180 ಕೃಷ್ಣವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸ್ವಯಂವರ ಪರ್ವ

ಅಧ್ಯಾಯ 180

ಸಾರ

ದ್ರೌಪದಿಯನ್ನು ಬ್ರಾಹ್ಮಣನಿಗೆ ಕೊಡುವುದನ್ನು ನೆರೆದ ಕ್ಷತ್ರಿಯರು ಪ್ರತಿಭಟಿಸುವುದು (1-13). ಭೀಮಾರ್ಜುನರು ದ್ರುಪದನನ್ನು ಆಕ್ರಮಣ ಮಾಡಲು ಮುನ್ನುಗ್ಗುತ್ತಿರುವ ರಾಜರನ್ನು ಎದುರಿಸಿ ತಡೆದುದು (14-16). ಕೃಷ್ಣನು ಪಾಂಡವರನ್ನು ಗುರುತಿಸಿ, ಪುನಃ ಬಲರಾಮನಿಗೆ ಹೇಳುವುದು (17-22).

01180001 ವೈಶಂಪಾಯನ ಉವಾಚ।
01180001a ತಸ್ಮೈ ದಿತ್ಸತಿ ಕನ್ಯಾಂ ತು ಬ್ರಾಹ್ಮಣಾಯ ಮಹಾತ್ಮನೇ।
01180001c ಕೋಪ ಆಸೀನ್ಮಹೀಪಾನಾಮಾಲೋಕ್ಯಾನ್ಯೋನ್ಯಮಂತಿಕಾತ್।।

ವೈಶಂಪಾಯನನು ಹೇಳಿದನು: “ರಾಜನು ಕನ್ಯೆಯನ್ನು ಆ ಮಹಾತ್ಮ ಬ್ರಾಹ್ಮಣನಿಗೆ ಕೊಡಬೇಕೆಂದಿರುವಾಗ, ನೆರೆದಿದ್ದ ಮಹೀಪತಿಗಳೆಲ್ಲಾ ಕೋಪಗೊಂಡು ಪರಸ್ಪರರನ್ನು ನೋಡತೊಡಗಿದರು.

01180002a ಅಸ್ಮಾನಯಮತಿಕ್ರಮ್ಯ ತೃಣೀಕೃತ್ಯ ಚ ಸಂಗತಾನ್।
01180002c ದಾತುಮಿಚ್ಛತಿ ವಿಪ್ರಾಯ ದ್ರೌಪದೀಂ ಯೋಷಿತಾಂ ವರಾಂ।।

“ಇಲ್ಲಿ ನೆರೆದಿರುವ ನಮ್ಮೆಲ್ಲರನ್ನೂ ತೃಣೀಕರಿಸಿ ಅತಿಕ್ರಮಿಸಿ, ಸ್ತ್ರೀಯರಲ್ಲೇ ಶ್ರೇಷ್ಠ ದ್ರೌಪದಿಯನ್ನು ಒಬ್ಬ ಬ್ರಾಹ್ಮಣನಿಗೆ ಕೊಡಲು ತೊಡಗಿದ್ದಾನೆ.

01180003a ನಿಹನ್ಮೈನಂ ದುರಾತ್ಮಾನಂ ಯೋಽಯಮಸ್ಮಾನ್ನ ಮನ್ಯತೇ।
01180003c ನ ಹ್ಯರ್ಹತ್ಯೇಷ ಸತ್ಕಾರಂ ನಾಪಿ ವೃದ್ಧಕ್ರಮಂ ಗುಣೈಃ।।

ನಮಗೆ ಅಗೌರವವನ್ನು ತೋರಿಸುವ ಈ ದುರಾತ್ಮನನ್ನು ಕೊಲ್ಲೋಣ. ವೃದ್ಧರಿಗೆ ಅಥವಾ ಗುಣವಂತರಿಗೆ ತಗಲುವ ಸತ್ಕಾರಕ್ಕೆ ಇವನು ಅರ್ಹನಲ್ಲ.

01180004a ಹನ್ಮೈನಂ ಸಹ ಪುತ್ರೇಣ ದುರಾಚಾರಂ ನೃಪದ್ವಿಷಂ।
01180004c ಅಯಂ ಹಿ ಸರ್ವಾನಾಹೂಯ ಸತ್ಕೃತ್ಯ ಚ ನರಾಧಿಪಾನ್।
01180004e ಗುಣವದ್ಭೋಜಯಿತ್ವಾ ಚ ತತಃ ಪಶ್ಚಾದ್ವಿನಿಂದತಿ।।

ಈ ನೃಪದ್ವೇಷಿ, ದುರಾಚಾರಿಯನ್ನು ಪುತ್ರರ ಸಮೇತ ಕೊಲ್ಲೋಣ. ಮೊದಲು ಎಲ್ಲ ನರಾಧಿಪರನ್ನೂ ಅಹ್ವಾನಿಸಿ, ಸತ್ಕರಿಸಿ, ಸರಿಯಾಗಿ ಭೋಜನಗಳನ್ನೆಲ್ಲ ಇತ್ತು ನಂತರ ಅವರನ್ನೇ ನಿಂದನೆಮಾಡುತ್ತಿದ್ದಾನೆ.

01180005a ಅಸ್ಮಿನ್ರಾಜಸಮಾವಾಯೇ ದೇವಾನಾಮಿವ ಸಂನಯೇ।
01180005c ಕಿಮಯಂ ಸದೃಶಂ ಕಂ ಚಿನ್ನೃಪತಿಂ ನೈವ ದೃಷ್ಟವಾನ್।।

ದೇವಗಣಕ್ಕೆ ಸಮಾನ ಈ ರಾಜಸಮಾವೇಷದಲ್ಲಿ, ತನಗೆ ಸರಿಸಾಟಿಯಾದ ಯಾರೊಬ್ಬ ನೃಪನೂ ಕಾಣದೇ ಇರಲು ಹೇಗೆ ಸಾದ್ಯ?

01180006a ನ ಚ ವಿಪ್ರೇಷ್ವಧೀಕಾರೋ ವಿದ್ಯತೇ ವರಣಂ ಪ್ರತಿ।
01180006c ಸ್ವಯಂವರಃ ಕ್ಷತ್ರಿಯಾಣಾಮಿತೀಯಂ ಪ್ರಥಿತಾ ಶ್ರುತಿಃ।।

ಬ್ರಾಹ್ಮಣರಿಗೆ ಸ್ವಯಂವರದಲ್ಲಿ ಭಾಗವಹಿಸುವ ಅಧಿಕಾರವಿಲ್ಲ. ಶ್ರುತಿಗಳಪ್ರಕಾರ ಸ್ವಯಂವರವು ಕ್ಷತ್ರಿಯರಿಗೆ ಮಾತ್ರ.

01180007a ಅಥ ವಾ ಯದಿ ಕನ್ಯೇಯಂ ನೇಹ ಕಂ ಚಿದ್ಬುಭೂಷತಿ।
01180007c ಅಗ್ನಾವೇನಾಂ ಪರಿಕ್ಷಿಪ್ಯ ಯಾಮ ರಾಷ್ಟ್ರಾಣಿ ಪಾರ್ಥಿವಾಃ।।

ಅಥವಾ ಒಂದುವೇಳೆ ಈ ಕನ್ಯೆಗೆ ನಮ್ಮಲ್ಲಿ ಯಾರೂ ಬೇಡವಂತಿದ್ದರೆ, ಇವಳನ್ನು ಅಗ್ನಿಯಲ್ಲಿ ಹಾಕಿ ನಾವೆಲ್ಲರೂ ನಮ್ಮ ನಮ್ಮ ರಾಷ್ಟ್ರಗಳಿಗೆ ಮರಳೋಣ.

01180008a ಬ್ರಾಹ್ಮಣೋ ಯದಿ ವಾ ಬಾಲ್ಯಾಲ್ಲೋಭಾದ್ವಾ ಕೃತವಾನಿದಂ।
01180008c ವಿಪ್ರಿಯಂ ಪಾರ್ಥಿವೇಂದ್ರಾಣಾಂ ನೈಷ ವಧ್ಯಃ ಕಥಂ ಚನ।।

ತಿಳುವಳಿಕೆ ಇಲ್ಲದೆಯೊ ಅಥವಾ ಲೋಭದಿಂದಲೋ ಪಾರ್ಥಿವೇಂದ್ರರೆಲ್ಲರಿಗೂ ಅಪ್ರಿಯವಾದದ್ದನ್ನು ಮಾಡಿದ್ದರೂ ಈ ಬ್ರಾಹ್ಮಣನನ್ನು ಕೊಲ್ಲುವುದಾದರೂ ಹೇಗೆ?

01180009a ಬ್ರಾಹ್ಮಣಾರ್ಥಂ ಹಿ ನೋ ರಾಜ್ಯಂ ಜೀವಿತಂ ಚ ವಸೂನಿ ಚ।
01180009c ಪುತ್ರಪೌತ್ರಂ ಚ ಯಚ್ಚಾನ್ಯದಸ್ಮಾಕಂ ವಿದ್ಯತೇ ಧನಂ।।

ನಮ್ಮ ರಾಜ್ಯ, ಜೀವನ, ಸಂಪತ್ತು, ಪುತ್ರರು, ಪೌತ್ರರು, ಮತ್ತು ಸಮ್ಮಲ್ಲಿರುವ ಸರ್ವಸ್ವ ಧನವೂ ಬ್ರಾಹ್ಮಣಾರ್ಥವೇ ಅಲ್ಲವೆ?

01180010a ಅವಮಾನಭಯಾದೇತತ್ಸ್ವಧರ್ಮಸ್ಯ ಚ ರಕ್ಷಣಾತ್।
01180010c ಸ್ವಯಂವರಾಣಾಂ ಚಾನ್ಯೇಷಾಂ ಮಾ ಭೂದೇವಂವಿಧಾ ಗತಿಃ।।

ಆದರೂ ನಮ್ಮ ಧರ್ಮವನ್ನು ಅಪಮಾನದಿಂದ ರಕ್ಷಿಸಬೇಕು ಮತ್ತು ಇತರ ಸ್ವಯಂವರಗಳು ಇದರಂತೆ ನಡೆಯದೇ ಇರುವಹಾಗೆ ನೋಡಿಕೊಳ್ಳಬೇಕು.”

01180011a ಇತ್ಯುಕ್ತ್ವಾ ರಾಜಶಾರ್ದೂಲಾ ಹೃಷ್ಟಾಃ ಪರಿಘಬಾಹವಃ।
01180011c ದ್ರುಪದಂ ಸಂಜಿಘೃಕ್ಷಂತಃ ಸಾಯುಧಾಃ ಸಮುಪಾದ್ರವನ್।।

ಈ ಪ್ರಕಾರ ಮಾತನಾಡಿಕೊಳ್ಳುತ್ತಾ ರಾಜಶಾರ್ದೂಲರೆಲ್ಲರೂ ಉದ್ವೇಗಗೊಂಡು ಆಯುಧಗಳೆನ್ನಿತ್ತಿಕೊಂಡು ದೃಪದನನ್ನು ಮುಗಿಸಿ ಬಿಡುವ ಉದ್ದೇಶದಿಂದ ಆಯುಧಗಳನ್ನು ಬೀಸುತ್ತಾ ಮುನ್ನುಗ್ಗಿದರು.

01180012a ತಾನ್ಗೃಹೀತಶರಾವಾಪಾನ್ಕ್ರುದ್ಧಾನಾಪತತೋ ನೃಪಾನ್।
01180012c ದ್ರುಪದೋ ವೀಕ್ಷ್ಯ ಸಂತ್ರಾಸಾದ್ಬ್ರಾಹ್ಮಣಾಂಶರಣಂ ಗತಃ।।

ತಮ್ಮ ತಮ್ಮ ಬಿಲ್ಲು ಬಾಣಗಳನ್ನು ಹಿಡಿದು ಕೋಪದಿಂದ ಮೇಲೆ ಬೀಳುತ್ತಿರುವ ನೃಪರನ್ನು ಕಂಡ ದ್ರುಪದನು ಭಯಗೊಂಡು ಬ್ರಾಹ್ಮಣರ ಶರಣುಹೊಕ್ಕನು.

01180013a ವೇಗೇನಾಪತತಸ್ತಾಂಸ್ತು ಪ್ರಭಿನ್ನಾನಿವ ವಾರಣಾನ್।
01180013c ಪಾಂಡುಪುತ್ರೌ ಮಹಾವೀರ್ಯೌ ಪ್ರತೀಯತುರರಿಂದಮೌ।।

ಆಗ ಆ ಅರಿಂದಮ ವೀರ ಪಾಂಡುಪುತ್ರರು ಮದಿಸಿದ ಆನೆಗಳಂತೆ ಶೀಘ್ರವಾಗಿ ರಾಜರನ್ನು ಎದುರಿಸಿ ಮುಂದೆಬಂದರು.

01180014a ತತಃ ಸಮುತ್ಪೇತುರುದಾಯುಧಾಸ್ತೇ ಮಹೀಕ್ಷಿತೋ ಬದ್ಧತಲಾಂಗುಲಿತ್ರಾಃ।
01180014c ಜಿಘಾಂಸಮಾನಾಃ ಕುರುರಾಜಪುತ್ರಾವ್ ಅಮರ್ಷಯಂತೋಽರ್ಜುನಭೀಮಸೇನೌ।।

ತಮ್ಮ ಆಯುಧಗಳನ್ನು ಮೇಲೆತ್ತಿ ಅಂಗುಲೀ ಬದ್ಧರಾದ ಮಹೀಕ್ಷಿತರು ಕುರುರಾಜಪುತ್ರರನ್ನು ಕೊಲ್ಲಲು ಅರ್ಜುನ-ಭೀಮಸೇನರ ಮೇಲೆ ಎರಗಿದರು.

01180015a ತತಸ್ತು ಭೀಮೋಽದ್ಭುತವೀರ್ಯಕರ್ಮಾ ಮಹಾಬಲೋ ವಜ್ರಸಮಾನವೀರ್ಯಃ।
01180015c ಉತ್ಪಾಟ್ಯ ದೋರ್ಭ್ಯಾಂ ದ್ರುಮಮೇಕವೀರೋ ನಿಷ್ಪತ್ರಯಾಮಾಸ ಯಥಾ ಗಜೇಂದ್ರಃ।।

ಅದ್ಭುತ ವೀರ್ಯಕರ್ಮಿ, ಮಹಾಬಲಿ, ವಜ್ರಸಮಾನ ವೀರ್ಯವಂತ ಭೀಮನು ಏಕವೀರನಾಗಿ ಒಂದು ವೃಕ್ಷವನ್ನು ಕಿತ್ತು ಕೈಯಲ್ಲಿ ಹಿಡಿದು ಗಜೇಂದ್ರನಂತೆ ಅದರಲ್ಲಿರುವ ಎಲೆಗಳನ್ನೆಲ್ಲ ಉದುರಿಸಿದನು.

01180016a ತಂ ವೃಕ್ಷಮಾದಾಯ ರಿಪುಪ್ರಮಾಥೀ ದಂಡೀವ ದಂಡಂ ಪಿತೃರಾಜ ಉಗ್ರಂ।
01180016c ತಸ್ಥೌ ಸಮೀಪೇ ಪುರುಷರ್ಷಭಸ್ಯ ಪಾರ್ಥಸ್ಯ ಪಾರ್ಥಃ ಪೃಥುದೀರ್ಘಬಾಹುಃ।।

ರಿಪುಪ್ರಮಥಿ ದೀರ್ಘಬಾಹು ಪಾರ್ಥನು ಪಿತೃರಾಜನು ತನ್ನ ಉಗ್ರ ದಂಡವನ್ನು ಹಿಡಿಯುವಂತೆ ಆ ಮರವನ್ನು ಹಿಡಿದು ಪುರುಷರ್ಷಭ ಪಾರ್ಥ ಅರ್ಜುನನ ಪಕ್ಕದಲ್ಲಿ ನಿಂತನು.

01180017a ತತ್ಪ್ರೇಕ್ಷ್ಯ ಕರ್ಮಾತಿಮನುಷ್ಯಬುದ್ಧೇರ್ಜಿಷ್ಣೋಃ ಸಹಭ್ರಾತುರಚಿಂತ್ಯಕರ್ಮಾ।
01180017c ದಾಮೋದರೋ ಭ್ರಾತರಮುಗ್ರವೀರ್ಯಂ ಹಲಾಯುಧಂ ವಾಕ್ಯಮಿದಂ ಬಭಾಷೇ।।

ಅಚಿಂತ್ಯಕರ್ಮಿ ಜಿಷ್ಣು ಮತ್ತು ಅವನ ಸಹೋದರರ ಮನುಷ್ಯರಿಗೆ ಮೀರಿದ ಕೃತ್ಯವನ್ನು ಕಂಡ ದಾಮೋದರನು ತನ್ನ ಅಣ್ಣ ಉಗ್ರವೀರ್ಯ ಹಲಾಯುಧನಿಗೆ ಹೇಳಿದನು:

01180018a ಯ ಏಷ ಮತ್ತರ್ಷಭತುಲ್ಯಗಾಮೀ ಮಹದ್ಧನುಃ ಕರ್ಷತಿ ತಾಲಮಾತ್ರಂ।
01180018c ಏಷೋಽರ್ಜುನೋ ನಾತ್ರ ವಿಚಾರ್ಯಮಸ್ತಿ ಯದ್ಯಸ್ಮಿ ಸಂಕರ್ಷಣ ವಾಸುದೇವಃ।।

“ಸಂಕರ್ಷಣ! ನಾನು ವಾಸುದೇವನೆನ್ನುವುದರಲ್ಲಿ ಹೇಗೆ ಸಂದೇಹವೇ ಇಲ್ಲವೋ ಹಾಗೆ ಮದಿಸಿದ ವೃಷಭನಂತಿರುವ ಮಹಾಧನಸ್ಸನ್ನು ಬಗ್ಗಿಸಿದ ಅವನು ಅರ್ಜುನನೆನ್ನುವುದರಲ್ಲಿ ಸಂದೇಹವೇ ಇಲ್ಲ.

01180019a ಯ ಏಷ ವೃಕ್ಷಂ ತರಸಾವರುಜ್ಯ ರಾಜ್ಞಾಂ ವಿಕಾರೇ ಸಹಸಾ ನಿವೃತ್ತಃ।
01180019c ವೃಕೋದರೋ ನಾನ್ಯ ಇಹೈತದದ್ಯ ಕರ್ತುಂ ಸಮರ್ಥೋ ಭುವಿ ಮರ್ತ್ಯಧರ್ಮಾ।।

ತನ್ನ ಬಲದಿಂದ ವೃಕ್ಷವನ್ನು ಕಿತ್ತು ಈಗ ರಾಜರುಗಳನ್ನು ಎದುರಿಸುತ್ತಿರುವವನು ವೃಕೋದರ. ಯಾಕೆಂದರೆ ಇಂಥಹ ಕೃತ್ಯವನ್ನು ಮಾಡುವ ಬೇರೆ ಯಾವ ಮರ್ತ್ಯನೂ ಈ ಭೂಮಿಯಲ್ಲಿಲ್ಲ.

01180020a ಯೋಽಸೌ ಪುರಸ್ತಾತ್ಕಮಲಾಯತಾಕ್ಷಸ್ತನುರ್ಮಹಾಸಿಂಹಗತಿರ್ವಿನೀತಃ।
01180020c ಗೌರಃ ಪ್ರಲಂಬೋಜ್ಜ್ವಲಚಾರುಘೋಣೋ ವಿನಿಃಸೃತಃ ಸೋಽಚ್ಯುತ ಧರ್ಮರಾಜಃ।

ಈಗಾಗಲೇ ಹೊರಟುಹೋದ ಕಮಲಪತ್ರಾಕ್ಷ, ತೆಳುದೇಹಿ, ಸಿಂಹನಡುಗೆಯ, ವಿನೀತ, ಗೌರವರ್ಣದ ಹೊಳೆಯುತ್ತಿರುವ ಉದ್ದನೆಯ ಸುಂದರ ಮೂಗಿನ ಮಹಾತ್ಮನು ಧರ್ಮರಾಜನೇ ಇದ್ದಿರಬೇಕು.

01180021a ಯೌ ತೌ ಕುಮಾರಾವಿವ ಕಾರ್ತ್ತಿಕೇಯೌ ದ್ವಾವಶ್ವಿನೇಯಾವಿತಿ ಮೇ ಪ್ರತರ್ಕಃ।
01180021c ಮುಕ್ತಾ ಹಿ ತಸ್ಮಾಜ್ಜತುವೇಶ್ಮದಾಹಾನ್ಮಯಾ ಶ್ರುತಾಃ ಪಾಂಡುಸುತಾಃ ಪೃಥಾ ಚ।।

ಕಾರ್ತಿಕೇಯರಂತೆ ತೋರುತ್ತಿದ್ದ ಆ ಇಬ್ಬರು ಕುಮಾರರು ಅಶ್ವಿನೀ ದೇವತೆಗಳ ಪುತ್ರರಿರಬೇಕೆಂದೇ ನನ್ನ ಅಭಿಪ್ರಾಯ. ಯಾಕೆಂದರೆ ಪಾಂಡುಪುತ್ರರು ಮತ್ತು ಕುಂತಿಯು ಜತುಗೃಹದ ಬೆಂಕಿಯಿಂದ ತಪ್ಪಿಸಿಕೊಂಡರು ಎಂದು ಕೇಳಿದ್ದೇನೆ.”

01180022a ತಮಬ್ರವೀನ್ನಿರ್ಮಲತೋಯದಾಭೋ ಹಲಾಯುಧೋಽನಂತರಜಂ ಪ್ರತೀತಃ।
01180022c ಪ್ರೀತೋಽಸ್ಮಿ ದಿಷ್ಟ್ಯಾ ಹಿ ಪಿತೃಷ್ವಸಾ ನಃ ಪೃಥಾ ವಿಮುಕ್ತಾ ಸಹ ಕೌರವಾಗ್ರ್ಯೈಃ।।

ನಿರ್ಮಲ ಹಲಾಯುಧನು “ನಮ್ಮ ತಂದೆಯ ಸಹೋದರಿ ಪೃಥಾಳಿಗೆ ಕೌರವಾಗ್ರರ ಸಹಿತ ಬಿಡುಗಡೆ ದೊರಕಿದುದನ್ನು ಕೇಳಿ ನನಗೆ ಬಹಳ ಸಂತೋಷವಾಗಿದೆ” ಎಂದು ತನ್ನ ಸಹೋದರನಿಗೆ ಹೇಳಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸ್ವಯಂವರಪರ್ವಣಿ ಕೃಷ್ಣವಾಕ್ಯೇ ಅಶೀತ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸ್ವಯಂವರಪರ್ವದಲ್ಲಿ ಕೃಷ್ಣವಾಕ್ಯದಲ್ಲಿ ನೂರಾಎಂಭತ್ತನೆಯ ಅಧ್ಯಾಯವು.