019 ಪುರೋಹಿತಸೈನ್ಯದರ್ಶನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಉದ್ಯೋಗ ಪರ್ವ

ಅಧ್ಯಾಯ 19

ಸಾರ

ಸಾತ್ಯಕಿ, ಚೇದಿಯ ಧೃಷ್ಟಕೇತು, ಮಾಗಧ ಜಯತ್ಸೇನ ಇವರ ಒಂದೊಂದು ಅಕ್ಷೋಹಿಣೀ ಸೇನೆಗಳು, ಪಾಂಡ್ಯರು, ಪಾಂಚಾಲರು, ಮತ್ತು ಮತ್ಸ್ಯರು ಒಟ್ಟು ಏಳು ಅಕ್ಷೋಹಿಣೀ ಸೇನೆಗಳು ಪಾಂಡವರನ್ನು ಸೇರಿದುದು (1-13). ಭಗದತ್ತ, ಭೂರಿಶ್ರವ, ಶಲ್ಯ, ಕೃತವರ್ಮ, ಜಯದ್ರಥ, ಕಾಂಬೋಜದ ಸುದಕ್ಷಿಣ, ಅವಂತಿಯ ಇಬ್ಬರು ಮಹೀಪಾಲರು, ಕೇಕಯ ಸಹೋದರರು ಒಂದೊಂದು ಅಕ್ಷೋಹಿಣಿಗಳನ್ನೂ ತಂದು, ಒಟ್ಟಾರೆ ಹನ್ನೊಂದು ಅಕ್ಷೋಹಿಣೀ ಸೇನೆಯು ದುರ್ಯೋಧನನಲ್ಲಿಗೆ ಬಂದು ಸೇರಿದುದು (14-32).

05019001 ವೈಶಂಪಾಯನ ಉವಾಚ।
05019001a ಯುಯುಧಾನಸ್ತತೋ ವೀರಃ ಸಾತ್ವತಾನಾಂ ಮಹಾರಥಃ।
05019001c ಮಹತಾ ಚತುರಂಗೇಣ ಬಲೇನಾಗಾದ್ಯುಧಿಷ್ಠಿರಂ।।

ವೈಶಂಪಾಯನನು ಹೇಳಿದನು: “ಆಗ ವೀರ ಸಾತ್ವತರ ಮಹಾರಥಿ ಯುಯುಧಾನನು ಮಹಾ ಚತುರಂಗ ಬಲದೊಂದಿಗೆ ಯುಧಿಷ್ಠಿರನಲ್ಲಿಗೆ ಬಂದನು.

05019002a ತಸ್ಯ ಯೋಧಾ ಮಹಾವೀರ್ಯಾ ನಾನಾದೇಶಸಮಾಗತಾಃ।
05019002c ನಾನಾಪ್ರಹರಣಾ ವೀರಾಃ ಶೋಭಯಾಂ ಚಕ್ರಿರೇ ಬಲಂ।।

ನಾನಾದೇಶಗಳಿಂದ ಬಂದು ಸೇರಿದ್ದ ಅವನ ಆ ಮಹಾವೀರ, ನಾನಾಪ್ರಹರಣಗಳಲ್ಲಿ ವೀರ ಯೋಧರು ಸೇನೆಗೆ ಶೋಭೆಯನ್ನು ತಂದರು.

05019003a ಪರಶ್ವಧೈರ್ಭಿಂಡಿಪಾಲೈಃ ಶಕ್ತಿತೋಮರಮುದ್ಗರೈಃ।
05019003c ಶಕ್ತ್ಯೃಷ್ಟಿಪರಶುಪ್ರಾಸೈಃ ಕರವಾಲೈಶ್ಚ ನಿರ್ಮಲೈಃ।।
05019004a ಖಡ್ಗಕಾರ್ಮುಕನಿರ್ಯೂಹೈಃ ಶರೈಶ್ಚ ವಿವಿಧೈರಪಿ।
05019004c ತೈಲಧೌತೈಃ ಪ್ರಕಾಶದ್ಭಿಸ್ತದಶೋಭತ ವೈ ಬಲಂ।।

ಆ ಬಲವು ಪರಶು, ಭಿಂಡಿಪಾಲ, ಶಕ್ತಿ, ತೋಮರ, ಮುದ್ಗರ, ಶಕ್ತಿ, ಮುಷ್ಟಿ, ಪರಶು, ಪ್ರಾಸ, ನಿರ್ಮಲ ಕರವಾಲ, ಖಡ್ಗ, ಕಾರ್ಮುಕ, ವಿವಿಧ ಶರಗಳು, ತೈಲಧೌತಗಳು, ಮತ್ತು ಪ್ರಕಾಶಗಳಿಂದ ಶೋಭಿಸಿತು.

05019005a ತಸ್ಯ ಮೇಘಪ್ರಕಾಶಸ್ಯ ಶಸ್ತ್ರೈಸ್ತೈಃ ಶೋಭಿತಸ್ಯ ಚ।
05019005c ಬಭೂವ ರೂಪಂ ಸೈನ್ಯಸ್ಯ ಮೇಘಸ್ಯೇವ ಸವಿದ್ಯುತಃ।।

ಶಸ್ತ್ರಸ್ತ್ರಗಳಿಂದ ಶೋಭಿಸುತ್ತಿದ್ದ ಮೇಘಭರಿತ ಆಕಾಶದ ಬಣ್ಣವನ್ನು ತಳೆದ ಅವನ ಸೇನೆಯು ಮಿಂಚಿನಿಂದ ಕೂಡಿದ ಮೇಘದಂತೆ ಕಂಡಿತು.

05019006a ಅಕ್ಷೌಹಿಣೀ ಹಿ ಸೇನಾ ಸಾ ತದಾ ಯೌಧಿಷ್ಠಿರಂ ಬಲಂ।
05019006c ಪ್ರವಿಶ್ಯಾಂತರ್ದಧೇ ರಾಜನ್ಸಾಗರಂ ಕುನದೀ ಯಥಾ।।

ಅವನ ಸೇನೆಯು ಒಂದು ಅಕ್ಷೌಹಿಣಿಯದಾಗಿತ್ತು. ಯುಧಿಷ್ಠಿರನ ಬಲವು ಅದನ್ನು ಪ್ರವೇಶಿಸಿದಾಗ ಸಾಗರವನ್ನು ಸೇರುವ ಸಣ್ಣ ನದಿಯಂತೆ ಕಾಣದಾಯಿತು.

05019007a ತಥೈವಾಕ್ಷೌಹಿಣೀಂ ಗೃಹ್ಯ ಚೇದೀನಾಮೃಷಭೋ ಬಲೀ।
05019007c ಧೃಷ್ಟಕೇತುರುಪಾಗಚ್ಚತ್ಪಾಂಡವಾನಮಿತೌಜಸಃ।।

ಹಾಗೆಯೇ ಚೇದಿಗಳ ರಾಜ ಬಲಶಾಲಿ ಧೃಷ್ಟಕೇತುವು ಅಕ್ಷೌಹಿಣೀ ಸೇನೆಯನ್ನು ತೆಗೆದುಕೊಂಡು ಅಮಿತೌಜಸ ಪಾಂಡವನಲ್ಲಿಗೆ ಆಗಮಿಸಿದನು.

05019008a ಮಾಗಧಶ್ಚ ಜಯತ್ಸೇನೋ ಜಾರಾಸಂಧಿರ್ಮಹಾಬಲಃ।
05019008c ಅಕ್ಷೌಹಿಣ್ಯೈವ ಸೈನ್ಯಸ್ಯ ಧರ್ಮರಾಜಮುಪಾಗಮತ್।।

ಜರಾಸಂಧನ ಮಗ ಮಹಾಬಲ ಮಾಗಧ ಜಯತ್ಸೇನನು ಅಕ್ಷೌಹಿಣೀ ಸೇನೆಯೊಂದಿಗೆ ಧರ್ಮರಾಜನಲ್ಲಿಗೆ ಬಂದನು.

05019009a ತಥೈವ ಪಾಂಡ್ಯೋ ರಾಜೇಂದ್ರ ಸಾಗರಾನೂಪವಾಸಿಭಿಃ।
05019009c ವೃತೋ ಬಹುವಿಧೈರ್ಯೋಧೈರ್ಯುಧಿಷ್ಠಿರಮುಪಾಗಮತ್।।

ಹಾಗೆಯೇ ಸಾಗರ ತೀರದಲ್ಲಿ ವಾಸಿಸುವ ರಾಜೇಂದ್ರ ಪಾಂಡ್ಯನು ಬಹುವಿಧದ ಯೋಧರಿಂದ ಆವೃತನಾಗಿ ಯುಧಿಷ್ಠಿರನ ಬಳಿ ಬಂದನು.

05019010a ತಸ್ಯ ಸೈನ್ಯಮತೀವಾಸೀತ್ತಸ್ಮಿನ್ಬಲಸಮಾಗಮೇ।
05019010c ಪ್ರೇಕ್ಷಣೀಯತರಂ ರಾಜನ್ಸುವೇಷಂ ಬಲವತ್ತದಾ।।

ರಾಜನ್! ಸೇನೆಗಳು ಸೇರಿ ಅವನ ಸೇನೆಯು ಸುಂದರವೂ, ಬಲಶಾಲಿಯೂ, ಪ್ರೇಕ್ಷಣೀಯವೂ ಆಗಿತ್ತು.

05019011a ದ್ರುಪದಸ್ಯಾಪ್ಯಭೂತ್ಸೇನಾ ನಾನಾದೇಶಸಮಾಗತೈಃ।
05019011c ಶೋಭಿತಾ ಪುರುಷೈಃ ಶೂರೈಃ ಪುತ್ರೈಶ್ಚಾಸ್ಯ ಮಹಾರಥೈಃ।।

ನಾನಾ ದೇಶಗಳಿಂದ ಬಂದು ಸೇರಿದ್ದ ದ್ರುಪದನ ಸೇನೆಯು ಶೂರ ಪುರುಷರಿಂದ ಮತ್ತು ಮಹಾರಥಿ ಪುತ್ರರಿಂದ ಶೋಭಿಸುತ್ತಿತ್ತು.

05019012a ತಥೈವ ರಾಜಾ ಮತ್ಸ್ಯಾನಾಂ ವಿರಾಟೋ ವಾಹಿನೀಪತಿಃ।
05019012c ಪಾರ್ವತೀಯೈರ್ಮಹೀಪಾಲೈಃ ಸಹಿತಃ ಪಾಂಡವಾನಿಯಾತ್।।

ಹಾಗೆಯೇ ವಾಹಿನೀಪತಿ ಮತ್ಸ್ಯರ ರಾಜ ವಿರಾಟನು ಪರ್ವತವಾಸೀ ಮಹೀಪಾಲರೊಂದಿಗೆ ಪಾಂಡವರಲ್ಲಿಗೆ ಬಂದನು.

05019013a ಇತಶ್ಚೇತಶ್ಚ ಪಾಂಡೂನಾಂ ಸಮಾಜಗ್ಮುರ್ಮಹಾತ್ಮನಾಂ।
05019013c ಅಕ್ಷೌಹಿಣ್ಯಸ್ತು ಸಪ್ತೈವ ವಿವಿಧಧ್ವಜಸಂಕುಲಾಃ।
05019013e ಯುಯುತ್ಸಮಾನಾಃ ಕುರುಭಿಃ ಪಾಂಡವಾನ್ಸಮಹರ್ಷಯನ್।।

ಮಹಾತ್ಮ ಪಾಂಡವರಲ್ಲಿಗೆ ಇವರು ಮತ್ತು ಇತರ ವಿವಿಧ ಧ್ವಜ ಸಂಕುಲಗಳ ಏಳು ಅಕ್ಷೌಹಿಣೀಗಳು ಬಂದು ಸೇರಿದವು. ಕುರುಗಳೊಂದಿಗೆ ಹೋರಾಡಲು ಉತ್ಸಾಹಿತರಾದ ಅವರು ಪಾಂಡವರನ್ನು ಸಂತೋಷಗೊಳಿಸಿದರು.

05019014a ತಥೈವ ಧಾರ್ತರಾಷ್ಟ್ರಸ್ಯ ಹರ್ಷಂ ಸಮಭಿವರ್ಧಯನ್।
05019014c ಭಗದತ್ತೋ ಮಹೀಪಾಲಃ ಸೇನಾಮಕ್ಷೌಹಿಣೀಂ ದದೌ।।

ಹಾಗೆಯೇ ಮಹೀಪಾಲ ಭಗದತ್ತನು ಒಂದು ಅಕ್ಷೌಹಿಣೀ ಸೇನೆಯನ್ನಿತ್ತು ಧಾರ್ತರಾಷ್ಟ್ರನ ಹರ್ಷವನ್ನು ಹೆಚ್ಚಿಸಿದನು.

05019015a ತಸ್ಯ ಚೀನೈಃ ಕಿರಾತೈಶ್ಚ ಕಾಂಚನೈರಿವ ಸಂವೃತಂ।
05019015c ಬಭೌ ಬಲಮನಾಧೃಷ್ಯಂ ಕರ್ಣಿಕಾರವನಂ ಯಥಾ।।

ಬಂಗಾರದಂತೆ ಹೊಳೆಯುತ್ತಿದ್ದ ಚೀನ-ಕಿರಾತರಿಂದ ಕೂಡಿದ್ದ ಅವನ ಸೇನೆಯು ಕರ್ಣಿಕಾರವನದಂತೆ ತೋರಿತು.

05019016a ತಥಾ ಭೂರಿಶ್ರವಾಃ ಶೂರಃ ಶಲ್ಯಶ್ಚ ಕುರುನಂದನ।
05019016c ದುರ್ಯೋಧನಮುಪಾಯಾತಾವಕ್ಷೌಹಿಣ್ಯಾ ಪೃಥಕ್ ಪೃಥಕ್।।

ಕುರುನಂದನ! ಹಾಗೆಯೇ ಭೂರಿಶ್ರವ ಮತ್ತು ಶೂರ ಶಲ್ಯರು ಪ್ರತ್ಯೇಕ ಪ್ರತ್ಯೇಕವಾಗಿ ಒಂದೊಂದು ಅಕ್ಷೌಹಿಣಿಯನ್ನು ದುರ್ಯೋಧನನಿಗೆ ನೀಡಿದರು.

05019017a ಕೃತವರ್ಮಾ ಚ ಹಾರ್ದಿಕ್ಯೋ ಭೋಜಾಂಧಕಬಲೈಃ ಸಹ।
05019017c ಅಕ್ಷೌಹಿಣ್ಯೈವ ಸೇನಾಯಾ ದುರ್ಯೋಧನಮುಪಾಗಮತ್।।

ಹಾರ್ದಿಕ್ಯ ಕೃತವರ್ಮನು ಭೋಜ-ಅಂಧಕರ ಸೇನೆಯೊಂದಿಗೆ ಒಂದು ಅಕ್ಷೌಹಿಣೀ ಸೇನೆಯೊಂದಿಗೆ ದುರ್ಯೋಧನನಲ್ಲಿಗೆ ಬಂದನು.

05019018a ತಸ್ಯ ತೈಃ ಪುರುಷವ್ಯಾಘ್ರೈರ್ವನಮಾಲಾಧರೈರ್ಬಲಂ।
05019018c ಅಶೋಭತ ಯಥಾ ಮತ್ತೈರ್ವನಂ ಪ್ರಕ್ರೀಡಿತೈರ್ಗಜೈಃ।।

ವನಮಾಲೆಗಳನ್ನು ಧರಿಸಿದ್ದ ಪುರುಷವ್ಯಾಘ್ರರಿಂದ ತುಂಬಿದ ಅವನ ಆ ಸೇನೆಯು ಮತ್ತ ಗಜಗಳು ಆಡುತ್ತಿರುವ ವನದಂತೆ ಶೋಭಿಸಿತು.

05019019a ಜಯದ್ರಥಮುಖಾಶ್ಚಾನ್ಯೇ ಸಿಂಧುಸೌವೀರವಾಸಿನಃ।
05019019c ಆಜಗ್ಮುಃ ಪೃಥಿವೀಪಾಲಾಃ ಕಂಪಯಂತ ಇವಾಚಲಾನ್।।

ಜಯದ್ರಥನ ಮುಂದಾಳುತ್ವದಲ್ಲಿ ಇತರ ಸಿಂಧು ಸೌವೀರ ವಾಸಿ ಪೃಥ್ವೀಪಾಲರು ಪರ್ವತಗಳನ್ನು ನಡುಗಿಸುವಂತೆ ಆಗಮಿಸಿದರು.

05019020a ತೇಷಾಮಕ್ಷೌಹಿಣೀ ಸೇನಾ ಬಹುಲಾ ವಿಬಭೌ ತದಾ।
05019020c ವಿಧೂಯಮಾನಾ ವಾತೇನ ಬಹುರೂಪಾ ಇವಾಂಬುದಾಃ।।

ಅವರ ಅಕ್ಷೌಹಿಣೀ ಸೇನೆಯು ಗಾಳಿಯಿಂದ ತೂರಿಸಿಕೊಂಡು ಬಂದ ಬಹುರೂಪದ ಮೋಡಗಳಂತೆ ತೋರಿತು.

05019021a ಸುದಕ್ಷಿಣಶ್ಚ ಕಾಂಬೋಜೋ ಯವನೈಶ್ಚ ಶಕೈಸ್ತಥಾ।
05019021c ಉಪಾಜಗಾಮ ಕೌರವ್ಯಮಕ್ಷೌಹಿಣ್ಯಾ ವಿಶಾಂ ಪತೇ।।

ವಿಶಾಂಪತೇ! ಕಾಂಬೋಜ ಸುದಕ್ಷಿಣ, ಯವನ ಮತ್ತು ಶಕರು ಅಕ್ಷೌಹಿಣಿಯೊಂದಿಗೆ ಕೌರವನಲ್ಲಿಗೆ ಬಂದರು.

05019022a ತಸ್ಯ ಸೇನಾಸಮಾವಾಹ್ಯ ಶಲಭಾನಾಮಿವಾಬಭೌ।
05019022c ಸ ಚ ಸಂಪ್ರಾಪ್ಯ ಕೌರವ್ಯಂ ತತ್ರೈವಾಂತರ್ದಧೇ ತದಾ।।

ಶಲಭಗಳ ಗುಂಪಿನಂತಿದ್ದ ಅವನ ಸೇನೆಯು ಕೌರವನ ಸೇನೆಯನ್ನು ಸೇರಿ ಅಲ್ಲಿಯೇ ಅಂತರ್ಧಾನವಾಯಿತು.

05019023a ತಥಾ ಮಾಹಿಷ್ಮತೀವಾಸೀ ನೀಲೋ ನೀಲಾಯುಧೈಃ ಸಹ।
05019023c ಮಹೀಪಾಲೋ ಮಹಾವೀರ್ಯೈರ್ದಕ್ಷಿಣಾಪಥವಾಸಿಭಿಃ।।
05019024a ಆವಂತ್ಯೌ ಚ ಮಹೀಪಾಲೌ ಮಹಾಬಲಸುಸಂವೃತೌ।
05019024c ಪೃಥಗಕ್ಷೌಹಿಣೀಭ್ಯಾಂ ತಾವಭಿಯಾತೌ ಸುಯೋಧನಂ।।

ಹಾಗೆಯೇ ಮಾಹಿಷ್ಮತೀ ವಾಸಿಗಳಾದ ನೀಲರು ನೀಲಾಯುಧಗಳೊಂದಿಗೆ, ದಕ್ಷಿಣಾಪಥವಾಸಿಗಳಾದ ಮಹಾವೀರ ಮಹೀಪಾಲರು, ಮಹಾಬಲ ಸಂವೃತರಾದ ಅವಂತಿಯ ಮಹೀಪಾಲರಿಬ್ಬರು ಪ್ರತ್ಯೇಕ ಅಕ್ಷೌಹಿಣೀಗಳೊಂದಿಗೆ ಸುಯೋಧನನಲ್ಲಿಗೆ ಆಗಮಿಸಿದರು.

05019025a ಕೇಕಯಾಶ್ಚ ನರವ್ಯಾಘ್ರಾಃ ಸೋದರ್ಯಾಃ ಪಂಚ ಪಾರ್ಥಿವಾಃ।
05019025c ಸಂಹರ್ಷಯಂತಃ ಕೌರವ್ಯಮಕ್ಷೌಹಿಣ್ಯಾ ಸಮಾದ್ರವನ್।।

ನರವ್ಯಾಘ್ರ ಪಾರ್ಥಿವ ಕೇಕಯ ಸಹೋದರರೈವರು ಅಕ್ಷೌಹಿಣಿಗಳಿಂದ ಕೌರವ್ಯನನ್ನು ಸಂತೋಷಗೊಳಿಸಿದರು.

05019026a ಇತಶ್ಚೇತಶ್ಚ ಸರ್ವೇಷಾಂ ಭೂಮಿಪಾನಾಂ ಮಹಾತ್ಮನಾಂ।
05019026c ತಿಸ್ರೋಽನ್ಯಾಃ ಸಮವರ್ತಂತ ವಾಹಿನ್ಯೋ ಭರತರ್ಷಭ।।

ಭರತರ್ಷಭ! ಇವರು ಮತ್ತು ಇತರ ಮಹಾತ್ಮ ಭೂಮಿಪರೆಲ್ಲರ ಮೂರು ಭಾಗಗಳ ವಾಹಿನಿಯೂ ಬಂದು ಸೇರಿತು.

05019027a ಏವಮೇಕಾದಶಾವೃತ್ತಾಃ ಸೇನಾ ದುರ್ಯೋಧನಸ್ಯ ತಾಃ।
05019027c ಯುಯುತ್ಸಮಾನಾಃ ಕೌಂತೇಯಾನ್ನಾನಾಧ್ವಜಸಮಾಕುಲಾಃ।।

ಹೀಗೆ ದುರ್ಯೋಧನನಲ್ಲಿ ಹನ್ನೊಂದು ಅಕ್ಷೌಹಿಣೀ ಸೇನೆಯು ಬಂದು ಸೇರಿತು. ನಾನಾಧ್ವಜ ಸಮಾಕುಲರಾದ ಅವರು ಕೌಂತೇಯರೊಡನೆ ಯುದ್ಧಮಾಡಲು ಉತ್ಸುಕರಾಗಿದ್ದರು.

05019028a ನ ಹಾಸ್ತಿನಪುರೇ ರಾಜನ್ನವಕಾಶೋಽಭವತ್ತದಾ।
05019028c ರಾಜ್ಞಾಂ ಸಬಲಮುಖ್ಯಾನಾಂ ಪ್ರಾಧಾನ್ಯೇನಾಪಿ ಭಾರತ।।

ಭಾರತ! ರಾಜನ್! ಹಸ್ತಿನಾಪುರದಲ್ಲಿ ರಾಜನ ಸಬಲಮುಖ್ಯರಿಗೆ ಮತ್ತು ಪ್ರಧಾನರಿಗೆ ಕೂಡ ಸ್ಥಳವಿಲ್ಲದಂತಾಯಿತು.

05019029a ತತಃ ಪಂಚನದಂ ಚೈವ ಕೃತ್ಸ್ನಂ ಚ ಕುರುಜಾಂಗಲಂ।
05019029c ತಥಾ ರೋಹಿತಕಾರಣ್ಯಂ ಮರುಭೂಮಿಶ್ಚ ಕೇವಲಾ।।
05019030a ಅಹಿಚ್ಚತ್ರಂ ಕಾಲಕೂಟಂ ಗಂಗಾಕೂಲಂ ಚ ಭಾರತ।
05019030c ವಾರಣಾ ವಾಟಧಾನಂ ಚ ಯಾಮುನಶ್ಚೈವ ಪರ್ವತಃ।।
05019031a ಏಷ ದೇಶಃ ಸುವಿಸ್ತೀರ್ಣಃ ಪ್ರಭೂತಧನಧಾನ್ಯವಾನ್।
05019031c ಬಭೂವ ಕೌರವೇಯಾಣಾಂ ಬಲೇನ ಸುಸಮಾಕುಲಃ।।

ಭಾರತ! ಆಗ ಐದುನದಿಗಳ ಮತ್ತು ಕುರುಜಾಂಗಲವೆಲ್ಲವೂ, ಹಾಗೆಯೇ ಸಮಭೂಮಿಯ ರೋಹಿತಾರಣ್ಯವೂ, ಅಹಿಚ್ಛತ್ರ, ಕಾಲಕೂಟ, ಗಂಗಾಕೂಲ, ವಾರಣ, ವಾಟಧಾನ, ಯಮುನಾ ಪರ್ವತವೂ, ಧನಧಾನ್ಯಗಳಿಂದ ಸಮೃದ್ಧವಾದ ಈ ಎಲ್ಲ ಸುವಿಸ್ತೀರ್ಣ ಪ್ರದೇಶಗಳೂ ಕೌರವ ಸೇನೆಯ ಸಮಾಕುಲದಿಂದ ತುಂಬಿಹೋದವು.

05019032a ತತ್ರ ಸೈನ್ಯಂ ತಥಾಯುಕ್ತಂ ದದರ್ಶ ಸ ಪುರೋಹಿತಃ।
05019032c ಯಃ ಸ ಪಾಂಚಾಲರಾಜೇನ ಪ್ರೇಷಿತಃ ಕೌರವಾನ್ಪ್ರತಿ।।

ಯಥಾಯುಕ್ತವಾಗಿ ಕೌರವರ ಕಡೆ ಪಾಂಚಾಲರಾಜನಿಂದ ಕಳುಹಿಸಲ್ಪಟ್ಟಿದ್ದ ಪುರೋಹಿತನು ಆ ಸೇನೆಯನ್ನು ನೋಡಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಉದ್ಯೋಗ ಪರ್ವಣಿ ಪುರೋಹಿತಸೈನ್ಯದರ್ಶನೇ ಏಕೋನವಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಉದ್ಯೋಗ ಪರ್ವದಲ್ಲಿ ಪುರೋಹಿತಸೈನ್ಯದರ್ಶನದಲ್ಲಿ ಹತ್ತೊಂಭತ್ತನೆಯ ಅಧ್ಯಾಯವು.