕಿರೀಟಿಯಿಂದ ಹತನಾದಾಗ ಅವನನ್ನು ಯಾವ ವೀರರು ಸುತ್ತುವರೆದಿದ್ದರು ಎನ್ನುವುದನ್ನು ನನಗೆ ಹೇಳು!

08005059a ಕಚ್ಚಿನ್ನೈಕಃ ಪರಿತ್ಯಕ್ತಃ ಪಾಂಡವೈರ್ನಿಹತೋ ರಣೇ।
08005059c ಉಕ್ತಂ ತ್ವಯಾ ಪುರಾ ವೀರ ಯಥಾ ವೀರಾ ನಿಪಾತಿತಾಃ।।

ಪರಿತ್ಯಕ್ತನಾಗಿ ರಣದಲ್ಲಿ ಏಕಾಂಗಿಯಾಗಿದ್ದಾಗ ಅವನನ್ನು ಪಾಂಡವರು ಸಂಹರಿಸಲಿಲ್ಲ ತಾನೇ? ಹಿಂದೆ ನೀನು ವೀರನು ಕೆಳಗುರುಳಿಸಲ್ಪಟ್ಟನು ಎಂದು ಹೇಳಿದ್ದೆ!

08005060a ಭೀಷ್ಮಮಪ್ರತಿಯುಧ್ಯಂತಂ ಶಿಖಂಡೀ ಸಾಯಕೋತ್ತಮೈಃ।
08005060c ಪಾತಯಾಮಾಸ ಸಮರೇ ಸರ್ವಶಸ್ತ್ರಭೃತಾಂ ವರಂ।।

ಸಮರದಲ್ಲಿ ಸರ್ವಶಸ್ತ್ರಭೃತ ಶ್ರೇಷ್ಠ ಭೀಷ್ಮನು ಯುದ್ಧಮಾಡದೇ ಇದ್ದಾಗ ಅವನನ್ನು ಶಿಖಂಡಿಯು ಉತ್ತಮ ಸಾಯಕಗಳಿಂದ ಕೆಳಗುರುಳಿಸಿದನು.

08005061a ತಥಾ ದ್ರೌಪದಿನಾ ದ್ರೋಣೋ ನ್ಯಸ್ತಸರ್ವಾಯುಧೋ ಯುಧಿ।
08005061c ಯುಕ್ತಯೋಗೋ ಮಹೇಷ್ವಾಸಃ ಶರೈರ್ಬಹುಭಿರಾಚಿತಃ।
08005061e ನಿಹತಃ ಖಡ್ಗಮುದ್ಯಮ್ಯ ಧೃಷ್ಟದ್ಯುಮ್ನೇನ ಸಂಜಯ।।

ಸಂಜಯ! ಹಾಗೆಯೇ ಯುದ್ಧದಲ್ಲಿ ಮಹೇಷ್ವಾಸ ದ್ರೋಣನು ಅನೇಕ ಶರಗಳಿಂದ ಗಾಯಗೊಂಡು ಸರ್ವಾಯುಧಗಳನ್ನೂ ಕೆಳಗಿಟ್ಟು ಯೋಗಯುಕ್ತನಾಗಿದ್ದಾಗ ದ್ರೌಪದಿ ಧೃಷ್ಟದ್ಯುಮ್ನನು ಖಡ್ಗವನ್ನು ಮೇಲೆತ್ತಿ ಅವನನ್ನು ಸಂಹರಿಸಿದನು!

08005062a ಅಂತರೇಣ ಹತಾವೇತೌ ಚಲೇನ ಚ ವಿಶೇಷತಃ।
08005062c ಅಶ್ರೌಷಮಹಮೇತದ್ವೈ ಭೀಷ್ಮದ್ರೋಣೌ ನಿಪಾತಿತೌ।।

ವಿಶೇಷ ದುರ್ಬಲರಾಗಿದ್ದಾಗ ಚಲದಿಂದ ಭೀಷ್ಮ-ದ್ರೋಣರು ಕೆಳಗುರುಳಿಸಲ್ಪಟ್ಟರು ಎಂದು ನನಗೆ ನೀನು ಹೇಳಿದ್ದೆ.

08005063a ಭೀಷ್ಮದ್ರೋಣೌ ಹಿ ಸಮರೇ ನ ಹನ್ಯಾದ್ವಜ್ರಭೃತ್ಸ್ವಯಂ।
08005063c ನ್ಯಾಯೇನ ಯುಧ್ಯಮಾನೌ ಹಿ ತದ್ವೈ ಸತ್ಯಂ ಬ್ರವೀಮಿ ತೇ।।

ಏಕೆಂದರೆ ಸಮರದಲ್ಲಿ ಯುದ್ಧಮಾಡುತ್ತಿದ್ದ ಭೀಷ್ಮ-ದ್ರೋಣರನ್ನು ಸ್ವಯಂ ವಜ್ರಭೃತನೇ ನ್ಯಾಯಮಾರ್ಗದಲ್ಲಿ ಸಂಹರಿಸಲಾರ! ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ.

08005064a ಕರ್ಣಂ ತ್ವಸ್ಯಂತಮಸ್ತ್ರಾಣಿ ದಿವ್ಯಾನಿ ಚ ಬಹೂನಿ ಚ।
08005064c ಕಥಮಿಂದ್ರೋಪಮಂ ವೀರಂ ಮೃತ್ಯುರ್ಯುದ್ಧೇ ಸಮಸ್ಪೃಶತ್।।

ಯುದ್ಧದಲ್ಲಿ ಅನೇಕ ದಿವ್ಯಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದ ಇಂದ್ರೋಪಮ ವೀರ ಕರ್ಣನನ್ನು ಮೃತ್ಯುವು ಹೇಗೆ ಮುಟ್ಟಿತು?

08005065a ಯಸ್ಯ ವಿದ್ಯುತ್ಪ್ರಭಾಂ ಶಕ್ತಿಂ ದಿವ್ಯಾಂ ಕನಕಭೂಷಣಾಂ।
08005065c ಪ್ರಾಯಚ್ಚದ್ದ್ವಿಷತಾಂ ಹಂತ್ರೀಂ ಕುಂಡಲಾಭ್ಯಾಂ ಪುರಂದರಃ।।
08005066a ಯಸ್ಯ ಸರ್ಪಮುಖೋ ದಿವ್ಯಃ ಶರಃ ಕನಕಭೂಷಣಃ।
08005066c ಅಶೇತ ನಿಹತಃ ಪತ್ರೀ ಚಂದನೇಷ್ವರಿಸೂದನಃ।।

ಯಾರ ಕುಂಡಲಗಳನ್ನು ಸ್ವೀಕರಿಸಿ ಪುರಂದರನು ಪ್ರತಿಯಾಗಿ ಕನಕಭೂಷಣ ವಿದ್ಯುತ್ಪಭೆಯ ದಿವ್ಯ ಶಕ್ತಿಯನ್ನು ನೀಡಿದ್ದನೋ, ಯಾರಲ್ಲಿ ಕನಕಭೂಷಣ ರೆಕ್ಕೆಯುಳ್ಳ ಸರ್ಪಮುಖದ ದಿವ್ಯ ಶರವಿದ್ದಿತೋ ಆ ಶತ್ರುಹಂತಕ ಅರಿಸೂದನನು ಹೇಗೆ ಹತನಾದನು?

08005067a ಭೀಷ್ಮದ್ರೋಣಮುಖಾನ್ವೀರಾನ್ಯೋಽವಮನ್ಯ ಮಹಾರಥಾನ್।
08005067c ಜಾಮದಗ್ನ್ಯಾನ್ಮಹಾಘೋರಂ ಬ್ರಾಹ್ಮಮಸ್ತ್ರಮಶಿಕ್ಷತ।।
08005068a ಯಶ್ಚ ದ್ರೋಣಮುಖಾನ್ದೃಷ್ಟ್ವಾ ವಿಮುಖಾನರ್ದಿತಾಂ ಶರೈಃ।
08005068c ಸೌಭದ್ರಸ್ಯ ಮಹಾಬಾಹುರ್ವ್ಯಧಮತ್ಕಾರ್ಮುಕಂ ಶರೈಃ।।
08005069a ಯಶ್ಚ ನಾಗಾಯುತಪ್ರಾಣಂ ವಾತರಂಹಸಮಚ್ಯುತಂ।
08005069c ವಿರಥಂ ಭ್ರಾತರಂ ಕೃತ್ವಾ ಭೀಮಸೇನಮುಪಾಹಸತ್।।
08005070a ಸಹದೇವಂ ಚ ನಿರ್ಜಿತ್ಯ ಶರೈಃ ಸನ್ನತಪರ್ವಭಿಃ।
08005070c ಕೃಪಯಾ ವಿರಥಂ ಕೃತ್ವಾ ನಾಹನದ್ಧರ್ಮವಿತ್ತಯಾ।।
08005071a ಯಶ್ಚ ಮಾಯಾಸಹಸ್ರಾಣಿ ಧ್ವಂಸಯಿತ್ವಾ ರಣೋತ್ಕಟಂ।
08005071c ಘಟೋತ್ಕಚಂ ರಾಕ್ಷಸೇಂದ್ರಂ ಶಕ್ರಶಕ್ತ್ಯಾಭಿಜಘ್ನಿವಾನ್।।
08005072a ಏತಾನಿ ದಿವಸಾನ್ಯಸ್ಯ ಯುದ್ಧೇ ಭೀತೋ ಧನಂಜಯಃ।
08005072c ನಾಗಮದ್ದ್ವೈರಥಂ ವೀರಃ ಸ ಕಥಂ ನಿಹತೋ ರಣೇ।।

ಜಾಮದಗ್ನಿಯಿಂದ ಮಹಾಘೋರ ಬ್ರಹ್ಮಾಸ್ತ್ರವನ್ನು ಕಲಿತುಕೊಂಡು ಭೀಷ್ಮ-ದ್ರೋಣರೇ ಮೊದಲಾದ ಮಹಾರಥ ವೀರರನ್ನು ಕೀಳಾಗಿ ಕಾಣುತ್ತಿದ್ದ, ಶರಪೀಡಿತ ದ್ರೋಣಮುಖ್ಯರು ವಿಮುಖರಾಗುತ್ತಿದ್ದುದನ್ನು ನೋಡಿ ಮಹಾಬಾಹು ಸೌಭದ್ರನ ಕಾರ್ಮುಕವನ್ನು ಶರಗಳಿಂದ ತುಂಡರಿಸಿದ, ಸಾವಿರ ಆನೆಗಳ ಪ್ರಾಣವುಳ್ಳ, ವಾಯುವಿನಂತೆ ವೇಗವುಳ್ಳ, ಅಚ್ಯುತ. ಸಹೋದರ ಭೀಮನನನ್ನು ವಿರಥನನ್ನಾಗಿಸಿ ಅಪಹಾಸ್ಯಮಾಡಿದ, ಸಹದೇವನನ್ನು ಸನ್ನತಪರ್ವ ಶರಗಳಿಂದ ಸೋಲಿಸಿ ವಿರಥನನ್ನಾಗಿ ಮಾಡಿ ಧರ್ಮವನ್ನು ತಿಳಿದು ಕೃಪೆಯಿಂದ ಸಂಹರಿಸದಿದ್ದ, ಸಹಸ್ರ ಮಾಯೆಗಳನ್ನು ಧ್ವಂಸಿಸಿ ರಣೋತ್ಕಟ ರಾಕ್ಷಸೇಂದ್ರ ಘಟೋತ್ಕಚನನ್ನು ಶಕ್ರನಿತ್ತ ಶಕ್ತಿಯಿಂದ ಸಂಹರಿಸಿದ, ಯಾರಿಗೆ ಹೆದರಿ ಧನಂಜಯನು ಇಷ್ಟು ದಿವಸಗಳು ದ್ವೈರಥಯುದ್ಧಕ್ಕೆ ಬಂದಿರಲಿಲ್ಲವೋ ಅಂತಹ ಮಹಾವೀರನು ಹೇಗೆ ರಣದಲ್ಲಿ ಹತನಾದನು?

08005073a ರಥಸಂಗೋ ನ ಚೇತ್ತಸ್ಯ ಧನುರ್ವಾ ನ ವ್ಯಶೀರ್ಯತ।
08005073c ನ ಚೇದಸ್ತ್ರಾಣಿ ನಿರ್ಣೇಶುಃ ಸ ಕಥಂ ನಿಹತಃ ಪರೈಃ।।

ಅವನ ರಥವು ತುಂಡಾಗಿರದಿದ್ದರೆ, ಧನುಸ್ಸು ತುಂಡಾಗಿರದಿದ್ದರೆ, ಅಥವಾ ಅಸ್ತ್ರಗಳೇನಾದರೂ ಹಾಳಾಗಿರದಿದ್ದರೆ ಅವನು ಹೇಗೆ ತಾನೆ ಶತ್ರುಗಳಿಂದ ಹತನಾಗುತ್ತಿದ್ದನು?

08005074a ಕೋ ಹಿ ಶಕ್ತೋ ರಣೇ ಕರ್ಣಂ ವಿಧುನ್ವಾನಂ ಮಹದ್ಧನುಃ।
08005074c ವಿಮುಂಚಂತಂ ಶರಾನ್ಘೋರಾನ್ದಿವ್ಯಾನ್ಯಸ್ತ್ರಾಣಿ ಚಾಹವೇ।
08005074e ಜೇತುಂ ಪುರುಷಶಾರ್ದೂಲಂ ಶಾರ್ದೂಲಮಿವ ವೇಗಿತಂ।।

ಮಹಾಧನುಸ್ಸನ್ನು ಟೇಂಕರಿಸುವ, ಘೋರಶರಗಳನ್ನೂ ದಿವ್ಯಾಸ್ತ್ರಗಳನ್ನೂ ಯುದ್ಧದಲ್ಲಿ ಪ್ರಯೋಗಿಸುವ, ಶಾರ್ದೂಲದಂತಹ ವೇಗವುಳ್ಳ ಆ ಪುರುಷಶಾರ್ದೂಲ ಕರ್ಣನನ್ನು ರಣದಲ್ಲಿ ಗೆಲ್ಲಲು ಯಾರುತಾನೆ ಶಕ್ಯರು?

08005075a ಧ್ರುವಂ ತಸ್ಯ ಧನುಶ್ಚಿನ್ನಂ ರಥೋ ವಾಪಿ ಗತೋ ಮಹೀಂ।
08005075c ಅಸ್ತ್ರಾಣಿ ವಾ ಪ್ರನಷ್ಟಾನಿ ಯಥಾ ಶಂಸಸಿ ಮೇ ಹತಂ।
08005075e ನ ಹ್ಯನ್ಯದನುಪಶ್ಯಾಮಿ ಕಾರಣಂ ತಸ್ಯ ನಾಶನೇ।।

ಅವನು ಹತನಾದನೆಂದು ನೀನು ನನಗೆ ಹೇಳುತ್ತಿರುವೆ! ನಿಶ್ಚಯವಾಗಿಯೂ ಅವನ ಧನುಸ್ಸು ತುಂಡಾಗಿದ್ದಿರಬೇಕು ಅಥವಾ ರಥವು ನೆಲದಲ್ಲಿ ಹುಗಿದಿದ್ದಿರಬೇಕು ಅಥವಾ ಅವನ ಅಸ್ತ್ರಗಳು ನಷ್ಟವಾಗಿದ್ದಿರಬಹುದು. ಇವುಗಳಲ್ಲದೇ ಅವನ ನಾಶಕ್ಕೆ ಬೇರೆ ಕಾರಣಗಳನ್ನು ನಾನು ಕಾಣುತ್ತಿಲ್ಲ!

08005076a ನ ಹನ್ಯಾಮರ್ಜುನಂ ಯಾವತ್ತಾವತ್ಪಾದೌ ನ ಧಾವಯೇ।
08005076c ಇತಿ ಯಸ್ಯ ಮಹಾಘೋರಂ ವ್ರತಮಾಸೀನ್ಮಹಾತ್ಮನಃ।।
08005077a ಯಸ್ಯ ಭೀತೋ ವನೇ ನಿತ್ಯಂ ಧರ್ಮರಾಜೋ ಯುಧಿಷ್ಠಿರಃ।
08005077c ತ್ರಯೋದಶ ಸಮಾ ನಿದ್ರಾಂ ನ ಲೇಭೇ ಪುರುಷರ್ಷಭಃ।।
08005078a ಯಸ್ಯ ವೀರ್ಯವತೋ ವೀರ್ಯಂ ಸಮಾಶ್ರಿತ್ಯ ಮಹಾತ್ಮನಃ।
08005078c ಮಮ ಪುತ್ರಃ ಸಭಾಂ ಭಾರ್ಯಾಂ ಪಾಂಡೂನಾಂ ನೀತವಾನ್ಬಲಾತ್।।
08005079a ತತ್ರ ಚಾಪಿ ಸಭಾಮಧ್ಯೇ ಪಾಂಡವಾನಾಂ ಚ ಪಶ್ಯತಾಂ।
08005079c ದಾಸಭಾರ್ಯೇತಿ ಪಾಂಚಾಲೀಮಬ್ರವೀತ್ಕುರುಸಂಸದಿ।।
08005080a ಯಶ್ಚ ಗಾಂಡೀವಮುಕ್ತಾನಾಂ ಸ್ಪರ್ಶಮುಗ್ರಮಚಿಂತಯನ್।
08005080c ಅಪತಿರ್ಹ್ಯಸಿ ಕೃಷ್ಣೇತಿ ಬ್ರುವನ್ಪಾರ್ಥಾನವೈಕ್ಷತ।।
08005081a ಯಸ್ಯ ನಾಸೀದ್ಭಯಂ ಪಾರ್ಥೈಃ ಸಪುತ್ರೈಃ ಸಜನಾರ್ದನೈಃ।
08005081c ಸ್ವಬಾಹುಬಲಮಾಶ್ರಿತ್ಯ ಮುಹೂರ್ತಮಪಿ ಸಂಜಯ।।
08005082a ತಸ್ಯ ನಾಹಂ ವಧಂ ಮನ್ಯೇ ದೇವೈರಪಿ ಸವಾಸವೈಃ।
08005082c ಪ್ರತೀಪಮುಪಧಾವದ್ಭಿಃ ಕಿಂ ಪುನಸ್ತಾತ ಪಾಂಡವೈಃ।।

ಸಂಜಯ! ಅರ್ಜುನನನ್ನು ಕೊಲ್ಲದೆಯೇ ಪಾದಗಳನ್ನು ತೊಳೆಯಿಸಿಕೊಳ್ಳುವುದಿಲ್ಲವೆಂಬ ಮಹಾಘೋರವ್ರತವು ಯಾವ ಮಹಾತ್ಮನದ್ದಾಗಿತ್ತೋ, ಯಾರ ಭೀತಿಯಿಂದ ಪುರುಷರ್ಷಭ ಧರ್ಮರಾಜ ಯುಧಿಷ್ಠಿರನು ವನದಲ್ಲಿ ಹದಿಮೂರುವರ್ಷಗಳಲ್ಲಿ ನಿತ್ಯವೂ ನಿದ್ದೆಯನ್ನು ಪಡೆದಿರಲಿಲ್ಲವೋ, ಯಾವ ಮಹಾತ್ಮ ವೀರ್ಯವಂತನ ವೀರ್ಯವನ್ನು ಸಮಾಶ್ರಯಿಸಿ ನನ್ನ ಪುತ್ರನು ಪಾಂಡವರ ಭಾರ್ಯೆಯನ್ನು ಬಲಾತ್ಕಾರವಾಗಿ ಸಭೆಗೆ ಎಳೆದು ತಂದನೋ, ಕುರುಸಂಸದಿಯ ಸಭಾಮಧ್ಯದಲ್ಲಿ ಪಾಂಡವರೂ ಕೂಡ ನೋಡುತ್ತಿದ್ದಂತೆ ಪಾಂಚಾಲಿಯನ್ನು ದಾಸಭಾರ್ಯೆಯೆಂದು ಯಾರು ಕರೆದನೋ, ಗಾಂಡೀವದಿಂದ ಹೊರಡುವ ಉಗ್ರ ಶರಗಳ ಸ್ಪರ್ಶಗಳ ಕುರಿತೂ ಯೋಚಿಸದೇ ಯಾರು ಪಾರ್ಥರು ನೋಡುತ್ತಿದ್ದಂತೆಯೇ “ಕೃಷ್ಣೇ! ನೀನೀಗ ಪತಿಗಳಿಲ್ಲದವಳಾಗಿರುವೆ!” ಎಂದು ಹೇಳಿದ್ದನೋ, ಸ್ವಬಾಹುಬಲವನ್ನು ಆಶ್ರಯಿಸಿದ ಯಾರಿಗೆ ಪುತ್ರ-ಜನಾರ್ದನರೊಡನಿರುವ ಪಾರ್ಥನಮೇಲೆ ಮುಹೂರ್ತಕಾಲವೂ ಭಯವಿದ್ದಿರಲಿಲ್ಲವೋ, ಅಂಥವನನ್ನು ವಾಸವನೊಂದಿಗೆ ದೇವತೆಗಳೂ ವಧಿಸಲಾರರೆಂದು ನನಗನ್ನಿಸಿತ್ತು. ಅಯ್ಯಾ! ಅಂಥವನು ಪಾಂಡವರಿಂದ ಹೇಗೆ ವಧಿಸಲ್ಪಟ್ಟನು?

08005083a ನ ಹಿ ಜ್ಯಾಂ ಸ್ಪೃಶಮಾನಸ್ಯ ತಲತ್ರೇ ಚಾಪಿ ಗೃಹ್ಣತಃ।
08005083c ಪುಮಾನಾಧಿರಥೇಃ ಕಶ್ಚಿತ್ಪ್ರಮುಖೇ ಸ್ಥಾತುಮರ್ಹತಿ।।

ಆಧಿರಥನು ಮೌರ್ವಿಯನ್ನು ಮುಟ್ಟುತ್ತಿದ್ದಾಗ ಮತ್ತು ಕೈಚೀಲವನ್ನು ಕಟ್ಟಿಕೊಳ್ಳುತ್ತಿದ್ದಾಗ ಯಾವ ಪುರುಷನೂ ಅವನ ಎದಿರು ನಿಲ್ಲುವ ಧೈರ್ಯಮಾಡುತ್ತಿರಲಿಲ್ಲ.

08005084a ಅಪಿ ಸ್ಯಾನ್ಮೇದಿನೀ ಹೀನಾ ಸೋಮಸೂರ್ಯಪ್ರಭಾಂಶುಭಿಃ।
08005084c ನ ವಧಃ ಪುರುಷೇಂದ್ರಸ್ಯ ಸಮರೇಷ್ವಪಲಾಯಿನಃ।।

ಈ ಮೇದಿನಿಯು ಸೋಮಸೂರ್ಯರ ಪ್ರಭೆಗಳಿಂದ ಹೀನವಾಗಬಹುದು. ಆದರೆ ಸಮರದಲ್ಲಿ ಪಲಾಯನಮಾಡದಿದ್ದ ಆ ಪುರುಷೇಂದ್ರನ ವಧೆಯು ಅಸಂಭವವು.

08005085a ಯದಿ ಮಂದಃ ಸಹಾಯೇನ ಭ್ರಾತ್ರಾ ದುಃಶಾಸನೇನ ಚ।
08005085c ವಾಸುದೇವಸ್ಯ ದುರ್ಬುದ್ಧಿಃ ಪ್ರತ್ಯಾಖ್ಯಾನಮರೋಚಯತ್।।
08005086a ಸ ನೂನಂ ಋಷಭಸ್ಕಂದಂ ದೃಷ್ಟ್ವಾ ಕರ್ಣಂ ನಿಪಾತಿತಂ।
08005086c ದುಃಶಾಸನಂ ಚ ನಿಹತಂ ಮನ್ಯೇ ಶೋಚತಿ ಪುತ್ರಕಃ।।

ಮಂದ ದುರ್ಬುದ್ಧಿ ಪುತ್ರಕ ದುರ್ಯೋಧನನು ಭ್ರಾತ ದುಃಶಾಸನನ ಸಹಾಯದಿಂದ ವಾಸುದೇವನಾಡಿದುದನ್ನು ಸ್ವೀಕರಿಸದೇ ಈಗ ವೃಷಭಸ್ಕಂದ ಕರ್ಣನು ಕೆಳಗುರುಳಿದುದನ್ನು ಮತ್ತು ದುಃಶಾಸನನು ಹತನಾಗಿದುದನ್ನು ನೋಡಿ ಶೋಕಿಸುತ್ತಿರಬಹುದಲ್ಲವೇ?

08005087a ಹತಂ ವೈಕರ್ತನಂ ಶ್ರುತ್ವಾ ದ್ವೈರಥೇ ಸವ್ಯಸಾಚಿನಾ।
08005087c ಜಯತಃ ಪಾಂಡವಾನ್ದೃಷ್ಟ್ವಾ ಕಿಂ ಸ್ವಿದ್ದುರ್ಯೋಧನೋಽಬ್ರವೀತ್।।

ವೈಕರ್ತನನು ಸವ್ಯಸಾಚಿಯಿಂದ ದ್ವೈರಥದಲ್ಲಿ ಹತನಾದುದನ್ನು ಕೇಳಿ ಮತ್ತು ವಿಜಯಿ ಪಾಂಡವರನ್ನು ನೋಡಿ ದುರ್ಯೋಧನನು ಏನನ್ನಾದರೂ ಹೇಳಿದನೇ?

08005088a ದುರ್ಮರ್ಷಣಂ ಹತಂ ಶ್ರುತ್ವಾ ವೃಷಸೇನಂ ಚ ಸಂಯುಗೇ।
08005088c ಪ್ರಭಗ್ನಂ ಚ ಬಲಂ ದೃಷ್ಟ್ವಾ ವಧ್ಯಮಾನಂ ಮಹಾರಥೈಃ।।
08005089a ಪರಾಙ್ಮುಖಾಂಸ್ತಥಾ ರಾಜ್ಞಃ ಪಲಾಯನಪರಾಯಣಾನ್।
08005089c ವಿದ್ರುತಾನ್ರಥಿನೋ ದೃಷ್ಟ್ವಾ ಮನ್ಯೇ ಶೋಚತಿ ಪುತ್ರಕಃ।।

ಸಂಯುಗದಲ್ಲಿ ದುರ್ಮರ್ಷಣ ಮತ್ತು ವೃಷಸೇನರು ಹತರಾದುದನ್ನು ಕೇಳಿ, ಮಹಾರಥರಿಂದ ವಧಿಸಲ್ಪಡುತ್ತಿದ್ದ ಸೇನೆಯು ಭಗ್ನವಾದುದನ್ನು ನೋಡಿ, ಪಲಾಯನಪರಾಯಣ ರಾಜ ರಥಿಗಳು ಪರಾಙ್ಮುಖರಾಗಿ ಓಡಿ ಹೋಗುತ್ತಿರುವುದನ್ನು ನೋಡಿ ನನ್ನ ಮಗನು ಶೋಕಿಸುತ್ತಿರಬಹುದಲ್ಲವೇ?

08005090a ಅನೇಯಶ್ಚಾಭಿಮಾನೇನ ಬಾಲಬುದ್ಧಿರಮರ್ಷಣಃ।
08005090c ಹತೋತ್ಸಾಹಂ ಬಲಂ ದೃಷ್ಟ್ವಾ ಕಿಂ ಸ್ವಿದ್ದುರ್ಯೋಧನೋಽಬ್ರವೀತ್।।

ಯಾರ ಮಾತನ್ನೂ ಕೇಳದ, ಅಭಿಮಾನಿಯಾದ, ಬಾಲಬುದ್ಧಿ ಮತ್ತು ಅಸಹನಶೀಲ ದುರ್ಯೋಧನನು ತನ್ನ ಸೇನೆಯು ಉತ್ಸಾಹಹೀನವಾಗಿರುವುದನ್ನು ನೋಡಿ ಏನನ್ನಾದರೂ ಹೇಳಿದನೇ?

08005091a ಭ್ರಾತರಂ ನಿಹತಂ ದೃಷ್ಟ್ವಾ ಭೀಮಸೇನೇನ ಸಂಯುಗೇ।
08005091c ರುಧಿರಂ ಪೀಯಮಾನೇನ ಕಿಂ ಸ್ವಿದ್ದುರ್ಯೋಧನೋಽಬ್ರವೀತ್।।

ಸಂಯುಗದಲ್ಲಿ ಭೀಮಸೇನನು ಭ್ರಾತರನನ್ನು ಕೊಂದು ರಕ್ತವನ್ನು ಕುಡಿಯುತ್ತಿದ್ದಾಗ ದುರ್ಯೋಧನನು ಏನನ್ನಾದರೂ ಹೇಳಿದನೇ?

08005092a ಸಹ ಗಾಂಧಾರರಾಜೇನ ಸಭಾಯಾಂ ಯದಭಾಷತ।
08005092c ಕರ್ಣೋಽರ್ಜುನಂ ರಣೇ ಹಂತಾ ಹತೇ ತಸ್ಮಿನ್ಕಿಮಬ್ರವೀತ್।।

ಸಭೆಯಲ್ಲಿ “ಕರ್ಣನು ರಣದಲ್ಲಿ ಅರ್ಜುನನನ್ನು ಕೊಲ್ಲುತ್ತಾನೆ” ಎಂದು ಗಾಂಧಾರರಾಜನಿಗೆ ಹೇಳಿದ್ದ ಅವನು, ಕರ್ಣನೇ ಹತನಾಗಲು ಏನು ಹೇಳಿದನು?

08005093a ದ್ಯೂತಂ ಕೃತ್ವಾ ಪುರಾ ಹೃಷ್ಟೋ ವಂಚಯಿತ್ವಾ ಚ ಪಾಂಡವಾನ್।
08005093c ಶಕುನಿಃ ಸೌಬಲಸ್ತಾತ ಹತೇ ಕರ್ಣೇ ಕಿಮಬ್ರವೀತ್।।

ಅಯ್ಯಾ! ಹಿಂದೆ ದ್ಯೂತದಲ್ಲಿ ಪಾಂಡವರನ್ನು ವಂಚಿಸಿ ಹೃಷ್ಟನಾಗಿದ್ದ ಸೌಬಲ ಶಕುನಿಯು ಕರ್ಣನು ಹತನಾದಾಗ ಏನು ಹೇಳಿದನು?

08005094a ಕೃತವರ್ಮಾ ಮಹೇಷ್ವಾಸಃ ಸಾತ್ವತಾನಾಂ ಮಹಾರಥಃ।
08005094c ಕರ್ಣಂ ವಿನಿಹತಂ ದೃಷ್ಟ್ವಾ ಹಾರ್ದಿಕ್ಯಃ ಕಿಮಾಭಾಷತ।।

ಕರ್ಣನು ಹತನಾದುದನ್ನು ನೋಡಿ ಮಹೇಷ್ವಾಸ ಸಾತ್ವತರ ಮಹಾರಥ ಹಾರ್ದಿಕ್ಯ ಕೃತವರ್ಮನು ಏನು ಹೇಳಿದನು?

08005095a ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾ ಯಸ್ಯ ಶಿಕ್ಷಾಮುಪಾಸತೇ।
08005095c ಧನುರ್ವೇದಂ ಚಿಕೀರ್ಷಂತೋ ದ್ರೋಣಪುತ್ರಸ್ಯ ಧೀಮತಃ।।
08005096a ಯುವಾ ರೂಪೇಣ ಸಂಪನ್ನೋ ದರ್ಶನೀಯೋ ಮಹಾಯಶಾಃ।
08005096c ಅಶ್ವತ್ಥಾಮಾ ಹತೇ ಕರ್ಣೇ ಕಿಮಾಭಾಷತ ಸಂಜಯ।।

ಸಂಜಯ! ಬ್ರಾಹ್ಮಣ-ಕ್ಷತ್ರಿಯ-ವೈಶ್ಯರು ಯಾರಿಂದ ಧನುರ್ವೇದದ ಶಿಕ್ಷಣವನ್ನು ಪಡೆಯಲು ಬಯಸುತ್ತಾರೋ ಆ ಧೀಮತ ಯುವಕ ರೂಪಸಂಪನ್ನ ಸುಂದರ ಮಹಾಯಶಸ್ವಿ ದ್ರೋಣಪುತ್ರ ಅಶ್ವತ್ಥಾಮನು ಕರ್ಣನು ಹತನಾದಾಗ ಏನು ಹೇಳಿದನು?

08005097a ಆಚಾರ್ಯತ್ವಂ ಧನುರ್ವೇದೇ ಗತಃ ಪರಮತತ್ತ್ವವಿತ್।
08005097c ಕೃಪಃ ಶಾರದ್ವತಸ್ತಾತ ಹತೇ ಕರ್ಣೇ ಕಿಮಬ್ರವೀತ್।।

ಅಯ್ಯಾ! ಕರ್ಣನು ಹತನಾಗಲು ಧನುರ್ವೇದದಲ್ಲಿ ಆಚಾರ್ಯತ್ವವನ್ನು ಪಡೆದಿರುವ ಪರಮತತ್ವವಿದು ಶಾರದ್ವತ ಕೃಪನು ಏನು ಹೇಳಿದನು?

08005098a ಮದ್ರರಾಜೋ ಮಹೇಷ್ವಾಸಃ ಶಲ್ಯಃ ಸಮಿತಿಶೋಭನಃ।
08005098c ದಿಷ್ಟಂ ತೇನ ಹಿ ತತ್ಸರ್ವಂ ಯಥಾ ಕರ್ಣೋ ನಿಪಾತಿತಃ।।
08005099a ಯೇ ಚ ಕೇ ಚನ ರಾಜಾನಃ ಪೃಥಿವ್ಯಾಂ ಯೋದ್ಧುಮಾಗತಾಃ।
08005099c ವೈಕರ್ತನಂ ಹತಂ ದೃಷ್ಟ್ವಾ ಕಿಮಾಭಾಷಂತ ಸಂಜಯ।।

ಸಂಜಯ! ಮದ್ರರಾಜ ಮಹೇಷ್ವಾಸ ಸಮಿತಿಶೋಭನ ಶಲ್ಯನು ಕರ್ಣನು ಕೆಳಗುರುಳಿದುದೆಲ್ಲವನ್ನೂ ನೋಡಿದ್ದನು. ಅವನು ಮತ್ತು ಯುದ್ಧಮಾಡಲು ಆಗಮಿಸಿದ್ದ ಪೃಥ್ವಿಯ ರಾಜರು ವೈಕರ್ತನನು ಹತನಾದುದನ್ನು ನೋಡಿ ಏನು ಹೇಳಿದರು?

08005100a ಕರ್ಣೇ ತು ನಿಹತೇ ವೀರೇ ರಥವ್ಯಾಘ್ರೇ ನರರ್ಷಭೇ।
08005100c ಕಿಂ ವೋ ಮುಖಂ ಅನೀಕಾನಾಮಾಸೀತ್ಸಂಜಯ ಭಾಗಶಃ।।

ಸಂಜಯ! ರಥವ್ಯಾಗ್ರ, ನರರ್ಷಭ ಕರ್ಣನು ಹತನಾಗಲು ಉಳಿದ ಸೇನೆಯ ಮುಖದಲ್ಲಿ ಯಾರಿದ್ದರು?

08005101a ಮದ್ರರಾಜಃ ಕಥಂ ಶಲ್ಯೋ ನಿಯುಕ್ತೋ ರಥಿನಾಂ ವರಃ।
08005101c ವೈಕರ್ತನಸ್ಯ ಸಾರಥ್ಯೇ ತನ್ಮಮಾಚಕ್ಷ್ವ ಸಂಜಯ।।

ಸಂಜಯ! ರಥಿಗಳಲ್ಲಿ ಶ್ರೇಷ್ಠ ಮದ್ರರಾಜ ಶಲ್ಯನು ವೈಕರ್ತನನ ಸಾರಥ್ಯವನ್ನು ಹೇಗೆ ಸ್ವೀಕರಿಸಿದನು ಎನ್ನುವುದನ್ನು ನನಗೆ ಹೇಳು.

08005102a ಕೇಽರಕ್ಷನ್ದಕ್ಷಿಣಂ ಚಕ್ರಂ ಸೂತಪುತ್ರಸ್ಯ ಸಂಯುಗೇ।
08005102c ವಾಮಂ ಚಕ್ರಂ ರರಕ್ಷುರ್ವಾ ಕೇ ವಾ ವೀರಸ್ಯ ಪೃಷ್ಠತಃ।।

ಸಂಯುಗದಲ್ಲಿ ಸೂತಪುತ್ರ ಕರ್ಣನ ಬಲಚಕ್ರವನ್ನು ಯಾರು ರಕ್ಷಿಸುತ್ತಿದ್ದರು? ಎಡಚಕ್ರವನ್ನು ಮತ್ತು ಆ ವೀರನ ಎದುರು ಯಾರು ರಕ್ಷಿಸುತ್ತಿದ್ದರು?

08005103a ಕೇ ಕರ್ಣಂ ವಾಜಹುಃ ಶೂರಾಃ ಕೇ ಕ್ಷುದ್ರಾಃ ಪ್ರಾದ್ರವನ್ಭಯಾತ್।
08005103c ಕಥಂ ಚ ವಃ ಸಮೇತಾನಾಂ ಹತಃ ಕರ್ಣೋ ಮಹಾರಥಃ।।

ಯಾವ ಶೂರರು ಕರ್ಣನನ್ನು ಕೂಡಿಕೊಂಡು ಯುದ್ಧಮಾಡಿದರು? ಯಾವ ಕ್ಷುದ್ರರು ಭಯದಿಂದ ಓಡಿಹೋದರು? ನೀವೆಲ್ಲರೂ ಒಟ್ಟಿಗೇ ಇರುವಾಗ ಮಹಾರಥ ಕರ್ಣನು ಹತನಾದುದು ಹೇಗೆ?

08005104a ಪಾಂಡವಾಶ್ಚ ಕಥಂ ಶೂರಾಃ ಪ್ರತ್ಯುದೀಯುರ್ಮಹಾರಥಂ।
08005104c ಸೃಜಂತಂ ಶರವರ್ಷಾಣಿ ವಾರಿಧಾರಾ ಇವಾಂಬುದಂ।।

ಪಾಂಡವ ಶೂರರು ಹೇಗೆ ಮಳೆಸುರಿಸುವ ಮೋಡಗಳಂತೆ ಶರವರ್ಷಗಳನ್ನುಂಟುಮಾಡುತ್ತಾ ಆ ಮಹಾರಥನನ್ನು ಎದುರಿಸಿದರು?

08005105a ಸ ಚ ಸರ್ಪಮುಖೋ ದಿವ್ಯೋ ಮಹೇಷುಪ್ರವರಸ್ತದಾ।
08005105c ವ್ಯರ್ಥಃ ಕಥಂ ಸಮಭವತ್ತನ್ಮಮಾಚಕ್ಷ್ವ ಸಂಜಯ।।

ಸಂಜಯ! ಬಾಣಗಳಲ್ಲಿ ಮಹತ್ತರವಾದುದೆಂದು ಪ್ರಸಿದ್ಧವಾಗಿದ್ದ ಆ ಸರ್ಪಮುಖದ ದಿವ್ಯ ಬಾಣವು ಹೇಗೆ ವ್ಯರ್ಥವಾಯಿತು ಎನ್ನುವುದನ್ನು ನನಗೆ ಹೇಳು.

08005106a ಮಾಮಕಸ್ಯಾಸ್ಯ ಸೈನ್ಯಸ್ಯ ಹೃತೋತ್ಸೇಧಸ್ಯ ಸಂಜಯ।
08005106c ಅವಶೇಷಂ ನ ಪಶ್ಯಾಮಿ ಕಕುದೇ ಮೃದಿತೇ ಸತಿ।।

ಸಂಜಯ! ನಮ್ಮವರ ಸೇನೆಗಳ ಮುಖ್ಯಯೋಧನೇ ಹತನಾದನೆಂದರೆ ಏನೂ ಉಳಿಯಲಿಲ್ಲವೆಂದು ನನಗನ್ನಿಸುತ್ತಿದೆ.

08005107a ತೌ ಹಿ ವೀರೌ ಮಹೇಷ್ವಾಸೌ ಮದರ್ಥೇ ಕುರುಸತ್ತಮೌ।
08005107c ಭೀಷ್ಮದ್ರೋಣೌ ಹತೌ ಶ್ರುತ್ವಾ ಕೋ ನ್ವರ್ಥೋ ಜೀವಿತೇನ ಮೇ।।

ನನಗೋಸ್ಕರವಾಗಿ ತಮ್ಮ ಜೀವಗಳನ್ನೇ ಒತ್ತೆಯಿಟ್ಟು ಯುದ್ಧಮಾಡುತ್ತಿದ್ದ ಕುರುಸತ್ತಮ ವೀರ ಮಹೇಷ್ವಾಸ ಭೀಷ್ಮ-ದ್ರೋಣರು ಹತರಾದರೆಂದು ಕೇಳಿದಾಗಲೇ ನನ್ನ ಜೀವಿತಕ್ಕೆ ಅರ್ಥವಿರಲಿಲ್ಲ.

08005108a ನ ಮೃಷ್ಯಾಮಿ ಚ ರಾಧೇಯಂ ಹತಮಾಹವಶೋಭಿನಂ।
08005108c ಯಸ್ಯ ಬಾಹ್ವೋರ್ಬಲಂ ತುಲ್ಯಂ ಕುಂಜರಾಣಾಂ ಶತಂ ಶತಂ।।

ಯಾರ ಬಾಹುಬಲವು ಸಾವಿರ ಆನೆಗಳಿಗೆ ಸಮನಾಗಿತ್ತೋ ಆ ಆಹವಶೋಭೀ ರಾಧೇಯನು ಹತನಾದುದನ್ನು ನಾನು ಸಹಿಸಿಕೊಳ್ಳಲಾರೆ!

08005109a ದ್ರೋಣೇ ಹತೇ ಚ ಯದ್ವೃತ್ತಂ ಕೌರವಾಣಾಂ ಪರೈಃ ಸಹ।
08005109c ಸಂಗ್ರಾಮೇ ನರವೀರಾಣಾಂ ತನ್ಮಮಾಚಕ್ಷ್ವ ಸಂಜಯ।।

ಸಂಜಯ! ದ್ರೋಣನು ಹತನಾಗಲು ಕೌರವರು ಮತ್ತು ಶತ್ರುಗಳ ನಡುವೆ ನರವೀರರ ಸಂಗ್ರಾಮವು ಹೇಗೆ ನಡೆಯಿತು ಎನ್ನುವುದನ್ನು ನನಗೆ ಹೇಳು.

08005110a ಯಥಾ ಚ ಕರ್ಣಃ ಕೌಂತೇಯೈಃ ಸಹ ಯುದ್ಧಂ ಅಯೋಜಯತ್।
08005110c ಯಥಾ ಚ ದ್ವಿಷತಾಂ ಹಂತಾ ರಣೇ ಶಾಂತಸ್ತದುಚ್ಯತಾಂ।।

ಕೌಂತೇಯರೊಡನೆ ಕರ್ಣನು ಯಾವರೀತಿಯ ಯುದ್ಧವನ್ನು ಆಯೋಜಿಸಿದನು? ಅವನು ರಣದಲ್ಲಿ ಹೇಗೆ ಹತನಾಗಿ ಶಾಂತನಾದನು ಎನ್ನುವುದನ್ನು ಹೇಳಬೇಕು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಧೃತರಾಷ್ಟ್ರಪ್ರಶ್ನೇ ಪಂಚಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಧೃತರಾಷ್ಟ್ರಪ್ರಶ್ನೆ ಎನ್ನುವ ಐದನೇ ಅಧ್ಯಾಯವು.