017 ಸುಧನ್ವವಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಸಂಶಪ್ತಕವಧ ಪರ್ವ

ಅಧ್ಯಾಯ 17

ಸಾರ

ಸುಧನ್ವ ವಧೆ (1-22). ಪಲಾಯನಗೈಯುತ್ತಿದ್ದ ಸಂಶಪ್ತಕ ಸೇನೆಗಳು ಯುದ್ಧಕ್ಕೆ ಹಿಂದಿರುಗಿದುದು (23-31).

07017001 ಸಂಜಯ ಉವಾಚ।
07017001a ತತಃ ಸಂಶಪ್ತಕಾ ರಾಜನ್ಸಮೇ ದೇಶೇ ವ್ಯವಸ್ಥಿತಾಃ।
07017001c ವ್ಯೂಹ್ಯಾನೀಕಂ ರಥೈರೇವ ಚಂದ್ರಾರ್ಧಾಖ್ಯಂ ಮುದಾನ್ವಿತಾಃ।।

ಸಂಜಯನು ಹೇಳಿದನು: “ರಾಜನ್! ಆಗ ಸಂಶಪ್ತಕರು ಸಮಪ್ರದೇಶದಲ್ಲಿ ರಥಸೇನೆಗಳಿಂದಲೇ ಅರ್ಧಚಂದ್ರದ ವ್ಯೂಹವನ್ನು ರಚಿಸಿಕೊಂಡು ಮುದಾನ್ವಿತರಾಗಿ ಸಜ್ಜಾಗಿ ನಿಂತಿದ್ದರು.

07017002a ತೇ ಕಿರೀಟಿನಮಾಯಾಂತಂ ದೃಷ್ಟ್ವಾ ಹರ್ಷೇಣ ಮಾರಿಷ।
07017002c ಉದಕ್ರೋಶನ್ನರವ್ಯಾಘ್ರಾಃ ಶಬ್ದೇನ ಮಹತಾ ತದಾ।।

ಮಾರಿಷ! ಕಿರೀಟಿಯು ಬರುತ್ತಿರುವುದನ್ನು ನೋಡಿ ಆ ನರವ್ಯಾಘ್ರರು ಹರ್ಷದಿಂದ ಜೋರಾದ ಶಬ್ಧದಲ್ಲಿ ಕೂಗಿದರು.

07017003a ಸ ಶಬ್ದಃ ಪ್ರದಿಶಃ ಸರ್ವಾ ದಿಶಃ ಖಂ ಚ ಸಮಾವೃಣೋತ್।
07017003c ಆವೃತತ್ವಾಚ್ಚ ಲೋಕಸ್ಯ ನಾಸೀತ್ತತ್ರ ಪ್ರತಿಸ್ವನಃ।।

ಆ ಶಬ್ಧವು ಸರ್ವ ದಿಕ್ಕು-ಉಪದಿಕ್ಕುಗಳನ್ನೂ ಆಕಾಶವನ್ನೂ ಹರಡಿಕೊಂಡಿತು. ಲೋಕದ ಎಲ್ಲೆಡೆಯೂ ಪ್ರವೇಶಿಸಿದುದರಿಂದ ಆ ಶಬ್ಧವು ಪ್ರತಿಧ್ವನಿಸಲಿಲ್ಲ.

07017004a ಅತೀವ ಸಂಪ್ರಹೃಷ್ಟಾಂಸ್ತಾನುಪಲಭ್ಯ ಧನಂಜಯಃ।
07017004c ಕಿಂ ಚಿದಭ್ಯುತ್ಸ್ಮಯನ್ಕೃಷ್ಣಮಿದಂ ವಚನಮಬ್ರವೀತ್।।

ಅತೀವ ಹರ್ಷಿತರಾಗಿದ್ದ ಅವರನ್ನು ಸಮೀಪಿಸಿ ಧನಂಜಯನು ನಸುನಗುತ್ತಾ ಕೃಷ್ಣನಿಗೆ ಈ ಮಾತನ್ನಾಡಿದನು:

07017005a ಪಶ್ಯೈತಾನ್ದೇವಕೀಮಾತರ್ಮುಮೂರ್ಷೂನದ್ಯ ಸಂಯುಗೇ।
07017005c ಭ್ರಾತೄಮ್ಸ್ತ್ರೈಗರ್ತಕಾನೇವಂ ರೋದಿತವ್ಯೇ ಪ್ರಹರ್ಷಿತಾನ್।।

“ದೇವಕೀಮಾತ! ಇಂದು ಸಂಯುಗದಲ್ಲಿ ಮುಹೂರ್ತದಲ್ಲಿಯೇ ಸಾಯಲಿರುವ ಇವರನ್ನು ನೋಡು! ಅಳಬೇಕಾಗಿರುವ ಈ ಸಮಯದಲ್ಲಿ ಇವರು ಹರ್ಷಿತರಾಗಿ ನಗುತ್ತಿದ್ದಾರೆ.

07017006a ಅಥ ವಾ ಹರ್ಷಕಾಲೋಽಯಂ ತ್ರೈಗರ್ತಾನಾಮಸಂಶಯಂ।
07017006c ಕುನರೈರ್ದುರವಾಪಾನ್ಹಿ ಲೋಕಾನ್ಪ್ರಾಪ್ಸ್ಯಂತ್ಯನುತ್ತಮಾನ್।।

ಅಥವಾ ಕುತ್ಸಿತರು ಪಡೆಯಲು ಕಷ್ಟಕರವಾದ ಅನುತ್ತಮ ಲೋಕಗಳನ್ನು ಈ ಸಮಯದಲ್ಲಿ ಸುಲಭವಾಗಿ ಪಡೆಯಲಿದ್ದಾರೆಂದು ಈ ತ್ರೈಗರ್ತರು ಹರ್ಷಪಡುತ್ತಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ.”

07017007a ಏವಮುಕ್ತ್ವಾ ಮಹಾಬಾಹುರ್ಹೃಷೀಕೇಶಂ ತತೋಽರ್ಜುನಃ।
07017007c ಆಸಸಾದ ರಣೇ ವ್ಯೂಢಾಂ ತ್ರೈಗರ್ತಾನಾಮನೀಕಿನೀಂ।।

ಹೀಗೆ ಹೃಷೀಕೇಶನಿಗೆ ಹೇಳಿ ಮಹಾಬಾಹು ಅರ್ಜುನನು ರಣದಲ್ಲಿ ತ್ರೈಗರ್ತರ ಸೇನೆಯ ವ್ಯೂಹವನ್ನು ಸಮೀಪಿಸಿದನು.

07017008a ಸ ದೇವದತ್ತಮಾದಾಯ ಶಂಖಂ ಹೇಮಪರಿಷ್ಕೃತಂ।
07017008c ದಧ್ಮೌ ವೇಗೇನ ಮಹತಾ ಫಲ್ಗುನಃ ಪೂರಯನ್ದಿಶಃ।।

ಫಲ್ಗುನನು ಹೇಮಪರಿಷ್ಕೃತ ದೇವದತ್ತ ಶಂಖವನ್ನು ವೇಗವಾಗಿ ಮತ್ತು ಜೋರಾಗಿ ಊದಿ ದಿಕ್ಕುಗಳನ್ನು ಮೊಳಗಿಸಿದನು.

07017009a ತೇನ ಶಬ್ದೇನ ವಿತ್ರಸ್ತಾ ಸಂಶಪ್ತಕವರೂಥಿನೀ।
07017009c ನಿಶ್ಚೇಷ್ಟಾವಸ್ಥಿತಾ ಸಂಕ್ಯೇ ಅಶ್ಮಸಾರಮಯೀ ಯಥಾ।।

ಆ ಶಬ್ಧದಿಂದ ನಡುಗಿದ ಸಂಶಪ್ತಕರ ಸೇನೆಯು ಲೋಹದ ಪ್ರತಿಮೆಯಂತೆ ರಣರಂಗದಲ್ಲಿ ಹಾಗೆಯೇ ನಿಂತುಬಿಟ್ಟಿತು.

07017010a ವಾಹಾಸ್ತೇಷಾಂ ವಿವೃತ್ತಾಕ್ಷಾಃ ಸ್ತಬ್ಧಕರ್ಣಶಿರೋಧರಾಃ।
07017010c ವಿಷ್ಟಬ್ಧಚರಣಾ ಮೂತ್ರಂ ರುಧಿರಂ ಚ ಪ್ರಸುಸ್ರುವುಃ।।

ಅವರ ಕುದುರೆಗಳು ಕಣ್ಣುತೆರೆದು, ಕಿವಿಗಳನ್ನೂ ತಲೆಗಳನ್ನೂ ಸ್ತಬ್ಧವಾಗಿಸಿಕೊಂಡು, ಕಾಲುಗಳು ಸೆಟೆದು ನಿಂತು ಮೂತ್ರ ಮತ್ತು ರಕ್ತವನ್ನು ಸುರಿಸಿದವು.

07017011a ಉಪಲಭ್ಯ ಚ ತೇ ಸಂಜ್ಞಾಮವಸ್ಥಾಪ್ಯ ಚ ವಾಹಿನೀಂ।
07017011c ಯುಗಪತ್ಪಾಂಡುಪುತ್ರಾಯ ಚಿಕ್ಷಿಪುಃ ಕಂಕಪತ್ರಿಣಃ।।

ಅವರು ಎಚ್ಚೆತ್ತು, ಸೇನೆಗಳನ್ನು ಪುನಃ ಸಜ್ಜುಗೊಳಿಸಿ, ಒಟ್ಟಾಗಿ, ಪಾಂಡುಪುತ್ರನ ಮೇಲೆ ಕಂಕಪತ್ರಿಗಳನ್ನು ಎಸೆದರು.

07017012a ತಾನ್ಯರ್ಜುನಃ ಸಹಸ್ರಾಣಿ ದಶ ಪಂಚೈವ ಚಾಶುಗೈಃ।
07017012c ಅನಾಗತಾನ್ಯೇವ ಶರೈಶ್ಚಿಚ್ಚೇದಾಶುಪರಾಕ್ರಮಃ।।

ಪರಾಕ್ರಮಿ ಅರ್ಜುನನು ಹದಿನೈದು ಬಾಣಗಳಿಂದಲೇ ಅವರು ಪ್ರಯೋಗಿಸಿದ ಸಹಸ್ರಾರು ಬಾಣಗಳನ್ನು ಬಂದು ತಲುಪುವುದರೊಳಗೇ ಕತ್ತರಿಸಿದನು.

07017013a ತತೋಽರ್ಜುನಂ ಶಿತೈರ್ಬಾಣೈರ್ದಶಭಿರ್ದಶಭಿಃ ಪುನಃ।
07017013c ಪ್ರತ್ಯವಿಧ್ಯಂಸ್ತತಃ ಪಾರ್ಥಸ್ತಾನವಿಧ್ಯತ್ತ್ರಿಭಿಸ್ತ್ರಿಭಿಃ।।

ಆಗ ಅವರು ಪ್ರತಿಯೊಬ್ಬರೂ ಪುನಃ ಅರ್ಜುನನ್ನು ಹತ್ತು ಹತ್ತು ನಿಶಿತ ಬಾಣಗಳಿಂದ ಹೊಡೆಯಲು ಪಾರ್ಥನು ಅವಕ್ಕೆ ಪ್ರತಿಯಾಗಿ ಪ್ರತಿಯೊಬ್ಬರನ್ನೂ ಮೂರು ಮೂರು ಬಾಣಗಳಿಂದ ಹೊಡೆದನು.

07017014a ಏಕೈಕಸ್ತು ತತಃ ಪಾರ್ಥಂ ರಾಜನ್ವಿವ್ಯಾಧ ಪಂಚಭಿಃ।
07017014c ಸ ಚ ತಾನ್ಪ್ರತಿವಿವ್ಯಾಧ ದ್ವಾಭ್ಯಾಂ ದ್ವಾಭ್ಯಾಂ ಪರಾಕ್ರಮೀ।।

ರಾಜನ್! ಆಗ ಅವರು ಒಬ್ಬೊಬ್ಬರೂ ಐದೈದು ಬಾಣಗಳಿಂದ ಪಾರ್ಥನನ್ನು ಹೊಡೆಯಲು ಆ ಪರಾಕ್ರಮಿಯು ಅವರಲ್ಲಿ ಪ್ರತಿಯೊಬ್ಬರನ್ನೂ ಎರೆಡೆರಡರಿಂದ ಹೊಡೆದನು.

07017015a ಭೂಯ ಏವ ತು ಸಂರಬ್ಧಾಸ್ತೇಽರ್ಜುನಂ ಸಹಕೇಶವಂ।
07017015c ಆಪೂರಯಂ ಶರೈಸ್ತೀಕ್ಷ್ಣೈಸ್ತಟಾಕಮಿವ ವೃಷ್ಟಿಭಿಃ।।

ಮೋಡಗಳು ಮಳೆಯಿಂದ ತಟಾಕವನ್ನು ತುಂಬಿಸುವಂತೆ ಸಂರಬ್ಧರಾದ ಅವರು ಕೇಶವನೊಂದಿಗೆ ಅರ್ಜುನನ್ನು ತೀಕ್ಷ್ಣ ಶರಗಳಿಂದ ತುಂಬಿದರು.

07017016a ತತಃ ಶರಸಹಸ್ರಾಣಿ ಪ್ರಾಪತನ್ನರ್ಜುನಂ ಪ್ರತಿ।
07017016c ಭ್ರಮರಾಣಾಮಿವ ವ್ರಾತಾಃ ಫುಲ್ಲದ್ರುಮಗಣೇ ವನೇ।।

ವನದಲ್ಲಿ ದುಂಬಿಗಳ ಸಮೂಹಗಳು ಸುಪುಷ್ಪಿತ ವೃಕ್ಷಸಮೂಹಗಳನ್ನು ಮುತ್ತುವಂತೆ ಅವರು ಬಿಟ್ಟ ಸಹಸ್ರಾರು ಬಾಣಗಳು ಅರ್ಜುನನ ಮೇಲೆ ಬಿದ್ದವು.

07017017a ತತಃ ಸುಬಾಹುಸ್ತ್ರಿಂಶದ್ಭಿರದ್ರಿಸಾರಮಯೈರ್ದೃಢೈಃ।
07017017c ಅವಿಧ್ಯದಿಷುಭಿರ್ಗಾಢಂ ಕಿರೀಟೇ ಸವ್ಯಸಾಚಿನಂ।।

ಆಗ ಸುಬಾಹುವು ಮೂವತ್ತು ಲೋಹಮಯ ಬಾಣಗಳಿಂದ ಸವ್ಯಸಾಚಿಯ ಕಿರೀಟಕ್ಕೆ ಬಹಳ ಆಳವಾಗಿ ಪ್ರಹರಿಸಿದನು.

07017018a ತೈಃ ಕಿರೀಟೀ ಕಿರೀಟಸ್ಥೈರ್ಹೇಮಪುಂಖೈರಜಿಹ್ಮಗೈಃ।
07017018c ಶಾತಕುಂಭಮಯಾಪೀಡೋ ಬಭೌ ಯೂಪ ಇವೋಚ್ಚ್ರಿತಃ।।

ಕಿರೀಟವನ್ನು ಹೊಕ್ಕಿದ್ದ ಚಿನ್ನದ ರೆಕ್ಕೆಗಳನ್ನು ಹೊಂದಿಗೆ ಜಿಹ್ಮಗಗಳಿಂದ ಕಿರೀಟಿಯು ನೂರುಕುಂಭಗಳಿಂದ ಅಲಂಕೃತ ಯಜ್ಞವೇದಿಕೆಯಂತೆ ಶೋಭಿಸಿದನು.

07017019a ಹಸ್ತಾವಾಪಂ ಸುಬಾಹೋಸ್ತು ಭಲ್ಲೇನ ಯುಧಿ ಪಾಂಡವಃ।
07017019c ಚಿಚ್ಚೇದ ತಂ ಚೈವ ಪುನಃ ಶರವರ್ಷೈರವಾಕಿರತ್।।

ಯುದ್ಧದಲ್ಲಿ ಪಾಂಡವನು ಭಲ್ಲದಿಂದ ಸುಬಾಹುವಿನ ಹಸ್ತಾವಾಪವನ್ನು ಕತ್ತರಿಸಿದನು ಮತ್ತು ಪುನಃ ಶರವರ್ಷದಿಂದ ಅವನನ್ನು ಮುಚ್ಚಿದನು.

07017020a ತತಃ ಸುಶರ್ಮಾ ದಶಭಿಃ ಸುರಥಶ್ಚ ಕಿರೀಟಿನಂ।
07017020c ಸುಧರ್ಮಾ ಸುಧನುಶ್ಚೈವ ಸುಬಾಹುಶ್ಚ ಸಮರ್ಪಯನ್।।

ಆಗ ಕಿರೀಟಿಯನ್ನು ಸುಶರ್ಮ, ಸುರಥ, ಸುಧರ್ಮ, ಸುಧನು ಮತ್ತು ಸುಬಾಹು – ಇವರು ಹತ್ತತ್ತು ಶರಗಳಿಂದ ಹೊಡೆದರು.

07017021a ತಾಂಸ್ತು ಸರ್ವಾನ್ಪೃಥಗ್ಬಾಣೈರ್ವಾನರಪ್ರವರಧ್ವಜಃ।
07017021c ಪ್ರತ್ಯವಿಧ್ಯದ್ಧ್ವಜಾಂಶ್ಚೈಷಾಂ ಭಲ್ಲೈಶ್ಚಿಚ್ಚೇದ ಕಾಂಚನಾನ್।।

ವಾನರಪ್ರವರಧ್ವಜನು ಬೇರೆ ಬೇರೆ ಬಾಣಗಳಿಂದ ಅವರನ್ನು ತಿರುಗಿ ಹೊಡೆದು ಭಲ್ಲದಿಂದ ಅವರ ಧ್ವಜಗಳನ್ನು ತುಂಡರಿಸಿದನು.

07017022a ಸುಧನ್ವನೋ ಧನುಶ್ಚಿತ್ತ್ವಾ ಹಯಾನ್ವೈ ನ್ಯವಧೀಚ್ಚರೈಃ।
07017022c ಅಥಾಸ್ಯ ಸಶಿರಸ್ತ್ರಾಣಂ ಶಿರಃ ಕಾಯಾದಪಾಹರತ್।।

ಸುಧನ್ವನ ಧನುಸ್ಸನ್ನು ಕತ್ತರಿಸಿ, ಕುದುರೆಗಳನ್ನು ಬಾಣಗಳಿಂದ ಸಂಹರಿಸಿದನು. ಅನಂತರ ಅವನ ಶಿರವನ್ನು, ಶಿರಸ್ತ್ರಾಣದೊಂದಿಗೆ, ದೇಹದಿಂದ ಅಪಹರಿಸಿದನು.

07017023a ತಸ್ಮಿಂಸ್ತು ಪತಿತೇ ವೀರೇ ತ್ರಸ್ತಾಸ್ತಸ್ಯ ಪದಾನುಗಾಃ।
07017023c ವ್ಯದ್ರವಂತ ಭಯಾದ್ಭೀತಾ ಯೇನ ದೌರ್ಯೋಧನಂ ಬಲಂ।।

ಆ ವೀರನು ಕೆಳಗುರುಳಲು ಅವನ ಅನುಯಾಯಿಗಳು ಭಯ-ಭೀತರಾಗಿ ದುರ್ಯೋಧನನ ಸೇನೆಯ ಕಡೆ ಓಡಿಹೋದರು.

07017024a ತತೋ ಜಘಾನ ಸಂಕ್ರುದ್ಧೋ ವಾಸವಿಸ್ತಾಂ ಮಹಾಚಮೂಂ।
07017024c ಶರಜಾಲೈರವಿಚ್ಚಿನ್ನೈಸ್ತಮಃ ಸೂರ್ಯ ಇವಾಂಶುಭಿಃ।।

ಆಗ ವಾಸವಿಯು ಸಂಕ್ರುದ್ಧನಾಗಿ ಸೂರ್ಯನು ತನ್ನ ಕಿರಣಗಳಿಂದ ಕತ್ತಲೆಯನ್ನು ಕತ್ತರಿಸುವಂತೆ ಆ ಮಹಾಸೇನೆಯನ್ನು ಶರಜಾಲಗಳಿಂದ ಚಿಂದಿಮಾಡಿದನು.

07017025a ತತೋ ಭಗ್ನೇ ಬಲೇ ತಸ್ಮಿನ್ವಿಪ್ರಯಾತೇ ಸಮಂತತಃ।
07017025c ಸವ್ಯಸಾಚಿನಿ ಸಂಕ್ರುದ್ಧೇ ತ್ರೈಗರ್ತಾನ್ಭಯಮಾವಿಶತ್।।

ಆಗ ಸವ್ಯಸಾಚಿಯ ಕೋಪಕ್ಕೆ ಸಿಲುಕಿ ಸೇನೆಯು ಭಗ್ನವಾಗಿ ಎಲ್ಲಕಡೆ ಓಡಿಹೋಗುತ್ತಿರಲು ತ್ರಿಗರ್ತರಿಗೆ ಭಯವು ಆವೇಶಗೊಂಡಿತು.

07017026a ತೇ ವಧ್ಯಮಾನಾಃ ಪಾರ್ಥೇನ ಶರೈಃ ಸನ್ನತಪರ್ವಭಿಃ।
07017026c ಅಮುಹ್ಯಂಸ್ತತ್ರ ತತ್ರೈವ ತ್ರಸ್ತಾ ಮೃಗಗಣಾ ಇವ।।

ಪಾರ್ಥನ ಸನ್ನತಪರ್ವ ಶರಗಳಿಂದ ವಧಿಸಲ್ಪಡುತ್ತಿದ್ದ ಅವರು ಭಯಗೊಂಡ ಮೃಗಗಣಗಳಂತೆ ಅಲ್ಲಲ್ಲಿಯೇ ಮೂರ್ಛಿತರಾಗಿ ಬೀಳುತ್ತಿದ್ದರು.

07017027a ತತಸ್ತ್ರಿಗರ್ತರಾಟ್ ಕ್ರುದ್ಧಸ್ತಾನುವಾಚ ಮಹಾರಥಾನ್।
07017027c ಅಲಂ ದ್ರುತೇನ ವಃ ಶೂರಾ ನ ಭಯಂ ಕರ್ತುಮರ್ಹಥ।।

ಆಗ ತ್ರಿಗರ್ತರಾಜನು ಕ್ರುದ್ಧನಾಗಿ ಆ ಮಹಾರಥರಿಗೆ ಹೇಳಿದನು: “ಓಡಬೇಡಿ! ಶೂರರಾದ ನಾವು ಭಯಪಡುವುದು ಸರಿಯಲ್ಲ.

07017028a ಶಪ್ತ್ವಾ ತು ಶಪಥಾನ್ಘೋರಾನ್ಸರ್ವಸೈನ್ಯಸ್ಯ ಪಶ್ಯತಃ।
07017028c ಗತ್ವಾ ದೌರ್ಯೋಧನಂ ಸೈನ್ಯಂ ಕಿಂ ವೈ ವಕ್ಷ್ಯಥ ಮುಖ್ಯಗಾಃ।।

ಸರ್ವಸೈನ್ಯಗಳೂ ನೋಡುತ್ತಿದ್ದಂತೆ ಘೋರ ಶಪಥಗಳನ್ನು ಕೈಗೊಂಡು ಈಗ ದುರ್ಯೋಧನನ ಸೈನ್ಯದ ಬಳಿ ಓಡಿ ಹೋಗಿ ಯಾವ ಉತ್ತರವನ್ನು ನೀಡುವಿರಿ?

07017029a ನಾವಹಾಸ್ಯಾಃ ಕಥಂ ಲೋಕೇ ಕರ್ಮಣಾನೇನ ಸಂಯುಗೇ।
07017029c ಭವೇಮ ಸಹಿತಾಃ ಸರ್ವೇ ನಿವರ್ತಧ್ವಂ ಯಥಾಬಲಂ।।

ಲೋಕದಲ್ಲಿ ನಾವು ಅಪಹಾಸ್ಯಕ್ಕೆ ಒಳಗಾಗದಂತೆ ನಾವು ರಣದಲ್ಲಿ ಮಾಡಬೇಕಾಗಿದೆ. ಹಿಂದಿರುಗಿ! ನಾವೆಲ್ಲ ಒಟ್ಟಿಗೇ ಬಲವಿದ್ದಷ್ಟು ಹೋರಾಡೋಣ!”

07017030a ಏವಮುಕ್ತಾಸ್ತು ತೇ ರಾಜನ್ನುದಕ್ರೋಶನ್ಮುಹುರ್ಮುಹುಃ।
07017030c ಶಂಖಾಂಶ್ಚ ದಧ್ಮಿರೇ ವೀರಾ ಹರ್ಷಯಂತಃ ಪರಸ್ಪರಂ।।

ರಾಜನ್! ಅವನು ಹೀಗೆ ಹೇಳಲು ಅವರು ಪುನಃ ಪುನಃ ಗರ್ಜನೆ ಮಾಡುತ್ತಾ ಹಿಂದಿರುಗಿದರು. ಪರಸ್ಪರರನ್ನು ಹರ್ಷಗೊಳಿಸುತ್ತಾ ಆ ವೀರರು ಶಂಖಗಳನ್ನು ಊದಿದರು.

07017031a ತತಸ್ತೇ ಸಮ್ನ್ಯವರ್ತಂತ ಸಂಶಪ್ತಕಗಣಾಃ ಪುನಃ।
07017031c ನಾರಾಯಣಾಶ್ಚ ಗೋಪಾಲಾಃ ಕೃತ್ವಾ ಮೃತ್ಯುಂ ನಿವರ್ತನಂ।।

ನಾರಾಯಣ-ಗೋಪಾಲ ಮೊದಲಾದ ಸಂಶಪ್ತಕ ಗಣಗಳು ಮೃತ್ಯುವನ್ನೇ ದಾರಿಯನ್ನಾಗಿಸಿಕೊಂಡು ಹಿಂದಿರುಗಿದವು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ಸುಧನ್ವವಧೇ ಸಪ್ತಾದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ಸುಧನ್ವವಧ ಎನ್ನುವ ಹದಿನೇಳನೇ ಅಧ್ಯಾಯವು.