ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಇಂದ್ರಲೋಕಾಭಿಗಮನ ಪರ್ವ
ಅಧ್ಯಾಯ 56
ಸಾರ
ಕಲಿಯು ನಲ-ಪುಷ್ಕರರನ್ನು ಪ್ರವೇಶಿಸಿ, ಅವರಿಬ್ಬರನ್ನೂ ದ್ಯೂತದಲ್ಲಿ ತೊಡಗಿಸಿ, ಮತ್ತರನ್ನಾಗಿಸಿದುದು (1-10). ದ್ಯೂತವನ್ನು ನಿಲ್ಲಿಸಲು ಪ್ರಯತ್ನಿಸಿದರೂ, ಬಹಳ ಮಾಸಗಳು ನಡೆದ ದ್ಯೂತದಲ್ಲಿ ನಲನು ಸೋಲುತ್ತಾ ಬಂದುದು (11-18).
03056001 ಬೃಹದಶ್ವ ಉವಾಚ।
03056001a ಏವಂ ಸ ಸಮಯಂ ಕೃತ್ವಾ ದ್ವಾಪರೇಣ ಕಲಿಃ ಸಹ।
03056001c ಆಜಗಾಮ ತತಸ್ತತ್ರ ಯತ್ರ ರಾಜಾ ಸ ನೈಷಧಃ।।
ಬೃಹದಶ್ವನು ಹೇಳಿದನು: “ಈ ರೀತಿ ದ್ವಾಪರನ ಜೊತೆ ಒಪ್ಪಂದ ಮಾಡಿಕೊಂಡ ಕಲಿಯು ರಾಜ ನೈಷಧನಿರುವಲ್ಲಿಗೆ ಆಗಮಿಸಿದನು.
03056002a ಸ ನಿತ್ಯಮಂತರಪ್ರೇಕ್ಷೀ ನಿಷಧೇಷ್ವವಸಚ್ಚಿರಂ।
03056002c ಅಥಾಸ್ಯ ದ್ವಾದಶೇ ವರ್ಷೇ ದದರ್ಶ ಕಲಿರಂತರಂ।।
ನೈಷಧನಲ್ಲಿ ಚಿರವಾಗಿ ವಾಸಿಸುವ ಸಲುವಾಗಿ ನಿತ್ಯವೂ ಅವಕಾಶವನ್ನು ಅಪೇಕ್ಷಿಸುತ್ತಿದ್ದ ಕಲಿಯು ಹನ್ನೆರಡನೆಯ ವರ್ಷಗಳ ನಂತರ ಅವಕಾಶವನ್ನು ಕಂಡನು.
03056003a ಕೃತ್ವಾ ಮೂತ್ರಮುಪಸ್ಪೃಶ್ಯ ಸಂಧ್ಯಾಮಾಸ್ತೇ ಸ್ಮ ನೈಷಧಃ।
03056003c ಅಕೃತ್ವಾ ಪಾದಯೋಃ ಶೌಚಂ ತತ್ರೈನಂ ಕಲಿರಾವಿಶತ್।।
ಒಮ್ಮೆ ನೈಷಧನು ಮೂತ್ರವಿಸರ್ಜನೆ ಮಾಡಿ ಪಾದಗಳನ್ನು ತೊಳೆಯದೆಯೇ ಸಂಧ್ಯಾವಂದನೆ ಮಾಡಿದಾಗ ಕಲಿಯು ಅವನನ್ನು ಪ್ರವೇಶಿಸಿದನು.
03056004a ಸ ಸಮಾವಿಶ್ಯ ತು ನಲಂ ಸಮೀಪಂ ಪುಷ್ಕರಸ್ಯ ಹ।
03056004c ಗತ್ವಾ ಪುಷ್ಕರಮಾಹೇದಮೇಹಿ ದೀವ್ಯ ನಲೇನ ವೈ।।
ನಲನನ್ನು ಪ್ರವೇಶಿಸಿದ ಅವನು ಪುಷ್ಕರನ ಸಮೀಪ ಹೋಗಿ “ಪುಷ್ಕರ! ನಲನೊಟ್ಟಿಗೆ ಜೂಜನ್ನಾಡು ಬಾ” ಎಂದನು.
03056005a ಅಕ್ಷದ್ಯೂತೇ ನಲಂ ಜೇತಾ ಭವಾನ್ ಹಿ ಸಹಿತೋ ಮಯಾ।
03056005c ನಿಷಧಾನ್ಪ್ರತಿಪದ್ಯಸ್ವ ಜಿತ್ವಾ ರಾಜನ್ನಲಂ ನೃಪಂ।।
“ನನ್ನ ಸಹಾಯದಿಂದ ನೀನು ನಿರ್ದಿಷ್ಟವಾಗಿ ನಲನನ್ನು ದ್ಯೂತದಲ್ಲಿ ಗೆಲ್ಲುತ್ತೀಯೆ. ರಾಜ! ನೃಪ ನಲನನ್ನು ಸೋಲಿಸಿ ನಿಷಧವನ್ನು ಗೆಲ್ಲು.”
03056006a ಏವಮುಕ್ತಸ್ತು ಕಲಿನಾ ಪುಷ್ಕರೋ ನಲಮಭ್ಯಯಾತ್।
03056006c ಕಲಿಶ್ಚೈವ ವೃಷೋ ಭೂತ್ವಾ ಗವಾಂ ಪುಷ್ಕರಮಭ್ಯಯಾತ್।।
ಕಲಿಯ ಈ ಮಾತುಗಳಂತೆ ಪುಷ್ಕರನು ನಲನಲ್ಲಿಗೆ ಹೋದನು. ಕಲಿಯಾದರೂ ಗೋವುಗಳ ಹೋರಿಯಾಗಿ ಪುಷ್ಕರನನ್ನು ಸೇರಿಕೊಂಡನು.
03056007a ಆಸಾದ್ಯ ತು ನಲಂ ವೀರಂ ಪುಷ್ಕರಃ ಪರವೀರಹಾ।
03056007c ದೀವ್ಯಾವೇತ್ಯಬ್ರವೀದ್ಭ್ರಾತಾ ವೃಷೇಣೇತಿ ಮುಹುರ್ಮುಹುಃ।।
ಪರವೀರಹ ಪುಷ್ಕರನು ನಲನ ಬಳಿಸಾರಿ ಸಹೋದರನಿಗೆ - “ಹೋರಿಗಳೊಂದಿಗೆ ಜೂಜಾಡೋಣ!” - ಎಂದು ಪುನಃ ಪುನಃ ಹೇಳಿದನು.
03056008a ನ ಚಕ್ಷಮೇ ತತೋ ರಾಜಾ ಸಮಾಹ್ವಾನಂ ಮಹಾಮನಾಃ।
03056008c ವೈದರ್ಭ್ಯಾಃ ಪ್ರೇಕ್ಷಮಾಣಾಯಾಃ ಪಣಕಾಲಮಮನ್ಯತ।।
ಮಹಾಮನ ರಾಜನು ಸಮಾಹ್ವಾನವನ್ನು ಬೇಡ ಎನ್ನದೇ, ವೈದರ್ಭಿಯು ನೋಡುತ್ತಿದ್ದಂತೆಯೇ ಇದು ಜೂಜಾಡುವ ಸಮಯವೆಂದು ನಿರ್ಧರಿಸಿಬಿಟ್ಟನು.
03056009a ಹಿರಣ್ಯಸ್ಯ ಸುವರ್ಣಸ್ಯ ಯಾನಯುಗ್ಯಸ್ಯ ವಾಸಸಾಂ।
03056009c ಆವಿಷ್ಟಃ ಕಲಿನಾ ದ್ಯೂತೇ ಜೀಯತೇ ಸ್ಮ ನಲಸ್ತದಾ।।
ಕಲಿಯಿಂದ ಆವಿಷ್ಟಗೊಂಡ ನಲನು ಹಿರಣ್ಯ, ಸುವರ್ಣ, ರಥಗಳು ಮತ್ತು ವಸ್ತ್ರಗಳನ್ನು ದ್ಯೂತದಲ್ಲಿ ಸೋತನು.
03056010a ತಮಕ್ಷಮದಸಮ್ಮತ್ತಂ ಸುಹೃದಾಂ ನ ತು ಕಶ್ಚನ।
03056010c ನಿವಾರಣೇಽಭವಚ್ಛಕ್ತೋ ದೀವ್ಯಮಾನಮಚೇತಸಂ।।
ಜೂಜಿನ ಮತ್ತಿನಲ್ಲಿ ಹುಚ್ಚಾಗಿ ಬಿಟ್ಟಿದ್ದ ಮತ್ತು ಪ್ರಜ್ಞೆಯೇ ಇಲ್ಲದೇ ಜೂಜಾಡುತ್ತಿದ್ದ ಅವನನ್ನು ತಡೆಯಲು ಅವನ ಸುಹೃದಯರು ಯಾರೂ ಶಕ್ತರಾಗಿರಲಿಲ್ಲ.
03056011a ತತಃ ಪೌರಜನಃ ಸರ್ವೋ ಮಂತ್ರಿಭಿಃ ಸಹ ಭಾರತ।
03056011c ರಾಜಾನಂ ದ್ರಷ್ಟುಮಾಗಚ್ಚನ್ನಿವಾರಯಿತುಮಾತುರಂ।।
ಭಾರತ! ಅನಂತರ ಸರ್ವ ಪೌರಜನರೂ ಮಂತ್ರಿಗಳನ್ನೊಡಗೂಡಿ ರಾಜನನ್ನು ನೋಡಿ ಅವನ ರೋಗವನ್ನು ನಿವಾರಿಸಲು ಬಂದರು.
03056012a ತತಃ ಸೂತ ಉಪಾಗಮ್ಯ ದಮಯಂತ್ಯೈ ನ್ಯವೇದಯತ್।
03056012c ಏಷ ಪೌರಜನಃ ಸರ್ವೋ ದ್ವಾರಿ ತಿಷ್ಠತಿ ಕಾರ್ಯವಾನ್।।
03056013a ನಿವೇದ್ಯತಾಂ ನೈಷಧಾಯ ಸರ್ವಾಃ ಪ್ರಕೃತಯಃ ಸ್ಥಿತಾಃ।
03056013c ಅಮೃಷ್ಯಮಾಣಾ ವ್ಯಸನಂ ರಾಜ್ಞೋ ಧರ್ಮಾರ್ಥದರ್ಶಿನಃ।।
ಸೂತನು ಬಂದು ದಮಯಂತಿಗೆ ನಿವೇದಿಸಿದನು: “ಸರ್ವ ಪೌರಜನರೂ ದ್ವಾರದಲ್ಲಿ ಕಾರ್ಯಕ್ಕೆಂದು ನಿಂತಿದ್ದಾರೆ. ಧರ್ಮಾರ್ಥದರ್ಶಿನಿ ರಾಜನ ವ್ಯಸನವನ್ನು ಸಹಿಸಲಾಗದೇ ಎಲ್ಲ ಪ್ರಜೆಗಳೂ ಬಂದು ನಿಂತಿದ್ದಾರೆ ಎಂದು ನೈಷಧನಿಗೆ ನಿವೇದಿಸಬೇಕು.”
03056014a ತತಃ ಸಾ ಬಾಷ್ಪಕಲಯಾ ವಾಚಾ ದುಃಖೇನ ಕರ್ಶಿತಾ।
03056014c ಉವಾಚ ನೈಷಧಂ ಭೈಮೀ ಶೋಕೋಪಹತಚೇತನಾ।।
ಶೋಕದಿಂದ ಹತಚೇತನಳಾದ ಭೈಮಿಯು ದುಃಖದಿಂದ ನಡುಗುತ್ತಾ, ಬಾಷ್ಪಗಳಿಂದೊಡಗೂಡಿದ ಮಾತುಗಳನ್ನು ನೈಷಧನಿಗೆ ಹೇಳಿದಳು:
03056015a ರಾಜನ್ಪೌರಜನೋ ದ್ವಾರಿ ತ್ವಾಂ ದಿದೃಕ್ಷುರವಸ್ಥಿತಃ।
03056015c ಮಂತ್ರಿಭಿಃ ಸಹಿತಃ ಸರ್ವೈ ರಾಜಭಕ್ತಿಪುರಸ್ಕೃತಃ।
03056015e ತಂ ದ್ರಷ್ಟುಮರ್ಹಸೀತ್ಯೇವಂ ಪುನಃ ಪುನರಭಾಷತ।।
“ರಾಜ! ರಾಜಭಕ್ತಿ ಪುರಸ್ಕೃತ ಸರ್ವ ಪೌರಜನರೂ ಮಂತ್ರಿಗಳನ್ನೊಡಗೊಂಡು ನಿನ್ನನ್ನು ಕಾಣಲು ಬಂದು ದ್ವಾರದಲ್ಲಿ ನಿಂತಿದ್ದಾರೆ. ನೀನು ಅವರನ್ನು ಕಾಣಬೇಕು!” ಎಂದು ಪುನಃ ಪುನಃ ಕೇಳಿಕೊಂಡಳು.
03056016a ತಾಂ ತಥಾ ರುಚಿರಾಪಾಂಗೀಂ ವಿಲಪಂತೀಂ ಸುಮಧ್ಯಮಾಂ।
03056016c ಆವಿಷ್ಟಃ ಕಲಿನಾ ರಾಜಾ ನಾಭ್ಯಭಾಷತ ಕಿಂ ಚನ।।
ಆದರೆ ಕಲಿಯಿಂದ ಆವಿಷ್ಟನಾಗಿದ್ದ ರಾಜನು ಆ ರುಚಿರಾಪಾಂಗಿ ಸುಮಧ್ಯಮಳಿಗೆ ಎನನ್ನೂ ಹೇಳಲಿಲ್ಲ.
03056017a ತತಸ್ತೇ ಮಂತ್ರಿಣಃ ಸರ್ವೇ ತೇ ಚೈವ ಪುರವಾಸಿನಃ।
03056017c ನಾಯಮಸ್ತೀತಿ ದುಃಖಾರ್ತಾ ವ್ರೀಡಿತಾ ಜಗ್ಮುರಾಲಯಾನ್।।
ಅನಂತರ ಮಂತ್ರಿಗಳ ಸಹಿತ ಸರ್ವ ಪುರವಾಸಿಗಳು “ಅವನು ಇಲ್ಲಿ ಇಲ್ಲವೇ ಇಲ್ಲ!” ಎನ್ನುತ್ತಾ ದುಃಖಾರ್ತ ವ್ರೀಡಿತರಾಗಿ ಮನೆಗಳಿಗೆ ತೆರಳಿದರು.
03056018a ತಥಾ ತದಭವದ್ದ್ಯೂತಂ ಪುಷ್ಕರಸ್ಯ ನಲಸ್ಯ ಚ।
03056018c ಯುಧಿಷ್ಠಿರ ಬಹೂನ್ಮಾಸಾನ್ಪುಣ್ಯಶ್ಲೋಕಸ್ತ್ವಜೀಯತ।।
ಯುಧಿಷ್ಠಿರ! ಈ ರೀತಿ ಪುಷ್ಕರ ಮತ್ತು ನಲನ ಈ ದ್ಯೂತವು ಬಹಳ ಮಾಸಗಳು ನಡೆಯಿತು ಮತ್ತು ಪುಣ್ಯಶ್ಲೋಕನು ಸೋಲುತ್ತಾ ಬಂದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಮನಪರ್ವಣಿ ನಲೋಪಾಖ್ಯಾನೇ ನಲದ್ಯೂತೇ ಷಟ್ಪಂಚಾಶತ್ತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ನಲದ್ಯೂತ ಎನ್ನುವ ಐವತ್ತಾರನೆಯ ಅಧ್ಯಾಯವು.