ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭಗವದ್ಗೀತಾ ಪರ್ವ
ಅಧ್ಯಾಯ 21
ಸಾರ
ಧಾರ್ತರಾಷ್ಟ್ರರ ಅತಿ ದೊಡ್ಡ ಸೇನೆಯನ್ನು ನೋಡಿ ವಿಷಾದಗೊಂಡ ಯುಧಿಷ್ಠಿರನಿಗೆ ಅರ್ಜುನನು ಕೃಷ್ಣನೆಲ್ಲಿರುವನೋ ಅಲ್ಲಿ ಜಯವಿರುವುದು ಎಂದು ಹೇಳಿ ತಮ್ಮ ವಿಜಯದ ಅಶ್ವಾಸನೆಯನ್ನು ನೀಡುವುದು (1-17).
06021001 ಸಂಜಯ ಉವಾಚ।
06021001a ಬೃಹತೀಂ ಧಾರ್ತರಾಷ್ಟ್ರಾಣಾಂ ದೃಷ್ಟ್ವಾ ಸೇನಾಂ ಸಮುದ್ಯತಾಂ।
06021001c ವಿಷಾದಮಗಮದ್ರಾಜಾ ಕುಂತೀಪುತ್ರೋ ಯುಧಿಷ್ಠಿರಃ।।
ಸಂಜಯನು ಹೇಳಿದನು: “ಯುದ್ಧಸನ್ನದ್ಧವಾಗಿದ್ದ ಧಾರ್ತರಾಷ್ಟ್ರರ ಅತಿ ದೊಡ್ಡ ಸೇನೆಯನ್ನು ನೋಡಿ ಕುಂತೀಪುತ್ರ ರಾಜಾ ಯುಧಿಷ್ಠಿರನಿಗೆ ವಿಷಾದವುಂಟಾಯಿತು.
06021002a ವ್ಯೂಹಂ ಭೀಷ್ಮೇಣ ಚಾಭೇದ್ಯಂ ಕಲ್ಪಿತಂ ಪ್ರೇಕ್ಷ್ಯ ಪಾಂಡವಃ।
06021002c ಅಭೇದ್ಯಮಿವ ಸಂಪ್ರೇಕ್ಷ್ಯ ವಿಷಣ್ಣೋಽರ್ಜುನಮಬ್ರವೀತ್।।
ಭೀಷ್ಮನು ರಚಿಸಿದ್ದ ಆ ಅಭೇದ್ಯ ವ್ಯೂಹವನ್ನು ನೋಡಿ ಪಾಂಡವನು ಅದು ಅಭೇದ್ಯವೆಂದು ಅರಿತು ವಿಷಣ್ಣನಾಗಿ ಅರ್ಜುನನಿಗೆ ಹೇಳಿದನು:
06021003a ಧನಂಜಯ ಕಥಂ ಶಕ್ಯಮಸ್ಮಾಭಿರ್ಯೋದ್ಧುಮಾಹವೇ।
06021003c ಧಾರ್ತರಾಷ್ಟ್ರೈರ್ಮಹಾಬಾಹೋ ಯೇಷಾಂ ಯೋದ್ಧಾ ಪಿತಾಮಹಃ।।
“ಧನಂಜಯ! ಮಹಾಬಾಹೋ! ಯಾರ ಯೋದ್ಧನು ಪಿತಾಮಹನೋ ಆ ಧಾರ್ತರಾಷ್ಟ್ರರನ್ನು ಯುದ್ಧದಲ್ಲಿ ನಾವು ಹೇಗೆ ಎದುರಿಸಬಲ್ಲೆವು?
06021004a ಅಕ್ಷೋಭ್ಯೋಽಯಮಭೇದ್ಯಶ್ಚ ಭೀಷ್ಮೇಣಾಮಿತ್ರಕರ್ಶಿನಾ।
06021004c ಕಲ್ಪಿತಃ ಶಾಸ್ತ್ರದೃಷ್ಟೇನ ವಿಧಿನಾ ಭೂರಿತೇಜಸಾ।।
ಆ ಅಮಿತ್ರಕರ್ಶಿ, ಭೂರಿತೇಜಸ ಭೀಷ್ಮನು ಶಾಸ್ತ್ರಗಳಲ್ಲಿರುವಂತೆ ವಿಧಿವತ್ತಾಗಿ ರಚಿಸಿರುವ ಈ ವ್ಯೂಹವು ಅಭೇದ್ಯವಾದುದು.
06021005a ತೇ ವಯಂ ಸಂಶಯಂ ಪ್ರಾಪ್ತಾಃ ಸಸೈನ್ಯಾಃ ಶತ್ರುಕರ್ಶನ।
06021005c ಕಥಮಸ್ಮಾನ್ಮಹಾವ್ಯೂಹಾದುದ್ಯಾನಂ ನೋ ಭವಿಷ್ಯತಿ।।
ಶತ್ರುಕರ್ಶನ! ನಮ್ಮ ಈ ಸೇನೆಯಿಂದ ನನಗೆ ಸಂಶಯಬಂದೊದಗಿದೆ. ಹೇಗೆ ತಾನೇ ನಾವು ಈ ಮಹಾ ವ್ಯೂಹವನ್ನು ಎದುರಿಸಿ ವಿಜಯವನ್ನು ಪಡೆಯಬಹುದು?”
06021006a ಅಥಾರ್ಜುನೋಽಬ್ರವೀತ್ಪಾರ್ಥಂ ಯುಧಿಷ್ಠಿರಮಮಿತ್ರಹಾ।
06021006c ವಿಷಣ್ಣಮಭಿಸಂಪ್ರೇಕ್ಷ್ಯ ತವ ರಾಜನ್ನನೀಕಿನೀಂ।।
ರಾಜನ್! ಆಗ ಅಮಿತ್ರಹ ಅರ್ಜುನನು ನಿನ್ನ ಸೇನೆಯನ್ನು ನೋಡಿಯೇ ದುಃಖಿತನಾದ ಪಾರ್ಥ ಯುಧಿಷ್ಠಿರನಿಗೆ ಹೇಳಿದನು:
06021007a ಪ್ರಜ್ಞಯಾಭ್ಯಧಿಕಾಂ ಶೂರಾನ್ಗುಣಯುಕ್ತಾನ್ಬಹೂನಪಿ।
06021007c ಜಯಂತ್ಯಲ್ಪತರಾ ಯೇನ ತನ್ನಿಬೋಧ ವಿಶಾಂ ಪತೇ।।
“ವಿಶಾಂಪತೇ! ಗುಣಯುಕ್ತರಾದ ಶೂರರನ್ನು ಅಧಿಕ ಸಂಖ್ಯೆಯಲ್ಲಿದ್ದರೂ ಕಡಿಮೆ ಸಂಖ್ಯೆಯಲ್ಲಿರುವವರು ಹೆಚ್ಚಿನ ಬುದ್ಧಿಯನ್ನುಪಯೋಗಿಸಿ ಹೇಗೆ ಜಯಿಸಬಹುದು ಎನ್ನುವುದನ್ನು ಕೇಳು.
06021008a ತತ್ತು ತೇ ಕಾರಣಂ ರಾಜನ್ಪ್ರವಕ್ಷ್ಯಾಮ್ಯನಸೂಯವೇ।
06021008c ನಾರದಸ್ತಂ ಋಷಿರ್ವೇದ ಭೀಷ್ಮದ್ರೋಣೌ ಚ ಪಾಂಡವ।।
ರಾಜನ್! ಪಾಂಡವ! ನೀನು ಅನಸೂಯನಾಗಿದ್ದೀಯೆ ಎಂಬ ಕಾರಣದಿಂದ ನಿನಗೆ ನಾನು ಹೇಳುತ್ತೇನೆ. ಇದನ್ನು ಋಷಿ ನಾರದನೂ, ಭೀಷ್ಮ-ದ್ರೋಣರೂ ತಿಳಿದಿದ್ದಾರೆ.
06021009a ಏತಮೇವಾರ್ಥಮಾಶ್ರಿತ್ಯ ಯುದ್ಧೇ ದೇವಾಸುರೇಽಬ್ರವೀತ್।
06021009c ಪಿತಾಮಹಃ ಕಿಲ ಪುರಾ ಮಹೇಂದ್ರಾದೀನ್ದಿವೌಕಸಃ।।
ಇದೇ ವಿಷಯದ ಕುರಿತು ದೇವಾಸುರರ ಯುದ್ಧದಲ್ಲಿ ಹಿಂದೆ ಪಿತಾಮಹನು ಮಹೇಂದ್ರಾದಿ ದಿವೌಕಸರಿಗೆ ಹೇಳಿರಲಿಲ್ಲವೇ?
06021010a ನ ತಥಾ ಬಲವೀರ್ಯಾಭ್ಯಾಂ ವಿಜಯಂತೇ ಜಿಗೀಷವಃ।
06021010c ಯಥಾ ಸತ್ಯಾನೃಶಂಸ್ಯಾಭ್ಯಾಂ ಧರ್ಮೇಣೈವೋದ್ಯಮೇನ ಚ।।
ವಿಜಯವನ್ನು ಬಯಸುವವರು ಸತ್ಯ, ಅಹಿಂಸೆ, ಧರ್ಮ ಮತ್ತು ಉದ್ಯಮದಿಂದ ಗೆಲ್ಲುವಷ್ಟು ಬಲ-ವೀರ್ಯಗಳಿಂದ ಗೆಲ್ಲುವುದಿಲ್ಲ.
06021011a ತ್ಯಕ್ತ್ವಾಧರ್ಮಂ ಚ ಲೋಭಂ ಚ ಮೋಹಂ ಚೋದ್ಯಮಮಾಸ್ಥಿತಾಃ।
06021011c ಯುಧ್ಯಧ್ವಮನಹಂಕಾರಾ ಯತೋ ಧರ್ಮಸ್ತತೋ ಜಯಃ।।
ಅಧರ್ಮ, ಲೋಭ, ಮೋಹಗಳನ್ನು ತೊರೆದು ಉದ್ಯಮದಲ್ಲಿ ನಿರತರಾಗಿ ಅಹಂಕಾರವಿಲ್ಲದೇ ಯುದ್ಧಮಾಡಬೇಕು. ಧರ್ಮವೆಲ್ಲಿದೆಯೋ ಅಲ್ಲಿ ಜಯ.
06021012a ಏವಂ ರಾಜನ್ವಿಜಾನೀಹಿ ಧ್ರುವೋಽಸ್ಮಾಕಂ ರಣೇ ಜಯಃ।
06021012c ಯಥಾ ಮೇ ನಾರದಃ ಪ್ರಾಹ ಯತಃ ಕೃಷ್ಣಸ್ತತೋ ಜಯಃ।।
ರಾಜನ್! ಈ ರಣದಲ್ಲಿ ಜಯವು ನಿಶ್ಚಯವಾಗಿಯೂ ನಮ್ಮದೇ ಎಂದು ತಿಳಿ. ನಾರದನು ನಮಗೆ ಹೇಳಿದಂತೆ ಕೃಷ್ಣನೆಲ್ಲಿರುವನೋ ಅಲ್ಲಿ ಜಯವಿರುವುದು.
06021013a ಗುಣಭೂತೋ ಜಯಃ ಕೃಷ್ಣೇ ಪೃಷ್ಠತೋಽನ್ವೇತಿ ಮಾಧವಂ।
06021013c ಅನ್ಯಥಾ ವಿಜಯಶ್ಚಾಸ್ಯ ಸನ್ನತಿಶ್ಚಾಪರೋ ಗುಣಃ।।
ಜಯವು ಕೃಷ್ಣನಲ್ಲಿರುವ ಗುಣ. ಅದು ಮಾಧವನ ಹಿಂದೆ ಅನುಸರಿಸಿ ಹೋಗುತ್ತದೆ. ವಿಜಯ ಮಾತ್ರವಲ್ಲದೇ ಸನ್ನತಿಯೂ ಇವನ ಇನ್ನೊಂದು ಗುಣ.
06021014a ಅನಂತತೇಜಾ ಗೋವಿಂದಃ ಶತ್ರುಪೂಗೇಷು ನಿರ್ವ್ಯಥಃ।
06021014c ಪುರುಷಃ ಸನಾತನತಮೋ ಯತಃ ಕೃಷ್ಣಸ್ತತೋ ಜಯಃ।।
ಅನಂತ ತೇಜಸ್ಸುಳ್ಳ ಗೋವಿಂದನು ಅಸಂಖ್ಯ ಶತ್ರುಗಳಿಂದಲೂ ವ್ಯಥೆಗೊಳ್ಳಲಾರನು. ಸನಾತನತಮ ಪುರುಷ ಕೃಷ್ಣನು ಎಲ್ಲಿರುವನೋ ಅಲ್ಲಿ ಜಯ.
06021015a ಪುರಾ ಹ್ಯೇಷ ಹರಿರ್ಭೂತ್ವಾ ವೈಕುಂಠೋಽಕುಂಠಸಾಯಕಃ।
06021015c ಸುರಾಸುರಾನವಸ್ಫೂರ್ಜನ್ನಬ್ರವೀತ್ ಕೇ ಜಯಂತ್ವಿತಿ।।
ಹಿಂದೆ ಇವನೇ ವೈಕುಂಠ ಹರಿಯಾಗಿ ಸಿಡಿಲಿನ ಶಬ್ಧದ ಧ್ವನಿಯಲ್ಲಿ ಸುರಾಸುರರಿಗೆ ಕೂಗಿ “ನಿಮ್ಮಲ್ಲಿ ಯಾರು ಗೆಲ್ಲುತ್ತೀರಿ?” ಎಂದು ಕೇಳಿದ್ದನು.
06021016a ಅನು ಕೃಷ್ಣಂ ಜಯೇಮೇತಿ ಯೈರುಕ್ತಂ ತತ್ರ ತೈರ್ಜಿತಂ।
06021016c ತತ್ಪ್ರಸಾದಾದ್ಧಿ ತ್ರೈಲೋಕ್ಯಂ ಪ್ರಾಪ್ತಂ ಶಕ್ರಾದಿಭಿಃ ಸುರೈಃ।।
“ಕೃಷ್ಣನು ನಮ್ಮೊಡನಿರುವುದರಿಂದ ನಮಗೇ ಜಯ” ಎಂದು ಹೇಳಿ ಶಕ್ರಾದಿ ಸುರರು ಅಲ್ಲಿಯೇ ಅವನ ಪ್ರಸಾದದಿಂದ ದೈತ್ಯರನ್ನು ಗೆದ್ದು ತ್ರೈಲೋಕ್ಯವನ್ನು ಪಡೆದರು.
06021017a ತಸ್ಯ ತೇ ನ ವ್ಯಥಾಂ ಕಾಂ ಚಿದಿಹ ಪಶ್ಯಾಮಿ ಭಾರತ।
06021017c ಯಸ್ಯ ತೇ ಜಯಮಾಶಾಸ್ತೇ ವಿಶ್ವಭುಕ್ ತ್ರಿದಶೇಶ್ವರಃ।।
ಭಾರತ! ಆದುದರಿಂದ ನಿನ್ನ ವ್ಯಥೆಗೆ ಯಾವುದೇ ಕಾರಣವು ನನಗೆ ಕಾಣುತ್ತಿಲ್ಲ. ಜಯವನ್ನು ಆಶಿಸುತ್ತಿರುವ ವಿಶ್ವಭುಕ್ ತ್ರಿದಶೇಶ್ವರನು ನಿನ್ನೊಡನೆ ಇದ್ದಾನೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಯುಧಿಷ್ಠಿರಾರ್ಜುನಸಂವಾದೇ ಏಕವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಯುಧಿಷ್ಠಿರಾರ್ಜುನಸಂವಾದವೆಂಬ ಇಪ್ಪತ್ತೊಂದನೇ ಅಧ್ಯಾಯವು.