ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ವಿದುರಾಗಮನ ಪರ್ವ
ಅಧ್ಯಾಯ 194
ಸಾರ
ಕರ್ಣನು ತನಗೆ ತೋಚಿದ ಉಪಾಯಗಳನ್ನು ಹೇಳುವುದು (1-22). ಧೃತರಾಷ್ಟ್ರನು ಇತರರೊಡನೆ ಸಮಾಲೋಚನೆ ಮಾಡುತ್ತೇನೆ ಎಂದು ಹೇಳುವುದು (23-25).
01194001 ಕರ್ಣ ಉವಾಚ।
01194001a ದುರ್ಯೋಧನ ತವ ಪ್ರಜ್ಞಾ ನ ಸಮ್ಯಗಿತಿ ಮೇ ಮತಿಃ।
01194001c ನ ಹ್ಯುಪಾಯೇನ ತೇ ಶಕ್ಯಾಃ ಪಾಂಡವಾಃ ಕುರುನಂದನ।।
ಕರ್ಣನು ಹೇಳಿದನು: “ದುರ್ಯೋಧನ! ನಿನಗೆ ಪ್ರಜ್ಞೆ ಸರಿಯಿಲ್ಲ ಎಂದು ನನ್ನ ಅಭಿಪ್ರಾಯ. ಕುರುನಂದನ! ಉಪಾಯಗಳಿಂದ ಪಾಂಡವರನ್ನು ಗೆಲ್ಲಲು ಶಕ್ಯವಿಲ್ಲ.
01194002a ಪೂರ್ವಮೇವ ಹಿ ತೇ ಸೂಕ್ಷ್ಮೈರುಪಾಯೈರ್ಯತಿತಾಸ್ತ್ವಯಾ।
01194002c ನಿಗ್ರಹೀತುಂ ಯದಾ ವೀರ ಶಕಿತಾ ನ ತದಾ ತ್ವಯಾ।।
ವೀರ! ಈ ಹಿಂದೆಯೂ ಕೂಡ ಅವರನ್ನು ನಿಗ್ರಹಿಸಲು ನೀನು ಸೂಕ್ಷ್ಮ ಉಪಾಯಗಳನ್ನು ಬಳಸಿದೆ. ಆದರೆ ಅದು ನಿನ್ನಿಂದ ಸಾಧ್ಯವಾಗಲಿಲ್ಲ.
01194003a ಇಹೈವ ವರ್ತಮಾನಾಸ್ತೇ ಸಮೀಪೇ ತವ ಪಾರ್ಥಿವ।
01194003c ಅಜಾತಪಕ್ಷಾಃ ಶಿಶವಃ ಶಕಿತಾ ನೈವ ಬಾಧಿತುಂ।।
ಪಾರ್ಥಿವ! ಇನ್ನೂ ರೆಕ್ಕೆಬಾರದಿದ್ದ ಶಿಶುಗಳಾದ ಅವರು ಇಲ್ಲಿಯೇ ನಿನ್ನ ಸಮೀಪದಲ್ಲಿಯೇ ಇದ್ದರು. ಆದರೂ ಅವರನ್ನು ಬಾಧಿಸಲು ಸಾಧ್ಯವಾಗಲಿಲ್ಲ.
01194004a ಜಾತಪಕ್ಷಾ ವಿದೇಶಸ್ಥಾ ವಿವೃದ್ಧಾಃ ಸರ್ವಶೋಽದ್ಯ ತೇ।
01194004c ನೋಪಾಯಸಾಧ್ಯಾಃ ಕೌಂತೇಯಾ ಮಮೈಷಾ ಮತಿರಚ್ಯುತ।।
ಈಗ ಅವರೆಲ್ಲರಿಗೆ ರೆಕ್ಕೆಗಳು ಬಂದಿವೆ. ವಿದೇಶದಲ್ಲಿದ್ದಾರೆ. ಬೆಳೆದಿದ್ದಾರೆ. ಈಗ ನಿನ್ನ ಉಪಾಯಗಳಿಂದ ಕೌಂತೇಯರನ್ನು ಗೆಲ್ಲಬಹುದೆಂದು ನನಗನ್ನಿಸುವುದಿಲ್ಲ.
01194005a ನ ಚ ತೇ ವ್ಯಸನೈರ್ಯೋಕ್ತುಂ ಶಕ್ಯಾ ದಿಷ್ಟಕೃತಾ ಹಿ ತೇ।
01194005c ಶಂಕಿತಾಶ್ಚೇಪ್ಸವಶ್ಚೈವ ಪಿತೃಪೈತಾಮಹಂ ಪದಂ।।
ಆ ದಿಷ್ಟಕೃತರನ್ನು ವ್ಯಸನಗಳಿಗೆ ಬಂಧಿಸಲಿಕ್ಕೂ ಆಗುವುದಿಲ್ಲ. ಪಿತೃಪಿತಾಮಹರ ರಾಜ್ಯವನ್ನು ಪಡೆಯಲು ಬಯಸುತ್ತಿರುವ ಅವರು ಶಂಕಿತರಾಗಿದ್ದಾರೆ.
01194006a ಪರಸ್ಪರೇಣ ಭೇದಶ್ಚ ನಾಧಾತುಂ ತೇಷು ಶಕ್ಯತೇ।
01194006c ಏಕಸ್ಯಾಂ ಯೇ ರತಾಃ ಪತ್ನ್ಯಾಂ ನ ಭಿದ್ಯಂತೇ ಪರಸ್ಪರಂ।।
ಪರಸ್ಪರರಲ್ಲಿ ಭೇದವನ್ನುಂಟುಮಾಡಲೂ ಶಕ್ಯವಿಲ್ಲ. ಒಬ್ಬಳೇ ಪತ್ನಿಯಲ್ಲಿ ಅನುರಕ್ತರಾದ ಪರಸ್ಪರರಲ್ಲಿ ಭೇದವುಂಟಾಗುವುದಿಲ್ಲ.
01194007a ನ ಚಾಪಿ ಕೃಷ್ಣಾ ಶಕ್ಯೇತ ತೇಭ್ಯೋ ಭೇದಯಿತುಂ ಪರೈಃ।
01194007c ಪರಿದ್ಯೂನಾನ್ವೃತವತೀ ಕಿಮುತಾದ್ಯ ಮೃಜಾವತಃ।।
ಅವರಿಂದ ಕೃಷ್ಣೆಯನ್ನು ಬೇರೆಮಾಡಲಿಕ್ಕೂ ಸಾಧ್ಯವಿಲ್ಲ. ಎಲ್ಲವನ್ನೂ ಕಳೆದುಕೊಂಡಿದ್ದಾಗಲೇ ಅವರನ್ನು ವರಿಸಿದ್ದವಳು ಅವರು ಇನ್ನೂ ಅಭಿವೃದ್ಧಿಪರರಾಗಿದ್ದಾಗ ಏನು ಹೇಳಬಹುದು?
01194008a ಈಪ್ಸಿತಶ್ಚ ಗುಣಃ ಸ್ತ್ರೀಣಾಮೇಕಸ್ಯಾ ಬಹುಭರ್ತೃತಾ।
01194008c ತಂ ಚ ಪ್ರಾಪ್ತವತೀ ಕೃಷ್ಣಾ ನ ಸಾ ಭೇದಯಿತುಂ ಸುಖಂ।।
ಒಬ್ಬನಿಗಿಂಥ ಹೆಚ್ಚು ಪತಿಯನ್ನು ಹೊಂದಿರುವುದು ಒಂದು ಈಪ್ಸಿತ ಗುಣವೆಂದು ಸ್ತ್ರೀಯರು ಯೋಚಿಸುತ್ತಾರೆ. ಅದನ್ನು ಪಡೆದ ಕೃಷ್ಣೆಯನ್ನು ಅದರಿಂದ ದೂರಮಾಡುವುದು ಅಷ್ಟು ಸುಲಭವಲ್ಲ.
01194009a ಆರ್ಯವೃತ್ತಶ್ಚ ಪಾಂಚಾಲ್ಯೋ ನ ಸ ರಾಜಾ ಧನಪ್ರಿಯಃ।
01194009c ನ ಸಂತ್ಯಕ್ಷ್ಯತಿ ಕೌಂತೇಯಾನ್ರಾಜ್ಯದಾನೈರಪಿ ಧ್ರುವಂ।।
ಪೂಜನೀಯ ನಡವಳಿಕೆಯ ರಾಜ ಪಾಂಚಾಲ್ಯನು ಧನಪ್ರಿಯನಲ್ಲ. ರಾಜ್ಯಗಳನ್ನು ಇತ್ತರೂ ಕೂಡ ಅವನು ಕೌಂತೇಯರನ್ನು ತ್ಯಜಿಸುವುದಿಲ್ಲ ಎನ್ನುವುದು ನಿಶ್ಚಯ.
01194010a ತಥಾಸ್ಯ ಪುತ್ರೋ ಗುಣವಾನನುರಕ್ತಶ್ಚ ಪಾಂಡವಾನ್।
01194010c ತಸ್ಮಾನ್ನೋಪಾಯಸಾಧ್ಯಾಂಸ್ತಾನಹಂ ಮನ್ಯೇ ಕಥಂ ಚನ।।
ಅವನಂತೆಯೇ ಅವನ ಪುತ್ರನೂ ಕೂಡ ಗುಣವಂತ ಮತ್ತು ಪಾಂಡವರಲ್ಲಿ ಅನುರಕ್ತ. ಆದುದರಿಂದ ಯಾವುದೇ ಉಪಾಯವೂ ಅವರ ಮೇಲೆ ಯಶಸ್ವಿಯಾಗುವುದಿಲ್ಲ ಎನ್ನುವುದು ನನ್ನ ಅನಿಸಿಕೆ.
01194011a ಇದಂ ತ್ವದ್ಯ ಕ್ಷಮಂ ಕರ್ತುಮಸ್ಮಾಕಂ ಪುರುಷರ್ಷಭ।
01194011c ಯಾವನ್ನ ಕೃತಮೂಲಾಸ್ತೇ ಪಾಂಡವೇಯಾ ವಿಶಾಂ ಪತೇ।
01194011e ತಾವತ್ಪ್ರಹರಣೀಯಾಸ್ತೇ ರೋಚತಾಂ ತವ ವಿಕ್ರಮಃ।।
ಪುರುಷರ್ಷಭ! ಆದರೆ ನಾವು ಇಷ್ಟನ್ನು ಮಾಡಬಹುದು. ವಿಶಾಂಪತೇ! ಎಲ್ಲಿಯೂ ನೆಲೆಯೂರುವುದರೊಳಗೆ ಪಾಂಡವರನ್ನು ಹೊಡೆದುರುಳಿಸಬಹುದು. ಇದು ನಿನ್ನ ವಿಕ್ರಮಕ್ಕೆ ಹಿಡಿಸಬಹುದು.
01194012a ಅಸ್ಮತ್ಪಕ್ಷೋ ಮಹಾನ್ಯಾವದ್ಯಾವತ್ಪಾಂಚಾಲಕೋ ಲಘುಃ।
01194012c ತಾವತ್ಪ್ರಹರಣಂ ತೇಷಾಂ ಕ್ರಿಯತಾಂ ಮಾ ವಿಚಾರಯ।।
ನಮ್ಮ ಪಕ್ಷವು ದೊಡ್ಡದಾಗಿರುವಾಗ ಮತ್ತು ಪಾಂಚಾಲನ ಪಕ್ಷವು ಸಣ್ಣದಾಗಿರುವಾಗಲೇ ನಾವು ಅವರನ್ನು ಹೊಡೆದುರುಳಿಸಬೇಕು. ಈ ವಿಷಯದಲ್ಲಿ ವಿಳಂಬಮಾಡಬಾರದು.
01194013a ವಾಹನಾನಿ ಪ್ರಭೂತಾನಿ ಮಿತ್ರಾಣಿ ಬಹುಲಾನಿ ಚ।
01194013c ಯಾವನ್ನ ತೇಷಾಂ ಗಾಂಧಾರೇ ತಾವದೇವಾಶು ವಿಕ್ರಮ।।
ಗಾಂಧಾರೇ! ಅವರ ವಾಹನಗಳು ಹೆಚ್ಚಾಗುವುದರ ಮತ್ತು ಮಿತ್ರರು ಬಹಳವಾಗುವುದರ ಮೊದಲೇ ಅವರ ಮೇಲೆ ಯುದ್ಧಸಾರಬೇಕು.
01194014a ಯಾವಚ್ಚ ರಾಜಾ ಪಾಂಚಾಲ್ಯೋ ನೋದ್ಯಮೇ ಕುರುತೇ ಮನಃ।
01194014c ಸಹ ಪುತ್ರೈರ್ಮಹಾವೀರ್ಯೈಸ್ತಾವದೇವಾಶು ವಿಕ್ರಮ।।
ಪುತ್ರರೊಂದಿಗೆ ರಾಜ ಪಾಂಚಾಲ್ಯನು ಏನನ್ನಾದರೂ ಮಾಡಲು ಮನಸ್ಸು ಮಾಡುವುದಕ್ಕಿಂತ ಮೊದಲೇ ಅವರ ಮೇಲೆ ಆಕ್ರಮಣಮಾಡು.
01194015a ಯಾವನ್ನಾಯಾತಿ ವಾರ್ಷ್ಣೇಯಃ ಕರ್ಷನ್ಯಾದವವಾಹಿನೀಂ।
01194015c ರಾಜ್ಯಾರ್ಥೇ ಪಾಂಡವೇಯಾನಾಂ ತಾವದೇವಾಶು ವಿಕ್ರಮ।।
ಪಾಂಡವರಿಗೆ ರಾಜ್ಯವನ್ನು ದೊರಕಿಸಲು ವಾರ್ಷ್ಣೇಯನು ಯಾದವ ಸೇನೆಯನ್ನು ತರುವುದರ ಮೊದಲೇ ಅವರ ಮೇಲೆ ಆಕ್ರಮಣಮಾಡಬೇಕು.
01194016a ವಸೂನಿ ವಿವಿಧಾನ್ಭೋಗಾನ್ರಾಜ್ಯಮೇವ ಚ ಕೇವಲಂ।
01194016c ನಾತ್ಯಾಜ್ಯಮಸ್ತಿ ಕೃಷ್ಣಸ್ಯ ಪಾಂಡವಾರ್ಥೇ ಮಹೀಪತೇ।।
ಮಹೀಪತೇ! ಪಾಂಡವರಿಗೋಸ್ಕರ ಕೃಷ್ಣನು ತನ್ನ ಸಂಪತ್ತು, ವಿವಿಧ ಭೋಗಗಳು ಮತ್ತೇನು ರಾಜ್ಯವನ್ನೂ ತ್ಯಾಗಮಾಡುತ್ತಾನೆ.
01194017a ವಿಕ್ರಮೇಣ ಮಹೀ ಪ್ರಾಪ್ತಾ ಭರತೇನ ಮಹಾತ್ಮನಾ।
01194017c ವಿಕ್ರಮೇಣ ಚ ಲೋಕಾಂಸ್ತ್ರೀಂಜಿತವಾನ್ಪಾಕಶಾಸನಃ।।
ಮಹಾತ್ಮ ಭರತನು ತನ್ನ ವಿಕ್ರಮದಿಂದಲೇ ಈ ಮಹಿಯನ್ನು ಪಡೆದನು. ಪಾಕಶಾಸನನೂ ಕೂಡ ತನ್ನ ವಿಕ್ರಮದಿಂದಲೇ ಮೂರುಲೋಕಗಳನ್ನು ಗೆದ್ದನು.
01194018a ವಿಕ್ರಮಂ ಚ ಪ್ರಶಂಸಂತಿ ಕ್ಷತ್ರಿಯಸ್ಯ ವಿಶಾಂ ಪತೇ।
01194018c ಸ್ವಕೋ ಹಿ ಧರ್ಮಃ ಶೂರಾಣಾಂ ವಿಕ್ರಮಃ ಪಾರ್ಥಿವರ್ಷಭ।।
ವಿಶಾಂಪತೇ! ಕ್ಷತ್ರಿಯರಲ್ಲಿ ವಿಕ್ರಮವನ್ನೇ ಪ್ರಶಂಸಿಸುತ್ತಾರೆ. ಪಾರ್ಥಿವರ್ಷಭ! ಶೂರರಿಗೆ ವಿಕ್ರಮವೇ ಸ್ವಧರ್ಮ.
01194019a ತೇ ಬಲೇನ ವಯಂ ರಾಜನ್ಮಹತಾ ಚತುರಂಗಿಣಾ।
01194019c ಪ್ರಮಥ್ಯ ದ್ರುಪದಂ ಶೀಘ್ರಮಾನಯಾಮೇಹ ಪಾಂಡವಾನ್।।
ರಾಜನ್! ಮಹಾ ಚತುರಂಗಬಲದಿಂದ ದ್ರುಪದನನ್ನು ಸದೆಬಡಿದು ಶೀಘ್ರವಾಗಿ ಪಾಂಡವರನ್ನು ಇಲ್ಲಿಗೆ ಕರೆತರಬೇಕು.
01194020a ನ ಹಿ ಸಾಮ್ನಾ ನ ದಾನೇನ ನ ಭೇದೇನ ಚ ಪಾಂಡವಾಃ।
01194020c ಶಕ್ಯಾಃ ಸಾಧಯಿತುಂ ತಸ್ಮಾದ್ವಿಕ್ರಮೇಣೈವ ತಾಂಜ ಹಿ।
ಸಾಮ, ದಾನ, ಭೇದ, ಯಾವುದರಿಂದಲೂ ಪಾಂಡವರನ್ನು ಜಯಿಸಲು ಸಾಧ್ಯವಿಲ್ಲ. ವಿಕ್ರಮದಿಂದ ಮಾತ್ರ ಅವರನ್ನು ಜಯಿಸಬಹುದು.
01194021a ತಾನ್ವಿಕ್ರಮೇಣ ಜಿತ್ವೇಮಾಮಖಿಲಾಂ ಭುಂಕ್ಷ್ವ ಮೇದಿನೀಂ।
01194021c ನಾನ್ಯಮತ್ರ ಪ್ರಪಶ್ಯಾಮಿ ಕಾರ್ಯೋಪಾಯಂ ಜನಾಧಿಪ।।
ಜನಾಧಿಪ! ವಿಕ್ರಮದಿಂದ ಅವರನ್ನು ಜಯಿಸಿ ಅಖಿಲ ಮೇದಿನಿಯನ್ನು ಭೋಗಿಸು. ಬೇರೆ ಯಾವ ಕಾರ್ಯೋಪಾಯವೂ ನನಗೆ ತೋಚುತ್ತಿಲ್ಲ.””
01194022 ವೈಶಂಪಾಯನ ಉವಾಚ।
01194022a ಶ್ರುತ್ವಾ ತು ರಾಧೇಯವಚೋ ಧೃತರಾಷ್ಟ್ರಃ ಪ್ರತಾಪವಾನ್।
01194022c ಅಭಿಪೂಜ್ಯ ತತಃ ಪಶ್ಚಾದಿದಂ ವಚನಮಬ್ರವೀತ್।।
ವೈಶಂಪಾಯನನು ಹೇಳಿದನು: “ರಾಧೇಯನ ಮಾತುಗಳನ್ನು ಕೇಳಿದ ಪ್ರತಾಪಿ ಧೃತರಾಷ್ಟ್ರನು ಅದನ್ನು ಪ್ರಶಂಸಿಸಿ ನಂತರ ಈ ಮಾತುಗಳನ್ನಾಡಿದನು:
01194023a ಉಪಪನ್ನಂ ಮಹಾಪ್ರಾಜ್ಞೇ ಕೃತಾಸ್ತ್ರೇ ಸೂತನಂದನೇ।
01194023c ತ್ವಯಿ ವಿಕ್ರಮಸಂಪನ್ನಮಿದಂ ವಚನಮೀದೃಶಂ।।
“ಮಹಾಪ್ರಾಜ್ಞ ಕೃತಾಸ್ತ್ರ ಸೂತನಂದನ! ಈ ವಿಕ್ರಮ ಮಾತುಗಳು ನಿನ್ನಂಥವರಿಗೆ ಸರಿಯೆನಿಸುತ್ತದೆ.
01194024a ಭೂಯ ಏವ ತು ಭೀಷ್ಮಶ್ಚ ದ್ರೋಣೋ ವಿದುರ ಏವ ಚ।
01194024c ಯುವಾಂ ಚ ಕುರುತಾಂ ಬುದ್ಧಿಂ ಭವೇದ್ಯಾ ನಃ ಸುಖೋದಯಾ।।
ಆದರೆ ಭೀಷ್ಮ, ದ್ರೋಣ, ವಿದುರ ಮತ್ತು ನೀವಿಬ್ಬರೂ ಸೇರಿ ನಮಗೆ ಸುಖವನ್ನು ತರುವಂತೆ ಏನಾದರೂ ಯೋಚಿಸಿ.”
01194025a ತತ ಆನಾಯ್ಯ ತಾನ್ಸರ್ವಾನ್ಮಂತ್ರಿಣಃ ಸುಮಹಾಯಶಾಃ।
01194025c ಧೃತರಾಷ್ಟ್ರೋ ಮಹಾರಾಜ ಮಂತ್ರಯಾಮಾಸ ವೈ ತದಾ।।
ನಂತರ ಆ ಸುಮಹಾಯಶ ಮಹಾರಾಜ ಧೃತರಾಷ್ಟ್ರನು ಆ ಎಲ್ಲ ಮಂತ್ರಿಗಳನ್ನೂ ಕರೆಯಿಸಿ, ಅವರೊಂದಿಗೆ ಮಂತ್ರಾಲೋಚನೆ ಮಾಡಿದನು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವಿದುರಾಗಮನಪರ್ವಣಿ ಧೃತರಾಷ್ಟ್ರಮಂತ್ರಣೇ ಚತುರ್ನವತ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವಿದುರಾಗಮನಪರ್ವದಲ್ಲಿ ಧೃತರಾಷ್ಟ್ರಮಂತ್ರಣದಲ್ಲಿ ನೂರಾತೊಂಭತ್ತ್ನಾಲ್ಕನೆಯ ಅಧ್ಯಾಯವು.