008 ಮಾಲ್ಯವದ್ವರ್ಣನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಜಂಬೂಖಂಡವಿನಿರ್ಮಾಣ ಪರ್ವ

ಅಧ್ಯಾಯ 8

ಸಾರ

ಸಂಜಯನು ಧೃತರಾಷ್ಟ್ರನಿಗೆ ಮಾಲ್ಯವತವನ್ನು ವರ್ಣಿಸುವುದು (1-31).

06008001 ಧೃತರಾಷ್ಟ್ರ ಉವಾಚ।
06008001a ಮೇರೋರಥೋತ್ತರಂ ಪಾರ್ಶ್ವಂ ಪೂರ್ವಂ ಚಾಚಕ್ಷ್ವ ಸಂಜಯ।
06008001c ನಿಖಿಲೇನ ಮಹಾಬುದ್ಧೇ ಮಾಲ್ಯವಂತಂ ಚ ಪರ್ವತಂ।।

ಧೃತರಾಷ್ಟ್ರನು ಹೇಳಿದನು: “ಸಂಜಯ! ಮಹಾಬುದ್ಧೇ! ಮೇರುವಿನ ಉತ್ತರ ಮತ್ತು ಪೂರ್ವ ಪಾರ್ಶ್ವಗಳಲ್ಲಿರುವವುಗಳ ಕುರಿತು ಮತ್ತು ಪರ್ವತ ಮಾಲ್ಯವಂತದ ಕುರಿತು ಸಂಪೂರ್ಣವಾಗಿ ತಿಳಿಸಿ ಹೇಳು.”

06008002 ಸಂಜಯ ಉವಾಚ।
06008002a ದಕ್ಷಿಣೇನ ತು ನೀಲಸ್ಯ ಮೇರೋಃ ಪಾರ್ಶ್ವೇ ತಥೋತ್ತರೇ।
06008002c ಉತ್ತರಾಃ ಕುರವೋ ರಾಜನ್ಪುಣ್ಯಾಃ ಸಿದ್ಧನಿಷೇವಿತಾಃ।।

ಸಂಜಯನು ಹೇಳಿದನು: “ರಾಜನ್! ನೀಲಪರ್ವತದ ದಕ್ಷಿಣದಲ್ಲಿ ಮತ್ತು ಮೇರು ಪರ್ವತದ ಉತ್ತರ ಪಾರ್ಶ್ವದಲ್ಲಿ ಸಿದ್ಧನಿಷೇವಿತ ಪುಣ್ಯ ಉತ್ತರ ಕುರುವಿದೆ.

06008003a ತತ್ರ ವೃಕ್ಷಾ ಮಧುಫಲಾ ನಿತ್ಯಪುಷ್ಪಫಲೋಪಗಾಃ।
06008003c ಪುಷ್ಪಾಣಿ ಚ ಸುಗಂಧೀನಿ ರಸವಂತಿ ಫಲಾನಿ ಚ।।

ಅಲ್ಲಿಯ ಸಿಹಿಹಣ್ಣಿನ ಮರಗಳು ನಿತ್ಯವೂ ಪುಷ್ಪ-ಫಲಗಳನ್ನು ಹೊಂದಿದ್ದು, ಪುಷ್ಪಗಳು ಸುಗಂಧಯುಕ್ತವೂ ಫಲಗಳು ರಸವತ್ತಾಗಿಯೂ ಇರುತ್ತವೆ.

06008004a ಸರ್ವಕಾಮಫಲಾಸ್ತತ್ರ ಕೇ ಚಿದ್ವೃಕ್ಷಾ ಜನಾಧಿಪ।
06008004c ಅಪರೇ ಕ್ಷೀರಿಣೋ ನಾಮ ವೃಕ್ಷಾಸ್ತತ್ರ ನರಾಧಿಪ।।

ಜನಾಧಿಪ! ಅಲ್ಲಿರುವ ಕೆಲವು ವೃಕ್ಷಗಳು ಸರ್ವಕಾಮಗಳನ್ನು ಕೊಡುವವು. ನರಾಧಿಪ! ಅಲ್ಲಿ ಕ್ಷೀರೀ ಎಂಬ ಹೆಸರಿನ ಬೇರೆ ವೃಕ್ಷಗಳೂ ಇವೆ.

06008005a ಯೇ ಕ್ಷರಂತಿ ಸದಾ ಕ್ಷೀರಂ ಷಡ್ರಸಂ ಹ್ಯಮೃತೋಪಮಂ।
06008005c ವಸ್ತ್ರಾಣಿ ಚ ಪ್ರಸೂಯಂತೇ ಫಲೇಷ್ವಾಭರಣಾನಿ ಚ।।

ಅವು ಸದಾ ಷಡ್ರಸ, ಅಮೃತೋಪಮ ಹಾಲನ್ನು, ಫಲಗಳಾಗಿ ವಸ್ತ್ರ-ಆಭರಣಗಳನ್ನೂ ಕೊಡುತ್ತವೆ.

06008006a ಸರ್ವಾ ಮಣಿಮಯೀ ಭೂಮಿಃ ಸೂಕ್ಷ್ಮಕಾಂಚನವಾಲುಕಾ।
06008006c ಸರ್ವತ್ರ ಸುಖಸಂಸ್ಪರ್ಶಾ ನಿಷ್ಪಂಕಾ ಚ ಜನಾಧಿಪ।।

ಜನಾಧಿಪ! ಅಲ್ಲಿಯ ಭೂಮಿಯೆಲ್ಲಾ ಮಣಿಮಯವಾದುದು, ಮತ್ತು ಸೂಕ್ಷ್ಮವಾದ ಬಂಗಾರದ ಮರಳಿನಿಂದ ಕೂಡಿದೆ. ಎಲ್ಲೆಲ್ಲಿಯೂ ಸುಖಸಂಸ್ಪರ್ಷವಿದೆ. ಕೆಸರೆಂಬುದೇ ಇಲ್ಲ.

06008007a ದೇವಲೋಕಚ್ಯುತಾಃ ಸರ್ವೇ ಜಾಯಂತೇ ತತ್ರ ಮಾನವಾಃ।
06008007c ತುಲ್ಯರೂಪಗುಣೋಪೇತಾಃ ಸಮೇಷು ವಿಷಮೇಷು ಚ।।

ದೇವಲೋಕದಿಂದ ಚ್ಯುತರಾದ ಮಾನವರೆಲ್ಲರೂ ಅಲ್ಲಿ ಹುಟ್ಟುತ್ತಾರೆ. ಸಮ-ವಿಷಮಗಳಲ್ಲಿ ಅವರು ಸರಿಸಾಟಿಯಾದ ರೂಪಗುಣಗಳನ್ನು ಹೊಂದಿರುತ್ತಾರೆ.

06008008a ಮಿಥುನಾನಿ ಚ ಜಾಯಂತೇ ಸ್ತ್ರಿಯಶ್ಚಾಪ್ಸರಸೋಪಮಾಃ।
06008008c ತೇಷಾಂ ತೇ ಕ್ಷೀರಿಣಾಂ ಕ್ಷೀರಂ ಪಿಬಂತ್ಯಮೃತಸನ್ನಿಭಂ।।

ಅಲ್ಲಿ ಅವಳಿ-ಜವಳಿ ಮಕ್ಕಳು1 ಹುಟ್ಟುತ್ತಾರೆ. ಅವರಲ್ಲಿ ಹುಟ್ಟುವ ಸ್ತ್ರೀಯರು ಅಪ್ಸರೆಯರಂತಿರುತ್ತಾರೆ. ಅವರು ಅಲ್ಲಿ ಆ ಕ್ಷೀರಿಗಳ ಅಮೃತಸನ್ನಿಭ ಕ್ಷೀರವನ್ನು ಕುಡಿಯುತ್ತಾರೆ.

06008009a ಮಿಥುನಂ ಜಾಯಮಾನಂ ವೈ ಸಮಂ ತಚ್ಚ ಪ್ರವರ್ಧತೇ।
06008009c ತುಲ್ಯರೂಪಗುಣೋಪೇತಂ ಸಮವೇಷಂ ತಥೈವ ಚ।
06008009e ಏಕೈಕಮನುರಕ್ತಂ ಚ ಚಕ್ರವಾಕಸಮಂ ವಿಭೋ।।

ವಿಭೋ! ಮಿಥುನರಾಗಿ ಹುಟ್ಟಿದವರು ಅಲ್ಲಿ ಸಮ ಸಮವಾಗಿಯೇ ಬೆಳೆಯುತ್ತಾರೆ, ಸರಿಸಮನಾದ ರೂಪ-ಗುಣಗಳನ್ನು ಹೊಂದಿರುತ್ತಾರೆ. ಅವರ ವೇಷಭೂಷಣಗಳೂ ಒಂದೇ ಆಗಿರುತ್ತವೆ. ಮತ್ತು ಚಕ್ರವಾಕ ಪಕ್ಷಿಗಳಂತೆ ಪರಸ್ಪರರಲ್ಲಿ ಅನುರಕ್ತರಾಗಿರುತ್ತಾರೆ.

06008010a ನಿರಾಮಯಾ ವೀತಶೋಕಾ ನಿತ್ಯಂ ಮುದಿತಮಾನಸಾಃ।
06008010c ದಶ ವರ್ಷಸಹಸ್ರಾಣಿ ದಶ ವರ್ಷಶತಾನಿ ಚ।
06008010e ಜೀವಂತಿ ತೇ ಮಹಾರಾಜ ನ ಚಾನ್ಯೋನ್ಯಂ ಜಹತ್ಯುತ।।

ಮಹಾರಾಜ! ನಿರಾಮಯರಾಗಿ, ವೀತಶೋಕರಾಗಿ, ನಿತ್ಯವೂ ಮುದಿತ ಮಾನಸರಾಗಿ ಅವರು ಹತ್ತು ಸಾವಿರದ ಹತ್ತು ನೂರು ವರ್ಷಗಳು ಜೀವಿಸುತ್ತಾರೆ ಮತ್ತು ಅನ್ಯೋನ್ಯರನ್ನು ತೊರೆಯುವುದಿಲ್ಲ2.

06008011a ಭಾರುಂಡಾ ನಾಮ ಶಕುನಾಸ್ತೀಕ್ಷ್ಣತುಂಡಾ ಮಹಾಬಲಾಃ।
06008011c ತೇ ನಿರ್ಹರಂತಿ ಹಿ ಮೃತಾನ್ ದರೀಷು ಪ್ರಕ್ಷಿಪಂತಿ ಚ।।

ಅವರು ಮೃತರಾದಾಗ ಭಾರುಂಡ ಎಂಬ ಹೆಸರಿನ, ತೀಕ್ಷ್ಣ ಕೊಕ್ಕುಗಳನ್ನುಳ್ಳ ಮಹಾಬಲಶಾಲೀ ಪಕ್ಷಿಗಳು ಅವರನ್ನು ಎತ್ತಿ ಪರ್ವತ ಕಣಿವೆಗಳಲ್ಲಿ ಎಸೆಯುತ್ತವೆ.

06008012a ಉತ್ತರಾಃ ಕುರವೋ ರಾಜನ್ವ್ಯಾಖ್ಯಾತಾಸ್ತೇ ಸಮಾಸತಃ।
06008012c ಮೇರೋಃ ಪಾರ್ಶ್ವಮಹಂ ಪೂರ್ವಂ ವಕ್ಷ್ಯಾಮ್ಯಥ ಯಥಾತಥಂ।।

ರಾಜನ್! ಈಗ ನಾನು ನಿನಗೆ ಸಂಕ್ಷಿಪ್ತವಾಗಿ ಉತ್ತರ ಕುರುವಿನ ಕುರಿತು ಹೇಳಿದ್ದೇನೆ. ಈಗ ನಾನು ಮೇರುವಿನ ಪೂರ್ವಭಾಗವನ್ನು ಯಥಾತಥವಾಗಿ ವರ್ಣಿಸುತ್ತೇನೆ.

06008013a ತಸ್ಯ ಪೂರ್ವಾಭಿಷೇಕಸ್ತು ಭದ್ರಾಶ್ವಸ್ಯ ವಿಶಾಂ ಪತೇ।
06008013c ಭದ್ರಸಾಲವನಂ ಯತ್ರ ಕಾಲಾಮ್ರಶ್ಚ ಮಹಾದ್ರುಮಃ।।

ವಿಶಾಂಪತೇ! ಅದರ ಪೂರ್ವದಲ್ಲಿರುವವುಗಳಲ್ಲಿ ಭದ್ರಸಾಲವೃಕ್ಷಗಳನ್ನು ಕೂಡಿದ ಭದ್ರಾಶ್ವವೆಂಬ ವನವಿದೆ. ಅಲ್ಲಿ ಕಾಲಾಮ್ರವೆಂಬ ಮಹಾ ವೃಕ್ಷವೂ ಇದೆ.

06008014a ಕಾಲಾಮ್ರಶ್ಚ ಮಹಾರಾಜ ನಿತ್ಯಪುಷ್ಪಫಲಃ ಶುಭಃ।
06008014c ದ್ವೀಪಶ್ಚ ಯೋಜನೋತ್ಸೇಧಃ ಸಿದ್ಧಚಾರಣಸೇವಿತಃ।।

ಮಹಾರಾಜ! ಕಾಲಾಮ್ರವೂ ನಿತ್ಯ ಶುಭ ಪುಷ್ಪಫಲಗಳಿಂದ ಕೂಡಿರುತ್ತದೆ. ಆ ವೃಕ್ಷವು ಎತ್ತರದಲ್ಲಿ ಒಂದು ಯೋಜನದಷ್ಟಿದ್ದು, ಅದನ್ನು ಸಿದ್ಧಚಾರಣರು ಸೇವಿಸುತ್ತಾರೆ.

06008015a ತತ್ರ ತೇ ಪುರುಷಾಃ ಶ್ವೇತಾಸ್ತೇಜೋಯುಕ್ತಾ ಮಹಾಬಲಾಃ।
06008015c ಸ್ತ್ರಿಯಃ ಕುಮುದವರ್ಣಾಶ್ಚ ಸುಂದರ್ಯಃ ಪ್ರಿಯದರ್ಶನಾಃ।।
06008016a ಚಂದ್ರಪ್ರಭಾಶ್ಚಂದ್ರವರ್ಣಾಃ ಪೂರ್ಣಚಂದ್ರನಿಭಾನನಾಃ।
06008016c ಚಂದ್ರಶೀತಲಗಾತ್ರ್ಯಶ್ಚ ನೃತ್ತಗೀತವಿಶಾರದಾಃ।।

ಅಲ್ಲಿಯ ಪುರುಷರು ಶ್ವೇತವರ್ಣದವರಾಗಿಯೂ, ತೇಜೋಯುಕ್ತರಾಗಿಯೂ, ಮಹಾಬಲಶಾಲಿಗಳಾಗಿಯೂ ಇರುತ್ತಾರೆ. ಸ್ತ್ರೀಯರು ಕುಮುದ3 ವರ್ಣದವರಾಗಿದ್ದು, ಸುಂದರಿಯರೂ ಪ್ರಿಯದರ್ಶನೆಯರೂ, ಚಂದ್ರಪ್ರಭೆಯುಳ್ಳವರೂ, ಚಂದ್ರವರ್ಣದವರೂ, ಪೂರ್ಣಚಂದ್ರನಂತಹ ಮುಖವುಳ್ಳವರೂ, ಚಂದ್ರನಂತೆ ಶೀತಲ ದೇಹವುಳ್ಳವರೂ ನೃತ್ಯ-ಗೀತ ವಿಶಾರದರೂ ಆಗಿರುತ್ತಾರೆ.

06008017a ದಶ ವರ್ಷಸಹಸ್ರಾಣಿ ತತ್ರಾಯುರ್ಭರತರ್ಷಭ।
06008017c ಕಾಲಾಮ್ರರಸಪೀತಾಸ್ತೇ ನಿತ್ಯಂ ಸಂಸ್ಥಿತಯೌವನಾಃ।।

ಭರತರ್ಷಭ! ಅಲ್ಲಿ ಆಯುಸ್ಸು ಹತ್ತು ಸಾವಿರ ವರ್ಷಗಳು. ಕಾಲಾಮ್ರದ ರಸವನ್ನು ಕುಡಿದು ಅವರು ನಿತ್ಯವೂ ಯೌವನದಲ್ಲಿಯೇ ಇರುತ್ತಾರೆ.

06008018a ದಕ್ಷಿಣೇನ ತು ನೀಲಸ್ಯ ನಿಷಧಸ್ಯೋತ್ತರೇಣ ತು।
06008018c ಸುದರ್ಶನೋ ನಾಮ ಮಹಾನ್ ಜಂಬೂವೃಕ್ಷಃ ಸನಾತನಃ।।

ನೀಲಪರ್ವತದ ದಕ್ಷಿಣದಲ್ಲಿ, ನಿಷಧದ ಉತ್ತರದಲ್ಲಿ ಸುದರ್ಶನ ಎಂಬ ಹೆಸರಿನ ಸನಾತನ ಜಂಬೂ4ವೃಕ್ಷವಿದೆ.

06008019a ಸರ್ವಕಾಮಫಲಃ ಪುಣ್ಯಃ ಸಿದ್ಧಚಾರಣಸೇವಿತಃ।
06008019c ತಸ್ಯ ನಾಮ್ನಾ ಸಮಾಖ್ಯಾತೋ ಜಂಬೂದ್ವೀಪಃ ಸನಾತನಃ।।

ಸರ್ವಕಾಮಫಲಗಳನ್ನೂ ನೀಡುವ, ಪುಣ್ಯ, ಸಿದ್ಧಚಾರಣ ಸೇವಿತ, ಸನಾತನ ವೃಕ್ಷದಿಂದಾಗಿ ಅದನ್ನು ಜಂಬೂದ್ವೀಪವೆಂಬ ಹೆಸರಿನಿಂದಲೂ ಕರೆಯುತ್ತಾರೆ5.

06008020a ಯೋಜನಾನಾಂ ಸಹಸ್ರಂ ಚ ಶತಂ ಚ ಭರತರ್ಷಭ।
06008020c ಉತ್ಸೇಧೋ ವೃಕ್ಷರಾಜಸ್ಯ ದಿವಸ್ಪೃಮ್ಮನುಜೇಶ್ವರ।।

ಭರತರ್ಷಭ! ಮನುಜೇಶ್ವರ! ದಿವವನ್ನು ಮುಟ್ಟುವ ಆ ವೃಕ್ಷರಾಜನ ಎತ್ತರವು ಒಂದು ಸಾವಿರದ ಒಂದು ನೂರು ಯೋಜನವಿದೆ.

06008021a ಅರತ್ನೀನಾಂ ಸಹಸ್ರಂ ಚ ಶತಾನಿ ದಶ ಪಂಚ ಚ।
06008021c ಪರಿಣಾಹಸ್ತು ವೃಕ್ಷಸ್ಯ ಫಲಾನಾಂ ರಸಭೇದಿನಾಂ।।

ಒಡೆದು ರಸವನ್ನು ಸುರಿಸುವ ಆ ವೃಕ್ಷದ ಫಲಗಳ ಪರಿಧಿಯು ಒಂದು ಸಾವಿರದ ಐದು ನೂರು ಅರತ್ನಿ6ಗಳು.

06008022a ಪತಮಾನಾನಿ ತಾನ್ಯುರ್ವ್ಯಾಂ ಕುರ್ವಂತಿ ವಿಪುಲಂ ಸ್ವನಂ।
06008022c ಮುಂಚಂತಿ ಚ ರಸಂ ರಾಜಂಸ್ತಸ್ಮಿನ್ರಜತಸನ್ನಿಭಂ।।

ರಾಜನ್! ಈ ಹಣ್ಣುಗಳು ನೆಲದ ಮೇಲೆ ಬೀಳುವಾಗ ದೊಡ್ಡ ಶಬ್ಧವನ್ನು ಮಾಡುತ್ತವೆ ಮತ್ತು ಬೆಳ್ಳಿಯಂತಿರುವ ರಸವನ್ನು ಸುರಿಸುತ್ತವೆ.

06008023a ತಸ್ಯಾ ಜಂಬ್ವಾಃ ಫಲರಸೋ ನದೀ ಭೂತ್ವಾ ಜನಾಧಿಪ।
06008023c ಮೇರುಂ ಪ್ರದಕ್ಷಿಣಂ ಕೃತ್ವಾ ಸಂಪ್ರಯಾತ್ಯುತ್ತರಾನ್ಕುರೂನ್।।

ಜನಾಧಿಪ! ಆ ಜಂಬೂ ಫಲಗಳ ರಸವು ನದಿಯಾಗಿ ಮೇರುವನ್ನು ಪ್ರದಕ್ಷಿಣೆಮಾಡಿ ಉತ್ತರ ಕುರುಗಳಲ್ಲಿಗೆ ಬರುತ್ತದೆ.

06008024a ಪಿಬಂತಿ ತದ್ರಸಂ ಹೃಷ್ಟಾ ಜನಾ ನಿತ್ಯಂ ಜನಾಧಿಪ।
06008024c ತಸ್ಮಿನ್ಫಲರಸೇ ಪೀತೇ ನ ಜರಾ ಬಾಧತೇ ಚ ತಾನ್।।

ಜನಾಧಿಪ! ನಿತ್ಯವು ಆ ರಸವನ್ನು ಹೃಷ್ಟ ಜನರು ಕುಡಿಯುತ್ತಾರೆ. ಆ ಫಲದ ರಸವನ್ನು ಕುಡಿದವರಿಗೆ ಮುಪ್ಪು ಬಾಧಿಸುವುದಿಲ್ಲ.

06008025a ತತ್ರ ಜಾಂಬೂನದಂ ನಾಮ ಕನಕಂ ದೇವಭೂಷಣಂ।
06008025c ತರುಣಾದಿತ್ಯವರ್ಣಾಶ್ಚ ಜಾಯಂತೇ ತತ್ರ ಮಾನವಾಃ।।

ಅಲ್ಲಿ ಜಾಂಬೂನದರೆಂಬ ಹೆಸರಿನ ಬಂಗಾರದ, ದೇವಭೂಷಣಗಳ, ತರುಣ ಆದಿತ್ಯವರ್ಣದ ಮಾನವರು ಹುಟ್ಟುತ್ತಾರೆ.

06008026a ತಥಾ ಮಾಲ್ಯವತಃ ಶೃಂಗೇ ದೀಪ್ಯತೇ ತತ್ರ ಹವ್ಯವಾಟ್।
06008026c ನಾಮ್ನಾ ಸಂವರ್ತಕೋ ನಾಮ ಕಾಲಾಗ್ನಿರ್ಭರತರ್ಷಭ।।

ಭರತರ್ಷಭ! ಮಾಲ್ಯವತದ ಶೃಂಗದಲ್ಲಿ ಸಂವರ್ತಕ ಎಂಬ ಹೆಸರಿನ ಅಗ್ನಿ ಕಾಲಾಗ್ನಿಯು ಉರಿಯುತ್ತದೆ.

06008027a ತಥಾ ಮಾಲ್ಯವತಃ ಶೃಂಗೇ ಪೂರ್ವೇ ಪೂರ್ವಾಂತಗಂಡಿಕಾ।
06008027c ಯೋಜನಾನಾಂ ಸಹಸ್ರಾಣಿ ಪಂಚಾಶನ್ಮಾಲ್ಯವಾನ್ ಸ್ಥಿತಃ।।

ಹಾಗೆಯೇ ಮಾಲ್ಯವತದ ಶೃಂಗದ ಪೂರ್ವದಲ್ಲಿ ಹಲವಾರು ಸಣ್ಣ ಸಣ್ಣ ಪರ್ವತಗಳಿವೆ. ಮಾಲ್ಯವತವು ಐದು ಸಾವಿರ ಯೋಜನೆ ವಿಸ್ತೀರ್ಣದಲ್ಲಿ ನಿಂತಿದೆ.

06008028a ಮಹಾರಜತಸಂಕಾಶಾ ಜಾಯಂತೇ ತತ್ರ ಮಾನವಾಃ।
06008028c ಬ್ರಹ್ಮಲೋಕಾಚ್ಚ್ಯುತಾಃ ಸರ್ವೇ ಸರ್ವೇ ಚ ಬ್ರಹ್ಮವಾದಿನಃ।।

ಬ್ರಹ್ಮಲೋಕದಿಂದ ಚ್ಯುತರಾದವರೆಲ್ಲರೂ, ಎಲ್ಲ ಬ್ರಹ್ಮವಾದಿಗಳೂ ಅಲ್ಲಿ ಮಹಾರಜತ ಸಂಕಾಶರಾದ ಮಾನವರಾಗಿ ಜನಿಸುತ್ತಾರೆ.

06008029a ತಪಸ್ತು ತಪ್ಯಮಾನಾಸ್ತೇ ಭವಂತಿ ಹ್ಯೂರ್ಧ್ವರೇತಸಃ।
06008029c ರಕ್ಷಣಾರ್ಥಂ ತು ಭೂತಾನಾಂ ಪ್ರವಿಶಂತಿ ದಿವಾಕರಂ।।

ತಪಸ್ಸನ್ನು ತಪಿಸಿ ಅವರು ಊರ್ಧ್ವರೇತಸರಾಗಿರುತ್ತಾರೆ. ಭೂತಗಳ ರಕ್ಷಣೆಗೋಸ್ಕರ ದಿವಾಕರನನ್ನು ಪ್ರವೇಶಿಸುತ್ತಾರೆ.

06008030a ಷಷ್ಟಿಸ್ತಾನಿ ಸಹಸ್ರಾಣಿ ಷಷ್ಟಿರೇವ ಶತಾನಿ ಚ।
06008030c ಅರುಣಸ್ಯಾಗ್ರತೋ ಯಾಂತಿ ಪರಿವಾರ್ಯ ದಿವಾಕರಂ।।

ಅರವತ್ತಾರು ಸಾವಿರ ಸಂಖ್ಯೆಗಳ ಅವರು ಅರುಣನ ಮುಂದೆ ನಡೆದು ದಿವಾಕರನನ್ನು ಸುತ್ತುವರೆಯುತ್ತಾರೆ.

06008031a ಷಷ್ಟಿಂ ವರ್ಷಸಹಸ್ರಾಣಿ ಷಷ್ಟಿಮೇವ ಶತಾನಿ ಚ।
06008031c ಆದಿತ್ಯತಾಪತಪ್ತಾಸ್ತೇ ವಿಶಂತಿ ಶಶಿಮಂಡಲಂ।।

ಅರವತ್ತಾರು ಸಾವಿರ ವರ್ಷಗಳು ಆದಿತ್ಯನನ್ನು ತಪಿಸಿ ಅವರು ಶಶಿಮಂಡಲವನ್ನು ಪ್ರವೇಶಿಸುತ್ತಾರೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಜಂಬೂಖಂಡವಿನಿರ್ಮಾಣ ಪರ್ವಣಿ ಮಾಲ್ಯವದ್ವರ್ಣನೇ ಅಷ್ಟಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಜಂಬೂಖಂಡವಿನಿರ್ಮಾಣ ಪರ್ವದಲ್ಲಿ ಮಾಲ್ಯವದ್ವರ್ಣನ ಎನ್ನುವ ಎಂಟನೇ ಅಧ್ಯಾಯವು.


  1. ಒಂದು ಗಂಡು ಮತ್ತು ಒಂದು ಹೆಣ್ಣು. ↩︎

  2. ಅವಳಿ-ಜವಳಿಗಳು ಒಟ್ಟಿಗೇ ಸಾಯುತ್ತಾರೆ ಕೂಡ. ↩︎

  3. ಬಿಳೀ ನೈದಿಲೆ. ↩︎

  4. ನೇರಳೇ ಮರ? ↩︎

  5. ಈ ನೇರಳೆಯ ಮರಕ್ಕೆ ಸುದರ್ಶನ ಎಂಬ ಹೆಸರಿರುವುದರಿಂದ ಜಂಬೂಖಂಡಕ್ಕೆ ಸುದರ್ಶನಖಂಡ ಅಥವಾ ಸುದರ್ಶನದ್ವೀಪ ಎನ್ನುವ ಹೆಸರೂ ಇದೆ. ಸುದರ್ಶನದ್ವೀಪದ ವರ್ಣನೆಯು ಅಧ್ಯಾಯ 6ರಲ್ಲಿದೆ. ↩︎

  6. ಅರತ್ನಿಃ ಎಂದರೆ ಕಿರುಬೆರಳು ನೀಡಿದ ಒಂದು ಗುದ್ದುಮೊಳ. ↩︎