ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಅರ್ಜುನವನವಾಸ ಪರ್ವ
ಅಧ್ಯಾಯ 205
ಸಾರ
ಒಮ್ಮೆ ಕಳ್ಳರಿಂದಾಗಿ ಗೋವುಗಳನ್ನು ಕಳೆದುಕೊಂಡ ಬ್ರಾಹ್ಮಣನೊಬ್ಬನು ಇಂದ್ರಪ್ರಸ್ಥಕ್ಕೆ ಬಂದು ಪಾಂಡವರನ್ನು ನಿಂದಿಸುವುದು (1-9). ಅರ್ಜುನನು ಆಯುಧಗಳನ್ನು ತರಲು ಹೋದಾಗ ನಿಯಮವನ್ನು ಉಲ್ಲಂಘಿಸಿದುದು (10-20). ಬ್ರಾಹ್ಮಣನಿಗೆ ಅವನ ಗೋವುಗಳನ್ನು ದೊರಕಿಸಿಕೊಟ್ಟು ಅರ್ಜುನನು ವನವಾಸವನ್ನು ಕೈಗೊಂಡಿದುದು (21-30).
01205001 ವೈಶಂಪಾಯನ ಉವಾಚ।
01205001a ಏವಂ ತೇ ಸಮಯಂ ಕೃತ್ವಾ ನ್ಯವಸಂಸ್ತತ್ರ ಪಾಂಡವಾಃ।
01205001c ವಶೇ ಶಸ್ತ್ರಪ್ರತಾಪೇನ ಕುರ್ವಂತೋಽನ್ಯಾನ್ಮಹೀಕ್ಷಿತಃ।।
ವೈಶಂಪಾಯನನು ಹೇಳಿದನು: “ಈ ರೀತಿ ಒಪ್ಪಂದವನ್ನು ಮಾಡಿಕೊಂಡ ಪಾಂಡವರು ಅಲ್ಲಿಯೇ ವಾಸಿಸುತ್ತಿದ್ದರು. ಅವರ ಶಸ್ತ್ರಪ್ರತಾಪದಿಂದ ಅನ್ಯ ಮಹೀಕ್ಷಿತರನ್ನು ವಶಪಡಿಸಿಕೊಂಡರು.
01205002a ತೇಷಾಂ ಮನುಜಸಿಂಹಾನಾಂ ಪಂಚಾನಾಮಮಿತೌಜಸಾಂ।
01205002c ಬಭೂವ ಕೃಷ್ಣಾ ಸರ್ವೇಷಾಂ ಪಾರ್ಥಾನಾಂ ವಶವರ್ತಿನೀ।।
ಕೃಷ್ಣೆಯು ಆ ಎಲ್ಲ ಅಮಿತೌಜಸ, ಮನುಜಸಿಂಹ, ಪಂಚ ಪಾರ್ಥರ ವಶವರ್ತಿನಿಯಾಗಿದ್ದಳು.
01205003a ತೇ ತಯಾ ತೈಶ್ಚ ಸಾ ವೀರೈಃ ಪತಿಭಿಃ ಸಹ ಪಂಚಭಿಃ।
01205003c ಬಭೂವ ಪರಮಪ್ರೀತಾ ನಾಗೈರಿವ ಸರಸ್ವತೀ।।
ಆನೆಗಳೊಂದಿಗೆ ಸರಸ್ವತಿಯು ಹೇಗೋ ಹಾಗೆ ಅವಳು ತನ್ನ ಐದು ಪತಿಗಳೊಡನೆ ಪರಮಪ್ರೀತಳಾಗಿದ್ದಳು.
01205004a ವರ್ತಮಾನೇಷು ಧರ್ಮೇಣ ಪಾಂಡವೇಷು ಮಹಾತ್ಮಸು।
01205004c ವ್ಯವರ್ಧನ್ಕುರವಃ ಸರ್ವೇ ಹೀನದೋಷಾಃ ಸುಖಾನ್ವಿತಾಃ।।
ಮಹಾತ್ಮ ಪಾಂಡವರು ಧರ್ಮದಲ್ಲಿ ನಡೆದುಕೊಂಡಿರಲು ಸರ್ವ ಕುರುಗಳೂ ದೋಷರಹಿತರಾಗಿ ಸುಖಾನ್ವಿತರಾಗಿ ವರ್ಧಿಸಿದರು.
01205005a ಅಥ ದೀರ್ಘೇಣ ಕಾಲೇನ ಬ್ರಾಹ್ಮಣಸ್ಯ ವಿಶಾಂ ಪತೇ।
01205005c ಕಸ್ಯ ಚಿತ್ತಸ್ಕರಾಃ ಕೇ ಚಿಜ್ಜಹ್ರುರ್ಗಾ ನೃಪಸತ್ತಮ।।
ವಿಶಾಂಪತೇ! ನೃಪಸತ್ತಮ! ದೀರ್ಘಕಾಲದ ನಂತರ ಕೆಲವು ಕಳ್ಳರು ಓರ್ವ ಬ್ರಾಹ್ಮಣನ ಗೋವುಗಳನ್ನು ಅಪಹರಿಸಿದರು.
01205006a ಹ್ರಿಯಮಾಣೇ ಧನೇ ತಸ್ಮಿನ್ಬ್ರಾಹ್ಮಣಃ ಕ್ರೋಧಮೂರ್ಚ್ಛಿತಃ।
01205006c ಆಗಮ್ಯ ಖಾಂಡವಪ್ರಸ್ಥಮುದಕ್ರೋಶತ ಪಾಂಡವಾನ್।।
ತನ್ನ ಧನವನ್ನು ಕಳೆದುಕೊಂಡು ಕ್ರೋಧಮೂರ್ಛಿತನಾದ ಆ ಬ್ರಾಹ್ಮಣನು ಖಾಂಡವಪ್ರಸ್ಥಕ್ಕೆ ಬಂದು ಪಾಂಡವರನ್ನು ಮೂದಲಿಸಿದನು1.
01205007a ಹ್ರಿಯತೇ ಗೋಧನಂ ಕ್ಷುದ್ರೈರ್ನೃಶಂಸೈರಕೃತಾತ್ಮಭಿಃ।
01205007c ಪ್ರಸಹ್ಯ ವೋಽಸ್ಮಾದ್ವಿಷಯಾದಭಿಧಾವತ ಪಾಂಡವಾಃ।।
“ಕ್ಷುದ್ರ, ನೃಶಂಸ, ಅಕೃತಾತ್ಮರು ಗೋಧನವನ್ನು ಕದ್ದು ಹೋಗುತ್ತಿದ್ದಾರೆ! ಪಾಂಡವರೇ! ಓಡಿ ಹೋಗಿ ಅದನ್ನು ಹಿಂದಿರುಗಿ ತೆಗೆದುಕೊಂಡು ಬನ್ನಿ!
01205008a ಬ್ರಾಹ್ಮಣಸ್ಯ ಪ್ರಮತ್ತಸ್ಯ ಹವಿರ್ಧ್ವಾಂಕ್ಷೈರ್ವಿಲುಪ್ಯತೇ।
01205008c ಶಾರ್ದೂಲಸ್ಯ ಗುಹಾಂ ಶೂನ್ಯಾಂ ನೀಚಃ ಕ್ರೋಷ್ಟಾಭಿಮರ್ಶತಿ।।
01205008 ಅರಕ್ಷಿತಾರಂ ರಾಜಾನಂ ಬಲಿಷಡ್ಭಾಗಹಾರಿಣಂ।
01205008 ತಮಾಹುಃ ಸರ್ವಲೋಕಸ್ಯ ಸಮಗ್ರಂ ಪಾಪಚಾರಿಣಂ।।
ಪ್ರಮತ್ತ ಬ್ರಾಹ್ಮಣನ ಹವಿಸ್ಸನ್ನು ಕಾಗೆಗಳು ಎತ್ತಿಕೊಂಡು ಹೋಗುತ್ತಿವೆ. ಶಾರ್ದೂಲನ ಗುಹೆಯಲ್ಲಿ ಯಾರೂ ಇಲ್ಲದಿರಲು ನೀಚ ತೋಳವು ಒಳಹೊಕ್ಕಿದೆ! ಪ್ರಜೆಗಳು ಕೊಡುವ ರಾಜಾದಾಯದ ಆರನೆಯ ಒಂದು ಪಾಲನ್ನು ಉಪಭೋಗಿಸುವ2 ರಾಜನು ತನ್ನ ಪ್ರಜೆಗಳನ್ನು ರಕ್ಷಿಸದಿದ್ದರೆ ಅವನು ಸಮಗ್ರ ಸರ್ವಲೋಕದಲ್ಲಿ ಪಾಪಚಾರಿ ಎಂದೆನಿಸಿಕೊಳ್ಳುತ್ತಾನೆ.
01205009a ಬ್ರಾಹ್ಮಣಸ್ವೇ ಹೃತೇ ಚೋರೈರ್ಧರ್ಮಾರ್ಥೇ ಚ ವಿಲೋಪಿತೇ।
01205009c ರೋರೂಯಮಾಣೇ ಚ ಮಯಿ ಕ್ರಿಯತಾಮಸ್ತ್ರಧಾರಣಂ।।
ಬ್ರಾಹ್ಮಣನ ವಸ್ತುವಿನ ಕಳ್ಳತನವಾಗಿದೆಯೆಂದರೆ ಧರ್ಮ-ಅರ್ಥದ ವಿಲೋಪವಾದಂತೆ! ನಾನು ರೋದಿಸುತ್ತಿದ್ದೇನೆ! ಅಸ್ತ್ರಧಾರಣಮಾಡಿ!”
01205010a ರೋರೂಯಮಾಣಸ್ಯಾಭ್ಯಾಶೇ ತಸ್ಯ ವಿಪ್ರಸ್ಯ ಪಾಂಡವಃ।
01205010c ತಾನಿ ವಾಕ್ಯಾನಿ ಶುಶ್ರಾವ ಕುಂತೀಪುತ್ರೋ ಧನಂಜಯಃ।।
ರೋದಿಸುತ್ತಿರುವ ಆ ವಿಪ್ರನ ಹತ್ತಿರದಲ್ಲಿಯೇ ಇದ್ದ ಕುಂತೀಪುತ್ರ ಪಾಂಡವ ಧನಂಜಯನು ಅವನ ಆ ಮಾತುಗಳನ್ನು ಕೇಳಿದನು.
01205011a ಶ್ರುತ್ವಾ ಚೈವ ಮಹಾಬಾಹುರ್ಮಾ ಭೈರಿತ್ಯಾಹ ತಂ ದ್ವಿಜಂ।
01205011c ಆಯುಧಾನಿ ಚ ಯತ್ರಾಸನ್ಪಾಂಡವಾನಾಂ ಮಹಾತ್ಮನಾಂ।
01205011e ಕೃಷ್ಣಯಾ ಸಹ ತತ್ರಾಸೀದ್ಧರ್ಮರಾಜೋ ಯುಧಿಷ್ಠಿರಃ।।
ಇದನ್ನು ಕೇಳಿದ ಆ ಮಹಾಬಾಹುವು ದ್ವಿಜನಿಗೆ “ಹೆದರಬೇಡ!”ಎಂದು ಹೇಳಿದನು. ಆದರೆ ಮಹಾತ್ಮ ಪಾಂಡವರು ತಮ್ಮ ಆಯುಧಗಳನ್ನು ಎಲ್ಲಿ ಇರಿಸಿದ್ದರೋ ಅಲ್ಲಿ ಕೃಷ್ಣೆಯ ಸಹಿತ ಧರ್ಮರಾಜ ಯುಧಿಷ್ಠಿರನಿದ್ದನು.
01205012a ಸ ಪ್ರವೇಶಾಯ ಚಾಶಕ್ತೋ ಗಮನಾಯ ಚ ಪಾಂಡವಃ।
01205012c ತಸ್ಯ ಚಾರ್ತಸ್ಯ ತೈರ್ವಾಕ್ಯೈಶ್ಚೋದ್ಯಮಾನಃ ಪುನಃ ಪುನಃ।
01205012e ಆಕ್ರಂದೇ ತತ್ರ ಕೌಂತೇಯಶ್ಚಿಂತಯಾಮಾಸ ದುಃಖಿತಃ।।
ಆ ಪಾಂಡವನು ಅಲ್ಲಿ ಪ್ರವೇಶಿಸಲೂ ಶಕ್ಯನಿರಲಿಲ್ಲ. ಅಲ್ಲಿಂದ ಹೊರಟು ಹೋಗಲೂ ಶಕ್ಯನಿರಲಿಲ್ಲ. ಆ ಅರ್ತನು ಪುನಃ ಪುನಃ ತನ್ನ ತೀಕ್ಷ್ಣ ನಾಲಿಗೆಯಿಂದ ಒತ್ತಾಯಿಸುತ್ತಿರಲು, ಅವನ ಆಕ್ರಾಂತದ ಮಧ್ಯೆ ಕೌಂತೇಯನು ದುಃಖಿತನಾಗಿ ಚಿಂತಿಸಿದನು:
01205013a ಹ್ರಿಯಮಾಣೇ ಧನೇ ತಸ್ಮಿನ್ಬ್ರಾಹ್ಮಣಸ್ಯ ತಪಸ್ವಿನಃ।
01205013c ಅಶ್ರುಪ್ರಮಾರ್ಜನಂ ತಸ್ಯ ಕರ್ತವ್ಯಮಿತಿ ನಿಶ್ಚಿತಃ।।
“ಈ ತಪಸ್ವಿ ಬ್ರಾಹ್ಮಣನ ಧನದ ಕಳ್ಳತನವಾಗಿದೆ. ಅವನ ಕಣ್ಣೀರನ್ನು ಒಣಗಿಸುವುದು ನಿಶ್ಚಯವಾಗಿಯು ಕರ್ತವ್ಯ.
01205014a ಉಪಪ್ರೇಕ್ಷಣಜೋಽಧರ್ಮಃ ಸುಮಹಾನ್ಸ್ಯಾನ್ಮಹೀಪತೇಃ।
01205014c ಯದ್ಯಸ್ಯ ರುದತೋ ದ್ವಾರಿ ನ ಕರೋಮ್ಯದ್ಯ ರಕ್ಷಣಂ।।
ಇಂದು ದ್ವಾರದಲ್ಲಿ ನಿಂತು ರೋದಿಸುತ್ತಿರುವ ಇವನ ರಕ್ಷಣೆಯನ್ನು ಮಾಡದೇ ಇದರ ಉಪಪ್ರೇಕ್ಷಣೆಯನ್ನು ಮಾಡಿದರೆ ಮಹೀಪತಿಯು ಮಹಾ ಅಧರ್ಮವನ್ನು ಮಾಡಿದ ಹಾಗಾಗುತ್ತದೆ.
01205015a ಅನಾಸ್ತಿಕ್ಯಂ ಚ ಸರ್ವೇಷಾಮಸ್ಮಾಕಮಪಿ ರಕ್ಷಣೇ।
01205015c ಪ್ರತಿತಿಷ್ಠೇತ ಲೋಕೇಽಸ್ಮಿನ್ನಧರ್ಮಶ್ಚೈವ ನೋ ಭವೇತ್।
ನಾನು ರಕ್ಷಿಸದಿದ್ದರೆ ನಾವೆಲ್ಲರೂ ಈ ಲೋಕದಲ್ಲಿಯೇ ಅನಾಸ್ತಿಕ್ಯರೆಂದೂ, ಅಧರ್ಮಿಗಳೆಂದೂ ಕುಪ್ರಸಿದ್ಧರಾಗುತ್ತೇವೆ.
01205016a ಅನಾಪೃಚ್ಛ್ಯ ಚ ರಾಜಾನಂ ಗತೇ ಮಯಿ ನ ಸಂಶಯಃ।
01205016c ಅಜಾತಶತ್ರೋರ್ನೃಪತೇರ್ಮಮ ಚೈವಾಪ್ರಿಯಂ ಭವೇತ್।।
ರಾಜನನ್ನು ಕೇಳದೆಯೇ ನಾನು ಹೋದೆನೆಂದರೆ ನಿಸ್ಸಂಶಯವಾಗಿಯೂ ನನ್ನ ನೃಪತಿ ಅಜಾತಶತ್ರುವಿಗೆ ಅಪ್ರಿಯವನ್ನು ಮಾಡಿದಂಥಾಗುತ್ತದೆ.
01205017a ಅನುಪ್ರವೇಶೇ ರಾಜ್ಞಸ್ತು ವನವಾಸೋ ಭವೇನ್ಮಮ।
01205017 ಸರ್ವಮನ್ಯತ್ಪರಿಹೃತಂ ಘರ್ಷಣಾತ್ತು ಮಹೀಪತೇಃ।।
01205017c ಅಧರ್ಮೋ ವಾ ಮಹಾನಸ್ತು ವನೇ ವಾ ಮರಣಂ ಮಮ।
01205017e ಶರೀರಸ್ಯಾಪಿ ನಾಶೇನ ಧರ್ಮ ಏವ ವಿಶಿಷ್ಯತೇ।।
ರಾಜನ ಗೃಹವನ್ನು ಪ್ರವೇಶಿಸಿದರೆ ನನಗೆ ವನವಾಸವಾಗುತ್ತದೆ. ಅಧರ್ಮ ಅಥವಾ ಮಹಾವನದಲ್ಲಿ ನನ್ನ ಮರಣ. ಆದರೆ ಶರೀರನಾಶಕ್ಕಿಂತಲೂ ಧರ್ಮವೇ ಮೇಲು!”
01205018a ಏವಂ ವಿನಿಶ್ಚಿತ್ಯ ತತಃ ಕುಂತೀಪುತ್ರೋ ಧನಂಜಯಃ।
01205018c ಅನುಪ್ರವಿಶ್ಯ ರಾಜಾನಮಾಪೃಚ್ಛ್ಯ ಚ ವಿಶಾಂ ಪತೇ।।
01205019a ಧನುರಾದಾಯ ಸಂಹೃಷ್ಟೋ ಬ್ರಾಹ್ಮಣಂ ಪ್ರತ್ಯಭಾಷತ।
01205019c ಬ್ರಾಹ್ಮಣಾಗಮ್ಯತಾಂ ಶೀಘ್ರಂ ಯಾವತ್ಪರಧನೈಷಿಣಃ।।
01205020a ನ ದೂರೇ ತೇ ಗತಾಃ ಕ್ಷುದ್ರಾಸ್ತಾವದ್ಗಚ್ಛಾಮಹೇ ಸಹ।
01205020c ಯಾವದಾವರ್ತಯಾಮ್ಯದ್ಯ ಚೋರಹಸ್ತಾದ್ಧನಂ ತವ।।
ವಿಶಾಂಪತೇ! ಈ ರೀತಿ ನಿಶ್ಚಯಿಸಿದ ಕುಂತೀಪುತ್ರ ಧನಂಜಯನು ರಾಜನ ಅನುಜ್ಞೆಯಿಲ್ಲದೇ ಪ್ರವೇಶಿಸಿ ಧನುಸ್ಸನ್ನು ತಂದು ಸಂಹೃಷ್ಟ ಬ್ರಾಹ್ಮಣನಿಗೆ ಉತ್ತರಿಸಿದನು: “ಬ್ರಾಹ್ಮಣ! ಶೀಘ್ರವಾಗಿ ಬಾ! ಆ ಕಳ್ಳರನ್ನು ಹಿಡಿಯಬೇಕು. ಆ ಕ್ಷುದ್ರರು ತುಂಬಾ ದೂರ ಹೋಗಿರಲಿಕ್ಕಿಲ್ಲ. ಒಟ್ಟಿಗೇ ಹೋಗೋಣ. ಅವರನ್ನು ಹಿಡಿದು ನಿನ್ನ ಧನವನ್ನು ಹಿಂದಿರುಗಿಸುತ್ತೇನೆ.”
01205021a ಸೋಽನುಸೃತ್ಯ ಮಹಾಬಾಹುರ್ಧನ್ವೀ ವರ್ಮೀ ರಥೀ ಧ್ವಜೀ।
01205021c ಶರೈರ್ವಿಧ್ವಂಸಿತಾಂಶ್ಚೋರಾನವಜಿತ್ಯ ಚ ತದ್ಧನಂ।।
ಆ ಮಹಾಬಾಹುವು ಧನುಸ್ಸನ್ನು ಹಿಡಿದು, ಕವಚಧರಿಸಿ ಧ್ವಜಯುಕ್ತ ರಥವನ್ನೇರಿ ಚೋರರನ್ನು ಬೆನ್ನಟ್ಟಿ ಶರಗಳಿಂದ ವಿಧ್ವಂಸಿಸಿ ಧನವನ್ನು ಗೆದ್ದನು.
01205022a ಬ್ರಾಹ್ಮಣಸ್ಯ ಉಪಾಹೃತ್ಯ ಯಶಃ ಪೀತ್ವಾ ಚ ಪಾಂಡವಃ।
01205022 ತತಸ್ತದ್ಗೋಧನಂ ಪಾರ್ಥೋ ದತ್ವಾ ತಸ್ಮೈ ದ್ವಿಜಾತಯೇ।
01205022c ಆಜಗಾಮ ಪುರಂ ವೀರಃ ಸವ್ಯಸಾಚೀ ಪರಂತಪಃ।।
ಬ್ರಾಹ್ಮಣನಿಗೆ ಅದನ್ನು ಒಪ್ಪಿಸಿ ಯಶವನ್ನು ಪಡೆದು ವೀರ ಪಾಂಡವ ಪರಂತಪ ಸವ್ಯಸಾಚಿಯು ಪುರವನ್ನು ಸೇರಿದನು.
01205023a ಸೋಽಭಿವಾದ್ಯ ಗುರೂನ್ಸರ್ವಾಂಸ್ತೈಶ್ಚಾಪಿ ಪ್ರತಿನಂದಿತಃ।
01205023c ಧರ್ಮರಾಜಮುವಾಚೇದಂ ವ್ರತಮಾದಿಶ್ಯತಾಂ ಮಮ।।
ಸರ್ವ ಗುರುಗಳನ್ನೂ ಅಭಿವಂದಿಸಿದನು ಮತ್ತು ಅವರೂ ಅವನಿಗೆ ಪ್ರತಿನಂದಿಸಿದರು. ನಂತರ ಅವನು ಧರ್ಮರಾಜನಿಗೆ ಹೇಳಿದನು: “ನನಗೆ ವ್ರತವನ್ನು ಆದೇಶಿಸು!
01205024a ಸಮಯಃ ಸಮತಿಕ್ರಾಂತೋ ಭವತ್ಸಂದರ್ಶನಾನ್ಮಯಾ।
01205024c ವನವಾಸಂ ಗಮಿಷ್ಯಾಮಿ ಸಮಯೋ ಹ್ಯೇಷ ನಃ ಕೃತಃ।।
ನಾನು ನಿನ್ನನ್ನು ನೋಡಿ ಒಪ್ಪಂದವನ್ನು ಅತಿಕ್ರಮಿಸಿದ್ದೇನೆ. ನಾವು ಮಾಡಿಕೊಂಡ ಒಪ್ಪಂದದಂತೆ ನಾನು ವನವಾಸಕ್ಕೆ ತೆರಳುತ್ತೇನೆ.”
01205025a ಇತ್ಯುಕ್ತೋ ಧರ್ಮರಾಜಸ್ತು ಸಹಸಾ ವಾಕ್ಯಮಪ್ರಿಯಂ।
01205025c ಕಥಮಿತ್ಯಬ್ರವೀದ್ವಾಚಾ ಶೋಕಾರ್ತಃ ಸಜ್ಜಮಾನಯಾ।
01205025e ಯುಧಿಷ್ಠಿರೋ ಗುಡಾಕೇಶಂ ಭ್ರಾತಾ ಭ್ರಾತರಮಚ್ಯುತಂ।।
ಒಮ್ಮೆಲೇ ಈ ಅಪ್ರಿಯ ವಾಕ್ಯವನ್ನು ಕೇಳಿದ ಧರ್ಮರಾಜನು ಶೋಕಾರ್ತನಾಗಿ ಸಜ್ಜಮಾನನಾಗಿ “ಏಕೆ?”ಎಂದು ಉದ್ಗರಿಸಿದನು. ನಂತರ ಅಚ್ಯುತ ಭ್ರಾತಾ ಯುಧಿಷ್ಠಿರನು ತಮ್ಮ ಗುಡಾಕೇಶನಿಗೆ ಹೇಳಿದನು:
01205026a ಪ್ರಮಾಣಮಸ್ಮಿ ಯದಿ ತೇ ಮತ್ತಃ ಶೃಣು ವಚೋಽನಘ।
01205026c ಅನುಪ್ರವೇಶೇ ಯದ್ವೀರ ಕೃತವಾಂಸ್ತ್ವಂ ಮಮಾಪ್ರಿಯಂ।
01205026e ಸರ್ವಂ ತದನುಜಾನಾಮಿ ವ್ಯಲೀಕಂ ನ ಚ ಮೇ ಹೃದಿ।।
“ಅನಘ! ನಾನು ಹಿರಿಯವನಾಗಿದ್ದೇನಾದರೆ ನನ್ನ ಮತವನ್ನು ಕೇಳು. ವೀರ! ನೀನು ಅನುಪ್ರವೇಶಿಸಿ ನನಗೇನಾದರೂ ಅಪ್ರಿಯವಾದುದನ್ನು ಮಾಡಿದ್ದೀಯೆಂದರೆ ನಾನು ಅದೆಲ್ಲವನ್ನೂ ಕ್ಷಮಿಸುತ್ತೇನೆ ಮತ್ತು ಅದರ ಸೇಡನ್ನು ನನ್ನ ಹೃದಯದಿಂದ ತೆಗೆದುಬಿಡುತ್ತೇನೆ.
01205027a ಗುರೋರನುಪ್ರವೇಶೋ ಹಿ ನೋಪಘಾತೋ ಯವೀಯಸಃ।
01205027c ಯವೀಯಸೋಽನುಪ್ರವೇಶೋ ಜ್ಯೇಷ್ಠಸ್ಯ ವಿಧಿಲೋಪಕಃ।।
ಕಿರಿಯವನು ಹಿರಿಯವನಲ್ಲಿ ಪ್ರವೇಶಿಸಿದರೆ ಅಪಘಾತವೆನಿಸುವುದಿಲ್ಲ. ಆದರೆ ಕಿರಿಯನಲ್ಲಿ ಹಿರಿಯವನು ಅನುಪ್ರವೇಶಿಸಿದರೆ ಅದು ವಿಧಿಲೋಪಕವಾಗುತ್ತದೆ.
01205028a ನಿವರ್ತಸ್ವ ಮಹಾಬಾಹೋ ಕುರುಷ್ವ ವಚನಂ ಮಮ।
01205028c ನ ಹಿ ತೇ ಧರ್ಮಲೋಪೋಽಸ್ತಿ ನ ಚ ಮೇ ಧರ್ಷಣಾ ಕೃತಾ।।
ಮಹಾಬಾಹು! ನಿಲ್ಲು! ನನ್ನ ವಚನದಂತೆ ಮಾಡು. ನಿನ್ನಿಂದ ಧರ್ಮಲೋಪವೂ ಆಗಲಿಲ್ಲ ಮತ್ತು ನಿನ್ನಿಂದ ನನಗೆ ಯಾವುದೇ ರೀತಿಯ ಅಪಮಾನವೂ ಆಗಲಿಲ್ಲ.”
01205029 ಅರ್ಜುನ ಉವಾಚ।
01205029a ನ ವ್ಯಾಜೇನ ಚರೇದ್ಧರ್ಮಮಿತಿ ಮೇ ಭವತಃ ಶ್ರುತಂ।
01205029c ನ ಸತ್ಯಾದ್ವಿಚಲಿಷ್ಯಾಮಿ ಸತ್ಯೇನಾಯುಧಮಾಲಭೇ।।
ಅರ್ಜುನನು ಹೇಳಿದನು: “ಧರ್ಮವನ್ನು ಕಪಟದಿಂದ ಪಾಲಿಸಬೇಡ ಎನ್ನುವುದನ್ನು ನಿನ್ನಿಂದಲೇ ನಾನು ಕೇಳಿದ್ದೇನೆ. ನಾನು ಸತ್ಯದಿಂದ ವಿಚಲಿತನಾಗುವುದಿಲ್ಲ. ನಾನು ಸತ್ಯದ ಆಯುಧವನ್ನು ಧರಿಸಿದ್ದೇನೆ.””
01205030 ವೈಶಂಪಾಯನ ಉವಾಚ।
01205030a ಸೋಽಭ್ಯನುಜ್ಞಾಪ್ಯ ರಾಜಾನಂ ಬ್ರಹ್ಮಚರ್ಯಾಯ ದೀಕ್ಷಿತಃ।
01205030c ವನೇ ದ್ವಾದಶ ವರ್ಷಾಣಿ ವಾಸಾಯೋಪಜಗಾಮ ಹ।।
ವೈಶಂಪಾಯನನು ಹೇಳಿದನು: “ರಾಜನ ಅನುಜ್ಞೆಯಂತೆ ಅವನಿಗೆ ಬ್ರಹ್ಮಚರ್ಯದ ದೀಕ್ಷೆಯನ್ನು ನೀಡಲಾಯಿತು. ಅವನು ಹನ್ನೆರಡು ವರ್ಷಗಳು ವನದಲ್ಲಿ ವಾಸಿಸಲು ಹೊರಟನು3.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಆದಿಪರ್ವಣಿ ಅರ್ಜುನವನವಾಸಪರ್ವಣಿ ಅರ್ಜುನತೀರ್ಥಯಾತ್ರಾಯಾಂ ಪಂಚಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದ ಆದಿಪರ್ವದಲ್ಲಿ ಅರ್ಜುನವನವಾಸಪರ್ವದಲ್ಲಿ ಅರ್ಜುನತೀರ್ಥಯಾತ್ರ ಎನ್ನುವ ಇನ್ನೂರಾಐದನೆಯ ಅಧ್ಯಾಯವು.
-
ಪಾಂಡವರು ಧರ್ಮದಲ್ಲಿದ್ದು ರಾಜ್ಯಭಾರವನ್ನು ಮಾಡುತ್ತಿದ್ದರು ಮತ್ತು ರಾಜ್ಯದಲ್ಲಿ ಯಾವುದೇ ರೀತಿಯ ಸುಳ್ಳು ಮತ್ತು ಕಳ್ಳತನ ನಡೆಯುತ್ತಿರಲಿಲ್ಲ ಎಂದು ಮೊದಲು ಕೇಳಿದ್ದೆವು. ಹಾಗಿರುವಾಗ, ಈ ಬ್ರಾಹ್ಮಣನು ತನ್ನ ಗೋವುಗಳ ಅಪಹರಣವಾಯಿತೆಂದು ಸಿಟ್ಟಿಗೆದ್ದು ಪಾಂಡವರನ್ನು ಏಕೆ ದೂರುತ್ತಿದ್ದಾನೆ? ಅರ್ಜುನನನ್ನು ವನವಾಸಕ್ಕೆ ಕಳುಹಿಸಲು ಇದೊಂದು ವಿಧಿಯೇ ನಿರ್ಧರಿಸಿದ ನೆಪವೇ? ↩︎
-
ರಾಜನು ತನ್ನ ಆದಾಯದ ಆರನೇ ಒಂದು ಭಾಗವನ್ನು ಮಾತ್ರ ತನ್ನ ಭೋಗಕ್ಕೆ ಬಳಸಬಹುದು! ↩︎
-
ಬ್ರಹ್ಮಚರ್ಯದ ದೀಕ್ಷೆ ಎಂದರೇನು? ಲೈಂಗಿಕ ಸುಖದಿಂದ ದೂರವಿರುವುದೇ? ಅಥವಾ ಇದಕ್ಕೂ ಹೆಚ್ಚಿನದೇ? ದಕ್ಷಿಣ ಭಾರತ (ಕುಂಭಕೋಣ) ಸಂಪುಟದಲ್ಲಿ ಅರ್ಜುನನ ವನವಾಸವು ಹನ್ನೆರಡು ‘ತಿಂಗಳುಗಳು’ ಎಂದಿದೆ. ಆದರೆ ಪುಣೆಯ ಸಂಪುಟದಲ್ಲಿ ಹನ್ನೆರಡು ‘ವರ್ಷಗಳು’ ಎಂದಿದೆ. ಈ ಹನ್ನೆರಡು ವರ್ಷಗಳು ಮತ್ತು ದ್ಯೂತದ ನಂತರ ಹನ್ನೆರಡು ವರ್ಷಗಳು - ಅಂದರೆ ಒಟ್ಟು ಇಪ್ಪತ್ನಾಲ್ಕು ವರ್ಷಗಳು ಅರ್ಜುನನು ವನವಾಸಮಾಡಿದನೇ? ಅರ್ಜುನನ ಜೀವನದಲ್ಲಿ ತುಂಬಾ ಘಟನೆಗಳು - ಮಗನ ಜನ್ಮ, ಸುಭದ್ರೆಯೊಂದಿಗೆ ಮದುವೆ - ಈ ಸಮಯದಲ್ಲಿ ನಡೆದಿದ್ದುದರಿಂದ ‘ತಿಂಗಳು’ ಗಳಿಗಿಂತ ‘ವರ್ಷಗಳೇ’ ಬಹುಷಃ ಸರಿಯೆಂದು ತೋರುತ್ತದೆ. ↩︎