ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ
ವೈರಾಟ ಪರ್ವ
ಅಧ್ಯಾಯ 7
ಸಾರ
ತನ್ನ ಆಸ್ಥಾನವನ್ನು ಪ್ರವೇಶಿಸಿದ ಭೀಮಸೇನನನ್ನು ಯಾರೆಂದು ರಾಜಾ ವಿರಾಟನು ತರ್ಕಿಸಿದುದು (1-4). ಭೀಮಸೇನ-ವಿರಾಟರ ಸಂಭಾಷಣೆ ಮತ್ತು ಭೀಮನು ಬಲ್ಲವನೆಂಬ ಹೆಸರಿನಲ್ಲಿ ವಿರಾಟನ ಅಡುಗೆಮನೆಯಲ್ಲಿ ಅಡುಗೆಯವನಾಗಿ ಸೇರಿಕೊಳ್ಳುವುದು (5-11).
04007001 ವೈಶಂಪಾಯನ ಉವಾಚ।
04007001a ಅಥಾಪರೋ ಭೀಮಬಲಃ ಶ್ರಿಯಾ ಜ್ವಲನ್ನ್। ಉಪಾಯಯೌ ಸಿಂಹವಿಲಾಸವಿಕ್ರಮಃ।
04007001c ಖಜಂ ಚ ದರ್ವೀಂ ಚ ಕರೇಣ ಧಾರಯನ್ನ್। ಅಸಿಂ ಚ ಕಾಲಾಂಗಮಕೋಶಮವ್ರಣಂ।।
ವೈಶಂಪಾಯನನು ಹೇಳಿದನು: “ಬಳಿಕ ಭೀಮಬಲನೂ, ಸಿಂಹದ ನಡುಗೆಯ ವಿಲಾಸಿಯೂ ಆದ, ಕಾಂತಿಯಿಂದ ಜ್ವಲಿಸುತ್ತಿದ್ದ ಇನ್ನೊಬ್ಬನು ಕೈಯಲ್ಲಿ ಕಡೆಗೋಲನ್ನೂ, ಸೌಟನ್ನೂ, ಒರೆಹಚ್ಚಿದ, ಕಲೆಯಿಲ್ಲದೇ ಹೊಳೆಯುತ್ತಿರುವ ಕತ್ತಿಯನ್ನೂ ಹಿಡಿದು ಅಲ್ಲಿಗೆ ಆಗಮಿಸಿದನು.
04007002a ಸ ಸೂದರೂಪಃ ಪರಮೇಣ ವರ್ಚಸಾ। ರವಿರ್ಯಥಾ ಲೋಕಮಿಮಂ ಪ್ರಭಾಸಯನ್।
04007002c ಸುಕೃಷ್ಣವಾಸಾ ಗಿರಿರಾಜಸಾರವಾನ್। ಸ ಮತ್ಸ್ಯರಾಜಂ ಸಮುಪೇತ್ಯ ತಸ್ಥಿವಾನ್।।
ಕಪ್ಪುಡುಗೆಯನ್ನುಟ್ಟು ಅಡುಗೆಯವನ ರೂಪಧರಿಸಿದ್ದ ಆ ಹಿಮಾಲಯದಂತೆ ಸತ್ವಯುತನಾಗಿದ್ದ, ಪರಮ ತೇಜಸ್ಸಿನಿಂದ ರವಿಯಂತೆ ಲೋಕವನ್ನೇ ಬೆಳಗುತ್ತಾ ಅವನು ಮತ್ಸ್ಯರಾಜನ ಬಳಿಬಂದು ನಿಂತನು.
04007003a ತಂ ಪ್ರೇಕ್ಷ್ಯ ರಾಜಾ ವರಯನ್ನುಪಾಗತಂ। ತತೋಽಬ್ರವೀಜ್ಜಾನಪದಾನ್ಸಮಾಗತಾನ್।
04007003c ಸಿಂಹೋನ್ನತಾಂಸೋಽಯಮತೀವ ರೂಪವಾನ್। ಪ್ರದೃಶ್ಯತೇ ಕೋ ನು ನರರ್ಷಭೋ ಯುವಾ।।
ವರವನ್ನು ಕೇಳಲು ಬಂದಿದ್ದ ಅವನನ್ನು ನೋಡಿದ ರಾಜನು ಅಲ್ಲಿ ನೆರೆದಿದ್ದ ಪ್ರಜೆಗಳಲ್ಲಿ ಕೇಳಿದನು: “ಸಿಂಹದಂತೆ ಉನ್ನತವಾದ ಭುಜವುಳ್ಳವನೂ, ಅತೀವ ರೂಪವಂತನೂ ಆದ ಈ ನರರ್ಷಭ ಯುವಕನು ಯಾರು?
04007004a ಅದೃಷ್ಟಪೂರ್ವಃ ಪುರುಷೋ ರವಿರ್ಯಥಾ। ವಿತರ್ಕಯನ್ನಾಸ್ಯ ಲಭಾಮಿ ಸಂಪದಂ।
04007004c ತಥಾಸ್ಯ ಚಿತ್ತಂ ಹ್ಯಪಿ ಸಂವಿತರ್ಕಯನ್। ನರರ್ಷಭಸ್ಯಾದ್ಯ ನ ಯಾಮಿ ತತ್ತ್ವತಃ।।
ರವಿಯಂತಿರುವ ಈ ವ್ಯಕ್ತಿಯನ್ನು ನಾನು ಹಿಂದೆಲ್ಲೂ ಕಂಡಿಲ್ಲ. ಎಷ್ಟೇ ವಿಚಾರ ಮಾಡಿದರೂ ಇವನ ಹುರುಳನ್ನು ನಾನು ಹಿಡಿಯಲಾರೆ. ಎಷ್ಟೇ ತರ್ಕ ಮಾಡಿದರೂ ಇವನ ಚಿತ್ತವೇನೆಂಬುದು ಇಂದು ನನಗೆ ಸರಿಯಾಗಿ ತಿಳಿಯುತ್ತಿಲ್ಲ.”
04007005a ತತೋ ವಿರಾಟಂ ಸಮುಪೇತ್ಯ ಪಾಂಡವಃ। ಸುದೀನರೂಪೋ ವಚನಂ ಮಹಾಮನಾಃ।
04007005c ಉವಾಚ ಸೂದೋಽಸ್ಮಿ ನರೇಂದ್ರ ಬಲ್ಲವೋ। ಭಜಸ್ವ ಮಾಂ ವ್ಯಂಜನಕಾರಮುತ್ತಮಂ।।
ಆಗ ದೀನರೂಪನೂ ಮಹಾಮನಸ್ವಿಯೂ ಆದ ಆ ಪಾಂಡವನು ವಿರಾಟನನ್ನು ಸಮೀಪಿಸಿ ನುಡಿದನು: “ರಾಜ ! ನಾನು ಬಲ್ಲವ ಎನ್ನುವ ಅಡುಗೆಯವನು. ಉತ್ತಮ ಅಡುಗೆಯನ್ನು ಮಾಡುವ ನನ್ನನ್ನು ನೇಮಿಸಿಕೋ!”
04007006 ವಿರಾಟ ಉವಾಚ।
04007006a ನ ಸೂದತಾಂ ಮಾನದ ಶ್ರದ್ದಧಾಮಿ ತೇ। ಸಹಸ್ರನೇತ್ರಪ್ರತಿಮೋ ಹಿ ದೃಶ್ಯಸೇ।
04007006c ಶ್ರಿಯಾ ಚ ರೂಪೇಣ ಚ ವಿಕ್ರಮೇಣ ಚ। ಪ್ರಭಾಸಿ ತಾತಾನವರೋ ನರೇಷ್ವಿಹ।।
ವಿರಾಟನು ಹೇಳಿದನು: “ಮಾನದ! ನೀನು ಅಡುಗೆಯವನು ಎನ್ನುವುದನ್ನು ನಾನು ನಂಬುವುದಿಲ್ಲ. ಇಂದ್ರನ ಹಾಗೆ ಕಾಣುತ್ತಿದ್ದೀಯೆ. ತಾತ! ಕಾಂತಿ, ರೂಪ, ಮತ್ತು ವಿಕ್ರಮಗಳಲ್ಲಿ ಇಲ್ಲಿರುವ ಎಲ್ಲರಿಗಿಂತಲೂ ಹೆಚ್ಚು ಹೊಳೆಯುತ್ತಿರುವೆ. ”
04007007 ಭೀಮ ಉವಾಚ।
04007007a ನರೇಂದ್ರ ಸೂದಃ ಪರಿಚಾರಕೋಽಸ್ಮಿ ತೇ। ಜಾನಾಮಿ ಸೂಪಾನ್ಪ್ರಥಮೇನ ಕೇವಲಾನ್।
04007007c ಆಸ್ವಾದಿತಾ ಯೇ ನೃಪತೇ ಪುರಾಭವನ್। ಯುಧಿಷ್ಠಿರೇಣಾಪಿ ನೃಪೇಣ ಸರ್ವಶಃ।।
ಭೀಮನು ಹೇಳಿದನು: “ನರೇಂದ್ರ! ನಾನು ನಿನಗೆ ಅಡುಗೆಯವನು ಮತ್ತು ಪರಿಚಾರಕ. ಮೊದಲನೆಯದಾಗಿ ನನಗೆ ಉತ್ತಮ ಅಡುಗೆಗಳನ್ನು ಮಾಡಲು ಮಾತ್ರ ಗೊತ್ತು. ನೃಪತೇ! ಹಿಂದೆ ನೃಪ ಯುಧಿಷ್ಠಿರನೂ ಕೂಡ ಅವೆಲ್ಲವನ್ನೂ ಆಸ್ವಾದಿಸುತ್ತಿದ್ದ.
04007008a ಬಲೇನ ತುಲ್ಯಶ್ಚ ನ ವಿದ್ಯತೇ ಮಯಾ। ನಿಯುದ್ಧಶೀಲಶ್ಚ ಸದೈವ ಪಾರ್ಥಿವ।
04007008c ಗಜೈಶ್ಚ ಸಿಂಹೈಶ್ಚ ಸಮೇಯಿವಾನಹಂ। ಸದಾ ಕರಿಷ್ಯಾಮಿ ತವಾನಘ ಪ್ರಿಯಂ।।
ಪಾರ್ಥಿವ! ಬಲದಲ್ಲಿ ನನ್ನ ಸರಿಸಮನಾದವರೂ ಯಾರೂ ಇಲ್ಲ, ಮತ್ತು ನಾನು ಯಾವಾಗಲೂ ಮಲ್ಲಯುದ್ಧದಲ್ಲಿ ತೊಡಗುತ್ತೇನೆ. ಅನಘ! ಆನೆ ಸಿಂಹಗಳನ್ನು ಎದುರಿಸಿ ಹೋರಾಡುವ ನಾನು ನಿನಗೆ ಯಾವಾಗಲೂ ಪ್ರಿಯವಾದುದ್ದನ್ನೇ ಮಾಡುವೆ.”
04007009 ವಿರಾಟ ಉವಾಚ।
04007009a ದದಾಮಿ ತೇ ಹಂತ ವರಂ ಮಹಾನಸೇ। ತಥಾ ಚ ಕುರ್ಯಾಃ ಕುಶಲಂ ಹಿ ಭಾಷಸೇ।
04007009c ನ ಚೈವ ಮನ್ಯೇ ತವ ಕರ್ಮ ತತ್ಸಮಂ। ಸಮುದ್ರನೇಮಿಂ ಪೃಥಿವೀಂ ತ್ವಮರ್ಹಸಿ।।
ವಿರಾಟನು ಹೇಳಿದನು: “ನಿನಗೆ ನಾನು ವರವನ್ನು ನೀಡುತ್ತೇನೆ. ರಾಜಭವನದ ಅಡುಗೆಮನೆಯಲ್ಲಿ ನಿನಗೆ ಮನಬಂದಂತೆ ಮಾಡಿಕೊಂಡಿರು. ನೀನು ಬಹಳ ಕುಶಲವಾಗಿ ಮಾತನಾಡುತ್ತೀಯೆ. ಈ ಕೆಲಸವು ನಿನಗೆ ಸರಿಸಮನಾದುದೆಂದು ನನಗನ್ನಿಸುವುದಿಲ್ಲ. ನೀನು ಸಮುದ್ರವೇ ದಡವಾಗಿರುವ ಭೂಮಿಗೆ ಅರ್ಹನಾಗಿದ್ದೀಯೆ.
04007010a ಯಥಾ ಹಿ ಕಾಮಸ್ತವ ತತ್ತಥಾ ಕೃತಂ। ಮಹಾನಸೇ ತ್ವಂ ಭವ ಮೇ ಪುರಸ್ಕೃತಃ।
04007010c ನರಾಶ್ಚ ಯೇ ತತ್ರ ಮಮೋಚಿತಾಃ ಪುರಾ। ಭವಸ್ವ ತೇಷಾಮಧಿಪೋ ಮಯಾ ಕೃತಃ।।
ನೀನು ಬಯಸಿದಂತೆಯೇ ಮಾಡಿದ್ದೇನೆ. ನನ್ನಿಂದ ಪುರಸ್ಕೃತನಾಗಿ ಅಡುಗೆಮನೆಯಲ್ಲಿ ಇರು. ನಿನಗಿಂತ ಮೊದಲು ನಿಯೋಜಿಸಿದವರಿಗೆ ನೀನು ಮುಖ್ಯಸ್ಥನಾಗಿ ನನ್ನಿಂದ ನೇಮಕಗೊಂಡಿರು.””
04007011 ವೈಶಂಪಾಯನ ಉವಾಚ।
04007011a ತಥಾ ಸ ಭೀಮೋ ವಿಹಿತೋ ಮಹಾನಸೇ। ವಿರಾಟರಾಜ್ಞೋ ದಯಿತೋಽಭವದ್ದೃಢಂ।
04007011c ಉವಾಸ ರಾಜನ್ನ ಚ ತಂ ಪೃಥಗ್ಜನೋ। ಬುಬೋಧ ತತ್ರಾನುಚರಶ್ಚ ಕಶ್ಚನ।।
ವೈಶಂಪಾಯನನು ಹೇಳಿದನು: “ರಾಜನ್! ಹೀಗೆ ಭೀಮನು ರಾಜಭವನದ ಅಡುಗೆಮನೆಯಲ್ಲಿ ನೇಮಕಗೊಂಡು ವಿರಾಟರಾಜನಿಗೆ ತುಂಬಾ ಪ್ರಿಯನಾಗಿ ವಾಸಮಾಡುತ್ತಿದ್ದನು. ಅಲ್ಲಿ ಅವನನ್ನು ಸಾಮಾನ್ಯ ಪ್ರಜೆಗಳಾಗಲೀ ರಾಜನ ಅನುಚರರಾಗಲೀ ಗುರುತಿಸಲಿಲ್ಲ.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ವಿರಾಟಪರ್ವಣಿ ವೈರಾಟಪರ್ವಣಿ ಪುರಪ್ರವೇಶೇ ಭೀಮಪ್ರವೇಶೋ ನಾಮ ಸಪ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದ ವಿರಾಟಪರ್ವದಲ್ಲಿ ವೈರಾಟಪರ್ವದಲ್ಲಿ ಪುರಪ್ರವೇಶದಲ್ಲಿ ಭೀಮಪ್ರವೇಶವೆನ್ನುವ ಏಳನೆಯ ಅಧ್ಯಾಯವು.