ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಘಟೋತ್ಕಚವಧ ಪರ್ವ
ಅಧ್ಯಾಯ 128
ಸಾರ
ಯುದ್ಧವರ್ಣನೆ (1-10). ದುರ್ಯೋಧನನ ಯುದ್ಧ ಮತ್ತು ಪರಾಭವ (11-34).
07128001 ಸಂಜಯ ಉವಾಚ।
07128001a ತದುದೀರ್ಣಗಜಾಶ್ವೌಘಂ ಬಲಂ ತವ ಜನಾಧಿಪ।
07128001c ಪಾಂಡುಸೇನಾಮಭಿದ್ರುತ್ಯ ಯೋಧಯಾಮಾಸ ಸರ್ವತಃ।।
ಸಂಜಯನು ಹೇಳಿದನು: “ಜನಾಧಿಪ! ನಿನ್ನ ಪ್ರಚಂಡ ಗಜಸೇನೆಯು ಪಾಂಡವರ ಸೇನೆಗಳನ್ನು ಎಲ್ಲಕಡೆಗಳಿಂದ ಆಕ್ರಮಣಿಸಿ ಯುದ್ಧಮಾಡತೊಡಗಿತು.
07128002a ಪಾಂಚಾಲಾಃ ಕುರವಶ್ಚೈವ ಯೋಧಯಂತಃ ಪರಸ್ಪರಂ।
07128002c ಯಮರಾಷ್ಟ್ರಾಯ ಮಹತೇ ಪರಲೋಕಾಯ ದೀಕ್ಷಿತಾಃ।।
ಪರಲೋಕದ ದೀಕ್ಷೆಯನ್ನು ತೊಟ್ಟಿದ್ದ ಪಾಂಚಾಲರು ಮತ್ತು ಕುರುಗಳು ಯಮರಾಷ್ಟ್ರವನ್ನು ವರ್ಧಿಸಲು ಪರಸ್ಪರರೊಡನೆ ಯುದ್ಧಮಾಡಿದರು.
07128003a ಶೂರಾಃ ಶೂರೈಃ ಸಮಾಗಮ್ಯ ಶರತೋಮರಶಕ್ತಿಭಿಃ।
07128003c ವಿವ್ಯಧುಃ ಸಮರೇ ತೂರ್ಣಂ ನಿನ್ಯುಶ್ಚೈವ ಯಮಕ್ಷಯಂ।।
ಸಮರದಲ್ಲಿ ಶೂರರು ಶೂರರನ್ನು ಎದುರಿಸಿ ಶರ-ತೋಮರ-ಶಕ್ತಿಗಳಿಂದ ಹೊಡೆದು ಬೇಗನೇ ಯಮಕ್ಷಯಕ್ಕೆ ಕಳುಹಿಸುತ್ತಿದ್ದರು.
07128004a ರಥಿನಾಂ ರಥಿಭಿಃ ಸಾರ್ಧಂ ರುಧಿರಸ್ರಾವಿ ದಾರುಣಂ।
07128004c ಪ್ರಾವರ್ತತ ಮಹದ್ಯುದ್ಧಂ ನಿಘ್ನತಾಮಿತರೇತರಂ।।
ಪರಸ್ಪರರನ್ನು ಸಂಹರಿಸುವುದರಲ್ಲಿ ತೊಡಗಿದ ರಥಿಗಳು ರಥಿಗಳನ್ನು ಎದುರಿಸಿ ರಕ್ತದ ದಾರುಣ ಕೋಡಿಯನ್ನೇ ಹರಿಸುವ ಮಹಾಯುದ್ಧವು ಪ್ರಾರಂಭವಾಯಿತು.
07128005a ವಾರಣಾಶ್ಚ ಮಹಾರಾಜ ಸಮಾಸಾದ್ಯ ಪರಸ್ಪರಂ।
07128005c ವಿಷಾಣೈರ್ದಾರಯಾಮಾಸುಃ ಸಂಕ್ರುದ್ಧಾಶ್ಚ ಮದೋತ್ಕಟಾಃ।।
ಮಹಾರಾಜ! ಮದೋತ್ಕಟ ಸಂಕ್ರುದ್ಧ ಆನೆಗಳು ಪರಸ್ಪರರನ್ನು ಎದುರಿಸಿ ಕೋರೆದಾಡೆಗಳಿಂದ ಇರಿಯುತ್ತಿದ್ದವು.
07128006a ಹಯಾರೋಹಾನ್ ಹಯಾರೋಹಾಃ ಪ್ರಾಸಶಕ್ತಿಪರಶ್ವಧೈಃ।
07128006c ಬಿಭಿದುಸ್ತುಮುಲೇ ಯುದ್ಧೇ ಪ್ರಾರ್ಥಯಂತೋ ಮಹದ್ಯಶಃ।।
ಆ ತುಮುಲ ಯುದ್ಧದಲ್ಲಿ ಮಹಾ ಯಶಸ್ಸನ್ನು ಅರಸುತ್ತಾ ಅಶ್ವಾರೋಹಿಗಳು ಅಶ್ವಾರೋಹಿಗಳೊಂದಿಗೆ ಪ್ರಾಸ-ಶಕ್ತಿ-ಪರಶಾಯುಧಗಳಿಂದ ಹೊಡೆದಾಡಿದರು.
07128007a ಪತ್ತಯಶ್ಚ ಮಹಾಬಾಹೋ ಶತಶಃ ಶಸ್ತ್ರಪಾಣಯಃ।
07128007c ಅನ್ಯೋನ್ಯಮಾರ್ದಯನ್ರಾಜನ್ನಿತ್ಯಯತ್ತಾಃ ಪರಾಕ್ರಮೇ।।
ಮಹಾಬಾಹೋ! ರಾಜನ್! ನೂರಾರು ಶಸ್ತ್ರಪಾಣಿ ಪದಾತಿ ಸೈನಿಕರು ಸತತವಾಗಿ ಪ್ರಯತ್ನಿಸಿ ತಮ್ಮ ಪರಾಕ್ರಮವನ್ನು ತೋರ್ಪಡಿಸುತ್ತಾ ಅನ್ಯೋನ್ಯರನ್ನು ಹೊಡೆಯುತ್ತಿದ್ದರು.
07128008a ಗೋತ್ರಾಣಾಂ ನಾಮಧೇಯಾನಾಂ ಕುಲಾನಾಂ ಚೈವ ಮಾರಿಷ।
07128008c ಶ್ರವಣಾದ್ಧಿ ವಿಜಾನೀಮಃ ಪಾಂಚಾಲಾನ್ಕುರುಭಿಃ ಸಹ।।
ಮಾರಿಷ! ಗೋತ್ರ, ನಾಮಧೇಯ ಮತ್ತು ಕುಲಗಳನ್ನು ಕೇಳಿಯೇ ಕುರುಗಳೊಂದಿಗೆ ಹೋರಾಡುತ್ತಿರುವವರು ಪಾಂಚಾಲರು ಎಂದು ನಮಗೆ ತಿಳಿಯುತ್ತಿತ್ತು.
07128009a ಅನ್ಯೋನ್ಯಂ ಸಮರೇ ಯೋಧಾಃ ಶರಶಕ್ತಿಪರಶ್ವಧೈಃ।
07128009c ಪ್ರೇಷಯನ್ಪರಲೋಕಾಯ ವಿಚರಂತೋ ಹ್ಯಭೀತವತ್।।
ಸಮರದಲ್ಲಿ ಯೋಧರು ಶರ-ಶಕ್ತಿ-ಪರಶಾಯುಧಗಳಿಂದ ಅನ್ಯೋನ್ಯರನ್ನು ಪರಲೋಕಗಳಿಗೆ ಕಳುಹಿಸುತ್ತಾ ನಿರ್ಭೀತರಾಗಿ ಸಂಚರಿಸುತ್ತಿದ್ದರು.
07128010a ಶರೈರ್ದಶ ದಿಶೋ ರಾಜಂಸ್ತೇಷಾಂ ಮುಕ್ತೈಃ ಸಹಸ್ರಶಃ।
07128010c ನ ಭ್ರಾಜಂತ ಯಥಾಪೂರ್ವಂ ಭಾಸ್ಕರೇಽಸ್ತಂ ಗತೇಽಪಿ ಚ।।
ರಾಜನ್! ಅವರು ಬಿಡುತ್ತಿದ್ದ ಸಹಸ್ರಾರು ಬಾಣಗಳಿಂದಾಗಿ ಮತ್ತು ಭಾಸ್ಕರನು ಅಸ್ತಂಗತನಾಗಿದುದಕ್ಕಾಗಿ ಹತ್ತು ದಿಕ್ಕುಗಳೂ ಮೊದಲಿನಂತೆ ಪ್ರಕಾಶಿಸುತ್ತಿರಲಿಲ್ಲ.
07128011a ತಥಾ ಪ್ರಯುಧ್ಯಮಾನೇಷು ಪಾಂಡವೇಯೇಷು ನಿರ್ಭಯಃ।
07128011c ದುರ್ಯೋಧನೋ ಮಹಾರಾಜ ವ್ಯವಗಾಹತ ತದ್ಬಲಂ।।
ಮಹಾರಾಜ! ಹಾಗೆ ಪಾಂಡವರು ಯುದ್ಧಮಾಡುತ್ತಿರುವಾಗ ದುರ್ಯೋಧನನು ನಿರ್ಭಯನಾಗಿ ಅವರ ಸೇನೆಯೊಳಗೆ ನುಗ್ಗಿದನು.
07128012a ಸೈಂಧವಸ್ಯ ವಧೇನೈವ ಭೃಶಂ ದುಃಖಸಮನ್ವಿತಃ।
07128012c ಮರ್ತವ್ಯಮಿತಿ ಸಂಚಿಂತ್ಯ ಪ್ರಾವಿಶತ್ತು ದ್ವಿಷದ್ಬಲಂ।।
ಸೈಂಧವನ ವಧೆಯಿಂದಾಗಿ ಅತೀವ ದುಃಖಸಮನ್ವಿತನಾದ ಅವನು ಸಾಯಬೇಕೆಂದು ಯೋಚಿಸಿ ಶತ್ರುಸೈನ್ಯವನ್ನು ಪ್ರವೇಶಿಸಿದನು.
07128013a ನಾದಯನ್ರಥಘೋಷೇಣ ಕಂಪಯನ್ನಿವ ಮೇದಿನೀಂ।
07128013c ಅಭ್ಯವರ್ತತ ಪುತ್ರಸ್ತೇ ಪಾಂಡವಾನಾಮನೀಕಿನೀಂ।।
ಮೇದಿನಿಯನ್ನೇ ನಡುಗಿಸುವಂತಿರುವ ರಥಘೋಷದಿಂದ ನಿನ್ನ ಮಗನು ಪಾಂಡವರ ಸೇನೆಯನ್ನು ಆಕ್ರಮಣಿಸಿ ಗರ್ಜಿಸಿದನು.
07128014a ಸ ಸನ್ನಿಪಾತಸ್ತುಮುಲಸ್ತಸ್ಯ ತೇಷಾಂ ಚ ಭಾರತ।
07128014c ಅಭವತ್ಸರ್ವಸೈನ್ಯಾನಾಮಭಾವಕರಣೋ ಮಹಾನ್।।
ಭಾರತ! ಅವನ ಮತ್ತು ಪಾಂಡವರ ನಡುವೆ ನಡೆದ ಆ ಮಹಾ ತುಮುಲ ಯುದ್ಧವು ಸರ್ವಸೇನೆಗಳಿಗೆ ವಿನಾಶಕಾರಿಯಾಗಿ ಪರಿಣಮಿಸಿತು.
07128015a ಮಧ್ಯಂದಿನಗತಂ ಸೂರ್ಯಂ ಪ್ರತಪಂತಂ ಗಭಸ್ತಿಭಿಃ।
07128015c ತಥಾ ತವ ಸುತಂ ಮಧ್ಯೇ ಪ್ರತಪಂತಂ ಶರೋರ್ಮಿಭಿಃ।।
07128016a ನ ಶೇಕುರ್ಭಾರತಂ ಯುದ್ಧೇ ಪಾಂಡವಾಃ ಸಮವೇಕ್ಷಿತುಂ।
ತೀಕ್ಷ್ಣ ಕಿರಣಗಳಿಂದ ಕೂಡಿದ ಮಧ್ಯಾಹ್ನದ ಸೂರ್ಯನನ್ನು ಹೇಗೆ ನೋಡಲಿಕ್ಕಾಗುವುದಿಲ್ಲವೋ ಹಾಗೆ ಕಿರಣಗಳಂತೆ ಹೊರಬೀಳುತ್ತಿದ್ದ ಬಾಣಗಳ ಮಧ್ಯದಲ್ಲಿದ್ದ ನಿನ್ನ ಮಗ ಭಾರತನನ್ನು ಯುದ್ಧದಲ್ಲಿ ಪಾಂಡವರಿಗೆ ಕಣ್ಣೆತ್ತಿ ನೋಡಲಿಕ್ಕೂ ಆಗುತ್ತಿರಲಿಲ್ಲ.
07128016c ಪಲಾಯನೇ ಕೃತೋತ್ಸಾಹಾ ನಿರುತ್ಸಾಹಾ ದ್ವಿಷಜ್ಜಯೇ।।
07128017a ಪರ್ಯಧಾವಂತ ಪಾಂಚಾಲಾ ವಧ್ಯಮಾನಾ ಮಹಾತ್ಮನಾ।
ಮಹಾತ್ಮ ದುರ್ಯೋಧನನಿಂದ ವಧಿಸಲ್ಪಡುತ್ತಿದ್ದ ಪಾಂಚಾಲರು ಶತ್ರುವನ್ನು ಗೆಲ್ಲುವುದರಲ್ಲಿ ನಿರುತ್ಸಾಹಿಗಳಾಗಿ ಪಲಾಯನ ಮಾಡುವುದರಲ್ಲಿ ಉತ್ಸಾಹ ತಳೆದು ಓಡಿಹೋಗುತ್ತಿದ್ದರು.
07128017c ರುಕ್ಮಪುಂಖೈಃ ಪ್ರಸನ್ನಾಗ್ರೈಸ್ತವ ಪುತ್ರೇಣ ಧನ್ವಿನಾ।
07128017e ಅರ್ದ್ಯಮಾನಾಃ ಶರೈಸ್ತೂರ್ಣಂ ನ್ಯಪತನ್ಪಾಂಡುಸೈನಿಕಾಃ।।
ನಿನ್ನ ಮಗ ಧನ್ವಿ ದುರ್ಯೋಧನನ ರುಕ್ಮಪುಂಖಗಳ, ಮೊನಚಾದ ತುದಿಯುಳ್ಳ ಶರಗಳಿಂದ ಗಾಯಗೊಂಡು ಬೇಗ ಬೇಗನೇ ಪಾಂಡವ ಸೈನಿಕರು ಬೀಳುತ್ತಿದ್ದರು.
07128018a ನ ತಾದೃಶಂ ರಣೇ ಕರ್ಮ ಕೃತವಂತಸ್ತು ತಾವಕಾಃ।
07128018c ಯಾದೃಶಂ ಕೃತವಾನ್ರಾಜಾ ಪುತ್ರಸ್ತವ ವಿಶಾಂ ಪತೇ।।
ವಿಶಾಂಪತೇ! ಆಗ ನಿನ್ನ ಮಗ ರಾಜಾ ದುರ್ಯೋಧನನು ಮಾಡಿದ ಸಾಹಸ ಕಾರ್ಯವನ್ನು ನಿನ್ನ ಕಡೆಯ ಯಾವ ಯೋಧರೂ ಅದೂವರೆಗೆ ಮಾಡಿರಲಿಲ್ಲ.
07128019a ಪುತ್ರೇಣ ತವ ಸಾ ಸೇನಾ ಪಾಂಡವೀ ಮಥಿತಾ ರಣೇ।
07128019c ನಲಿನೀ ದ್ವಿರದೇನೇವ ಸಮಂತಾತ್ ಫುಲ್ಲಪಂಕಜಾ।।
ಅರಳಿದ ಕಮಲಗಳುಳ್ಳ ಸರೋವರವನ್ನು ಹೊಕ್ಕು ಆನೆಯೊಂದು ಎಲ್ಲ ಕಡೆ ಧ್ವಂಸಮಾಡುವಂತೆ ನಿನ್ನ ಮಗನು ರಣದಲ್ಲಿ ಪಾಂಡವ ಸೇನೆಯನ್ನು ಮಥಿಸಿದನು.
07128020a ಕ್ಷೀಣತೋಯಾನಿಲಾರ್ಕಾಭ್ಯಾಂ ಹತತ್ವಿಡಿವ ಪದ್ಮಿನೀ।
07128020c ಬಭೂವ ಪಾಂಡವೀ ಸೇನಾ ತವ ಪುತ್ರಸ್ಯ ತೇಜಸಾ।।
ನಿನ್ನ ಮಗನ ತೇಜಸ್ಸಿನಿಂದಾಗಿ ಪಾಂಡವರ ಸೇನೆಯು ಕಮಲಗಳುಳ್ಳ ಸರೋವರವು ಸೂರ್ಯನ ಪ್ರಖರಕಿರಣಗಳಿಂದ ಬತ್ತಿಹೋಗಿ ಅಥವಾ ಭಿರುಗಾಳಿಗೆ ಸಿಲುಕಿ ನಾಶವಾಗುವಂತೆ ಹತಾಶಗೊಂಡಿತು.
07128021a ಪಾಂಡುಸೇನಾಂ ಹತಾಂ ದೃಷ್ಟ್ವಾ ತವ ಪುತ್ರೇಣ ಭಾರತ।
07128021c ಭೀಮಸೇನಪುರೋಗಾಸ್ತು ಪಾಂಚಾಲಾಃ ಸಮುಪಾದ್ರವನ್।।
ಭಾರತ! ಪಾಂಡುಸೇನೆಯು ನಿನ್ನ ಮಗನಿಂದಾಗಿ ಹತಾಶಗೊಂಡಿದುದನ್ನು ನೋಡಿ ಪಾಂಚಾಲರು ಭೀಮಸೇನನನ್ನು ಮುಂದಿರಿಸಿಕೊಂಡು ಅವನನ್ನು ಆಕ್ರಮಣಿಸಿದರು.
07128022a ಸ ಭೀಮಸೇನಂ ದಶಭಿರ್ಮಾದ್ರೀಪುತ್ರೌ ತ್ರಿಭಿಸ್ತ್ರಿಭಿಃ।
07128022c ವಿರಾಟದ್ರುಪದೌ ಷಡ್ಭಿಃ ಶತೇನ ಚ ಶಿಖಂಡಿನಂ।।
07128023a ಧೃಷ್ಟದ್ಯುಮ್ನಂ ಚ ಸಪ್ತತ್ಯಾ ಧರ್ಮಪುತ್ರಂ ಚ ಸಪ್ತಭಿಃ।
07128023c ಕೇಕಯಾಂಶ್ಚೈವ ಚೇದೀಂಶ್ಚ ಬಹುಭಿರ್ನಿಶಿತೈಃ ಶರೈಃ।।
07128024a ಸಾತ್ವತಂ ಪಂಚಭಿರ್ವಿದ್ಧ್ವಾ ದ್ರೌಪದೇಯಾಂಸ್ತ್ರಿಭಿಸ್ತ್ರಿಭಿಃ।
07128024c ಘಟೋತ್ಕಚಂ ಚ ಸಮರೇ ವಿದ್ಧ್ವಾ ಸಿಂಹ ಇವಾನದತ್।।
ಸಮರದಲ್ಲಿ ದುರ್ಯೋಧನನು ಭೀಮಸೇನನನ್ನು ಹತ್ತರಿಂದ, ಮಾದ್ರೀಪುತ್ರರನ್ನು ಮೂರು-ಮೂರು ಬಾಣಗಳಿಂದ, ವಿರಾಟ-ದ್ರುಪದರನ್ನು ಆರರಿಂದ, ನೂರರಿಂದ ಶಿಖಂಡಿಯನ್ನು. ಧೃಷ್ಟದ್ಯುಮ್ನನನ್ನು ಎಪ್ಪತ್ತರಿಂದ, ಧರ್ಮಪುತ್ರನನ್ನು ಏಳರಿಂದ, ಅನೇಕ ನಿಶಿತ ಶರಗಳಿಂದ ಕೇಕಯರನ್ನೂ ಮತ್ತು ಚೇದಿಯರನ್ನೂ, ಸಾತ್ವತ ಸಾತ್ಯಕಿಯನ್ನು ಐದರಿಂದ, ದ್ರೌಪದೇಯರನ್ನು ಮೂರು-ಮೂರರಿಂದ ಮತ್ತು ಘಟೋತ್ಕಚನನ್ನು ಹೊಡೆದು ಸಿಂಹದಂತೆ ಗರ್ಜಿಸಿದನು.
07128025a ಶತಶಶ್ಚಾಪರಾನ್ಯೋಧಾನ್ಸದ್ವಿಪಾಶ್ವರಥಾನ್ರಣೇ।
07128025c ಶರೈರವಚಕರ್ತೋಗ್ರೈಃ ಕ್ರುದ್ಧೋಽಂತಕ ಇವ ಪ್ರಜಾಃ।।
ಕ್ರುದ್ಧ ಅಂತಕನು ಪ್ರಜೆಗಳನ್ನು ಹೇಗೋ ಹಾಗೆ ದುರ್ಯೋಧನನು ಉಗ್ರ ಶರಗಳಿಂದ ರಣದಲ್ಲಿ ಆನೆ-ಕುದುರೆ-ರಥಗಳೊಂದಿಗೆ ನೂರಾರು ಶತ್ರು ಸೈನಿಕರನ್ನು ಕತ್ತರಿಸಿ ಹಾಕಿದನು.
07128026a ತಸ್ಯ ತಾನ್ನಿಘ್ನತಃ ಶತ್ರೂನ್ರುಕ್ಮಪೃಷ್ಠಂ ಮಹದ್ಧನುಃ।
07128026c ಭಲ್ಲಾಭ್ಯಾಂ ಪಾಂಡವೋ ಜ್ಯೇಷ್ಠಸ್ತ್ರಿಧಾ ಚಿಚ್ಚೇದ ಮಾರಿಷ।।
ಮಾರಿಷ! ಹಾಗೆ ಶತ್ರುಗಳನ್ನು ಸಂಹರಿಸುತ್ತಿದ್ದ ಅವನ ಬಂಗಾರದ ಬೆನ್ನುಳ್ಳ ಮಹಾಧನುಸ್ಸನ್ನು ಜ್ಯೇಷ್ಠ ಪಾಂಡವನು ಭಲ್ಲಗಳೆರಡರಿಂದ ಮೂರು ಭಾಗಗಳನ್ನಾಗಿ ಕತ್ತರಿಸಿದನು.
07128027a ವಿವ್ಯಾಧ ಚೈನಂ ದಶಭಿಃ ಸಮ್ಯಗಸ್ತೈಃ ಶಿತೈಃ ಶರೈಃ।
07128027c ಮರ್ಮಾಣಿ ಭಿತ್ತ್ವಾ ತೇ ಸರ್ವೇ ಸಂಭಗ್ನಾಃ ಕ್ಷಿತಿಮಾವಿಶನ್।।
ಸುಪ್ರಯುಕ್ತ ನಿಶಿತ ಇನ್ನೂ ಹತ್ತು ಬಾಣಗಳಿಂದ ಅವನನ್ನು ಹೊಡೆಯಲು ಅವು ಎಲ್ಲವೂ ದುರ್ಯೋಧನನ ಮರ್ಮಸ್ಥಾನಗಳನ್ನು ಪ್ರವೇಶಿಸಿ ಶರೀರವನ್ನು ಭೇದಿಸಿ ಭೂಮಿಯಮೇಲೆ ಬಿದ್ದವು.
07128028a ತತಃ ಪ್ರಮುದಿತಾ ಯೋಧಾಃ ಪರಿವವ್ರುರ್ಯುಧಿಷ್ಠಿರಂ।
07128028c ವೃತ್ರಹತ್ಯೈ ಯಥಾ ದೇವಾಃ ಪರಿವವ್ರುಃ ಪುರಂದರಂ।।
ಆಗ ವೃತ್ರನನ್ನು ಸಂಹರಿಸಿದಾಗ ಪುರಂದರನನ್ನು ದೇವತೆಗಳು ಹೇಗೆ ಸುತ್ತುವರೆದರೋ ಹಾಗೆ ಸಂತೋಷಗೊಂಡ ಯೋಧರು ಯುಧಿಷ್ಠಿರನನ್ನು ಸುತ್ತುವರೆದರು.
07128029a ತತೋ ಯುಧಿಷ್ಠಿರೋ ರಾಜಾ ತವ ಪುತ್ರಸ್ಯ ಮಾರಿಷ।
07128029c ಶರಂ ಪರಮದುರ್ವಾರಂ ಪ್ರೇಷಯಾಮಾಸ ಸಂಯುಗೇ।
07128029e ಸ ತೇನ ಭೃಶಸಂವಿದ್ಧೋ ನಿಷಸಾದ ರಥೋತ್ತಮೇ।।
ಮಾರಿಷ! ಆಗ ರಾಜಾ ಯುಧಿಷ್ಠಿರನು ಸಂಯುಗದಲ್ಲಿ ತಡೆಯಲು ಅಸಾಧ್ಯ ಪರಮ ಶರವನ್ನು ನಿನ್ನ ಮಗನ ಮೇಲೆ ಪ್ರಯೋಗಿಸಲು, ಅದರಿಂದ ಅವನು ಬಹಳ ಪ್ರಹೃತನಾಗಿ ತನ್ನ ಉತ್ತಮ ರಥದಲ್ಲಿಯೇ ಕುಸಿದು ಬಿದ್ದನು.
07128030a ತತಃ ಪಾಂಚಾಲಸೈನ್ಯಾನಾಂ ಭೃಶಮಾಸೀದ್ರವೋ ಮಹಾನ್।
07128030c ಹತೋ ರಾಜೇತಿ ರಾಜೇಂದ್ರ ಮುದಿತಾನಾಂ ಸಮಂತತಃ।।
ರಾಜೇಂದ್ರ! ಆಗ “ರಾಜನು ಹತನಾದನು!” ಎಂಬ ಜೋರಾದ ಕೂಗು ಹರ್ಷಗೊಂಡ ಪಾಂಚಾಲ ಸೇನೆಗಳಲ್ಲಿ ಕೇಳಿಬಂದಿತು.
07128031a ಬಾಣಶಬ್ದರವಶ್ಚೋಗ್ರಃ ಶುಶ್ರುವೇ ತತ್ರ ಮಾರಿಷ।
07128031c ಅಥ ದ್ರೋಣೋ ದ್ರುತಂ ತತ್ರ ಪ್ರತ್ಯದೃಶ್ಯತ ಸಂಯುಗೇ।।
ಮಾರಿಷ! ಅಲ್ಲಿ ಬಾಣಗಳ ಉಗ್ರ ಶಬ್ಧವೂ ಕೇಳಿಬಂದಿತು. ಅಷ್ಟರಲ್ಲಿಯೇ ದ್ರೋಣನು ಅಲ್ಲಿಗೆ ಬಂದು ಸಂಯುಗದಲ್ಲಿ ಕಾಣಿಸಿಕೊಂಡನು.
07128032a ಹೃಷ್ಟೋ ದುರ್ಯೋಧನಶ್ಚಾಪಿ ದೃಢಮಾದಾಯ ಕಾರ್ಮುಕಂ।
07128032c ತಿಷ್ಠ ತಿಷ್ಠೇತಿ ರಾಜಾನಂ ಬ್ರುವನ್ಪಾಂಡವಮಭ್ಯಯಾತ್।।
ದುರ್ಯೋಧನನು ಕೂಡ ಹರ್ಷಗೊಂಡು ದೃಢ ಬಿಲ್ಲನ್ನು ಎತ್ತಿಕೊಂಡು “ನಿಲ್ಲು! ನಿಲ್ಲು!” ಎನ್ನುತ್ತಾ ಪಾಂಡವನನ್ನು ಆಕ್ರಮಣಿಸಿದನು.
07128033a ಪ್ರತ್ಯುದ್ಯಯುಸ್ತಂ ತ್ವರಿತಾಃ ಪಾಂಚಾಲಾ ರಾಜಗೃದ್ಧಿನಃ।
07128033c ತಾನ್ದ್ರೋಣಃ ಪ್ರತಿಜಗ್ರಾಹ ಪರೀಪ್ಸನ್ಕುರುಸತ್ತಮಂ।
07128033e ಚಂಡವಾತೋದ್ಧತಾನ್ಮೇಘಾನ್ನಿಘ್ನನ್ರಶ್ಮಿಮುಚೋ ಯಥಾ।।
ರಾಜನನ್ನು ಸಂಹರಿಸಲು ಬಯಸಿದ ಪಾಂಚಾಲರು ತ್ವರೆಮಾಡಿ ಅವನನ್ನು ಎದುರಿಸಿ ಯುದ್ಧಮಾಡ ತೊಡಗಿದರು. ದ್ರೋಣನು ಕುರುಸತ್ತಮನನ್ನು ರಕ್ಷಿಸುತ್ತಾ ಚಂಡಮಾರುತದಿಂದ ಬೀಸಿಬಂದ ಮೋಡಗಳನ್ನು ಸೂರ್ಯನು ರಶ್ಮಿಗಳಿಂದ ಕರಗಿಸಿಬಿಡುವಂತೆ ಪಾಂಚಾಲರನ್ನು ತಡೆದನು.
07128034a ತತೋ ರಾಜನ್ಮಹಾನಾಸೀತ್ಸಂಗ್ರಾಮೋ ಭೂರಿವರ್ಧನಃ।
07128034c ತಾವಕಾನಾಂ ಪರೇಷಾಂ ಚ ಸಮೇತಾನಾಂ ಯುಯುತ್ಸಯಾ।।
ರಾಜನ್! ಆಗ ಯುದ್ಧೋತ್ಸಾಹದಿಂದ ಸೇರಿದ್ದ ನಿನ್ನವರ ಮತ್ತು ಶತ್ರುಗಳ ನಡುವೆ ಶ್ರೇಯಸ್ಸನ್ನು ಹೆಚ್ಚಿಸುವ ಮಹಾ ಸಂಗ್ರಾಮವು ನಡೆಯಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣಪರ್ವಣಿ ಘಟೋತ್ಕಚವಧಪರ್ವಣಿ ರಾತ್ರಿಯುದ್ಧೇ ದುರ್ಯೋಧನಪರಾಭವೇ ಅಷ್ಠವಿಂಶಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣಪರ್ವದಲ್ಲಿ ಘಟೋತ್ಕಚವಧಪರ್ವದಲ್ಲಿ ರಾತ್ರಿಯುದ್ಧೇ ದುರ್ಯೋಧನಪರಾಭವ ಎನ್ನುವ ನೂರಾಇಪ್ಪತ್ತೆಂಟನೇ ಅಧ್ಯಾಯವು.