055 ಉತ್ತರಗೋಗ್ರಹೇ ಕರ್ಣಾಪಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ಗೋಹರಣ ಪರ್ವ

ಅಧ್ಯಾಯ 55

ಸಾರ

ರಣರಂಗದಲ್ಲಿ ಎದುರಾದ ಕರ್ಣಾರ್ಜುನರ ಸಂವಾದ (1-14). ಅರ್ಜುನನ ಬಾಣದ ಹೊಡೆತದ ವೇದನೆಯನ್ನು ತಡೆಯಲಾರದೇ ಕರ್ಣನು ರಣದಿಂದ ಓಡಿ ಹೋದುದು (15-25).

04055001 ಅರ್ಜುನ ಉವಾಚ।
04055001a ಕರ್ಣ ಯತ್ತೇ ಸಭಾಮಧ್ಯೇ ಬಹು ವಾಚಾ ವಿಕತ್ಥಿತಂ।
04055001c ನ ಮೇ ಯುಧಿ ಸಮೋಽಸ್ತೀತಿ ತದಿದಂ ಪ್ರತ್ಯುಪಸ್ಥಿತಂ।।

ಅರ್ಜುನನು ಹೇಳಿದನು: “ಕರ್ಣ! ಯುದ್ಧದಲ್ಲಿ ನನಗೆ ಸರಿಸಮಾನರಿಲ್ಲ ಎಂದು ನೀನು ಸಭೆಯ ನಡುವೆ ಬಹಳ ಮಾತುಗಳಿಂದ ಜಂಬ ಕೊಚ್ಚಿದೆಯಲ್ಲ! ಆ ಕಾಲವು ಇದೋ ಬಂದಿದೆ!

04055002a ಅವೋಚಃ ಪರುಷಾ ವಾಚೋ ಧರ್ಮಮುತ್ಸೃಜ್ಯ ಕೇವಲಂ।
04055002c ಇದಂ ತು ದುಷ್ಕರಂ ಮನ್ಯೇ ಯದಿದಂ ತೇ ಚಿಕೀರ್ಷಿತಂ।।

ನೀನು ಧರ್ಮವನ್ನು ಸಂಪೂರ್ಣವಾಗಿ ತೊರೆದು ಕಠಿಣ ಮಾತುಗಳನ್ನಾಡಿದೆ. ನೀನು ಮಾಡಬಯಸುತ್ತಿರುವ ಈ ಕಾರ್ಯವು ನಿನಗೆ ದುಷ್ಕರವೆಂದು ಭಾವಿಸುತ್ತೇನೆ.

04055003a ಯತ್ತ್ವಯಾ ಕಥಿತಂ ಪೂರ್ವಂ ಮಾಮನಾಸಾದ್ಯ ಕಿಂ ಚನ।
04055003c ತದದ್ಯ ಕುರು ರಾಧೇಯ ಕುರುಮಧ್ಯೇ ಮಯಾ ಸಹ।।

ಕರ್ಣ! ನನ್ನನ್ನು ಎದುರಿಸುವ ಮುನ್ನವೇ ಕೌರವರ ನಡುವೆ ನೀನು ಏನೋ ಆಡಿದ್ದೆಯಲ್ಲ. ಅದನ್ನೀಗ ನನ್ನೊಡನೆ ಮಾಡಿ ತೋರಿಸು!

04055004a ಯತ್ಸಭಾಯಾಂ ಸ್ಮ ಪಾಂಚಾಲೀಂ ಕ್ಲಿಶ್ಯಮಾನಾಂ ದುರಾತ್ಮಭಿಃ।
04055004c ದೃಷ್ಟವಾನಸಿ ತಸ್ಯಾದ್ಯ ಫಲಮಾಪ್ನುಹಿ ಕೇವಲಂ।।

ಸಭೆಯಲ್ಲಿ ದ್ರೌಪದಿಯು ದುರಾತ್ಮರಿಂದ ಕ್ಲೇಶಗೊಂಡಿದುದನ್ನು ನೀನು ನೋಡಿದೆ. ಅದರ ಫಲವನ್ನೀಗ ಸಂಪೂರ್ಣವಾಗಿ ಅನುಭವಿಸು.

04055005a ಧರ್ಮಪಾಶನಿಬದ್ಧೇನ ಯನ್ಮಯಾ ಮರ್ಷಿತಂ ಪುರಾ।
04055005c ತಸ್ಯ ರಾಧೇಯ ಕೋಪಸ್ಯ ವಿಜಯಂ ಪಶ್ಯ ಮೇ ಮೃಧೇ।।

ಕರ್ಣ! ಹಿಂದೆ ನಾನು ಧರ್ಮಪಾಶಕ್ಕೆ ಕಟ್ಟುಬಿದ್ದು ಸಹಿಸಿಕೊಂಡ ಕೋಪದ ಗೆಲುವನ್ನು ಈಗ ಯುದ್ಧದಲ್ಲಿ ನೋಡು.

04055006a ಏಹಿ ಕರ್ಣ ಮಯಾ ಸಾರ್ಧಂ ಪ್ರತಿಪದ್ಯಸ್ವ ಸಂಗರಂ।
04055006c ಪ್ರೇಕ್ಷಕಾಃ ಕುರವಃ ಸರ್ವೇ ಭವಂತು ಸಹಸೈನಿಕಾಃ।।

ಬಾ ಕರ್ಣ! ನನ್ನೊಡನೆ ಯುದ್ಧಮಾಡಲು ಒಪ್ಪಿಕೋ! ಕೌರವರೆಲ್ಲರೂ ಸೈನಿಕರ ಸಹಿತ ಪ್ರೇಕ್ಷಕರಾಗಲಿ.”

04055007 ಕರ್ಣ ಉವಾಚ।
04055007a ಬ್ರವೀಷಿ ವಾಚಾ ಯತ್ಪಾರ್ಥ ಕರ್ಮಣಾ ತತ್ಸಮಾಚರ।
04055007c ಅತಿಶೇತೇ ಹಿ ವೈ ವಾಚಂ ಕರ್ಮೇತಿ ಪ್ರಥಿತಂ ಭುವಿ।।

ಕರ್ಣನು ಹೇಳಿದನು: “ಪಾರ್ಥ! ಮಾತಿನಲ್ಲಿ ಆಡಿದುದನ್ನು ಕಾರ್ಯದಲ್ಲಿ ಮಾಡಿತೋರು. ಕಾರ್ಯವು ಮಾತಿಗಿಂತ ಮಿಗಿಲಾಗಿದುದೆಂದು ಲೋಕಪ್ರಸಿದ್ಧವಾಗಿದೆ.

04055008a ಯತ್ತ್ವಯಾ ಮರ್ಷಿತಂ ಪೂರ್ವಂ ತದಶಕ್ತೇನ ಮರ್ಷಿತಂ।
04055008c ಇತಿ ಗೃಹ್ಣಾಮಿ ತತ್ಪಾರ್ಥ ತವ ದೃಷ್ಟ್ವಾಪರಾಕ್ರಮಂ।।

ಪಾರ್ಥ! ನಿನ್ನ ಹೇಡಿತನವನ್ನು ನೋಡಿ ಹಿಂದೆ ನೀನು ಕೋಪವನ್ನು ಸಹಿಸಿಕೊಂಡಿದ್ದುದು ಅಶಕ್ತಿಯಿಂದ ಎಂದು ನನಗನ್ನಿಸುತ್ತದೆ.

04055009a ಧರ್ಮಪಾಶನಿಬದ್ಧೇನ ಯದಿ ತೇ ಮರ್ಷಿತಂ ಪುರಾ।
04055009c ತಥೈವ ಬದ್ಧಮಾತ್ಮಾನಮಬದ್ಧಮಿವ ಮನ್ಯಸೇ।।

ಧರ್ಮಪಾಶಕ್ಕೆ ಬದ್ಧನಾಗಿ ಹಿಂದೆ ನೀನು ಕೋಪವನ್ನು ಸಹಿಸಿಕೊಂಡಿದ್ದೆಯಾದರೆ ಈಗಲೂ ನೀನು ಅದೇರೀತಿ ಬದ್ಧನಾಗಿದ್ದೀಯೆ. ಆದರೆ ನೀನು ಸ್ವತಂತ್ರನೆಂದು ಭಾವಿಸಿದ್ದೀಯೆ.

04055010a ಯದಿ ತಾವದ್ವನೇ ವಾಸೋ ಯಥೋಕ್ತಶ್ಚರಿತಸ್ತ್ವಯಾ।
04055010c ತತ್ತ್ವಂ ಧರ್ಮಾರ್ಥವಿತ್ಕ್ಲಿಷ್ಟಃ ಸಮಯಂ ಭೇತ್ತುಮಿಚ್ಛಸಿ।।

ನೀನು ಹೇಳಿದಂತೆ ವನದಲ್ಲಿ ವಾಸಮಾಡಿದ್ದ ಪಕ್ಷದಲ್ಲಿ, ಧರ್ಮಾರ್ಥವಿದ ಕ್ಲೇಶಪೀಡಿತ ನೀನು ಹೇಗೆತಾನೆ ಪ್ರತಿಜ್ಞೆಯನ್ನು ಮುರಿಯಬಯಸುವೆ?

04055011a ಯದಿ ಶಕ್ರಃ ಸ್ವಯಂ ಪಾರ್ಥ ಯುಧ್ಯತೇ ತವ ಕಾರಣಾತ್।
04055011c ತಥಾಪಿ ನ ವ್ಯಥಾ ಕಾ ಚಿನ್ಮಮ ಸ್ಯಾದ್ವಿಕ್ರಮಿಷ್ಯತಃ।।

ಪಾರ್ಥ! ಸ್ವಯಂ ದೇವೇಂದ್ರನೇ ನಿನಗಾಗಿ ಯುದ್ಧಮಾಡಿದರೂ ಗೆಲ್ಲಲಿರುವ ನನಗೆ ಸ್ವಲ್ಪವೂ ವ್ಯಥೆಯಿಲ್ಲ.

04055012a ಅಯಂ ಕೌಂತೇಯ ಕಾಮಸ್ತೇ ನಚಿರಾತ್ಸಮುಪಸ್ಥಿತಃ।
04055012c ಯೋತ್ಸ್ಯಸೇ ತ್ವಂ ಮಯಾ ಸಾರ್ಧಮದ್ಯ ದ್ರಕ್ಷ್ಯಸಿ ಮೇ ಬಲಂ।।

ಅರ್ಜುನ! ನಿನ್ನ ಈ ಬಯಕೆ ಶೀಘ್ರದಲ್ಲಿ ಈಡೇರಲಿ. ನೀನೀಗ ನನ್ನೊಡನೆ ಹೋರಾಡುತ್ತೀಯೆ ಮತ್ತು ನನ್ನ ಬಲವನ್ನು ನೋಡುತ್ತೀಯೆ.”

04055013 ಅರ್ಜುನ ಉವಾಚ।
04055013a ಇದಾನೀಮೇವ ತಾವತ್ತ್ವಮಪಯಾತೋ ರಣಾನ್ಮಮ।
04055013c ತೇನ ಜೀವಸಿ ರಾಧೇಯ ನಿಹತಸ್ತ್ವನುಜಸ್ತವ।।

ಅರ್ಜುನನು ಹೇಳಿದನು: “ರಾಧೇಯ! ಈಗತಾನೇ ನೀನು ನನ್ನೊಡನೆ ಹೋರಾಡುತ್ತಿದ್ದು ಯುದ್ಧದಿಂದ ಓಡಿಹೋಗಿದ್ದೆ. ಆದ್ದರಿಂದಲೇ ನೀನು ಇನ್ನೂ ಬದುಕಿದ್ದೀಯೆ. ನಿನ್ನ ತಮ್ಮನಾದರೋ ಹತನಾದನು.

04055014a ಭ್ರಾತರಂ ಘಾತಯಿತ್ವಾ ಚ ತ್ಯಕ್ತ್ವಾ ರಣಶಿರಶ್ಚ ಕಃ।
04055014c ತ್ವದನ್ಯಃ ಪುರುಷಃ ಸತ್ಸು ಬ್ರೂಯಾದೇವಂ ವ್ಯವಸ್ಥಿತಃ।।

ನೀನಲ್ಲದೆ ಮತ್ತ್ಯಾರು ತಾನೇ ತನ್ನ ತಮ್ಮನನ್ನು ಕೊಲ್ಲಿಸಿ ರಣರಂಗವನ್ನು ಬಿಟ್ಟು ಓಡಿಹೋಗಿ ನಂತರ ಸತ್ಪುರುಷರ ನಡುವೆ ನಿಂತು ಹೀಗೆ ಮಾತನಾಡಿಯಾನು?””

04055015 ವೈಶಂಪಾಯನ ಉವಾಚ।
04055015a ಇತಿ ಕರ್ಣಂ ಬ್ರುವನ್ನೇವ ಬೀಭತ್ಸುರಪರಾಜಿತಃ।
04055015c ಅಭ್ಯಯಾದ್ವಿಸೃಜನ್ಬಾಣಾನ್ಕಾಯಾವರಣಭೇದಿನಃ।।

ವೈಶಂಪಾಯನನು ಹೇಳಿದನು: “ಸೋಲಿಲ್ಲದ ಅರ್ಜುನನು ಕರ್ಣನಿಗೆ ಹೀಗೆ ನುಡಿಯುತ್ತಲೇ, ಕವಚವನ್ನು ಭೇದಿಸುವಂತ ಬಾಣಗಳನ್ನು ಬಿಡುತ್ತಾ ಮುನ್ನುಗ್ಗಿದನು.

04055016a ಪ್ರತಿಜಗ್ರಾಹ ತಾನ್ಕರ್ಣಃ ಶರಾನಗ್ನಿಶಿಖೋಪಮಾನ್।
04055016c ಶರವರ್ಷೇಣ ಮಹತಾ ವರ್ಷಮಾಣ ಇವಾಂಬುದಃ।।

ಅಗ್ನಿಜ್ವಾಲೆಗಳಂತಹ ಆ ಬಾಣಗಳನ್ನು ಕರ್ಣನು ಮಳೆಗರೆಯುವ ಮೋಡಗಳಂತಿದ್ದ ದೊಡ್ಡ ಶರವರ್ಷದಿಂದ ಎದುರಿಸಿದನು.

04055017a ಉತ್ಪೇತುಃ ಶರಜಾಲಾನಿ ಘೋರರೂಪಾಣಿ ಸರ್ವಶಃ।
04055017c ಅವಿಧ್ಯದಶ್ವಾನ್ಬಾಹ್ವೋಶ್ಚ ಹಸ್ತಾವಾಪಂ ಪೃಥಕ್ ಪೃಥಕ್।।

ಘೋರರೂಪಿ ಬಾಣಸಮೂಹಗಳು ಎಲ್ಲೆಡೆಯಲ್ಲಿಯೂ ಬಿದ್ದು, ಕುದುರೆಗಳನ್ನೂ, ತೋಳುಗಳನ್ನೂ, ಕೈಗವಸುಗಳನ್ನೂ ಬೇರೆಬೇರೆಯಾಗಿ ಭೇದಿಸಿದವು.

04055018a ಸೋಽಮೃಷ್ಯಮಾಣಃ ಕರ್ಣಸ್ಯ ನಿಷಂಗಸ್ಯಾವಲಂಬನಂ।
04055018c ಚಿಚ್ಛೇದ ನಿಶಿತಾಗ್ರೇಣ ಶರೇಣ ನತಪರ್ವಣಾ।।

ಸಹಿಸಲಾರದ ಅರ್ಜುನನು ಹರಿತ ತುದಿಯುಳ್ಳ ಮತ್ತು ನೇರ್ಪಡಿಸಿದ ಗಿಣ್ಣುಗಳ ಬಾಣದಿಂದ ಕರ್ಣನ ಬತ್ತಳಿಕೆಯ ದಾರವನ್ನು ಕತ್ತರಿಸಿದನು.

04055019a ಉಪಾಸಂಗಾದುಪಾದಾಯ ಕರ್ಣೋ ಬಾಣಾನಥಾಪರಾನ್।
04055019c ವಿವ್ಯಾಧ ಪಾಂಡವಂ ಹಸ್ತೇ ತಸ್ಯ ಮುಷ್ಟಿರಶೀರ್ಯತ।।

ಆಗ ಕರ್ಣನು ಬತ್ತಳಿಕೆಯಿಂದ ಬೇರೆ ಬಾಣಗಳನ್ನು ತೆಗೆದುಕೊಂಡು ಅರ್ಜುನನ ಕೈಗೆ ಹೊಡೆದನು. ಅರ್ಜುನನ ಮುಷ್ಟಿ ಸಡಿಲವಾಯಿತು.

04055020a ತತಃ ಪಾರ್ಥೋ ಮಹಾಬಾಹುಃ ಕರ್ಣಸ್ಯ ಧನುರಚ್ಛಿನತ್।
04055020c ಸ ಶಕ್ತಿಂ ಪ್ರಾಹಿಣೋತ್ತಸ್ಮೈ ತಾಂ ಪಾರ್ಥೋ ವ್ಯಧಮಚ್ಚರೈಃ।।

ಬಳಿಕ ಮಹಾಬಾಹು ಪಾರ್ಥನು ಕರ್ಣನ ಬಿಲ್ಲನ್ನು ತುಂಡರಿಸಿದನು. ಅವನು ಶಕ್ತ್ಯಾಯುಧವನ್ನು ಪ್ರಯೋಗಿಸಲು, ಪಾರ್ಥನು ಅದನ್ನು ಬಾಣಗಳಿಂದ ಕತ್ತರಿಸಿದನು.

04055021a ತತೋಽಭಿಪೇತುರ್ಬಹವೋ ರಾಧೇಯಸ್ಯ ಪದಾನುಗಾಃ।
04055021c ತಾಂಶ್ಚ ಗಾಂಡೀವನಿರ್ಮುಕ್ತೈಃ ಪ್ರಾಹಿಣೋದ್ಯಮಸಾದನಂ।।

ಅನಂತರ ಕರ್ಣನ ಬಹುಮಂದಿ ಅನುಚರರು ಅವನ ಮೇಲೇರಿ ಬಂದರು. ಅವನು ಅವರನ್ನು ಗಾಂಡೀವದಿಂದ ಬಿಟ್ಟ ಬಾಣಗಳಿಂದ ಯಮಸದನಕ್ಕೆ ಅಟ್ಟಿದನು.

04055022a ತತೋಽಸ್ಯಾಶ್ವಾಂ ಶರೈಸ್ತೀಕ್ಷ್ಣೈರ್ಬೀಭತ್ಸುರ್ಭಾರಸಾಧನೈಃ।
04055022c ಆಕರ್ಣಮುಕ್ತೈರಭ್ಯಘ್ನಂಸ್ತೇ ಹತಾಃ ಪ್ರಾಪತನ್ ಭುವಿ।।

ಆಗ ಅರ್ಜುನನು ತೀಕ್ಷ್ಣ ಪರಿಣಾಮಕಾರಿ ಬಾಣಗಳನ್ನು ಕಿವಿಯವರೆಗೂ ಎಳೆದು ಬಿಟ್ಟು ಕರ್ಣನ ಕುದುರೆಗಳಿಗೆ ಹೊಡೆಯಲು, ಅವು ಹತವಾಗಿ ನೆಲದಮೇಲೆ ಬಿದ್ದವು.

04055023a ಅಥಾಪರೇಣ ಬಾಣೇನ ಜ್ವಲಿತೇನ ಮಹಾಭುಜಃ।
04055023c ವಿವ್ಯಾಧ ಕರ್ಣಂ ಕೌಂತೇಯಸ್ತೀಕ್ಷ್ಣೇನೋರಸಿ ವೀರ್ಯವಾನ್।।

ಆಗ ವೀರ್ಯಶಾಲಿ ಮಹಾಭುಜ ಅರ್ಜುನನು ಜ್ವಲಿಸುವ ಮತ್ತೊಂದು ತೀಕ್ಷ್ಣ ಬಾಣದಿಂದ ಕರ್ಣನ ಎದೆಗೆ ಹೊಡೆದನು.

04055024a ತಸ್ಯ ಭಿತ್ತ್ವಾ ತನುತ್ರಾಣಂ ಕಾಯಮಭ್ಯಪತಚ್ಚರಃ।
04055024c ತತಃ ಸ ತಮಸಾವಿಷ್ಟೋ ನ ಸ್ಮ ಕಿಂ ಚಿತ್ಪ್ರಜಜ್ಞಿವಾನ್।।

ಆ ಬಾಣವು ಅವನ ಕವಚವನ್ನು ಭೇದಿಸಿ ಶರೀರವನ್ನು ಹೊಕ್ಕಿತು. ಆಗ ಕತ್ತಲೆ ಕವಿದ ಅವನಿಗೆ ಏನೊಂದೂ ತಿಳಿಯದಾಯಿತು.

04055025a ಸ ಗಾಢವೇದನೋ ಹಿತ್ವಾ ರಣಂ ಪ್ರಾಯಾದುದಮ್ಮುಖಃ।
04055025c ತತೋಽರ್ಜುನ ಉಪಾಕ್ರೋಶದುತ್ತರಶ್ಚ ಮಹಾರಥಃ।।

ಗಾಢವೇದನೆಯಿಂದ ಅವನು ಯುದ್ಧವನ್ನು ತ್ಯಜಿಸಿ ಉತ್ತರಕ್ಕೆ ಓಡಿಹೋದನು. ಆಗ ಮಹಾರಥ ಅರ್ಜುನನೂ ಉತ್ತರನೂ ಧಿಕ್ಕಾರಹಾಕಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಕರ್ಣಾಪಯಾನೇ ಪಂಚಪಂಚಾಶತ್ತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಕರ್ಣಾಪಯಾನದಲ್ಲಿ ಐವತ್ತೈದನೆಯ ಅಧ್ಯಾಯವು.