001 ಯುಧಿಷ್ಠಿರಾದಿಮಂತ್ರಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ವೈರಾಟ ಪರ್ವ

ಅಧ್ಯಾಯ 1

ಸಾರ

ಅಜ್ಞಾತವರ್ಷವನ್ನು ಎಲ್ಲಿ ಕಳೆಯಬಹುದೆಂದು ಕೇಳಲು ಅರ್ಜುನನು ಯುಧಿಷ್ಠಿರನಿಗೆ ವಿರಾಟನಗರಿಯನ್ನು ಸೂಚಿಸುವುದು (1-10). ತಾನು ಪಗಡೆಯಾಟದಲ್ಲಿ ನಿಪುಣನೂ ವಿನೋದಪ್ರಿಯನೂ ಆದ ಕಂಕ ಎಂಬ ಹೆಸರಿನ ದ್ವಿಜನಾಗಿ ವಿರಾಟನಲ್ಲಿರುತ್ತೇನೆಂದು ಯುಧಿಷ್ಠಿರನು ಹೇಳುವುದು (11-23)

04001001 ಜನಮೇಜಯ ಉವಾಚ।
04001001a ಕಥಂ ವಿರಾಟನಗರೇ ಮಮ ಪೂರ್ವಪಿತಾಮಹಾಃ।
04001001c ಅಜ್ಞಾತವಾಸಮುಷಿತಾ ದುರ್ಯೋಧನಭಯಾರ್ದಿತಾಃ।।

ಜನಮೇಜಯನು ಹೇಳಿದನು: “ದುರ್ಯೋಧನನ ಭಯದಿಂದ ಭಾದಿತ ನನ್ನ ಪೂರ್ವಪಿತಾಮಹರು ವಿರಾಟನಗರದಲ್ಲಿ ಹೇಗೆ ಅಜ್ಞಾತವಾಸವನ್ನು ಕಳೆದರು?”

04001002 ವೈಶಂಪಾಯನ ಉವಾಚ।
04001002a ತಥಾ ತು ಸ ವರಾನ್ಲಬ್ಧ್ವಾ ಧರ್ಮಾದ್ಧರ್ಮಭೃತಾಂ ವರಃ।
04001002c ಗತ್ವಾಶ್ರಮಂ ಬ್ರಾಹ್ಮಣೇಭ್ಯ ಆಚಖ್ಯೌ ಸರ್ವಮೇವ ತತ್।।

ವೈಶಂಪಾಯನನು ಹೇಳಿದನು: “ಧರ್ಮಭೃತರಲ್ಲಿ ಶ್ರೇಷ್ಠ ಯುಧಿಷ್ಠಿರನು ಹೀಗೆ ಧರ್ಮನಿಂದ ವರಗಳನ್ನು ಪಡೆದು ಆಶ್ರಮಕ್ಕೆ ತೆರಳಿ ಬ್ರಾಹ್ಮಣರಿಗೆ ನಡೆದುದೆಲ್ಲವನ್ನೂ ವರದಿಮಾಡಿದನು.

04001003a ಕಥಯಿತ್ವಾ ತು ತತ್ಸರ್ವಂ ಬ್ರಾಹ್ಮಣೇಭ್ಯೋ ಯುಧಿಷ್ಠಿರಃ।
04001003c ಅರಣೀಸಹಿತಂ ತಸ್ಮೈ ಬ್ರಾಹ್ಮಣಾಯ ನ್ಯವೇದಯತ್।।

ಅದೆಲ್ಲವನ್ನೂ ಬ್ರಾಹ್ಮಣರಿಗೆ ಹೇಳಿದ ಯುಧಿಷ್ಠಿರನು ಅರಣೀಸಹಿತ ಕಾಷ್ಠವನ್ನು ಬ್ರಾಹ್ಮಣನಿಗೆ ಒಪ್ಪಿಸಿದನು.

04001004a ತತೋ ಯುಧಿಷ್ಠಿರೋ ರಾಜಾ ಧರ್ಮಪುತ್ರೋ ಮಹಾಮನಾಃ।
04001004c ಸಂನಿವರ್ತ್ಯಾನುಜಾನ್ಸರ್ವಾನಿತಿ ಹೋವಾಚ ಭಾರತ।।

ಭಾರತ! ನಂತರ ಮಹಾಮನ ಧರ್ಮಪುತ್ರ ರಾಜ ಯುಧಿಷ್ಠಿರನು ತನ್ನ ಅನುಜರೆಲ್ಲರನ್ನೂ ಕರೆದು ಹೇಳಿದನು:

04001005a ದ್ವಾದಶೇಮಾನಿ ವರ್ಷಾಣಿ ರಾಷ್ಟ್ರಾದ್ವಿಪ್ರೋಷಿತಾ ವಯಂ।
04001005c ತ್ರಯೋದಶೋಽಯಂ ಸಂಪ್ರಾಪ್ತಃ ಕೃಚ್ಛ್ರಃ ಪರಮದುರ್ವಸಃ।।

“ರಾಷ್ಟ್ರದಿಂದ ಹೊರಹಾಕಲ್ಪಟ್ಟು ಹನ್ನೆರಡು ವರ್ಷಗಳು ಕಳೆದವು. ಈಗ ಪರಮದುರ್ವಸ ಕಷ್ಟಕರ ಹದಿಮೂರನೆಯ ವರ್ಷವು ಬಂದಿದೆ.

04001006a ಸ ಸಾಧು ಕೌಂತೇಯ ಇತೋ ವಾಸಮರ್ಜುನ ರೋಚಯ।
04001006c ಯತ್ರೇಮಾ ವಸತೀಃ ಸರ್ವಾ ವಸೇಮಾವಿದಿತಾಃ ಪರೈಃ।।

ಕೌಂತೇಯ ಅರ್ಜುನ! ಶತ್ರುಗಳಿಗೆ ತಿಳಿಯದಂತೆ ನಾವೆಲ್ಲರೂ ವಾಸಿಸಬಹುದಾದಂಥ ವಾಸಸ್ಥಳವೊಂದನ್ನು ಆರಿಸು.”

04001007 ಅರ್ಜುನ ಉವಾಚ।
04001007a ತಸ್ಯೈವ ವರದಾನೇನ ಧರ್ಮಸ್ಯ ಮನುಜಾಧಿಪ।
04001007c ಅಜ್ಞಾತಾ ವಿಚರಿಷ್ಯಾಮೋ ನರಾಣಾಂ ಭರತರ್ಷಭ।।

ಅರ್ಜುನನು ಹೇಳಿದನು: “ಮನುಜಾಧಿಪ! ಭರತರ್ಷಭ! ಧರ್ಮನ ವರದಾನದಿಂದ ಮಾತ್ರ ನಾವು ನರರಿಗೆ ತಿಳಿಯದಂತೆ ಸಂಚರಿಸಬಲ್ಲೆವು.

04001008a ಕಿಂ ತು ವಾಸಾಯ ರಾಷ್ಟ್ರಾಣಿ ಕೀರ್ತಯಿಷ್ಯಾಮಿ ಕಾನಿ ಚಿತ್।
04001008c ರಮಣೀಯಾನಿ ಗುಪ್ತಾನಿ ತೇಷಾಂ ಕಿಂ ಚಿತ್ಸ್ಮ ರೋಚಯ।।

ಆದರೆ, ರಮಣಿಯವೂ ಗೌಪ್ಯವಾಗಿರಬಲ್ಲವೂ ಆದ ಕೆಲವು ರಾಷ್ಟ್ರಗಳನ್ನು ಹೇಳುತ್ತೇನೆ. ಅವುಗಳಲ್ಲಿ ನಿನಗಿಷ್ಟವಾದುದನ್ನು ಆರಿಸಿಕೊಳ್ಳಬಹುದು.

04001009a ಸಂತಿ ರಮ್ಯಾ ಜನಪದಾ ಬಹ್ವನ್ನಾಃ ಪರಿತಃ ಕುರೂನ್।
04001009c ಪಾಂಚಾಲಾಶ್ಚೇದಿಮತ್ಸ್ಯಾಶ್ಚ ಶೂರಸೇನಾಃ ಪಟಚ್ಚರಾಃ।।
04001009e ದಶಾರ್ಣಾ ನವರಾಷ್ಟ್ರಂ ಚ ಮಲ್ಲಾಃ ಶಾಲ್ವಾ ಯುಗಂಧರಾಃ।।

ಕುರುದೇಶವನ್ನು ಸುತ್ತುವರೆದ ಒಂಭತ್ತು ಶ್ರೀಮಂತ, ರಮ್ಯ ರಾಷ್ಟ್ರ-ಜನಪದಗಳಿವೆ: ಪಾಂಚಾಲ, ಚೇದಿ, ಮತ್ಯ್ಸ, ಶೂರಸೇನ, ಪಟಚ್ಚರ, ದಶಾರ್ಹ, ಮಲ್ಲ, ಶಾಲ್ವ, ಮತ್ತು ಯುಗಂಧರ.

04001010a ಏತೇಷಾಂ ಕತಮೋ ರಾಜನ್ನಿವಾಸಸ್ತವ ರೋಚತೇ।
04001010c ವತ್ಸ್ಯಾಮೋ ಯತ್ರ ರಾಜೇಂದ್ರ ಸಂವತ್ಸರಮಿಮಂ ವಯಂ।।

ರಾಜನ್! ರಾಜೇಂದ್ರ! ಇವುಗಳಲ್ಲಿ ನಿನಗೆ ಯಾವುದು ಇಷ್ಟವಾಗುತ್ತದೆಯೋ ಅಲ್ಲಿಯೇ ನಾವು ಈ ಸಂವತ್ಸರವನ್ನು ಕಳೆಯೋಣ.”

04001011 ಯುಧಿಷ್ಠಿರ ಉವಾಚ।
04001011a ಏವಮೇತನ್ಮಹಾಬಾಹೋ ಯಥಾ ಸ ಭಗವಾನ್ಪ್ರಭುಃ।
04001011c ಅಬ್ರವೀತ್ಸರ್ವಭೂತೇಶಸ್ತತ್ತಥಾ ನ ತದನ್ಯಥಾ।।

ಯುಧಿಷ್ಠಿರನು ಹೇಳಿದನು:“ಮಹಾಬಾಹೋ! ಇದು ಸರಿ. ಆ ಸರ್ವಭೂತೇಶ ಭಗವಾನ್ ಪ್ರಭುವು ಹೇಳಿದುದಕ್ಕಿಂತ ಬೇರೆಯದಾಗಿ ಆಗುವುದಿಲ್ಲ.

04001012a ಅವಶ್ಯಂ ತ್ವೇವ ವಾಸಾರ್ಥಂ ರಮಣೀಯಂ ಶಿವಂ ಸುಖಂ।
04001012c ಸಮ್ಮಂತ್ರ್ಯ ಸಹಿತೈಃ ಸರ್ವೈರ್ದ್ರಷ್ಟವ್ಯಮಕುತೋಭಯಂ।।

ನಾವೆಲ್ಲರೂ ಒಟ್ಟಾಗಿ ಆಲೋಚಿಸಿ ವಾಸಕ್ಕಾಗಿ ರಮಣೀಯವೂ, ಮಂಗಲಕರವೂ, ಸುಖಕರವೂ, ಎಲ್ಲ ಕಡೆಗಳಿಂದ ನಿರ್ಭಯವೂ ಆಗಿರುವ ಸ್ಥಳವನ್ನು ಆರಿಸುವುದು ಅವಶ್ಯಕ.

04001013a ಮತ್ಸ್ಯೋ ವಿರಾಟೋ ಬಲವಾನಭಿರಕ್ಷೇತ್ಸ ಪಾಂಡವಾನ್।
04001013c ಧರ್ಮಶೀಲೋ ವದಾನ್ಯಶ್ಚ ವೃದ್ಧಶ್ಚ ಸುಮಹಾಧನಃ।।

ಧರ್ಮಶೀಲನೂ, ಬಲವಂತನೂ, ಉದಾರನೂ, ಮಹಾಧನವಂತನೂ ಆದ ವೃದ್ಧ ಮತ್ಸ್ಯ ವಿರಾಟನು ಪಾಂಡವರನ್ನು ರಕ್ಷಿಸಬಲ್ಲನು.

04001014a ವಿರಾಟನಗರೇ ತಾತ ಸಂವತ್ಸರಮಿಮಂ ವಯಂ।
04001014c ಕುರ್ವಂತಸ್ತಸ್ಯ ಕರ್ಮಾಣಿ ವಿಹರಿಷ್ಯಾಮ ಭಾರತ।।

ಮಗು ಭಾರತ! ಅವನ ಕೆಲಸಗಳನ್ನು ಮಾಡುತ್ತಾ ನಾವು ವಿರಾಟನಗರದಲ್ಲಿ ಈ ಸಂವತ್ಸರವನ್ನು ಕಳೆಯೋಣ.

04001015a ಯಾನಿ ಯಾನಿ ಚ ಕರ್ಮಾಣಿ ತಸ್ಯ ಶಕ್ಷ್ಯಾಮಹೇ ವಯಂ।
04001015c ಕರ್ತುಂ ಯೋ ಯತ್ಸ ತತ್ಕರ್ಮ ಬ್ರವೀತು ಕುರುನಂದನಾಃ।।

ಕುರುನಂದನರೇ! ನಾವು ಯಾವ ಯಾವ ಕೆಲಸಗಳನ್ನು ಮಾಡಬಲ್ಲೆವು ಮತ್ತು ಏನೇನು ಕೆಲಸಗಳನ್ನು ಮಾಡಬೇಕು ಎನ್ನುವುದನ್ನು ಹೇಳಿ.”

04001016 ಅರ್ಜುನ ಉವಾಚ।
04001016a ನರದೇವ ಕಥಂ ಕರ್ಮ ರಾಷ್ಟ್ರೇ ತಸ್ಯ ಕರಿಷ್ಯಸಿ।
04001016c ವಿರಾಟನೃಪತೇಃ ಸಾಧೋ ರಂಸ್ಯಸೇ ಕೇನ ಕರ್ಮಣಾ।।

ಅರ್ಜುನನು ಹೇಳಿದನು: “ನರದೇವ! ಸಾಧುವೇ! ವಿರಾಟನೃಪತಿಯ ರಾಷ್ಟ್ರದಲ್ಲಿ ನೀನು ಯಾವ ಕೆಲಸವನ್ನು ಮಾಡುತ್ತೀಯೆ? ಯಾವ ಕೆಲಸದಲ್ಲಿ ನಿನಗೆ ಆಸಕ್ತಿಯಿದೆ?

04001017a ಮೃದುರ್ವದಾನ್ಯೋ ಹ್ರೀಮಾಂಶ್ಚ ಧಾರ್ಮಿಕಃ ಸತ್ಯವಿಕ್ರಮಃ।
04001017c ರಾಜನ್‌ ಸ್ತ್ವಮಾಪದಾ ಕ್ಲಿಷ್ಟಃ ಕಿಂ ಕರಿಷ್ಯಸಿ ಪಾಂಡವ।।

ಕಷ್ಟದ ಸ್ಥಿತಿಯಲ್ಲಿರುವ ಮೃದು, ಉದಾರ, ಲಜ್ಜಾನ್ವಿತ, ಧಾರ್ಮಿಕ, ಸತ್ಯವಿಕ್ರಮ ಪಾಂಡವ ರಾಜ! ನೀನು ಏನು ಮಾಡುವೆ?

04001018a ನ ದುಃಖಮುಚಿತಂ ಕಿಂ ಚಿದ್ರಾಜನ್ವೇದ ಯಥಾ ಜನಃ।
04001018c ಸ ಇಮಾಮಾಪದಂ ಪ್ರಾಪ್ಯ ಕಥಂ ಘೋರಾಂ ತರಿಷ್ಯಸಿ।।

ರಾಜನ್! ಇತರ ಜನರಂತೆ ನೀನು ಇಂಥಹ ಕಷ್ಟವನ್ನು ಸ್ವಲ್ಪವೂ ಅರಿತವನಲ್ಲ. ಒದಗಿರುವ ಈ ಘೋರ ಆಪತ್ತನ್ನು ಹೇಗೆ ದಾಟುವೆ?”

04001019 ಯುಧಿಷ್ಠಿರ ಉವಾಚ।
04001019a ಶೃಣುಧ್ವಂ ಯತ್ಕರಿಷ್ಯಾಮಿ ಕರ್ಮ ವೈ ಕುರುನಂದನಾಃ।
04001019c ವಿರಾಟಮನುಸಂಪ್ರಾಪ್ಯ ರಾಜಾನಂ ಪುರುಷರ್ಷಭಂ।।

ಯುಧಿಷ್ಠಿರನು ಹೇಳಿದನು: “ಕುರುನಂದನರೇ! ಪುರುಷರ್ಷಭ ರಾಜ ವಿರಾಟನ ಬಳಿ ಸೇರಿ ಏನು ಕೆಲಸವನ್ನು ಮಾಡುತ್ತೇನೆ ಎನ್ನುವುದನ್ನು ಕೇಳಿ.

04001020a ಸಭಾಸ್ತಾರೋ ಭವಿಷ್ಯಾಮಿ ತಸ್ಯ ರಾಜ್ಞೋ ಮಹಾತ್ಮನಃ।
04001020c ಕಂಕೋ ನಾಮ ದ್ವಿಜೋ ಭೂತ್ವಾ ಮತಾಕ್ಷಃ ಪ್ರಿಯದೇವಿತಾ।।

ಪಗಡೆಯಾಟದಲ್ಲಿ ನಿಪುಣನೂ ವಿನೋದಪ್ರಿಯನೂ ಆದ ಕಂಕ ಎಂಬ ಹೆಸರಿನ ದ್ವಿಜನಾಗಿ ಆ ಮಹಾತ್ಮ ರಾಜನ ಸಭಾಸದನಾಗಿರುತ್ತೇನೆ.

04001021a ವೈಡೂರ್ಯಾನ್ಕಾಂಚನಾನ್ದಾಂತಾನ್ಫಲೈರ್ಜ್ಯೋತೀರಸೈಃ ಸಹ।
04001021c ಕೃಷ್ಣಾಕ್ಷಾಽಲ್ಲೋಹಿತಾಕ್ಷಾಂಶ್ಚ ನಿರ್ವರ್ತ್ಸ್ಯಾಮಿ ಮನೋರಮಾನ್।।

ವೈಡೂರ್ಯ, ಕಾಂಚನ ಮತ್ತು ದಂತಗಳಿಂದ ಮಾಡಿದ ಹೊಳೆಯುವ ಕಪ್ಪು, ಕೆಂಪು, ಹಳದಿ, ಮತ್ತು ಹಸಿರು ಬಣ್ಣದ ಪಗಡೆ ಕಾಯಿಗಳನ್ನು ನಡೆಸುತ್ತೇನೆ.

04001022a ಆಸಂ ಯುಧಿಷ್ಠಿರಸ್ಯಾಹಂ ಪುರಾ ಪ್ರಾಣಸಮಃ ಸಖಾ।
04001022c ಇತಿ ವಕ್ಷ್ಯಾಮಿ ರಾಜಾನಂ ಯದಿ ಮಾಮನುಯೋಕ್ಷ್ಯತೇ।।

ರಾಜನು ಕೇಳಿದರೆ, ಹಿಂದೆ ನಾನು ಯುಧಿಷ್ಠಿರನ ಪ್ರಾಣಸಖನಂತಿದ್ದೆ ಎಂದು ಹೇಳುತ್ತೇನೆ.

04001023a ಇತ್ಯೇತದ್ವೋ ಮಯಾಖ್ಯಾತಂ ವಿಹರಿಷ್ಯಾಮ್ಯಹಂ ಯಥಾ।
04001023c ವೃಕೋದರ ವಿರಾಟೇ ತ್ವಂ ರಂಸ್ಯಸೇ ಕೇನ ಕರ್ಮಣಾ।।

ನಾನು ಹೇಗೆ ವಾಸಿಸುವೆನು ಎಂದು ಹೇಳಿದೆ. ವೃಕೋದರ! ವಿರಾಟನಲ್ಲಿ ನೀನು ಯಾವ ಕೆಲಸ ಮಾಡಲು ಇಚ್ಛಿಸುವೆ?”

ಸಮಾಪ್ತಿ

ಇತಿ ಶ್ರೀಮಹಾಭಾರತೇ ವಿರಾಟಪರ್ವಣಿ ವೈರಾಟಪರ್ವಣಿ ಯುಧಿಷ್ಠಿರಾದಿಮಂತ್ರಣೇ ಪ್ರಥಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದ ವಿರಾಟಪರ್ವದಲ್ಲಿ ವೈರಾಟಪರ್ವದಲ್ಲಿ ಯುಧಿಷ್ಠಿರ ಮೊದಲಾದವರ ಸಮಾಲೋಚನೆಯಲ್ಲಿ ಮೊದಲನೆಯ ಅಧ್ಯಾಯವು.