ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಸಂಭವ ಪರ್ವ
ಅಧ್ಯಾಯ 120
ಸಾರ
ಗೌತಮಿ ಶರದ್ವತನನ್ನು ಇಂದ್ರನ ಆದೇಶದಂತೆ ದೇವಕನ್ಯೆ ಜಾಲಪದಿಯು ಮೋಹಿಸುವುದು (1-10). ಸ್ಖಲಿತ ರೇತವನ್ನು ದರ್ಬೆಗಳ ಮೇಲೆ ಇಡಲು ಅದರಿಂದ ಅವಳಿ ಮಕ್ಕಳ ಜನನ (11-13). ಬೇಟೆಯಾಡಲು ಬಂದಿದ್ದ ಶಂತನುವು ಅವರಿಗೆ ಕೃಪ-ಕೃಪಿಯರೆಂದು ಹೆಸರಿತ್ತು ಸಾಕಿದುದು (14-18). ಶರದ್ವತನು ಬಂದು ಕೃಪನಿಗೆ ಧನುರ್ವಿದ್ಯೆಯನ್ನು ಕಲಿಸಿದುದು, ಕೃಪನು ಕೌರವ-ಪಾಂಡವರ ಗುರುವಾದುದು (19-21).
01120001 ಜನಮೇಜಯ ಉವಾಚ।
01120001a ಕೃಪಸ್ಯಾಪಿ ಮಹಾಬ್ರಹ್ಮನ್ಸಂಭವಂ ವಕ್ತುಮರ್ಹಸಿ।
01120001c ಶರಸ್ತಂಭಾತ್ಕಥಂ ಜಜ್ಞೇ ಕಥಂ ಚಾಸ್ತ್ರಾಣ್ಯವಾಪ್ತವಾನ್।।
ಜನಮೇಜಯನು ಹೇಳಿದನು: “ಮಹಾಬ್ರಾಹ್ಮಣ! ಕೃಪನು ಶರಸ್ತಂಭಗಳಿಂದ ಹೇಗೆ ಜನಿಸಿದನು ಮತ್ತು ಅವನು ಹೇಗೆ ಅಸ್ತ್ರಗಳನ್ನು ಹೊಂದಿದನು ಎಂದು ಹೇಳು.”
01120002 ವೈಶಂಪಾಯನ ಉವಾಚ।
01120002a ಮಹರ್ಷೇರ್ಗೌತಮಸ್ಯಾಸೀಚ್ಶರದ್ವಾನ್ನಾಮ ನಾಮತಃ।
01120002c ಪುತ್ರಃ ಕಿಲ ಮಹಾರಾಜ ಜಾತಃ ಸಹ ಶರೈರ್ವಿಭೋ।।
ವೈಶಂಪಾಯನನು ಹೇಳಿದನು: “ಮಹರ್ಷಿ ಗೌತಮನಿಗೆ ಶರದ್ವತ ಎನ್ನುವ ಹೆಸರಿನ ಮಗನಿದ್ದನು. ಮಹಾರಾಜ! ಆ ಮಗನು ಶರಗಳನ್ನು ಪಡೆದೇ ಹುಟ್ಟಿದ್ದನು.
01120003a ನ ತಸ್ಯ ವೇದಾಧ್ಯಯನೇ ತಥಾ ಬುದ್ಧಿರಜಾಯತ।
01120003c ಯಥಾಸ್ಯ ಬುದ್ಧಿರಭವದ್ಧನುರ್ವೇದೇ ಪರಂತಪ।।
ಆ ಪರಂತಪನಿಗೆ ಧನುರ್ವೇದದಲ್ಲಿ ಎಷ್ಟು ಬುದ್ಧಿಯಿತ್ತೋ ಅಷ್ಟು ಬುದ್ಧಿ ವೇದಾಧ್ಯಯನದಲ್ಲಿ ಇರಲಿಲ್ಲ.
01120004a ಅಧಿಜಗ್ಮುರ್ಯಥಾ ವೇದಾಂಸ್ತಪಸಾ ಬ್ರಹ್ಮವಾದಿನಃ।
01120004c ತಥಾ ಸ ತಪಸೋಪೇತಃ ಸರ್ವಾಣ್ಯಸ್ತ್ರಾಣ್ಯವಾಪ ಹ।।
ಬ್ರಹ್ಮವಾದಿಗಳು ಹೇಗೆ ತಪಸ್ಸಿನಿಂದ ಪರಿಶ್ರಮಿಸಿ ವೇದಗಳನ್ನು ಪಡೆಯುತ್ತಾರೋ ಹಾಗೆ ಅವನೂ ಕೂಡ ತಪಸ್ಸಿನಿಂದಲೇ ಸರ್ವ ಅಸ್ತ್ರಗಳನ್ನೂ ಪಡೆದನು.
01120005a ಧನುರ್ವೇದಪರತ್ವಾಚ್ಚ ತಪಸಾ ವಿಪುಲೇನ ಚ।
01120005c ಭೃಶಂ ಸಂತಾಪಯಾಮಾಸ ದೇವರಾಜಂ ಸ ಗೌತಮಃ।।
ಆ ಗೌತಮನ ವಿಪುಲ ತಪಸ್ಸು ಮತ್ತು ಧನುರ್ವೇದ ಪಾಂಡಿತ್ಯವು ದೇವರಾಜನನ್ನು ಸಾಕಷ್ಟು ಕಾಡಿತು.
01120006a ತತೋ ಜಾಲಪದೀಂ ನಾಮ ದೇವಕನ್ಯಾಂ ಸುರೇಶ್ವರಃ।
01120006c ಪ್ರಾಹಿಣೋತ್ತಪಸೋ ವಿಘ್ನಂ ಕುರು ತಸ್ಯೇತಿ ಕೌರವ।।
ಕೌರವ! ಆಗ ಸುರೇಶ್ವರನು ಜಾಲಪದೀ ಎಂಬ ದೇವಕನ್ಯೆಯನ್ನು ಕರೆದು “ಅವನ ತಪಸ್ಸಿಗೆ ವಿಘ್ನವನ್ನುಂಟುಮಾಡು!””ಎಂದು ಕಳುಹಿಸಿದನು.
01120007a ಸಾಭಿಗಮ್ಯಾಶ್ರಮಪದಂ ರಮಣೀಯಂ ಶರದ್ವತಃ।
01120007c ಧನುರ್ಬಾಣಧರಂ ಬಾಲಾ ಲೋಭಯಾಮಾಸ ಗೌತಮಂ।।
ಆ ಬಾಲೆಯು ಶರದ್ವತನ ರಮಣೀಯ ಆಶ್ರಮಪದವನ್ನು ಸೇರಿ, ಧನುರ್ಬಾಣಧರ ಗೌತಮನಲ್ಲಿ ಆಸೆಹುಟ್ಟಿಸಲು ಪ್ರಯತ್ನಿಸಿದಳು.
01120008a ತಾಮೇಕವಸನಾಂ ದೃಷ್ಟ್ವಾ ಗೌತಮೋಽಪ್ಸರಸಂ ವನೇ।
01120008c ಲೋಕೇಽಪ್ರತಿಮಸಂಸ್ಥಾನಾಮುತ್ಫುಲ್ಲನಯನೋಽಭವತ್।।
ಆ ವನದಲ್ಲಿ ಒಂದೇ ಒಂದು ವಸ್ತ್ರವನ್ನು ಉಟ್ಟು ಲೋಕದಲ್ಲಿಯೇ ಅಪ್ರತಿಮ ನಿಲುವನ್ನು ಹೊಂದಿದ್ದ ಅಪ್ಸರೆಯನ್ನು ಗೌತಮನು ತೆರೆದ ಕಣ್ಣುಗಳಿಂದ ನೋಡಿದನು.
01120009a ಧನುಶ್ಚ ಹಿ ಶರಾಶ್ಚಾಸ್ಯ ಕರಾಭ್ಯಾಂ ಪ್ರಾಪತನ್ಭುವಿ।
01120009c ವೇಪಥುಶ್ಚಾಸ್ಯ ತಾಂ ದೃಷ್ಟ್ವಾ ಶರೀರೇ ಸಮಜಾಯತ।।
ಧನುಸ್ಸು ಮತ್ತು ಬಾಣಗಳು ಅವನ ಕೈಗಳಿಂದ ನೆಲಕ್ಕೆ ಬಿದ್ದವು ಮತ್ತು ಅವಳನ್ನು ನೋಡಿ ಅವನ ಶರೀರದಲ್ಲಿ ಕಂಪನವುಂಟಾಯಿತು.
01120010a ಸ ತು ಜ್ಞಾನಗರೀಯಸ್ತ್ವಾತ್ತಪಸಶ್ಚ ಸಮನ್ವಯಾತ್।
01120010c ಅವತಸ್ಥೇ ಮಹಾಪ್ರಾಜ್ಞೋ ಧೈರ್ಯೇಣ ಪರಮೇಣ ಹ।।
ಆದರೂ ಅವನ ಜ್ಞಾನ ಎಷ್ಟು ಮೇಲ್ಮಟ್ಟದ್ದಿತ್ತು ಮತ್ತು ತಪಸ್ಸು ಎಷ್ಟಿತ್ತೆಂದರೆ ಆ ಮಹಾಪ್ರಾಜ್ಞನು ಪರಮ ಧೈರ್ಯದಿಂದ ತನ್ನನ್ನು ತಾನೇ ಗಟ್ಟಿಯಾಗಿರಿಸಿಕೊಂಡನು.
01120011a ಯಸ್ತ್ವಸ್ಯ ಸಹಸಾ ರಾಜನ್ವಿಕಾರಃ ಸಮಪದ್ಯತ।
01120011c ತೇನ ಸುಸ್ರಾವ ರೇತೋಽಸ್ಯ ಸ ಚ ತನ್ನಾವಬುಧ್ಯತ।।
ಆದರೂ ರಾಜನ್! ಅವನಲ್ಲಿ ಒಮ್ಮಿಂದೊಮ್ಮಲೇ ವಿಕಾರವುಂಟಾಗಿ ಅವನಿಗೆ ತಿಳಿಯದೆಯೇ ಅವನ ರೇತವು ಹೊರಬಿದ್ದಿತು.
01120012a ಸ ವಿಹಾಯಾಶ್ರಮಂ ತಂ ಚ ತಾಂ ಚೈವಾಪ್ಸರಸಂ ಮುನಿಃ।
01120012c ಜಗಾಮ ರೇತಸ್ತತ್ತಸ್ಯ ಶರಸ್ತಂಬೇ ಪಪಾತ ಹ।।
ಆಗ ಆ ಮುನಿಯು ಆ ಆಶ್ರಮವನ್ನೂ ಅಪ್ಸರೆಯನ್ನೂ ಬಿಟ್ಟು ಹೊರಟುಹೋದನು. ಅವನ ರೇತವು ದರ್ಬೆಗಳ ಮೇಲೆ ಬಿದ್ದಿತು.
01120013a ಶರಸ್ತಂಬೇ ಚ ಪತಿತಂ ದ್ವಿಧಾ ತದಭವನ್ನೃಪ।
01120013c ತಸ್ಯಾಥ ಮಿಥುನಂ ಜಜ್ಞೇ ಗೌತಮಸ್ಯ ಶರದ್ವತಃ।।
ದರ್ಬೆಗಳ ಮೇಲೆ ಬಿದ್ದ ತಕ್ಷಣವೇ ಅದು ಎರಡಾಗಿ ಒಡೆಯಿತು ಮತ್ತು ಅವುಗಳಿಂದ ಗೌತಮ ಶರದ್ವತನಿಗೆ ಇಬ್ಬರು ಅವಳಿ ಮಕ್ಕಳು ಜನಿಸಿದರು.
01120014a ಮೃಗಯಾಂ ಚರತೋ ರಾಜ್ಞಃ ಶಂತನೋಸ್ತು ಯದೃಚ್ಛಯಾ।
01120014c ಕಶ್ಚಿತ್ಸೇನಾಚರೋಽರಣ್ಯೇ ಮಿಥುನಂ ತದಪಶ್ಯತ।।
ರಾಜ ಶಂತನುವು ಬೇಟೆಯಾಡಲು ಅಲ್ಲಿಗೆ ಹೋಗಿದ್ದಾಗ ಅವನ ಓರ್ವ ಸೇನಾಚರನು ಅರಣ್ಯದಲ್ಲಿ ಈ ಅವಳಿ ಮಕ್ಕಳನ್ನು ನೋಡಿದನು.
01120015a ಧನುಶ್ಚ ಸಶರಂ ದೃಷ್ಟ್ವಾ ತಥಾ ಕೃಷ್ಣಾಜಿನಾನಿ ಚ।
01120015c ವ್ಯವಸ್ಯ ಬ್ರಾಹ್ಮಣಾಪತ್ಯಂ ಧನುರ್ವೇದಾಂತಗಸ್ಯ ತತ್।
ಅವರ ಪಕ್ಕದಲ್ಲಿ ಧನುರ್ಬಾಣಗಳನ್ನು ಮತ್ತು ಕೃಷ್ಣಾಜಿನಗಳನ್ನು ನೋಡಿ ಅವರು ಧನುರ್ವೇದಾಂತಗ ಓರ್ವ ಬ್ರಾಹ್ಮಣನ ಮಕ್ಕಳಿರಬೇಕೆಂದು ಯೋಚಿಸಿದನು.
01120015e ಸ ರಾಜ್ಞೇ ದರ್ಶಯಾಮಾಸ ಮಿಥುನಂ ಸಶರಂ ತದಾ।।
01120016a ಸ ತದಾದಾಯ ಮಿಥುನಂ ರಾಜಾಥ ಕೃಪಯಾನ್ವಿತಃ।
01120016c ಆಜಗಾಮ ಗೃಹಾನೇವ ಮಮ ಪುತ್ರಾವಿತಿ ಬ್ರುವನ್।।
01120017a ತತಃ ಸಂವರ್ಧಯಾಮಾಸ ಸಂಸ್ಕಾರೈಶ್ಚಾಪ್ಯಯೋಜಯತ್।
01120017c ಗೌತಮೋಽಪಿ ತದಾಪೇತ್ಯ ಧನುರ್ವೇದಪರೋಽಭವತ್।।
ಅವನು ಬಾಣಗಳೊಂದಿಗೆ ಆ ಅವಳಿ ಮಕ್ಕಳನ್ನು ರಾಜನಿಗೆ ತೋರಿಸಿದನು. ಕೃಪಯಾನ್ವಿತ ರಾಜನು ಆ ಅವಳಿ ಮಕ್ಕಳನ್ನು “ಇವರು ನನ್ನ ಪುತ್ರರು. ಮನೆಗೆ ಕೊಂಡೊಯ್ಯುತ್ತೇನೆ” ಎಂದು ತನ್ನದಾಗಿ ಸ್ವೀಕರಿಸಿದನು. ಅವರಿಗೆ ಸಂಸ್ಕಾರಗಳನ್ನೆಲ್ಲ ನೆರವೇರಿಸಿ ಬೆಳೆಸಿದನು. ಗೌತಮನು ಧನುರ್ವೇದ ಪಾರಂಗತನಾದನು.
01120018a ಕೃಪಯಾ ಯನ್ಮಯಾ ಬಾಲಾವಿಮೌ ಸಂವರ್ಧಿತಾವಿತಿ।
01120018c ತಸ್ಮಾತ್ತಯೋರ್ನಾಮ ಚಕ್ರೇ ತದೇವ ಸ ಮಹೀಪತಿಃ।।
ಮಹೀಪತಿ! “ಈ ಬಾಲಕರೀರ್ವರನ್ನೂ ನಾನು ಕೃಪೆಯಿಂದ ಬೆಳೆಸಿದ್ದೇನೆ ಆದುದರಿಂದ ಅವರ ಹೆಸರೂ ಅದೇ ಆಗಲಿ!” ಎಂದನು.
01120019a ನಿಹಿತೌ ಗೌತಮಸ್ತತ್ರ ತಪಸಾ ತಾವವಿಂದತ।
01120019c ಆಗಮ್ಯ ಚಾಸ್ಮೈ ಗೋತ್ರಾದಿ ಸರ್ವಮಾಖ್ಯಾತವಾಂಸ್ತದಾ।।
ತನ್ನ ತಪೋಬಲದಿಂದ ಗೌತಮನು ಅವರು ಎಲ್ಲಿದ್ದಾರೆಂದು ತಿಳಿದುಕೊಂಡು ಅಲ್ಲಿಗೆ ಬಂದು ರಾಜನಿಗೆ ಅವರ ಗೋತ್ರ ಮೊದಲಾದ ಎಲ್ಲವನ್ನೂ ತಿಳಿಸಿದನು.
01120020a ಚತುರ್ವಿಧಂ ಧನುರ್ವೇದಮಸ್ತ್ರಾಣಿ ವಿವಿಧಾನಿ ಚ।
01120020c ನಿಖಿಲೇನಾಸ್ಯ ತತ್ಸರ್ವಂ ಗುಹ್ಯಮಾಖ್ಯಾತವಾಂಸ್ತದಾ।
01120020e ಸೋಽಚಿರೇಣೈವ ಕಾಲೇನ ಪರಮಾಚಾರ್ಯತಾಂ ಗತಃ।।
01120021a ತತೋಽಧಿಜಗ್ಮುಃ ಸರ್ವೇ ತೇ ಧನುರ್ವೇದಂ ಮಹಾರಥಾಃ।
01120021c ಧೃತರಾಷ್ಟ್ರಾತ್ಮಜಾಶ್ಚೈವ ಪಾಂಡವಾಶ್ಚ ಮಹಾಬಲಾಃ।
01120021e ವೃಷ್ಣಯಶ್ಚ ನೃಪಾಶ್ಚಾನ್ಯೇ ನಾನಾದೇಶಸಮಾಗತಾಃ।।
ಅವನು ಕೃಪನಿಗೆ ಚತುರ್ವಿಧ ಧನುರ್ವೇದ ಮತ್ತು ವಿವಿಧ ಅಸ್ತ್ರಗಳ ಕುರಿತು ಎಲ್ಲವನ್ನೂ ಮತ್ತು ಅದರ ಗುಟ್ಟುಗಳೆಲ್ಲವನ್ನೂ ಹೇಳಿಕೊಟ್ಟನು. ಸ್ವಲ್ಪವೇ ಸಮಯದಲ್ಲಿ ಅವನು ಪರಮಾಚಾರ್ಯನೆನಿಸಿಕೊಂಡನು. ಎಲ್ಲ ಮಹಾರಥಿಗಳೂ-ಧೃತರಾಷ್ಟ್ರನ ಮಕ್ಕಳು, ಪಾಂಡವರು, ಮಹಾಬಲಶಾಲಿ ವೃಷ್ಣಿಗಳು ಮತ್ತು ಅನ್ಯ ನಾನಾ ದೇಶಗಳಿಂದ ಬಂದವರೆಲ್ಲರೂ ಧನುರ್ವೇದವನ್ನು ಅವನಿಂದಲೇ ಕಲಿತುಕೊಂಡರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಕೃಪಾಚಾರ್ಯ ಜನ್ಮೇ ವಿಂಶತ್ಯಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಕೃಪಾಚಾರ್ಯಜನ್ಮ ಎನ್ನುವ ನೂರಾಇಪ್ಪತ್ತನೆಯ ಅಧ್ಯಾಯವು.