165 ದ್ರೋಣವಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ದ್ರೋಣವಧ ಪರ್ವ

ಅಧ್ಯಾಯ 165

ಸಾರ

ಯುಧಿಷ್ಠಿರನು ದ್ರೋಣನೊಡನೆ ಯುದ್ಧಮಾಡಲು ಪಾಂಚಾಲರಿಗೆ ಹೇಳಿದುದು (1-8). ದ್ರೋಣನು ಪ್ರಾಣಗಳನ್ನು ತೊರೆಯಲು ನಿರ್ಧರಿಸಿ ಪಾಂಚಾಲರನ್ನು ಆಕ್ರಮಣಿಸಿದುದು (9-16). ಭೀಮಸೇನನಿಂದ ಪ್ರಚೋದಿತನಾದ ಧೃಷ್ಟದ್ಯುಮ್ನನು ದ್ರೋಣನನ್ನು ಆಕ್ರಮಣಿಸಿದುದು (17-26). ಭೀಮಸೇನನು ದ್ರೋಣನಿಗೆ ಅಶ್ವತ್ಥಾಮನು ಹತನಾದನೆಂದು ಪುನಃ ಹೇಳಿದುದು (27-32). ದ್ರೋಣನ ಶಸ್ತ್ರನ್ಯಾಸ; ದೇವಲೋಕಕ್ಕೆ ತೆರಳಿದುದು (33-36). ರಥದಲ್ಲಿ ಯೋಗಾರೂಢನಾಗಿದ್ದ ದ್ರೋಣನನ್ನು ಇತರರು ಬೇಡವೆಂದರೂ ಧೃಷ್ಟದ್ಯುಮ್ನನು ಸಂಹರಿಸಿದುದು (37-54). ಕೌರವ ಸೇನೆಯ ಪಲಾಯನ (55-86). ಕೃಪನು ಅಶ್ವತ್ಥಾಮನಿಗೆ ದ್ರೋಣವಧೆಯ ಕುರಿತು ಹೇಳಿದುದು (87-125).

07165001 ಸಂಜಯ ಉವಾಚ।
07165001a ಕ್ರೂರಮಾಯೋಧನಂ ಜಜ್ಞೇ ತಸ್ಮಿನ್ರಾಜಸಮಾಗಮೇ।
07165001c ರುದ್ರಸ್ಯೇವ ಹಿ ಕ್ರುದ್ಧಸ್ಯ ನಿಘ್ನತಸ್ತು ಪಶೂನ್ಯಥಾ।।

ಸಂಜಯನು ಹೇಳಿದನು: “ಕ್ರುದ್ಧ ರುದ್ರನಿಂದ ಪಶುಗಳು ಹೇಗೆ ಸಂಹರಿಸಲ್ಪಡುತ್ತಾರೋ ಹಾಗೆ ಆ ರಾಜಸಮಾಗಮದಲ್ಲಿ ಅತ್ಯಂತ ಕ್ರೂರ ಯುದ್ಧವು ಪ್ರಾರಂಭವಾಯಿತು.

07165002a ಹಸ್ತಾನಾಮುತ್ತಮಾಂಗಾನಾಂ ಕಾರ್ಮುಕಾಣಾಂ ಚ ಭಾರತ।
07165002c ಚತ್ರಾಣಾಂ ಚಾಪವಿದ್ಧಾನಾಂ ಚಾಮರಾಣಾಂ ಚ ಸಮ್ಯುಗೇ।।
07165003a ಭಗ್ನಚಕ್ರೈ ರಥೈಶ್ಚಾಪಿ ಪಾತಿತೈಶ್ಚ ಮಹಾಧ್ವಜೈಃ।
07165003c ಸಾದಿಭಿಶ್ಚ ಹತೈಃ ಶೂರೈಃ ಸಂಕೀರ್ಣಾ ವಸುಧಾಭವತ್।।

ಭಾರತ! ಸಂಯುಗದಲ್ಲಿ ಕತ್ತರಿಸಲ್ಪಟ್ಟ ತೋಳುಗಳು, ಶಿರಸ್ಸುಗಳು, ಧನುಸ್ಸುಗಳು, ಛತ್ರಗಳು, ಚಾಮರಗಳು, ತುಂಡಾದ ಚಕ್ರಗಳು, ರಥಗಳು, ಕೆಳಗೆ ಬಿದ್ದಿದ್ದ ಮಹಾಧ್ವಜಗಳು, ಹತವಾದ ಕುದುರೆಗಳು ಮತ್ತು ಶೂರ ಸೈನಿಕರಿಂದ ರಣಭೂಮಿಯು ತುಂಬಿಹೋಗಿತ್ತು.

07165004a ಬಾಣಪಾತನಿಕೃತ್ತಾಸ್ತು ಯೋಧಾಸ್ತೇ ಕುರುಸತ್ತಮ।
07165004c ಚೇಷ್ಟಂತೋ ವಿವಿಧಾಶ್ಚೇಷ್ಟಾ ವ್ಯದೃಶ್ಯಂತ ಮಹಾಹವೇ।।

ಕುರುಸತ್ತಮ! ಬೀಳುತ್ತಿರುವ ಬಾಣಗಳಿಂದ ಗಾಯಗೊಂಡ ಯೋಧರು ಆ ಮಹಾಯುದ್ಧದಲ್ಲಿ ವಿವಿಧ ಚೇಷ್ಟೆಗಳನ್ನು ಮಾಡುತ್ತಾ ಚಡಪಡಿಸುತ್ತಿರುವುದು ಅಲ್ಲಿ ಕಂಡುಬರುತ್ತಿತ್ತು.

07165005a ವರ್ತಮಾನೇ ತಥಾ ಯುದ್ಧೇ ಘೋರೇ ದೇವಾಸುರೋಪಮೇ।
07165005c ಅಬ್ರವೀತ್ ಕ್ಷತ್ರಿಯಾಂಸ್ತತ್ರ ಧರ್ಮರಾಜೋ ಯುಧಿಷ್ಠಿರಃ।

ದೇವಾಸುರರ ನಡುವಿನಂತೆ ಆ ಘೋರ ಯುದ್ಧವು ನಡೆಯುತ್ತಿರಲು ಧರ್ಮರಾಜ ಯುಧಿಷ್ಠಿರನು ಕ್ಷತ್ರಿಯರಿಗೆ ಹೇಳಿದನು:

07165005e ಅಭಿದ್ರವತ ಸಮ್ಯತ್ತಾಃ ಕುಂಭಯೋನಿಂ ಮಹಾರಥಾಃ।।
07165006a ಏಷ ವೈ ಪಾರ್ಷತೋ ವೀರೋ ಭಾರದ್ವಾಜೇನ ಸಂಗತಃ।
07165006c ಘಟತೇ ಚ ಯಥಾಶಕ್ತಿ ಭಾರದ್ವಾಜಸ್ಯ ನಾಶನೇ।।

“ಮಹಾರಥರೇ! ಚೆನ್ನಾಗಿ ಪ್ರಯತ್ನಪಟ್ಟು ಕುಂಭಯೋನಿಯೊಡನೆ ಯುದ್ಧಮಾಡಿ. ವೀರ ಪಾರ್ಷತನು ಯಥಾಶಕ್ತಿಯಾಗಿ ಭಾರದ್ವಾಜನನ್ನು ಕೆಳಗುರುಳಿಸಲು ಅವನೊಡನೆ ಯುದ್ಧಮಾಡುತ್ತಾನೆ.

07165007a ಯಾದೃಶಾನಿ ಹಿ ರೂಪಾಣಿ ದೃಶ್ಯಂತೇ ನೋ ಮಹಾರಣೇ।
07165007c ಅದ್ಯ ದ್ರೋಣಂ ರಣೇ ಕ್ರುದ್ಧಃ ಪಾತಯಿಷ್ಯತಿ ಪಾರ್ಷತಃ।
07165007e ತೇ ಯೂಯಂ ಸಹಿತಾ ಭೂತ್ವಾ ಕುಂಭಯೋನಿಂ ಪರೀಪ್ಸತ।।

ಈ ಮಹಾರಣದಲ್ಲಿ ಕಾಣುವ ದೃಶ್ಯಗಳನ್ನು ನೋಡಿದರೆ ಇಂದು ರಣದಲ್ಲಿ ಕ್ರುದ್ಧ ಪಾರ್ಷತನು ದ್ರೋಣನನ್ನು ಕೆಳಗುರುಳಿಸುತ್ತಾನೆ. ಆದುದರಿಂದ ನೀವೆಲ್ಲರೂ ಒಂದಾಗಿ ಕುಂಭಯೋನಿಯೊಡನೆ ಯುದ್ಧಮಾಡಿರಿ!”

07165008a ಯುಧಿಷ್ಠಿರಸಮಾಜ್ಞಪ್ತಾಃ ಸೃಂಜಯಾನಾಂ ಮಹಾರಥಾಃ।
07165008c ಅಭ್ಯದ್ರವಂತ ಸಮ್ಯತ್ತಾ ಭಾರದ್ವಾಜಂ ಜಿಘಾಂಸವಃ।।

ಯುಧಿಷ್ಠಿರನಿಂದ ಆಜ್ಞಪ್ತ ಮಹಾರಥ ಸೃಂಜಯರು ಒಟ್ಟಾಗಿ ಭಾರದ್ವಾಜನನ್ನು ಕೊಲ್ಲಲು ಬಯಸಿ ಅವನನ್ನು ಆಕ್ರಮಣಿಸಿದರು.

07165009a ತಾನ್ಸಮಾಪತತಃ ಸರ್ವಾನ್ಭಾರದ್ವಾಜೋ ಮಹಾರಥಃ।
07165009c ಅಭ್ಯದ್ರವತ ವೇಗೇನ ಮರ್ತವ್ಯಮಿತಿ ನಿಶ್ಚಿತಃ।।

ಮೃತನಾಗಬೇಕೆಂದು ನಿಶ್ಚಯಿಸಿದ್ದ ಮಹಾರಥ ಭಾರದ್ವಾಜನು ಮೇಲೆರಗುತ್ತಿದ್ದ ಅವರೆಲ್ಲರನ್ನೂ ವೇಗದಿಂದ ಎದುರಿಸಿದನು.

07165010a ಪ್ರಯಾತೇ ಸತ್ಯಸಂಧೇ ತು ಸಮಕಂಪತ ಮೇದಿನೀ।
07165010c ವವುರ್ವಾತಾಃ ಸನಿರ್ಘಾತಾಸ್ತ್ರಾಸಯಂತೋ ವರೂಥಿನೀಂ।।

ಆ ಸತ್ಯಸಂಧನು ಮುಂದುವರೆಯುತ್ತಿರಲು ಭೂಮಿಯು ನಡುಗಿತು. ಸೇನೆಗಳನ್ನು ಭಯಪಡಿಸುತ್ತಾ ಸಿಡಿಲುಗಳೊಂದಿಗೆ ಚಂಡಮಾರುತವು ಬೀಸತೊಡಗಿತು.

07165011a ಪಪಾತ ಮಹತೀ ಚೋಲ್ಕಾ ಆದಿತ್ಯಾನ್ನಿರ್ಗತೇವ ಹ।
07165011c ದೀಪಯಂತೀವ ತಾಪೇನ ಶಂಸಂತೀವ ಮಹದ್ಭಯಂ।।

ಮುಂದೆಬರುವ ಮಹಾಭಯವನ್ನು ಸೂಚಿಸಲೋ ಎನ್ನುವಂತೆ ಆದಿತ್ಯಮಂಡಲದಿಂದ ಮಹಾ ಉಲ್ಕೆಯೊಂದು ಬೆಂಕಿಯಂತೆ ಸುಡುತ್ತಾ ಕೆಳಗೆ ಬಿದ್ದಿತು.

07165012a ಜಜ್ವಲುಶ್ಚೈವ ಶಸ್ತ್ರಾಣಿ ಭಾರದ್ವಾಜಸ್ಯ ಮಾರಿಷ।
07165012c ರಥಾಃ ಸ್ವನಂತಿ ಚಾತ್ಯರ್ಥಂ ಹಯಾಶ್ಚಾಶ್ರೂಣ್ಯವಾಸೃಜನ್।।

ಮಾರಿಷ! ಭಾರದ್ವಾಜನ ಶಸ್ತ್ರಗಳು ತಾವೇ ತಾವಾಗಿ ಉರಿಯತೊಡಗಿದವು. ರಥಚಕ್ರಗಳು ಅಸಾಧಾರಣವಾಗಿ ಶಬ್ಧಮಾಡುತ್ತಿದ್ದವು. ಕುದುರೆಗಳು ಕಣ್ಣೀರನ್ನು ಸುರಿಸುತ್ತಿದ್ದವು.

07165013a ಹತೌಜಾ ಇವ ಚಾಪ್ಯಾಸೀದ್ಭಾರದ್ವಾಜೋ ಮಹಾರಥಃ।
07165013c ಋಷೀಣಾಂ ಬ್ರಹ್ಮವಾದಾನಾಂ ಸ್ವರ್ಗಸ್ಯ ಗಮನಂ ಪ್ರತಿ।
07165013e ಸುಯುದ್ಧೇನ ತತಃ ಪ್ರಾಣಾನುತ್ಸ್ರಷ್ಟುಮುಪಚಕ್ರಮೇ।।

ಮಹಾರಥ ಭಾರದ್ವಾಜನ ತೇಜಸ್ಸು ಕುಂದುತ್ತಿದೆಯೋ ಎನ್ನುವಂತಾಯಿತು. ಸ್ವರ್ಗಗಮನದ ಕುರಿತು ಬ್ರಹ್ಮವಾದೀ ಋಷಿಗಳು ಹೇಳಿದುದನ್ನು ಸ್ಮರಿಸುತ್ತಾ ಅವನು ಉತ್ತಮ ಯುದ್ಧದಿಂದ ಪ್ರಾಣಗಳನ್ನು ತೊರೆಯಲು ನಿಶ್ಚಯಿಸಿದನು.

07165014a ತತಶ್ಚತುರ್ದಿಶಂ ಸೈನ್ಯೈರ್ದ್ರುಪದಸ್ಯಾಭಿಸಂವೃತಃ।
07165014c ನಿರ್ದಹನ್ ಕ್ಷತ್ರಿಯವ್ರಾತಾನ್ದ್ರೋಣಃ ಪರ್ಯಚರದ್ರಣೇ।।

ದ್ರುಪದನ ಸೇನೆಗಳಿಂದ ನಾಲ್ಕೂ ಕಡೆಗಳಿಂದ ಪರಿವೃತನಾದ ದ್ರೋಣನು ಕ್ಷತ್ರಿಯ ಗುಂಪುಗಳನ್ನು ದಹಿಸುತ್ತಾ ರಣದಲ್ಲಿ ಸಂಚರಿಸುತ್ತಿದ್ದನು.

07165015a ಹತ್ವಾ ವಿಂಶತಿಸಾಹಸ್ರಾನ್ ಕ್ಷತ್ರಿಯಾನರಿಮರ್ದನಃ।
07165015c ದಶಾಯುತಾನಿ ತೀಕ್ಷ್ಣಾಗ್ರೈರವಧೀದ್ವಿಶಿಖೈಃ ಶಿತೈಃ।।

ಆ ಅರಿಮರ್ದನನು ಇಪ್ಪತ್ತು ಸಾವಿರ ಕ್ಷತ್ರಿಯರನ್ನು ಸಂಹರಿಸಿ ನಿಶಿತ ಶಿಖಗಳಿಂದ ಹತ್ತು ಸಾವಿರ ಆನೆಗಳನ್ನು ಸಂಹರಿಸಿದನು.

07165016a ಸೋಽತಿಷ್ಠದಾಹವೇ ಯತ್ತೋ ವಿಧೂಮ ಇವ ಪಾವಕಃ।
07165016c ಕ್ಷತ್ರಿಯಾಣಾಮಭಾವಾಯ ಬ್ರಾಹ್ಮಮಾತ್ಮಾನಮಾಸ್ಥಿತಃ।।

ಕ್ಷತ್ರಿಯರನ್ನು ನಿರ್ಮೂಲನ ಮಾಡುವ ಸಲುವಾಗಿ ಬ್ರಹ್ಮಾಸ್ತ್ರವನ್ನು ಇಟ್ಟುಕೊಂಡು ಹೊಗೆಯಿಲ್ಲದ ಅಗ್ನಿಯಂತೆ ಯುದ್ಧದಲ್ಲಿ ಪ್ರಯತ್ನಪಟ್ಟು ನಿಂತಿದ್ದನು.

07165017a ಪಾಂಚಾಲ್ಯಂ ವಿರಥಂ ಭೀಮೋ ಹತಸರ್ವಾಯುಧಂ ವಶೀ।
07165017c ಅವಿಷಣ್ಣಂ ಮಹಾತ್ಮಾನಂ ತ್ವರಮಾಣಃ ಸಮಭ್ಯಯಾತ್।।

ವಿರಥನಾಗಿದ್ದ, ಎಲ್ಲ ಆಯುಧಗಳನ್ನೂ ಕಳೆದುಕೊಂಡಿದ್ದ, ವಿಷಣ್ಣನಾದ ಮಹಾತ್ಮ ಪಾಂಚಾಲ್ಯ ಧೃಷ್ಟದ್ಯುಮ್ನನನ್ನು ತ್ವರೆಮಾಡಿ ಭೀಮನು ಸಂಧಿಸಿದನು.

07165018a ತತಃ ಸ್ವರಥಮಾರೋಪ್ಯ ಪಾಂಚಾಲ್ಯಮರಿಮರ್ದನಃ।
07165018c ಅಬ್ರವೀದಭಿಸಂಪ್ರೇಕ್ಷ್ಯ ದ್ರೋಣಮಸ್ಯಂತಮಂತಿಕಾತ್।।

ಆಗ ತನ್ನ ರಥದಲ್ಲಿ ಪಾಂಚಾಲ್ಯನನ್ನು ಏರಿಸಿಕೊಂಡು ಹತ್ತಿರದಿಂದಲೇ ದ್ರೋಣನನ್ನು ನೋಡುತ್ತಾ ಅರಿಮರ್ದನ ಭೀಮನು ಧೃಷ್ಟದ್ಯುಮ್ನನಿಗೆ ಹೇಳಿದನು:

07165019a ನ ತ್ವದನ್ಯ ಇಹಾಚಾರ್ಯಂ ಯೋದ್ಧುಮುತ್ಸಹತೇ ಪುಮಾನ್।
07165019c ತ್ವರಸ್ವ ಪ್ರಾಗ್ವಧಾಯೈವ ತ್ವಯಿ ಭಾರಃ ಸಮಾಹಿತಃ।।

“ನಿನ್ನೊಬ್ಬನನ್ನು ಬಿಟ್ಟು ಬೇರೆ ಯಾರೂ ಈ ಆಚಾರ್ಯನೊಡನೆ ಯುದ್ಧಮಾಡಲು ಉತ್ಸಾಹಿತರಾಗಿಲ್ಲ. ಆದುದರಿಂದ ಅವನ ವಧೆಯ ಭಾರವು ಸಂಪೂರ್ಣವಾಗಿ ನಿನ್ನ ಮೇಲೆಯೇ ಇದೆ. ತ್ವರೆಮಾಡು!”

07165020a ಸ ತಥೋಕ್ತೋ ಮಹಾಬಾಹುಃ ಸರ್ವಭಾರಸಹಂ ನವಂ।
07165020c ಅಭಿಪತ್ಯಾದದೇ ಕ್ಷಿಪ್ರಮಾಯುಧಪ್ರವರಂ ದೃಢಂ।।

ಹೀಗೆ ಹೇಳಲು ಮಹಾಬಾಹು ಧೃಷ್ಟದ್ಯುಮ್ನನು ಸರ್ವಭಾರಗಳನ್ನೂ ಹೊರಬಲ್ಲ ಹೊಸತಾದ ದೃಢ ಆಯುಧಪ್ರವರ ಧನುಸ್ಸನ್ನು ಮುಂದಕ್ಕೆ ಬಗ್ಗಿ ಎತ್ತಿಕೊಂಡನು.

07165021a ಸಂರಬ್ಧಶ್ಚ ಶರಾನಸ್ಯನ್ದ್ರೋಣಂ ದುರ್ವಾರಣಂ ರಣೇ।
07165021c ವಿವಾರಯಿಷುರಾಚಾರ್ಯಂ ಶರವರ್ಷೈರವಾಕಿರತ್।।

ಧೃಷ್ಟದ್ಯುಮ್ನನು ಕುಪಿತನಾಗಿ ರಣದಲ್ಲಿ ದ್ರೋಣನನ್ನು ತಡೆಯಲು ಬಯಸಿ ಬಿಲ್ಲನ್ನು ಸೆಳೆದು ಶರವರ್ಷಗಳಿಂದ ಆಚಾರ್ಯನನ್ನು ಮುಚ್ಚಿಬಿಟ್ಟನು.

07165022a ತೌ ನ್ಯವಾರಯತಾಂ ಶ್ರೇಷ್ಠೌ ಸಂರಬ್ಧೌ ರಣಶೋಭಿನೌ।
07165022c ಉದೀರಯೇತಾಂ ಬ್ರಾಹ್ಮಾಣಿ ದಿವ್ಯಾನ್ಯಸ್ತ್ರಾಣ್ಯನೇಕಶಃ।।

ಅವರಿಬ್ಬರು ರಣಶೋಭೀ ಶ್ರೇಷ್ಠರು ಕ್ರೋಧಿತರಾಗಿ ಬ್ರಹ್ಮಾಸ್ತ್ರವೇ ಮೊದಲಾದ ಅನೇಕ ದಿವ್ಯಾಸ್ತ್ರಗಳನ್ನು ಪ್ರಯೋಗಿಸುತ್ತಾ ಪರಸ್ಪರರನ್ನು ಮುಂದೆ ಬಾರದಂತೆ ತಡೆದರು.

07165023a ಸ ಮಹಾಸ್ತ್ರೈರ್ಮಹಾರಾಜ ದ್ರೋಣಮಾಚ್ಚಾದಯದ್ರಣೇ।
07165023c ನಿಹತ್ಯ ಸರ್ವಾಣ್ಯಸ್ತ್ರಾಣಿ ಭಾರದ್ವಾಜಸ್ಯ ಪಾರ್ಷತಃ।।

ಮಹಾರಾಜ! ಪಾರ್ಷತನು ರಣದಲ್ಲಿ ಭಾರದ್ವಾಜನ ಸರ್ವ ಅಸ್ತ್ರಗಳನ್ನು ನಾಶಗೊಳಿಸಿ ದ್ರೋಣನನ್ನು ಮಹಾಸ್ತ್ರಗಳಿಂದ ಮುಚ್ಚಿಬಿಟ್ಟನು.

07165024a ಸ ವಸಾತೀಂ ಶಿಬೀಂಶ್ಚೈವ ಬಾಹ್ಲೀಕಾನ್ಕೌರವಾನಪಿ।
07165024c ರಕ್ಷಿಷ್ಯಮಾಣಾನ್ಸಂಗ್ರಾಮೇ ದ್ರೋಣಂ ವ್ಯಧಮದಚ್ಯುತಃ।।

ಆ ಅಚ್ಯುತನು ಸಂಗ್ರಾಮದಲ್ಲಿ ದ್ರೋಣನನ್ನು ರಕ್ಷಿಸುತ್ತಿದ್ದ ವಸಾತಿ, ಶಿಬಿ, ಬಾಹ್ಲೀಕ ಮತ್ತು ಕೌರವರನ್ನು ಕೂಡ ವಧಿಸಿದನು.

07165025a ಧೃಷ್ಟದ್ಯುಮ್ನಸ್ತದಾ ರಾಜನ್ಗಭಸ್ತಿಭಿರಿವಾಂಶುಮಾನ್।
07165025c ಬಭೌ ಪ್ರಚ್ಚಾದಯನ್ನಾಶಾಃ ಶರಜಾಲೈಃ ಸಮಂತತಃ।।

ರಾಜನ್! ಆಗ ಧೃಷ್ಟದ್ಯುಮ್ನನು ಕಿರಣಗಳಿಂದ ಸೂರ್ಯನು ಹೇಗೋ ಹಾಗೆ ಶರಜಾಲಗಳಿಂದ ಎಲ್ಲ ದಿಕ್ಕುಗಳನ್ನೂ ಪಸರಿಸುತ್ತಾ ಪ್ರಕಾಶಿಸಿದನು.

07165026a ತಸ್ಯ ದ್ರೋಣೋ ಧನುಶ್ಚಿತ್ತ್ವಾ ವಿದ್ಧ್ವಾ ಚೈನಂ ಶಿಲೀಮುಖೈಃ।
07165026c ಮರ್ಮಾಣ್ಯಭ್ಯಹನದ್ಭೂಯಃ ಸ ವ್ಯಥಾಂ ಪರಮಾಮಗಾತ್।।

ದ್ರೋಣನು ಅವನ ಧನುಸ್ಸನ್ನು ಕತ್ತರಿಸಿ ಶಿಲೀಮುಖಗಳಿಂದ ಅವನ ಮರ್ಮಸ್ಥಾನಗಳಿಗೆ ಹೊಡೆದು ಗಾಯಗೊಳಿಸಲು ಧೃಷ್ಟದ್ಯುಮ್ನನು ಬಹಳ ವ್ಯಥಿತನಾದನು.

07165027a ತತೋ ಭೀಮೋ ದೃಢಕ್ರೋಧೋ ದ್ರೋಣಸ್ಯಾಶ್ಲಿಷ್ಯ ತಂ ರಥಂ।
07165027c ಶನಕೈರಿವ ರಾಜೇಂದ್ರ ದ್ರೋಣಂ ವಚನಮಬ್ರವೀತ್।।

ರಾಜೇಂದ್ರ! ಆಗ ದೃಢಕ್ರೋಧ ಭೀಮನು ತನ್ನ ರಥವನ್ನು ದ್ರೋಣನ ರಥಕ್ಕೆ ತಾಗಿಸಿಕೊಂಡು ಮೆಲ್ಲ ಮೆಲ್ಲನೆ ದ್ರೋಣನೊಂದಿಗೆ ಈ ಮಾತನ್ನಾಡಿದನು:

07165028a ಯದಿ ನಾಮ ನ ಯುಧ್ಯೇರಂ ಶಿಕ್ಷಿತಾ ಬ್ರಹ್ಮಬಂಧವಃ।
07165028c ಸ್ವಕರ್ಮಭಿರಸಂತುಷ್ಟಾ ನ ಸ್ಮ ಕ್ಷತ್ರಂ ಕ್ಷಯಂ ವ್ರಜೇತ್।।

“ಒಂದುವೇಳೆ ಬ್ರಹ್ಮಬಂಧುಗಳು ತಮ್ಮ ಕರ್ಮಗಳಿಂದ ಅಸಂತುಷ್ಟರಾಗಿ ಪರಧರ್ಮವನ್ನು ಆಶ್ರಯಿಸಿ ಯುದ್ಧವನ್ನು ಮಾಡದೇ ಇದ್ದಿದ್ದರೆ ಈ ಕ್ಷತ್ರಿಯ ಕ್ಷಯವು ನಡೆಯುತ್ತಿರಲಿಲ್ಲ.

07165029a ಅಹಿಂಸಾ ಸರ್ವಭೂತೇಷು ಧರ್ಮಂ ಜ್ಯಾಯಸ್ತರಂ ವಿದುಃ।
07165029c ತಸ್ಯ ಚ ಬ್ರಾಹ್ಮಣೋ ಮೂಲಂ ಭವಾಂಶ್ಚ ಬ್ರಹ್ಮವಿತ್ತಮಃ।।

ಸರ್ವಭೂತಗಳೊಡನೆ ಅಹಿಂಸೆಯಿಂದ ನಡೆದುಕೊಳ್ಳುವುದು ಪರಮ ಧರ್ಮವೆಂದು ತಿಳಿದವರು ಹೇಳುತ್ತಾರೆ. ಅಹಿಂಸೆಗೆ ಬ್ರಾಹ್ಮಣನೇ ಮೂಲ. ನೀವಾದರೂ ಬ್ರಹ್ಮವಿತ್ತಮರಾಗಿದ್ದೀರಿ.

07165030a ಶ್ವಪಾಕವನ್ಮ್ಲೇಚ್ಚಗಣಾನ್ ಹತ್ವಾ ಚಾನ್ಯಾನ್ಪೃಥಗ್ವಿಧಾನ್।
07165030c ಅಜ್ಞಾನಾನ್ಮೂಢವದ್ಬ್ರಹ್ಮನ್ಪುತ್ರದಾರಧನೇಪ್ಸಯಾ।।

ಬ್ರಹ್ಮನ್! ಪುತ್ರ-ಪತ್ನಿ-ಧನವನ್ನು ಬಯಸಿ ಅಜ್ಞಾನದಿಂದ ಮೂಢ ಚಾಂಡಾಲರಂತೆ ನೀವು ಮ್ಲೇಚ್ಛಗಣಗಳನ್ನೂ ಅನ್ಯ ಕ್ಷತ್ರಿಯರನ್ನೂ ಸಂಹರಿಸುತ್ತಿರುವಿರಿ.

07165031a ಏಕಸ್ಯಾರ್ಥೇ ಬಹೂನ್ ಹತ್ವಾ ಪುತ್ರಸ್ಯಾಧರ್ಮವಿದ್ಯಥಾ।
07165031c ಸ್ವಕರ್ಮಸ್ಥಾನ್ವಿಕರ್ಮಸ್ಥೋ ನ ವ್ಯಪತ್ರಪಸೇ ಕಥಂ।।

ವಿಕರ್ಮಸ್ಥ ನೀವು ಒಬ್ಬರೇ ಒಬ್ಬ ಮಗನ ಸಲುವಾಗಿ ಸ್ವಕರ್ಮದಲ್ಲಿ ನಿರತರಾಗಿರುವ ಅನೇಕ ಕ್ಷತ್ರಿಯರನ್ನು ಸಂಹರಿಸುತ್ತಿದ್ದೀರಲ್ಲ! ಇದರಿಂದ ಹೇಗೆ ನಿಮಗೆ ನಾಚಿಕೆಯಾಗುವುದಿಲ್ಲ?

07165032a ಸ ಚಾದ್ಯ ಪತಿತಃ ಶೇತೇ ಪೃಷ್ಟೇನಾವೇದಿತಸ್ತವ।
07165032c ಧರ್ಮರಾಜೇನ ತದ್ವಾಕ್ಯಂ ನಾತಿಶಂಕಿತುಮರ್ಹಸಿ।।

ಅವನೇ ಇಂದು ಕೆಳಗುರುಳಿ ಹಿಂದೆ ಮಲಗಿದ್ದಾನೆ. ಇದು ನಿಮಗೆ ತಿಳಿದಿಲ್ಲ. ಧರ್ಮರಾಜನ ಆ ಮಾತನ್ನು ನೀವು ಅತಿಯಾಗಿ ಶಂಕಿಸಬಾರದು!”

07165033a ಏವಮುಕ್ತಸ್ತತೋ ದ್ರೋಣೋ ಭೀಮೇನೋತ್ಸೃಜ್ಯ ತದ್ಧನುಃ।
07165033c ಸರ್ವಾಣ್ಯಸ್ತ್ರಾಣಿ ಧರ್ಮಾತ್ಮಾ ಹಾತುಕಾಮೋಽಭ್ಯಭಾಷತ।

ಭೀಮಸೇನನು ಹೀಗೆ ಹೇಳಲು ದ್ರೋಣನು ಆ ಧನುಸ್ಸನ್ನು ಬಿಸುಟನು. ಸರ್ವ ಅಸ್ತ್ರಗಳನ್ನೂ ತೊರೆಯಲು ಬಯಸಿ ಧರ್ಮಾತ್ಮನು ಹೇಳಿದನು:

07165033e ಕರ್ಣ ಕರ್ಣ ಮಹೇಷ್ವಾಸ ಕೃಪ ದುರ್ಯೋಧನೇತಿ ಚ।।
07165034a ಸಂಗ್ರಾಮೇ ಕ್ರಿಯತಾಂ ಯತ್ನೋ ಬ್ರವೀಮ್ಯೇಷ ಪುನಃ ಪುನಃ।
07165034c ಪಾಂಡವೇಭ್ಯಃ ಶಿವಂ ವೋಽಸ್ತು ಶಸ್ತ್ರಮಭ್ಯುತ್ಸೃಜಾಮ್ಯಹಂ।।

“ಕರ್ಣ! ಮಹೇಷ್ವಾಸ ಕರ್ಣ! ಕೃಪ! ದುರ್ಯೋಧನ! ಪುನಃ ಪುನಃ ಹೇಳುತ್ತಿದ್ದೇನೆ. ಸಂಗ್ರಾಮದಲ್ಲಿ ಪ್ರಯತ್ನವನ್ನು ಮಾಡಿ! ಪಾಂಡವರಿಂದ ನಿಮಗೆ ಮಂಗಳವಾಗಲಿ. ನಾನು ಶಸ್ತ್ರಪರಿತ್ಯಾಗ ಮಾಡುತ್ತಿದ್ದೇನೆ!”

07165035a ಇತಿ ತತ್ರ ಮಹಾರಾಜ ಪ್ರಾಕ್ರೋಶದ್ದ್ರೌಣಿಮೇವ ಚ।
07165035c ಉತ್ಸೃಜ್ಯ ಚ ರಣೇ ಶಸ್ತ್ರಂ ರಥೋಪಸ್ಥೇ ನಿವೇಶ್ಯ ಚ।
07165035e ಅಭಯಂ ಸರ್ವಭೂತಾನಾಂ ಪ್ರದದೌ ಯೋಗಯುಕ್ತವಾನ್।।

ಮಹಾರಾಜ! ಹೀಗೆ ದ್ರೋಣನು ದ್ರೌಣಿಯನ್ನೇ ಕೂಗಿ ಕರೆಯುತ್ತಾ ರಣದಲ್ಲಿ ಶಸ್ತ್ರವನ್ನು ಬಿಸುಟು ರಥದಲ್ಲಿ ಕುಳಿತುಕೊಂಡನು. ಯೋಗಯುಕ್ತನಾಗಿ ಸರ್ವಭೂತಗಳಿಗೂ ಅಭಯವನ್ನಿತ್ತನು.

07165036a ತಸ್ಯ ತಚ್ಚಿದ್ರಮಾಜ್ಞಾಯ ಧೃಷ್ಟದ್ಯುಮ್ನಃ ಸಮುತ್ಥಿತಃ।
07165036c ಖಡ್ಗೀ ರಥಾದವಪ್ಲುತ್ಯ ಸಹಸಾ ದ್ರೋಣಮಭ್ಯಯಾತ್।।

ಅವನ ಆ ರೂಪವನ್ನು ಅರ್ಥಮಾಡಿಕೊಂಡು ಧೃಷ್ಟದ್ಯುಮ್ನನು ಮೇಲೆದ್ದು ಖಡ್ಗವನ್ನು ಹಿಡಿದು ರಥದಿಂದ ಹಾರಿ ಒಮ್ಮೆಲೇ ದ್ರೋಣನನ್ನು ಆಕ್ರಮಣಿಸಿದನು.

07165037a ಹಾಹಾಕೃತಾನಿ ಭೂತಾನಿ ಮಾನುಷಾಣೀತರಾಣಿ ಚ।
07165037c ದ್ರೋಣಂ ತಥಾಗತಂ ದೃಷ್ಟ್ವಾ ಧೃಷ್ಟದ್ಯುಮ್ನವಶಂ ಗತಂ।।

ಆ ಸ್ಥಿತಿಯಲ್ಲಿ ದ್ರೋಣನು ಧೃಷ್ಟದ್ಯುಮ್ನನ ವಶನಾದುದನ್ನು ಕಂಡು ಭೂತಗಳು, ಮನುಷ್ಯರು ಮತ್ತು ಇತರರು ಹಾಹಾಕಾರಗೈದರು.

07165038a ಹಾಹಾಕಾರಂ ಭೃಶಂ ಚಕ್ರುರಹೋ ಧಿಗಿತಿ ಚಾಬ್ರುವನ್।
07165038c ದ್ರೋಣೋಽಪಿ ಶಸ್ತ್ರಾಣ್ಯುತ್ಸೃಜ್ಯ ಪರಮಂ ಸಾಮ್ಯಮಾಸ್ಥಿತಃ।।

ಜೋರಾಗಿ ಹಾಹಾಕಾರವುಂಟಾಯಿತು. ಧಿಕ್ಕಾರವೆಂದೂ ಕೂಗಿಕೊಂಡರು. ಆದರೆ ದ್ರೋಣನಾದರೋ ಶಸ್ತ್ರಗಳನ್ನು ಬಿಸುಟು ಪರಮ ಸಾಮ್ಯಸ್ಥಿತಿಯನ್ನು ಹೊಂದಿದ್ದನು.

07165039a ತಥೋಕ್ತ್ವಾ ಯೋಗಮಾಸ್ಥಾಯ ಜ್ಯೋತಿರ್ಭೂತೋ ಮಹಾತಪಾಃ।
07165039c ದಿವಮಾಕ್ರಾಮದಾಚಾರ್ಯಃ ಸದ್ಭಿಃ ಸಹ ದುರಾಕ್ರಮಂ।।

ಹಾಗೆ ಹೇಳಿ ಆ ಮಹಾತಪಸ್ವಿ ಆಚಾರ್ಯನು ಯೋಗವನ್ನು ಆಶ್ರಯಿಸಿ ಜ್ಯೋತಿರ್ಭೂತನಾಗಿ ಸತ್ಪುರುಷರಿಗೂ ಅಸಾದ್ಯ ದಿವವನ್ನು ಪ್ರವೇಶಿಸಿದ್ದನು.

07165040a ದ್ವೌ ಸೂರ್ಯಾವಿತಿ ನೋ ಬುದ್ಧಿರಾಸೀತ್ತಸ್ಮಿಂಸ್ತಥಾ ಗತೇ।
07165040c ಏಕಾಗ್ರಮಿವ ಚಾಸೀದ್ಧಿ ಜ್ಯೋತಿರ್ಭಿಃ ಪೂರಿತಂ ನಭಃ।
07165040e ಸಮಪದ್ಯತ ಚಾರ್ಕಾಭೇ ಭಾರದ್ವಾಜನಿಶಾಕರೇ।।

ಅವನು ಹಾಗೆ ಹೋಗುತ್ತಿರಲು ಎರಡು ಸೂರ್ಯಗಳಿವೆಯೋ ಎನ್ನುವಂತೆ ನಮ್ಮ ಬುದ್ಧಿಗಳಿಗನ್ನಿಸಿತು. ಭಾರದ್ವಾಜನಿಶಾಕರನು ಉದಯಿಸಲು ಆಕಾಶವೆಲ್ಲವೂ ಪ್ರಕಾಶಮಾನವಾಯಿತು. ಅದು ಸೂರ್ಯನ ಜ್ಯೋತಿಯೊಂದಿಗೆ ಸೇರಿಕೊಂಡು ಒಂದಾಯಿತು.

07165041a ನಿಮೇಷಮಾತ್ರೇಣ ಚ ತಜ್ಜ್ಯೋತಿರಂತರಧೀಯತ।
07165041c ಆಸೀತ್ಕಿಲಕಿಲಾಶಬ್ದಃ ಪ್ರಹೃಷ್ಟಾನಾಂ ದಿವೌಕಸಾಂ।
07165041e ಬ್ರಹ್ಮಲೋಕಂ ಗತೇ ದ್ರೋಣೇ ಧೃಷ್ಟದ್ಯುಮ್ನೇ ಚ ಮೋಹಿತೇ।।

ನಿಮಿಷಮಾತ್ರದಲ್ಲಿ ಆ ಜ್ಯೋತಿಯು ಅಂತರ್ಧಾನವಾಯಿತು. ದ್ರೋಣನು ಬ್ರಹ್ಮಲೋಕಕ್ಕೆ ಹೋಗಲು ಮತ್ತು ಧೃಷ್ಟದ್ಯುಮ್ನನು ಮೋಹಿತನಾಗಲು ಪ್ರಹೃಷ್ಟ ದಿವೌಕಸರಲ್ಲಿ ಕಿಲ ಕಿಲ ಶಬ್ಧವುಂಟಾಯಿತು.

07165042a ವಯಮೇವ ತದಾದ್ರಾಕ್ಷ್ಮ ಪಂಚ ಮಾನುಷಯೋನಯಃ।
07165042c ಯೋಗಯುಕ್ತಂ ಮಹಾತ್ಮಾನಂ ಗಚ್ಚಂತಂ ಪರಮಾಂ ಗತಿಂ।।
07165043a ಅಹಂ ಧನಂಜಯಃ ಪಾರ್ಥಃ ಕೃಪಃ ಶಾರದ್ವತೋ ದ್ವಿಜಃ।
07165043c ವಾಸುದೇವಶ್ಚ ವಾರ್ಷ್ಣೇಯೋ ಧರ್ಮರಾಜಶ್ಚ ಪಾಂಡವಃ।।

ಯೋಗಯುಕ್ತನಾದ ಆ ಮಹಾತ್ಮನು ಪರಮಗತಿಯಲ್ಲಿ ಹೋಗಿದ್ದುದನ್ನು ಮಾನುಷಯೋನಿಗಳಾದ ನಾವು ಐವರು ಮಾತ್ರ ಕಂಡೆವು: ನಾನು, ಪಾರ್ಥ ಧನಂಜಯ, ದ್ವಿಜ ಶಾರದ್ವತ ಕೃಪ, ವಾರ್ಷ್ಣೇಯ ವಾಸುದೇವ ಮತ್ತು ಪಾಂಡವ ಧರ್ಮರಾಜ.

07165044a ಅನ್ಯೇ ತು ಸರ್ವೇ ನಾಪಶ್ಯನ್ಭಾರದ್ವಾಜಸ್ಯ ಧೀಮತಃ।
07165044c ಮಹಿಮಾನಂ ಮಹಾರಾಜ ಯೋಗಮುಕ್ತಸ್ಯ ಗಚ್ಚತಃ।।

ಮಹಾರಾಜ! ಧೀಮತ ಭಾರದ್ವಾಜ ಮಹಿಮಾನನು ಯೋಗಮುಕ್ತನಾಗಿ ಹೋಗಿದುದನ್ನು ಅನ್ಯರೆಲ್ಲರೂ ನೋಡಲಿಲ್ಲ.

07165045a ಗತಿಂ ಪರಮಿಕಾಂ ಪ್ರಾಪ್ತಮಜಾನಂತೋ ನೃಯೋನಯಃ।
07165045c ನಾಪಶ್ಯನ್ಗಚ್ಚಮಾನಂ ಹಿ ತಂ ಸಾರ್ಧಂ ಋಷಿಪುಂಗವೈಃ।
07165045e ಆಚಾರ್ಯಂ ಯೋಗಮಾಸ್ಥಾಯ ಬ್ರಹ್ಮಲೋಕಮರಿಂದಮಂ।।

ಆಚಾರ್ಯ ಅರಿಂದಮನು ಯೋಗವನ್ನು ಬಳಸಿ ಋಷಿಪುಂಗವರೊಡನೆ ಪರಮ ಗತಿಯನ್ನು ಹೊಂದಿ ಬ್ರಹ್ಮಲೋಕಕ್ಕೆ ಹೋಗುತ್ತಿದ್ದುದನ್ನು ಅಜ್ಞಾನಿ ಮನುಷ್ಯರು ನೋಡಲಿಲ್ಲ.

07165046a ವಿತುನ್ನಾಂಗಂ ಶರಶತೈರ್ನ್ಯಸ್ತಾಯುಧಮಸೃಕ್ಕ್ಷರಂ।
07165046c ಧಿಕ್ಕೃತಃ ಪಾರ್ಷತಸ್ತಂ ತು ಸರ್ವಭೂತೈಃ ಪರಾಮೃಶತ್।।

ನೂರಾರು ಶರಗಳಿಂದ ಅವನ ಅಂಗಗಳು ಗಾಯಗೊಂಡಿದ್ದವು. ಆಯುಧವನ್ನು ಕೆಳಗಿಟ್ಟಿದ್ದನು. ದೇಹದಿಂದ ರಕ್ತವು ಸೋರುತ್ತಿತ್ತು. ಅಂತಹ ಸ್ಥಿತಿಯಲ್ಲಿ ಅವನನ್ನು ಹಿಡಿದ ಪಾರ್ಷತನನ್ನು ಸರ್ವಭೂತಗಳೂ ಧಿಕ್ಕರಿಸಿದವು.

07165047a ತಸ್ಯ ಮೂರ್ಧಾನಮಾಲಂಬ್ಯ ಗತಸತ್ತ್ವಸ್ಯ ದೇಹಿನಃ।
07165047c ಕಿಂ ಚಿದಬ್ರುವತಃ ಕಾಯಾದ್ವಿಚಕರ್ತಾಸಿನಾ ಶಿರಃ।।

ಸತ್ವವನ್ನು ಕಳೆದುಕೊಂಡಿದ್ದ ದೇಹದ ತಲೆಗೂದಲನ್ನು ಹಿಡಿದು ಏನನ್ನೂ ಮಾತನಾಡದಂತಿದ್ದ ಅವನ ಶಿರವನ್ನು ಧೃಷ್ಟದ್ಯುಮ್ನನು ಕಾಯದಿಂದ ಕತ್ತರಿಸಿದನು.

07165048a ಹರ್ಷೇಣ ಮಹತಾ ಯುಕ್ತೋ ಭಾರದ್ವಾಜೇ ನಿಪಾತಿತೇ।
07165048c ಸಿಂಹನಾದರವಂ ಚಕ್ರೇ ಭ್ರಾಮಯನ್ಖಡ್ಗಮಾಹವೇ।।

ಭಾರದ್ವಾಜನು ಕೆಳಗೆ ಬೀಳಲು ಮಹಾಹರ್ಷಯುಕ್ತ ಧೃಷ್ಟದ್ಯುಮ್ನನು ಯುದ್ಧದಲ್ಲಿ ಖಡ್ಗವನ್ನು ತಿರುಗಿಸುತ್ತಾ ಜೋರಾಗಿ ಸಿಂಹನಾದಗೈದನು.

07165049a ಆಕರ್ಣಪಲಿತಃ ಶ್ಯಾಮೋ ವಯಸಾಶೀತಿಪಂಚಕಃ।
07165049c ತ್ವತ್ಕೃತೇ ವ್ಯಚರತ್ಸಂಖ್ಯೇ ಸ ತು ಷೋಡಶವರ್ಷವತ್।।

ಕಿವಿಯವರೆಗೂ ತಲೆಗೂದಲು ನೆರೆದಿದ್ದ ಕಪ್ಪುವರ್ಣದ ದ್ರೋಣನು ಎಂಭತ್ತೈದು ವರ್ಷದವನಾಗಿದ್ದನು. ಆದರೆ ನಿನ್ನ ಸಲುವಾಗಿ ಹದಿನಾರು ವರ್ಷದವನಂತೆ ರಣದಲ್ಲಿ ಸಂಚರಿಸುತ್ತಿದ್ದನು.

07165050a ಉಕ್ತವಾಂಶ್ಚ ಮಹಾಬಾಹುಃ ಕುಂತೀಪುತ್ರೋ ಧನಂಜಯಃ।
07165050c ಜೀವಂತಮಾನಯಾಚಾರ್ಯಂ ಮಾ ವಧೀರ್ದ್ರುಪದಾತ್ಮಜ।।

ಆಗ ಮಾಹಾಬಾಹು ಕುಂತೀಪುತ್ರ ಧನಂಜಯನು “ದ್ರುಪದಾತ್ಮಜ! ಆಚಾರ್ಯನನ್ನು ಜೀವಂತವಾಗಿ ಹಿಡಿದುಕೊಂಡು ಬಾ! ಕೊಲ್ಲಬೇಡ!” ಎಂದು ಕೂಗಿ ಹೇಳಿದ್ದನು.

07165051a ನ ಹಂತವ್ಯೋ ನ ಹಂತವ್ಯ ಇತಿ ತೇ ಸೈನಿಕಾಶ್ಚ ಹ।
07165051c ಉತ್ಕ್ರೋಶನ್ನರ್ಜುನಶ್ಚೈವ ಸಾನುಕ್ರೋಶಸ್ತಮಾದ್ರವತ್।।

“ಕೊಲ್ಲಬಾರದವರನ್ನು ಕೊಲ್ಲಬೇಡ!” ಎಂದು ಸೈನಿಕರು ಕೂಗಿ ಹೇಳುತ್ತಿದ್ದರು. ಅರ್ಜುನನು ಕೂಡ ಅದನ್ನೇ ಕೂಗಿ ಹೇಳುತ್ತಾ ಧೃಷ್ಟದ್ಯುಮ್ನನ ಬಳಿ ಧಾವಿಸಿ ಬಂದಿದ್ದನು.

07165052a ಕ್ರೋಶಮಾನೇಽರ್ಜುನೇ ಚೈವ ಪಾರ್ಥಿವೇಷು ಚ ಸರ್ವಶಃ।
07165052c ಧೃಷ್ಟದ್ಯುಮ್ನೋಽವಧೀದ್ದ್ರೋಣಂ ರಥತಲ್ಪೇ ನರರ್ಷಭಂ।।

ಅರ್ಜುನನೂ ಮತ್ತು ಸರ್ವ ಪಾರ್ಥಿವರೂ ಕೂಗಿಕೊಳ್ಳುತ್ತಿರುವಾಗಲೇ ಧೃಷ್ಟದ್ಯುಮ್ನನು ರಥದಮೇಲೆ ಕುಳಿತಿದ್ದ ನರರ್ಷಭ ದ್ರೋಣನನ್ನು ವಧಿಸಿದನು.

07165053a ಶೋಣಿತೇನ ಪರಿಕ್ಲಿನ್ನೋ ರಥಾದ್ಭೂಮಿಮರಿಂದಮಃ।
07165053c ಲೋಹಿತಾಂಗ ಇವಾದಿತ್ಯೋ ದುರ್ದರ್ಶಃ ಸಮಪದ್ಯತ।
07165053e ಏವಂ ತಂ ನಿಹತಂ ಸಂಖ್ಯೇ ದದೃಶೇ ಸೈನಿಕೋ ಜನಃ।।

ರಕ್ತದಿಂದ ತೋಯ್ದ ಆ ಅರಿಂದಮನು ರಥದಿಂದ ನೆಲಕ್ಕೆ ಬೀಳಲು ಲೋಹಿತಾಂಗ ಆ ದುರ್ದರ್ಷನು ಆದಿತ್ಯನಂತೆ ತೋರಿದನು. ರಣದಲ್ಲಿ ಹೀಗೆ ಅವನು ಸಂಹರಿಸಲ್ಪಟ್ಟಿದುದನ್ನು ಸೈನಿಕ ಜನರು ನೋಡಿದರು.

07165054a ಧೃಷ್ಟದ್ಯುಮ್ನಸ್ತು ತದ್ರಾಜನ್ಭಾರದ್ವಾಜಶಿರೋ ಮಹತ್।
07165054c ತಾವಕಾನಾಂ ಮಹೇಷ್ವಾಸಃ ಪ್ರಮುಖೇ ತತ್ಸಮಾಕ್ಷಿಪತ್।।

ರಾಜನ್! ಮಹೇಷ್ವಾಸ ಧೃಷ್ಟದ್ಯುಮ್ನನಾದರೋ ಭಾರದ್ವಾಜನ ಆ ಮಹಾಶಿರವನ್ನು ನಿನ್ನವರ ಪ್ರಮುಖದಲ್ಲಿ ಎಸೆದನು.

07165055a ತೇ ತು ದೃಷ್ಟ್ವಾ ಶಿರೋ ರಾಜನ್ಭಾರದ್ವಾಜಸ್ಯ ತಾವಕಾಃ।
07165055c ಪಲಾಯನಕೃತೋತ್ಸಾಹಾ ದುದ್ರುವುಃ ಸರ್ವತೋದಿಶಂ।।

ರಾಜನ್! ಭಾರದ್ವಾಜನ ಆ ಶಿರವನ್ನು ನೋಡಿ ನಿಮ್ಮವರು ಪಲಾಯನಮಾಡಲು ಉತ್ಸುಕರಾಗಿ ಸರ್ವ ದಿಕ್ಕುಗಳಲ್ಲಿ ಓಡಿ ಹೋದರು.

07165056a ದ್ರೋಣಸ್ತು ದಿವಮಾಸ್ಥಾಯ ನಕ್ಷತ್ರಪಥಮಾವಿಶತ್।
07165056c ಅಹಮೇವ ತದಾದ್ರಾಕ್ಷಂ ದ್ರೋಣಸ್ಯ ನಿಧನಂ ನೃಪ।।

ನೃಪ! ದ್ರೋಣನಾದರೋ ದಿವವನ್ನು ಸೇರಿ ನಕ್ಷತ್ರಪಥವನ್ನು ಪ್ರವೇಶಿಸಿದನು. ದ್ರೋಣನ ನಿಧನವನ್ನು ನಾನೊಬ್ಬನೇ ನೋಡಿದೆನು.

07165057a ಋಷೇಃ ಪ್ರಸಾದಾತ್ಕೃಷ್ಣಸ್ಯ ಸತ್ಯವತ್ಯಾಃ ಸುತಸ್ಯ ಚ।
07165057c ವಿಧೂಮಾಮಿವ ಸಮ್ಯಾಂತೀಮುಲ್ಕಾಂ ಪ್ರಜ್ವಲಿತಾಮಿವ।
07165057e ಅಪಶ್ಯಾಮ ದಿವಂ ಸ್ತಬ್ಧ್ವಾ ಗಚ್ಚಂತಂ ತಂ ಮಹಾದ್ಯುತಿಂ।।

ಸತ್ಯವತೀ ಸುತ ಋಷಿ ಕೃಷ್ಣನ ಪ್ರಸಾದದಿಂದ ನಾನು ಆ ಮಹಾದ್ಯುತಿಯು ಹೊಗೆಯಿಲ್ಲದ ಅಗ್ನಿಯಂತೆ ಮತ್ತು ಪ್ರಜ್ವಲಿಸುತ್ತಿರುವ ಉಲ್ಕೆಯಂತೆ ದಿವಿಯನ್ನು ಸೇರಿ ಹೋಗುತ್ತಿರುವುದನ್ನು ನೋಡಿದೆನು.

07165058a ಹತೇ ದ್ರೋಣೇ ನಿರುತ್ಸಾಹಾನ್ಕುರೂನ್ಪಾಂಡವಸೃಂಜಯಾಃ।
07165058c ಅಭ್ಯದ್ರವನ್ಮಹಾವೇಗಾಸ್ತತಃ ಸೈನ್ಯಂ ವ್ಯದೀರ್ಯತ।।

ದ್ರೋಣನು ಹತನಾಗಲು ನಿರುತ್ಸಾಹಿತರಾಗಿದ್ದ ಕುರುಗಳನ್ನು ಪಾಂಡವ-ಸೃಂಜಯರು ಮಹಾವೇಗದಿಂದ ಆಕ್ರಮಣಿಸಿದರು. ಆಗ ಕೌರವ ಸೈನ್ಯವು ಒಡೆದುಹೋಯಿತು.

07165059a ನಿಹತಾ ಹಯಭೂಯಿಷ್ಠಾಃ ಸಂಗ್ರಾಮೇ ನಿಶಿತೈಃ ಶರೈಃ।
07165059c ತಾವಕಾ ನಿಹತೇ ದ್ರೋಣೇ ಗತಾಸವ ಇವಾಭವನ್।।

ಸಂಗ್ರಾಮದಲ್ಲಿ ನಿಶಿತಶರಗಳಿಂದ ಅನೇಕರು ಹತರಾದರು. ದ್ರೋಣನು ಹತನಾಗಲು ನಿನ್ನವರು ಜೀವವನ್ನೇ ಕಳೆದುಕೊಂಡವರಂತೆ ಆಗಿದ್ದರು.

07165060a ಪರಾಜಯಮಥಾವಾಪ್ಯ ಪರತ್ರ ಚ ಮಹದ್ಭಯಂ।
07165060c ಉಭಯೇನೈವ ತೇ ಹೀನಾ ನಾವಿಂದನ್ಧೃತಿಮಾತ್ಮನಃ।।

ಕೌರವ ಸೇನೆಯು ಇಲ್ಲಿ ಪರಾಜಯವನ್ನು ಹೊಂದಿ ಮರಣಾನಂತರದ ಮಹಾಭಯವನ್ನೂ ಹೊಂದಿದ್ದರು. ಇವೆರಡರಿಂದಲೂ ವಂಚಿತರಾದ ಆವರು ಆತ್ಮಧೃತಿಯನ್ನು ಕಳೆದುಕೊಂಡು ದುಃಖಿತರಾದರು.

07165061a ಅನ್ವಿಚ್ಚಂತಃ ಶರೀರಂ ತು ಭಾರದ್ವಾಜಸ್ಯ ಪಾರ್ಥಿವಾಃ।
07165061c ನಾಧ್ಯಗಚ್ಚಂಸ್ತದಾ ರಾಜನ್ಕಬಂಧಾಯುತಸಂಕುಲೇ।।

ರಾಜನ್! ನಮ್ಮ ಕಡೆಯ ಪಾರ್ಥಿವರು ಭಾರದ್ವಾಜನ ಶರೀರವನ್ನು ಹುಡುಕಿದರೂ ಲಕ್ಷಗಟ್ಟಲೆ ಕಬಂಧಗಳ ರಾಶಿಗಳಲ್ಲಿ ಅವರಿಗೆ ಅದು ಸಿಗಲೇ ಇಲ್ಲ.

07165062a ಪಾಂಡವಾಸ್ತು ಜಯಂ ಲಬ್ಧ್ವಾ ಪರತ್ರ ಚ ಮಹದ್ಯಶಃ।
07165062c ಬಾಣಶಬ್ದರವಾಂಶ್ಚಕ್ರುಃ ಸಿಂಹನಾದಾಂಶ್ಚ ಪುಷ್ಕಲಾನ್।।

ಪಾಂಡವರಾದರೋ ಜಯ ಮತ್ತು ಮರಣಾನಂತರದ ಮಹಾಯಶಸ್ಸನ್ನು ಗಳಿಸಿ ಬಾಣಗಳಿಂದ ಶಬ್ಧಮಾಡಿದರು ಮತ್ತು ಪುಷ್ಕಲ ಸಿಂಹನಾದಗೈದರು.

07165063a ಭೀಮಸೇನಸ್ತತೋ ರಾಜನ್ಧೃಷ್ಟದ್ಯುಮ್ನಶ್ಚ ಪಾರ್ಷತಃ।
07165063c ವರೂಥಿನ್ಯಾಮನೃತ್ಯೇತಾಂ ಪರಿಷ್ವಜ್ಯ ಪರಸ್ಪರಂ।।

ರಾಜನ್! ಆಗ ಭೀಮಸೇನ ಮತ್ತು ಪಾರ್ಷತ ಧೃಷ್ಟದ್ಯುಮ್ನರು ಪರಸ್ಪರರನ್ನು ಬಿಗಿದಪ್ಪಿ ಸೇನೆಗಳ ಮಧ್ಯೆ ಕುಣಿದಾಡಿದರು.

07165064a ಅಬ್ರವೀಚ್ಚ ತದಾ ಭೀಮಃ ಪಾರ್ಷತಂ ಶತ್ರುತಾಪನಂ।
07165064c ಭೂಯೋಽಹಂ ತ್ವಾಂ ವಿಜಯಿನಂ ಪರಿಷ್ವಕ್ಷ್ಯಾಮಿ ಪಾರ್ಷತ।
07165064e ಸೂತಪುತ್ರೇ ಹತೇ ಪಾಪೇ ಧಾರ್ತರಾಷ್ಟ್ರೇ ಚ ಸಮ್ಯುಗೇ।।

ಆಗ ಭೀಮನು ಶತ್ರುತಾಪನ ಪಾರ್ಷತನಿಗೆ ಹೇಳಿದನು: “ಪಾರ್ಷತ! ಸಂಯುಗದಲ್ಲಿ ಸೂತಪುತ್ರ ಮತ್ತು ಪಾಪಿ ಧಾರ್ತರಾಷ್ಟ್ರನು ಹತನಾದನಂತರ ವಿಜಯಿಯಾದ ನಿನ್ನನ್ನು ಪುನಃ ಅಪ್ಪಿಕೊಳ್ಳುತ್ತೇನೆ!”

07165065a ಏತಾವದುಕ್ತ್ವಾ ಭೀಮಸ್ತು ಹರ್ಷೇಣ ಮಹತಾ ಯುತಃ।
07165065c ಬಾಹುಶಬ್ದೇನ ಪೃಥಿವೀಂ ಕಂಪಯಾಮಾಸ ಪಾಂಡವಃ।।

ಹೀಗೆ ಹೇಳಿ ಪಾಂಡವ ಭೀಮನು ಮಹಾ ಹರ್ಷಗೊಂಡವನಾಗಿ ತೋಳಿನ ಶಬ್ಧದಿಂದ ಭೂಮಿಯನ್ನೇ ನಡುಗಿಸತೊಡಗಿದನು.

07165066a ತಸ್ಯ ಶಬ್ದೇನ ವಿತ್ರಸ್ತಾಃ ಪ್ರಾದ್ರವಂಸ್ತಾವಕಾ ಯುಧಿ।
07165066c ಕ್ಷತ್ರಧರ್ಮಂ ಸಮುತ್ಸೃಜ್ಯ ಪಲಾಯನಪರಾಯಣಾಃ।।

ಅವನ ಆ ಶಬ್ಧದಿಂದ ಭಯಭೀತರಾದ ನಿನ್ನವರು ಕ್ಷತ್ರಧರ್ಮವನ್ನು ತ್ಯಜಿಸಿ ಪಲಾಯನಪರಾಯಣರಾಗಿ ಓಡಿಹೋಗತೊಡಗಿದರು.

07165067a ಪಾಂಡವಾಸ್ತು ಜಯಂ ಲಬ್ಧ್ವಾ ಹೃಷ್ಟಾ ಹ್ಯಾಸನ್ವಿಶಾಂ ಪತೇ।
07165067c ಅರಿಕ್ಷಯಂ ಚ ಸಂಗ್ರಾಮೇ ತೇನ ತೇ ಸುಖಮಾಪ್ನುವನ್।।

ವಿಶಾಂಪತೇ! ಪಾಂಡವರಾದರೋ ಜಯವನ್ನು ಪಡೆದು ಸಂತೋಷವನ್ನು ತಮ್ಮದಾಗಿಸಿಕೊಂಡರು. ಸಂಗ್ರಾಮದಲ್ಲಿ ಶತ್ರುನಾಶದಿಂದ ಸುಖವನ್ನು ಹೊಂದಿದರು.

07165068a ತತೋ ದ್ರೋಣೇ ಹತೇ ರಾಜನ್ಕುರವಃ ಶಸ್ತ್ರಪೀಡಿತಾಃ।
07165068c ಹತಪ್ರವೀರಾ ವಿಧ್ವಸ್ತಾ ಭೃಶಂ ಶೋಕಪರಾಯಣಾಃ।।

ರಾಜನ್! ದ್ರೋಣನು ಹತನಾದ ನಂತರ ಮತ್ತು ಅನೇಕ ವೀರರು ಹತರಾದ ನಂತರ ಶಸ್ತ್ರಪೀಡಿತ ಗಾಯಗೊಂಡ ಕುರುಗಳು ತುಂಬಾ ಶೋಕಪರಾಯಣರಾದರು.

07165069a ವಿಚೇತಸೋ ಹತೋತ್ಸಾಹಾಃ ಕಶ್ಮಲಾಭಿಹತೌಜಸಃ।
07165069c ಆರ್ತಸ್ವರೇಣ ಮಹತಾ ಪುತ್ರಂ ತೇ ಪರ್ಯವಾರಯನ್।।

ಚೇತನಗಳನ್ನೇ ಕಳೆದುಕೊಂಡ, ಉತ್ಸಾಹಹೀನರಾದ, ದೀನರೂ, ತೇಜಸ್ಸು ಕುಂದಿದವರೂ ಆದ ಅವರು ಮಹಾ ಆರ್ತಸ್ವರದಿಂದ ಅಳುತ್ತಾ ನಿನ್ನ ಮಗನನ್ನು ಸುತ್ತುವರೆದರು.

07165070a ರಜಸ್ವಲಾ ವೇಪಮಾನಾ ವೀಕ್ಷಮಾಣಾ ದಿಶೋ ದಶ।
07165070c ಅಶ್ರುಕಂಠಾ ಯಥಾ ದೈತ್ಯಾ ಹಿರಣ್ಯಾಕ್ಷೇ ಪುರಾ ಹತೇ।।

ಹಿಂದೆ ಹಿರಣ್ಯಾಕ್ಷನು ಹತನಾದಾಗ ದೈತ್ಯರು ಹೇಗಾಗಿದ್ದರೋ ಹಾಗೆ ಕುರುಸೈನಿಕರು ಧೂಳುತುಂಬಿದವರಾಗಿ ದಿಕ್ಕು ದಿಕ್ಕುಗಳನ್ನು ನೋಡುತ್ತಾ ನಡುಗುತ್ತಿದ್ದರು.

07165071a ಸ ತೈಃ ಪರಿವೃತೋ ರಾಜಾ ತ್ರಸ್ತೈಃ ಕ್ಷುದ್ರಮೃಗೈರಿವ।
07165071c ಅಶಕ್ನುವನ್ನವಸ್ಥಾತುಮಪಾಯಾತ್ತನಯಸ್ತವ।।

ಕ್ಷುದ್ರಮೃಗಗಳಂತೆ ಪರಿವೃತರಾಗಿದ್ದ ಅವರನ್ನು ಸಮಾಧಾನಗೊಳಿಸಲು ಅಸಮರ್ಥನಾಗಿ ನಿನ್ನ ಮಗ ರಾಜನು ಅಲ್ಲಿಂದ ಹೊರಟು ಹೋದನು.

07165072a ಕ್ಷುತ್ಪಿಪಾಸಾಪರಿಶ್ರಾಂತಾಸ್ತೇ ಯೋಧಾಸ್ತವ ಭಾರತ।
07165072c ಆದಿತ್ಯೇನ ಚ ಸಂತಪ್ತಾ ಭೃಶಂ ವಿಮನಸೋಽಭವನ್।।

ಭಾರತ! ಹಸಿವು-ಬಾಯಾರಿಕೆಗಳಿಂದ ಬಳಲಿದ್ದ ನಿನ್ನ ಯೋಧರು ಸೂರ್ಯನ ಬಿಸಿಲಿನಿಂದ ತುಂಬಾ ಸಂತಪ್ತರಾಗಿ ವಿಮನಸ್ಕರಾದರು.

07165073a ಭಾಸ್ಕರಸ್ಯೇವ ಪತನಂ ಸಮುದ್ರಸ್ಯೇವ ಶೋಷಣಂ।
07165073c ವಿಪರ್ಯಾಸಂ ಯಥಾ ಮೇರೋರ್ವಾಸವಸ್ಯೇವ ನಿರ್ಜಯಂ।।
07165074a ಅಮರ್ಷಣೀಯಂ ತದ್ದೃಷ್ಟ್ವಾ ಭಾರದ್ವಾಜಸ್ಯ ಪಾತನಂ।
07165074c ತ್ರಸ್ತರೂಪತರಾ ರಾಜನ್ಕೌರವಾಃ ಪ್ರಾದ್ರವನ್ಭಯಾತ್।।

ಭಾಸ್ಕರನೇ ಬಿದ್ದುಬಿಟ್ಟನೋ ಅಥವಾ ಸಮುದ್ರವೇ ಒಣಗಿಹೋಯಿತೋ ಅಥವಾ ಮೇರುಪರ್ವತವೇ ತಲೆಕೆಳಗಾಯಿತೋ ಅಥವಾ ಇಂದ್ರನೇ ಸೋತುಹೋದನೋ ಎನ್ನುವಂತಿದ್ದ ಆ ಭಾರದ್ವಾಜನ ಪತನವನ್ನು ನೋಡಿ ಸಹಿಸಿಕೊಳ್ಳಲಾರದೇ ಅತ್ಯಂತ ಭಯಭೀತರಾಗಿ ನಡುಗುತ್ತಾ ಕೌರವರು ಪಲಾಯನಮಾಡತೊಡಗಿದರು.

07165075a ಗಾಂಧಾರರಾಜಃ ಶಕುನಿಸ್ತ್ರಸ್ತಸ್ತ್ರಸ್ತತರೈಃ ಸಹ।
07165075c ಹತಂ ರುಕ್ಮರಥಂ ದೃಷ್ಟ್ವಾ ಪ್ರಾದ್ರವತ್ಸಹಿತೋ ರಥೈಃ।।

ರುಕ್ಮರಥ ದ್ರೋಣನು ಹತನಾದುದನ್ನು ಕಂಡ ಗಾಂಧಾರರಾಜ ಶಕುನಿಯು ಭಯಗೊಂಡು ತನಗಿಂತಲೂ ಹೆಚ್ಚು ಭಯಗೊಂಡಿದ್ದ ರಥಿಕರೊಡನೆ ಪಲಾಯನಮಾಡಿದನು.

07165076a ವರೂಥಿನೀಂ ವೇಗವತೀಂ ವಿದ್ರುತಾಂ ಸಪತಾಕಿನೀಂ।
07165076c ಪರಿಗೃಹ್ಯ ಮಹಾಸೇನಾಂ ಸೂತಪುತ್ರೋಽಪಯಾದ್ಭಯಾತ್।।

ಸೂತಪುತ್ರ ಕರ್ಣನು ಭಯದಿಂದ ವೇಗವಾಗಿ ಓಡಿಹೋಗುತ್ತಿರುವ ಪತಾಕೆಗಳುಳ್ಳ ರಥಗಳ ಮಹಾಸೇನೆಯೊಂದಿಗೆ ಪಲಾಯನಮಾಡಿದನು.

07165077a ರಥನಾಗಾಶ್ವಕಲಿಲಾಂ ಪುರಸ್ಕೃತ್ಯ ತು ವಾಹಿನೀಂ।
07165077c ಮದ್ರಾಣಾಮೀಶ್ವರಃ ಶಲ್ಯೋ ವೀಕ್ಷಮಾಣೋಽಪಯಾದ್ಭಯಾತ್।।

ಮದ್ರರ ರಾಜ ಶಲ್ಯನೂ ಕೂಡ ರಥ-ಆನೆ-ಕುದುರೆಗಳಿಂದ ಸಮೃದ್ಧ ತನ್ನ ಸೇನೆಯನ್ನು ಮುಂದೆಮಾಡಿಕೊಂಡು ಭಯದಿಂದ ಹಿಂದೆಮುಂದೆ ನೋಡುತ್ತಾ ಪಲಾಯನಮಾಡಿದನು.

07165078a ಹತಪ್ರವೀರೈರ್ಭೂಯಿಷ್ಠಂ ದ್ವಿಪೈರ್ಬಹುಪದಾತಿಭಿಃ।
07165078c ವೃತಃ ಶಾರದ್ವತೋಽಗಚ್ಚತ್ಕಷ್ಟಂ ಕಷ್ಟಮಿತಿ ಬ್ರುವನ್।।

ಹತರಾಗಿದ್ದ ಅನೇಕ ವೀರರೂ, ಆನೆಗಳೂ ಮತ್ತು ಅನೇಕ ಪದಾತಿಗಳಿಂದ ಆವೃತರಾಗಿದ್ದ ಶಾರದ್ವತ ಕೃಪನು “ಕಷ್ಟ! ಕಷ್ಟ!” ಎಂದು ಹೇಳಿಕೊಳ್ಳುತ್ತಾ ರಣದಿಂದ ಹೊರಟುಹೋದನು.

07165079a ಭೋಜಾನೀಕೇನ ಶಿಷ್ಟೇನ ಕಲಿಂಗಾರಟ್ಟಬಾಹ್ಲಿಕೈಃ।
07165079c ಕೃತವರ್ಮಾ ವೃತೋ ರಾಜನ್ಪ್ರಾಯಾತ್ಸುಜವನೈರ್ಹಯೈಃ।।

ರಾಜನ್! ಅಳಿದುಳಿದ ಭೋಜರಿಂದ, ಕಳಿಂಗ, ಆರಟ್ಟ ಮತ್ತು ಬಾಹ್ಲೀಕರಿಂದ ಪರಿವೃತನಾಗಿ ಕೃತವರ್ಮನು ವೇಗವಾಗಿ ಹೋಗುತ್ತಿರುವ ಕುದುರೆಗಳಿಂದ ಎಳೆಯಲ್ಪಟ್ಟ ರಥದಲ್ಲಿ ಕುಳಿತು ಪಲಾಯನಮಾಡಿದನು.

07165080a ಪದಾತಿಗಣಸಮ್ಯುಕ್ತಸ್ತ್ರಸ್ತೋ ರಾಜನ್ಭಯಾರ್ದಿತಃ।
07165080c ಉಲೂಕಃ ಪ್ರಾದ್ರವತ್ತತ್ರ ದೃಷ್ಟ್ವಾ ದ್ರೋಣಂ ನಿಪಾತಿತಂ।।

ರಾಜನ್! ದ್ರೋಣನು ಕೆಳಗುರುಳಿದ್ದುದನ್ನು ನೋಡಿ ಉಲೂಕನು ಪದಾತಿಸೇನೆಗಳಿಂದ ಕೂಡಿ ಭಯಾರ್ದಿತನಾಗಿ ನಡುಗುತ್ತಾ ಪಲಾಯನಗೈದನು.

07165081a ದರ್ಶನೀಯೋ ಯುವಾ ಚೈವ ಶೌರ್ಯೇ ಚ ಕೃತಲಕ್ಷಣಃ।
07165081c ದುಃಶಾಸನೋ ಭೃಶೋದ್ವಿಗ್ನಃ ಪ್ರಾದ್ರವದ್ಗಜಸಂವೃತಃ।।

ಪರಾಕ್ರಮಿಯ ಶೌರ್ಯದ ಲಕ್ಷಣಗಳುಳ್ಳ, ಯುವಕನೂ ಸುಂದರನೂ ಆದ ದುಃಶಾಸನನು ತುಂಬಾ ಉದ್ವಿಗ್ನನಾಗಿ ಗಜಸೇನೆಯಿಂದ ಸುತ್ತುವರೆಯಲ್ಪಟ್ಟು ಪಲಾಯನಮಾಡಿದನು.

07165082a ಗಜಾಶ್ವರಥಸಮ್ಯುಕ್ತೋ ವೃತಶ್ಚೈವ ಪದಾತಿಭಿಃ।
07165082c ದುರ್ಯೋಧನೋ ಮಹಾರಾಜ ಪ್ರಾಯಾತ್ತತ್ರ ಮಹಾರಥಃ।।

ಮಹಾರಾಜ! ಮಹಾರಥ ದುರ್ಯೋಧನನು ಗಜಾಶ್ವರಥಗಳಿಂದೊಡಗೂಡಿದ ಸೇನೆಯಿಂದ ಮತ್ತು ಪದಾತಿಗಳಿಂದ ಸುತ್ತುವರೆಯಲ್ಪಟ್ಟು ಅಲ್ಲಿಂದ ಪಲಾಯನಮಾಡಿದನು.

07165083a ಗಜಾನ್ರಥಾನ್ಸಮಾರುಹ್ಯ ಪರಸ್ಯಾಪಿ ಹಯಾಂ ಜನಾಃ।
07165083c ಪ್ರಕೀರ್ಣಕೇಶಾ ವಿಧ್ವಸ್ತಾ ನ ದ್ವಾವೇಕತ್ರ ಧಾವತಃ।।

ಆನೆ ರಥಗಳನ್ನು ಏರಿಕೊಂಡು, ಇತರ ಜನರು ಕುದುರೆಗಳನ್ನೇರಿಕೊಂಡು ತಲೆಕೂದಲಗಳು ಕೆದರಿಹೋಗಿರಲು ತಡವರಿಸುತ್ತಾ ಮುಗ್ಗರಿಸುತ್ತಾ ಓಡಿ ಹೋಗುತ್ತಿದ್ದರು.

07165084a ನೇದಮಸ್ತೀತಿ ಪುರುಷಾ ಹತೋತ್ಸಾಹಾ ಹತೌಜಸಃ।
07165084c ಉತ್ಸೃಜ್ಯ ಕವಚಾನನ್ಯೇ ಪ್ರಾದ್ರವಂಸ್ತಾವಕಾ ವಿಭೋ।।

ವಿಭೋ! ನಿನ್ನವರು “ಇದು ಇನ್ನು ಉಳಿಯುವುದಿಲ್ಲ” ಎಂದು ಹೇಳಿಕೊಳ್ಳುತ್ತಾ, ಉತ್ಸಾಹ ತೇಜಸ್ಸುಗಳನ್ನು ಕಳೆದುಕೊಂಡು, ಇನ್ನು ಕೆಲವರು ಕವಚಗಳನ್ನೇ ಬಿಸುಟು ಓಡಿಹೋಗುತ್ತಿದ್ದರು.

07165085a ಅನ್ಯೋನ್ಯಂ ತೇ ಸಮಾಕ್ರೋಶನ್ಸೈನಿಕಾ ಭರತರ್ಷಭ।
07165085c ತಿಷ್ಠ ತಿಷ್ಠೇತಿ ನ ಚ ತೇ ಸ್ವಯಂ ತತ್ರಾವತಸ್ಥಿರೇ।।

ಭರತರ್ಷಭ! ಸೈನಿಕರು “ನಿಲ್ಲು! ನಿಲ್ಲು!” ಎಂದು ಅನ್ಯೋನ್ಯರನ್ನು ಕೂಗಿ ಕರೆಯುತ್ತಾ ಓಡಿಹೋಗುತ್ತಿದ್ದರೂ ಸ್ವಯಂ ತಾವು ಯಾರಿಗೂ ನಿಲ್ಲುತ್ತಿರಲಿಲ್ಲ.

07165086a ಧುರ್ಯಾನ್ಪ್ರಮುಚ್ಯ ತು ರಥಾದ್ಧತಸೂತಾನ್ಸ್ವಲಂಕೃತಾನ್।
07165086c ಅಧಿರುಹ್ಯ ಹಯಾನ್ಯೋಧಾಃ ಕ್ಷಿಪ್ರಂ ಪದ್ಭಿರಚೋದಯನ್।।

ಸಾರಥಿಗಳನ್ನು ಕಳೆದುಕೊಂಡ ಸ್ವಲಂಕೃತ ರಥಗಳಿಂದ ಕುದುರೆಗಳನ್ನು ಬಿಚ್ಚಿ ಏರಿ ಕಾಲುಗಳಿಂದಲೇ ಪ್ರಚೋದಿಸುತ್ತಾ ವೇಗದಿಂದ ಯೋಧರು ಓಡಿಹೋಗುತ್ತಿದ್ದರು.

07165087a ದ್ರವಮಾಣೇ ತಥಾ ಸೈನ್ಯೇ ತ್ರಸ್ತರೂಪೇ ಹತೌಜಸಿ।
07165087c ಪ್ರತಿಸ್ರೋತ ಇವ ಗ್ರಾಹೋ ದ್ರೋಣಪುತ್ರಃ ಪರಾನಿಯಾತ್।।

ಈ ರೀತಿ ತೇಜೋಹೀನರಾಗಿ ಭಯದಿಂದ ಓಡಿಹೋಗುತ್ತಿದ್ದ ಸೇನೆಯನ್ನು ಪ್ರವಾಹಕ್ಕೆ ವಿರುದ್ಧವಾಗಿ ವೇಗದಿಂದ ಮೊಸಳೆಯೋಪಾದಿಯಲ್ಲಿ ಶತ್ರುಸೇನೆಯ ಕಡೆ ಬರುತ್ತಿದ್ದ ದ್ರೋಣಪುತ್ರನು ನೋಡಿದನು.

07165088a ಹತ್ವಾ ಬಹುವಿಧಾಂ ಸೇನಾಂ ಪಾಂಡೂನಾಂ ಯುದ್ಧದುರ್ಮದಃ।
07165088c ಕಥಂ ಚಿತ್ ಸಂಕಟಾನ್ಮುಕ್ತೋ ಮತ್ತದ್ವಿರದವಿಕ್ರಮಃ।।

ಮದಿಸಿದ ಸಲಗದ ವಿಕ್ರಮವುಳ್ಳ ಆ ಯುದ್ಧದುರ್ಮದನು ಪಾಂಡವರ ಬಹುವಿಧದ ಸೇನೆಯನ್ನು ಸಂಹರಿಸಿ, ಎಷ್ಟೋ ಸಂಕಟಗಳಿಂದ ಪಾರಾಗಿ ಬರುತ್ತಿದ್ದನು.

07165089a ದ್ರವಮಾಣಂ ಬಲಂ ದೃಷ್ಟ್ವಾ ಪಲಾಯನಕೃತಕ್ಷಣಂ।
07165089c ದುರ್ಯೋಧನಂ ಸಮಾಸಾದ್ಯ ದ್ರೋಣಪುತ್ರೋಽಬ್ರವೀದಿದಂ।।

ಪಲಾಯನಮಾಡುವುದರಲ್ಲಿಯೇ ಹೆಚ್ಚು ಉತ್ಸಾಹವಿಟ್ಟಿದ್ದ ಮತ್ತು ದಿಕ್ಕಾಪಾಲಾಗಿ ಓಡಿ ಹೋಗುತ್ತಿರುವ ಸೇನೆಯನ್ನು ನೋಡಿ ದ್ರೋಣಪುತ್ರನು ದುರ್ಯೋಧನನ ಬಳಿಸಾರಿ ಹೀಗೆ ಹೇಳಿದನು:

07165090a ಕಿಮಿಯಂ ದ್ರವತೇ ಸೇನಾ ತ್ರಸ್ತರೂಪೇವ ಭಾರತ।
07165090c ದ್ರವಮಾಣಾಂ ಚ ರಾಜೇಂದ್ರ ನಾವಸ್ಥಾಪಯಸೇ ರಣೇ।।

“ಭಾರತ! ರಾಜೇಂದ್ರ! ಬಹಳ ಭಯಗೊಂಡವರಂತೆ ಈ ಸೇನೆಯೇಕೆ ಓಡಿಹೋಗುತ್ತಿದೆ? ರಣದಿಂದ ಓಡಿಹೋಗುತ್ತಿರುವವರನ್ನು ನೀನೇಕೆ ತಡೆಯುತ್ತಿಲ್ಲ?

07165091a ತ್ವಂ ಚಾಪಿ ನ ಯಥಾಪೂರ್ವಂ ಪ್ರಕೃತಿಸ್ಥೋ ನರಾಧಿಪ।
07165091c ಕರ್ಣಪ್ರಭೃತಯಶ್ಚೇಮೇ ನಾವತಿಷ್ಠಂತಿ ಪಾರ್ಥಿವಾಃ।।

ನರಾಧಿಪ! ನೀನೂ ಕೂಡ ಮೊದಲಿನಂತೆ ಕಾಣುತ್ತಿಲ್ಲ! ಕರ್ಣಾದಿ ರಾಜರೂ ಕೂಡ ರಣಾಂಗಣದಲ್ಲಿ ನಿಲ್ಲುತ್ತಿಲ್ಲ!

07165092a ಅನ್ಯೇಷ್ವಪಿ ಚ ಯುದ್ಧೇಷು ನೈವ ಸೇನಾದ್ರವತ್ತದಾ।
07165092c ಕಚ್ಚಿತ್ ಕ್ಷೇಮಂ ಮಹಾಬಾಹೋ ತವ ಸೈನ್ಯಸ್ಯ ಭಾರತ।।

ಬೇರೆ ಯುದ್ಧಗಳಲ್ಲಿ ನಿನ್ನ ಸೇನೆಯು ಹೀಗೆ ಓಡಿಹೋಗುತ್ತಿರಲಿಲ್ಲ. ಮಹಾಬಾಹೋ! ಭಾರತ! ನಿನ್ನ ಸೇನೆಯಲ್ಲಿ ಎಲ್ಲರೂ ಕ್ಷೇಮವಷ್ಟೇ?

07165093a ಕಸ್ಮಿನ್ನಿದಂ ಹತೇ ರಾಜನ್ರಥಸಿಂಹೇ ಬಲಂ ತವ।
07165093c ಏತಾಮವಸ್ಥಾಂ ಸಂಪ್ರಾಪ್ತಂ ತನ್ಮಮಾಚಕ್ಷ್ವ ಕೌರವ।।

ರಾಜನ್! ನಿನ್ನ ಸೇನೆಯಲ್ಲಿ ಯಾವ ರಥಸಿಂಹನು ಹತನಾದುದರಿಂದ ನಿನ್ನ ಸೇನೆಗೆ ಈ ಅವಸ್ಥೆಯುಂಟಾಯಿತು ಎನ್ನುವುದನ್ನು ನನಗೆ ಹೇಳು ಕೌರವ!”

07165094a ತತ್ತು ದುರ್ಯೋಧನಃ ಶ್ರುತ್ವಾ ದ್ರೋಣಪುತ್ರಸ್ಯ ಭಾಷಿತಂ।
07165094c ಘೋರಮಪ್ರಿಯಮಾಖ್ಯಾತುಂ ನಾಶಕತ್ಪಾರ್ಥಿವರ್ಷಭಃ।।

ದ್ರೋಣಪುತ್ರನಾಡಿದ ಆ ಮಾತನ್ನು ಕೇಳಿ ಪಾರ್ಥಿವರ್ಷಭ ದುರ್ಯೋಧನನು ಘೋರವೂ ಅಪ್ರಿಯವೂ ಆದ ವಿಷಯವನ್ನು ಅವನಿಗೆ ಹೇಳಲು ಶಕ್ಯನಾಗಲಿಲ್ಲ.

07165095a ಭಿನ್ನಾ ನೌರಿವ ತೇ ಪುತ್ರೋ ನಿಮಗ್ನಃ ಶೋಕಸಾಗರೇ।
07165095c ಬಾಷ್ಪೇಣ ಪಿಹಿತೋ ದೃಷ್ಟ್ವಾ ದ್ರೋಣಪುತ್ರಂ ರಥೇ ಸ್ಥಿತಂ।।

ಶೋಕವೆಂಬ ಮಹಾಸಾಗರದಲ್ಲಿ ನೌಕೆಯು ಒಡೆದು ಮುಳುಗಿಹೋಗಿದ್ದ ನಿನ್ನ ಪುತ್ರನು ರಥದಲ್ಲಿದ್ದ ದ್ರೋಣಪುತ್ರನನ್ನು ನೋಡಿ ಕಣ್ಣುಗಳಲ್ಲಿ ನೀರುತುಂಬಿಸಿಕೊಂಡನು.

07165096a ತತಃ ಶಾರದ್ವತಂ ರಾಜಾ ಸವ್ರೀಡಮಿದಮಬ್ರವೀತ್।
07165096c ಶಂಸೇಹ ಸರ್ವಂ ಭದ್ರಂ ತೇ ಯಥಾ ಸೈನ್ಯಮಿದಂ ದ್ರುತಂ।।

ಆಗ ರಾಜನು ಲಜ್ಜಿತನಾಗಿ ಶಾರದ್ವತನಿಗೆ “ಈ ಸೇನೆಯು ಏಕೆ ಓಡಿಹೋಗುತ್ತಿದೆ ಎನ್ನುವುದನ್ನು ಸರ್ವಸ್ವವಾಗಿ ಹೇಳು! ನಿನಗೆ ಮಂಗಳವಾಗಲಿ!” ಎಂದನು.

07165097a ಅಥ ಶಾರದ್ವತೋ ರಾಜನ್ನಾರ್ತಿಂ ಗಚ್ಚನ್ಪುನಃ ಪುನಃ।
07165097c ಶಶಂಸ ದ್ರೋಣಪುತ್ರಾಯ ಯಥಾ ದ್ರೋಣೋ ನಿಪಾತಿತಃ।।

ರಾಜನ್! ಆಗ ಶಾರದ್ವತನು ಬಾರಿ ಬಾರಿ ಸಂಕಟಪಡುತ್ತಾ ದ್ರೋಣಪುತ್ರನಿಗೆ ದ್ರೋಣನು ಹೇಗೆ ಕೆಳಗುರುಳಿಸಲ್ಪಟ್ಟನು ಎನ್ನುವುದನ್ನು ಹೇಳಿದನು:

07165098 ಕೃಪ ಉವಾಚ।
07165098a ವಯಂ ದ್ರೋಣಂ ಪುರಸ್ಕೃತ್ಯ ಪೃಥಿವ್ಯಾಂ ಪ್ರವರಂ ರಥಂ।
07165098c ಪ್ರಾವರ್ತಯಾಮ ಸಂಗ್ರಾಮಂ ಪಾಂಚಾಲೈರೇವ ಕೇವಲೈಃ।।

ಕೃಪನು ಹೇಳಿದನು: “ನಾವು ಪೃಥ್ವಿಯಲ್ಲಿಯೇ ರಥಶ್ರೇಷ್ಠ ದ್ರೋಣನನ್ನೇ ಮುಂದಿರಿಸಿಕೊಂಡು ಕೇವಲ ಪಾಂಚಾಲರೊಡನೆ ಯುದ್ಧವನ್ನು ಪ್ರಾರಂಭಿಸಿದೆವು.

07165099a ತತಃ ಪ್ರವೃತ್ತೇ ಸಂಗ್ರಾಮೇ ವಿಮಿಶ್ರಾಃ ಕುರುಸೋಮಕಾಃ।
07165099c ಅನ್ಯೋನ್ಯಮಭಿಗರ್ಜಂತಃ ಶಸ್ತ್ರೈರ್ದೇಹಾನಪಾತಯನ್।।

ಹಾಗೆ ಸಂಗ್ರಾಮವು ನಡೆಯುತ್ತಿರಲು ಕುರು-ಸೋಮಕರು ಒಟ್ಟಾಗಿ ಅನ್ಯೋನ್ಯರೊಡನೆ ಗರ್ಜಿಸುತ್ತಾ ಶಸ್ತ್ರಗಳಿಂದ ಶತ್ರುಗಳ ಶರೀರಗಳನ್ನು ಕೆಳಗುರುಳಿಸಿದರು.

07165100a ತತೋ ದ್ರೋಣೋ ಬ್ರಾಹ್ಮಮಸ್ತ್ರಂ ವಿಕುರ್ವಾಣೋ ನರರ್ಷಭಃ।
07165100c ಅಹನಚ್ಚಾತ್ರವಾನ್ಭಲ್ಲೈಃ ಶತಶೋಽಥ ಸಹಸ್ರಶಃ।।

ಆಗ ನರರ್ಷಭ ದ್ರೋಣನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿ ಭಲ್ಲಗಳಿಂದ ನೂರಾರು ಸಹಸ್ರಾರು ಶತ್ರುಸೈನಿಕರನ್ನು ಸಂಹರಿಸಿದನು.

07165101a ಪಾಂಡವಾಃ ಕೇಕಯಾ ಮತ್ಸ್ಯಾಃ ಪಾಂಚಾಲಾಶ್ಚ ವಿಶೇಷತಃ।
07165101c ಸಂಖ್ಯೇ ದ್ರೋಣರಥಂ ಪ್ರಾಪ್ಯ ವ್ಯನಶನ್ಕಾಲಚೋದಿತಾಃ।।

ಕಾಲಚೋದಿತ ಪಾಂಡವರು, ಕೇಕಯರು, ಮತ್ಸ್ಯರು ಮತ್ತು ವಿಶೇಷವಾಗಿ ಪಾಂಚಾಲರು ರಣದಲ್ಲಿ ದ್ರೋಣನ ರಥದ ಸಮೀಪಕ್ಕೆ ಬಂದು ನಾಶಹೊಂದಿದರು.

07165102a ಸಹಸ್ರಂ ರಥಸಿಂಹಾನಾಂ ದ್ವಿಸಾಹಸ್ರಂ ಚ ದಂತಿನಾಂ।
07165102c ದ್ರೋಣೋ ಬ್ರಹ್ಮಾಸ್ತ್ರನಿರ್ದಗ್ಧಂ ಪ್ರೇಷಯಾಮಾಸ ಮೃತ್ಯವೇ।।

ಬ್ರಹ್ಮಾಸ್ತ್ರದ ಪ್ರಯೋಗದಿಂದ ದ್ರೋಣನು ಸಾವಿರ ರಥಸಿಂಹರನ್ನೂ ಎರಡು ಸಾವಿರ ಆನೆಗಳನ್ನೂ ಸುಟ್ಟು ಮೃತ್ಯುಲೋಕಕ್ಕೆ ಕಳುಹಿಸಿದನು.

07165103a ಆಕರ್ಣಪಲಿತಃ ಶ್ಯಾಮೋ ವಯಸಾಶೀತಿಪಂಚಕಃ।
07165103c ರಣೇ ಪರ್ಯಚರದ್ದ್ರೋಣೋ ವೃದ್ಧಃ ಷೋಡಶವರ್ಷವತ್।।

ಕಿವಿಯವರೆಗೂ ಕೂದಲು ನೆರೆತಿದ್ದ, ಎಂಭತ್ತೈದು ವರ್ಷದ ಆ ಶ್ಯಾಮಲವರ್ಣದ ವೃದ್ಧನು ರಣದಲ್ಲಿ ಹದಿನಾರು ವರ್ಷದವನಂತೆ ಸಂಚರಿಸುತ್ತಿದ್ದನು.

07165104a ಕ್ಲಿಶ್ಯಮಾನೇಷು ಸೈನ್ಯೇಷು ವಧ್ಯಮಾನೇಷು ರಾಜಸು।
07165104c ಅಮರ್ಷವಶಮಾಪನ್ನಾಃ ಪಾಂಚಾಲಾ ವಿಮುಖಾಭವನ್।।

ಸೈನ್ಯಗಳು ಕಷ್ಟಕ್ಕೊಳಗಾಗಲು, ರಾಜರು ವಧಿಸಲ್ಪಡುತ್ತಿರಲು ಕೋಪಗೊಂಡ ಪಾಂಚಾಲರು ಯುದ್ಧದಿಂದ ವಿಮುಖರಾದರು.

07165105a ತೇಷು ಕಿಂ ಚಿತ್ಪ್ರಭಗ್ನೇಷು ವಿಮುಖೇಷು ಸಪತ್ನಜಿತ್।
07165105c ದಿವ್ಯಮಸ್ತ್ರಂ ವಿಕುರ್ವಾಣೋ ಬಭೂವಾರ್ಕ ಇವೋದಿತಃ।।

ಅವರು ಹೀಗೆ ಪ್ರಭಗ್ನರಾಗಿ ವಿಮುಖರಾಗಲು ಶತ್ರುಗಳನ್ನು ಜಯಿಸುವ ದ್ರೋಣನು ದಿವ್ಯಾಸ್ತ್ರಗಳನ್ನು ಪ್ರಕಟಿಸುತ್ತಾ ಉದಯಿಸಿದ ಸೂರ್ಯನಂತೆ ಪ್ರಕಾಶಿಸಿದನು.

07165106a ಸ ಮಧ್ಯಂ ಪ್ರಾಪ್ಯ ಪಾಂಡೂನಾಂ ಶರರಶ್ಮಿಃ ಪ್ರತಾಪವಾನ್।
07165106c ಮಧ್ಯಂಗತ ಇವಾದಿತ್ಯೋ ದುಷ್ಪ್ರೇಕ್ಷ್ಯಸ್ತೇ ಪಿತಾಭವತ್।।

ನಿನ್ನ ತಂದೆ ಆ ಪ್ರತಾಪವಾನನು ಪಾಂಡವಸೇನೆಯ ಮಧ್ಯದಲ್ಲಿ ಬಿಡುತ್ತಿರುವ ಶರಗಳ ಕಿರಣಗಳಿಂದಾಗಿ ಮಧ್ಯಾಹ್ನದ ಸೂರ್ಯನಂತೆ ನೋಡಲೂ ಕಷ್ಟಕರನಾಗಿದ್ದನು.

07165107a ತೇ ದಹ್ಯಮಾನಾ ದ್ರೋಣೇನ ಸೂರ್ಯೇಣೇವ ವಿರಾಜತಾ।
07165107c ದಗ್ಧವೀರ್ಯಾ ನಿರುತ್ಸಾಹಾ ಬಭೂವುರ್ಗತಚೇತಸಃ।।

ಸೂರ್ಯನಂತೆ ವಿರಾಜಿಸುತ್ತಿದ್ದ ದ್ರೋಣನಿಂದ ದಹಿಸಲ್ಪಡುತ್ತಿದ್ದ ಅವರು ವೀರ್ಯವೇ ಸುಟ್ಟುಹೋದಂತವರಾಗಿ ನಿರುತ್ಸಾಹರಾಗಿ ಚೇತನವನ್ನೇ ಕಳೆದುಕೊಂಡರು.

07165108a ತಾನ್ದೃಷ್ಟ್ವಾ ಪೀಡಿತಾನ್ಬಾಣೈರ್ದ್ರೋಣೇನ ಮಧುಸೂದನಃ।
07165108c ಜಯೈಷೀ ಪಾಂಡುಪುತ್ರಾಣಾಮಿದಂ ವಚನಮಬ್ರವೀತ್।।

ದ್ರೋಣನ ಬಾಣಗಳಿಂದ ಪೀಡಿತರಾದ ಅವರನ್ನು ನೋಡಿ ಅವರ ಜಯವನ್ನೇ ಬಯಸುವ ಮಧುಸೂದನನು ಪಾಂಡುಪುತ್ರರಿಗೆ ಹೀಗೆಂದನು:

07165109a ನೈಷ ಜಾತು ಪರೈಃ ಶಕ್ಯೋ ಜೇತುಂ ಶಸ್ತ್ರಭೃತಾಂ ವರಃ।
07165109c ಅಪಿ ವೃತ್ರಹಣಾ ಸಂಖ್ಯೇ ರಥಯೂಥಪಯೂಥಪಃ।।

“ಶಸ್ತ್ರಧಾರಿಗಳಲ್ಲಿಯೇ ಶ್ರೇಷ್ಠನಾದ, ರಥಿಗಳ ನಾಯಕರಿಗೂ ನಾಯಕನಾಗಿರುವ ಇವನನ್ನು ಜಯಿಸಲು ರಣದಲ್ಲಿ ಯಾವ ಶತ್ರುವಿಗೂ, ವೃತ್ರಹ ಇಂದ್ರನಿಗೂ, ಸಾಧ್ಯವಿಲ್ಲ.

07165110a ತೇ ಯೂಯಂ ಧರ್ಮಮುತ್ಸೃಜ್ಯ ಜಯಂ ರಕ್ಷತ ಪಾಂಡವಾಃ।
07165110c ಯಥಾ ವಃ ಸಮ್ಯುಗೇ ಸರ್ವಾನ್ನ ಹನ್ಯಾದ್ರುಕ್ಮವಾಹನಃ।।

ಪಾಂಡವರೇ! ರುಕ್ಮರಥ ದ್ರೋಣನು ಯುದ್ಧದಲ್ಲಿ ನಮ್ಮೆಲ್ಲರನ್ನೂ ಸಂಹರಿಸಿಬಿಡಬಾರದೆಂದಾದರೆ ನೀವು ಧರ್ಮವನ್ನು ಬದಿಗೊತ್ತಿ ಜಯವನ್ನು ರಕ್ಷಿಸಬೇಕು!

07165111a ಅಶ್ವತ್ಥಾಮ್ನಿ ಹತೇ ನೈಷ ಯುಧ್ಯೇದಿತಿ ಮತಿರ್ಮಮ।
07165111c ಹತಂ ತಂ ಸಮ್ಯುಗೇ ಕಶ್ಚಿದಾಖ್ಯಾತ್ವಸ್ಮೈ ಮೃಷಾ ನರಃ।।

ಅಶ್ವತ್ಥಾಮನು ಹತನಾದರೆ ಇವನು ಯುದ್ಧಮಾಡುವುದಿಲ್ಲ ಎಂದು ನನ್ನ ಅಭಿಪ್ರಾಯ. ಆದುದರಿಂದ ಯಾರಾದರೊಬ್ಬನು ಯುದ್ಧದಲ್ಲಿ ಅಶ್ವತ್ಥಾಮನು ಹತನಾದನೆಂಬ ಸುಳ್ಳನ್ನು ಅವನಿಗೆ ಹೇಳಬೇಕು!”

07165112a ಏತನ್ನಾರೋಚಯದ್ವಾಕ್ಯಂ ಕುಂತೀಪುತ್ರೋ ಧನಂಜಯಃ।
07165112c ಅರೋಚಯಂಸ್ತು ಸರ್ವೇಽನ್ಯೇ ಕೃಚ್ಚ್ರೇಣ ತು ಯುಧಿಷ್ಠಿರಃ।।

ಈ ಮಾತು ಕುಂತೀಪುತ್ರ ಧನಂಜಯನಿಗೆ ಹಿಡಿಸಲಿಲ್ಲ. ಅನ್ಯರೆಲ್ಲರೂ, ಬಹಳ ಕಷ್ಟದಿಂದ ಯುಧಿಷ್ಠಿರನೂ, ಅದಕ್ಕೆ ಸಮ್ಮತಿಸಿದರು.

07165113a ಭೀಮಸೇನಸ್ತು ಸವ್ರೀಡಮಬ್ರವೀತ್ಪಿತರಂ ತವ।
07165113c ಅಶ್ವತ್ಥಾಮಾ ಹತ ಇತಿ ತಚ್ಚಾಬುಧ್ಯತ ತೇ ಪಿತಾ।।

ಭೀಮಸೇನನು ನಾಚಿಕೆಗೊಂಡೇ ಅಶ್ವತ್ಥಾಮನು ಹತನಾದನೆಂದು ನಿನ್ನ ತಂದೆಗೆ ಹೇಳಿದನು. ಆದರೆ ನಿನ್ನ ತಂದೆಯು ಅವನ ಮಾತನ್ನು ನಂಬಲಿಲ್ಲ.

07165114a ಸ ಶಂಕಮಾನಸ್ತನ್ಮಿಥ್ಯಾ ಧರ್ಮರಾಜಮಪೃಚ್ಚತ।
07165114c ಹತಂ ವಾಪ್ಯಹತಂ ವಾಜೌ ತ್ವಾಂ ಪಿತಾ ಪುತ್ರವತ್ಸಲಃ।।

ಆದರೂ ಪುತ್ರವತ್ಸಲ ನಿನ್ನ ತಂದೆಯು ಅದು ಸುಳ್ಳೆಂದು ಸಂದೇಹಗೊಂಡು ಅಶ್ವತ್ಥಾಮನು ಹತನಾದನೇ ಅಥವಾ ಅಲ್ಲವೇ ಎಂದು ಧರ್ಮರಾಜನನ್ನು ಕೇಳಿದನು.

07165115a ತದತಥ್ಯಭಯೇ ಮಗ್ನೋ ಜಯೇ ಸಕ್ತೋ ಯುಧಿಷ್ಠಿರಃ।
07165115c ಅಶ್ವತ್ಥಾಮಾನಮಾಹೇದಂ ಹತಃ ಕುಂಜರ ಇತ್ಯುತ।
07165115e ಭೀಮೇನ ಗಿರಿವರ್ಷ್ಮಾಣಂ ಮಾಲವಸ್ಯೇಂದ್ರವರ್ಮಣಃ।।

ಆಗ ಸುಳ್ಳುಹೇಳಲು ಭಯಗೊಂಡಿದ್ದ ಆದರೆ ಜಯದಲ್ಲಿ ಆಸಕ್ತನಾಗಿದ್ದ ಯುಧಿಷ್ಠಿರನು ಮಾಲವದ ಇಂದ್ರವರ್ಮನ ಅಶ್ವತ್ಥಾಮ ಎಂಬ ಹೆಸರಿನ ಪರ್ವತಾಕಾರದ ಆನೆಯು ಭೀಮನಿಂದ ಹತವಾಯಿತು ಎಂದು ಹೇಳಿದನು.

07165116a ಉಪಸೃತ್ಯ ತದಾ ದ್ರೋಣಮುಚ್ಚೈರಿದಮಭಾಷತ।
07165116c ಯಸ್ಯಾರ್ಥೇ ಶಸ್ತ್ರಮಾಧತ್ಸೇ ಯಮವೇಕ್ಷ್ಯ ಚ ಜೀವಸಿ।
07165116e ಪುತ್ರಸ್ತೇ ದಯಿತೋ ನಿತ್ಯಂ ಶೋಽಶ್ವತ್ಥಾಮಾ ನಿಪಾತಿತಃ।।

ದ್ರೋಣನ ಹತ್ತಿರ ಹೋಗಿ ಗಟ್ಟಿಯಾಗಿ ಹೀಗೆ ಹೇಳಿದನು: “ಯಾರಿಗಾಗಿ ಶಸ್ತ್ರಗಳನ್ನು ಹಿಡಿದಿರುವೆಯೋ ಮತ್ತು ಯಾರನ್ನು ನೋಡಿ ಜೀವಂತನಾಗಿರುವೆಯೋ ಆ ನಿನ್ನ ನಿತ್ಯ ಪ್ರಿಯಪುತ್ರ ಅಶ್ವತ್ಥಾಮನು ಕೆಳಗುರುಳಿಸಲ್ಪಟ್ಟಿದ್ದಾನೆ.”

07165117a ತಚ್ಚ್ರುತ್ವಾ ವಿಮನಾಸ್ತತ್ರ ಆಚಾರ್ಯೋ ಮಹದಪ್ರಿಯಂ।
07165117c ನಿಯಮ್ಯ ದಿವ್ಯಾನ್ಯಸ್ತ್ರಾಣಿ ನಾಯುಧ್ಯತ ಯಥಾ ಪುರಾ।।

ಆ ಮಹಾ ಅಪ್ರಿಯವಾದುದನ್ನು ಕೇಳಿ ಆಚಾರ್ಯನು ಅಲ್ಲಿ ವಿಮನಸ್ಕನಾಗಿ, ದಿವ್ಯಾಸ್ತ್ರಗಳನ್ನು ನಿಲ್ಲಿಸಿ ಹಿಂದಿನಂತೆ ಯುದ್ಧಮಾಡಲಿಲ್ಲ.

07165118a ತಂ ದೃಷ್ಟ್ವಾ ಪರಮೋದ್ವಿಗ್ನಂ ಶೋಕೋಪಹತಚೇತಸಂ।
07165118c ಪಾಂಚಾಲರಾಜಸ್ಯ ಸುತಃ ಕ್ರೂರಕರ್ಮಾ ಸಮಾದ್ರವತ್।।

ಪರಮ ಉದ್ವಿಗ್ನನಾಗಿದ್ದ, ಶೋಕದಿಂದ ಹತಚೇತನನಾಗಿದ್ದ ಅವನನ್ನು ಪಾಂಚಾಲರಾಜನ ಕ್ರೂರಕರ್ಮಿ ಮಗನು ಆಕ್ರಮಣಿಸಿದನು.

07165119a ತಂ ದೃಷ್ಟ್ವಾ ವಿಹಿತಂ ಮೃತ್ಯುಂ ಲೋಕತತ್ತ್ವವಿಚಕ್ಷಣಃ।
07165119c ದಿವ್ಯಾನ್ಯಸ್ತ್ರಾಣ್ಯಥೋತ್ಸೃಜ್ಯ ರಣೇ ಪ್ರಾಯ ಉಪಾವಿಶತ್।।

ಮೃತ್ಯುವೆಂದು ವಿಹಿತನಾಗಿದ್ದ ಅವನನ್ನು ನೋಡಿ ಲೋಕತತ್ವಗಳನ್ನು ಕಂಡಿದ್ದ ದ್ರೋಣನು ರಣದಲ್ಲಿ ದಿವ್ಯಾಸ್ತ್ರಗಳನ್ನು ವಿಸರ್ಜಿಸಿ ಪ್ರಾಯೋಪವೇಶಮಾಡಿದನು.

07165120a ತತೋಽಸ್ಯ ಕೇಶಾನ್ಸವ್ಯೇನ ಗೃಹೀತ್ವಾ ಪಾಣಿನಾ ತದಾ।
07165120c ಪಾರ್ಷತಃ ಕ್ರೋಶಮಾನಾನಾಂ ವೀರಾಣಾಮಚ್ಚಿನಚ್ಚಿರಃ।।

ತಕ್ಷಣವೇ ಪಾರ್ಷತನು, ವೀರರು ಬೇಡವೆಂದು ಕೂಗಿಕೊಳ್ಳುತ್ತಿದ್ದರೂ, ಎಡಗೈಯಿಂದ ದ್ರೋಣನ ತಲೆಗೂದಲನ್ನು ಹಿಡಿದುಕೊಂಡನು.

07165121a ನ ಹಂತವ್ಯೋ ನ ಹಂತವ್ಯ ಇತಿ ತೇ ಸರ್ವತೋಽಬ್ರುವನ್।
07165121c ತಥೈವ ಚಾರ್ಜುನೋ ವಾಹಾದವರಹೈನಮಾದ್ರವತ್।।

“ವಧ್ಯನಲ್ಲದವನನ್ನು ವಧಿಸಬೇಡ!” ಎಂದು ಸುತ್ತಲಿದ್ದ ಎಲ್ಲರೂ ಹೇಳುತ್ತಿದ್ದರು. ಹಾಗೆಯೇ ಅರ್ಜುನನೂ ಕೂಡ ರಥದಿಂದ ಕೆಳಕ್ಕಿಳಿದು ಅವನನ್ನು ತಡೆಯಲು ಓಡಿ ಬಂದನು.

07165122a ಉದ್ಯಮ್ಯ ಬಾಹೂ ತ್ವರಿತೋ ಬ್ರುವಾಣಶ್ಚ ಪುನಃ ಪುನಃ।
07165122c ಜೀವಂತಮಾನಯಾಚಾರ್ಯಂ ಮಾ ವಧೀರಿತಿ ಧರ್ಮವಿತ್।।

ಧರ್ಮವಿದು ಅರ್ಜುನನು “ಜೀವಂತವಾಗಿ ಆಚಾರ್ಯನನ್ನು ಕರೆದುಕೊಂಡು ಬಾ! ಕೊಲ್ಲಬೇಡ!” ಎಂದು ಪುನಃ ಪುನಃ ಹೇಳುತ್ತಾ ಬಾಹುಗಳನ್ನು ಮೇಲೆತ್ತಿ ಓಡಿ ಬರುತ್ತಿದ್ದನು.

07165123a ತಥಾಪಿ ವಾರ್ಯಮಾಣೇನ ಕೌರವೈರರ್ಜುನೇನ ಚ।
07165123c ಹತ ಏವ ನೃಶಂಸೇನ ಪಿತಾ ತವ ನರರ್ಷಭ।।

ಕೌರವರು ಮತ್ತು ಅರ್ಜುನರು ತಡೆಯುತ್ತಿದ್ದರೂ ಆ ನರರ್ಷಭನು ನಿನ್ನ ತಂದೆಯನ್ನು ಕ್ರೂರತನದಿಂದ ಕೊಂದೇಬಿಟ್ಟನು.

07165124a ಸೈನಿಕಾಶ್ಚ ತತಃ ಸರ್ವೇ ಪ್ರಾದ್ರವಂತ ಭಯಾರ್ದಿತಾಃ।
07165124c ವಯಂ ಚಾಪಿ ನಿರುತ್ಸಾಹಾ ಹತೇ ಪಿತರಿ ತೇಽನಘ।।

ಆಗ ಸೈನಿಕರೆಲ್ಲರೂ ಭಯಾರ್ದಿತರಾಗಿ ಓಡತೊಡಗಿದರು. ಅನಘ! ನಾವೂ ಕೂಡ ನಿನ್ನ ತಂದೆಯ ಮರಣದಿಂದ ನಿರುತ್ಸಾಹಿಗಳಾಗಿದ್ದೇವೆ.””

07165125 ಸಂಜಯ ಉವಾಚ।
07165125a ತಚ್ಚ್ರುತ್ವಾ ದ್ರೋಣಪುತ್ರಸ್ತು ನಿಧನಂ ಪಿತುರಾಹವೇ।
07165125c ಕ್ರೋಧಮಾಹಾರಯತ್ತೀವ್ರಂ ಪದಾಹತ ಇವೋರಗಃ।।

ಸಂಜಯನು ಹೇಳಿದನು: “ಯುದ್ಧದಲ್ಲಿ ತನ್ನ ತಂದೆಯು ಹತನಾದನೆಂದು ಕೇಳಿದ ದ್ರೋಣಪುತ್ರನು ಕಾಲಿನಿಂದ ಮೆಟ್ಟಲ್ಪಟ್ಟ ಸರ್ಪದಂತೆ ಅತಿ ತೀವ್ರ ಕ್ರೋಧವನ್ನು ತಾಳಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣಪರ್ವಣಿ ದ್ರೋಣವಧಪರ್ವಣಿ ದ್ರೋಣವಧೇ ಪಂಚಷಷ್ಟ್ಯಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣಪರ್ವದಲ್ಲಿ ದ್ರೋಣವಧಪರ್ವದಲ್ಲಿ ದ್ರೋಣವಧ ಎನ್ನುವ ನೂರಾಅರವತ್ತೈದನೇ ಅಧ್ಯಾಯವು. ಇತಿ ಶ್ರೀ ಮಹಾಭಾರತೇ ದ್ರೋಣಪರ್ವಣಿ ದ್ರೋಣವಧಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ದ್ರೋಣಪರ್ವದಲ್ಲಿ ದ್ರೋಣವಧಪರ್ವವು. ಇದೂವರೆಗಿನ ಒಟ್ಟು ಮಹಾಪರ್ವಗಳು-6/18, ಉಪಪರ್ವಗಳು-71/100, ಅಧ್ಯಾಯಗಳು-1142/1995, ಶ್ಲೋಕಗಳು-40780/73784.