ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಘೋಷಯಾತ್ರಾ ಪರ್ವ
ಅಧ್ಯಾಯ 240
ಸಾರ
ಪಾಂಡವರನ್ನು ಕೊಲ್ಲಲು ನಾವು ಸಹಾಯ ಮಾಡುತ್ತೇವೆ, ದುಃಖಿಸಬೇಡ, ನೀನೇ ಈ ಭೂಮಿಯನ್ನು ಆಳುತ್ತೀಯೆ, ನೀನು ಸತ್ತರೆ ನಮ್ಮ ಪಕ್ಷವು ದುರ್ಬಲವಾಗುತ್ತದೆ ಎಂದೆಲ್ಲ ಹೇಳಿ ದೈತ್ಯ-ದಾನವರು ದುರ್ಯೋಧನನಿಗೆ ಆಶ್ವಾಸನೆ ನೀಡುವುದು; ಹುರಿದುಂಬಿಸುವುದು; ಅವನನ್ನು ಪುನಃ ಹಿಂದಿರುಗಿಸುವುದು (1-28). ದುರ್ಯೋಧನನು ಪಾಂಡವರನ್ನು ಜಯಿಸುತ್ತೇನೆಂದು ದೃಢನಾದುದು (29-31). ಕರ್ಣನು ಅರ್ಜುನನನ್ನು ವಧಿಸುವ ಕ್ರೂರ ನಿಶ್ಚಯವನ್ನು ಮಾಡಿದುದು (32-39). ದುರ್ಯೋಧನನು ಪ್ರಯಾಣವನ್ನು ಮುಂದುವರೆಸಿದುದು (40-47).
03240001 ದಾನವಾ ಊಚುಃ।
03240001a ಭೋಃ ಸುಯೋಧನ ರಾಜೇಂದ್ರ ಭರತಾನಾಂ ಕುಲೋದ್ವಹ।
03240001c ಶೂರೈಃ ಪರಿವೃತೋ ನಿತ್ಯಂ ತಥೈವ ಚ ಮಹಾತ್ಮಭಿಃ।।
ದಾನವರು ಹೇಳಿದರು: “ಭೋ! ಸುಯೋಧನ! ರಾಜೇಂದ್ರ! ಭರತರ ಕುಲೋದ್ವಹ! ನೀನು ನಿತ್ಯವೂ ಶೂರರಿಂದ ಮತ್ತು ಮಹಾತ್ಮರಿಂದ ಸುತ್ತುವರೆದಿದ್ದೀಯೆ.
03240002a ಅಕಾರ್ಷೀಃ ಸಾಹಸಮಿದಂ ಕಸ್ಮಾತ್ಪ್ರಾಯೋಪವೇಶನಂ।
03240002c ಆತ್ಮತ್ಯಾಗೀ ಹ್ಯವಾಗ್ಯಾತಿ ವಾಚ್ಯತಾಂ ಚಾಯಶಸ್ಕರೀಂ।।
ಪ್ರಾಯೋಪವೇಶ ಮಾಡುವಂಥಹ ಈ ಸಾಹಸವನ್ನು ನೀನು ಏಕೆ ಕೈಗೊಂಡಿರುವೆ? ಆತ್ಮತ್ಯಾಗಿಯು ನರಕಕ್ಕೆ ಹೋಗುತ್ತಾನೆ ಮತ್ತು ಅಯಶಸ್ಕರವಾದ ಮಾತುಗಳಿಗೊಳಗಾಗುತ್ತಾನೆ.
03240003a ನ ಹಿ ಕಾರ್ಯವಿರುದ್ಧೇಷು ಬಹ್ವಪಾಯೇಷು ಕರ್ಮಸು।
03240003c ಮೂಲಘಾತಿಷು ಸಜ್ಜಂತೇ ಬುದ್ಧಿಮಂತೋ ಭವದ್ವಿಧಾಃ।।
ಬುದ್ಧಿವಂತರು ವಿರುದ್ಧವಾಗಿರುವ ಕಾರ್ಯದಲ್ಲಿ, ಮೂಲವನ್ನೇ ನಾಶಮಾಡುವ ಕಾರ್ಯದಲ್ಲಿ ಕೈಹಾಕಲು ಬಯಸುವುದಿಲ್ಲ.
03240004a ನಿಯಚ್ಚೈತಾಂ ಮತಿಂ ರಾಜನ್ಧರ್ಮಾರ್ಥಸುಖನಾಶಿನೀಂ।
03240004c ಯಶಃಪ್ರತಾಪಧೈರ್ಯಘ್ನೀಂ ಶತ್ರೂಣಾಂ ಹರ್ಷವರ್ಧನೀಂ।।
ರಾಜನ್! ಧರ್ಮ, ಅರ್ಥ ಮತ್ತು ಸುಖವನ್ನು ನಾಶಪಡಿಸುವ, ಯಶಸ್ಸನ್ನು ಅಪಹರಿಸುವ, ಧೈರ್ಯವನ್ನು ಕೊಲ್ಲುವ ಮತ್ತು ಶತ್ರುಗಳ ಹರ್ಷವನ್ನು ವೃದ್ಧಿಸುವ ಈ ನಿಶ್ಚಯವನ್ನು ಹಿಂದೆ ತೆಗೆದುಕೋ!
03240005a ಶ್ರೂಯತಾಂ ಚ ಪ್ರಭೋ ತತ್ತ್ವಂ ದಿವ್ಯತಾಂ ಚಾತ್ಮನೋ ನೃಪ।
03240005c ನಿರ್ಮಾಣಂ ಚ ಶರೀರಸ್ಯ ತತೋ ಧೈರ್ಯಮವಾಪ್ನುಹಿ।।
ಪ್ರಭೋ! ನೃಪ! ನಿನ್ನ ದಿವ್ಯ ಆತ್ಮ ಮತ್ತು ಶರೀರಗಳ ನಿರ್ಮಾಣದ ಕುರಿತು ಕೇಳಿದ ನಂತರ ನೀನು ಧೈರ್ಯವನ್ನು ತಳೆಯುವೆ.
03240006a ಪುರಾ ತ್ವಂ ತಪಸಾಸ್ಮಾಭಿರ್ಲಬ್ಧೋ ದೇವಾನ್ಮಹೇಶ್ವರಾತ್।
03240006c ಪೂರ್ವಕಾಯಶ್ಚ ಸರ್ವಸ್ತೇ ನಿರ್ಮಿತೋ ವಜ್ರಸಂಚಯೈಃ।।
ಹಿಂದೆ ನಮ್ಮೆಲ್ಲರ ತಪಸ್ಸಿನ ಮೂಲಕ ದೇವ ಮಹೇಶ್ವರನಿಂದ ನಿನ್ನನ್ನು ಪಡೆದಿದ್ದೆವು. ನಿನ್ನ ದೇಹದ ಮೇಲಿನ ಭಾಗವು ಎಲ್ಲವೂ ವಜ್ರದಿಂದ ನಿರ್ಮಿತವಾಗಿದೆ.
03240007a ಅಸ್ತ್ರೈರಭೇದ್ಯಃ ಶಸ್ತ್ರೈಶ್ಚಾಪ್ಯಧಃಕಾಯಶ್ಚ ತೇಽನಘ।
03240007c ಕೃತಃ ಪುಷ್ಪಮಯೋ ದೇವ್ಯಾ ರೂಪತಃ ಸ್ತ್ರೀಮನೋಹರಃ।।
ಅನಘ! ನಿನ್ನ ಈ ಅರ್ಧ ದೇಹವು ಅಸ್ತ್ರಗಳಿಂದ ಮತ್ತು ಶಸ್ತ್ರಗಳಿಂದ ಅಭೇದ್ಯವಾಗಿದೆ. ಸುಂದರವಾಗಿರುವ ಸ್ತ್ರೀಮನೋಹರವಾದ ದೇಹದ ಕೆಳಗಿನ ಭಾಗವನ್ನು ದೇವಿಯು ಪುಷ್ಪಗಳಿಂದ ಮಾಡಿದ್ದಳು.
03240008a ಏವಂ ಈಶ್ವರಸಂಯುಕ್ತಸ್ತವ ದೇಹೋ ನೃಪೋತ್ತಮ।
03240008c ದೇವ್ಯಾ ಚ ರಾಜಶಾರ್ದೂಲ ದಿವ್ಯಸ್ತ್ವಂ ಹಿ ನ ಮಾನುಷಃ।।
ನೃಪೋತ್ತಮ! ರಾಜಶಾರ್ದೂಲ! ಈ ರೀತಿಯಾಗಿ ಈಶ್ವರ ಮತ್ತು ದೇವಿಯಿಂದ ಮಾಡಲ್ಪಟ್ಟ ನಿನ್ನ ದೇಹವು ದಿವ್ಯವಾದುದು. ಮಾನುಷವಾದುದಲ್ಲ.
03240009a ಕ್ಷತ್ರಿಯಾಶ್ಚ ಮಹಾವೀರ್ಯಾ ಭಗದತ್ತಪುರೋಗಮಾಃ।
03240009c ದಿವ್ಯಾಸ್ತ್ರವಿದುಷಃ ಶೂರಾಃ ಕ್ಷಪಯಿಷ್ಯಂತಿ ತೇ ರಿಪೂನ್।।
ಭಗದತ್ತನೇ ಮೊದಲಾದ ಮಹಾವೀರ ಕ್ಷತ್ರಿಯರು ದಿವ್ಯಾಸ್ತ್ರ ವಿದುಷರೂ ಶೂರರೂ ಆದ ನಿನ್ನ ಶತ್ರುಗಳನ್ನು ಕಳೆಯುತ್ತಾರೆ.
03240010a ತದಲಂ ತೇ ವಿಷಾದೇನ ಭಯಂ ತವ ನ ವಿದ್ಯತೇ।
03240010c ಸಾಹ್ಯಾರ್ಥಂ ಚ ಹಿ ತೇ ವೀರಾಃ ಸಂಭೂತಾ ಭುವಿ ದಾನವಾಃ।।
ಆದುದರಿಂದ ನಿನ್ನ ಈ ವಿಷಾದ ಮತ್ತು ಭಯವು ಅರ್ಥವಾಗುತ್ತಿಲ್ಲವಲ್ಲ! ನಿನ್ನ ಸಹಾಯಕ್ಕಾಗಿಯೇ ವೀರ ದಾನವರು ಭುವಿಯಲ್ಲಿ ಅವತರಿಸಿದ್ದಾರೆ.
03240011a ಭೀಷ್ಮದ್ರೋಣಕೃಪಾದೀಂಶ್ಚ ಪ್ರವೇಕ್ಷ್ಯಂತ್ಯಪರೇಽಸುರಾಃ।
03240011c ಯೈರಾವಿಷ್ಟಾ ಘೃಣಾಂ ತ್ಯಕ್ತ್ವಾ ಯೋತ್ಸ್ಯಂತೇ ತವ ವೈರಿಭಿಃ।।
ಇತರ ಅಸುರರೂ ಕೂಡ ಭೀಷ್ಮ, ದ್ರೋಣ ಮತ್ತು ಕೃಪರನ್ನು ಪ್ರವೇಶಿಸುವರು. ಇವರಿಂದ ಆವಿಷ್ಟರಾದ ಅವರು ಕರುಣೆಯನ್ನು ತೊರೆದು ನಿನ್ನ ವೈರಿಗಳೊಡನೆ ಹೋರಾಡುತ್ತಾರೆ.
03240012a ನೈವ ಪುತ್ರಾನ್ನ ಚ ಭ್ರಾತೄನ್ನ ಪಿತೄನ್ನ ಚ ಬಾಂಧವಾನ್।
03240012c ನೈವ ಶಿಷ್ಯಾನ್ನ ಚ ಜ್ಞಾತೀನ್ನ ಬಾಲಾನ್ ಸ್ಥವಿರಾನ್ನ ಚ।।
03240013a ಯುಧಿ ಸಂಪ್ರಹರಿಷ್ಯಂತೋ ಮೋಕ್ಷ್ಯಂತಿ ಕುರುಸತ್ತಮ।
03240013c ನಿಃಸ್ನೇಹಾ ದಾನವಾವಿಷ್ಟಾಃ ಸಮಾಕ್ರಾಂತೇಽಂತರಾತ್ಮನಿ।।
ಕುರುಸತ್ತಮ! ದಾನವರಿಂದ ಆವಿಷ್ಟರಾಗಿ ಇವರು ಅಂತರಾತ್ಮವನ್ನು ಅತಿಕ್ರಮಿಸಿ ಯುದ್ಧದಲ್ಲಿ ಯಾರನ್ನೂ ಬಿಡದೇ - ಮಕ್ಕಳು, ಸಹೋದರರು, ತಂದೆ, ಬಾಂಧವರು, ಶಿಷ್ಯರು, ಕುಲದವರು, ಬಾಲಕರು, ವೃದ್ಧರು - ಎಲ್ಲರನ್ನೂ ಸಂಹರಿಸಿ ಮೋಕ್ಷವನ್ನು ನೀಡುತ್ತಾರೆ.
03240014a ಪ್ರಹರಿಷ್ಯಂತಿ ಬಂಧುಭ್ಯಃ ಸ್ನೇಹಮುತ್ಸೃಜ್ಯ ದೂರತಃ।
03240014c ಹೃಷ್ಟಾಃ ಪುರುಷಶಾರ್ದೂಲಾಃ ಕಲುಷೀಕೃತಮಾನಸಾಃ।
03240014e ಅವಿಜ್ಞಾನವಿಮೂಢಾಶ್ಚ ದೈವಾಚ್ಚ ವಿಧಿನಿರ್ಮಿತಾತ್।।
03240015a ವ್ಯಾಭಾಷಮಾಣಾಶ್ಚಾನ್ಯೋನ್ಯಂ ನ ಮೇ ಜೀವನ್ವಿಮೋಕ್ಷ್ಯಸೇ।
03240015c ಸರ್ವಶಸ್ತ್ರಾಸ್ತ್ರಮೋಕ್ಷೇಣ ಪೌರುಷೇ ಸಮವಸ್ಥಿತಾಃ।
03240015e ಶ್ಲಾಘಮಾನಾಃ ಕುರುಶ್ರೇಷ್ಠ ಕರಿಷ್ಯಂತಿ ಜನಕ್ಷಯಂ।।
ಕಲುಷಿತ ಮನಸ್ಸಿನವರಾಗಿ, ಅವಿಜ್ಞಾನದಿಂದ ವಿಮೂಢರಾಗಿ, ವಿಧಿನಿರ್ಮಿಸಿದ ದೈವದಂತೆ ಈ ಪುರುಷಶಾರ್ದೂಲರು ನನ್ನಿಂದ ನೀನು ಜೀವವಿದ್ದು ಹೋಗುವುದಿಲ್ಲ ಎಂದು ಅನ್ಯೋನ್ಯರಿಗೆ ಕೂಗಿ ಹೇಳುತ್ತಾ ಸ್ನೇಹವನ್ನು ದೂರ ಬಿಸಾಡಿ ಬಂಧುಗಳ ಮೇಲೆ ಪ್ರಹಾರ ಮಾಡುತ್ತಾರೆ. ಕುರುಶ್ರೇಷ್ಠ! ಎಲ್ಲ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಿ ಪೌರುಷದಿಂದ ಅನ್ಯೋನ್ಯರನ್ನು ಹೊಗಳುತ್ತಾ ಜನರನ್ನು ಕಡಿಮೆಮಾಡುತ್ತಾರೆ.
03240016a ತೇಽಪಿ ಶಕ್ತ್ಯಾ ಮಹಾತ್ಮಾನಃ ಪ್ರತಿಯೋತ್ಸ್ಯಂತಿ ಪಾಂಡವಾಃ।
03240016c ವಧಂ ಚೈಷಾಂ ಕರಿಷ್ಯಂತಿ ದೈವಯುಕ್ತಾ ಮಹಾಬಲಾಃ।।
ಆ ಮಹಾತ್ಮ ಪಾಂಡವರೂ ಕೂಡ ಶಕ್ತಿಯನ್ನುಪಯೋಗಿಸಿ ವಿರುದ್ಧವಾಗಿ ಹೋರಾಡುತ್ತಾರೆ ಮತ್ತು ದೈವದಿಂದೊಡಗೂಡಿ ಆ ಮಹಾಬಲರು ಇವರ ವಧೆಯನ್ನು ಮಾಡುತ್ತಾರೆ.
03240017a ದೈತ್ಯರಕ್ಷೋಗಣಾಶ್ಚಾಪಿ ಸಂಭೂತಾಃ ಕ್ಷತ್ರಯೋನಿಷು।
03240017c ಯೋತ್ಸ್ಯಂತಿ ಯುಧಿ ವಿಕ್ರಮ್ಯ ಶತ್ರುಭಿಸ್ತವ ಪಾರ್ಥಿವ।
03240017e ಗದಾಭಿರ್ಮುಸಲೈಃ ಖಡ್ಗೈಃ ಶಸ್ತ್ರೈರುಚ್ಚಾವಚೈಸ್ತಥಾ।।
ಪಾರ್ಥಿವ! ದೈತ್ಯ-ರಾಕ್ಷಸ ಗಣಗಳು ಕ್ಷತ್ರಿಯ ಯೋನಿಗಳಲ್ಲಿ ಹುಟ್ಟಿ ನಿನ್ನ ಶತ್ರುಗಳೊಂದಿಗೆ ಯುದ್ಧದಲ್ಲಿ ವಿಕ್ರಮದಿಂದ ಗದೆ, ಮುಸಲ, ಖಡ್ಗ, ಶಸ್ತ್ರ, ಮತ್ತು ಇನ್ನೂ ಮೇಲ್ತರದ ಆಯುಧಗಳಿಂದ ಹೋರಾಡುತ್ತಾರೆ.
03240018a ಯಚ್ಚ ತೇಽಂತರ್ಗತಂ ವೀರ ಭಯಮರ್ಜುನಸಂಭವಂ।
03240018c ತತ್ರಾಪಿ ವಿಹಿತೋಽಸ್ಮಾಭಿರ್ವಧೋಪಾಯೋಽರ್ಜುನಸ್ಯ ವೈ।।
ವೀರ ಅರ್ಜುನನಿಂದ ನಿನ್ನ ಒಳಗೆ ಹುಟ್ಟಿರುವ ಭಯವೇನಿದೆಯೋ ಅಲ್ಲಿ ಅರ್ಜುನ ವಧೆಗೆ ಕೂಡ ನಾವು ಒಂದು ಉಪಾಯವನ್ನು ಮಾಡಿದ್ದೇವೆ.
03240019a ಹತಸ್ಯ ನರಕಸ್ಯಾತ್ಮಾ ಕರ್ಣಮೂರ್ತಿಮುಪಾಶ್ರಿತಃ।
03240019c ತದ್ವೈರಂ ಸಂಸ್ಮರನ್ವೀರ ಯೋತ್ಸ್ಯತೇ ಕೇಶವಾರ್ಜುನೌ।।
ಹತನಾದ ನರಕನ ಆತ್ಮವು ಕರ್ಣನ ದೇಹದಲ್ಲಿ ನೆಲೆಸಿದೆ. ಆ ವೀರನು ವೈರವನ್ನು ನೆನಪಿಸಿಕೊಂಡು ಕೇಶವಾರ್ಜುನರೊಡನೆ ಹೋರಾಡುತ್ತಾನೆ.
03240020a ಸ ತೇ ವಿಕ್ರಮಶೌಂಡೀರೋ ರಣೇ ಪಾರ್ಥಂ ವಿಜೇಷ್ಯತಿ।
03240020c ಕರ್ಣಃ ಪ್ರಹರತಾಂ ಶ್ರೇಷ್ಠಃ ಸರ್ವಾಂಶ್ಚಾರೀನ್ಮಹಾರಥಃ।।
ಪ್ರಹರಿಗಳಲ್ಲಿ ಶ್ರೇಷ್ಠನಾದ ವಿಕ್ರಮಿ ವೀರ ಮಹಾರಥಿ ಕರ್ಣನು ಪಾರ್ಥನನ್ನು ಮತ್ತು ಎಲ್ಲ ಶತ್ರುಗಳನ್ನೂ ಗೆಲ್ಲುತ್ತಾನೆ.
03240021a ಜ್ಞಾತ್ವೈತಚ್ಚದ್ಮನಾ ವಜ್ರೀ ರಕ್ಷಾರ್ಥಂ ಸವ್ಯಸಾಚಿನಃ।
03240021c ಕುಂಡಲೇ ಕವಚಂ ಚೈವ ಕರ್ಣಸ್ಯಾಪಹರಿಷ್ಯತಿ।।
ಇವೆಲ್ಲವನ್ನೂ ತಿಳಿದಿರುವ ವಜ್ರಿ ಇಂದ್ರನು ಸವ್ಯಸಾಚಿಯ ರಕ್ಷಣೆಗಾಗಿ ಕರ್ಣನ ಕವಚ ಕುಂಡಲಗಳನ್ನು ಅಪಹರಿಸುತ್ತಾನೆ.
03240022a ತಸ್ಮಾದಸ್ಮಾಭಿರಪ್ಯತ್ರ ದೈತ್ಯಾಃ ಶತಸಹಸ್ರಶಃ।
03240022c ನಿಯುಕ್ತಾ ರಾಕ್ಷಸಾಶ್ಚೈವ ಯೇ ತೇ ಸಂಶಪ್ತಕಾ ಇತಿ।
03240022e ಪ್ರಖ್ಯಾತಾಸ್ತೇಽರ್ಜುನಂ ವೀರಂ ನಿಹನಿಷ್ಯಂತಿ ಮಾ ಶುಚಃ।।
ಆದುದರಿಂದ ಅಲ್ಲಿಯೂ ಕೂಡ ನಾವು ನೂರಾರು ಸಹಸ್ರಾರು ದೈತ್ಯ-ರಾಕ್ಷಸರನ್ನು ಸಂಶಪ್ತಕರೆಂದು ನಿಯುಕ್ತಗೊಳಿಸಿದ್ದೇವೆ. ಆ ಪ್ರಖ್ಯಾತರು ವೀರ ಅರ್ಜುನನನ್ನು ಕೊಲ್ಲುವರು. ಶೋಕಿಸಬೇಡ.
03240023a ಅಸಪತ್ನಾ ತ್ವಯಾ ಹೀಯಂ ಭೋಕ್ತವ್ಯಾ ವಸುಧಾ ನೃಪ।
03240023c ಮಾ ವಿಷಾದಂ ನಯಸ್ವಾಸ್ಮಾನ್ನೈತತ್ತ್ವಯ್ಯುಪಪದ್ಯತೇ।
03240023e ವಿನಷ್ಟೇ ತ್ವಯಿ ಚಾಸ್ಮಾಕಂ ಪಕ್ಷೋ ಹೀಯೇತ ಕೌರವ।।
ಆದುದರಿಂದ ದುಃಖಿಸಬೇಡ. ನೃಪ! ನೀನೇ ಈ ಭೂಮಿಯನ್ನು ಆಳುತ್ತೀಯೆ. ವಿಷಾದಿಸಬೇಡ. ಈ ರೀತಿಯ ನಡತೆಯು ನಿನಗೆ ಸರಿಯಲ್ಲ. ಕೌರವ! ನೀನು ಸತ್ತರೆ ನಮ್ಮ ಪಕ್ಷವು ದುರ್ಬಲವಾಗುತ್ತದೆ.
03240024a ಗಚ್ಚ ವೀರ ನ ತೇ ಬುದ್ಧಿರನ್ಯಾ ಕಾರ್ಯಾ ಕಥಂ ಚನ।
03240024c ತ್ವಮಸ್ಮಾಕಂ ಗತಿರ್ನಿತ್ಯಂ ದೇವತಾನಾಂ ಚ ಪಾಂಡವಾಃ।।
ವೀರ! ಹೋಗು. ನಿನ್ನ ಬುದ್ಧಿಯು ಎಂದೂ ಅನ್ಯ ಕಾರ್ಯಗಳತ್ತ ಹೋಗದಿರಲಿ. ಪಾಂಡವರು ದೇವತೆಗಳಿಗೆ ಹೇಗೋ ಹಾಗೆ ನೀನು ನಿತ್ಯವೂ ನಮ್ಮ ಗತಿ.””
03240025 ವೈಶಂಪಾಯನ ಉವಾಚ।
03240025a ಏವಮುಕ್ತ್ವಾ ಪರಿಷ್ವಜ್ಯ ದೈತ್ಯಾಸ್ತಂ ರಾಜಕುಂಜರಂ।
03240025c ಸಮಾಶ್ವಾಸ್ಯ ಚ ದುರ್ಧರ್ಷಂ ಪುತ್ರವದ್ದಾನವರ್ಷಭಾಃ।।
ವೈಶಂಪಾಯನನು ಹೇಳಿದನು: “ಈ ರೀತಿ ಹೇಳಿ ದಾನವರ್ಷಭ ದೈತ್ಯರು ಆ ದುರ್ಧರ್ಷ ರಾಜಕುಂಜರನನ್ನು ಆಲಂಗಿಸಿ ಸಮಾಧಾನಗೊಳಿಸಿದರು.
03240026a ಸ್ಥಿರಾಂ ಕೃತ್ವಾ ಬುದ್ಧಿಮಸ್ಯ ಪ್ರಿಯಾಣ್ಯುಕ್ತ್ವಾ ಚ ಭಾರತ।
03240026c ಗಮ್ಯತಾಮಿತ್ಯನುಜ್ಞಾಯ ಜಯಮಾಪ್ನುಹಿ ಚೇತ್ಯಥ।।
ಭಾರತ! ಪ್ರೀತಿಯ ಮಾತುಗಳನ್ನಾಡಿ ಅವನ ಬುದ್ಧಿಯನ್ನು ಸ್ಥಿರಗೊಳಿಸಿ “ಹೋಗು! ಜಯವನ್ನು ಪಡೆ!” ಎಂದು ಹೇಳಿ ಹೋಗಲು ಅನುಜ್ಞೆಯನ್ನಿತ್ತರು.
03240027a ತೈರ್ವಿಸೃಷ್ಟಂ ಮಹಾಬಾಹುಂ ಕೃತ್ಯಾ ಸೈವಾನಯತ್ಪುನಃ।
03240027c ತಮೇವ ದೇಶಂ ಯತ್ರಾಸೌ ತದಾ ಪ್ರಾಯಮುಪಾವಿಶತ್।।
ಆ ಮಹಾಬಾಹುವನ್ನು ಅವರು ಬೀಳ್ಕೊಟ್ಟಾಗ ಆ ದೇವಿಯೇ ಪುನಃ ಅವನನ್ನು ಎಲ್ಲಿ ಪ್ರಾಯೋಪವಿಷ್ಟನಾಗಿ ಕುಳಿತಿದ್ದನೋ ಅಲ್ಲಿಗೆ ತಂದು ಬಿಟ್ಟಳು.
03240028a ಪ್ರತಿನಿಕ್ಷಿಪ್ಯ ತಂ ವೀರಂ ಕೃತ್ಯಾ ಸಮಭಿಪೂಜ್ಯ ಚ।
03240028c ಅನುಜ್ಞಾತಾ ಚ ರಾಜ್ಞಾ ಸಾ ತತ್ರೈವಾಂತರಧೀಯತ।।
ಆ ವೀರನನ್ನು ಹಿಂದಿರುಗಿಟ್ಟು, ಅವನನ್ನು ಗೌರವಿಸಿ, ರಾಜನಿಂದ ಅಪ್ಪಣೆಯನ್ನು ಪಡೆದು ಅವಳು ಅಲ್ಲಿಯೇ ಅಂತರ್ಧಾನಳಾದಳು.
03240029a ಗತಾಯಾಮಥ ತಸ್ಯಾಂ ತು ರಾಜಾ ದುರ್ಯೋಧನಸ್ತದಾ।
03240029c ಸ್ವಪ್ನಭೂತಮಿದಂ ಸರ್ವಮಚಿಂತಯತ ಭಾರತ।
03240029e ವಿಜೇಷ್ಯಾಮಿ ರಣೇ ಪಾಂಡೂನಿತಿ ತಸ್ಯಾಭವನ್ಮತಿಃ।।
ಭಾರತ! ಅವಳು ಹೊರಟು ಹೋದ ನಂತರ ರಾಜಾ ದುರ್ಯೋಧನನು ಇವೆಲ್ಲವೂ ಸ್ವಪ್ನವೆಂದು ಯೋಚಿಸಿದನು. ನಾನು ರಣದಲ್ಲಿ ಪಾಂಡವರನ್ನು ಜಯಿಸುತ್ತೇನೆ ಎಂದು ಅವನು ಯೋಚಿಸಿದನು.
03240030a ಕರ್ಣಂ ಸಂಶಪ್ತಕಾಂಶ್ಚೈವ ಪಾರ್ಥಸ್ಯಾಮಿತ್ರಘಾತಿನಃ।
03240030c ಅಮನ್ಯತ ವಧೇ ಯುಕ್ತಾನ್ಸಮರ್ಥಾಂಶ್ಚ ಸುಯೋಧನಃ।।
ಕರ್ಣ ಮತ್ತು ಸಂಶಪ್ತಕರು ಅಮಿತ್ರಘ್ನ ಪಾರ್ಥನ ವಧೆಗೆ ಸಮರ್ಥರು ಮತ್ತು ಸರಿಯಾದವರು ಎಂದು ಸುಯೋಧನನು ಅಲೋಚಿಸಿದನು.
03240031a ಏವಮಾಶಾ ದೃಢಾ ತಸ್ಯ ಧಾರ್ತರಾಷ್ಟ್ರಸ್ಯ ದುರ್ಮತೇಃ।
03240031c ವಿನಿರ್ಜಯೇ ಪಾಂಡವಾನಾಮಭವದ್ಭರತರ್ಷಭ।।
ಭರತರ್ಷಭ! ಈ ಆಶಯದಿಂದ ದುರ್ಮತಿ ಧಾರ್ತರಾಷ್ಟ್ರನು ಪಾಂಡವರನ್ನು ಜಯಿಸುತ್ತೇವೆ ಎಂದು ದೃಢನಾದನು.
03240032a ಕರ್ಣೋಽಪ್ಯಾವಿಷ್ಟಚಿತ್ತಾತ್ಮಾ ನರಕಸ್ಯಾಂತರಾತ್ಮನಾ।
03240032c ಅರ್ಜುನಸ್ಯ ವಧೇ ಕ್ರೂರಾಮಕರೋತ್ಸ ಮತಿಂ ತದಾ।।
ಅದೇ ಸಮಯದಲ್ಲಿ ಚಿತ್ತ ಮತ್ತು ಆತ್ಮಗಳಲ್ಲಿ ನರಕನ ಅಂತರಾತ್ಮನಿಂದ ಆವಿಷ್ಟನಾದ ಕರ್ಣನೂ ಕೂಡ ಅರ್ಜುನನನ್ನು ವಧಿಸುವ ಕ್ರೂರ ನಿಶ್ಚಯವನ್ನು ಮಾಡಿದನು.
03240033a ಸಂಶಪ್ತಕಾಶ್ಚ ತೇ ವೀರಾ ರಾಕ್ಷಸಾವಿಷ್ಟಚೇತಸಃ।
03240033c ರಜಸ್ತಮೋಭ್ಯಾಮಾಕ್ರಾಂತಾಃ ಫಲ್ಗುನಸ್ಯ ವಧೈಷಿಣಃ।।
ರಾಕ್ಷಸರ ಚೇತನದಿಂದ ಆವಿಷ್ಟರಾದ, ರಜಸ್ಸು ತಮಗಳಿಂದ ಆಕ್ರಾಂತರಾದ ವೀರ ಸಂಶಪ್ತಕರೂ ಕೂಡ ಫಲ್ಗುನನ ವಧೆಯನ್ನು ಬಯಸಿದರು.
03240034a ಭೀಷ್ಮದ್ರೋಣಕೃಪಾದ್ಯಾಶ್ಚ ದಾನವಾಕ್ರಾಂತಚೇತಸಃ।
03240034c ನ ತಥಾ ಪಾಂಡುಪುತ್ರಾಣಾಂ ಸ್ನೇಹವಂತೋ ವಿಶಾಂ ಪತೇ।
03240034e ನ ಚಾಚಚಕ್ಷೇ ಕಸ್ಮೈ ಚಿದೇತದ್ರಾಜಾ ಸುಯೋಧನಃ।।
ವಿಶಾಂಪತೇ! ಭೀಷ್ಮ, ದ್ರೋಣ, ಕೃಪರೂ ಕೂಡ ದಾನವಾಕ್ರಂತ ಚೇತಸರಾಗಿ ಪಾಂಡುಪುತ್ರರ ಮೇಲೆ ಮೊದಲಿನಷ್ಟು ಸ್ನೇಹಭಾವವನ್ನು ತೋರಿಸಲಿಲ್ಲ. ಆದರೆ ರಾಜಾ ಸುಯೋಧನನು ಇದನ್ನು ಯಾರಿಗೂ ಹೇಳಲಿಲ್ಲ.
03240035a ದುರ್ಯೋಧನಂ ನಿಶಾಂತೇ ಚ ಕರ್ಣೋ ವೈಕರ್ತನೋಽಬ್ರವೀತ್।
03240035c ಸ್ಮಯನ್ನಿವಾಂಜಲಿಂ ಕೃತ್ವಾ ಪಾರ್ಥಿವಂ ಹೇತುಮದ್ವಚಃ।।
ರಾತ್ರಿಯು ಕಳೆಯಲು ವೈಕರ್ತನ ಕರ್ಣನು ಕೈಮುಗಿದು ನಸುನಗುತ್ತಾ ಪಾರ್ಥಿವ ದುರ್ಯೋಧನನಿಗೆ ಈ ಯುಕ್ತ ಮಾತುಗಳನ್ನಾಡಿದನು:
03240036a ನ ಮೃತೋ ಜಯತೇ ಶತ್ರೂಂ ಜೀವನ್ಭದ್ರಾಣಿ ಪಶ್ಯತಿ।
03240036c ಮೃತಸ್ಯ ಭದ್ರಾಣಿ ಕುತಃ ಕೌರವೇಯ ಕುತೋ ಜಯಃ।
03240036e ನ ಕಾಲೋಽದ್ಯ ವಿಷಾದಸ್ಯ ಭಯಸ್ಯ ಮರಣಸ್ಯ ವಾ।।
“ಮೃತನಾದವನು ಶತ್ರುಗಳನ್ನು ಜಯಿಸಲಾರ. ಜೀವಿತವಿರುವವನು ಮಾತ್ರ ಸರಿಯಾಗಿ ನೋಡಬಲ್ಲ. ಕೌರವ್ಯ! ಮೃತನಿಗೆ ಎಲ್ಲಿಯ ಒಳ್ಳೆಯದು? ಎಲ್ಲಿಯ ಜಯ? ಆದುದರಿಂದ ಇದು ವಿಷಾದಕ್ಕಾಗಲೀ, ಭಯಕ್ಕಾಗಲೀ ಮರಣಕ್ಕಾಗಲೀ ಸಮಯವಲ್ಲ.”
03240037a ಪರಿಷ್ವಜ್ಯಾಬ್ರವೀಚ್ಚೈನಂ ಭುಜಾಭ್ಯಾಂ ಸ ಮಹಾಭುಜಃ।
03240037c ಉತ್ತಿಷ್ಠ ರಾಜನ್ಕಿಂ ಶೇಷೇ ಕಸ್ಮಾಚ್ಚೋಚಸಿ ಶತ್ರುಹನ್।
03240037e ಶತ್ರೂನ್ಪ್ರತಾಪ್ಯ ವೀರ್ಯೇಣ ಸ ಕಥಂ ಮರ್ತುಮಿಚ್ಚಸಿ।।
ಆ ಮಹಾಬಾಹುವನ್ನು ಬಾಹುಗಳಿಂದ ಬಿಗಿದಪ್ಪಿ ಪುನಃ ಹೇಳಿದನು: “ರಾಜನ್! ಏಳು! ಶತ್ರುಹನ್! ಏಕೆ ಕೆಳಗೆ ಕುಳಿತಿದ್ದೀಯೆ? ಏಕೆ ಶೋಕಿಸುತ್ತಿರುವೆ? ನಿನ್ನ ವೀರ್ಯದಿಂದ ಶತ್ರುಗಳನ್ನು ಸುಟ್ಟು ಏಕೆ ಮೃತ್ಯುವನ್ನು ಬಯಸುತ್ತೀಯೆ?
03240038a ಅಥ ವಾ ತೇ ಭಯಂ ಜಾತಂ ದೃಷ್ಟ್ವಾರ್ಜುನಪರಾಕ್ರಮಂ।
03240038c ಸತ್ಯಂ ತೇ ಪ್ರತಿಜಾನಾಮಿ ವಧಿಷ್ಯಾಮಿ ರಣೇಽರ್ಜುನಂ।।
ಅಥವಾ ಅರ್ಜುನನ ಪರಾಕ್ರಮವನ್ನು ನೋಡಿ ನೀನು ಭಯಪಡುತ್ತಿದ್ದರೆ, ಸತ್ಯವನ್ನು ತಿಳಿಸುತ್ತಿದ್ದೇನೆ - ರಣದಲ್ಲಿ ಅರ್ಜುನನನ್ನು ಸಂಹರಿಸುತ್ತೇನೆ.
03240039a ಗತೇ ತ್ರಯೋದಶೇ ವರ್ಷೇ ಸತ್ಯೇನಾಯುಧಮಾಲಭೇ।
03240039c ಆನಯಿಷ್ಯಾಮ್ಯಹಂ ಪಾರ್ಥಾನ್ವಶಂ ತವ ಜನಾಧಿಪ।।
ಜನಾಧಿಪ! ನನ್ನ ಆಯುಧಗಳ ಮೇಲೆ ಆಣೆಯಿಟ್ಟು ಹೇಳುತ್ತಿದ್ದೇನೆ - ಹದಿಮೂರು ವರ್ಷಗಳು ಕಳೆದ ನಂತರ ನಾನು ಪಾರ್ಥರನ್ನು ನಿನ್ನ ವಶದಲ್ಲಿ ತರುತ್ತೇನೆ.”
03240040a ಏವಮುಕ್ತಸ್ತು ಕರ್ಣೇನ ದೈತ್ಯಾನಾಂ ವಚನಾತ್ತಥಾ।
03240040c ಪ್ರಣಿಪಾತೇನ ಚಾನ್ಯೇಷಾಮುದತಿಷ್ಠತ್ಸುಯೋಧನಃ।
03240040e ದೈತ್ಯಾನಾಂ ತದ್ವಚಃ ಶ್ರುತ್ವಾ ಹೃದಿ ಕೃತ್ವಾ ಸ್ಥಿರಾಂ ಮತಿಂ।।
ಕರ್ಣನು ಹೀಗೆ ಹೇಳಲು ದೈತ್ಯರ ವಚನಗಳನ್ನು ನೆನಪಿಸಿಕೊಂಡು, ಮತ್ತು ಅನ್ಯರ ಆಶ್ವಾಸನೆಯನ್ನು ಕೇಳಿ ಸುಯೋಧನನು ಮೇಲೆದ್ದನು. ದೈತ್ಯರ ಆ ಮಾತುಗಳನ್ನು ಕೇಳಿ ಹೃದಯ ಮತ್ತು ಬುದ್ಧಿಗಳನ್ನು ಗಟ್ಟಿ ಮಾಡಿಕೊಂಡನು.
03240041a ತತೋ ಮನುಜಶಾರ್ದೂಲೋ ಯೋಜಯಾಮಾಸ ವಾಹಿನೀಂ।
03240041c ರಥನಾಗಾಶ್ವಕಲಿಲಾಂ ಪದಾತಿಜನಸಂಕುಲಾಂ।।
ಆಗ ಆ ಮನುಜಶಾರ್ದೂಲನು ರಥ, ಆನೆ, ಕುದುರೆ ಮತ್ತು ಪದಾತಿಜನ ಸಂಕುಲವಾಗಿದ್ದ ಸೇನೆಯನ್ನು ಕೂಡಿಸಿದನು.
03240042a ಗಂಗೌಘಪ್ರತಿಮಾ ರಾಜನ್ಪ್ರಯಾತಾ ಸಾ ಮಹಾಚಮೂಃ।
03240042c ಶ್ವೇತಚ್ಚತ್ರೈಃ ಪತಾಕಾಭಿಶ್ಚಾಮರೈಶ್ಚ ಸುಪಾಂಡುರೈಃ।।
03240043a ರಥೈರ್ನಾಗೈಃ ಪದಾತೈಶ್ಚ ಶುಶುಭೇಽತೀವ ಸಂಕುಲಾ।
03240043c ವ್ಯಪೇತಾಭ್ರಘನೇ ಕಾಲೇ ದ್ಯೌರಿವಾವ್ಯಕ್ತಶಾರದೀ।।
ರಾಜನ್! ಗಂಗೆಯಂತೆ ಹರಿದ ಆ ಮಹಾಸೇನೆಯು ಶ್ವೇತ ಛತ್ರ, ಬಿಳಿಯ ಪತಾಕೆ, ಚಾಮರಗಳಿಂದ ಕೂಡಿ, ರಥ, ಆನೆ, ಪದಾತಿಸಂಕುಲಗಳಿಂದ ಕೂಡಿ ಅದು ಘನ ಕಪ್ಪು ಮೋಡಗಳು ಚದುರಿದ ಆಕಾಶದಲ್ಲಿ ಶರದೃತುವಿನ ಮೊದಲ ಚಿಹ್ನೆಗಳಂತೆ ತೋರಿತು.
03240044a ಜಯಾಶೀರ್ಭಿರ್ದ್ವಿಜೇಂದ್ರೈಸ್ತು ಸ್ತೂಯಮಾನೋಽಧಿರಾಜವತ್।
03240044c ಗೃಹ್ಣನ್ನಂಜಲಿಮಾಲಾಶ್ಚ ಧಾರ್ತರಾಷ್ಟ್ರೋ ಜನಾಧಿಪಃ।।
03240045a ಸುಯೋಧನೋ ಯಯಾವಗ್ರೇ ಶ್ರಿಯಾ ಪರಮಯಾ ಜ್ವಲನ್।
03240045c ಕರ್ಣೇನ ಸಾರ್ಧಂ ರಾಜೇಂದ್ರ ಸೌಬಲೇನ ಚ ದೇವಿನಾ।।
ವಿಜಯದ ಆಶೀರ್ವಾದಗಳಿಂದ ಸ್ತುತಿಸುತ್ತಿರುವ ಬ್ರಾಹ್ಮಣರಿಂದ ಕೂಡಿ ಅಧಿರಾಜನಂತೆ ಸಾಲಾಗಿ ನಿಂತಿರುವವರ ವಂದನೆಗಳನ್ನು ಸ್ವೀಕರಿಸುತ್ತಾ ಜನಾಧಿಪ ಧಾರ್ತರಾಷ್ಟ್ರ ಸುಯೋಧನನು ಪರಮ ವಿಜೃಂಭಣೆಯಿಂದ ಬೆಳಗುತ್ತಾ, ಕರ್ಣ ಮತ್ತು ಜೂಜುಗಾರ ಸೌಬಲನೊಂದಿಗೆ ಮುಂದೆನಿಂತು ಹೊರಟನು.
03240046a ದುಃಶಾಸನಾದಯಶ್ಚಾಸ್ಯ ಭ್ರಾತರಃ ಸರ್ವ ಏವ ತೇ।
03240046c ಭೂರಿಶ್ರವಾಃ ಸೋಮದತ್ತೋ ಮಹಾರಾಜಶ್ಚ ಬಾಹ್ಲಿಕಃ।।
03240047a ರಥೈರ್ನಾನಾವಿಧಾಕಾರೈರ್ಹಯೈರ್ಗಜವರೈಸ್ತಥಾ।
03240047c ಪ್ರಯಾಂತಂ ನೃಪಸಿಂಹಂ ತಮನುಜಗ್ಮುಃ ಕುರೂದ್ವಹಾಃ।।
03240047e ಕಾಲೇನಾಲ್ಪೇನ ರಾಜಂಸ್ತೇ ವಿವಿಶುಃ ಸ್ವಪುರಂ ತದಾ।।
ದುಃಶಾಸನನನ್ನು ಮುಂದಿಟ್ಟುಕೊಂಡು ಅವನ ಎಲ್ಲ ಸಹೋದರರೂ, ಭೂರಿಶ್ರವ, ಸೋಮದತ್ತ, ಮಹಾರಾಜ ಬಾಹ್ಲೀಕರು ನಾನಾ ಆಕಾರದ ರಥ, ಕುದುರೆ ಮತ್ತು ಶ್ರೇಷ್ಠ ಗಜಗಳೊಂದಿಗೆ ಆ ನೃಪಸಿಂಹನನ್ನು ಹಿಂಬಾಲಿಸಿ ಹೋದರು. ರಾಜನ್! ಅಲ್ಪಕಾಲದಲ್ಲಿಯೇ ಅವರು ತಮ್ಮ ಪುರವನ್ನು ಪ್ರವೇಶಿಸಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ದುರ್ಯೋಧನಪುರಪ್ರವೇಶೇ ಚತ್ವಾರಿಂಶದಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ದುರ್ಯೋಧನಪುರಪ್ರವೇಶದಲ್ಲಿ ಇನ್ನೂರಾನಲ್ವತ್ತನೆಯ ಅಧ್ಯಾಯವು.