121 ದ್ರೋಣಸ್ಯಭಾರ್ಗವಾದಸ್ತ್ರಪ್ರಾಪ್ತಿಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 121

ಸಾರ

ಅಪ್ಸರೆ ಘೃತಾಚಿಯನ್ನು ನೋಡಿ ಋಷಿ ಭರದ್ವಾಜನ ರೇತಸ್ಖಲನವಾದು, ಸ್ಖಲಿತ ರೇತವನ್ನು ದ್ರೋಣದಲ್ಲಿರಿಸಲು ಅದರಿಂದ ದ್ರೋಣನ ಜನನ (1-8). ಭರದ್ವಾಜನ ಸಖ ಪೃಷತನ ಮಗ ದ್ರುಪದನು ದ್ರೋಣನೊಂದಿಗೆ ಆಟ-ಪಾಠಗಳನ್ನಾಡಿದುದು (9-10). ದ್ರುಪದನು ರಾಜನಾದುದು, ದ್ರೋಣನು ಕೃಪಿಯನ್ನು ವಿವಾಹವಾದುದು (11-12). ದ್ರೋಣ-ಕೃಪಿಯರಲ್ಲಿ ಅಶ್ವತ್ಥಾಮನ ಜನನ (13-15). ಭಾರ್ಗವ ಪರಶುರಾಮನಿಂದ ದ್ರೋಣನು ದಿವ್ಯಾಸ್ತ್ರಗಳನ್ನು ಪಡೆದುದು (16-23).

01121001 ವೈಶಂಪಾಯನ ಉವಾಚ।
01121001a ವಿಶೇಷಾರ್ಥೀ ತತೋ ಭೀಷ್ಮಃ ಪೌತ್ರಾಣಾಂ ವಿನಯೇಪ್ಸಯಾ।
01121001c ಇಷ್ವಸ್ತ್ರಜ್ಞಾನ್ಪರ್ಯಪೃಚ್ಛದಾಚಾರ್ಯಾನ್ವೀರ್ಯಸಮ್ಮತಾನ್।।
01121002a ನಾಲ್ಪಧೀರ್ನಾಮಹಾಭಾಗಸ್ತಥಾನಾನಾಸ್ತ್ರಕೋವಿದಃ।
01121002c ನಾದೇವಸತ್ತ್ವೋ ವಿನಯೇತ್ಕುರೂನಸ್ತ್ರೇ ಮಹಾಬಲಾನ್।।

ವೈಶಂಪಾಯನನು ಹೇಳಿದನು: “ಮೊಮ್ಮಕ್ಕಳಲ್ಲಿ ವಿಶೇಷತೆ ಮತ್ತು ವಿನಯತೆಯನ್ನು ಬಯಸಿದ ಭೀಷ್ಮನು ವೀರ್ಯವಂತ ಪ್ರಸಿದ್ಧ ಅಸ್ತ್ರಜ್ಞರ ಕುರಿತು ವಿಚಾರಿಸಿದನು. ಯಾಕೆಂದರೆ ಅಲ್ಪ ಜ್ಞಾನ, ಹಿರಿತನ ಮತ್ತು ಅಸ್ತ್ರಕೋವಿದರಿಂದ ಅಥವಾ ಅಲ್ಪ ದೇವಸತ್ವವುಳ್ಳವರಿಂದ ಮಹಾಬಲಶಾಲಿ ಕುರುಗಳನ್ನು ವಿಧೇಯರನ್ನಾಗಿ ಮಾಡಲಾಗುತ್ತಿರಲಿಲ್ಲ.

01121003a ಮಹರ್ಷಿಸ್ತು ಭರದ್ವಾಜೋ ಹವಿರ್ಧಾನೇ ಚರನ್ಪುರಾ।
01121003c ದದರ್ಶಾಪ್ಸರಸಂ ಸಾಕ್ಷಾದ್ಘೃತಾಚೀಮಾಪ್ಲುತಾಂ ಋಷಿಃ।।

ಹಿಂದೆ ಹವಿರ್ಧಾನದಲ್ಲಿ ಸ್ನಾನ ಮಾಡುತ್ತಿದ್ದ ಮಹರ್ಷಿ ಋಷಿ ಭರದ್ವಾಜನು ಸಾಕ್ಷಾತ್ ಅಪ್ಸರೆ ಘೃತಾಚಿಯನ್ನು ಕಂಡನು.

01121004a ತಸ್ಯಾ ವಾಯುಃ ಸಮುದ್ಧೂತೋ ವಸನಂ ವ್ಯಪಕರ್ಷತ।
01121004c ತತೋಽಸ್ಯ ರೇತಶ್ಚಸ್ಕಂದ ತದೃಷಿರ್ದ್ರೋಣ ಆದಧೇ।।

ಒಮ್ಮೆಲೇ ಗಾಳಿಯು ಅವಳ ವಸ್ತ್ರವನ್ನು ಹಾರಿಸಿಕೊಂಡು ಹೋಯಿತು. ಅದನ್ನು ನೋಡಿದ ಋಷಿಯ ರೇತಸ್ಖಲನವಾಯಿತು ಮತ್ತು ಅವನು ಅದನ್ನು ಒಂದು ದ್ರೋಣದಲ್ಲಿ ಇರಿಸಿದನು.

01121005a ತಸ್ಮಿನ್ಸಮಭವದ್ದ್ರೋಣಃ ಕಲಶೇ ತಸ್ಯ ಧೀಮತಃ।
01121005c ಅಧ್ಯಗೀಷ್ಟ ಸ ವೇದಾಂಶ್ಚ ವೇದಾಂಗಾನಿ ಚ ಸರ್ವಶಃ।।

ಆ ಕಲಶದಲ್ಲಿಯೇ ಅವನಿಗೆ ದ್ರೋಣ ಎಂಬ ಧೀಮಂತ ಮಗನು ಜನಿಸಿದನು ಮತ್ತು ಅವನು ಎಲ್ಲ ವೇದ ವೇದಾಂಗಗಳನ್ನೂ ಕಲಿತುಕೊಂಡನು.

01121006a ಅಗ್ನಿವೇಶ್ಯಂ ಮಹಾಭಾಗಂ ಭರದ್ವಾಜಃ ಪ್ರತಾಪವಾನ್।
01121006c ಪ್ರತ್ಯಪಾದಯದಾಗ್ನೇಯಮಸ್ತ್ರಂ ಧರ್ಮಭೃತಾಂ ವರಃ।।

ಧರ್ಮಭೃತರಲ್ಲಿ ಶ್ರೇಷ್ಠ ಪ್ರತಾಪಿ ಭರದ್ವಾಜನು ಮಹಾಭಾಗ ಅಗ್ನಿವೇಶ್ಯನಿಗೆ ಆಗ್ನೇಯಾಸ್ತ್ರವನ್ನು ನೀಡಿದನು.

01121007a ಅಗ್ನಿಷ್ಟುಜ್ಜಾತಃ ಸ ಮುನಿಸ್ತತೋ ಭರತಸತ್ತಮ।
01121007c ಭಾರದ್ವಾಜಂ ತದಾಗ್ನೇಯಂ ಮಹಾಸ್ತ್ರಂ ಪ್ರತ್ಯಪಾದಯತ್।।

ಭರತಸತ್ತಮ! ಅಗ್ನಿಷ್ಟುಜ್ಜಾತ ಆ ಮುನಿಯು ಮಹಾಸ್ತ್ರ ಆಗ್ನೇಯವನ್ನು ಭರದ್ವಾಜನ ಮಗನಿಗೆ ನೀಡಿದನು.

01121008a ಭರದ್ವಾಜಸಖಾ ಚಾಸೀತ್ಪೃಷತೋ ನಾಮ ಪಾರ್ಥಿವಃ।
01121008c ತಸ್ಯಾಪಿ ದ್ರುಪದೋ ನಾಮ ತದಾ ಸಮಭವತ್ಸುತಃ।।

ಭರದ್ವಾಜನಿಗೆ ಪೃಷತ ಎಂಬ ಹೆಸರಿನ ರಾಜನು ಸಖನಾಗಿದ್ದನು. ಅವನಿಗೆ ದ್ರುಪದ ಎಂಬ ಹೆಸರಿನ ಮಗನಿದ್ದನು.

01121009a ಸ ನಿತ್ಯಮಾಶ್ರಮಂ ಗತ್ವಾ ದ್ರೋಣೇನ ಸಹ ಪಾರ್ಷತಃ।
01121009c ಚಿಕ್ರೀಡಾಧ್ಯಯನಂ ಚೈವ ಚಕಾರ ಕ್ಷತ್ರಿಯರ್ಷಭಃ।।

ಆ ಕ್ಷತ್ರಿಯರ್ಷಭ ಪಾರ್ಷತನು ನಿತ್ಯವೂ ಅವನ ಆಶ್ರಮಕ್ಕೆ ಹೋಗಿ ದ್ರೋಣನೊಂದಿಗೆ ಆಟ-ಅಧ್ಯಯನಗಳನ್ನು ಮಾಡುತ್ತಿದ್ದನು.

01121010a ತತೋ ವ್ಯತೀತೇ ಪೃಷತೇ ಸ ರಾಜಾ ದ್ರುಪದೋಽಭವತ್।
01121010c ಪಾಂಚಾಲೇಷು ಮಹಾಬಾಹುರುತ್ತರೇಷು ನರೇಶ್ವರಃ।।

ಪೃಷತನ ಅವಸಾನದ ನಂತರ ನರೇಶ್ವರ ಮಹಾಬಾಹು ದ್ರುಪದನು ಉತ್ತರ ಪಾಂಚಾಲದ ರಾಜನಾದನು.

01121011a ಭರದ್ವಾಜೋಽಪಿ ಭಗವಾನಾರುರೋಹ ದಿವಂ ತದಾ।
01121011c ತತಃ ಪಿತೃನಿಯುಕ್ತಾತ್ಮಾ ಪುತ್ರಲೋಭಾನ್ಮಹಾಯಶಾಃ।
01121011e ಶಾರದ್ವತೀಂ ತತೋ ದ್ರೋಣಃ ಕೃಪೀಂ ಭಾರ್ಯಾಮವಿಂದತ।।

ಭಗವಾನ್ ಭರದ್ವಾಜನೂ ಸ್ವರ್ಗವಾಸಿಯಾದನು. ತನ್ನ ತಂದೆಯ ಹೇಳಿಕೆಯಂತೆ ಮತ್ತು ಮಹಾಯಶಸ್ವೀ ಪುತ್ರನನ್ನು ಪಡೆಯಲೋಸುಗ ದ್ರೋಣನು ಶಾರದ್ವತೀ ಕೃಪಿಯನ್ನು ಪತ್ನಿಯನ್ನಾಗಿ ಸ್ವೀಕರಿಸಿದನು.

01121012a ಅಗ್ನಿಹೋತ್ರೇ ಚ ಧರ್ಮೇ ಚ ದಮೇ ಚ ಸತತಂ ರತಾ।
01121012c ಅಲಭದ್ಗೌತಮೀ ಪುತ್ರಮಶ್ವತ್ಥಾಮಾನಮೇವ ಚ।।

ಸತತವೂ ಧರ್ಮ ಮತ್ತು ದಮದಲ್ಲಿ ನಿರತಳಾಗಿದ್ದ ಅಗ್ನಿಹೋತ್ರಿ ಗೌತಮಿಯು ಅಶ್ವತ್ಥಾಮ ಎಂಬ ಹೆಸರಿನ ಪುತ್ರನನ್ನು ಪಡೆದಳು.

01121013a ಸ ಜಾತಮಾತ್ರೋ ವ್ಯನದದ್ಯಥೈವೋಚ್ಚೈಃಶ್ರವಾ ಹಯಃ।
01121013c ತಚ್ಛೃತ್ವಾಂತರ್ಹಿತಂ ಭೂತಮಂತರಿಕ್ಷಸ್ಥಮಬ್ರವೀತ್।।

ಅವನು ಹುಟ್ಟಿದಾಕ್ಷಣವೇ ಉಚ್ಛೈಶ್ರವ ಕುದುರೆಯಂತೆ ರೋದಿಸಿದನು. ಇದನ್ನು ಕೇಳಿದ ಅಂತರಿಕ್ಷದಿಂದ ಅಂತರ್ಹಿತ ಭೂತವೊಂದು ಹೇಳಿತು:

01121014a ಅಶ್ವಸ್ಯೇವಾಸ್ಯ ಯತ್ ಸ್ಥಾಮ ನದತಃ ಪ್ರದಿಶೋ ಗತಂ।
01121014c ಅಶ್ವತ್ಥಾಮೈವ ಬಾಲೋಽಯಂ ತಸ್ಮಾನ್ನಾಮ್ನಾ ಭವಿಷ್ಯತಿ।।

“ಇವನ ಅಳುವಿನ ನಾದವು ಅಶ್ವದ ನಾದದಂತೆ ಎಲ್ಲಕಡೆಯೂ ಪಸರಿಸಿದ್ದುದರಿಂದ ಈ ಬಾಲಕನ ಹೆಸರು ಅಶ್ವತ್ಥಾಮ ಎಂದೇ ಆಗಲಿ!”

01121015a ಸುತೇನ ತೇನ ಸುಪ್ರೀತೋ ಭಾರದ್ವಾಜಸ್ತತೋಽಭವತ್।
01121015c ತತ್ರೈವ ಚ ವಸನ್ಧೀಮಾನ್ಧನುರ್ವೇದಪರೋಽಭವತ್।।

ಧೀಮಂತ ಭಾರದ್ವಾಜನು ತನ್ನ ಮಗನಿಂದ ಸುಪ್ರೀತನಾದನು ಮತ್ತು ಅಲ್ಲಿಯೇ ಇದ್ದುಕೊಂಡು ಧನುರ್ವೇದಪಾರಂಗತನಾದನು.

01121016a ಸ ಶುಶ್ರಾವ ಮಹಾತ್ಮಾನಂ ಜಾಮದಗ್ನ್ಯಂ ಪರಂತಪಂ।
01121016c ಬ್ರಾಹ್ಮಣೇಭ್ಯಸ್ತದಾ ರಾಜನ್ದಿತ್ಸಂತಂ ವಸು ಸರ್ವಶಃ।।

ರಾಜನ್! ಮಹಾತ್ಮ ಪರಂತಪಸ್ವಿ ಜಾಮದಗ್ನ್ಯನು ತನ್ನ ಎಲ್ಲ ಸಂಪತ್ತನ್ನೂ ಬ್ರಾಹ್ಮಣರಿಗೆ ಕೊಡುತ್ತಿದ್ದಾನೆ ಎಂದು ಅವನು ಕೇಳಿದನು.

01121017a ವನಂ ತು ಪ್ರಸ್ಥಿತಂ ರಾಮಂ ಭಾರದ್ವಾಜಸ್ತದಾಬ್ರವೀತ್।
01121017c ಆಗತಂ ವಿತ್ತಕಾಮಂ ಮಾಂ ವಿದ್ಧಿ ದ್ರೋಣಂ ದ್ವಿಜರ್ಷಭಂ।।

ವನಕ್ಕೆ ಹೊರಟಿದ್ದ ರಾಮನಿಗೆ ಭಾರದ್ವಾಜನು ಹೇಳಿದನು: “ದ್ವಿಜರ್ಷಭ! ನಾನು ದ್ರೋಣ. ಸಂಪತ್ತನ್ನು ಬಯಸಿ ನಿನ್ನಲ್ಲಿಗೆ ಬಂದಿದ್ದೇನೆ.”

01121018 ರಾಮ ಉವಾಚ।
01121018a ಹಿರಣ್ಯಂ ಮಮ ಯಚ್ಚಾನ್ಯದ್ವಸು ಕಿಂ ಚನ ವಿದ್ಯತೇ।
01121018c ಬ್ರಾಹ್ಮಣೇಭ್ಯೋ ಮಯಾ ದತ್ತಂ ಸರ್ವಮೇವ ತಪೋಧನ।।

ರಾಮನು ಹೇಳಿದನು: “ತಪೋಧನ! ನನ್ನಲ್ಲಿರುವ ಹಿರಣ್ಯ ಮತ್ತು ಇತರ ಸಂಪತ್ತು ಎಲ್ಲವನ್ನೂ ಬ್ರಾಹ್ಮಣರಿಗೆ ಕೊಟ್ಟುಬಿಟ್ಟಿದ್ದೇನೆ.

01121019a ತಥೈವೇಯಂ ಧರಾ ದೇವೀ ಸಾಗರಾಂತಾ ಸಪತ್ತನಾ।
01121019c ಕಶ್ಯಪಾಯ ಮಯಾ ದತ್ತಾ ಕೃತ್ಸ್ನಾ ನಗರಮಾಲಿನೀ।।

ಇದೇ ರೀತಿ ಸಾಗರಗಳಿಂದ ಸುತ್ತುವರೆಯಲ್ಪಟ್ಟ ಈ ನಗರಮಾಲಿನೀ ದೇವಿ ಧರಿತ್ರಿ ಸರ್ವವನ್ನೂ ಕಶ್ಯಪನಿಗೆ ಕೊಟ್ಟುಬಿಟ್ಟಿದ್ದೇನೆ.

01121020a ಶರೀರಮಾತ್ರಮೇವಾದ್ಯ ಮಯೇದಮವಶೇಷಿತಂ।
01121020c ಅಸ್ತ್ರಾಣಿ ಚ ಮಹಾರ್ಹಾಣಿ ಶಸ್ತ್ರಾಣಿ ವಿವಿಧಾನಿ ಚ।
01121020e ವೃಣೀಷ್ವ ಕಿಂ ಪ್ರಯಚ್ಛಾಮಿ ತುಭ್ಯಂ ದ್ರೋಣ ವದಾಶು ತತ್।।

ಈಗ ನನ್ನಲ್ಲಿ ಈ ಶರೀರ, ಮಹಾ ಅಸ್ತ್ರಗಳು, ವಿವಿಧ ಶಸ್ತ್ರಗಳು ಮಾತ್ರ ನನ್ನದಾಗಿ ಉಳಿದುಕೊಂಡಿವೆ. ದ್ರೋಣ! ಇವುಗಳಲ್ಲಿ ಯಾವುದನ್ನು ನೀನು ಕೇಳುತ್ತೀಯೆ, ತಕ್ಷಣ ಕೇಳು.”

01121021 ದ್ರೋಣ ಉವಾಚ।
01121021a ಅಸ್ತ್ರಾಣಿ ಮೇ ಸಮಗ್ರಾಣಿ ಸಸಂಹಾರಾಣಿ ಭಾರ್ಗವ।
01121021c ಸಪ್ರಯೋಗರಹಸ್ಯಾನಿ ದಾತುಮರ್ಹಸ್ಯಶೇಷತಃ।।

ದ್ರೋಣನು ಹೇಳಿದನು: “ಭಾರ್ಗವ! ನಿನ್ನಲ್ಲಿರುವ ಎಲ್ಲ ಅಸ್ತ್ರ ಶಸ್ತ್ರಗಳನ್ನೂ ಅವುಗಳನ್ನು ಬಳಸುವ ರಹಸ್ಯಗಳ ಜೊತೆ ಒಂದನ್ನೂ ಬಿಡದ ಹಾಗೆ ನನಗೆ ಕೊಡು.””

01121022 ವೈಶಂಪಾಯನ ಉವಾಚ।
01121022a ತಥೇತ್ಯುಕ್ತ್ವಾ ತತಸ್ತಸ್ಮೈ ಪ್ರಾದಾದಸ್ತ್ರಾಣಿ ಭಾರ್ಗವಃ।
01121022c ಸರಹಸ್ಯವ್ರತಂ ಚೈವ ಧನುರ್ವೇದಮಶೇಷತಃ।।

ವೈಶಂಪಾಯನನು ಹೇಳಿದನು: “ಹಾಗೆಯೇ ಆಗಲೆಂದು ಭಾರ್ಗವನು ಅವನಿಗೆ ಅವುಗಳನ್ನು ಬಳಸುವ ರಹಸ್ಯಗಳ ಜೊತೆಗೆ ಅಸ್ತ್ರಗಳನ್ನು ಮತ್ತು ಸಂಪೂರ್ಣ ಧನುರ್ವೇದವನ್ನು ಇತ್ತನು.

01121023a ಪ್ರತಿಗೃಹ್ಯ ತು ತತ್ಸರ್ವಂ ಕೃತಾಸ್ತ್ರೋ ದ್ವಿಜಸತ್ತಮಃ।
01121023c ಪ್ರಿಯಂ ಸಖಾಯಂ ಸುಪ್ರೀತೋ ಜಗಾಮ ದ್ರುಪದಂ ಪ್ರತಿ।।

ಅವೆಲ್ಲವನ್ನೂ ಸ್ವೀಕರಿಸಿ ಕೃತಾಸ್ತ್ರನಾದ ದ್ವಿಜಸತ್ತಮನು ಸುಪ್ರೀತನಾಗಿ ತನ್ನ ಪ್ರಿಯ ಸಖ ದ್ರುಪದನಲ್ಲಿಗೆ ಹೋದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ದ್ರೋಣಸ್ಯಭಾರ್ಗವಾದಸ್ತ್ರಪ್ರಾಪ್ತೌ ಏಕವಿಂಶತ್ಯಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವಪರ್ವದಲ್ಲಿ ದ್ರೋಣನಿಗೆ ಭಾರ್ಗವನಿಂದ ಅಸ್ತ್ರಪ್ರಾಪ್ತಿ ಎನ್ನುವ ನೂರಾಇಪ್ಪತ್ತೊಂದನೆಯ ಅಧ್ಯಾಯವು.