052 ಧೃತರಾಷ್ಟ್ರವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಯಾನಸಂಧಿ ಪರ್ವ

ಅಧ್ಯಾಯ 52

ಸಾರ

“ಯುದ್ಧವನ್ನು ಮಾಡದೇ ಇರುವುದೇ ಒಳ್ಳೆಯದು! ಯುದ್ಧವಾದರೆ ಕುಲದ ಸರ್ವನಾಶವು ನಡೆಯುವುದು ಸತ್ಯ” ಎಂದು ಧೃತರಾಷ್ಟ್ರನು ಯುಧಿಷ್ಠಿರನೊಂದಿಗೆ ಶಾಂತಿಗೆ ಪ್ರಯತ್ನಿಸಬೇಕೆಂದು ಹೇಳಿದುದು (1-16).

05052001 ಧೃತರಾಷ್ಟ್ರ ಉವಾಚ।
05052001a ಯಥೈವ ಪಾಂಡವಾಃ ಸರ್ವೇ ಪರಾಕ್ರಾಂತಾ ಜಿಗೀಷವಃ।
05052001c ತಥೈವಾಭಿಸರಾಸ್ತೇಷಾಂ ತ್ಯಕ್ತಾತ್ಮಾನೋ ಜಯೇ ಧೃತಾಃ।।

ಧೃತರಾಷ್ಟ್ರನು ಹೇಳಿದನು: “ಹೇಗೆ ಪಾಂಡವರೆಲ್ಲರೂ ವಿಜಯದ ಭರವಸೆಯನ್ನಿಟ್ಟುಕೊಂಡಿದ್ದಾರೋ ಹಾಗೆಯೇ ಅವರಿಗಾಗಿ ಜೀವವನ್ನು ತೊರೆದಿರುವ ಅವರ ಜನರೂ ಕೂಡ ಜಯದಲ್ಲಿ ವಿಶ್ವಾಸವನ್ನಿಟ್ಟಿದ್ದಾರೆ.

05052002a ತ್ವಮೇವ ಹಿ ಪರಾಕ್ರಾಂತಾನಾಚಕ್ಷೀಥಾಃ ಪರಾನ್ಮಮ।
05052002c ಪಾಂಚಾಲಾನ್ಕೇಕಯಾನ್ಮತ್ಸ್ಯಾನ್ಮಾಗಧಾನ್ವತ್ಸಭೂಮಿಪಾನ್।।

ನೀನೇ ನನಗೆ ಆ ಪರಾಕ್ರಮಿ ವೀರರ ಕುರಿತು - ಪಾಂಚಾಲರು, ಕೇಕಯರು, ಮತ್ಸ್ಯರು, ಮಾಗಧರು ಮತ್ತು ವತ್ಸರಾಜರು - ಹೇಳಿದ್ದೀಯೆ.

05052003a ಯಶ್ಚ ಸೇಂದ್ರಾನಿಮಾಽಲ್ಲೋಕಾನಿಚ್ಚನ್ಕುರ್ಯಾದ್ವಶೇ ಬಲೀ।
05052003c ಸ ಶ್ರೇಷ್ಠೋ ಜಗತಃ ಕೃಷ್ಣಃ ಪಾಂಡವಾನಾಂ ಜಯೇ ಧೃತಃ।।

ಇಂದ್ರನನ್ನೂ ಸೇರಿ ಈ ಲೋಕಗಳನ್ನು ವಶಪಡಿಸಿಕೊಳ್ಳಬಲ್ಲ ಬಲಶಾಲಿ, ಜಗತ್ತಿನಲ್ಲಿಯೇ ಶ್ರೇಷ್ಠನಾಗಿರುವ ಕೃಷ್ಣನೂ ಕೂಡ ಪಾಂಡವರ ಜಯದಲ್ಲಿ ವಿಶ್ವಾಸವನ್ನಿಟ್ಟಿದ್ದಾನೆ.

05052004a ಸಮಸ್ತಾಮರ್ಜುನಾದ್ವಿದ್ಯಾಂ ಸಾತ್ಯಕಿಃ ಕ್ಷಿಪ್ರಮಾಪ್ತವಾನ್।
05052004c ಶೈನೇಯಃ ಸಮರೇ ಸ್ಥಾತಾ ಬೀಜವತ್ಪ್ರವಪಂ ಶರಾನ್।।

ಅರ್ಜುನನಿಂದ ಸಮಸ್ತವಿದ್ಯೆಗಳನ್ನೂ ಬೇಗನೆ ಪಡೆದ ಸಾತ್ಯಕಿ ಶೈನಿಯು ಸಮರದಲ್ಲಿ ನೆಲೆಸಿ ಬೀಜಗಳಂತೆ ಬಾಣಗಳನ್ನು ಬಿತ್ತುತ್ತಾನೆ.

05052005a ಧೃಷ್ಟದ್ಯುಮ್ನಶ್ಚ ಪಾಂಚಾಲ್ಯಃ ಕ್ರೂರಕರ್ಮಾ ಮಹಾರಥಃ।
05052005c ಮಾಮಕೇಷು ರಣಂ ಕರ್ತಾ ಬಲೇಷು ಪರಮಾಸ್ತ್ರವಿತ್।।

ಕ್ರೂರಕರ್ಮಿ, ಮಹಾರಥಿ, ಪಾಂಚಾಲ್ಯ ಧೃಷ್ಟದ್ಯುಮ್ನನು ತನ್ನ ಪರಮಾಸ್ತ್ರ ವಿದ್ಯೆಯಿಂದ ನನ್ನವರೊಡನೆ ರಣದಲ್ಲಿ ಹೋರಾಡುತ್ತಾನೆ.

05052006a ಯುಧಿಷ್ಠಿರಸ್ಯ ಚ ಕ್ರೋಧಾದರ್ಜುನಸ್ಯ ಚ ವಿಕ್ರಮಾತ್।
05052006c ಯಮಾಭ್ಯಾಂ ಭೀಮಸೇನಾಚ್ಚ ಭಯಂ ಮೇ ತಾತ ಜಾಯತೇ।।

ಅಯ್ಯಾ! ಯುಧಿಷ್ಠಿರನ ಕ್ರೋಧದಿಂದ, ಅರ್ಜುನ, ಯಮಳರು ಮತ್ತು ಭೀಮಸೇನನ ವಿಕ್ರಮದಿಂದ ನನಗೆ ಭಯವಾಗುತ್ತಿದೆ.

05052007a ಅಮಾನುಷಂ ಮನುಷ್ಯೇಂದ್ರೈರ್ಜಾಲಂ ವಿತತಮಂತರಾ।
05052007c ಮಮ ಸೇನಾಂ ಹನಿಷ್ಯಂತಿ ತತಃ ಕ್ರೋಶಾಮಿ ಸಂಜಯ।।

ಸಂಜಯ! ಆ ಮನುಷ್ಯೇಂದ್ರರು ನನ್ನ ಸೇನೆಯ ಮಧ್ಯೆ ಅಮಾನುಷ ಜಾಲವನ್ನು ಎಸೆದು ಸಂಹರಿಸುತ್ತಾರೆ. ಈಗಲೇ ಅದರ ಕುರಿತು ದುಃಖಿಸುತ್ತಿದ್ದೇನೆ.

05052008a ದರ್ಶನೀಯೋ ಮನಸ್ವೀ ಚ ಲಕ್ಷ್ಮೀವಾನ್ಬ್ರಹ್ಮವರ್ಚಸೀ।
05052008c ಮೇಧಾವೀ ಸುಕೃತಪ್ರಜ್ಞೋ ಧರ್ಮಾತ್ಮಾ ಪಾಂಡುನಂದನಃ।।

ಪಾಂಡುನಂದನನು ನೋಡಲು ಸುಂದರನಾಗಿದ್ದಾನೆ. ಮನಸ್ವಿ. ಲಕ್ಷ್ಮೀವಂತ ಮತ್ತು ಬ್ರಹ್ಮವರ್ಚಸ್ಸುಳ್ಳವನು. ಅವನು ಮೇಧಾವೀ, ಸುಕೃತಪ್ರಜ್ಞ ಮತ್ತು ಧರ್ಮಾತ್ಮ.

05052009a ಮಿತ್ರಾಮಾತ್ಯೈಃ ಸುಸಂಪನ್ನಃ ಸಂಪನ್ನೋ ಯೋಜ್ಯಯೋಜಕೈಃ।
05052009c ಭ್ರಾತೃಭಿಃ ಶ್ವಶುರೈಃ ಪುತ್ರೈರುಪಪನ್ನೋ ಮಹಾರಥೈಃ।।

ಅವನಿಗೆ ಹೇರಳ ಮಿತ್ರರಿದ್ದಾರೆ. ಅಮಾತ್ಯರಿದ್ದಾರೆ. ಕಟ್ಟಲು ಕುದುರೆಗಳು ಮತ್ತು ಕಟ್ಟುವವರೂ ಇದ್ದಾರೆ. ತಮ್ಮಂದಿರು, ಮಾವಂದಿರು, ಮತ್ತು ಮಹಾರಥಿ ಮಕ್ಕಳಿದ್ದಾರೆ.

05052010a ಧೃತ್ಯಾ ಚ ಪುರುಷವ್ಯಾಘ್ರೋ ನೈಭೃತ್ಯೇನ ಚ ಪಾಂಡವಃ।
05052010c ಅನೃಶಂಸೋ ವದಾನ್ಯಶ್ಚ ಹ್ರೀಮಾನ್ಸತ್ಯಪರಾಕ್ರಮಃ।।

ಆ ಪುರುಷವ್ಯಾಘ್ರ ಪಾಂಡವನಲ್ಲಿ ಧೃತಿಯಿದೆ. ಗುಟ್ಟನ್ನು ಇಟ್ಟುಕೊಳ್ಳುತ್ತಾನೆ. ಅವನು ಮೃದು, ದಾನಿ, ಮತ್ತು ವಿನಯಿ. ಸತ್ಯಪರಾಕ್ರಮಿ.

05052011a ಬಹುಶ್ರುತಃ ಕೃತಾತ್ಮಾ ಚ ವೃದ್ಧಸೇವೀ ಜಿತೇಂದ್ರಿಯಃ।
05052011c ತಂ ಸರ್ವಗುಣಸಂಪನ್ನಂ ಸಮಿದ್ಧಮಿವ ಪಾವಕಂ।।

ಅವನು ವಿದ್ಯಾವಂತ. ಕೃತಾತ್ಮ. ವೃದ್ಧಸೇವೀ ಮತ್ತು ಜಿತೇಂದ್ರಿಯ. ಚೆನ್ನಾಗಿ ಉರಿಸಿದ ಅಗ್ನಿಯಂತೆ ಅವನು ಸರ್ವಗುಣಸಂಪನ್ನ.

05052012a ತಪಂತಮಿವ ಕೋ ಮಂದಃ ಪತಿಷ್ಯತಿ ಪತಂಗವತ್।
05052012c ಪಾಂಡವಾಗ್ನಿಮನಾವಾರ್ಯಂ ಮುಮೂರ್ಷುರ್ಮೂಢಚೇತನಃ।।

ಯಾವ ಮೂಢನು ತಾನೇ ಪತಂಗದಂತೆ ಬೆಂಕಿಯಂತೆ ಉರಿಯತ್ತಿರುವವನಲ್ಲಿ ಹೋಗಿ ಬೀಳುತ್ತಾನೆ? ಪಾಂಡವಾಗ್ನಿಯನ್ನು ತಪ್ಪಿಸಿಕೊಳ್ಳದ ಮೂಢನು ಸಾಯುವುದು ಖಂಡಿತ.

05052013a ತನುರುಚ್ಚಃ ಶಿಖೀ ರಾಜಾ ಶುದ್ಧಜಾಂಬೂನದಪ್ರಭಃ।
05052013c ಮಂದಾನಾಂ ಮಮ ಪುತ್ರಾಣಾಂ ಯುದ್ಧೇನಾಂತಂ ಕರಿಷ್ಯತಿ।।

ಆ ರಾಜನು ಶುದ್ಧ ಬಂಗಾರದ ಪ್ರಭೆಯಿಂದ ಎತ್ತರವಾಗಿ ಉರಿಯುತ್ತಿರುವ ಶಿಖಿಯಂತೆ. ಅವನು ಯುದ್ಧದಲ್ಲಿ ನನ್ನ ಮಂದ ಮಕ್ಕಳನ್ನು ಅಂತ್ಯಗೊಳಿಸುತ್ತಾನೆ.

05052014a ತೈರಯುದ್ಧಂ ಸಾಧು ಮನ್ಯೇ ಕುರವಸ್ತನ್ನಿಬೋಧತ।
05052014c ಯುದ್ಧೇ ವಿನಾಶಃ ಕೃತ್ಸ್ನಸ್ಯ ಕುಲಸ್ಯ ಭವಿತಾ ಧ್ರುವಂ।।

ಕುರುಗಳೇ! ನನ್ನನ್ನು ಕೇಳಿ! ಯುದ್ಧವನ್ನು ಮಾಡದೇ ಇರುವುದೇ ಒಳ್ಳೆಯದು! ಯುದ್ಧವಾದರೆ ಕುಲದ ಸರ್ವನಾಶವು ನಡೆಯುವುದು ಸತ್ಯ.

05052015a ಏಷಾ ಮೇ ಪರಮಾ ಶಾಂತಿರ್ಯಯಾ ಶಾಮ್ಯತಿ ಮೇ ಮನಃ।
05052015c ಯದಿ ತ್ವಯುದ್ಧಮಿಷ್ಟಂ ವೋ ವಯಂ ಶಾಂತ್ಯೈ ಯತಾಮಹೇ।।

ಇಂದು ಶಾಂತಿಗಾಗಿ ನಾನು ಮಾಡುವ ಅಂತಿಮ ಯತ್ನ. ಇದು ನನ್ನ ಮನಸ್ಸನ್ನು ಶಮನಗೊಳಿಸುತ್ತದೆ. ಒಂದುವೇಳೆ ನಿಮಗೆ ಯುದ್ಧವು ಬೇಡವೆಂದಾದರೆ ಶಾಂತಿಗೆ ಪ್ರಯತ್ನಿಸೋಣ.

05052016a ನ ತು ನಃ ಶಿಕ್ಷಮಾಣಾನಾಮುಪೇಕ್ಷೇತ ಯುಧಿಷ್ಠಿರಃ।
05052016c ಜುಗುಪ್ಸತಿ ಹ್ಯಧರ್ಮೇಣ ಮಾಮೇವೋದ್ದಿಶ್ಯ ಕಾರಣಂ।।

ಶಾಂತಿಗಾಗಿ ಪ್ರಯತ್ನಿಸಿದರೆ ಯುಧಿಷ್ಠಿರನು ಉಪೇಕ್ಷಿಸುವುದಿಲ್ಲ. ಏಕೆಂದರೆ ಯಾವುದಕ್ಕೆ ನಾನೇ ಕಾರಣನೆಂದು ಅವನು ತಿಳಿದುಕೊಂಡಿದ್ದಾನೋ ಆ ಅಧರ್ಮದ ಕುರಿತು ಅವನಿಗೆ ಜಿಗುಪ್ಸೆಯಿದೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಧೃತರಾಷ್ಟ್ರವಾಕ್ಯೇ ದ್ವಿಪಂಚಾಶತ್ತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಧೃತರಾಷ್ಟ್ರವಾಕ್ಯದಲ್ಲಿ ಐವತ್ತೆರಡನೆಯ ಅಧ್ಯಾಯವು.