ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಸ್ವಯಂವರ ಪರ್ವ
ಅಧ್ಯಾಯ 179
ಸಾರ
ಬ್ರಾಹ್ಮಣರು ಅರ್ಜುನನನ್ನು ನೋಡಿ ಬಹುವಿಧವಾಗಿ ಮಾತನಾಡಿಕೊಳ್ಳುವುದು (1-14). ಅರ್ಜುನನು ಮತ್ಸ್ಯವನ್ನು ಭೇದಿಸಲು ಹರ್ಷೋದ್ಗಾರ, ಯುಧಿಷ್ಠಿರನು ಅವಳಿಗಳ ಜೊತೆ ಅವಾಸದೆಡೆಗೆ ಹೊರಟು ಹೋದುದು, ದ್ರೌಪದಿಯು ವರಮಾಲೆಯನ್ನು ಹಾಕಿ ಅರ್ಜುನನನ್ನು ಹಿಂಬಾಲಿಸಿದುದು (15-23).
01179001 ವೈಶಂಪಾಯನ ಉವಾಚ।
01179001a ಯದಾ ನಿವೃತ್ತಾ ರಾಜಾನೋ ಧನುಷಃ ಸಜ್ಯಕರ್ಮಣಿ।
01179001c ಅಥೋದತಿಷ್ಠದ್ವಿಪ್ರಾಣಾಂ ಮಧ್ಯಾಜ್ಜಿಷ್ಣುರುದಾರಧೀಃ।।
ವೈಶಂಪಾಯನನು ಹೇಳಿದನು: “ರಾಜರೆಲ್ಲರೂ ಧನುಸ್ಸನ್ನು ಸಜ್ಜಿಸುವ ಕಾರ್ಯದಿಂದ ಹಿಂದೆ ಸರಿದುಕೊಂಡ ನಂತರ ಬ್ರಾಹ್ಮಣರ ಮಧ್ಯದಿಂದ ಉದಾರಮನಸ್ಸಿನ ಜಿಷ್ಣುವು ಎದ್ದು ನಿಂತನು.
01179002a ಉದಕ್ರೋಶನ್ವಿಪ್ರಮುಖ್ಯಾ ವಿಧುನ್ವಂತೋಽಜಿನಾನಿ ಚ।
01179002c ದೃಷ್ಟ್ವಾ ಸಂಪ್ರಸ್ಥಿತಂ ಪಾರ್ಥಮಿಂದ್ರಕೇತುಸಮಪ್ರಭಂ।।
ಇಂದ್ರಧನುಸ್ಸಿನ ಕಾಂತಿಯುಕ್ತ ಪಾರ್ಥನು ಎದ್ದುದನ್ನು ನೋಡಿ ವಿಪ್ರಪ್ರಮುಖರೆಲ್ಲರೂ ತಮ್ಮ ಜಿನವಸ್ತ್ರಗಳನ್ನು ಹಾರಿಸಿ ಉದ್ಗರಿಸಿದರು.
01179003a ಕೇ ಚಿದಾಸನ್ವಿಮನಸಃ ಕೇ ಚಿದಾಸನ್ಮುದಾ ಯುತಾಃ।
01179003c ಆಹುಃ ಪರಸ್ಪರಂ ಕೇ ಚಿನ್ನಿಪುಣಾ ಬುದ್ಧಿಜೀವಿನಃ।।
ಕೆಲವರು ವಿಮನಸಗೊಂಡಿದ್ದರೆ ಮತ್ತೆ ಕೆಲವರು ಮುದಿತರಾಗಿದ್ದರು; ಮತ್ತೆ ಕೆಲವು ನಿಪುಣ ಬುದ್ಧಿಜೀವಿಗಳು ಪರಸ್ಪರರಲ್ಲಿ ಮಾತನಾಡಿಕೊಂಡರು:
01179004a ಯತ್ಕರ್ಣಶಲ್ಯಪ್ರಮುಖೈಃ ಪಾರ್ಥಿವೈರ್ಲೋಕವಿಶ್ರುತೈಃ।
01179004c ನಾನತಂ ಬಲವದ್ಭಿರ್ಹಿ ಧನುರ್ವೇದಪರಾಯಣೈಃ।।
01179005a ತತ್ಕಥಂ ತ್ವಕೃತಾಸ್ತ್ರೇಣ ಪ್ರಾಣತೋ ದುರ್ಬಲೀಯಸಾ।
01179005c ಬಟುಮಾತ್ರೇಣ ಶಕ್ಯಂ ಹಿ ಸಜ್ಯಂ ಕರ್ತುಂ ಧನುರ್ದ್ವಿಜಾಃ।।
“ಕರ್ಣ ಮತ್ತು ಶಲ್ಯರಂತಹ ಲೋಕವಿಶ್ರುತ, ಬಲಶಾಲಿ, ಧನುರ್ವೇದಪರಾಯಣ ಪಾರ್ಥಿವರಿಂದಲೇ ಈ ಧನಸ್ಸನ್ನು ಬಗ್ಗಿಸಲು ಅಸಾಧ್ಯವಾದಾಗ, ಅಸ್ತ್ರ-ಶಸ್ತ್ರಗಳಲ್ಲಿ ಪರಿಣತಿಯಿಲ್ಲದ, ದುರ್ಬಲನಾಗಿ ಕಾಣುತ್ತಿರುವ ಈ ವಟುಮಾತ್ರನಿಂದ ಧನಸ್ಸನ್ನು ಸಜ್ಜಿಸಲು ಹೇಗೆ ಶಕ್ಯ, ಬ್ರಾಹ್ಮಣರೇ!
01179006a ಅವಹಾಸ್ಯಾ ಭವಿಷ್ಯಂತಿ ಬ್ರಾಹ್ಮಣಾಃ ಸರ್ವರಾಜಸು।
01179006c ಕರ್ಮಣ್ಯಸ್ಮಿನ್ನಸಂಸಿದ್ಧೇ ಚಾಪಲಾದಪರೀಕ್ಷಿತೇ।।
ಚಪಲತೆಯಿಂದ, ಸರಿಯಾಗಿ ಆಲೋಚನೆ ಮಾಡದೇ ತೆಗೆದುಕೊಂಡ ಈ ಕಾರ್ಯದಲ್ಲಿ ಅವನು ಯಶಸ್ವಿಯಾಗದಿದ್ದರೆ, ಈ ಎಲ್ಲ ರಾಜರ ಮುಂದೆ ನಾವು ಬ್ರಾಹ್ಮಣರು ಅಪಹಾಸ್ಯಗೊಳಗಾಗಲಿದ್ದೇವೆ.
01179007a ಯದ್ಯೇಷ ದರ್ಪಾದ್ಧರ್ಷಾದ್ವಾ ಯದಿ ವಾ ಬ್ರಹ್ಮಚಾಪಲಾತ್।
01179007c ಪ್ರಸ್ಥಿತೋ ಧನುರಾಯಂತುಂ ವಾರ್ಯತಾಂ ಸಾಧು ಮಾ ಗಮತ್।।
01179008a ನಾವಹಾಸ್ಯಾ ಭವಿಷ್ಯಾಮೋ ನ ಚ ಲಾಘವಮಾಸ್ಥಿತಾಃ।
01179008c ನ ಚ ವಿದ್ವಿಷ್ಟತಾಂ ಲೋಕೇ ಗಮಿಷ್ಯಾಮೋ ಮಹೀಕ್ಷಿತಾಂ।।
ಒಂದುವೇಳೆ ಅವನು ದರ್ಪ ಅಥವಾ ಉತ್ಸಾಹ ಅಥವಾ ಬ್ರಾಹ್ಮಣರಮೇಲಿರುವ ಕೀಳರಿಮೆಯಿಂದ ಆ ಧನುಸ್ಸನ್ನು ಕಟ್ಟಲು ಹೋಗುತ್ತಿದ್ದಾನೆಂದಾದರೆ, ನಾವು ಅಪಹಾಸ್ಯಕ್ಕೆ ಒಳಗಾಗದಿರಲು, ಹಗುರವೆನಿಸಿಕೊಳ್ಳದಿರಲು ಮತ್ತು ಲೋಕದ ಎಲ್ಲ ಮಹೀಪತಿಗಳ ದ್ವೇಷಕ್ಕೊಳಗಾಗದೇ ಇರಲು ಅವನನ್ನು ತಡೆಹಿಡಿಯುವುದು ಒಳ್ಳೆಯದು.”
01179009a ಕೇ ಚಿದಾಹುರ್ಯುವಾ ಶ್ರೀಮಾನ್ನಾಗರಾಜಕರೋಪಮಃ।
01179009c ಪೀನಸ್ಕಂಧೋರುಬಾಹುಶ್ಚ ಧೈರ್ಯೇಣ ಹಿಮವಾನಿವ।।
ಇತರರು ಹೇಳಿದರು: “ಯುವಕನು ಉತ್ತಮನಾಗಿದ್ದಾನೆ. ಗಜರಾಜನ ಸೊಂಡಿಲಿನಂತೆ ತೋರುತ್ತಿದ್ದಾನೆ. ಅವನ ಬಾಹು, ತೊಡೆ ಮತ್ತು ತೋಳುಗಳು ಮಾಂಸಖಂಡಗಳಿಂದ ತುಂಬಿಕೊಂಡು ಗಟ್ಟಿಯಾಗಿ ಕಾಣಿಸುತ್ತಿವೆ ಮತ್ತು ಹಿಮಾಲಯದಂತೆ ಅವನ ನಿಲುವಿನಲ್ಲಿ ಧೈರ್ಯವಿದೆ.
01179010a ಸಂಭಾವ್ಯಮಸ್ಮಿನ್ಕರ್ಮೇದಮುತ್ಸಾಹಾಚ್ಚಾನುಮೀಯತೇ।
01179010c ಶಕ್ತಿರಸ್ಯ ಮಹೋತ್ಸಾಹಾ ನ ಹ್ಯಶಕ್ತಃ ಸ್ವಯಂ ವ್ರಜೇತ್।।
ಅವನು ಕಾರ್ಯದಲ್ಲಿ ಗೆಲ್ಲುತ್ತಾನೆ ಎನ್ನುವುದನ್ನು ಅವನಲ್ಲಿರುವ ಉತ್ಸಾಹವೇ ತೋರಿಸುತ್ತಿದೆ. ಅವನ ಶಕ್ತಿಯಲ್ಲಿ ಉತ್ಸಾಹವಿದೆ. ಇಂತಹ ಸಮರ್ಥ ವ್ಯಕ್ತಿಯು ತಾನಾಗಿಯೇ ಬಿಟ್ಟುಹೋಗುವುದಿಲ್ಲ.
01179011a ನ ಚ ತದ್ವಿದ್ಯತೇ ಕಿಂ ಚಿತ್ಕರ್ಮ ಲೋಕೇಷು ಯದ್ಭವೇತ್।
01179011c ಬ್ರಾಹ್ಮಣಾನಾಮಸಾಧ್ಯಂ ಚ ತ್ರಿಷು ಸಂಸ್ಥಾನಚಾರಿಷು।।
ಇದಲ್ಲದೇ, ಮೂರು ಸಂಸ್ಥಾನಚಾರಿಗಳಲ್ಲಿ ಬ್ರಾಹ್ಮಣರಿಗೆ ಅಸಾಧ್ಯವಾದ ಯಾವ ಕಾರ್ಯವೂ ಯಾವುದೇ ಲೋಕದಲ್ಲಿಯೂ ಕಂಡುಬರುವುದಿಲ್ಲ.
01179012a ಅಬ್ಭಕ್ಷಾ ವಾಯುಭಕ್ಷಾಶ್ಚ ಫಲಾಹಾರಾ ದೃಢವ್ರತಾಃ।
01179012c ದುರ್ಬಲಾ ಹಿ ಬಲೀಯಾಂಸೋ ವಿಪ್ರಾ ಹಿ ಬ್ರಹ್ಮತೇಜಸಾ।।
ಕೇವಲ ನೀರು, ವಾಯು ಅಥವಾ ಫಲಾಹಾರ ಸೇವನೆಯಿಂದ ದೃಢವ್ರತ ವಿಪ್ರರು ದುರ್ಬಲರೆನಿಸಿದರೂ, ಅವರ ಬ್ರಹ್ಮತೇಜಸ್ಸಿನಿಂದ ಬಹಳ ಬಲಶಾಲಿಗಳಾಗಿರುತ್ತಾರೆ.
01179013a ಬ್ರಾಹ್ಮಣೋ ನಾವಮಂತವ್ಯಃ ಸದ್ವಾಸದ್ವಾ ಸಮಾಚರನ್।
01179013c ಸುಖಂ ದುಃಖಂ ಮಹದ್ಧ್ರಸ್ವಂ ಕರ್ಮ ಯತ್ಸಮುಪಾಗತಂ।।
ಅವನು ಒಳ್ಳೆಯದನ್ನು ಅಥವಾ ಕೆಟ್ಟದ್ದನ್ನು ಮಾಡಲಿ, ಅವನು ತೊಡಗಿರುವ ಕಾರ್ಯವು ಸುಖಕರವಾಗಿರಲಿ ದುಃಖಕರವಾಗಿರಲಿ ಅಥವಾ ದೊಡ್ಡಕಾರ್ಯವೇ ಆಗಿರಲಿ ಅಥವಾ ಸಣ್ಣಕಾರ್ಯವೇ ಆಗಿರಲಿ, ಬ್ರಾಹ್ಮಣನನ್ನು ಅವಹೇಳನೆ ಮಾಡಬಾರದು.”
01179014a ಏವಂ ತೇಷಾಂ ವಿಲಪತಾಂ ವಿಪ್ರಾಣಾಂ ವಿವಿಧಾ ಗಿರಃ।
01179014c ಅರ್ಜುನೋ ಧನುಷೋಽಭ್ಯಾಶೇ ತಸ್ಥೌ ಗಿರಿರಿವಾಚಲಃ।।
ಈ ರೀತಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳುತ್ತಿರುವಾಗ, ಅರ್ಜುನನು ಧನುಸ್ಸಿನ ಬಳಿ ಹೋಗಿ ಅಚಲ ಪರ್ವತದಂತೆ ನಿಂತನು.
01179015a ಸ ತದ್ಧನುಃ ಪರಿಕ್ರಮ್ಯ ಪ್ರದಕ್ಷಿಣಮಥಾಕರೋತ್।
01179015c ಪ್ರಣಮ್ಯ ಶಿರಸಾ ಹೃಷ್ಟೋ ಜಗೃಹೇ ಚ ಪರಂತಪಃ।।
ಆ ಪರಂತಪನು ಧನುಸ್ಸನ್ನು ಸುತ್ತುವರಿದು ಪ್ರದಕ್ಷಿಣೆ ಮಾಡಿ, ತಲೆ ಬಗ್ಗಿಸಿ ಪ್ರಣಾಮಮಾಡಿದನು ಮತ್ತು ಸಂತೋಷದಿಂದ ಅದನ್ನು ಕೈಯಲ್ಲಿ ತೆಗೆದುಕೊಂಡನು.
01179016a ಸಜ್ಯಂ ಚ ಚಕ್ರೇ ನಿಮಿಷಾಂತರೇಣ ಶರಾಂಶ್ಚ ಜಗ್ರಾಹ ದಶಾರ್ಧಸಂಖ್ಯಾನ್।
01179016c ವಿವ್ಯಾಧ ಲಕ್ಷ್ಯಂ ನಿಪಪಾತ ತಚ್ಚ ಚಿದ್ರೇಣ ಭೂಮೌ ಸಹಸಾತಿವಿದ್ಧಂ।।
ಕಣ್ಣು ಮುಚ್ಚಿ ಬಿಡುವುದರಲ್ಲಿ ಅವನು ಧನುಸ್ಸನ್ನು ಕಟ್ಟಿ, ಐದು ಬಾಣಗಳನ್ನು ತೆಗೆದುಕೊಂಡು, ರಂಧ್ರದ ಮೂಲಕ ಲಕ್ಷ್ಯವನ್ನು ಭೇದಿಸಿ ಕೆಳಗೆ ಭೂಮಿಯಮೇಲೆ ರಭಸದಿಂದ ಬೀಳಿಸಿದನು.
01179017a ತತೋಽಂತರಿಕ್ಷೇ ಚ ಬಭೂವ ನಾದಃ ಸಮಾಜಮಧ್ಯೇ ಚ ಮಹಾನ್ನಿನಾದಃ।
01179017c ಪುಷ್ಪಾಣಿ ದಿವ್ಯಾನಿ ವವರ್ಷ ದೇವಃ ಪಾರ್ಥಸ್ಯ ಮೂರ್ಧ್ನಿ ದ್ವಿಷತಾಂ ನಿಹಂತುಃ।।
ಅಂತರಿಕ್ಷದಲ್ಲಿ ಹರ್ಷೋದ್ಗಾರವಾಯಿತು, ಜನರ ಗುಂಪಿನಲ್ಲಿ ಮಹಾನಿನಾದವು ಕೇಳಿಬಂದಿತು. ಶತ್ರುನಾಶಿನಿ ಪಾರ್ಥನ ನೆತ್ತಿಯಮೇಲೆ ದೇವತೆಗಳು ದಿವ್ಯ ಪುಷ್ಪಗಳ ಮಳೆ ಸುರಿಸಿದರು.
01179018a ಚೇಲಾವೇಧಾಂಸ್ತತಶ್ಚಕ್ರುರ್ಹಾಹಾಕಾರಾಂಶ್ಚ ಸರ್ವಶಃ।
01179018c ನ್ಯಪತಂಶ್ಚಾತ್ರ ನಭಸಃ ಸಮಂತಾತ್ಪುಷ್ಪವೃಷ್ಟಯಃ।।
ಉತ್ತರೀಯಗಳನ್ನು ಪಟದಂತೆ ಹಾರಿಸುತ್ತಾ ನೆರೆದಿದ್ದ ಎಲ್ಲ ಪ್ರೇಕ್ಷಕರೂ ಹಾಹಾಕಾರಗೈದರು ಮತ್ತು ನಭದಿಂದ ಪುಷ್ಪವೃಷ್ಟಿಯಾಯಿತು.
01179019a ಶತಾಂಗಾನಿ ಚ ತೂರ್ಯಾಣಿ ವಾದಕಾಶ್ಚಾಪ್ಯವಾದಯನ್।
01179019c ಸೂತಮಾಗಧಸಂಘಾಶ್ಚ ಅಸ್ತುವಂಸ್ತತ್ರ ಸುಸ್ವನಾಃ।।
ವಾದ್ಯಗಾರರು ನೂರಾರು ವಾದ್ಯ ತೂರ್ಯಗಳನ್ನು ಮೊಳಗಿಸಿದರು ಮತ್ತು ಸೂತ ಮಾಗಧರು ಎತ್ತರ ಸ್ವರಗಳಲ್ಲಿ ಪ್ರಶಂಸನೆಗಳನ್ನು ಹಾಡಿದರು.
01179020a ತಂ ದೃಷ್ಟ್ವಾ ದ್ರುಪದಃ ಪ್ರೀತೋ ಬಭೂವಾರಿನಿಷೂದನಃ।
01179020c ಸಹಸೈನ್ಯಶ್ಚ ಪಾರ್ಥಸ್ಯ ಸಾಹಾಯ್ಯಾರ್ಥಮಿಯೇಷ ಸಃ।।
ಅರಿನಿಷೂದನ ದ್ರುಪದನು ಅವನನ್ನು ನೋಡಿ ಸಂತೋಷಗೊಂಡು, ಪಾರ್ಥನ ರಕ್ಷಣೆಗೆಂದು ಸೈನ್ಯಸಮೇತ ನಿಂತನು.
01179021a ತಸ್ಮಿಂಸ್ತು ಶಬ್ದೇ ಮಹತಿ ಪ್ರವೃತ್ತೇ ಯುಧಿಷ್ಠಿರೋ ಧರ್ಮಭೃತಾಂ ವರಿಷ್ಠಃ।
01179021c ಆವಾಸಮೇವೋಪಜಗಾಮ ಶೀಘ್ರಂ ಸಾರ್ಧಂ ಯಮಾಭ್ಯಾಂ ಪುರುಷೋತ್ತಮಾಭ್ಯಾಂ।।
ಈ ಗಲಾಟೆಯು ಹೆಚ್ಚಾಗುತ್ತಿದ್ದಂತೆ, ಧರ್ಮಭೃತರಲ್ಲಿ ವರಿಷ್ಠ ಯುಧಿಷ್ಠಿರನು, ಪುರುಷೋತ್ತಮ ಅವಳಿಗಳ ಜೊತೆಗೂಡಿ ಶೀಘ್ರವಾಗಿ ಅವಾಸದೆಡೆಗೆ ಹೊರಟುಹೋದನು.
01179022a ವಿದ್ಧಂ ತು ಲಕ್ಷ್ಯಂ ಪ್ರಸಮೀಕ್ಷ್ಯ ಕೃಷ್ಣಾ ಪಾರ್ಥಂ ಚ ಶಕ್ರಪ್ರತಿಮಂ ನಿರೀಕ್ಷ್ಯ।
01179022c ಆದಾಯ ಶುಕ್ಲಂ ವರಮಾಲ್ಯದಾಮ ಜಗಾಮ ಕುಂತೀಸುತಮುತ್ಸ್ಮಯಂತೀ।।
ಲಕ್ಷ್ಯವನ್ನು ಹೊಡೆದಿದ್ದನ್ನು ನೋಡಿ, ಶಕ್ರಪ್ರತಿಮ ಪಾರ್ಥನನ್ನು ನೋಡಿ, ಕೃಷ್ಣೆಯು ಬಿಳಿ ವರಮಾಲೆಯನ್ನು ಹಿಡಿದು, ಮುಗುಳ್ನಗುತ್ತಾ ಕುಂತೀಸುತನೆಡೆಗೆ ಬಂದಳು.
01179023a ಸ ತಾಮುಪಾದಾಯ ವಿಜಿತ್ಯ ರಂಗೇ ದ್ವಿಜಾತಿಭಿಸ್ತೈರಭಿಪೂಜ್ಯಮಾನಃ।
01179023c ರಂಗಾನ್ನಿರಕ್ರಾಮದಚಿಂತ್ಯಕರ್ಮಾ ಪತ್ನ್ಯಾ ತಯಾ ಚಾಪ್ಯನುಗಮ್ಯಮಾನಃ।।
ಸ್ಪರ್ಧೆಯಲ್ಲಿ ಜಯವನ್ನು ಗಳಿಸಿ ಬ್ರಾಹ್ಮಣರಿಂದ ಅಭಿಪೂಜ್ಯಮಾನ, ಅಚಿಂತ್ಯಕರ್ಮನು ತನ್ನ ಪತ್ನಿಯು ಅನುಸರಿಸುತ್ತಿದ್ದ ಹಾಗೆ ರಂಗದಿಂದ ಹೊರಬಂದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸ್ವಯಂವರಪರ್ವಣಿ ಲಕ್ಷ್ಯಛೇದನೇ ಏಕೋನಶೀತ್ಯಧಿಕಶತತಮೋಽಧ್ಯಾಯ:।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸ್ವಯಂವರಪರ್ವದಲ್ಲಿ ಲಕ್ಷ್ಯಛೇದನದಲ್ಲಿ ನೂರಾಎಪ್ಪತ್ತೊಂಭತ್ತನೆಯ ಅಧ್ಯಾಯವು.