ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ಗೋಹರಣ ಪರ್ವ
ಅಧ್ಯಾಯ 36
ಸಾರ
ಉತ್ತರನು ಕೌರವಸೇನೆಯನ್ನು ನೋಡಿದುದು (1-8). ಯುದ್ಧ ಮಾಡಲು ಹೆದರಿ, ಬೃಹನ್ನಡೆಯು ತಡೆದರೂ, ಉತ್ತರನು ರಥದಿಂದಿಳಿದು ಪಲಾಯನ ಮಾಡಿದುದು (9-25). ರಾಜಕುಮಾರನನ್ನು ಬೆನ್ನಟ್ಟಿ ಹೋಗುತ್ತಿದ್ದ ಬೃಹನ್ನಡೆಯನ್ನು ನೋಡಿ ಅವನು ವೇಷಮರೆಸಿಕೊಂಡಿರುವ ಅರ್ಜುನನಿರಬಹುದೇ ಎಂದು ಕೌರವ ಸೇನೆಯು ಶಂಕಿಸುವುದು (26-36). ಓಡಿಹೋಗುತ್ತಿದ್ದ ಉತ್ತರನನ್ನು ಹಿಡಿದು ರಥದ ಬಳಿ ಎಳೆತಂದು ಅರ್ಜುನನು ಅವನಿಗೆ ತನ್ನ ಸಾರಥಿಯಾಗೆಂದೂ ತಾನು ಯುದ್ಧಮಾಡಿ ಗೋವುಗಳನ್ನು ಬಿಡಿಸಿಕೊಡುತ್ತೇನೆಂದೂ ಹೇಳಿ, ಉತ್ತರನನ್ನು ಸಾರಥಿಯನ್ನಾಗಿ ನಿಯೋಜಿಸುವುದು (37-47).
04036001 ವೈಶಂಪಾಯನ ಉವಾಚ।
04036001a ಸ ರಾಜಧಾನ್ಯಾ ನಿರ್ಯಾಯ ವೈರಾಟಿಃ ಪೃಥಿವೀಂಜಯಃ।
04036001c ಪ್ರಯಾಹೀತ್ಯಬ್ರವೀತ್ಸೂತಂ ಯತ್ರ ತೇ ಕುರವೋ ಗತಾಃ।।
ವೈಶಂಪಾಯನನು ಹೇಳಿದನು: “ಆ ವಿರಾಟಪುತ್ರ ಭೂಮಿಂಜಯನು ರಾಜಧಾನಿಯಿಂದ ಹೊರಟು, “ಕೌರವರು ಹೋಗಿರುವ ಕಡೆ ನಡೆ!” ಎಂದು ಸೂತನಿಗೆ ಹೇಳಿದನು.
04036002a ಸಮವೇತಾನ್ಕುರೂನ್ಯಾವಜ್ಜಿಗೀಷೂನವಜಿತ್ಯ ವೈ।
04036002c ಗಾಶ್ಚೈಷಾಂ ಕ್ಷಿಪ್ರಮಾದಾಯ ಪುನರಾಯಾಮಿ ಸ್ವಂ ಪುರಂ।।
“ಜಯಾಕಾಂಕ್ಷೆಯಿಂದ ನೆರೆದಿರುವ ಕೌರವರನ್ನು ಗೆದ್ದು ಗೋವುಗಳನ್ನು ತೆಗೆದುಕೊಂಡು ಬೇಗನೆ ಪಟ್ಟಣಕ್ಕೆ ಹಿಂದಿರುಗುತ್ತೇನೆ.”
04036003a ತತಸ್ತಾಂಶ್ಚೋದಯಾಮಾಸ ಸದಶ್ವಾನ್ಪಾಂಡುನಂದನಃ।
04036003c ತೇ ಹಯಾ ನರಸಿಂಹೇನ ಚೋದಿತಾ ವಾತರಂಹಸಃ।
04036003e ಆಲಿಖಂತ ಇವಾಕಾಶಮೂಹುಃ ಕಾಂಚನಮಾಲಿನಃ।।
ಬಳಿಕ ಅರ್ಜುನನು ಆ ಉತ್ತಮ ಕುದುರೆಗಳನ್ನು ಪ್ರಚೋದಿಸಿದನು. ಕಾಂಚನಮಾಲೆಗಳನ್ನು ಧರಿಸಿದ್ದ ವಾಯುವೇಗದ ಕುದುರೆಗಳು ಆ ನರಶ್ರೇಷ್ಠನಿಂದ ಪ್ರಚೋದಿತಗೊಂಡು ಆಕಾಶವನ್ನು ತೀಡುತ್ತಾ ಅವರನ್ನು ಹೊತ್ತೊಯ್ದವು.
04036004a ನಾತಿದೂರಮಥೋ ಯಾತ್ವಾ ಮತ್ಸ್ಯಪುತ್ರಧನಂಜಯೌ।
04036004c ಅವೇಕ್ಷೇತಾಮಮಿತ್ರಘ್ನೌ ಕುರೂಣಾಂ ಬಲಿನಾಂ ಬಲಂ।
04036004e ಶ್ಮಶಾನಮಭಿತೋ ಗತ್ವಾ ಆಸಸಾದ ಕುರೂನಥ।।
ಅನಂತರ ಶತ್ರುನಾಶಕರಾದ ಉತ್ತರ-ಧನಂಜಯರು ಸ್ವಲ್ಪ ದೂರ ಹೋಗಿ ಬಲಶಾಲಿ ಕುರುಸೇನೆಯನ್ನು ಕಂಡರು. ಆಮೇಲೆ, ಶ್ಮಶಾನಾಭಿಮುಖವಾಗಿ ಸಾಗಿ ಕುರುಗಳನ್ನು ಸಮೀಪಿಸಿದರು.
04036005a ತದನೀಕಂ ಮಹತ್ತೇಷಾಂ ವಿಬಭೌ ಸಾಗರಸ್ವನಂ।
04036005c ಸರ್ಪಮಾಣಮಿವಾಕಾಶೇ ವನಂ ಬಹುಲಪಾದಪಂ।।
ಸಾಗರ ಘೋಷವುಳ್ಳ ಅವರ ಆ ಮಹಾಸೇನೆಯು ಆಕಾಶದಲ್ಲಿ ಚಲಿಸುವ ವೃಕ್ಷಸಮೃದ್ಧ ವನದಂತೆ ಶೋಭಿಸುತ್ತಿತ್ತು.
04036006a ದದೃಶೇ ಪಾರ್ಥಿವೋ ರೇಣುರ್ಜನಿತಸ್ತೇನ ಸರ್ಪತಾ।
04036006c ದೃಷ್ಟಿಪ್ರಣಾಶೋ ಭೂತಾನಾಂ ದಿವಸ್ಪೃಂ ನರಸತ್ತಮ।।
ನರಶ್ರೇಷ್ಠ! ಅದರ ಚಲನೆಯಿಂದುಂಟಾದ ನೆಲದ ಧೂಳು ಪ್ರಾಣಿಗಳ ಕಣ್ಣನ್ನು ಕುರುಡು ಮಾಡಿ ಮೇಲೆದ್ದು ಆಕಾಶವನ್ನು ಮುಟ್ಟುವಂತೆ ಕಂಡಿತು.
04036007a ತದನೀಕಂ ಮಹದ್ದೃಷ್ಟ್ವಾ ಗಜಾಶ್ವರಥಸಂಕುಲಂ।
04036007c ಕರ್ಣದುರ್ಯೋಧನಕೃಪೈರ್ಗುಪ್ತಂ ಶಾಂತನವೇನ ಚ।।
04036008a ದ್ರೋಣೇನ ಚ ಸಪುತ್ರೇಣ ಮಹೇಷ್ವಾಸೇನ ಧೀಮತಾ।
04036008c ಹೃಷ್ಟರೋಮಾ ಭಯೋದ್ವಿಗ್ನಃ ಪಾರ್ಥಂ ವೈರಾಟಿರಬ್ರವೀತ್।।
ಆನೆ, ಕುದುರೆ ಮತ್ತು ರಥಗಳಿಂದ ತುಂಬಿದ, ಕರ್ಣ, ದುರ್ಯೋಧನ, ಕೃಪ, ಭೀಷ್ಮರಿಂದಲೂ, ಪುತ್ರಸಹಿತನಾಗಿದ್ದ ಮಹಾಧನುರ್ಧರ ಧೀಮಂತ ದ್ರೋಣನಿಂದಲೂ ರಕ್ಷಿತವಾದ ಆ ಮಹಾಸೈನ್ಯವನ್ನು ಕಂಡು ಉತ್ತರನು ರೋಮಾಂಚಿತನೂ ಭಯೋದ್ವಿಗ್ನನೂ ಆಗಿ ಪಾರ್ಥನಿಗೆ ಹೇಳಿದನು:
04036009a ನೋತ್ಸಹೇ ಕುರುಭಿರ್ಯೋದ್ಧುಂ ರೋಮಹರ್ಷಂ ಹಿ ಪಶ್ಯ ಮೇ।
04036009c ಬಹುಪ್ರವೀರಮತ್ಯುಗ್ರಂ ದೇವೈರಪಿ ದುರಾಸದಂ।
04036009e ಪ್ರತಿಯೋದ್ಧುಂ ನ ಶಕ್ಷ್ಯಾಮಿ ಕುರುಸೈನ್ಯಮನಂತಕಂ।।
“ಕುರುಗಳೊಡನೆ ನಾನು ಕಾದಲಾರೆ! ನನ್ನ ಶರೀರದ ರೋಮಾಂಚನವನ್ನು ನೋಡು. ಬಹುವೀರರಿಂದ ಕೂಡಿದ, ದೇವತೆಗಳಿಗೂ ಎದುರಿಸಲಾಗದ ಈ ಅತ್ಯುಗ್ರ ಅನಂತ ಕುರುಸೇನೆಯೊಂದಿಗೆ ನಾನು ಹೋರಾಡಲಾರೆ!
04036010a ನಾಶಂಸೇ ಭಾರತೀಂ ಸೇನಾಂ ಪ್ರವೇಷ್ಟುಂ ಭೀಮಕಾರ್ಮುಕಾಂ।
04036010c ರಥನಾಗಾಶ್ವಕಲಿಲಾಂ ಪತ್ತಿಧ್ವಜಸಮಾಕುಲಾಂ।
04036010e ದೃಷ್ಟ್ವೈವ ಹಿ ಪರಾನಾಜಾವಾತ್ಮಾ ಪ್ರವ್ಯಥತೀವ ಮೇ।।
ಭಯಂಕರ ಬಿಲ್ಲುಗಳನ್ನು ಹಿಡಿದ, ಆನೆ, ಕುದುರೆ ಮತ್ತು ರಥಗಳಿಂದ ತುಂಬಿದ, ಪದಾತಿ ಮತ್ತು ಧ್ವಜಗಳಿಂದ ಕೂಡಿದ ಭಾರತಸೇನೆಯನ್ನು ನಾನು ಪ್ರವೇಶಿಸಲಾರೆ. ಯುದ್ಧರಂಗದಲ್ಲಿ ವೈರಿಗಳನ್ನು ನೋಡಿಯೇ ನನ್ನ ಜೀವ ನಡುಗುತ್ತಿದೆ.
04036011a ಯತ್ರ ದ್ರೋಣಶ್ಚ ಭೀಷ್ಮಶ್ಚ ಕೃಪಃ ಕರ್ಣೋ ವಿವಿಂಶತಿಃ।
04036011c ಅಶ್ವತ್ಥಾಮಾ ವಿಕರ್ಣಶ್ಚ ಸೋಮದತ್ತೋಽಥ ಬಾಹ್ಲಿಕಃ।।
04036012a ದುರ್ಯೋಧನಸ್ತಥಾ ವೀರೋ ರಾಜಾ ಚ ರಥಿನಾಂ ವರಃ।
04036012c ದ್ಯುತಿಮಂತೋ ಮಹೇಷ್ವಾಸಾಃ ಸರ್ವೇ ಯುದ್ಧವಿಶಾರದಾಃ।।
ಅಲ್ಲಿರುವ ದ್ರೋಣ, ಭೀಷ್ಮ, ಕೃಪ, ಕರ್ಣ, ವಿವಿಂಶತಿ, ಅಶ್ವತ್ಥಾಮ, ವಿಕರ್ಣ, ಸೋಮದತ್ತ, ಬಾಹ್ಲೀಕ, ರಥಿಕಶ್ರೇಷ್ಠ ವೀರರಾಜ ದುರ್ಯೋಧನ - ಈ ಎಲ್ಲರೂ ಹೊಳೆಯುವ ಮಹಾಧನುರ್ಧರರು ಮತ್ತು ಯುದ್ಧ ವಿಶಾರದರು.
04036013a ದೃಷ್ಟ್ವೈವ ಹಿ ಕುರೂನೇತಾನ್ವ್ಯೂಢಾನೀಕಾನ್ಪ್ರಪ್ರಹಾರಿಣಃ।
04036013c ಹೃಷಿತಾನಿ ಚ ರೋಮಾಣಿ ಕಶ್ಮಲಂ ಚಾಗತಂ ಮಮ।।
ಯುದ್ಧಸನ್ನದ್ಧರಾದ ಈ ಕುರುಯೋಧರನ್ನು ನೋಡಿಯೇ ನನಗೆ ರೋಮಾಂಚನವಾಗಿದೆ. ನನಗೆ ಮೂರ್ಛೆ ಬಂದಂತೆ ಆಗುತ್ತಿದೆ.””
04036014 ವೈಶಂಪಾಯನ ಉವಾಚ।
04036014a ಅವಿಯಾತೋ ವಿಯಾತಸ್ಯ ಮೌರ್ಖ್ಯಾದ್ಧೂರ್ತಸ್ಯ ಪಶ್ಯತಃ।
04036014c ಪರಿದೇವಯತೇ ಮಂದಃ ಸಕಾಶೇ ಸವ್ಯಸಾಚಿನಃ।।
ವೈಶಂಪಾಯನನು ಹೇಳಿದನು: “ಆ ಹೇಡಿ ಮಂದಬುದ್ಧಿ ಉತ್ತರನು ಧೃಷ್ಟ ಧೈರ್ಯಶಾಲಿ ಸವ್ಯಸಾಚಿಯ ಎದಿರು ಮೂರ್ಖತನದಿಂದ ಪ್ರಲಾಪಿಸತೊಡಗಿದನು.
04036015a ತ್ರಿಗರ್ತಾನ್ಮೇ ಪಿತಾ ಯಾತಃ ಶೂನ್ಯೇ ಸಂಪ್ರಣಿಧಾಯ ಮಾಂ।
04036015c ಸರ್ವಾಂ ಸೇನಾಮುಪಾದಾಯ ನ ಮೇ ಸಂತೀಹ ಸೈನಿಕಾಃ।।
“ನನ್ನ ತಂದೆಯು ಸೇನೆಯನ್ನು ತೆಗೆದುಕೊಂಡು ಶೂನ್ಯ ನಗರದಲ್ಲಿ ನನ್ನನ್ನಿರಿಸಿ ತ್ರಿಗರ್ತರನ್ನು ಎದುರಿಸಲು ಹೊರಟುಹೋದನು. ನನಗಿಲ್ಲಿ ಸೈನಿಕರಿಲ್ಲ.
04036016a ಸೋಽಹಮೇಕೋ ಬಹೂನ್ಬಾಲಃ ಕೃತಾಸ್ತ್ರಾನಕೃತಶ್ರಮಃ।
04036016c ಪ್ರತಿಯೋದ್ಧುಂ ನ ಶಕ್ಷ್ಯಾಮಿ ನಿವರ್ತಸ್ವ ಬೃಹನ್ನಡೇ।।
ಬೃಹನ್ನಡೇ! ಏಕಾಂಗಿಯೂ ಅಸ್ತ್ರಪರಿಶ್ರಮವಿಲ್ಲದ ಬಾಲಕನೂ ಆದ ನಾನು ಅಸ್ತ್ರವಿಶಾರದ ಬಹುಯೋಧರೊಡನೆ ಕಾದಲಾರೆ. ಆದ್ದರಿಂದ ರಥವನ್ನು ಹಿಂದಿರುಗಿಸು.”
04036017 ಅರ್ಜುನ ಉವಾಚ।
04036017a ಭಯೇನ ದೀನರೂಪೋಽಸಿ ದ್ವಿಷತಾಂ ಹರ್ಷವರ್ಧನಃ।
04036017c ನ ಚ ತಾವತ್ಕೃತಂ ಕಿಂ ಚಿತ್ಪರೈಃ ಕರ್ಮ ರಣಾಜಿರೇ।।
ಅರ್ಜುನನು ಹೇಳಿದನು: “ಭಯದಿಂದ ದೀನರೂಪಿಯಾಗಿ ಶತ್ರುಗಳ ಹರ್ಷವನ್ನು ಹೆಚ್ಚಿಸುತ್ತಿರುವೆ. ರಣರಂಗದಲ್ಲಿ ಶತ್ರುಗಳು ಇನ್ನೂ ಏನನ್ನೂ ಮಾಡಿಯೇ ಇಲ್ಲ.
04036018a ಸ್ವಯಮೇವ ಚ ಮಾಮಾತ್ಥ ವಹ ಮಾಂ ಕೌರವಾನ್ಪ್ರತಿ।
04036018c ಸೋಽಹಂ ತ್ವಾಂ ತತ್ರ ನೇಷ್ಯಾಮಿ ಯತ್ರೈತೇ ಬಹುಲಾ ಧ್ವಜಾಃ।।
ನನ್ನನ್ನು ಕೌರವರೆಡೆಗೆ ಕರೆದುಕೊಂಡು ಹೋಗು ಎಂದು ನನಗೆ ಹೇಳಿದವನು ನೀನೆ. ಅಸಂಖ್ಯ ಧ್ವಜಗಳಿರುವಡೆಗೆ ನಾನು ನಿನ್ನನ್ನು ಒಯ್ಯುವೆನು.
04036019a ಮಧ್ಯಮಾಮಿಷಗೃಧ್ರಾಣಾಂ ಕುರೂಣಾಮಾತತಾಯಿನಾಂ।
04036019c ನೇಷ್ಯಾಮಿ ತ್ವಾಂ ಮಹಾಬಾಹೋ ಪೃಥಿವ್ಯಾಮಪಿ ಯುಧ್ಯತಾಂ।।
ಮಹಾಬಾಹೋ! ಮಾಂಸಕ್ಕಾಗಿ ಬಾಯಿಬಿಡುವ ಹದ್ದುಗಳಾಗಿ ಭೂಮಿಯಲ್ಲಿ ನಿಂತು ಯುದ್ಧಮಾಡುತ್ತಿರುವ ಪಾಪಿಷ್ಟ ಕೌರವರ ನಡುವೆ ನಿನ್ನನ್ನು ಒಯ್ಯುವೆನು.
04036020a ತಥಾ ಸ್ತ್ರೀಷು ಪ್ರತಿಶ್ರುತ್ಯ ಪೌರುಷಂ ಪುರುಷೇಷು ಚ।
04036020c ಕತ್ಥಮಾನೋಽಭಿನಿರ್ಯಾಯ ಕಿಮರ್ಥಂ ನ ಯುಯುತ್ಸಸೇ।।
ಹಾಗೆ ಸ್ತ್ರೀಯರ ಮುಂದೆ ಪ್ರತಿಜ್ಞೆಮಾಡಿ ಪುರುಷರ ಮುಂದೆ ಪೌರುಷವನ್ನು ಕೊಚ್ಚಿಕೊಂಡು ಹೊರಟುಬಂದು ಈಗ ನೀನು ಏಕೆ ಯುದ್ಧಮಾಡಬಯಸದಿರುವೆ?
04036021a ನ ಚೇದ್ವಿಜಿತ್ಯ ಗಾಸ್ತಾಸ್ತ್ವಂ ಗೃಹಾನ್ವೈ ಪ್ರತಿಯಾಸ್ಯಸಿ।
04036021c ಪ್ರಹಸಿಷ್ಯಂತಿ ವೀರ ತ್ವಾಂ ನರಾ ನಾರ್ಯಶ್ಚ ಸಂಗತಾಃ।।
ವೀರ! ಆ ಗೋವುಗಳನ್ನು ಗೆಲ್ಲದೇ ನೀನು ಮನೆಗೆ ಮರಳಿದರೆ ಸ್ತ್ರೀಯರೂ ಪುರುಷರೂ ಒಟ್ಟುಗೂಡಿ ನಿನ್ನನ್ನು ಅಪಹಾಸ್ಯಮಾಡುತ್ತಾರೆ.
04036022a ಅಹಮಪ್ಯತ್ರ ಸೈರಂಧ್ರ್ಯಾ ಸ್ತುತಃ ಸಾರಥ್ಯಕರ್ಮಣಿ।
04036022c ನ ಹಿ ಶಕ್ಷ್ಯಾಮ್ಯನಿರ್ಜಿತ್ಯ ಗಾಃ ಪ್ರಯಾತುಂ ಪುರಂ ಪ್ರತಿ।।
ಸಾರಥ್ಯಕಾರ್ಯದಲ್ಲಿ ಸೈರಂಧ್ರಿಯಿಂದ ಹೊಗಳಿಸಿಕೊಂಡ ಈ ನಾನು ಕೂಡ ಗೋವುಗಳನ್ನು ಗೆದ್ದುಕೊಳ್ಳದೆ ಪುರಕ್ಕೆ ಹಿಂದಿರುಗಲಾರೆ.
04036023a ಸ್ತೋತ್ರೇಣ ಚೈವ ಸೈರಂಧ್ರ್ಯಾಸ್ತವ ವಾಕ್ಯೇನ ತೇನ ಚ।
04036023c ಕಥಂ ನ ಯುಧ್ಯೇಯಮಹಂ ಕುರೂನ್ಸರ್ವಾನ್ಸ್ಥಿರೋ ಭವ।।
ಸೈರಂಧ್ರಿಯ ಸ್ತುತಿಯಿಂದ ಮತ್ತು ನಿನ್ನ ಆ ಮಾತಿನಿಂದ ಪ್ರೇರಿತನಾಗಿರುವ ನಾನು ಎಲ್ಲ ಕುರುಗಳೊಡನೆ ಹೇಗೆ ಹೋರಾಡದಿರಲಿ? ನೀನು ಸ್ಥಿರನಾಗು.”
04036024 ಉತ್ತರ ಉವಾಚ।
04036024a ಕಾಮಂ ಹರಂತು ಮತ್ಸ್ಯಾನಾಂ ಭೂಯಾಂಸಂ ಕುರವೋ ಧನಂ।
04036024c ಪ್ರಹಸಂತು ಚ ಮಾಂ ನಾರ್ಯೋ ನರಾ ವಾಪಿ ಬೃಹನ್ನಡೇ।।
ಉತ್ತರನು ಹೇಳಿದನು: “ಬೃಹನ್ನಡೇ! ಬೇಕಾದರೆ ಕುರುಗಳು ಮತ್ಸ್ಯರ ವಿಪುಲ ಧನವನ್ನು ಒಯ್ಯಲಿ. ನನ್ನನ್ನು ಕುರಿತು ಸ್ತ್ರೀಯರು ಅಥವಾ ಪುರುಷರು ನಗಲಿ.””
04036025 ವೈಶಂಪಾಯನ ಉವಾಚ।
04036025a ಇತ್ಯುಕ್ತ್ವಾ ಪ್ರಾದ್ರವದ್ಭೀತೋ ರಥಾತ್ಪ್ರಸ್ಕಂದ್ಯ ಕುಂಡಲೀ।
04036025c ತ್ಯಕ್ತ್ವಾ ಮಾನಂ ಸ ಮಂದಾತ್ಮಾ ವಿಸೃಜ್ಯ ಸಶರಂ ಧನುಃ।।
ವೈಶಂಪಾಯನನು ಹೇಳಿದನು: “ಭೀತನೂ ಮಂದಾತ್ಮನೂ ಆದ ಅ ಕುಂಡಲಧಾರಿಯು ಹೀಗೆ ಹೇಳಿ, ಮಾನವನ್ನು ತೊರೆದು, ಬಾಣಸಹಿತ ಬಿಲ್ಲನ್ನು ಬಿಸುಟು, ರಥದಿಂದ ಧುಮುಕಿ ಓಡತೊಡಗಿದನು.
04036026 ಬೃಹನ್ನಡೋವಾಚ।
04036026a ನೈಷ ಪೂರ್ವೈಃ ಸ್ಮೃತೋ ಧರ್ಮಃ ಕ್ಷತ್ರಿಯಸ್ಯ ಪಲಾಯನಂ।
04036026c ಶ್ರೇಯಸ್ತೇ ಮರಣಂ ಯುದ್ಧೇ ನ ಭೀತಸ್ಯ ಪಲಾಯನಂ।।
ಬ್ರಹನ್ನಡೆಯು ಹೇಳಿದಳು: “ಪಲಾಯನವು ಕ್ಷತ್ರಿಯನ ಧರ್ಮವೆಂದು ಹಿಂದಿನವರು ವಿಧಿಸಿಲ್ಲ. ಯುದ್ಧದಲ್ಲಿ ಮರಣಹೊಂದುವುದು ನಿನಗೆ ಶ್ರೇಯಸ್ಕರ; ಭೀತಿಯಿಂದ ಪಲಾಯನಮಾಡುವುದಲ್ಲ!””
04036027 ವೈಶಂಪಾಯನ ಉವಾಚ।
04036027a ಏವಮುಕ್ತ್ವಾ ತು ಕೌಂತೇಯಃ ಸೋಽವಪ್ಲುತ್ಯ ರಥೋತ್ತಮಾತ್।
04036027c ತಮನ್ವಧಾವದ್ಧಾವಂತಂ ರಾಜಪುತ್ರಂ ಧನಂಜಯಃ।
04036027e ದೀರ್ಘಾಂ ವೇಣೀಂ ವಿಧುನ್ವಾನಃ ಸಾಧು ರಕ್ತೇ ಚ ವಾಸಸೀ।।
ವೈಶಂಪಾಯನನು ಹೇಳಿದನು: “ಕೌಂತೇಯ ಧನಂಜಯನು ಹೀಗೆ ನುಡಿದು ತನ್ನ ನೀಳ ಜಡೆಯೂ ಕೆಂಪುವಸ್ತ್ರಗಳೂ ಹಾರಾಡುತ್ತಿರಲು, ಉತ್ತಮ ರಥದಿಂದ ನೆಗೆದು ಓಡಿಹೋಗುತ್ತಿದ್ದ ಆ ರಾಜಕುಮಾರನನ್ನು ಬೆನ್ನಟ್ಟಿದನು.
04036028a ವಿಧೂಯ ವೇಣೀಂ ಧಾವಂತಮಜಾನಂತೋಽರ್ಜುನಂ ತದಾ।
04036028c ಸೈನಿಕಾಃ ಪ್ರಾಹಸನ್ಕೇ ಚಿತ್ತಥಾರೂಪಮವೇಕ್ಷ್ಯ ತಂ।।
ಜಡೆಯನ್ನು ಹಾರಾಡಿಸಿಕೊಂಡು ಹೋಗುತ್ತಿದ್ದ ಅರ್ಜುನನನ್ನು ಗುರುತುಹಿಡಿಯಲಾರದೇ ಕೆಲವು ಸೈನಿಕರು ಅವನ ಅಂತಹ ರೂಪವನ್ನು ನೋಡಿ ನಕ್ಕರು.
04036029a ತಂ ಶೀಘ್ರಮಭಿಧಾವಂತಂ ಸಂಪ್ರೇಕ್ಷ್ಯ ಕುರವೋಽಬ್ರುವನ್।
04036029c ಕ ಏಷ ವೇಷಪ್ರಚ್ಛನ್ನೋ ಭಸ್ಮನೇವ ಹುತಾಶನಃ।।
ವೇಗವಾಗಿ ಹಾಗೆ ಓಡುತ್ತಿದ್ದ ಅವನನ್ನು ನೋಡಿ ಕುರುಗಳು ಮಾತನಾಡಿಕೊಂಡರು: “ಬೂದಿ ಮುಚ್ಚಿರುವ ಬೆಂಕಿಯಂತೆ ವೇಷಮರೆಸಿಕೊಂಡಿರುವ ಈತನಾರು?
04036030a ಕಿಂ ಚಿದಸ್ಯ ಯಥಾ ಪುಂಸಃ ಕಿಂ ಚಿದಸ್ಯ ಯಥಾ ಸ್ತ್ರಿಯಃ।
04036030c ಸಾರೂಪ್ಯಮರ್ಜುನಸ್ಯೇವ ಕ್ಲೀಬರೂಪಂ ಬಿಭರ್ತಿ ಚ।।
ಇವನ ರೂಪ ಸ್ವಲ್ಪಮಟ್ಟಿಗೆ ಗಂಡಸಿನಂತೆ, ಸ್ವಲ್ಪಮಟ್ಟಿಗೆ ಹೆಂಗಸಿನಂತೆ. ರೂಪ ಅರ್ಜುನನಂತೆಯೇ ಇದೆ. ಆದರೆ ನಪುಂಸಕರೂಪವನ್ನು ಧರಿಸಿದ್ದಾನೆ.
04036031a ತದೇವೈತಚ್ಚಿರೋಗ್ರೀವಂ ತೌ ಬಾಹೂ ಪರಿಘೋಪಮೌ।
04036031c ತದ್ವದೇವಾಸ್ಯ ವಿಕ್ರಾಂತಂ ನಾಯಮನ್ಯೋ ಧನಂಜಯಾತ್।।
ಅದೇ ತಲೆ, ಅದೇ ಕೊರಳು, ಲಾಳಮುಂಡಿಗೆಯಂತಹ ಅವೇ ತೋಳುಗಳು, ಅಂಥದೇ ನಡುಗೆ ಇವನವು. ಇವನು ಧನಂಜಯನಲ್ಲದೇ ಬೇರೆಯವನಲ್ಲ.
04036032a ಅಮರೇಷ್ವಿವ ದೇವೇಂದ್ರೋ ಮಾನುಷೇಷು ಧನಂಜಯಃ।
04036032c ಏಕಃ ಕೋಽಸ್ಮಾನುಪಾಯಾಯಾದನ್ಯೋ ಲೋಕೇ ಧನಂಜಯಾತ್।।
ದೇವತೆಗಳಲ್ಲಿ ದೇವೇಂದ್ರನಂತೆ ಮಾನವರಲ್ಲಿ ಧನಂಜಯ. ಲೋಕದಲ್ಲಿ ಧನಂಜಯನಲ್ಲದೆ ಮತ್ತಾವನು ಒಂಟಿಯಾಗಿ ನಮ್ಮನ್ನು ಎದುರಿಸುತ್ತಾನೆ?
04036033a ಏಕಃ ಪುತ್ರೋ ವಿರಾಟಸ್ಯ ಶೂನ್ಯೇ ಸನ್ನಿಹಿತಃ ಪುರೇ।
04036033c ಸ ಏಷ ಕಿಲ ನಿರ್ಯಾತೋ ಬಾಲಭಾವಾನ್ನ ಪೌರುಷಾತ್।।
ವಿರಾಟನ ಒಬ್ಬನೇ ಮಗನನ್ನು ನಿರ್ಜನ ಪಟ್ಟಣದಲ್ಲಿ ಇರಿಸಲಾಯಿತು. ಅವನು ಹುಡುಗತನದಿಂದ ಹೊರಬಂದಿದ್ದಾನೆ. ಪೌರುಷದಿಂದಲ್ಲ.
04036034a ಸತ್ರೇಣ ನೂನಂ ಚನ್ನಂ ಹಿ ಚರಂತಂ ಪಾರ್ಥಮರ್ಜುನಂ।
04036034c ಉತ್ತರಃ ಸಾರಥಿಂ ಕೃತ್ವಾ ನಿರ್ಯಾತೋ ನಗರಾದ್ಬಹಿಃ।।
ಆ ಉತ್ತರನು ನಿಶ್ಚಿತವಾಗಿಯೂ ಗುಪ್ತವೇಷದಲ್ಲಿ ಚರಿಸುತ್ತಿರುವ ಕುಂತೀಪುತ್ರ ಅರ್ಜುನನನ್ನು ಸಾರಥಿಯನ್ನಾಗಿಸಿಕೊಂಡು ನಗರದಿಂದ ಹೊರಬಿದ್ದಿದ್ದಾನೆ.
04036035a ಸ ನೋ ಮನ್ಯೇ ಧ್ವಜಾನ್ದೃಷ್ಟ್ವಾ ಭೀತ ಏಷ ಪಲಾಯತಿ।
04036035c ತಂ ನೂನಮೇಷ ಧಾವಂತಂ ಜಿಘೃಕ್ಷತಿ ಧನಂಜಯಃ।।
ನಮ್ಮ ಬಾವುಟಗಳನ್ನು ನೋಡಿ ಹೆದರಿ ಇಗೋ ಪಲಾಯನ ಮಾಡುತ್ತಿದ್ದಾನೆಂದು ತೋರುತ್ತದೆ. ಓಡುತ್ತಿರುವ ಅವನನ್ನು ಹಿಡಿಯಲು ಈ ಧನಂಜಯನು ಇಚ್ಛಿಸುತ್ತಿರುವುದು ಖಂಡಿತ.”
04036036a ಇತಿ ಸ್ಮ ಕುರವಃ ಸರ್ವೇ ವಿಮೃಶಂತಃ ಪೃಥಕ್ ಪೃಥಕ್।
04036036c ನ ಚ ವ್ಯವಸಿತುಂ ಕಿಂ ಚಿದುತ್ತರಂ ಶಕ್ನುವಂತಿ ತೇ।
04036036e ಚನ್ನಂ ತಥಾ ತಂ ಸತ್ರೇಣ ಪಾಂಡವಂ ಪ್ರೇಕ್ಷ್ಯ ಭಾರತ।।
ಭಾರತ! ಮಾರುವೇಷದಲ್ಲಿದ್ದ ಆ ಪಾಂಡವನನ್ನು ಕಂಡು ಕುರುಗಳೆಲ್ಲರೂ ಹೀಗೆ ಬೇರೆಬೇರೆಯಾಗಿ ಆಲೋಚಿಸಿದರು. ಆದರೆ ಅವರು ಯಾವುದೇ ನಿರ್ಣಯಕ್ಕೆ ಬರಲು ಸಮರ್ಥರಾಗಲಿಲ್ಲ.
04036037a ಉತ್ತರಂ ತು ಪ್ರಧಾವಂತಮನುದ್ರುತ್ಯ ಧನಂಜಯಃ।
04036037c ಗತ್ವಾ ಪದಶತಂ ತೂರ್ಣಂ ಕೇಶಪಕ್ಷೇ ಪರಾಮೃಶತ್।।
ಧನಂಜಯನು ಓಡಿಹೋಗುತ್ತಿದ್ದ ಉತ್ತರನನ್ನು ಬೆನ್ನುಹತ್ತಿ ನೂರು ಹೆಜ್ಜೆ ಹೋಗಿ ಅವನ ಜುಟ್ಟನ್ನು ಹಿಡಿದುಕೊಂಡನು.
04036038a ಸೋಽರ್ಜುನೇನ ಪರಾಮೃಷ್ಟಃ ಪರ್ಯದೇವಯದಾರ್ತವತ್।
04036038c ಬಹುಲಂ ಕೃಪಣಂ ಚೈವ ವಿರಾಟಸ್ಯ ಸುತಸ್ತದಾ।।
ಅರ್ಜುನನು ಹಿಡಿದ ಉತ್ತರನು ಆಗ ಆರ್ತನಂತೆ ದೀನನಾಗಿ ಬಹುವಾಗಿ ಪ್ರಲಾಪಿಸತೊಡಗಿದನು.
04036039a ಶಾತಕುಂಭಸ್ಯ ಶುದ್ಧಸ್ಯ ಶತಂ ನಿಷ್ಕಾನ್ದದಾಮಿ ತೇ।
04036039c ಮಣೀನಷ್ಟೌ ಚ ವೈಡೂರ್ಯಾನ್ ಹೇಮಬದ್ಧಾನ್ಮಹಾಪ್ರಭಾನ್।।
04036040a ಹೇಮದಂಡಪ್ರತಿಚ್ಛನ್ನಂ ರಥಂ ಯುಕ್ತಂ ಚ ಸುವ್ರಜೈಃ।
04036040c ಮತ್ತಾಂಶ್ಚ ದಶ ಮಾತಂಗಾನ್ಮುಂಚ ಮಾಂ ತ್ವಂ ಬೃಹನ್ನಡೇ।।
“ಶುದ್ಧ ಚಿನ್ನದ ನೂರು ನಾಣ್ಯಗಳನ್ನೂ, ಸುವರ್ಣಖಚಿತ ಮಹಾಪ್ರಕಾಶದ ಎಂಟು ವೈಢೂರ್ಯ ಮಣಿಗಳನ್ನೂ, ಚಿನ್ನದ ದಂಡವುಳ್ಳ ವೇಗದ ಕುದುರೆಗಳನ್ನು ಹೂಡಿದ ರಥವನ್ನೂ, ಹತ್ತು ಮದಗಜಗಳನ್ನೂ ನಿನಗೆ ಕೊಡುತ್ತೇನೆ. ನನ್ನನ್ನು ಬಿಟ್ಟುಬಿಡು ಬೃಹನ್ನಡೇ!””
04036041 ವೈಶಂಪಾಯನ ಉವಾಚ।
04036041a ಏವಮಾದೀನಿ ವಾಕ್ಯಾನಿ ವಿಲಪಂತಮಚೇತಸಂ।
04036041c ಪ್ರಹಸ್ಯ ಪುರುಷವ್ಯಾಘ್ರೋ ರಥಸ್ಯಾಂತಿಕಮಾನಯತ್।।
ವೈಶಂಪಾಯನನು ಹೇಳಿದನು: “ಇವೇ ಮುಂತಾದ ಮಾತುಗಳನ್ನು ಎಚ್ಚರತಪ್ಪಿ ಆಡುತ್ತಿದ್ದ ಆ ಉತ್ತರನನ್ನು ಆ ಪುರುಷಶ್ರೇಷ್ಠನು ನಗುತ್ತಾ ರಥದ ಬಳಿಗೆ ತಂದನು.
04036042a ಅಥೈನಮಬ್ರವೀತ್ಪಾರ್ಥೋ ಭಯಾರ್ತಂ ನಷ್ಟಚೇತಸಂ।
04036042c ಯದಿ ನೋತ್ಸಹಸೇ ಯೋದ್ಧುಂ ಶತ್ರುಭಿಃ ಶತ್ರುಕರ್ಶನ।
04036042e ಏಹಿ ಮೇ ತ್ವಂ ಹಯಾನ್ಯಚ್ಛ ಯುಧ್ಯಮಾನಸ್ಯ ಶತ್ರುಭಿಃ।।
ಬಳಿಕ ಪಾರ್ಥನು ಭಯಾರ್ತನೂ ಪ್ರಜ್ಞಾಹೀನನೂ ಆದ ಉತ್ತರನಿಗೆ ಹೀಗೆಂದನು: “ಶತ್ರುನಾಶಕ! ಶತ್ರುಗಳೊಡನೆ ನೀನು ಕಾದಲಾರೆಯಾದರೆ ಬಾ. ನನ್ನ ಕುದುರೆಗಳನ್ನು ನಡೆಸು. ಶತ್ರುಗಳೊಡನೆ ನಾನು ಹೋರಾಡುತ್ತೇನೆ.
04036043a ಪ್ರಯಾಹ್ಯೇತದ್ರಥಾನೀಕಂ ಮದ್ಬಾಹುಬಲರಕ್ಷಿತಃ।
04036043c ಅಪ್ರಧೃಷ್ಯತಮಂ ಘೋರಂ ಗುಪ್ತಂ ವೀರೈರ್ಮಹಾರಥೈಃ।।
ನನ್ನ ಬಾಹುಬಲದ ರಕ್ಷಣೆಯನ್ನು ಪಡೆದು ಅತ್ಯಂತ ಅದಮ್ಯವೂ ಘೋರವೂ ಮಹಾರಥಿ ವೀರರಿಂದ ರಕ್ಷಿತವೂ ಆದ ಈ ರಥಸೇನೆಯೊಳಗೆ ನುಗ್ಗು!
04036044a ಮಾ ಭೈಸ್ತ್ವಂ ರಾಜಪುತ್ರಾಗ್ರ್ಯ ಕ್ಷತ್ರಿಯೋಽಸಿ ಪರಂತಪ।
04036044c ಅಹಂ ವೈ ಕುರುಭಿರ್ಯೋತ್ಸ್ಯಾಮ್ಯವಜೇಷ್ಯಾಮಿ ತೇ ಪಶೂನ್।।
ಶತ್ರುನಾಶಕ! ರಾಜಪುತ್ರ! ಶ್ರೇಷ್ಠ! ಹೆದರಬೇಡ! ನೀನು ಕ್ಷತ್ರಿಯನಾಗಿರುವೆ. ನಾನು ಕುರುಗಳೊಡನೆ ಯುದ್ಧಮಾಡಿ ನಿನ್ನ ಹಸುಗಳನ್ನು ಗೆದ್ದುಕೊಡುವೆನು.
04036045a ಪ್ರವಿಶ್ಯೈತದ್ರಥಾನೀಕಮಪ್ರಧೃಷ್ಯಂ ದುರಾಸದಂ।
04036045c ಯಂತಾ ಭೂಸ್ತ್ವಂ ನರಶ್ರೇಷ್ಠ ಯೋತ್ಸ್ಯೇಽಹಂ ಕುರುಭಿಃ ಸಹ।।
ಈ ಅಜೇಯ ಅಸಾಧ್ಯ ರಥಸೈನ್ಯವನ್ನು ಹೊಕ್ಕು ನಾನು ಕುರುಗಳೊಡನೆ ಕಾದುತ್ತೇನೆ. ನರಶ್ರೇಷ್ಠ! ನೀನು ನನಗೆ ಸಾರಥಿಯಾಗು!”
04036046a ಏವಂ ಬ್ರುವಾಣೋ ಬೀಭತ್ಸುರ್ವೈರಾಟಿಮಪರಾಜಿತಃ।
04036046c ಸಮಾಶ್ವಾಸ್ಯ ಮುಹೂರ್ತಂ ತಮುತ್ತರಂ ಭರತರ್ಷಭ।।
04036047a ತತ ಏನಂ ವಿಚೇಷ್ಟಂತಮಕಾಮಂ ಭಯಪೀಡಿತಂ।
04036047c ರಥಮಾರೋಪಯಾಮಾಸ ಪಾರ್ಥಃ ಪ್ರಹರತಾಂ ವರಃ।।
ಭರತಶ್ರೇಷ್ಠ! ಆ ಅಪರಾಜಿತ ಯೋಧಶ್ರೇಷ್ಠ ಕುಂತೀಪುತ್ರ ಅರ್ಜುನನು ವಿರಾಟಪುತ್ರ ಉತ್ತರನಿಗೆ ಹೀಗೆ ನುಡಿಯುತ್ತ ಅವನನ್ನು ಮುಹೂರ್ತಕಾಲದಲ್ಲಿ ಸಮಾಧಾನಪಡಿಸಿ ಭಯಪೀಡಿತನಾಗಿ, ಯುದ್ಧದ ಆಸೆಯಿಲ್ಲದೇ ಪರದಾಡುತ್ತಿದ್ದ ಅವನನ್ನು ಎತ್ತಿ ರಥದಲ್ಲೇರಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಉತ್ತರಾಶ್ವಾಸನೇ ಷಟ್ತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಉತ್ತರಾಶ್ವಾಸನದಲ್ಲಿ ಮೂವತ್ತಾರನೆಯ ಅಧ್ಯಾಯವು.